Surah Al-Araf in Kannada

    الأعراف

    Surah Al-Araf in Kannada

    Read Surah Al-Araf in Kannada (الأعراف) with Arabic text, Kannada translation, and audio recitation. Chapter 7 of the Holy Quran, 206 verses — free online.

    ಕನ್ನಡದಲ್ಲಿ ಕುರ್‌ಆನ್ · all 114 ಸೂರಃs

    الٓمٓصٓ

    ಅಲಿಫ್, ಲಾಮ್, ಮೀಮ್, ಸ್ವಾದ್

    كِتَٰبٌ أُنزِلَ إِلَيۡكَ فَلَا يَكُن فِي صَدۡرِكَ حَرَجٞ مِّنۡهُ لِتُنذِرَ بِهِۦ وَذِكۡرَىٰ لِلۡمُؤۡمِنِينَ

    ಇದು ನಿಮಗೆ ಅವತೀರ್ಣಗೊಳಿಸಲಾದ ಗ್ರಂಥವಾಗಿದೆ. ಇದರ ಬಗ್ಗೆ ನಿಮ್ಮ ಹೃದಯದಲ್ಲಿ ಯಾವುದೇ ಬೇಸರವುಂಟಾಗದಿರಲಿ. ಇದರ ಮೂಲಕ ನೀವು ಮುನ್ನೆಚ್ಚರಿಕೆ ನೀಡುವುದಕ್ಕಾಗಿ ಮತ್ತು ಸತ್ಯವಿಶ್ವಾಸಿಗಳಿಗೆ ಒಂದು ಉಪದೇಶವಾಗಿ (ಇದನ್ನು ಅವತೀರ್ಣಗೊಳಿಸಲಾಗಿದೆ).

    ٱتَّبِعُواْ مَآ أُنزِلَ إِلَيۡكُم مِّن رَّبِّكُمۡ وَلَا تَتَّبِعُواْ مِن دُونِهِۦٓ أَوۡلِيَآءَۗ قَلِيلٗا مَّا تَذَكَّرُونَ

    ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ನಿಮಗೆ ಅವತೀರ್ಣವಾದುದನ್ನು ಅನುಸರಿಸಿರಿ. ಅವನ ಹೊರತು ಬೇರೆ (ಸ್ವಘೋಷಿತ) ರಕ್ಷಕರನ್ನು ಅನುಸರಿಸಬೇಡಿ. ನೀವು ಸ್ವಲ್ಪವೇ ಉಪದೇಶ ಪಡೆಯುತ್ತೀರಿ.

    وَكَم مِّن قَرۡيَةٍ أَهۡلَكۡنَٰهَا فَجَآءَهَا بَأۡسُنَا بَيَٰتًا أَوۡ هُمۡ قَآئِلُونَ

    ನಾವು ಎಷ್ಟು ಊರುಗಳನ್ನು ನಾಶ ಮಾಡಿದ್ದೇವೆ! ಅವರು ರಾತ್ರಿ ಅಥವಾ ಮಧ್ಯಾಹ್ನದ ನಿದ್ದೆಯಲ್ಲಿರುವಾಗ ನಮ್ಮ ಶಿಕ್ಷೆಯು ಅವರ ಬಳಿಗೆ ಬಂದಿದೆ.

    فَمَا كَانَ دَعۡوَىٰهُمۡ إِذۡ جَآءَهُم بَأۡسُنَآ إِلَّآ أَن قَالُوٓاْ إِنَّا كُنَّا ظَٰلِمِينَ

    ನಮ್ಮ ಶಿಕ್ಷೆಯು ಅವರ ಬಳಿಗೆ ಬಂದಾಗ ಅವರ ರೋದನವು, “ನಾವು ಅಕ್ರಮಿಗಳಾಗಿದ್ದೆವು” ಎಂದು ಹೇಳುವುದಲ್ಲದೆ ಬೇರೇನೂ ಆಗಿರಲಿಲ್ಲ.

    فَلَنَسۡـَٔلَنَّ ٱلَّذِينَ أُرۡسِلَ إِلَيۡهِمۡ وَلَنَسۡـَٔلَنَّ ٱلۡمُرۡسَلِينَ

    ಯಾರ ಬಳಿಗೆ ಸಂದೇಶವಾಹಕರನ್ನು ಕಳುಹಿಸಲಾಯಿತೋ ಅವರನ್ನು ನಾವು ಖಂಡಿತ ಪ್ರಶ್ನಿಸುವೆವು. ಅವರ ಬಳಿಗೆ ಕಳುಹಿಸಲಾದ ಸಂದೇಶವಾಹಕರೊಡನೆಯೂ ನಾವು ಪ್ರಶ್ನಿಸುವೆವು.

    فَلَنَقُصَّنَّ عَلَيۡهِم بِعِلۡمٖۖ وَمَا كُنَّا غَآئِبِينَ

    ನಂತರ (ನಮ್ಮ ಬಳಿಯಿರುವ) ಜ್ಞಾನದ ಮೂಲಕ ನಾವು ಅವರಿಗೆ ವಿವರಿಸಿಕೊಡುವೆವು. ನಾವು ಯಾವುದೇ ಸ್ಥಿತಿಯಲ್ಲೂ ಅವರಿಂದ ದೂರವಾಗಿರಲಿಲ್ಲ.

    وَٱلۡوَزۡنُ يَوۡمَئِذٍ ٱلۡحَقُّۚ فَمَن ثَقُلَتۡ مَوَٰزِينُهُۥ فَأُوْلَٰٓئِكَ هُمُ ٱلۡمُفۡلِحُونَ

    ಆ ದಿನದಂದು (ಕರ್ಮಗಳನ್ನು) ತೂಗುವುದು ಸತ್ಯವಾಗಿದೆ. ಆಗ ಯಾರ ತಕ್ಕಡಿ ಭಾರವಾಗುತ್ತದೋ ಅವರೇ ಯಶಸ್ವಿಯಾದವರು.

    وَمَنۡ خَفَّتۡ مَوَٰزِينُهُۥ فَأُوْلَٰٓئِكَ ٱلَّذِينَ خَسِرُوٓاْ أَنفُسَهُم بِمَا كَانُواْ بِـَٔايَٰتِنَا يَظۡلِمُونَ

    ಯಾರ ತಕ್ಕಡಿ ಹಗುರವಾಗುತ್ತದೋ ಅವರೇ ಸ್ವಯಂ ನಷ್ಟಹೊಂದಿದವರು. ಏಕೆಂದರೆ ಅವರು ನಮ್ಮ ವಚನಗಳೊಂದಿಗೆ ಅಕ್ರಮವೆಸಗುತ್ತಿದ್ದರು.

    ೧೦

    وَلَقَدۡ مَكَّنَّٰكُمۡ فِي ٱلۡأَرۡضِ وَجَعَلۡنَا لَكُمۡ فِيهَا مَعَٰيِشَۗ قَلِيلٗا مَّا تَشۡكُرُونَ

    ನಿಶ್ಚಯವಾಗಿಯೂ ನಾವು ನಿಮಗೆ ಭೂಮಿಯಲ್ಲಿ ಅಧಿಕಾರವನ್ನು ನೀಡಿದೆವು. ಅಲ್ಲಿ ನಿಮಗೆ ಉಪಜೀವನ ಮಾರ್ಗಗಳನ್ನು ಮಾಡಿಕೊಟ್ಟೆವು. ನೀವು ಅಲ್ಪವೇ ಕೃತಜ್ಞರಾಗುತ್ತೀರಿ.

    ೧೧

    وَلَقَدۡ خَلَقۡنَٰكُمۡ ثُمَّ صَوَّرۡنَٰكُمۡ ثُمَّ قُلۡنَا لِلۡمَلَٰٓئِكَةِ ٱسۡجُدُواْ لِأٓدَمَ فَسَجَدُوٓاْ إِلَّآ إِبۡلِيسَ لَمۡ يَكُن مِّنَ ٱلسَّٰجِدِينَ

    ನಿಶ್ಚಯವಾಗಿಯೂ ನಾವು ನಿಮ್ಮನ್ನು ಸೃಷ್ಟಿಸಿದೆವು. ನಂತರ ನಿಮಗೆ ರೂಪವನ್ನು ನೀಡಿದೆವು. ನಂತರ ನಾವು ದೇವದೂತರುಗಳೊಡನೆ ಹೇಳಿದೆವು: “ನೀವು ಆದಮರಿಗೆ ಸಾಷ್ಟಾಂಗ ಮಾಡಿರಿ.” ಅವರು ಸಾಷ್ಟಾಂಗ ಮಾಡಿದರು—ಇಬ್ಲೀಸನ ಹೊರತು. ಅವನು ಸಾಷ್ಟಾಂಗ ಮಾಡುವವರಲ್ಲಿ ಸೇರಲಿಲ್ಲ.

    ೧೨

    قَالَ مَا مَنَعَكَ أَلَّا تَسۡجُدَ إِذۡ أَمَرۡتُكَۖ قَالَ أَنَا۠ خَيۡرٞ مِّنۡهُ خَلَقۡتَنِي مِن نَّارٖ وَخَلَقۡتَهُۥ مِن طِينٖ

    ಅಲ್ಲಾಹು ಕೇಳಿದನು: “ನಾನು ಸಾಷ್ಟಾಂಗ ಮಾಡಲು ಆಜ್ಞಾಪಿಸಿದಾಗ ನೀನು ಅದನ್ನು ನಿರಾಕರಿಸಲು ಕಾರಣವೇನು?” ಇಬ್ಲೀಸ್ ಹೇಳಿದನು: “ನಾನು ಆದಮರಿಗಿಂತಲೂ ಶ್ರೇಷ್ಠನು. ನೀನು ನನ್ನನ್ನು ಸೃಷ್ಟಿಸಿದ್ದು ಅಗ್ನಿಯಿಂದ ಮತ್ತು ಅವರನ್ನು ಸೃಷ್ಟಿಸಿದ್ದು ಜೇಡಿಮಣ್ಣಿನಿಂದ.”

    ೧೩

    قَالَ فَٱهۡبِطۡ مِنۡهَا فَمَا يَكُونُ لَكَ أَن تَتَكَبَّرَ فِيهَا فَٱخۡرُجۡ إِنَّكَ مِنَ ٱلصَّٰغِرِينَ

    ಅಲ್ಲಾಹು ಹೇಳಿದನು: “ಇಲ್ಲಿಂದ ಇಳಿದುಹೋಗು. ಇಲ್ಲಿ ನಿನಗೆ ಅಹಂಕಾರದಿಂದ ವರ್ತಿಸಲು ಅಧಿಕಾರವಿಲ್ಲ. ಹೊರಡು! ನಿಶ್ಚಯವಾಗಿಯೂ ನೀನು ಅಪಮಾನಿತರಲ್ಲಿ ಸೇರಿದವನಾಗಿರುವೆ.”

    ೧೪

    قَالَ أَنظِرۡنِيٓ إِلَىٰ يَوۡمِ يُبۡعَثُونَ

    ಅವನು ಹೇಳಿದನು: “ಅವರನ್ನು (ಮನುಷ್ಯರನ್ನು) ಜೀವ ನೀಡಿ ಎಬ್ಬಿಸುವ ದಿನದವರೆಗೆ ನನಗೆ ಕಾಲಾವಕಾಶ (ಆಯುಷ್ಯ) ನೀಡು.”

    ೧೫

    قَالَ إِنَّكَ مِنَ ٱلۡمُنظَرِينَ

    ಅಲ್ಲಾಹು ಹೇಳಿದನು: “ನಿಶ್ಚಯವಾಗಿಯೂ ನೀನು ಕಾಲಾವಕಾಶ ನೀಡಲಾದವರಲ್ಲಿ ಸೇರಿರುವೆ.”

    ೧೬

    قَالَ فَبِمَآ أَغۡوَيۡتَنِي لَأَقۡعُدَنَّ لَهُمۡ صِرَٰطَكَ ٱلۡمُسۡتَقِيمَ

    ಅವನು ಹೇಳಿದನು: “ನೀನು ನನ್ನನ್ನು ದಾರಿತಪ್ಪಿಸಿದ ಕಾರಣ ನಾನು ಖಂಡಿತ ನಿನ್ನ ನೇರಮಾರ್ಗದಲ್ಲಿ ಕುಳಿತು ಅವರಿಗಾಗಿ ಕಾಯುವೆನು.

    ೧೭

    ثُمَّ لَأٓتِيَنَّهُم مِّنۢ بَيۡنِ أَيۡدِيهِمۡ وَمِنۡ خَلۡفِهِمۡ وَعَنۡ أَيۡمَٰنِهِمۡ وَعَن شَمَآئِلِهِمۡۖ وَلَا تَجِدُ أَكۡثَرَهُمۡ شَٰكِرِينَ

    ನಂತರ ಅವರ ಮುಂಭಾಗದಿಂದ, ಅವರ ಹಿಂಭಾಗದಿಂದ, ಅವರ ಬಲಭಾಗದಿಂದ ಮತ್ತು ಅವರ ಎಡಭಾಗದಿಂದ ನಾನು ಖಂಡಿತ ಅವರ ಬಳಿಗೆ ಬರುವೆನು. ಅವರಲ್ಲಿ ಹೆಚ್ಚಿನವರನ್ನೂ ನೀನು ಕೃತಜ್ಞರಾಗಿ ಕಾಣಲಾರೆ.”

    ೧೮

    قَالَ ٱخۡرُجۡ مِنۡهَا مَذۡءُومٗا مَّدۡحُورٗاۖ لَّمَن تَبِعَكَ مِنۡهُمۡ لَأَمۡلَأَنَّ جَهَنَّمَ مِنكُمۡ أَجۡمَعِينَ

    ಅಲ್ಲಾಹು ಹೇಳಿದನು: “ಇಲ್ಲಿಂದ ಹೊರಡು! ನೀನು ಅಪಮಾನಿತನು ಮತ್ತು ತಿರಸ್ಕೃತನಾಗಿರುವೆ. ಅವರಲ್ಲಿ ಯಾರು ನಿನ್ನನ್ನು ಹಿಂಬಾಲಿಸುತ್ತಾರೋ, (ಅವರು ಸೇರಿದಂತೆ) ನಿಮ್ಮೆಲ್ಲರನ್ನೂ ನಾನು ನರಕದಲ್ಲಿ ತುಂಬಿಸುವೆನು.”

    ೧೯

    وَيَٰٓـَٔادَمُ ٱسۡكُنۡ أَنتَ وَزَوۡجُكَ ٱلۡجَنَّةَ فَكُلَا مِنۡ حَيۡثُ شِئۡتُمَا وَلَا تَقۡرَبَا هَٰذِهِ ٱلشَّجَرَةَ فَتَكُونَا مِنَ ٱلظَّٰلِمِينَ

    “ಓ ಆದಮ್! ನೀವು ಮತ್ತು ನಿಮ್ಮ ಪತ್ನಿ ಸ್ವರ್ಗದಲ್ಲಿ ವಾಸಿಸಿರಿ. ಅಲ್ಲಿ ನೀವುಇಚ್ಛಿಸುವ ಎಲ್ಲಾ ಕಡೆಗಳಿಂದಲೂ ತಿನ್ನಿರಿ. ಆದರೆ ಈ ಮರದ ಸಮೀಪಕ್ಕೆ ಹೋಗಬೇಡಿ. ಹೋದರೆ ನೀವು ಅಕ್ರಮಿಗಳಾಗಿ ಬಿಡುವಿರಿ.”

    ೨೦

    فَوَسۡوَسَ لَهُمَا ٱلشَّيۡطَٰنُ لِيُبۡدِيَ لَهُمَا مَا وُۥرِيَ عَنۡهُمَا مِن سَوۡءَٰتِهِمَا وَقَالَ مَا نَهَىٰكُمَا رَبُّكُمَا عَنۡ هَٰذِهِ ٱلشَّجَرَةِ إِلَّآ أَن تَكُونَا مَلَكَيۡنِ أَوۡ تَكُونَا مِنَ ٱلۡخَٰلِدِينَ

    (ಆಗ ಆ ಹಣ್ಣನ್ನು ತಿನ್ನುವ ಮೂಲಕ) ಅವರಿಂದ ಮರೆಯಾಗಿದ್ದ ಅವರ ಗುಹ್ಯಭಾಗಗಳನ್ನು ಬಹಿರಂಗಪಡಿಸುವುದಕ್ಕಾಗಿ ಶೈತಾನನು ಅವರಿಬ್ಬರಿಗೂ (ಆ ಹಣ್ಣು ತಿನ್ನುವಂತೆ) ದುಷ್ಪ್ರೇರಣೆ ಮಾಡಿದನು. ಅವನು ಹೇಳಿದನು: “ನೀವಿಬ್ಬರು ದೇವದೂತರಾಗುವಿರಿ ಅಥವಾ ಇಲ್ಲಿ (ಸ್ವರ್ಗದಲ್ಲಿ) ಶಾಶ್ವತವಾಗಿ ವಾಸಿಸುವಿರಿ ಎಂಬ ಕಾರಣದಿಂದಲೇ ನಿಮ್ಮ ಪರಿಪಾಲಕನು ನಿಮ್ಮನ್ನು ಈ ಮರದಿಂದ ತಡೆದಿದ್ದಾನೆ.”

    ೨೧

    وَقَاسَمَهُمَآ إِنِّي لَكُمَا لَمِنَ ٱلنَّٰصِحِينَ

    “ನಿಶ್ಚಯವಾಗಿಯೂ ನಾನು ನಿಮ್ಮ ಹಿತೈಷಿಯಾಗಿದ್ದೇನೆ” ಎಂದು ಅವನು ಪ್ರತಿಜ್ಞೆ ಮಾಡಿ ಹೇಳಿದನು.

    ೨೨

    فَدَلَّىٰهُمَا بِغُرُورٖۚ فَلَمَّا ذَاقَا ٱلشَّجَرَةَ بَدَتۡ لَهُمَا سَوۡءَٰتُهُمَا وَطَفِقَا يَخۡصِفَانِ عَلَيۡهِمَا مِن وَرَقِ ٱلۡجَنَّةِۖ وَنَادَىٰهُمَا رَبُّهُمَآ أَلَمۡ أَنۡهَكُمَا عَن تِلۡكُمَا ٱلشَّجَرَةِ وَأَقُل لَّكُمَآ إِنَّ ٱلشَّيۡطَٰنَ لَكُمَا عَدُوّٞ مُّبِينٞ

    ಹೀಗೆ ಅವನು ಮೋಸದಿಂದ ಅವರಿಬ್ಬರನ್ನು ಕೆಳಗಿಳಿಸಿದನು. ಅವರಿಬ್ಬರು ಆ ಮರದ ಹಣ್ಣಿನ ರುಚಿಯನ್ನು ಸವಿಯುತ್ತಿದ್ದಂತೆ ಅವರಿಗೆ ಅವರ ಗುಹ್ಯಭಾಗಗಳು ಬಹಿರಂಗವಾದವು. ಸ್ವರ್ಗದ ಎಲೆಗಳಿಂದ ಅವರಿಬ್ಬರೂ ತಮ್ಮ ದೇಹಗಳನ್ನು ಮುಚ್ಚತೊಡಗಿದರು. ಆಗ ಅವರನ್ನು ಕರೆದು ಅವರ ಪರಿಪಾಲಕ (ಅಲ್ಲಾಹು) ಹೇಳಿದನು: “ಆ ಮರದಿಂದ ನಾನು ನಿಮ್ಮನ್ನು ತಡೆಯಲಿಲ್ಲವೇ? ನಿಶ್ಚಯವಾಗಿಯೂ ಶೈತಾನನು ನಿಮ್ಮ ಪ್ರತ್ಯಕ್ಷ ಶತ್ರುವೆಂದು ನಾನು ನಿಮಗೆ ಹೇಳಲಿಲ್ಲವೇ?”

    ೨೩

    قَالَا رَبَّنَا ظَلَمۡنَآ أَنفُسَنَا وَإِن لَّمۡ تَغۡفِرۡ لَنَا وَتَرۡحَمۡنَا لَنَكُونَنَّ مِنَ ٱلۡخَٰسِرِينَ

    ಅವರಿಬ್ಬರು ಹೇಳಿದರು: “ಓ ನಮ್ಮ ಪರಿಪಾಲಕನೇ! ನಾವು ಸ್ವಯಂ ಅಕ್ರಮವೆಸಗಿದ್ದೇವೆ. ನೀನು ನಮ್ಮನ್ನು ಕ್ಷಮಿಸದಿದ್ದರೆ ಮತ್ತು ದಯೆ ತೋರದಿದ್ದರೆ ನಾವು ನಷ್ಟಹೊಂದಿದವರಲ್ಲಿ ಸೇರುವುದು ನಿಶ್ಚಿತ.”

    ೨೪

    قَالَ ٱهۡبِطُواْ بَعۡضُكُمۡ لِبَعۡضٍ عَدُوّٞۖ وَلَكُمۡ فِي ٱلۡأَرۡضِ مُسۡتَقَرّٞ وَمَتَٰعٌ إِلَىٰ حِينٖ

    ಅಲ್ಲಾಹು ಹೇಳಿದನು: “ಇಳಿಯಿರಿ! ನೀವು ಪರಸ್ಪರ ಶತ್ರುಗಳಾಗುವಿರಿ. ನಿಮಗೆ ಭೂಮಿಯಲ್ಲಿ ವಾಸ್ತವ್ಯವಿದೆ ಮತ್ತು ಒಂದು ನಿರ್ದಿಷ್ಟ ಕಾಲದ ತನಕ ಜೀವನ ಸವಲತ್ತುಗಳಿವೆ.”

    ೨೫

    قَالَ فِيهَا تَحۡيَوۡنَ وَفِيهَا تَمُوتُونَ وَمِنۡهَا تُخۡرَجُونَ

    ಅಲ್ಲಾಹು ಹೇಳಿದನು: “ನೀವು ಅಲ್ಲಿಯೇ ಬದುಕುವಿರಿ ಮತ್ತು ಅಲ್ಲಿಯೇ ಸಾಯುವಿರಿ. ನಂತರ ನಿಮ್ಮನ್ನು ಅಲ್ಲಿಂದಲೇ ಹೊರತರಲಾಗುವುದು.”

    ೨೬

    يَٰبَنِيٓ ءَادَمَ قَدۡ أَنزَلۡنَا عَلَيۡكُمۡ لِبَاسٗا يُوَٰرِي سَوۡءَٰتِكُمۡ وَرِيشٗاۖ وَلِبَاسُ ٱلتَّقۡوَىٰ ذَٰلِكَ خَيۡرٞۚ ذَٰلِكَ مِنۡ ءَايَٰتِ ٱللَّهِ لَعَلَّهُمۡ يَذَّكَّرُونَ

    ಓ ಆದಮರ ಮಕ್ಕಳೇ! ನಿಮ್ಮ ಗುಹ್ಯಭಾಗಗಳನ್ನು ಮುಚ್ಚಲು ನಾವು ನಿಮಗೆ ಉಡುಪನ್ನು ಇಳಿಸಿಕೊಟ್ಟಿದ್ದೇವೆ. ಅದು ನಿಮಗೆ ಅಲಂಕಾರವೂ ಆಗಿದೆ. ಆದರೆ ದೇವಭಯದ ಉಡುಪು ಅತಿಶ್ರೇಷ್ಠವಾಗಿದೆ. ಅದು ಅಲ್ಲಾಹನ ದೃಷ್ಟಾಂತಗಳಲ್ಲಿ ಸೇರಿದ್ದಾಗಿದೆ. ಅವರು ನೆನಪಿಡುವುದಕ್ಕಾಗಿ.

    ೨೭

    يَٰبَنِيٓ ءَادَمَ لَا يَفۡتِنَنَّكُمُ ٱلشَّيۡطَٰنُ كَمَآ أَخۡرَجَ أَبَوَيۡكُم مِّنَ ٱلۡجَنَّةِ يَنزِعُ عَنۡهُمَا لِبَاسَهُمَا لِيُرِيَهُمَا سَوۡءَٰتِهِمَآۚ إِنَّهُۥ يَرَىٰكُمۡ هُوَ وَقَبِيلُهُۥ مِنۡ حَيۡثُ لَا تَرَوۡنَهُمۡۗ إِنَّا جَعَلۡنَا ٱلشَّيَٰطِينَ أَوۡلِيَآءَ لِلَّذِينَ لَا يُؤۡمِنُونَ

    ಓ ಆದಮರ ಮಕ್ಕಳೇ! ನಿಮ್ಮ ತಂದೆ-ತಾಯಿಗಳನ್ನು—ಅವರ ಗುಹ್ಯಭಾಗಗಳನ್ನು ಅವರಿಗೆ ತೋರಿಸಲು ಅವರ ಬಟ್ಟೆಯನ್ನು ಕಳಚಿ ಹಾಕುತ್ತಾ—ಅವರನ್ನು ಸ್ವರ್ಗದಿಂದ ನಿರ್ಗಮಿಸುವಂತೆ ಮಾಡಿದ ಶೈತಾನನು ನಿಮ್ಮನ್ನು ಕೂಡ ಮರುಳುಗೊಳಿಸದಿರಲಿ. ನಿಶ್ಚಯವಾಗಿಯೂ ಅವನು ಮತ್ತು ಅವನ ವಂಶಸ್ಥರು ನಿಮ್ಮನ್ನು ನೋಡುತ್ತಿದ್ದಾರೆ. ಆದರೆ ನಿಮಗೆ ಅವರನ್ನು ನೋಡಲಾಗುವುದಿಲ್ಲ. ನಿಶ್ಚಯವಾಗಿಯೂ ವಿಶ್ವಾಸವಿಡದ ಜನರಿಗೆ ನಾವು ಶೈತಾನರನ್ನು ಮಿತ್ರರನ್ನಾಗಿ ಮಾಡಿದ್ದೇವೆ.

    ೨೮

    وَإِذَا فَعَلُواْ فَٰحِشَةٗ قَالُواْ وَجَدۡنَا عَلَيۡهَآ ءَابَآءَنَا وَٱللَّهُ أَمَرَنَا بِهَاۗ قُلۡ إِنَّ ٱللَّهَ لَا يَأۡمُرُ بِٱلۡفَحۡشَآءِۖ أَتَقُولُونَ عَلَى ٱللَّهِ مَا لَا تَعۡلَمُونَ

    ಅವರು ಏನಾದರೂ ಅಶ್ಲೀಲಕೃತ್ಯ ಮಾಡಿದರೆ, “ನಮ್ಮ ಪೂರ್ವಜರು ಹೀಗೆ ಮಾಡುವುದನ್ನು ನಾವು ನೋಡಿದ್ದೇವೆ; ಅಲ್ಲಾಹು ಇದನ್ನು ನಮಗೆ ಆದೇಶಿಸಿದ್ದಾನೆ” ಎಂದು ಹೇಳುತ್ತಾರೆ. ಹೇಳಿರಿ: “ಅಲ್ಲಾಹು ಅಶ್ಲೀಲಕೃತ್ಯ ಮಾಡಲು ಖಂಡಿತ ಆದೇಶಿಸುವುದಿಲ್ಲ. ನಿಮಗೆ ತಿಳಿದಿಲ್ಲದ ವಿಷಯವನ್ನು ನೀವು ಅಲ್ಲಾಹನ ಮೇಲೆ ಆರೋಪಿಸುತ್ತೀರಾ?”

    ೨೯

    قُلۡ أَمَرَ رَبِّي بِٱلۡقِسۡطِۖ وَأَقِيمُواْ وُجُوهَكُمۡ عِندَ كُلِّ مَسۡجِدٖ وَٱدۡعُوهُ مُخۡلِصِينَ لَهُ ٱلدِّينَۚ كَمَا بَدَأَكُمۡ تَعُودُونَ

    ಹೇಳಿರಿ: “ನನ್ನ ಪರಿಪಾಲಕ ನನಗೆ ನ್ಯಾಯದಿಂದ ವರ್ತಿಸಲು ಆದೇಶಿಸಿದ್ದಾನೆ. ಎಲ್ಲಾ ಆರಾಧನಾ ಸ್ಥಳಗಳಲ್ಲೂ (ವೇಳೆಗಳಲ್ಲೂ) ನಿಮ್ಮ ಮುಖಗಳನ್ನು (ಅವನ ಕಡೆಗೆ) ನೇರವಾಗಿ ನಿಲ್ಲಿಸಿರಿ ಮತ್ತು ಧರ್ಮವನ್ನು ಅವನಿಗೆ ನಿಷ್ಕಳಂಕಗೊಳಿಸಿ ಅವನಲ್ಲಿ ಪ್ರಾರ್ಥಿಸಿರಿ (ಎಂದು ಅವನು ಆದೇಶಿಸಿದ್ದಾನೆ).” ಅವನು ನಿಮ್ಮನ್ನು ಮೊದಲು ಸೃಷ್ಟಿಸಿದಂತೆಯೇ (ನಿಮ್ಮ ಮರಣದ ಬಳಿಕ) ಪುನಃ ಸೃಷ್ಟಿಸುವನು.

    ೩೦

    فَرِيقًا هَدَىٰ وَفَرِيقًا حَقَّ عَلَيۡهِمُ ٱلضَّلَٰلَةُۚ إِنَّهُمُ ٱتَّخَذُواْ ٱلشَّيَٰطِينَ أَوۡلِيَآءَ مِن دُونِ ٱللَّهِ وَيَحۡسَبُونَ أَنَّهُم مُّهۡتَدُونَ

    ಒಂದು ಗುಂಪಿಗೆ ಅವನು ಸನ್ಮಾರ್ಗವನ್ನು ತೋರಿಸಿದ್ದಾನೆ ಮತ್ತು ಇನ್ನೊಂದು ಗುಂಪು ದುರ್ಮಾರ್ಗದಲ್ಲಿರಲು ಅರ್ಹರಾಗಿದ್ದಾರೆ. ನಿಶ್ಚಯವಾಗಿಯೂ ಅವರು ಅಲ್ಲಾಹನನ್ನು ಬಿಟ್ಟು ಶೈತಾನರನ್ನು ರಕ್ಷಕರನ್ನಾಗಿ ಸ್ವೀಕರಿಸಿದರು. ಅವರು ಸನ್ಮಾರ್ಗದಲ್ಲಿದ್ದಾರೆಂದೇ ಅವರು ಭಾವಿಸುತ್ತಿದ್ದಾರೆ.

    ೩೧

    ۞ يَٰبَنِيٓ ءَادَمَ خُذُواْ زِينَتَكُمۡ عِندَ كُلِّ مَسۡجِدٖ وَكُلُواْ وَٱشۡرَبُواْ وَلَا تُسۡرِفُوٓاْۚ إِنَّهُۥ لَا يُحِبُّ ٱلۡمُسۡرِفِينَ

    ಓ ಆದಮರ ಮಕ್ಕಳೇ! ಎಲ್ಲಾ ಆರಾಧನಾ ಸ್ಥಳಗಳಲ್ಲೂ (ವೇಳೆಗಳಲ್ಲೂ) ಉಡುಪುಗಳನ್ನು ಧರಿಸಿರಿ.[1] ನೀವು ತಿನ್ನಿರಿ ಮತ್ತು ಕುಡಿಯಿರಿ. ಆದರೆ ದುರ್ವ್ಯಯ ಮಾಡಬೇಡಿ. ದುರ್ವ್ಯಯ ಮಾಡುವವರನ್ನು ಅಲ್ಲಾಹು ಇಷ್ಟಪಡುವುದಿಲ್ಲ.

    [1] ಮಕ್ಕಾದ ಬಹುದೇವಾರಾಧಕರು ನಗ್ನರಾಗಿ ಕಅಬಾಲಯಕ್ಕೆ ತವಾಫ್ (ಪ್ರದಕ್ಷಿಣೆ) ಮಾಡುತ್ತಿದ್ದರು. ನಾವು ಹುಟ್ಟಿದ ಸ್ಥಿತಿಯಲ್ಲೇ ತವಾಫ್ ಮಾಡುತ್ತೇವೆಂದು ಅವರು ಹೇಳುತ್ತಿದ್ದರು. ಅಲ್ಲಾಹನ ಆಜ್ಞೋಲ್ಲಂಘನೆ ಮಾಡಿದ ಬಟ್ಟೆಗಳನ್ನು ಧರಿಸಿ ಆರಾಧನೆ ಮಾಡಿದರೆ ಸಿಂಧುವಾಗುವುದಿಲ್ಲ ಎಂಬ ನಂಬಿಕೆ ಅವರಲ್ಲಿತ್ತು. ಆದರೆ ಇಸ್ಲಾಂ ಇವೆಲ್ಲವನ್ನೂ ವಿರೋಧಿಸುತ್ತದೆ.

    ೩೨

    قُلۡ مَنۡ حَرَّمَ زِينَةَ ٱللَّهِ ٱلَّتِيٓ أَخۡرَجَ لِعِبَادِهِۦ وَٱلطَّيِّبَٰتِ مِنَ ٱلرِّزۡقِۚ قُلۡ هِيَ لِلَّذِينَ ءَامَنُواْ فِي ٱلۡحَيَوٰةِ ٱلدُّنۡيَا خَالِصَةٗ يَوۡمَ ٱلۡقِيَٰمَةِۗ كَذَٰلِكَ نُفَصِّلُ ٱلۡأٓيَٰتِ لِقَوۡمٖ يَعۡلَمُونَ

    ಹೇಳಿರಿ: “ಅಲ್ಲಾಹು ತನ್ನ ದಾಸರಿಗೆ ಹೊರತಂದ ಅಲಂಕಾರದ ಉಡುಪುಗಳನ್ನು ಮತ್ತು ಉತ್ತಮ ಆಹಾರಗಳನ್ನು ನಿಷೇಧಿಸಿದ್ದು ಯಾರು?” ಹೇಳಿರಿ: “ಇಹಲೋಕದಲ್ಲಿ ಅವು ಸತ್ಯವಿಶ್ವಾಸಿಗಳಿಗೆ (ಮತ್ತು ಇತರರಿಗೆ) ಇರುವುದಾಗಿದೆ. ಪುನರುತ್ಥಾನ ದಿನದಲ್ಲಿ ವಿಶೇಷವಾಗಿ ಸತ್ಯವಿಶ್ವಾಸಿಗಳಿಗೆ ಮಾತ್ರ ಇರುವುದಾಗಿದೆ.” ಈ ರೀತಿಯಲ್ಲಿ ನಾವು ತಿಳಿದುಕೊಳ್ಳುವ ಜನರಿಗಾಗಿ ವಚನಗಳನ್ನು ವಿವರಿಸಿಕೊಡುತ್ತೇವೆ.

    ೩೩

    قُلۡ إِنَّمَا حَرَّمَ رَبِّيَ ٱلۡفَوَٰحِشَ مَا ظَهَرَ مِنۡهَا وَمَا بَطَنَ وَٱلۡإِثۡمَ وَٱلۡبَغۡيَ بِغَيۡرِ ٱلۡحَقِّ وَأَن تُشۡرِكُواْ بِٱللَّهِ مَا لَمۡ يُنَزِّلۡ بِهِۦ سُلۡطَٰنٗا وَأَن تَقُولُواْ عَلَى ٱللَّهِ مَا لَا تَعۡلَمُونَ

    ಹೇಳಿರಿ: “ನನ್ನ ಪರಿಪಾಲಕ (ಅಲ್ಲಾಹು) ನಿಷೇಧಿಸಿರುವುದು ಪ್ರತ್ಯಕ್ಷ ಮತ್ತು ಪರೋಕ್ಷವಾಗಿರುವ ಅಶ್ಲೀಲಕೃತ್ಯಗಳು, ಪಾಪಗಳು, ನ್ಯಾಯರಹಿತವಾದ ದಬ್ಬಾಳಿಕೆಗಳು, ಅಲ್ಲಾಹು ಯಾವುದೇ ಸಾಕ್ಷ್ಯಾಧಾರ ಇಳಿಸಿಕೊಡದ ವಸ್ತುಗಳನ್ನು ಅವನಿಗೆ ಸಹಭಾಗಿಯನ್ನಾಗಿ ಮಾಡುವುದು ಮತ್ತು ಅಲ್ಲಾಹನ ಬಗ್ಗೆ ನಿಮ್ಮ ತಿಳಿದಿಲ್ಲದ ವಿಷಯಗಳನ್ನು ಹೇಳುವುದು ಮಾತ್ರವಾಗಿವೆ.”

    ೩೪

    وَلِكُلِّ أُمَّةٍ أَجَلٞۖ فَإِذَا جَآءَ أَجَلُهُمۡ لَا يَسۡتَأۡخِرُونَ سَاعَةٗ وَلَا يَسۡتَقۡدِمُونَ

    ಎಲ್ಲಾ ಸಮುದಾಯಗಳಿಗೂ ಒಂದು ಅವಧಿಯಿದೆ. ಅವರ ಅವಧಿಯು ಬಂದರೆ, ಒಂದು ಕ್ಷಣ ಹಿಂದೂಡಲು ಅಥವಾ ಮುಂದೂಡಲು ಅವರಿಂದ ಸಾಧ್ಯವಿಲ್ಲ.

    ೩೫

    يَٰبَنِيٓ ءَادَمَ إِمَّا يَأۡتِيَنَّكُمۡ رُسُلٞ مِّنكُمۡ يَقُصُّونَ عَلَيۡكُمۡ ءَايَٰتِي فَمَنِ ٱتَّقَىٰ وَأَصۡلَحَ فَلَا خَوۡفٌ عَلَيۡهِمۡ وَلَا هُمۡ يَحۡزَنُونَ

    ಓ ಆದಮರ ಮಕ್ಕಳೇ! ನನ್ನ ವಚನಗಳನ್ನು ವಿವರಿಸಿಕೊಡುವ ಸಂದೇಶವಾಹಕರುಗಳು ನಿಮ್ಮಿಂದಲೇ ನಿಮ್ಮ ಬಳಿಗೆ ಬಂದರೆ—ಆಗ ಯಾರು ದೇವಭಯದಿಂದ ಜೀವಿಸುತ್ತಾರೋ ಮತ್ತು ಸ್ವಯಂ ಸುಧಾರಿಸಿಕೊಳ್ಳುತ್ತಾರೋ ಅವರಿಗೆ ಯಾವುದೇ ಭಯವಿಲ್ಲ; ಅವರು ದುಃಖಿಸುವುದೂ ಇಲ್ಲ.

    ೩೬

    وَٱلَّذِينَ كَذَّبُواْ بِـَٔايَٰتِنَا وَٱسۡتَكۡبَرُواْ عَنۡهَآ أُوْلَٰٓئِكَ أَصۡحَٰبُ ٱلنَّارِۖ هُمۡ فِيهَا خَٰلِدُونَ

    ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದವರು ಮತ್ತು ಅವುಗಳ ಬಗ್ಗೆ ಅಹಂಕಾರ ತೋರಿದವರು ಯಾರೋ—ಅವರೇ ನರಕವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.

    ೩೭

    فَمَنۡ أَظۡلَمُ مِمَّنِ ٱفۡتَرَىٰ عَلَى ٱللَّهِ كَذِبًا أَوۡ كَذَّبَ بِـَٔايَٰتِهِۦٓۚ أُوْلَٰٓئِكَ يَنَالُهُمۡ نَصِيبُهُم مِّنَ ٱلۡكِتَٰبِۖ حَتَّىٰٓ إِذَا جَآءَتۡهُمۡ رُسُلُنَا يَتَوَفَّوۡنَهُمۡ قَالُوٓاْ أَيۡنَ مَا كُنتُمۡ تَدۡعُونَ مِن دُونِ ٱللَّهِۖ قَالُواْ ضَلُّواْ عَنَّا وَشَهِدُواْ عَلَىٰٓ أَنفُسِهِمۡ أَنَّهُمۡ كَانُواْ كَٰفِرِينَ

    ಅಲ್ಲಾಹನ ಮೇಲೆ ಸುಳ್ಳು ಆರೋಪಿಸುವವನಿಗಿಂತ ಅಥವಾ ಅವನ ವಚನಗಳನ್ನು ನಿಷೇಧಿಸುವವನಿಗಿಂತ ದೊಡ್ಡ ಅಕ್ರಮಿ ಯಾರು? ಅವರು (ಅಲ್ಲಾಹನ) ದಾಖಲೆಯಲ್ಲಿ ಅವರಿಗೆ ನಿಶ್ಚಯಿಸಲಾದ ಪಾಲನ್ನು ಪಡೆಯುವರು. ಎಲ್ಲಿಯವರೆಗೆಂದರೆ, ಅವರ ಪ್ರಾಣ ತೆಗೆಯಲು ನಮ್ಮ ದೂತರು (ದೇವದೂತರು) ಅವರ ಬಳಿಗೆ ಬರುವಾಗ, ಅವರು (ದೇವದೂತರು) ಕೇಳುವರು: “ನೀವು ಅಲ್ಲಾಹನನ್ನು ಬಿಟ್ಟು ಕರೆದು ಪ್ರಾರ್ಥಿಸುತ್ತಿದ್ದವರು ಎಲ್ಲಿದ್ದಾರೆ?” ಅವರು ಉತ್ತರಿಸುವರು: “ಅವರು ನಮ್ಮನ್ನು ಬಿಟ್ಟು ಹೋದರು.” ಅವರು ಸತ್ಯನಿಷೇಧಿಗಳಾಗಿದ್ದರೆಂದು ಅವರೇ ಅವರ ವಿರುದ್ಧ ಸಾಕ್ಷಿ ನುಡಿದಿದ್ದಾರೆ.

    ೩೮

    قَالَ ٱدۡخُلُواْ فِيٓ أُمَمٖ قَدۡ خَلَتۡ مِن قَبۡلِكُم مِّنَ ٱلۡجِنِّ وَٱلۡإِنسِ فِي ٱلنَّارِۖ كُلَّمَا دَخَلَتۡ أُمَّةٞ لَّعَنَتۡ أُخۡتَهَاۖ حَتَّىٰٓ إِذَا ٱدَّارَكُواْ فِيهَا جَمِيعٗا قَالَتۡ أُخۡرَىٰهُمۡ لِأُولَىٰهُمۡ رَبَّنَا هَٰٓؤُلَآءِ أَضَلُّونَا فَـَٔاتِهِمۡ عَذَابٗا ضِعۡفٗا مِّنَ ٱلنَّارِۖ قَالَ لِكُلّٖ ضِعۡفٞ وَلَٰكِن لَّا تَعۡلَمُونَ

    ಅಲ್ಲಾಹು ಹೇಳುವನು: “ನಿಮಗಿಂತ ಮೊದಲು ತೀರಿಹೋದ ಜಿನ್ನ್ ಮತ್ತು ಮನುಷ್ಯರ ಸಮುದಾಯಗಳೊಂದಿಗೆ ನೀವು ಕೂಡ ನರಕವನ್ನು ಪ್ರವೇಶಿಸಿರಿ.” ಒಂದೊಂದು ಸಮುದಾಯದವರು ಅದನ್ನು ಪ್ರವೇಶಿಸುವಾಗಲೆಲ್ಲಾ ಅವರಿಗಿಂತ ಮೊದಲಿನ ಸಮುದಾಯವನ್ನು ಶಪಿಸುವರು. ಎಲ್ಲಿಯವರೆಗೆಂದರೆ, ಅವರೆಲ್ಲರೂ ಅಲ್ಲಿ ಒಟ್ಟು ಸೇರಿದಾಗ ನಂತರ ಬಂದವರು ಮೊದಲು ಬಂದವರ ಬಗ್ಗೆ ಹೇಳುವರು: “ಓ ನಮ್ಮ ಪರಿಪಾಲಕನೇ! ಇವರೇ ನಮ್ಮನ್ನು ದಾರಿ ತಪ್ಪಿಸಿದವರು. ಆದ್ದರಿಂದ ಇವರಿಗೆ ನರಕದ ಇಮ್ಮಡಿ ಶಿಕ್ಷೆಯನ್ನು ನೀಡು.” ಅಲ್ಲಾಹು ಹೇಳುವನು: “ಎಲ್ಲರಿಗೂ ಇಮ್ಮಡಿ ಶಿಕ್ಷೆಯಿದೆ. ಆದರೆ ನೀವು ತಿಳಿಯುವುದಿಲ್ಲ.”

    ೩೯

    وَقَالَتۡ أُولَىٰهُمۡ لِأُخۡرَىٰهُمۡ فَمَا كَانَ لَكُمۡ عَلَيۡنَا مِن فَضۡلٖ فَذُوقُواْ ٱلۡعَذَابَ بِمَا كُنتُمۡ تَكۡسِبُونَ

    ಮೊದಲು ಬಂದವರು ನಂತರ ಬಂದವರೊಡನೆ ಹೇಳುವರು: “ನಿಮಗೆ ನಮಗಿಂತಲೂ ದೊಡ್ಡ ಶ್ರೇಷ್ಠತೆಯೇನಿಲ್ಲ (ನಾವೆಲ್ಲರೂ ಸಮಾನರು). ಆದ್ದರಿಂದ ನೀವು ಮಾಡುತ್ತಿದ್ದ ದುಷ್ಕರ್ಮಗಳ ಶಿಕ್ಷೆಯನ್ನು ನೀವೇ ಅನುಭವಿಸಿರಿ.”

    ೪೦

    إِنَّ ٱلَّذِينَ كَذَّبُواْ بِـَٔايَٰتِنَا وَٱسۡتَكۡبَرُواْ عَنۡهَا لَا تُفَتَّحُ لَهُمۡ أَبۡوَٰبُ ٱلسَّمَآءِ وَلَا يَدۡخُلُونَ ٱلۡجَنَّةَ حَتَّىٰ يَلِجَ ٱلۡجَمَلُ فِي سَمِّ ٱلۡخِيَاطِۚ وَكَذَٰلِكَ نَجۡزِي ٱلۡمُجۡرِمِينَ

    ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದವರು ಮತ್ತು ಅವುಗಳ ಬಗ್ಗೆ ಅಹಂಕಾರ ತೋರಿದವರು ಯಾರೋ—ಅವರಿಗೆ ಆಕಾಶದ ಬಾಗಿಲುಗಳನ್ನು ತೆರೆದುಕೊಡಲಾಗುವುದಿಲ್ಲ.[1] ಸೂಜಿಯ ರಂಧ್ರದಲ್ಲಿ ಒಂಟೆ ಪ್ರವೇಶ ಮಾಡುವ ತನಕ ಅವರು ಸ್ವರ್ಗವನ್ನು ಪ್ರವೇಶಿಸುವುದಿಲ್ಲ. ಈ ರೀತಿ ನಾವು ಅಪರಾಧಿಗಳಿಗೆ ಪ್ರತಿಫಲ ನೀಡುವೆವು.

    [1] ಅಂದರೆ ಅವರ ಆತ್ಮಗಳು, ಅಥವಾ ಅವರು ಮಾಡಿದ ಕರ್ಮಗಳು, ಅಥವಾ ಅವರ ಪ್ರಾರ್ಥನೆಗಳಿಗೆ ಆಕಾಶದ ಬಾಗಿಲುಗಳು ತೆರೆಯುವುದಿಲ್ಲ (ಸ್ವೀಕಾರವಾಗುವುದಿಲ್ಲ) ಎಂದರ್ಥ.

    ೪೧

    لَهُم مِّن جَهَنَّمَ مِهَادٞ وَمِن فَوۡقِهِمۡ غَوَاشٖۚ وَكَذَٰلِكَ نَجۡزِي ٱلظَّٰلِمِينَ

    ಅವರಿಗೆ ನರಕಾಗ್ನಿಯ ಹಾಸಿಗೆಯಿದೆ ಮತ್ತು ಅವರ ಮೇಲ್ಭಾಗದಲ್ಲಿ (ನರಕದ) ಹೊದಿಕೆಗಳೂ ಇವೆ. ಈ ರೀತಿ ನಾವು ಅಕ್ರಮಿಗಳಿಗೆ ಪ್ರತಿಫಲ ನೀಡುವೆವು.

    ೪೨

    وَٱلَّذِينَ ءَامَنُواْ وَعَمِلُواْ ٱلصَّٰلِحَٰتِ لَا نُكَلِّفُ نَفۡسًا إِلَّا وُسۡعَهَآ أُوْلَٰٓئِكَ أَصۡحَٰبُ ٱلۡجَنَّةِۖ هُمۡ فِيهَا خَٰلِدُونَ

    ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ—ಒಬ್ಬ ವ್ಯಕ್ತಿಯ ಮೇಲೆ ಅವನ ಸಾಮರ್ಥ್ಯಕ್ಕೆ ಮಿಗಿಲಾದುದನ್ನು ನಾವು ಹೊರಿಸುವುದಿಲ್ಲ. ಅವರೇ ಸ್ವರ್ಗವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.

    ೪೩

    وَنَزَعۡنَا مَا فِي صُدُورِهِم مِّنۡ غِلّٖ تَجۡرِي مِن تَحۡتِهِمُ ٱلۡأَنۡهَٰرُۖ وَقَالُواْ ٱلۡحَمۡدُ لِلَّهِ ٱلَّذِي هَدَىٰنَا لِهَٰذَا وَمَا كُنَّا لِنَهۡتَدِيَ لَوۡلَآ أَنۡ هَدَىٰنَا ٱللَّهُۖ لَقَدۡ جَآءَتۡ رُسُلُ رَبِّنَا بِٱلۡحَقِّۖ وَنُودُوٓاْ أَن تِلۡكُمُ ٱلۡجَنَّةُ أُورِثۡتُمُوهَا بِمَا كُنتُمۡ تَعۡمَلُونَ

    ನಾವು ಅವರ ಹೃದಯಗಳಲ್ಲಿರುವ ದ್ವೇಷವನ್ನು ತೆಗೆದು ಬಿಡುವೆವು. ಅವರ ತಳಭಾಗದಿಂದ ನದಿಗಳು ಹರಿಯುವುವು. ಅವರು ಹೇಳುವರು: “ಇದರ ಕಡೆಗೆ ನಮಗೆ ದಾರಿ ತೋರಿಸಿದ ಅಲ್ಲಾಹನಿಗೆ ಸರ್ವಸ್ತುತಿ. ಅಲ್ಲಾಹು ನಮಗೆ ದಾರಿ ತೋರಿಸದಿದ್ದರೆ ನಾವು ಸನ್ಮಾರ್ಗದಲ್ಲಿರುತ್ತಿರಲಿಲ್ಲ. ನಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಸಂದೇಶವಾಹಕರು ಸತ್ಯದೊಂದಿಗೇ ಬಂದಿದ್ದರು.” ಆಗ ಅವರೊಡನೆ ಹೇಳಲಾಗುವುದು: “ನೀವು ಮಾಡಿದ ಕರ್ಮಗಳಿಗೆ ಪ್ರತಿಫಲವಾಗಿ ಈ ಸ್ವರ್ಗವನ್ನು ನೀವು ಉತ್ತರಾಧಿಕಾರವಾಗಿ ಪಡೆದಿರುವಿರಿ.”

    ೪೪

    وَنَادَىٰٓ أَصۡحَٰبُ ٱلۡجَنَّةِ أَصۡحَٰبَ ٱلنَّارِ أَن قَدۡ وَجَدۡنَا مَا وَعَدَنَا رَبُّنَا حَقّٗا فَهَلۡ وَجَدتُّم مَّا وَعَدَ رَبُّكُمۡ حَقّٗاۖ قَالُواْ نَعَمۡۚ فَأَذَّنَ مُؤَذِّنُۢ بَيۡنَهُمۡ أَن لَّعۡنَةُ ٱللَّهِ عَلَى ٱلظَّٰلِمِينَ

    ಸ್ವರ್ಗವಾಸಿಗಳು ನರಕವಾಸಿಗಳನ್ನು ಕರೆದು ಹೇಳುವರು: “ನಮ್ಮ ಪರಿಪಾಲಕನು (ಅಲ್ಲಾಹು) ನಮಗೆ ವಾಗ್ದಾನ ಮಾಡಿದ್ದು ಸತ್ಯವಾಗಿ ನೆರವೇರಿದ್ದನ್ನು ನಾವು ಕಂಡಿದ್ದೇವೆ. ನಿಮ್ಮ ಪರಿಪಾಲಕನು (ಅಲ್ಲಾಹು) ನಿಮಗೆ ವಾಗ್ದಾನ ಮಾಡಿದ್ದು ಸತ್ಯವಾಗಿ ನೆರವೇರಿದ್ದನ್ನು ನೀವು ಕಂಡಿದ್ದೀರಾ?” ಅವರು ಉತ್ತರಿಸುವರು: “ಹೌದು.” ಆಗ ಅವರ ನಡುವಿನಿಂದ ಒಬ್ಬನು ಘೋಷಿಸುವನು: “ಅಕ್ರಮಿಗಳ ಮೇಲೆ ಅಲ್ಲಾಹನ ಶಾಪವಿರಲಿ.”

    ೪೫

    ٱلَّذِينَ يَصُدُّونَ عَن سَبِيلِ ٱللَّهِ وَيَبۡغُونَهَا عِوَجٗا وَهُم بِٱلۡأٓخِرَةِ كَٰفِرُونَ

    ಅವರು (ಅಕ್ರಮಿಗಳು) ಯಾರೆಂದರೆ, ಅಲ್ಲಾಹನ ಮಾರ್ಗದಿಂದ ಜನರನ್ನು ತಡೆಯುವವರು ಮತ್ತು ಅದರಲ್ಲಿ ವಕ್ರತೆಯನ್ನು ಹುಡುಕುವವರು. ಅವರು ಪರಲೋಕವನ್ನು ನಿಷೇಧಿಸುವವರಾಗಿದ್ದಾರೆ.

    ೪೬

    وَبَيۡنَهُمَا حِجَابٞۚ وَعَلَى ٱلۡأَعۡرَافِ رِجَالٞ يَعۡرِفُونَ كُلَّۢا بِسِيمَىٰهُمۡۚ وَنَادَوۡاْ أَصۡحَٰبَ ٱلۡجَنَّةِ أَن سَلَٰمٌ عَلَيۡكُمۡۚ لَمۡ يَدۡخُلُوهَا وَهُمۡ يَطۡمَعُونَ

    ಅವರ ನಡುವೆ ಒಂದು ತಡೆಗೋಡೆಯಿದೆ[1] ಮತ್ತು ಅದರ ಎತ್ತರದ ಸ್ಥಳಗಳಲ್ಲಿ ಕೆಲವು ಜನರಿದ್ದಾರೆ.[2] ಅವರು ಎಲ್ಲರನ್ನೂ (ಸ್ವರ್ಗವಾಸಿ ಮತ್ತು ನರಕವಾಸಿಗಳೆಲ್ಲರನ್ನೂ) ಅವರ ಚಿಹ್ನೆಗಳಿಂದ ಗುರುತಿಸುವರು. ಅವರು ಸ್ವರ್ಗವಾಸಿಗಳನ್ನು ಕರೆದು ಹೇಳುವರು: “ನಿಮ್ಮ ಮೇಲೆ ಶಾಂತಿಯಿರಲಿ.” ಅವರಿಗೆ ಸ್ವರ್ಗ ಪ್ರವೇಶ ಮಾಡುವ ಆಸೆಯಿದ್ದರೂ ಸಹ ಅವರು ಇನ್ನೂ ಅದನ್ನು ಪ್ರವೇಶಿಸಿಲ್ಲ.

    [1] ಸ್ವರ್ಗ ಮತ್ತು ನರಕಗಳ ನಡುವೆ ಅಥವಾ ಸತ್ಯವಿಶ್ವಾಸಿಗಳು ಮತ್ತು ಸತ್ಯನಿಷೇಧಿಗಳ ನಡುವೆ ಒಂದು ಅಡ್ಢಗೋಡೆಯನ್ನು ಸ್ಥಾಪಿಸಲಾಗುವುದು. [2] ಹೆಚ್ಚಿನ ವ್ಯಾಖ್ಯಾನಕಾರರ ಪ್ರಕಾರ ಇವರು ಸ್ವರ್ಗ ಅಥವಾ ನರಕಕ್ಕೆ ಹೋಗದೆ ಅತಂತ್ರ ಸ್ಥಿತಿಯಲ್ಲಿರುವವರು. ಇವರ ದುಷ್ಕರ್ಮಗಳು ಇವರನ್ನು ಸ್ವರ್ಗ ಪ್ರವೇಶದಿಂದ ಮತ್ತು ಇವರ ಸತ್ಕರ್ಮಗಳು ಇವರನ್ನು ನರಕ ಪ್ರವೇಶದಿಂದ ತಡೆಯುತ್ತಿವೆ. ಇವರ ಬಗ್ಗೆ ಅಲ್ಲಾಹು ಅಂತಿಮ ತೀರ್ಪು ನೀಡುವ ತನಕ ಇವರು ಇವೆರಡರ ನಡುವಿನಲ್ಲಿರುವರು.

    ೪೭

    ۞ وَإِذَا صُرِفَتۡ أَبۡصَٰرُهُمۡ تِلۡقَآءَ أَصۡحَٰبِ ٱلنَّارِ قَالُواْ رَبَّنَا لَا تَجۡعَلۡنَا مَعَ ٱلۡقَوۡمِ ٱلظَّٰلِمِينَ

    ಅವರ ದೃಷ್ಟಿಗಳನ್ನು ನರಕವಾಸಿಗಳ ಕಡೆಗೆ ತಿರುಗಿಸಲಾದಾಗ ಅವರು ಹೇಳುವರು: “ಓ ನಮ್ಮ ಪರಿಪಾಲಕನೇ! ನಮ್ಮನ್ನು ಅಕ್ರಮಿಗಳೊಡನೆ ಸೇರಿಸಬೇಡ.”

    ೪೮

    وَنَادَىٰٓ أَصۡحَٰبُ ٱلۡأَعۡرَافِ رِجَالٗا يَعۡرِفُونَهُم بِسِيمَىٰهُمۡ قَالُواْ مَآ أَغۡنَىٰ عَنكُمۡ جَمۡعُكُمۡ وَمَا كُنتُمۡ تَسۡتَكۡبِرُونَ

    ಎತ್ತರದ ಸ್ಥಳಗಳಲ್ಲಿರುವವರು ಚಿಹ್ನೆಗಳ ಮೂಲಕ ಗುರುತಿಸಿದ ಆ ಜನರನ್ನು (ನರಕವಾಸಿಗಳನ್ನು) ಕರೆದು ಹೇಳುವರು: “ನೀವು ಒಟ್ಟುಗೂಡಿಸಿದ (ಜನ ಮತ್ತು ಧನ) ಮತ್ತು ನೀವು ತೋರುತ್ತಿದ್ದ ಅಹಂಕಾರ ನಿಮಗೇನಾದರೂ ಉಪಕಾರ ಮಾಡಿದೆಯೇ?

    ೪೯

    أَهَٰٓؤُلَآءِ ٱلَّذِينَ أَقۡسَمۡتُمۡ لَا يَنَالُهُمُ ٱللَّهُ بِرَحۡمَةٍۚ ٱدۡخُلُواْ ٱلۡجَنَّةَ لَا خَوۡفٌ عَلَيۡكُمۡ وَلَآ أَنتُمۡ تَحۡزَنُونَ

    ಅಲ್ಲಾಹು ದಯೆ ತೋರಲಾರ ಎಂದು ನೀವು ಆಣೆ ಮಾಡಿ ಹೇಳುತ್ತಿದ್ದದ್ದು ಈ ಜನರ ಬಗ್ಗೆಯಲ್ಲವೇ? ನೀವು ಸ್ವರ್ಗವನ್ನು ಪ್ರವೇಶಿಸಿರಿ. ನಿಮಗೆ ಯಾವುದೇ ಭಯವಿಲ್ಲ; ನೀವು ದುಃಖಿಸುವುದೂ ಇಲ್ಲ (ಎಂದು ಅವರೊಡನೆ ಈಗ ಹೇಳಲಾಗಿದೆ).”

    ೫೦

    وَنَادَىٰٓ أَصۡحَٰبُ ٱلنَّارِ أَصۡحَٰبَ ٱلۡجَنَّةِ أَنۡ أَفِيضُواْ عَلَيۡنَا مِنَ ٱلۡمَآءِ أَوۡ مِمَّا رَزَقَكُمُ ٱللَّهُۚ قَالُوٓاْ إِنَّ ٱللَّهَ حَرَّمَهُمَا عَلَى ٱلۡكَٰفِرِينَ

    ನರಕವಾಸಿಗಳು ಸ್ವರ್ಗವಾಸಿಗಳನ್ನು ಕರೆದು ಹೇಳುವರು: “ನಮಗೆ ಸ್ವಲ್ಪ ನೀರು ಕೊಡಿ; ಅಥವಾ ಅಲ್ಲಾಹು ನಿಮಗೆ ನೀಡಿರುವ ಆಹಾರಗಳಲ್ಲಿ ಏನಾದರೂ ಕೊಡಿ.” ಅವರು (ಸ್ವರ್ಗವಾಸಿಗಳು) ಹೇಳುವರು: “ನಿಶ್ಚಯವಾಗಿಯೂ ಅಲ್ಲಾಹು ಅವೆರಡನ್ನೂ ಸತ್ಯನಿಷೇಧಿಗಳಿಗೆ ನಿಷೇಧಿಸಿದ್ದಾನೆ.

    ೫೧

    ٱلَّذِينَ ٱتَّخَذُواْ دِينَهُمۡ لَهۡوٗا وَلَعِبٗا وَغَرَّتۡهُمُ ٱلۡحَيَوٰةُ ٱلدُّنۡيَاۚ فَٱلۡيَوۡمَ نَنسَىٰهُمۡ كَمَا نَسُواْ لِقَآءَ يَوۡمِهِمۡ هَٰذَا وَمَا كَانُواْ بِـَٔايَٰتِنَا يَجۡحَدُونَ

    ಅವರು (ಸತ್ಯನಿಷೇಧಿಗಳು) ಯಾರೆಂದರೆ, ತಮ್ಮ ಧರ್ಮವನ್ನು ಆಟ ಮತ್ತು ಮನೋರಂಜನೆಯಾಗಿ ಸ್ವೀಕರಿಸಿದವರು ಹಾಗೂ ಇಹಲೋಕ ಜೀವನಕ್ಕೆ ಮರುಳಾದವರು.” ಅವರ ಈ ದಿನದ ಭೇಟಿಯನ್ನು ಅವರು ಮರೆತುಬಿಟ್ಟಂತೆ, ಮತ್ತು ಅವರು ನಮ್ಮ ವಚನಗಳನ್ನು ನಿಷೇಧಿಸಿದಂತೆ, ಇಂದು ನಾವು ಕೂಡ ಅವರನ್ನು ಮರೆತುಬಿಡುವೆವು.

    ೫೨

    وَلَقَدۡ جِئۡنَٰهُم بِكِتَٰبٖ فَصَّلۡنَٰهُ عَلَىٰ عِلۡمٍ هُدٗى وَرَحۡمَةٗ لِّقَوۡمٖ يُؤۡمِنُونَ

    ಜ್ಞಾನದ ಆಧಾರದಲ್ಲಿ ವಿವರಿಸಲಾದ ಒಂದು ಗ್ರಂಥವನ್ನು ನಾವು ಅವರಿಗೆ ನೀಡಿದ್ದೇವೆ. ಅದು ವಿಶ್ವಾಸವಿಡುವ ಜನರಿಗೆ ಮಾರ್ಗದರ್ಶಿ ಮತ್ತು ದಯೆಯಾಗಿದೆ.

    ೫೩

    هَلۡ يَنظُرُونَ إِلَّا تَأۡوِيلَهُۥۚ يَوۡمَ يَأۡتِي تَأۡوِيلُهُۥ يَقُولُ ٱلَّذِينَ نَسُوهُ مِن قَبۡلُ قَدۡ جَآءَتۡ رُسُلُ رَبِّنَا بِٱلۡحَقِّ فَهَل لَّنَا مِن شُفَعَآءَ فَيَشۡفَعُواْ لَنَآ أَوۡ نُرَدُّ فَنَعۡمَلَ غَيۡرَ ٱلَّذِي كُنَّا نَعۡمَلُۚ قَدۡ خَسِرُوٓاْ أَنفُسَهُمۡ وَضَلَّ عَنۡهُم مَّا كَانُواْ يَفۡتَرُونَ

    ಅವರು ಅದರ ಫಲಿತಾಂಶವನ್ನು ಕಾಯುತ್ತಿದ್ದಾರೆಯೇ?[1] ಅದರ ಫಲಿತಾಂಶವು ಬರುವ ದಿನದಂದು ಅದಕ್ಕೆ ಮುಂಚೆ ಅದನ್ನು ಮರೆತುಬಿಟ್ಟವರು ಹೇಳುವರು: “ನಿಶ್ಚಯವಾಗಿಯೂ ನಮ್ಮ ಪರಿಪಾಲಕನ (ಅಲ್ಲಾಹನ) ಸಂದೇಶವಾಹಕರುಗಳು ಸತ್ಯ ಸಹಿತ ಬಂದಿದ್ದರು. ನಮಗೆ ಶಿಫಾರಸು ಮಾಡುವ ಶಿಫಾರಸುಗಾರರು ಯಾರಾದರೂ ಇದ್ದಾರೆಯೇ? ಅಥವಾ ನಾವು ಈಗಾಗಲೇ ಮಾಡಿದ ಕರ್ಮಗಳಲ್ಲದ ಬೇರೆ ಕರ್ಮಗಳನ್ನು ಮಾಡಲು ನಮ್ಮನ್ನು ಪುನಃ ಇಹಲೋಕಕ್ಕೆ ಕಳುಹಿಸಲಾಗುವುದೇ?” ಅವರು ಸ್ವಯಂ ನಷ್ಟಹೊಂದಿದವರು. ಅವರು ಕಲ್ಪಿಸಿ ಹೇಳುತ್ತಿದ್ದ ವಿಷಯಗಳೆಲ್ಲವೂ ಅವರಿಂದ ಕಣ್ಮರೆಯಾಗಿ ಬಿಡುವುವು.

    [1] ಅಂದರೆ ಪವಿತ್ರ ಕುರ್‌ಆನಿನಲ್ಲಿ ನೀಡಲಾದ ಎಚ್ಚರಿಕೆಗಳು ಸತ್ಯವಾಗಿ ಪರಿಣಮಿಸುವುದನ್ನು ಅವರು ಕಾಯುತ್ತಿದ್ದಾರೆಯೇ?

    ೫೪

    إِنَّ رَبَّكُمُ ٱللَّهُ ٱلَّذِي خَلَقَ ٱلسَّمَٰوَٰتِ وَٱلۡأَرۡضَ فِي سِتَّةِ أَيَّامٖ ثُمَّ ٱسۡتَوَىٰ عَلَى ٱلۡعَرۡشِۖ يُغۡشِي ٱلَّيۡلَ ٱلنَّهَارَ يَطۡلُبُهُۥ حَثِيثٗا وَٱلشَّمۡسَ وَٱلۡقَمَرَ وَٱلنُّجُومَ مُسَخَّرَٰتِۭ بِأَمۡرِهِۦٓۗ أَلَا لَهُ ٱلۡخَلۡقُ وَٱلۡأَمۡرُۗ تَبَارَكَ ٱللَّهُ رَبُّ ٱلۡعَٰلَمِينَ

    ನಿಶ್ಚಯವಾಗಿಯೂ ಭೂಮ್ಯಾಕಾಶಗಳನ್ನು ಆರು ದಿನಗಳಲ್ಲಿ ಸೃಷ್ಟಿಸಿದ ಅಲ್ಲಾಹನೇ ನಿಮ್ಮ ಪರಿಪಾಲಕನು. ನಂತರ ಅವನು ಸಿಂಹಾಸನದಲ್ಲಿ ಆರೂಢನಾದನು. ಅವನು ಹಗಲನ್ನು ರಾತ್ರಿಯಿಂದ ಮುಚ್ಚುತ್ತಾನೆ. ಆಗ ಅದು ಕ್ಷಿಪ್ರಗತಿಯಲ್ಲಿ ಹಗಲನ್ನು ಹುಡುಕುತ್ತಾ ಸಾಗುತ್ತದೆ. ಸೂರ್ಯ, ಚಂದ್ರ ಮತ್ತು ನಕ್ಷತ್ರಗಳೆಲ್ಲವೂ ಅವನ ಆಜ್ಞೆಗೆ ವಿಧೇಯವಾಗಿವೆ. ತಿಳಿಯಿರಿ! ಸೃಷ್ಟಿ ಮತ್ತು ಆಜ್ಞೆಯು ಅವನದ್ದು. ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹು ಸಮೃದ್ಧಪೂರ್ಣನಾಗಿದ್ದಾನೆ.

    ೫೫

    ٱدۡعُواْ رَبَّكُمۡ تَضَرُّعٗا وَخُفۡيَةًۚ إِنَّهُۥ لَا يُحِبُّ ٱلۡمُعۡتَدِينَ

    ವಿನಯದಿಂದ ಮತ್ತು ರಹಸ್ಯವಾಗಿ ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸಿರಿ. ನಿಶ್ಚಯವಾಗಿಯೂ ಅವನು ಎಲ್ಲೆ ಮೀರುವವರನ್ನು ಇಷ್ಟಪಡುವುದಿಲ್ಲ.

    ೫೬

    وَلَا تُفۡسِدُواْ فِي ٱلۡأَرۡضِ بَعۡدَ إِصۡلَٰحِهَا وَٱدۡعُوهُ خَوۡفٗا وَطَمَعًاۚ إِنَّ رَحۡمَتَ ٱللَّهِ قَرِيبٞ مِّنَ ٱلۡمُحۡسِنِينَ

    ಭೂಮಿಯಲ್ಲಿ ಸುಧಾರಣೆ ಮಾಡಿದ ಬಳಿಕ ಅಲ್ಲಿ ಕಿಡಿಗೇಡಿತನ ಮಾಡಬೇಡಿ. ಭಯ ಮತ್ತು ನಿರೀಕ್ಷೆಯಿಂದ ಅವನನ್ನು ಕರೆದು ಪ್ರಾರ್ಥಿಸಿರಿ. ನಿಶ್ಚಯವಾಗಿಯೂ ಅಲ್ಲಾಹನ ದಯೆ ಒಳಿತು ಮಾಡುವವರ ಸಮೀಪದಲ್ಲಿದೆ.

    ೫೭

    وَهُوَ ٱلَّذِي يُرۡسِلُ ٱلرِّيَٰحَ بُشۡرَۢا بَيۡنَ يَدَيۡ رَحۡمَتِهِۦۖ حَتَّىٰٓ إِذَآ أَقَلَّتۡ سَحَابٗا ثِقَالٗا سُقۡنَٰهُ لِبَلَدٖ مَّيِّتٖ فَأَنزَلۡنَا بِهِ ٱلۡمَآءَ فَأَخۡرَجۡنَا بِهِۦ مِن كُلِّ ٱلثَّمَرَٰتِۚ كَذَٰلِكَ نُخۡرِجُ ٱلۡمَوۡتَىٰ لَعَلَّكُمۡ تَذَكَّرُونَ

    ತನ್ನ ದಯೆಗೆ (ಮಳೆಗೆ) ಮೊದಲು ಸುವಾರ್ತೆಯಾಗಿ ಗಾಳಿಯನ್ನು ಕಳುಹಿಸುವವನು ಅವನೇ. ಎಲ್ಲಿಯವರೆಗೆಂದರೆ, ಅದು ಭಾರವಾದ ಮೋಡಗಳನ್ನು ಹೊತ್ತಾಗ ನಾವು ಅದನ್ನು ಬರಡು ಪ್ರದೇಶಕ್ಕೆ ಸಾಗಿಸುವೆವು. ನಂತರ ನಾವು ಅಲ್ಲಿ ಮಳೆ ಸುರಿಸುವೆವು ಮತ್ತು ಅದರಿಂದ ವಿಭಿನ್ನ ಹಣ್ಣುಗಳನ್ನು ಉತ್ಪಾದಿಸುವೆವು. ಇದೇ ರೀತಿ ನಾವು ಸತ್ತವರನ್ನು (ಸಮಾಧಿಯಿಂದ) ಹೊರತರುವೆವು. ನೀವು ಉಪದೇಶ ಪಡೆಯುವುದಕ್ಕಾಗಿ (ಇದನ್ನು ವಿವರಿಸುತ್ತಿದ್ದೇವೆ).

    ೫೮

    وَٱلۡبَلَدُ ٱلطَّيِّبُ يَخۡرُجُ نَبَاتُهُۥ بِإِذۡنِ رَبِّهِۦۖ وَٱلَّذِي خَبُثَ لَا يَخۡرُجُ إِلَّا نَكِدٗاۚ كَذَٰلِكَ نُصَرِّفُ ٱلۡأٓيَٰتِ لِقَوۡمٖ يَشۡكُرُونَ

    ಉತ್ತಮ ಭೂಮಿಯಲ್ಲಿ ಅದರ ಪರಿಪಾಲಕನ (ಅಲ್ಲಾಹನ) ಅಪ್ಪಣೆಯಂತೆ ಉತ್ತಮ ಬೆಳೆಗಳು ಬೆಳೆಯುತ್ತವೆ. ಆದರೆ ಕೆಟ್ಟ ಭೂಮಿಯಲ್ಲಿ ಸಸ್ಯಗಳು ಶುಷ್ಕವಾಗಿಯಲ್ಲದೆ ಬೆಳೆಯುವುದಿಲ್ಲ. ಕೃತಜ್ಞರಾದ ಜನರಿಗೆ ಈ ರೀತಿ ನಾವು ದೃಷ್ಟಾಂತಗಳನ್ನು ವಿವರಿಸಿಕೊಡುತ್ತೇವೆ.

    ೫೯

    لَقَدۡ أَرۡسَلۡنَا نُوحًا إِلَىٰ قَوۡمِهِۦ فَقَالَ يَٰقَوۡمِ ٱعۡبُدُواْ ٱللَّهَ مَا لَكُم مِّنۡ إِلَٰهٍ غَيۡرُهُۥٓ إِنِّيٓ أَخَافُ عَلَيۡكُمۡ عَذَابَ يَوۡمٍ عَظِيمٖ

    ನಿಶ್ಚಯವಾಗಿಯೂ ನಾವು ನೂಹರನ್ನು ಅವರ ಜನರ ಬಳಿಗೆ ಕಳುಹಿಸಿದೆವು. ಅವರು ಹೇಳಿದರು: “ಓ ನನ್ನ ಜನರೇ! ಅಲ್ಲಾಹನನ್ನು ಆರಾಧಿಸಿರಿ. ಅವನ ಹೊರತು ನಿಮಗೆ ಬೇರೆ ದೇವರಿಲ್ಲ. ಭಯಾನಕ ದಿನದ ಶಿಕ್ಷೆಯು (ನಿಮ್ಮ ಮೇಲೆರಗಬಹುದೆಂದು) ನಿಶ್ಚಯವಾಗಿಯೂ ನಾನು ಭಯಪಡುತ್ತೇನೆ.”

    ೬೦

    قَالَ ٱلۡمَلَأُ مِن قَوۡمِهِۦٓ إِنَّا لَنَرَىٰكَ فِي ضَلَٰلٖ مُّبِينٖ

    ಅವರ ಜನರ ಮುಖಂಡರು ಹೇಳಿದರು: “ನಿಶ್ಚಯವಾಗಿಯೂ ನೀನು ಸ್ಪಷ್ಟ ದುರ್ಮಾರ್ಗದಲ್ಲಿದ್ದೀ ಎಂದು ನಮಗೆ ತೋರುತ್ತಿದೆ.”

    ೬೧

    قَالَ يَٰقَوۡمِ لَيۡسَ بِي ضَلَٰلَةٞ وَلَٰكِنِّي رَسُولٞ مِّن رَّبِّ ٱلۡعَٰلَمِينَ

    ನೂಹ್ ಹೇಳಿದರು: “ಓ ನನ್ನ ಜನರೇ! ನಾನು ಯಾವುದೇ ದುರ್ಮಾರ್ಗದಲ್ಲಿಲ್ಲ. ಬದಲಿಗೆ, ನಾನು ಸರ್ವಲೋಕಗಳ ಪರಿಪಾಲಕನ (ಅಲ್ಲಾಹನ) ಸಂದೇಶವಾಹಕನಾಗಿದ್ದೇನೆ.

    ೬೨

    أُبَلِّغُكُمۡ رِسَٰلَٰتِ رَبِّي وَأَنصَحُ لَكُمۡ وَأَعۡلَمُ مِنَ ٱللَّهِ مَا لَا تَعۡلَمُونَ

    ನನ್ನ ಪರಿಪಾಲಕನ (ಅಲ್ಲಾಹನ) ಸಂದೇಶಗಳನ್ನು ನಾನು ನಿಮಗೆ ತಲುಪಿಸುತ್ತೇನೆ ಮತ್ತು ನಿಮ್ಮ ಪ್ರಾಮಾಣಿಕ ಹಿತೈಷಿಯಾಗಿದ್ದೇನೆ. ನೀವು ತಿಳಿದಿರದ ವಿಷಯಗಳನ್ನು ನಾನು ಅಲ್ಲಾಹನಿಂದ ತಿಳಿಯುತ್ತೇನೆ.

    ೬೩

    أَوَعَجِبۡتُمۡ أَن جَآءَكُمۡ ذِكۡرٞ مِّن رَّبِّكُمۡ عَلَىٰ رَجُلٖ مِّنكُمۡ لِيُنذِرَكُمۡ وَلِتَتَّقُواْ وَلَعَلَّكُمۡ تُرۡحَمُونَ

    ನಿಮಗೆ ಎಚ್ಚರಿಕೆ ನೀಡಲು, ನೀವು ದೇವಭಯದಿಂದ ಜೀವಿಸುವಂತಾಗಲು ಮತ್ತು ನಿಮಗೆ ದಯೆ ತೋರುವಂತಾಗಲು ನಿಮ್ಮಲ್ಲೇ ಇರುವ ಒಬ್ಬ ವ್ಯಕ್ತಿಯ ಮೂಲಕ ನಿಮ್ಮ ಪರಿಪಾಲಕನ (ಅಲ್ಲಾಹನ) ಉಪದೇಶವು ನಿಮ್ಮ ಬಳಿಗೆ ಬಂದಿರುವುದನ್ನು ಕಂಡು ನೀವು ಆಶ್ಚರ್ಯಪಡುತ್ತಿದ್ದೀರಾ?”

    ೬೪

    فَكَذَّبُوهُ فَأَنجَيۡنَٰهُ وَٱلَّذِينَ مَعَهُۥ فِي ٱلۡفُلۡكِ وَأَغۡرَقۡنَا ٱلَّذِينَ كَذَّبُواْ بِـَٔايَٰتِنَآۚ إِنَّهُمۡ كَانُواْ قَوۡمًا عَمِينَ

    ಆದರೆ ಅವರು ನೂಹರನ್ನು ನಿಷೇಧಿಸಿದರು. ಆಗ ನಾವು ಅವರನ್ನು ಮತ್ತು ಅವನ ಅನುಯಾಯಿಗಳನ್ನು ನಾವೆಯಲ್ಲಿ ರಕ್ಷಿಸಿದೆವು. ನಮ್ಮ ವಚನಗಳನ್ನು ನಿಷೇಧಿಸಿದವರನ್ನು ಮುಳುಗಿಸಿದೆವು. ನಿಶ್ಚಯವಾಗಿಯೂ ಅವರು ಕಣ್ಣು ಕಾಣದ ಜನರಾಗಿದ್ದರು.[1]

    [1] ಅಂದರೆ ಅವರು ಸತ್ಯದ ಬಗ್ಗೆ ಕುರುಡರಾಗಿದ್ದರು.

    ೬೫

    ۞ وَإِلَىٰ عَادٍ أَخَاهُمۡ هُودٗاۚ قَالَ يَٰقَوۡمِ ٱعۡبُدُواْ ٱللَّهَ مَا لَكُم مِّنۡ إِلَٰهٍ غَيۡرُهُۥٓۚ أَفَلَا تَتَّقُونَ

    ಆದ್ ಗೋತ್ರದವರ ಬಳಿಗೆ ನಾವು ಅವರ ಸಹೋದರ ಹೂದರನ್ನು ಕಳುಹಿಸಿದೆವು. ಅವರು ಹೇಳಿದರು: “ಓ ನನ್ನ ಜನರೇ! ಅಲ್ಲಾಹನನ್ನು ಆರಾಧಿಸಿರಿ. ಅವನ ಹೊರತು ನಿಮಗೆ ಬೇರೆ ದೇವರಿಲ್ಲ. ನೀವು ಅವನನ್ನು ಭಯಪಡುವುದಿಲ್ಲವೇ?”

    ೬೬

    قَالَ ٱلۡمَلَأُ ٱلَّذِينَ كَفَرُواْ مِن قَوۡمِهِۦٓ إِنَّا لَنَرَىٰكَ فِي سَفَاهَةٖ وَإِنَّا لَنَظُنُّكَ مِنَ ٱلۡكَٰذِبِينَ

    ಅವರ ಜನರಲ್ಲಿದ್ದ ಸತ್ಯನಿಷೇಧಿ ಮುಖಂಡರು ಹೇಳಿದರು: “ನಿಶ್ಚಯವಾಗಿಯೂ ನಿನ್ನಲ್ಲಿ ಅವಿವೇಕತನವಿದೆಯೆಂದು ನಮಗೆ ತೋರುತ್ತಿದೆ. ನಿಶ್ಚಯವಾಗಿಯೂ ನೀನು ಸುಳ್ಳು ಹೇಳುತ್ತಿದ್ದೀ ಎಂದು ನಾವು ಭಾವಿಸುತ್ತಿದ್ದೇವೆ.”

    ೬೭

    قَالَ يَٰقَوۡمِ لَيۡسَ بِي سَفَاهَةٞ وَلَٰكِنِّي رَسُولٞ مِّن رَّبِّ ٱلۡعَٰلَمِينَ

    ಹೂದ್ ಹೇಳಿದರು: “ಓ ನನ್ನ ಜನರೇ! ನನ್ನಲ್ಲಿ ಅವಿವೇಕತನವಿಲ್ಲ. ಬದಲಿಗೆ, ನಾನು ಸರ್ವಲೋಕಗಳ ಪರಿಪಾಲಕನ (ಅಲ್ಲಾಹನ) ಸಂದೇಶವಾಹಕನಾಗಿದ್ದೇನೆ.

    ೬೮

    أُبَلِّغُكُمۡ رِسَٰلَٰتِ رَبِّي وَأَنَا۠ لَكُمۡ نَاصِحٌ أَمِينٌ

    ನನ್ನ ಪರಿಪಾಲಕನ (ಅಲ್ಲಾಹನ) ಸಂದೇಶಗಳನ್ನು ನಾನು ನಿಮಗೆ ತಲುಪಿಸುತ್ತೇನೆ. ನಿಶ್ಚಯವಾಗಿಯೂ ನಾನು ನಿಮ್ಮ ಪ್ರಾಮಾಣಿಕ ಹಿತೈಷಿಯಾಗಿದ್ದೇನೆ.

    ೬೯

    أَوَعَجِبۡتُمۡ أَن جَآءَكُمۡ ذِكۡرٞ مِّن رَّبِّكُمۡ عَلَىٰ رَجُلٖ مِّنكُمۡ لِيُنذِرَكُمۡۚ وَٱذۡكُرُوٓاْ إِذۡ جَعَلَكُمۡ خُلَفَآءَ مِنۢ بَعۡدِ قَوۡمِ نُوحٖ وَزَادَكُمۡ فِي ٱلۡخَلۡقِ بَصۜۡطَةٗۖ فَٱذۡكُرُوٓاْ ءَالَآءَ ٱللَّهِ لَعَلَّكُمۡ تُفۡلِحُونَ

    ನಿಮಗೆ ಎಚ್ಚರಿಕೆ ನೀಡಲು ನಿಮ್ಮಲ್ಲೇ ಇರುವ ಒಬ್ಬ ವ್ಯಕ್ತಿಯ ಮೂಲಕ ನಿಮ್ಮ ಪರಿಪಾಲಕನ (ಅಲ್ಲಾಹನ) ಉಪದೇಶವು ನಿಮ್ಮ ಬಳಿಗೆ ಬಂದಿರುವುದನ್ನು ಕಂಡು ನೀವು ಆಶ್ಚರ್ಯಪಡುತ್ತಿದ್ದೀರಾ? ನೂಹರ ಜನರ ಬಳಿಕ ಅಲ್ಲಾಹು ನಿಮ್ಮನ್ನು ಅವರ ಉತ್ತರಾಧಿಕಾರಿಗಳನ್ನಾಗಿ ಮಾಡಿದ್ದನ್ನು ಸ್ಮರಿಸಿರಿ. ಅವನು ನಿಮಗೆ ದೇಹದಾರ್ಢ್ಯತೆಯನ್ನು ಹೆಚ್ಚಿಸಿಕೊಟ್ಟನು. ಅಲ್ಲಾಹನ ಅನುಗ್ರಹಗಳನ್ನು ಸ್ಮರಿಸಿರಿ. ನೀವು ಯಶಸ್ವಿಯಾಗುವುದಕ್ಕಾಗಿ.”

    ೭೦

    قَالُوٓاْ أَجِئۡتَنَا لِنَعۡبُدَ ٱللَّهَ وَحۡدَهُۥ وَنَذَرَ مَا كَانَ يَعۡبُدُ ءَابَآؤُنَا فَأۡتِنَا بِمَا تَعِدُنَآ إِن كُنتَ مِنَ ٱلصَّٰدِقِينَ

    ಅವರು ಹೇಳಿದರು: “ನಾವು ಅಲ್ಲಾಹನನ್ನು ಮಾತ್ರ ಆರಾಧಿಸಬೇಕು ಮತ್ತು ನಮ್ಮ ಪೂರ್ವಜರು ಆರಾಧಿಸುತ್ತಿದ್ದ ದೇವರುಗಳನ್ನು ಬಿಟ್ಟುಬಿಡಬೇಕು ಎಂದು ಹೇಳಲು ನೀನು ನಮ್ಮ ಬಳಿಗೆ ಬಂದಿರುವೆಯಾ? ನೀನು ನಮಗೆ ಹೆದರಿಸುತ್ತಿರುವ ಆ ಶಿಕ್ಷೆಯನ್ನು ತಂದು ತೋರಿಸು. ನೀನು ಸತ್ಯವನ್ನೇ ಹೇಳುತ್ತಿದ್ದರೆ.”

    ೭೧

    قَالَ قَدۡ وَقَعَ عَلَيۡكُم مِّن رَّبِّكُمۡ رِجۡسٞ وَغَضَبٌۖ أَتُجَٰدِلُونَنِي فِيٓ أَسۡمَآءٖ سَمَّيۡتُمُوهَآ أَنتُمۡ وَءَابَآؤُكُم مَّا نَزَّلَ ٱللَّهُ بِهَا مِن سُلۡطَٰنٖۚ فَٱنتَظِرُوٓاْ إِنِّي مَعَكُم مِّنَ ٱلۡمُنتَظِرِينَ

    ಹೂದ್ ಹೇಳಿದರು: “ನಿಮ್ಮ ಪರಿಪಾಲಕನ (ಅಲ್ಲಾಹನ) ಶಿಕ್ಷೆ ಮತ್ತು ಕೋಪ ಈಗಾಗಲೇ ನಿಮ್ಮ ಮೇಲೆರಗಿದೆ. ನೀವು ಮತ್ತು ನಿಮ್ಮ ಪೂರ್ವಜರು ಹೆಸರಿಟ್ಟ ಕೆಲವು ದೇವರುಗಳ ಹೆಸರುಗಳನ್ನು ಹೇಳಿ ನೀವು ನನ್ನೊಂದಿಗೆ ತರ್ಕಿಸುತ್ತೀರಾ? ಅಲ್ಲಾಹು ಅದಕ್ಕೆ (ಅವರು ದೇವರುಗಳು ಎಂಬುದಕ್ಕೆ) ಯಾವುದೇ ಸಾಕ್ಷ್ಯಾಧಾರಗಳನ್ನು ಇಳಿಸಿಲ್ಲ. ನೀವು ಕಾಯಿರಿ. ನಿಶ್ಚಯವಾಗಿಯೂ ನಾನೂ ನಿಮ್ಮೊಂದಿಗೆ ಕಾಯುತ್ತೇನೆ.”

    ೭೨

    فَأَنجَيۡنَٰهُ وَٱلَّذِينَ مَعَهُۥ بِرَحۡمَةٖ مِّنَّا وَقَطَعۡنَا دَابِرَ ٱلَّذِينَ كَذَّبُواْ بِـَٔايَٰتِنَاۖ وَمَا كَانُواْ مُؤۡمِنِينَ

    ನಂತರ ನಾವು ಹೂದರನ್ನು ಮತ್ತು ಅವರ ಅನುಯಾಯಿಗಳನ್ನು ನಮ್ಮ ದಯೆಯಿಂದ ರಕ್ಷಿಸಿದೆವು. ನಮ್ಮ ವಚನಗಳನ್ನು ನಿಷೇಧಿಸಿದವರನ್ನು ಮತ್ತು ವಿಶ್ವಾಸವಿಡದವರನ್ನು ನಾವು ನಿರ್ನಾಮ ಮಾಡಿದೆವು.

    ೭೩

    وَإِلَىٰ ثَمُودَ أَخَاهُمۡ صَٰلِحٗاۚ قَالَ يَٰقَوۡمِ ٱعۡبُدُواْ ٱللَّهَ مَا لَكُم مِّنۡ إِلَٰهٍ غَيۡرُهُۥۖ قَدۡ جَآءَتۡكُم بَيِّنَةٞ مِّن رَّبِّكُمۡۖ هَٰذِهِۦ نَاقَةُ ٱللَّهِ لَكُمۡ ءَايَةٗۖ فَذَرُوهَا تَأۡكُلۡ فِيٓ أَرۡضِ ٱللَّهِۖ وَلَا تَمَسُّوهَا بِسُوٓءٖ فَيَأۡخُذَكُمۡ عَذَابٌ أَلِيمٞ

    ಸಮೂದ್ ಗೋತ್ರದವರ ಬಳಿಗೆ ನಾವು ಅವರ ಸಹೋದರ ಸ್ವಾಲಿಹರನ್ನು ಕಳುಹಿಸಿದೆವು. ಅವರು ಹೇಳಿದರು: “ಓ ನನ್ನ ಜನರೇ! ಅಲ್ಲಾಹನನ್ನು ಆರಾಧಿಸಿರಿ. ಅವನ ಹೊರತು ನಿಮಗೆ ಬೇರೆ ದೇವರಿಲ್ಲ. ನಿಮಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಸ್ಪಷ್ಟ ಸಾಕ್ಷ್ಯಾಧಾರಗಳು ಬಂದಿವೆ. ಇದು ಅಲ್ಲಾಹನ ಒಂಟೆ. ಇದು ನಿಮಗೆ ದೃಷ್ಟಾಂತವಾಗಿದೆ. ಅದನ್ನು ಅದರ ಪಾಡಿಗೆ ಬಿಟ್ಟುಬಿಡಿ. ಅದು ಅಲ್ಲಾಹನ ಭೂಮಿಯಲ್ಲಿ ಮೇಯುತ್ತಿರಲಿ. ಅದಕ್ಕೆ ಯಾವುದೇ ತೊಂದರೆ ಕೊಡಬೇಡಿ. ಹಾಗೇನಾದರೂ ಆದರೆ ಯಾತನಾಮಯ ಶಿಕ್ಷೆಯು ನಿಮ್ಮನ್ನು ಹಿಡಿಯುವುದು.

    ೭೪

    وَٱذۡكُرُوٓاْ إِذۡ جَعَلَكُمۡ خُلَفَآءَ مِنۢ بَعۡدِ عَادٖ وَبَوَّأَكُمۡ فِي ٱلۡأَرۡضِ تَتَّخِذُونَ مِن سُهُولِهَا قُصُورٗا وَتَنۡحِتُونَ ٱلۡجِبَالَ بُيُوتٗاۖ فَٱذۡكُرُوٓاْ ءَالَآءَ ٱللَّهِ وَلَا تَعۡثَوۡاْ فِي ٱلۡأَرۡضِ مُفۡسِدِينَ

    ಆದ್ ಗೋತ್ರದವರ ಬಳಿಕ ಅವನು ನಿಮ್ಮನ್ನು ಉತ್ತರಾಧಿಕಾರಿಗಳನ್ನಾಗಿ ಮಾಡಿದ್ದನ್ನು ಸ್ಮರಿಸಿರಿ. ಅವನು ನಿಮಗೆ ಭೂಮಿಯಲ್ಲಿ ವಾಸ್ತವ್ಯವನ್ನು ಮಾಡಿಕೊಟ್ಟನು. ನೀವು ಭೂಮಿಯ ಸಮತಟ್ಟು ಪ್ರದೇಶಗಳಲ್ಲಿ ಸೌಧಗಳನ್ನು ನಿರ್ಮಿಸುತ್ತೀರಿ ಮತ್ತು ಬೆಟ್ಟಗಳಲ್ಲಿ ಮನೆಗಳನ್ನು ಕೊರೆಯುತ್ತೀರಿ. ಅಲ್ಲಾಹನ ಅನುಗ್ರಹಗಳನ್ನು ಸ್ಮರಿಸಿರಿ. ಭೂಮಿಯಲ್ಲಿ ಕಿಡಿಗೇಡಿತನ ಮಾಡುತ್ತಾ ಅಲ್ಲಾಹನ ಆಜ್ಞೋಲ್ಲಂಘನೆ ಮಾಡಬೇಡಿ.”

    ೭೫

    قَالَ ٱلۡمَلَأُ ٱلَّذِينَ ٱسۡتَكۡبَرُواْ مِن قَوۡمِهِۦ لِلَّذِينَ ٱسۡتُضۡعِفُواْ لِمَنۡ ءَامَنَ مِنۡهُمۡ أَتَعۡلَمُونَ أَنَّ صَٰلِحٗا مُّرۡسَلٞ مِّن رَّبِّهِۦۚ قَالُوٓاْ إِنَّا بِمَآ أُرۡسِلَ بِهِۦ مُؤۡمِنُونَ

    ಅವರ ಜನರಲ್ಲಿದ್ದ ಅಹಂಕಾರಿಗಳಾದ ಮುಖಂಡರು ಸ್ವಾಲಿಹರಲ್ಲಿ ವಿಶ್ವಾಸವಿಟ್ಟ ಬಲಹೀನರೊಡನೆ ಹೇಳಿದರು: “ಸ್ವಾಲಿಹರನ್ನು ಅವರ ಪರಿಪಾಲಕನ (ಅಲ್ಲಾಹನ) ಬಳಿಯಿಂದ ಕಳುಹಿಸಲಾಗಿದೆಯೆಂದು ನೀವು ನಿಜವಾಗಿಯೂ ನಂಬುತ್ತೀರಾ?” ಅವರು ಉತ್ತರಿಸಿದರು: “ಅವರೊಡನೆ ಏನು ಕಳುಹಿಸಲಾಗಿದೆಯೋ ಅದರಲ್ಲಿ ನಿಶ್ಚಯವಾಗಿಯೂ ನಾವು ವಿಶ್ವಾಸವಿಟ್ಟಿದ್ದೇವೆ.”

    ೭೬

    قَالَ ٱلَّذِينَ ٱسۡتَكۡبَرُوٓاْ إِنَّا بِٱلَّذِيٓ ءَامَنتُم بِهِۦ كَٰفِرُونَ

    ಅಹಂಕಾರಿಗಳು ಹೇಳಿದರು: “ನೀವು ಯಾವುದರಲ್ಲಿ ವಿಶ್ವಾಸವಿಟ್ಟಿದ್ದೀರೋ ಅದನ್ನು ನಾವು ಸಂಪೂರ್ಣವಾಗಿ ನಿಷೇಧಿಸಿದ್ದೇವೆ.”

    ೭೭

    فَعَقَرُواْ ٱلنَّاقَةَ وَعَتَوۡاْ عَنۡ أَمۡرِ رَبِّهِمۡ وَقَالُواْ يَٰصَٰلِحُ ٱئۡتِنَا بِمَا تَعِدُنَآ إِن كُنتَ مِنَ ٱلۡمُرۡسَلِينَ

    ನಂತರ ಅವರು ಆ ಒಂಟೆಯನ್ನು ಕೊಂದು ಅವರ ಪರಿಪಾಲಕನ (ಅಲ್ಲಾಹನ) ಆಜ್ಞೆಯನ್ನು ಉಲ್ಲಂಘಿಸಿದರು. ಅವರು ಹೇಳಿದರು: “ಓ ಸ್ವಾಲಿಹ್! ನೀನು ನಮ್ಮನ್ನು ಹೆದರಿಸುತ್ತಿದ್ದ ಆ ಶಿಕ್ಷೆಯನ್ನು ತಂದು ತೋರಿಸು. ನೀನು (ನಿಜವಾಗಿಯೂ) ಸಂದೇಶವಾಹಕನಾಗಿದ್ದರೆ.”

    ೭೮

    فَأَخَذَتۡهُمُ ٱلرَّجۡفَةُ فَأَصۡبَحُواْ فِي دَارِهِمۡ جَٰثِمِينَ

    ಆಗ ಭೂಕಂಪವು ಅವರನ್ನು ಹಿಡಿದುಕೊಂಡಿತು. ಅವರು ಅವರ ಮನೆಗಳಲ್ಲಿಯೇ ಬೋರಲು ಬಿದ್ದು ಸತ್ತರು.

    ೭೯

    فَتَوَلَّىٰ عَنۡهُمۡ وَقَالَ يَٰقَوۡمِ لَقَدۡ أَبۡلَغۡتُكُمۡ رِسَالَةَ رَبِّي وَنَصَحۡتُ لَكُمۡ وَلَٰكِن لَّا تُحِبُّونَ ٱلنَّٰصِحِينَ

    ಅವರಿಂದ ತಿರುಗಿ ನಡೆಯುತ್ತಾ ಸ್ವಾಲಿಹ್ ಹೇಳಿದರು: “ಓ ನನ್ನ ಜನರೇ! ನಿಶ್ಚಯವಾಗಿಯೂ ನಾನು ನನ್ನ ಪರಿಪಾಲಕನ (ಅಲ್ಲಾಹನ) ಸಂದೇಶವನ್ನು ನಿಮಗೆ ತಲುಪಿಸಿದ್ದೇನೆ ಮತ್ತು ನಿಮಗೆ ಪ್ರಾಮಾಣಿಕವಾಗಿ ಉಪದೇಶ ಮಾಡಿದ್ದೇನೆ. ಆದರೆ ನೀವು ಉಪದೇಶ ಮಾಡುವವರನ್ನು ಇಷ್ಟಪಡುತ್ತಿರಲಿಲ್ಲ.”

    ೮೦

    وَلُوطًا إِذۡ قَالَ لِقَوۡمِهِۦٓ أَتَأۡتُونَ ٱلۡفَٰحِشَةَ مَا سَبَقَكُم بِهَا مِنۡ أَحَدٖ مِّنَ ٱلۡعَٰلَمِينَ

    ಲೂತರನ್ನು ಕೂಡ (ನಾವು ಕಳುಹಿಸಿದೆವು). ಅವರು ತಮ್ಮ ಜನರೊಡನೆ ಹೇಳಿದ ಸಂದರ್ಭ: “ಸರ್ವಲೋಕಗಳ ಜನರಲ್ಲಿ ಈ ತನಕ ಯಾರೂ ಮಾಡದ ನೀಚಕೃತ್ಯವನ್ನು ನೀವು ಮಾಡುತ್ತಿದ್ದೀರಾ?

    ೮೧

    إِنَّكُمۡ لَتَأۡتُونَ ٱلرِّجَالَ شَهۡوَةٗ مِّن دُونِ ٱلنِّسَآءِۚ بَلۡ أَنتُمۡ قَوۡمٞ مُّسۡرِفُونَ

    ನೀವು ಲೈಂಗಿಕ ತೃಷೆಯನ್ನು ತೀರಿಸಲು ಮಹಿಳೆಯರ ಬದಲು ಪುರುಷರ ಬಳಿಗೆ ಹೋಗುತ್ತಿದ್ದೀರಿ. ನೀವು ಎಲ್ಲೆ ಮೀರಿದ ಜನರಾಗಿದ್ದೀರಿ.”

    ೮೨

    وَمَا كَانَ جَوَابَ قَوۡمِهِۦٓ إِلَّآ أَن قَالُوٓاْ أَخۡرِجُوهُم مِّن قَرۡيَتِكُمۡۖ إِنَّهُمۡ أُنَاسٞ يَتَطَهَّرُونَ

    ಆಗ ಅವರ ಜನರ ಉತ್ತರವು, “ಇವರನ್ನು ನಿಮ್ಮ ಊರಿನಿಂದ ಓಡಿಸಿರಿ; ಇವರು ಪರಿಶುದ್ಧ ಜನರಾಗಿದ್ದಾರೆ!” ಎಂದು ಹೇಳುವುದಲ್ಲದೆ ಬೇರೇನೂ ಆಗಿರಲಿಲ್ಲ.

    ೮೩

    فَأَنجَيۡنَٰهُ وَأَهۡلَهُۥٓ إِلَّا ٱمۡرَأَتَهُۥ كَانَتۡ مِنَ ٱلۡغَٰبِرِينَ

    ನಂತರ ನಾವು ಅವರನ್ನು ಮತ್ತು ಅವರ ಕುಟುಂಬವನ್ನು ರಕ್ಷಿಸಿದೆವು. ಅವರ ಪತ್ನಿಯ ಹೊರತು. ಆಕೆ ಶಿಕ್ಷೆಗೆ ಗುರಿಯಾದವರಲ್ಲಿ ಸೇರಿದವಳಾದಳು.

    ೮೪

    وَأَمۡطَرۡنَا عَلَيۡهِم مَّطَرٗاۖ فَٱنظُرۡ كَيۡفَ كَانَ عَٰقِبَةُ ٱلۡمُجۡرِمِينَ

    ನಾವು ಅವರ ಮೇಲೆ (ಕಲ್ಲಿನ) ಮಳೆಯನ್ನು ಸುರಿಸಿದೆವು. ಅಪರಾಧಿಗಳ ಅಂತ್ಯವು ಹೇಗಿತ್ತೆಂದು ನೋಡಿ.

    ೮೫

    وَإِلَىٰ مَدۡيَنَ أَخَاهُمۡ شُعَيۡبٗاۚ قَالَ يَٰقَوۡمِ ٱعۡبُدُواْ ٱللَّهَ مَا لَكُم مِّنۡ إِلَٰهٍ غَيۡرُهُۥۖ قَدۡ جَآءَتۡكُم بَيِّنَةٞ مِّن رَّبِّكُمۡۖ فَأَوۡفُواْ ٱلۡكَيۡلَ وَٱلۡمِيزَانَ وَلَا تَبۡخَسُواْ ٱلنَّاسَ أَشۡيَآءَهُمۡ وَلَا تُفۡسِدُواْ فِي ٱلۡأَرۡضِ بَعۡدَ إِصۡلَٰحِهَاۚ ذَٰلِكُمۡ خَيۡرٞ لَّكُمۡ إِن كُنتُم مُّؤۡمِنِينَ

    ಮದ್ಯನ್ ಗೋತ್ರದವರ ಬಳಿಗೆ ಅವರ ಸಹೋದರ ಶುಐಬರನ್ನು (ನಾವು ಕಳುಹಿಸಿದೆವು). ಅವರು ಹೇಳಿದರು: “ಓ ನನ್ನ ಜನರೇ! ಅಲ್ಲಾಹನನ್ನು ಆರಾಧಿಸಿರಿ. ನಿಮಗೆ ಅವನ ಹೊರತು ಬೇರೆ ದೇವರಿಲ್ಲ. ನಿಶ್ಚಯವಾಗಿಯೂ ನಿಮಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಸ್ಪಷ್ಟ ಸಾಕ್ಷ್ಯಾಧಾರಗಳು ಬಂದಿವೆ. ನೀವು ಅಳತೆ ಮತ್ತು ತೂಕವನ್ನು ಪೂರ್ತಿಯಾಗಿ ನೀಡಿರಿ. ಜನರಿಗೆ ಅವರ ಸಾಮಗ್ರಿಗಳನ್ನು ಕಡಿಮೆಗೊಳಿಸಬೇಡಿ. ಭೂಮಿಯಲ್ಲಿ ಸುಧಾರಣೆ ಮಾಡಿದ ಬಳಿಕ ಅಲ್ಲಿ ಕಿಡಿಗೇಡಿತನ ಮಾಡಬೇಡಿ. ಇದು ನಿಮಗೆ ಉತ್ತಮವಾಗಿದೆ. ನೀವು ಸತ್ಯವಿಶ್ವಾಸಿಗಳಾಗಿದ್ದರೆ.

    ೮೬

    وَلَا تَقۡعُدُواْ بِكُلِّ صِرَٰطٖ تُوعِدُونَ وَتَصُدُّونَ عَن سَبِيلِ ٱللَّهِ مَنۡ ءَامَنَ بِهِۦ وَتَبۡغُونَهَا عِوَجٗاۚ وَٱذۡكُرُوٓاْ إِذۡ كُنتُمۡ قَلِيلٗا فَكَثَّرَكُمۡۖ وَٱنظُرُواْ كَيۡفَ كَانَ عَٰقِبَةُ ٱلۡمُفۡسِدِينَ

    ಅಲ್ಲಾಹನಲ್ಲಿ ವಿಶ್ವಾಸವಿಟ್ಟವರನ್ನು ಬೆದರಿಸಲು, ಜನರನ್ನು ಅಲ್ಲಾಹನ ಮಾರ್ಗದಿಂದ ತಡೆಯಲು ಮತ್ತು ಆ ಮಾರ್ಗದಲ್ಲಿ ವಕ್ರತೆಯನ್ನು ಹುಡುಕಲು ನೀವು ದಾರಿಗಳಲ್ಲಿ ಕುಳಿತುಕೊಳ್ಳಬೇಡಿ. ನೀವು ಕಡಿಮೆ ಸಂಖ್ಯೆಯಲ್ಲಿದ್ದಿರಿ. ನಂತರ ಅವನು ನಿಮ್ಮ ಸಂಖ್ಯೆಯನ್ನು ಹೆಚ್ಚಿಸಿದ್ದನ್ನು ಸ್ಮರಿಸಿರಿ. ಕಿಡಿಗೇಡಿಗಳ ಅಂತ್ಯವು ಹೇಗಿತ್ತೆಂದು ನೋಡಿ.

    ೮೭

    وَإِن كَانَ طَآئِفَةٞ مِّنكُمۡ ءَامَنُواْ بِٱلَّذِيٓ أُرۡسِلۡتُ بِهِۦ وَطَآئِفَةٞ لَّمۡ يُؤۡمِنُواْ فَٱصۡبِرُواْ حَتَّىٰ يَحۡكُمَ ٱللَّهُ بَيۡنَنَاۚ وَهُوَ خَيۡرُ ٱلۡحَٰكِمِينَ

    ನಿಮ್ಮಲ್ಲಿ ಒಂದು ಗುಂಪು ನನ್ನೊಂದಿಗೆ ಕಳುಹಿಸಲಾದ ಸಂದೇಶದಲ್ಲಿ ವಿಶ್ವಾಸವಿಟ್ಟು ಇನ್ನೊಂದು ಗುಂಪು ಅದರಲ್ಲಿ ವಿಶ್ವಾಸವಿಡದಿದ್ದರೆ—ಅಲ್ಲಾಹು ನಮ್ಮ ಮಧ್ಯೆ ತೀರ್ಪು ನೀಡುವ ತನಕ ತಾಳ್ಮೆಯಿಂದ ಕಾಯಿರಿ. ಅವನು ತೀರ್ಪು ನೀಡುವವರಲ್ಲಿ ಅತ್ಯುತ್ತಮನಾಗಿದ್ದಾನೆ.”

    ೮೮

    ۞ قَالَ ٱلۡمَلَأُ ٱلَّذِينَ ٱسۡتَكۡبَرُواْ مِن قَوۡمِهِۦ لَنُخۡرِجَنَّكَ يَٰشُعَيۡبُ وَٱلَّذِينَ ءَامَنُواْ مَعَكَ مِن قَرۡيَتِنَآ أَوۡ لَتَعُودُنَّ فِي مِلَّتِنَاۚ قَالَ أَوَلَوۡ كُنَّا كَٰرِهِينَ

    ಅವರ ಜನರಲ್ಲಿದ್ದ ಅಹಂಕಾರಿಗಳಾದ ಮುಖಂಡರು ಹೇಳಿದರು: “ಓ ಶುಐಬ್! ನಿಶ್ಚಯವಾಗಿಯೂ ನಿನ್ನನ್ನು ಮತ್ತು ನಿನ್ನ ಜೊತೆಗಿರುವ ಸತ್ಯವಿಶ್ವಾಸಿಗಳನ್ನು ನಾವು ನಮ್ಮ ಊರಿನಿಂದ ಓಡಿಸುವೆವು. ಅಥವಾ ನೀವು ನಮ್ಮ ಧರ್ಮಕ್ಕೆ ಮರಳಿ ಬರಬೇಕು.” ಶುಐಬ್ ಹೇಳಿದರು: “ನಾವು ಅದನ್ನು (ನಿಮ್ಮ ಧರ್ಮವನ್ನು) ದ್ವೇಷಿಸುವವರಾಗಿದ್ದರೂ ಸಹ (ಮರಳಿ ಬರಬೇಕೇ)?

    ೮೯

    قَدِ ٱفۡتَرَيۡنَا عَلَى ٱللَّهِ كَذِبًا إِنۡ عُدۡنَا فِي مِلَّتِكُم بَعۡدَ إِذۡ نَجَّىٰنَا ٱللَّهُ مِنۡهَاۚ وَمَا يَكُونُ لَنَآ أَن نَّعُودَ فِيهَآ إِلَّآ أَن يَشَآءَ ٱللَّهُ رَبُّنَاۚ وَسِعَ رَبُّنَا كُلَّ شَيۡءٍ عِلۡمًاۚ عَلَى ٱللَّهِ تَوَكَّلۡنَاۚ رَبَّنَا ٱفۡتَحۡ بَيۡنَنَا وَبَيۡنَ قَوۡمِنَا بِٱلۡحَقِّ وَأَنتَ خَيۡرُ ٱلۡفَٰتِحِينَ

    ಅಲ್ಲಾಹು ನಮ್ಮನ್ನು ನಿಮ್ಮ ಧರ್ಮದಿಂದ ರಕ್ಷಿಸಿದ ಬಳಿಕ ನಾವು ಪುನಃ ಅದಕ್ಕೆ ಮರಳಿದರೆ, ನಾವು ಅಲ್ಲಾಹನ ಮೇಲೆ ಸುಳ್ಳು ಸೃಷ್ಟಿಸಿದವರಾಗುವೆವು. ನಿಮ್ಮ ಧರ್ಮಕ್ಕೆ ಮರಳಲು ನಮ್ಮಿಂದ ಸುತರಾಂ ಸಾಧ್ಯವಿಲ್ಲ. ನಮ್ಮ ಪರಿಪಾಲಕನಾದ ಅಲ್ಲಾಹು ಇಚ್ಛಿಸಿದರೆ ಹೊರತು. ನಮ್ಮ ಪರಿಪಾಲಕನ (ಅಲ್ಲಾಹನ) ಜ್ಞಾನವು ಎಲ್ಲಾ ವಿಷಯಗಳನ್ನು ಒಳಗೊಳ್ಳುವಷ್ಟು ವಿಶಾಲವಾಗಿದೆ. ನಾವು ಅಲ್ಲಾಹನಲ್ಲಿ ಭರವಸೆಯಿಟ್ಟಿದ್ದೇವೆ. ಓ ನಮ್ಮ ಪರಿಪಾಲಕನೇ! ನಮ್ಮ ಮತ್ತು ನಮ್ಮ ಜನರ ನಡುವೆ ಸತ್ಯವಾದ ತೀರ್ಪನ್ನು ನೀಡು. ತೀರ್ಪು ನೀಡುವವರಲ್ಲಿ ನೀನು ಅತ್ಯುತ್ತಮನಾಗಿರುವೆ.”

    ೯೦

    وَقَالَ ٱلۡمَلَأُ ٱلَّذِينَ كَفَرُواْ مِن قَوۡمِهِۦ لَئِنِ ٱتَّبَعۡتُمۡ شُعَيۡبًا إِنَّكُمۡ إِذٗا لَّخَٰسِرُونَ

    ಅವರ ಜನರಲ್ಲಿದ್ದ ಸತ್ಯನಿಷೇಧಿ ಮುಖಂಡರು ಹೇಳಿದರು: “ನೀವು ಶುಐಬರ ಹಿಂದೆ ಹೋದರೆ ನಿಶ್ಚಯವಾಗಿಯೂ ನೀವು ನಷ್ಟಹೊಂದುವಿರಿ.”

    ೯೧

    فَأَخَذَتۡهُمُ ٱلرَّجۡفَةُ فَأَصۡبَحُواْ فِي دَارِهِمۡ جَٰثِمِينَ

    ಆಗ ಭೂಕಂಪವು ಅವರನ್ನು ಹಿಡಿದುಕೊಂಡಿತು. ಅವರು ತಮ್ಮ ಮನೆಗಳಲ್ಲಿಯೇ ಬೋರಲು ಬಿದ್ದು ಸತ್ತರು.

    ೯೨

    ٱلَّذِينَ كَذَّبُواْ شُعَيۡبٗا كَأَن لَّمۡ يَغۡنَوۡاْ فِيهَاۚ ٱلَّذِينَ كَذَّبُواْ شُعَيۡبٗا كَانُواْ هُمُ ٱلۡخَٰسِرِينَ

    ಶುಐಬರನ್ನು ನಿಷೇಧಿಸಿದವರ ಸ್ಥಿತಿಯು ಅವರು ಅಲ್ಲಿ ವಾಸಿಸಲೇ ಇಲ್ಲ ಎಂಬಂತಾಯಿತು. ಶುಐಬರನ್ನು ನಿಷೇಧಿಸಿದವರೇ ನಷ್ಟಹೊಂದಿದರು.

    ೯೩

    فَتَوَلَّىٰ عَنۡهُمۡ وَقَالَ يَٰقَوۡمِ لَقَدۡ أَبۡلَغۡتُكُمۡ رِسَٰلَٰتِ رَبِّي وَنَصَحۡتُ لَكُمۡۖ فَكَيۡفَ ءَاسَىٰ عَلَىٰ قَوۡمٖ كَٰفِرِينَ

    ಅವರಿಂದ ತಿರುಗಿ ನಡೆಯುತ್ತಾ ಶುಐಬ್ ಹೇಳಿದರು: “ಓ ನನ್ನ ಜನರೇ! ನಿಶ್ಚಯವಾಗಿಯೂ ನಾನು ನನ್ನ ಪರಿಪಾಲಕನ (ಅಲ್ಲಾಹನ) ಸಂದೇಶವನ್ನು ನಿಮಗೆ ತಲುಪಿಸಿದ್ದೇನೆ ಮತ್ತು ನಿಮಗೆ ಪ್ರಾಮಾಣಿಕವಾಗಿ ಉಪದೇಶ ಮಾಡಿದ್ದೇನೆ. ಹೀಗಿರುವಾಗ ಸತ್ಯವನ್ನು ನಿಷೇಧಿಸಿದ ಜನರಿಗಾಗಿ ನಾನೇಕೆ ಬೇಸರ ಮಾಡಿಕೊಳ್ಳಲಿ?”

    ೯೪

    وَمَآ أَرۡسَلۡنَا فِي قَرۡيَةٖ مِّن نَّبِيٍّ إِلَّآ أَخَذۡنَآ أَهۡلَهَا بِٱلۡبَأۡسَآءِ وَٱلضَّرَّآءِ لَعَلَّهُمۡ يَضَّرَّعُونَ

    ನಾವು ಯಾವುದೇ ಊರಿಗೆ ಒಬ್ಬ ಪ್ರವಾದಿಯನ್ನು ಕಳುಹಿಸಿದಾಗ, (ಅವರು ಆ ಪ್ರವಾದಿಯನ್ನು ನಿಷೇಧಿಸಿದರೆ) ಅಲ್ಲಿನ ನಿವಾಸಿಗಳನ್ನು (ಬಡತನ ಮುಂತಾದ) ಕಷ್ಟಗಳಿಂದ ಮತ್ತು (ಅನಾರೋಗ್ಯ ಮುಂತಾದ) ತೊಂದರೆಗಳಿಂದ ಹಿಡಿಯುತ್ತಿದ್ದೆವು. ಅವರು ವಿನಯವಂತರಾಗುವುದಕ್ಕಾಗಿ.

    ೯೫

    ثُمَّ بَدَّلۡنَا مَكَانَ ٱلسَّيِّئَةِ ٱلۡحَسَنَةَ حَتَّىٰ عَفَواْ وَّقَالُواْ قَدۡ مَسَّ ءَابَآءَنَا ٱلضَّرَّآءُ وَٱلسَّرَّآءُ فَأَخَذۡنَٰهُم بَغۡتَةٗ وَهُمۡ لَا يَشۡعُرُونَ

    ನಂತರ ನಾವು ಕೆಡುಕಿನ ಸ್ಥಾನದಲ್ಲಿ (ಬಡತನ ಮತ್ತು ಅನಾರೋಗ್ಯದ ಸ್ಥಾನದಲ್ಲಿ) ಒಳಿತನ್ನು ನೀಡಿ ಬದಲಾಯಿಸುವೆವು. ಎಲ್ಲಿಯವರೆಗೆಂದರೆ, ಅವರು ಅಭಿವೃದ್ಧಿ ಪಡೆದು, “ನಮ್ಮ ಪೂರ್ವಜರಿಗೂ ಬಡತನ ಮತ್ತು ಅನಾರೋಗ್ಯ ಉಂಟಾಗಿತ್ತು” ಎಂದು ಹೇಳುವ ತನಕ. ಆಗ ನಾವು ಅವರಿಗೆ ತಿಳಿಯದ ರೀತಿಯಲ್ಲಿ ಹಠಾತ್ತನೆ ಅವರನ್ನು ಹಿಡಿದುಕೊಳ್ಳುವೆವು.

    ೯೬

    وَلَوۡ أَنَّ أَهۡلَ ٱلۡقُرَىٰٓ ءَامَنُواْ وَٱتَّقَوۡاْ لَفَتَحۡنَا عَلَيۡهِم بَرَكَٰتٖ مِّنَ ٱلسَّمَآءِ وَٱلۡأَرۡضِ وَلَٰكِن كَذَّبُواْ فَأَخَذۡنَٰهُم بِمَا كَانُواْ يَكۡسِبُونَ

    ಊರುಗಳ ನಿವಾಸಿಗಳು ಸತ್ಯವಿಶ್ವಾಸಿಗಳು ಮತ್ತು ದೇವಭಯವುಳ್ಳವರಾಗಿದ್ದರೆ, ನಾವು ಅವರಿಗೆ ಆಕಾಶದಿಂದ ಮತ್ತು ಭೂಮಿಯಿಂದ ಸಮೃದ್ಧಿಗಳನ್ನು ತೆರೆದುಕೊಡುತ್ತಿದ್ದೆವು. ಆದರೆ ಅವರು ಸತ್ಯನಿಷೇಧಿಗಳಾದರು. ಆದ್ದರಿಂದ ಅವರು ಮಾಡಿದ ದುಷ್ಕರ್ಮಗಳಿಂದಾಗಿ ನಾವು ಅವರನ್ನು ಹಿಡಿದೆವು.

    ೯೭

    أَفَأَمِنَ أَهۡلُ ٱلۡقُرَىٰٓ أَن يَأۡتِيَهُم بَأۡسُنَا بَيَٰتٗا وَهُمۡ نَآئِمُونَ

    ಆ ಊರುಗಳ ನಿವಾಸಿಗಳು—ಅವರು ರಾತ್ರಿ ಮಲಗಿರುವಾಗ ನಮ್ಮ ಶಿಕ್ಷೆಯು ಅವರ ಬಳಿಗೆ ಬರಲಾರದೆಂದು ನಿರ್ಭಯರಾಗಿದ್ದಾರೆಯೇ?

    ೯೮

    أَوَأَمِنَ أَهۡلُ ٱلۡقُرَىٰٓ أَن يَأۡتِيَهُم بَأۡسُنَا ضُحٗى وَهُمۡ يَلۡعَبُونَ

    ಅಥವಾ ಅವರು ಹಗಲಿನಲ್ಲಿ ಆಟವಾಡುತ್ತಿರುವಾಗ ನಮ್ಮ ಶಿಕ್ಷೆಯು ಅವರ ಬಳಿಗೆ ಬರಲಾರದೆಂದು ನಿರ್ಭಯರಾಗಿದ್ದಾರೆಯೇ?

    ೯೯

    أَفَأَمِنُواْ مَكۡرَ ٱللَّهِۚ فَلَا يَأۡمَنُ مَكۡرَ ٱللَّهِ إِلَّا ٱلۡقَوۡمُ ٱلۡخَٰسِرُونَ

    ಅವರು ಅಲ್ಲಾಹನ ತಂತ್ರಗಾರಿಕೆಯ ಬಗ್ಗೆ ನಿರ್ಭಯರಾಗಿದ್ದಾರೆಯೇ? ನಷ್ಟಹೊಂದಿದ ಜನರ ಹೊರತು ಇನ್ನಾರೂ ಅಲ್ಲಾಹನ ತಂತ್ರಗಾರಿಕೆಯ ಬಗ್ಗೆ ನಿರ್ಭಯರಾಗುವುದಿಲ್ಲ.

    ೧೦೦

    أَوَلَمۡ يَهۡدِ لِلَّذِينَ يَرِثُونَ ٱلۡأَرۡضَ مِنۢ بَعۡدِ أَهۡلِهَآ أَن لَّوۡ نَشَآءُ أَصَبۡنَٰهُم بِذُنُوبِهِمۡۚ وَنَطۡبَعُ عَلَىٰ قُلُوبِهِمۡ فَهُمۡ لَا يَسۡمَعُونَ

    ಭೂಮಿಯಲ್ಲಿ ವಾಸವಾಗಿದ್ದವರು (ನಾಶವಾದ) ಬಳಿಕ ಅದರ ಉತ್ತರಾಧಿಕಾರಿಗಳಾಗಿ ಬಂದವರಿಗೆ—ನಾವು ಇಚ್ಛಿಸಿದರೆ ಅವರ ಪಾಪಗಳ ನಿಮಿತ್ತ ಅವರನ್ನು ಶಿಕ್ಷಿಸುವೆವು ಎಂಬ ಪ್ರಜ್ಞೆಯು ಸರಿದಾರಿಯನ್ನೇಕೆ ತೋರಿಸಲಿಲ್ಲ? ನಾವು ಅವರ ಹೃದಯಗಳಿಗೆ ಮೊಹರು ಹಾಕುವೆವು. ಆದ್ದರಿಂದ ಯಾವುದಕ್ಕೂ ಕಿವಿಗೊಡಲು ಅವರಿಗೆ ಸಾಧ್ಯವಾಗುವುದಿಲ್ಲ.

    ೧೦೧

    تِلۡكَ ٱلۡقُرَىٰ نَقُصُّ عَلَيۡكَ مِنۡ أَنۢبَآئِهَاۚ وَلَقَدۡ جَآءَتۡهُمۡ رُسُلُهُم بِٱلۡبَيِّنَٰتِ فَمَا كَانُواْ لِيُؤۡمِنُواْ بِمَا كَذَّبُواْ مِن قَبۡلُۚ كَذَٰلِكَ يَطۡبَعُ ٱللَّهُ عَلَىٰ قُلُوبِ ٱلۡكَٰفِرِينَ

    ಆ ಊರುಗಳ ಕೆಲವು ಸಮಾಚಾರಗಳನ್ನು ನಾವು ನಿಮಗೆ ವಿವರಿಸಿಕೊಡುವೆವು. ಅವರ ಸಂದೇಶವಾಹಕರುಗಳು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಅವರ ಬಳಿಗೆ ಬಂದಿದ್ದರು. ಆದರೂ ಅವರು ಮೊದಲು ಏನನ್ನು ನಿಷೇಧಿಸಿದ್ದರೋ ಅದರಲ್ಲಿ ಅವರು ವಿಶ್ವಾಸವಿಡಲಿಲ್ಲ. ಈ ರೀತಿ ಅಲ್ಲಾಹು ಸತ್ಯನಿಷೇಧಿಗಳ ಹೃದಯಗಳಿಗೆ ಮೊಹರು ಹಾಕುತ್ತಾನೆ.

    ೧೦೨

    وَمَا وَجَدۡنَا لِأَكۡثَرِهِم مِّنۡ عَهۡدٖۖ وَإِن وَجَدۡنَآ أَكۡثَرَهُمۡ لَفَٰسِقِينَ

    ಅವರಲ್ಲಿ ಹೆಚ್ಚಿನವರು ಕರಾರು ಪಾಲಿಸುವುದನ್ನು ನಾವು ಕಂಡಿಲ್ಲ. ಅವರಲ್ಲಿ ಹೆಚ್ಚಿನವರನ್ನೂ ನಾವು ಅವಿಧೇಯರಾಗಿಯೇ ಕಂಡಿದ್ದೇವೆ.

    ೧೦೩

    ثُمَّ بَعَثۡنَا مِنۢ بَعۡدِهِم مُّوسَىٰ بِـَٔايَٰتِنَآ إِلَىٰ فِرۡعَوۡنَ وَمَلَإِيْهِۦ فَظَلَمُواْ بِهَاۖ فَٱنظُرۡ كَيۡفَ كَانَ عَٰقِبَةُ ٱلۡمُفۡسِدِينَ

    ನಂತರ ಅವರ ಬಳಿಕ ನಾವು ಮೂಸಾರನ್ನು ಫರೋಹ ಮತ್ತು ಅವನ ಜನರ ಬಳಿಗೆ ನಮ್ಮ ದೃಷ್ಟಾಂತಗಳೊಂದಿಗೆ ಕಳುಹಿಸಿದೆವು. ಆದರೆ ಅವರು ಅನ್ಯಾಯವಾಗಿ ಆ ದೃಷ್ಟಾಂತಗಳನ್ನು ನಿಷೇಧಿಸಿದರು. ಆ ಕಿಡಿಗೇಡಿಗಳ ಅಂತ್ಯವು ಹೇಗಿತ್ತೆಂದು ನೋಡಿ.

    ೧೦೪

    وَقَالَ مُوسَىٰ يَٰفِرۡعَوۡنُ إِنِّي رَسُولٞ مِّن رَّبِّ ٱلۡعَٰلَمِينَ

    ಮೂಸಾ ಹೇಳಿದರು: “ಓ ಫರೋಹ! ನಿಶ್ಚಯವಾಗಿಯೂ ನಾನು ಸರ್ವಲೋಕಗಳ ಪರಿಪಾಲಕನ (ಅಲ್ಲಾಹನ) ಸಂದೇಶವಾಹಕನಾಗಿದ್ದೇನೆ.

    ೧೦೫

    حَقِيقٌ عَلَىٰٓ أَن لَّآ أَقُولَ عَلَى ٱللَّهِ إِلَّا ٱلۡحَقَّۚ قَدۡ جِئۡتُكُم بِبَيِّنَةٖ مِّن رَّبِّكُمۡ فَأَرۡسِلۡ مَعِيَ بَنِيٓ إِسۡرَٰٓءِيلَ

    ಅಲ್ಲಾಹನ ಮೇಲೆ ಸತ್ಯವನ್ನೇ ಹೊರತು ಬೇರೇನನ್ನೂ ಹೇಳಬಾರದೆಂಬ ನಿಷ್ಠೆ ನನಗಿದೆ. ನಿಮ್ಮ ಪರಿಪಾಲಕನ (ಅಲ್ಲಾಹನ) ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ನಾನು ನಿಮ್ಮ ಬಳಿಗೆ ಬಂದಿದ್ದೇನೆ. ಆದ್ದರಿಂದ ಇಸ್ರಾಯೇಲ್ ಮಕ್ಕಳನ್ನು ನನ್ನ ಜೊತೆಗೆ ಕಳುಹಿಸಿಕೊಡಿ.”

    ೧೦೬

    قَالَ إِن كُنتَ جِئۡتَ بِـَٔايَةٖ فَأۡتِ بِهَآ إِن كُنتَ مِنَ ٱلصَّٰدِقِينَ

    ಫರೋಹ ಹೇಳಿದನು: “ನೀನು ದೃಷ್ಟಾಂತವನ್ನು ತಂದಿದ್ದರೆ ಅದನ್ನು ತೋರಿಸು. ನೀನು ಸತ್ಯವಂತರಲ್ಲಿ ಸೇರಿದ್ದರೆ.”

    ೧೦೭

    فَأَلۡقَىٰ عَصَاهُ فَإِذَا هِيَ ثُعۡبَانٞ مُّبِينٞ

    ಆಗ ಮೂಸಾ ತಮ್ಮ ಕೋಲನ್ನು ಕೆಳಗೆಸೆದರು. ತಕ್ಷಣ ಅದು ಸ್ಪಷ್ಟವಾಗಿ ಕಾಣುವ ಒಂದು ಸರ್ಪವಾಗಿ ಮಾರ್ಪಟ್ಟಿತು.

    ೧೦೮

    وَنَزَعَ يَدَهُۥ فَإِذَا هِيَ بَيۡضَآءُ لِلنَّٰظِرِينَ

    ಅವರು ತಮ್ಮ ಕೈಯನ್ನು (ಪಾರ್ಶ್ವದಿಂದ) ಹೊರತೆಗೆದರು. ಆಗ ಅದು ನೋಡುವವರಿಗೆ ಬೆಳ್ಳಗೆ ಹೊಳೆಯುವಂತೆ ಕಂಡಿತು.

    ೧೦೯

    قَالَ ٱلۡمَلَأُ مِن قَوۡمِ فِرۡعَوۡنَ إِنَّ هَٰذَا لَسَٰحِرٌ عَلِيمٞ

    ಫರೋಹನ ಜನರಲ್ಲಿದ್ದ ಮುಖಂಡರು ಹೇಳಿದರು: “ನಿಜಕ್ಕೂ ಇವನೊಬ್ಬ ಅಗಾಧ ಜ್ಞಾನವಿರುವ ಮಾಟಗಾರನಾಗಿದ್ದಾನೆ.

    ೧೧೦

    يُرِيدُ أَن يُخۡرِجَكُم مِّنۡ أَرۡضِكُمۡۖ فَمَاذَا تَأۡمُرُونَ

    ನಿಮ್ಮನ್ನು ನಿಮ್ಮ ಊರಿನಿಂದ ಓಡಿಸುವುದು ಇವನ ಉದ್ದೇಶವಾಗಿದೆ. ಆದ್ದರಿಂದ ನೀವೇನು ಆದೇಶ ನೀಡುವಿರಿ?”

    ೧೧೧

    قَالُوٓاْ أَرۡجِهۡ وَأَخَاهُ وَأَرۡسِلۡ فِي ٱلۡمَدَآئِنِ حَٰشِرِينَ

    ಅವರು (ಮುಖಂಡರು ಪರಸ್ಪರ ಸಮಾಲೋಚನೆ ಮಾಡಿ) ಹೇಳಿದರು: “ಇವನ ಮತ್ತು ಇವನ ಸಹೋದರನ ವಿಷಯವನ್ನು (ಸ್ವಲ್ಪ ಕಾಲ) ಮುಂದೂಡಿರಿ ಮತ್ತು (ಮಾಟಗಾರರನ್ನು) ಒಟ್ಟು ಸೇರಿಸಲು ನಗರಗಳಿಗೆ ಆಳುಗಳನ್ನು ಕಳುಹಿಸಿರಿ.

    ೧೧೨

    يَأۡتُوكَ بِكُلِّ سَٰحِرٍ عَلِيمٖ

    ಅಗಾಧ ಜ್ಞಾನವಿರುವ ಎಲ್ಲಾ ಮಾಟಗಾರರನ್ನು ಅವರು ಕರೆದುಕೊಂಡು ಬರಲಿ.”

    ೧೧೩

    وَجَآءَ ٱلسَّحَرَةُ فِرۡعَوۡنَ قَالُوٓاْ إِنَّ لَنَا لَأَجۡرًا إِن كُنَّا نَحۡنُ ٱلۡغَٰلِبِينَ

    ಮಾಟಗಾರರು ಫರೋಹನ ಬಳಿಗೆ ಬಂದು ಕೇಳಿದರು: “ನಾವು ವಿಜೇತರಾದರೆ ನಿಶ್ಚಯವಾಗಿಯೂ ನಮಗೆ ಪ್ರತಿಫಲವಿದೆಯಲ್ಲವೇ?”

    ೧೧೪

    قَالَ نَعَمۡ وَإِنَّكُمۡ لَمِنَ ٱلۡمُقَرَّبِينَ

    ಫರೋಹ ಹೇಳಿದನು: “ಹೌದು, ನಿಶ್ಚಯವಾಗಿಯೂ ನೀವು ನನ್ನ ಆಪ್ತರಲ್ಲಿ ಸೇರುವಿರಿ.”

    ೧೧೫

    قَالُواْ يَٰمُوسَىٰٓ إِمَّآ أَن تُلۡقِيَ وَإِمَّآ أَن نَّكُونَ نَحۡنُ ٱلۡمُلۡقِينَ

    ಮಾಟಗಾರರು ಹೇಳಿದರು: “ಓ ಮೂಸಾ! ಒಂದೋ ನೀವು (ಕೋಲನ್ನು) ಎಸೆಯಿರಿ. ಅಥವಾ ನಾವೇ (ಮೊದಲು) ಎಸೆಯುತ್ತೇವೆ.”

    ೧೧೬

    قَالَ أَلۡقُواْۖ فَلَمَّآ أَلۡقَوۡاْ سَحَرُوٓاْ أَعۡيُنَ ٱلنَّاسِ وَٱسۡتَرۡهَبُوهُمۡ وَجَآءُو بِسِحۡرٍ عَظِيمٖ

    ಮೂಸಾ ಹೇಳಿದರು: “ನೀವೇ ಎಸೆಯಿರಿ.” ಅವರು (ಕೋಲುಗಳನ್ನು) ಎಸೆದಾಗ ಅವರು ಜನರ ಕಣ್ಣುಗಳಿಗೆ ಮಾಟ ಮಾಡಿ ಅವರನ್ನು ಭಯಭೀತಗೊಳಿಸಿದರು. ಅವರು ಬಹುದೊಡ್ಡ ಮಾಟಗಾರಿಕೆಯನ್ನು ಪ್ರದರ್ಶಿಸಿದ್ದರು.

    ೧೧೭

    ۞ وَأَوۡحَيۡنَآ إِلَىٰ مُوسَىٰٓ أَنۡ أَلۡقِ عَصَاكَۖ فَإِذَا هِيَ تَلۡقَفُ مَا يَأۡفِكُونَ

    “ತಮ್ಮ ಕೋಲನ್ನು ಎಸೆಯಿರಿ” ಎಂದು ನಾವು ಮೂಸಾರಿಗೆ ದೇವವಾಣಿ ನೀಡಿದೆವು. ಆಗ ಅಗೋ ಅವರು ಕೃತಕವಾಗಿ ನಿರ್ಮಿಸಿದ (ಸರ್ಪಗಳನ್ನು) ಅದು ನುಂಗತೊಡಗಿತು.

    ೧೧೮

    فَوَقَعَ ٱلۡحَقُّ وَبَطَلَ مَا كَانُواْ يَعۡمَلُونَ

    ಸತ್ಯವು ಸಾಬೀತಾಯಿತು ಮತ್ತು ಅವರು ಮಾಡುತ್ತಿದ್ದ ಕೆಲಸಗಳೆಲ್ಲವೂ ನಿಷ್ಫಲವಾದವು.

    ೧೧೯

    فَغُلِبُواْ هُنَالِكَ وَٱنقَلَبُواْ صَٰغِرِينَ

    ಅವರು ಅಲ್ಲಿಯೇ ಸೋತು ದಯನೀಯ ಸ್ಥಿತಿಯಲ್ಲಿ ಮರಳಿದರು.

    ೧೨೦

    وَأُلۡقِيَ ٱلسَّحَرَةُ سَٰجِدِينَ

    ಮಾಟಗಾರರು (ಅಲ್ಲಾಹನಿಗೆ) ಸಾಷ್ಟಾಂಗ ಮಾಡಿದರು.

    ೧೨೧

    قَالُوٓاْ ءَامَنَّا بِرَبِّ ٱلۡعَٰلَمِينَ

    ಅವರು ಹೇಳಿದರು: “ನಾವು ಸರ್ವಲೋಕಗಳ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ವಿಶ್ವಾಸವಿಟ್ಟಿದ್ದೇವೆ.

    ೧೨೨

    رَبِّ مُوسَىٰ وَهَٰرُونَ

    ಮೂಸಾ ಮತ್ತು ಹಾರೂನರ ಪರಿಪಾಲಕನಲ್ಲಿ.”

    ೧೨೩

    قَالَ فِرۡعَوۡنُ ءَامَنتُم بِهِۦ قَبۡلَ أَنۡ ءَاذَنَ لَكُمۡۖ إِنَّ هَٰذَا لَمَكۡرٞ مَّكَرۡتُمُوهُ فِي ٱلۡمَدِينَةِ لِتُخۡرِجُواْ مِنۡهَآ أَهۡلَهَاۖ فَسَوۡفَ تَعۡلَمُونَ

    ಫರೋಹ ಹೇಳಿದನು: “ನಾನು ಅಪ್ಪಣೆ ಕೊಡುವ ಮೊದಲೇ ನೀವು ವಿಶ್ವಾಸವಿಟ್ಟಿರಾ? ನಿಶ್ಚಯವಾಗಿಯೂ ಇದು ನೀವು ನಗರದ ನಿವಾಸಿಗಳನ್ನು ಅಲ್ಲಿಂದ ಓಡಿಸಲು ಮಾಡಿದ ಪಿತೂರಿಯಾಗಿದೆ. ಸದ್ಯವೇ ನೀವು ತಿಳಿಯುವಿರಿ.

    ೧೨೪

    لَأُقَطِّعَنَّ أَيۡدِيَكُمۡ وَأَرۡجُلَكُم مِّنۡ خِلَٰفٖ ثُمَّ لَأُصَلِّبَنَّكُمۡ أَجۡمَعِينَ

    ಖಂಡಿತವಾಗಿಯೂ ನಾನು ನಿಮ್ಮ ಕೈಗಳನ್ನು ಮತ್ತು ಕಾಲುಗಳನ್ನು ವಿರುದ್ಧ ದಿಕ್ಕಿನಿಂದ ಕತ್ತರಿಸಿ, ನಂತರ ನಿಮ್ಮೆಲ್ಲರನ್ನೂ ಶಿಲುಬೆಗೇರಿಸುವೆನು.”

    ೧೨೫

    قَالُوٓاْ إِنَّآ إِلَىٰ رَبِّنَا مُنقَلِبُونَ

    ಮಾಟಗಾರರು ಹೇಳಿದರು: “ನಿಶ್ಚಯವಾಗಿಯೂ ನಾವು ನಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ಮರಳುವೆವು.

    ೧೨೬

    وَمَا تَنقِمُ مِنَّآ إِلَّآ أَنۡ ءَامَنَّا بِـَٔايَٰتِ رَبِّنَا لَمَّا جَآءَتۡنَاۚ رَبَّنَآ أَفۡرِغۡ عَلَيۡنَا صَبۡرٗا وَتَوَفَّنَا مُسۡلِمِينَ

    ನಮ್ಮ ಪರಿಪಾಲಕನ (ಅಲ್ಲಾಹನ) ದೃಷ್ಟಾಂತಗಳು ನಮ್ಮ ಬಳಿಗೆ ಬಂದಾಗ ನಾವು ಅದರಲ್ಲಿ ವಿಶ್ವಾಸವಿಟ್ಟೆವು ಎಂಬುದರ ಹೊರತು ಬೇರೆ ಯಾವ ಅಪರಾಧಕ್ಕಾಗಿ ನೀವು ನಮ್ಮ ಮೇಲೆ ಸಿಟ್ಟಾಗಿದ್ದೀರಿ? ಓ ನಮ್ಮ ಪರಿಪಾಲಕನೇ! ನಮಗೆ ಸಹನಾಶಕ್ತಿಯನ್ನು ಸುರಿಸಿಕೊಡು ಮತ್ತು ಮುಸಲ್ಮಾನರಾಗಿರುವ ಸ್ಥಿತಿಯಲ್ಲಿ ನಮ್ಮನ್ನು ಮೃತಪಡಿಸು.”

    ೧೨೭

    وَقَالَ ٱلۡمَلَأُ مِن قَوۡمِ فِرۡعَوۡنَ أَتَذَرُ مُوسَىٰ وَقَوۡمَهُۥ لِيُفۡسِدُواْ فِي ٱلۡأَرۡضِ وَيَذَرَكَ وَءَالِهَتَكَۚ قَالَ سَنُقَتِّلُ أَبۡنَآءَهُمۡ وَنَسۡتَحۡيِۦ نِسَآءَهُمۡ وَإِنَّا فَوۡقَهُمۡ قَٰهِرُونَ

    ಫರೋಹನ ಜನರಲ್ಲಿದ್ದ ಮುಖಂಡರು ಹೇಳಿದರು: “ಭೂಮಿಯಲ್ಲಿ ಕಿಡಿಗೇಡಿತನ ಮಾಡಲು ಮತ್ತು ನಿಮ್ಮನ್ನು ಹಾಗೂ ನಿಮ್ಮ ದೇವರುಗಳನ್ನು ಬಹಿಷ್ಕರಿಸಲು ನೀವು ಮೂಸಾ ಮತ್ತು ಅವನ ಜನರನ್ನು (ಸ್ವತಂತ್ರವಾಗಿ) ಬಿಟ್ಟುಬಿಡುತ್ತೀರಾ?” ಫರೋಹ ಹೇಳಿದನು: “ನಾವು ಅವರ (ಇಸ್ರಾಯೇಲರ) ಗಂಡುಮಕ್ಕಳ ಕತ್ತು ಕೊಯ್ಯುವೆವು ಮತ್ತು ಅವರ ಹೆಣ್ಣು ಮಕ್ಕಳನ್ನು ಜೀವಂತ ಬಿಡುವೆವು. ನಿಶ್ಚಯವಾಗಿಯೂ ನಮಗೆ ಅವರ ಮೇಲೆ ಸರ್ವಾಧಿಕಾರವಿದೆ.”

    ೧೨೮

    قَالَ مُوسَىٰ لِقَوۡمِهِ ٱسۡتَعِينُواْ بِٱللَّهِ وَٱصۡبِرُوٓاْۖ إِنَّ ٱلۡأَرۡضَ لِلَّهِ يُورِثُهَا مَن يَشَآءُ مِنۡ عِبَادِهِۦۖ وَٱلۡعَٰقِبَةُ لِلۡمُتَّقِينَ

    ಮೂಸಾ ತಮ್ಮ ಜನರಿಗೆ ಹೇಳಿದರು: “ನೀವು ಅಲ್ಲಾಹನಲ್ಲಿ ಸಹಾಯ ಬೇಡಿರಿ ಮತ್ತು ತಾಳ್ಮೆಯಿಂದಿರಿ. ನಿಶ್ಚಯವಾಗಿಯೂ ಭೂಮಿ ಅಲ್ಲಾಹನಿಗೆ ಸೇರಿದ್ದು. ಅವನ ದಾಸರಲ್ಲಿ ಅವನು ಇಚ್ಛಿಸುವವರಿಗೆ ಅವನು ಅದನ್ನು ಉತ್ತರಾಧಿಕಾರವಾಗಿ ನೀಡುತ್ತಾನೆ. ಉತ್ತಮ ಅಂತ್ಯವಿರುವುದು ದೇವಭಯವುಳ್ಳವರಿಗೆ ಮಾತ್ರ.”

    ೧೨೯

    قَالُوٓاْ أُوذِينَا مِن قَبۡلِ أَن تَأۡتِيَنَا وَمِنۢ بَعۡدِ مَا جِئۡتَنَاۚ قَالَ عَسَىٰ رَبُّكُمۡ أَن يُهۡلِكَ عَدُوَّكُمۡ وَيَسۡتَخۡلِفَكُمۡ فِي ٱلۡأَرۡضِ فَيَنظُرَ كَيۡفَ تَعۡمَلُونَ

    ಅವರು ಹೇಳಿದರು: “ನೀವು ನಮ್ಮ ಬಳಿಗೆ (ಸಂದೇಶವಾಹಕರಾಗಿ) ಬರುವ ಮೊದಲು ಮತ್ತು ನೀವು ನಮ್ಮ ಬಳಿಗೆ (ಸಂದೇಶವಾಹಕರಾಗಿ) ಬಂದ ಬಳಿಕವೂ ನಾವು ಹಿಂಸೆಗೆ ಗುರಿಯಾಗಿದ್ದೇವೆ.” ಮೂಸಾ ಹೇಳಿದರು: “ನಿಮ್ಮ ಪರಿಪಾಲಕನು (ಅಲ್ಲಾಹು) ನಿಮ್ಮ ವೈರಿಯನ್ನು ನಾಶ ಮಾಡಿ, ನಿಮ್ಮನ್ನು ಭೂಮಿಯಲ್ಲಿ ಉತ್ತರಾಧಿಕಾರಿಗಳನ್ನಾಗಿ ಮಾಡಬಹುದು. ನಂತರ ನೀವು ಹೇಗೆ ಕಾರ್ಯವೆಸಗುತ್ತೀರಿ ಎಂದು ಅವನು ನೋಡುವನು.”

    ೧೩೦

    وَلَقَدۡ أَخَذۡنَآ ءَالَ فِرۡعَوۡنَ بِٱلسِّنِينَ وَنَقۡصٖ مِّنَ ٱلثَّمَرَٰتِ لَعَلَّهُمۡ يَذَّكَّرُونَ

    ಫರೋಹನ ಜನರನ್ನು ನಾವು ಬರಗಾಲ ಮತ್ತು ಬೆಳೆಗಳ ಅಭಾವದಿಂದ ಹಿಡಿದೆವು. ಅವರು ಜಾಗೃತರಾಗುವುದಕ್ಕಾಗಿ.

    ೧೩೧

    فَإِذَا جَآءَتۡهُمُ ٱلۡحَسَنَةُ قَالُواْ لَنَا هَٰذِهِۦۖ وَإِن تُصِبۡهُمۡ سَيِّئَةٞ يَطَّيَّرُواْ بِمُوسَىٰ وَمَن مَّعَهُۥٓۗ أَلَآ إِنَّمَا طَٰٓئِرُهُمۡ عِندَ ٱللَّهِ وَلَٰكِنَّ أَكۡثَرَهُمۡ لَا يَعۡلَمُونَ

    ಅವರಿಗೆ ಒಳಿತುಂಟಾದರೆ, “ಇದು ನಮ್ಮ ಸಿಗಬೇಕಾದ ಹಕ್ಕು” ಎಂದು ಅವರು ಹೇಳುತ್ತಾರೆ. ಅವರಿಗೆ ಕೆಡುಕು ಬಾಧಿಸಿದರೆ ಮೂಸಾ ಮತ್ತು ಅವರ ಅನುಯಾಯಿಗಳನ್ನು ಅಪಶಕುನವಾಗಿ ಕಾಣುತ್ತಾರೆ. ತಿಳಿಯಿರಿ! ಅವರ ಶಕುನವು ಅಲ್ಲಾಹನ ಬಳಿಯಲ್ಲಿದೆ. ಆದರೆ ಅವರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ.

    ೧೩೨

    وَقَالُواْ مَهۡمَا تَأۡتِنَا بِهِۦ مِنۡ ءَايَةٖ لِّتَسۡحَرَنَا بِهَا فَمَا نَحۡنُ لَكَ بِمُؤۡمِنِينَ

    ಅವರು ಹೇಳಿದರು: “ನೀನು ನಮ್ಮನ್ನು ಮೋಡಿ ಮಾಡಲು ಯಾವುದೇ ದೃಷ್ಟಾಂತವನ್ನು ತಂದರೂ ನಾವು ನಿನ್ನಲ್ಲಿ ವಿಶ್ವಾಸವಿಡುವುದಿಲ್ಲ.”

    ೧೩೩

    فَأَرۡسَلۡنَا عَلَيۡهِمُ ٱلطُّوفَانَ وَٱلۡجَرَادَ وَٱلۡقُمَّلَ وَٱلضَّفَادِعَ وَٱلدَّمَ ءَايَٰتٖ مُّفَصَّلَٰتٖ فَٱسۡتَكۡبَرُواْ وَكَانُواْ قَوۡمٗا مُّجۡرِمِينَ

    ಆಗ ನಾವು ಅವರ ವಿರುದ್ಧ ಪ್ರವಾಹ, ಮಿಡತೆ, ಹೇನು, ಕಪ್ಪೆಗಳು ಮತ್ತು ರಕ್ತವನ್ನು ಸ್ಪಷ್ಟ ದೃಷ್ಟಾಂತಗಳಾಗಿ ಕಳುಹಿಸಿದೆವು. ಆದರೆ ಅವರು ಅಹಂಕಾರದಿಂದ ವರ್ತಿಸಿದರು. ಅವರು ಅಪರಾಧವೆಸಗಿದ ಜನರಾಗಿದ್ದರು.

    ೧೩೪

    وَلَمَّا وَقَعَ عَلَيۡهِمُ ٱلرِّجۡزُ قَالُواْ يَٰمُوسَى ٱدۡعُ لَنَا رَبَّكَ بِمَا عَهِدَ عِندَكَۖ لَئِن كَشَفۡتَ عَنَّا ٱلرِّجۡزَ لَنُؤۡمِنَنَّ لَكَ وَلَنُرۡسِلَنَّ مَعَكَ بَنِيٓ إِسۡرَٰٓءِيلَ

    ಶಿಕ್ಷೆಯು ಅವರ ಮೇಲೆರಗಿದಾಗ ಅವರು ಹೇಳಿದರು: “ಓ ಮೂಸಾ! ನಿಮ್ಮ ಪರಿಪಾಲಕನು (ಅಲ್ಲಾಹು) ನಿಮಗೆ ನೀಡಿದ ಭರವಸೆಯಂತೆ ನೀವು ಅವನನ್ನು ಕರೆದು ಪ್ರಾರ್ಥಿಸಿರಿ. ನೀವು ಈ ಶಿಕ್ಷೆಯನ್ನು ನಮ್ಮಿಂದ ನಿವಾರಿಸಿದರೆ ನಾವು ಖಂಡಿತ ವಿಶ್ವಾಸವಿಡುವೆವು ಮತ್ತು ಇಸ್ರಾಯೇಲ್ ಮಕ್ಕಳನ್ನು ಖಂಡಿತ ನಿಮ್ಮ ಜೊತೆಗೆ ಕಳುಹಿಸಿಕೊಡುವೆವು.”

    ೧೩೫

    فَلَمَّا كَشَفۡنَا عَنۡهُمُ ٱلرِّجۡزَ إِلَىٰٓ أَجَلٍ هُم بَٰلِغُوهُ إِذَا هُمۡ يَنكُثُونَ

    ಆದರೆ ಅವರು ತಲುಪಬೇಕಾದ ಒಂದು ಅವಧಿಯ ತನಕ ನಾವು ಅವರಿಂದ ಶಿಕ್ಷೆಯನ್ನು ನಿವಾರಿಸಿದಾಗ, ಅಗೋ ಅವರು ಮಾತು ತಪ್ಪುತ್ತಿದ್ದಾರೆ.

    ೧೩೬

    فَٱنتَقَمۡنَا مِنۡهُمۡ فَأَغۡرَقۡنَٰهُمۡ فِي ٱلۡيَمِّ بِأَنَّهُمۡ كَذَّبُواْ بِـَٔايَٰتِنَا وَكَانُواْ عَنۡهَا غَٰفِلِينَ

    ಆದ್ದರಿಂದ ನಾವು ಅವರಿಂದ ಪ್ರತೀಕಾರ ಪಡೆದೆವು ಮತ್ತು ಅವರನ್ನು ಸಮುದ್ರದಲ್ಲಿ ಮುಳುಗಿಸಿ ಬಿಟ್ಟೆವು. ಏಕೆಂದರೆ, ಅವರು ನಮ್ಮ ವಚನಗಳನ್ನು ನಿಷೇಧಿಸಿದ್ದರು ಮತ್ತು ಅವುಗಳ ಬಗ್ಗೆ ನಿರ್ಲಕ್ಷ್ಯರಾಗಿದ್ದರು.

    ೧೩೭

    وَأَوۡرَثۡنَا ٱلۡقَوۡمَ ٱلَّذِينَ كَانُواْ يُسۡتَضۡعَفُونَ مَشَٰرِقَ ٱلۡأَرۡضِ وَمَغَٰرِبَهَا ٱلَّتِي بَٰرَكۡنَا فِيهَاۖ وَتَمَّتۡ كَلِمَتُ رَبِّكَ ٱلۡحُسۡنَىٰ عَلَىٰ بَنِيٓ إِسۡرَٰٓءِيلَ بِمَا صَبَرُواْۖ وَدَمَّرۡنَا مَا كَانَ يَصۡنَعُ فِرۡعَوۡنُ وَقَوۡمُهُۥ وَمَا كَانُواْ يَعۡرِشُونَ

    ದಬ್ಬಾಳಿಕೆಗೆ ಗುರಿಯಾದ ಜನರನ್ನು (ಇಸ್ರಾಯೇಲ್ ಮಕ್ಕಳನ್ನು) ನಾವು ಸಮೃದ್ಧಗೊಳಿಸಿದ ಭೂಮಿಯ ಪೂರ್ವ ಮತ್ತು ಪಶ್ಚಿಮ ಭಾಗಗಳ ಉತ್ತರಾಧಿಕಾರಿಗಳಾಗಿ ಮಾಡಿದೆವು. ಇಸ್ರಾಯೇಲ್ ಮಕ್ಕಳು ತಾಳ್ಮೆ ತೋರಿದ ಕಾರಣ ಅವರಿಗೆ ಸಂಬಂಧಿಸಿದ ನಿಮ್ಮ ಪರಿಪಾಲಕನ (ಅಲ್ಲಾಹನ) ಉತ್ತಮ ವಚನವು ನೆರವೇರಿತು. ಫರೋಹ ಮತ್ತು ಅವನ ಜನರು ನಿರ್ಮಿಸಿದ್ದನ್ನು ಮತ್ತು ಅವರು ಎತ್ತರಿಸಿ ಕಟ್ಟಿದ್ದನ್ನು ನಾವು ನಾಶ ಮಾಡಿದೆವು.

    ೧೩೮

    وَجَٰوَزۡنَا بِبَنِيٓ إِسۡرَٰٓءِيلَ ٱلۡبَحۡرَ فَأَتَوۡاْ عَلَىٰ قَوۡمٖ يَعۡكُفُونَ عَلَىٰٓ أَصۡنَامٖ لَّهُمۡۚ قَالُواْ يَٰمُوسَى ٱجۡعَل لَّنَآ إِلَٰهٗا كَمَا لَهُمۡ ءَالِهَةٞۚ قَالَ إِنَّكُمۡ قَوۡمٞ تَجۡهَلُونَ

    ನಾವು ಇಸ್ರಾಯೇಲ್ ಮಕ್ಕಳನ್ನು ಸಮುದ್ರ ದಾಟಿಸಿ ರಕ್ಷಿಸಿದೆವು. ಅಲ್ಲಿ ಅವರು ವಿಗ್ರಹಗಳ ಮುಂದೆ ಧ್ಯಾನಮಗ್ನರಾಗಿ ಕುಳಿತಿದ್ದ ಜನರನ್ನು ಕಂಡರು. ಅವರು ಹೇಳಿದರು: “ಓ ಮೂಸಾ! ಇವರಿಗೆ ದೇವರುಗಳು ಇರುವಂತೆ ನಮಗೂ ಒಬ್ಬ ದೇವನನ್ನು ಮಾಡಿಕೊಡಿ.” ಮೂಸಾ ಹೇಳಿದರು: “ನಿಶ್ಚಯವಾಗಿಯೂ ನೀವು ವಿವೇಕರಹಿತ ಜನರಾಗಿದ್ದೀರಿ.

    ೧೩೯

    إِنَّ هَٰٓؤُلَآءِ مُتَبَّرٞ مَّا هُمۡ فِيهِ وَبَٰطِلٞ مَّا كَانُواْ يَعۡمَلُونَ

    ನಿಶ್ಚಯವಾಗಿಯೂ ಇವರು ಮಾಡುತ್ತಿರುವ ಈ ಕಾರ್ಯವು (ವಿಗ್ರಹಾರಾಧನೆ) ನಾಶವಾಗಿ ಹೋಗುತ್ತದೆ ಮತ್ತು ಇವರು ಮಾಡುತ್ತಿರುವ ಈ ಕಾರ್ಯವು ಆಧಾರರಹಿತವಾಗಿದೆ.”

    ೧೪೦

    قَالَ أَغَيۡرَ ٱللَّهِ أَبۡغِيكُمۡ إِلَٰهٗا وَهُوَ فَضَّلَكُمۡ عَلَى ٱلۡعَٰلَمِينَ

    ಮೂಸಾ ಕೇಳಿದರು: “ಅಲ್ಲಾಹು ನಿಮ್ಮನ್ನು ಸರ್ವಲೋಕಗಳ ಜನರಿಗಿಂತ ಶ್ರೇಷ್ಠಗೊಳಿಸಿರುವಾಗ, ನಾನು ಅವನಲ್ಲದ ಬೇರೆ ದೇವರನ್ನು ನಿಮಗಾಗಿ ಹುಡುಕಿ ತರಬೇಕೇ?”

    ೧೪೧

    وَإِذۡ أَنجَيۡنَٰكُم مِّنۡ ءَالِ فِرۡعَوۡنَ يَسُومُونَكُمۡ سُوٓءَ ٱلۡعَذَابِ يُقَتِّلُونَ أَبۡنَآءَكُمۡ وَيَسۡتَحۡيُونَ نِسَآءَكُمۡۚ وَفِي ذَٰلِكُم بَلَآءٞ مِّن رَّبِّكُمۡ عَظِيمٞ

    ನಿಮಗೆ ಕಠೋರ ಹಿಂಸೆ ನೀಡುತ್ತಿದ್ದ, ನಿಮ್ಮ ಗಂಡು ಮಕ್ಕಳ ಕತ್ತು ಕೊಯ್ಯುತ್ತಿದ್ದ ಮತ್ತು ನಿಮ್ಮ ಹೆಣ್ಣು ಮಕ್ಕಳನ್ನು ಜೀವಂತ ಬಿಡುತ್ತಿದ್ದ ಫರೋಹನ ಜನರಿಂದ ನಾವು ನಿಮ್ಮನ್ನು ರಕ್ಷಿಸಿದ ಸಂದರ್ಭ(ವನ್ನು ಸ್ಮರಿಸಿ). ನಿಶ್ಚಯವಾಗಿಯೂ ಅದರಲ್ಲಿ (ನಿಮ್ಮನ್ನು ರಕ್ಷಿಸಿದ್ದರಲ್ಲಿ) ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಮಹಾ ಪರೀಕ್ಷೆಯಿತ್ತು.

    ೧೪೨

    ۞ وَوَٰعَدۡنَا مُوسَىٰ ثَلَٰثِينَ لَيۡلَةٗ وَأَتۡمَمۡنَٰهَا بِعَشۡرٖ فَتَمَّ مِيقَٰتُ رَبِّهِۦٓ أَرۡبَعِينَ لَيۡلَةٗۚ وَقَالَ مُوسَىٰ لِأَخِيهِ هَٰرُونَ ٱخۡلُفۡنِي فِي قَوۡمِي وَأَصۡلِحۡ وَلَا تَتَّبِعۡ سَبِيلَ ٱلۡمُفۡسِدِينَ

    ನಾವು ಮೂಸಾರಿಗೆ ಮೂವತ್ತು ರಾತ್ರಿಗಳನ್ನು ವಾಗ್ದಾನ ಮಾಡಿದೆವು ಮತ್ತು ಅದಕ್ಕೆ ಹತ್ತು ಸೇರಿಸಿ ಪೂರ್ಣಗೊಳಿಸಿದೆವು. ಹೀಗೆ ಮೂಸಾರ ಪರಿಪಾಲಕನು (ಅಲ್ಲಾಹು) ನಿಶ್ಚಯಿಸಿದ ನಲ್ವತ್ತು ರಾತ್ರಿಗಳ ಅವಧಿಯು ಪೂರ್ಣವಾಯಿತು. ಮೂಸಾ ತಮ್ಮ ಸಹೋದರ ಹಾರೂನರಿಗೆ ಹೇಳಿದರು: “ನನ್ನ ಜನರಿಗೆ ನನ್ನ ಪ್ರತಿನಿಧಿಯಾಗಿರು. ಒಳಿತನ್ನು ಮಾಡು. ಕಿಡಿಗೇಡಿಗಳ ಮಾರ್ಗವನ್ನು ಹಿಂಬಾಲಿಸಬೇಡ.”

    ೧೪೩

    وَلَمَّا جَآءَ مُوسَىٰ لِمِيقَٰتِنَا وَكَلَّمَهُۥ رَبُّهُۥ قَالَ رَبِّ أَرِنِيٓ أَنظُرۡ إِلَيۡكَۚ قَالَ لَن تَرَىٰنِي وَلَٰكِنِ ٱنظُرۡ إِلَى ٱلۡجَبَلِ فَإِنِ ٱسۡتَقَرَّ مَكَانَهُۥ فَسَوۡفَ تَرَىٰنِيۚ فَلَمَّا تَجَلَّىٰ رَبُّهُۥ لِلۡجَبَلِ جَعَلَهُۥ دَكّٗا وَخَرَّ مُوسَىٰ صَعِقٗاۚ فَلَمَّآ أَفَاقَ قَالَ سُبۡحَٰنَكَ تُبۡتُ إِلَيۡكَ وَأَنَا۠ أَوَّلُ ٱلۡمُؤۡمِنِينَ

    ನಮ್ಮ ನಿಶ್ಚಿತ ಸಮಯಕ್ಕೆ ಮೂಸಾ ಬಂದಾಗ ಮತ್ತು ಅವರ ಪರಿಪಾಲಕನು (ಅಲ್ಲಾಹು) ಅವರೊಡನೆ ಮಾತನಾಡಿದಾಗ ಅವರು ಹೇಳಿದರು: “ಓ ನನ್ನ ಪರಿಪಾಲಕನೇ! ನಿನ್ನನ್ನು ನನಗೆ ತೋರಿಸಿಕೊಡು. ನಾನು ನಿನ್ನನ್ನು ನೋಡಬೇಕು.” ಅಲ್ಲಾಹು ಹೇಳಿದನು: “ನಿಮಗೆ ನನ್ನನ್ನು ನೋಡಲು ಸಾಧ್ಯವಿಲ್ಲ. ಬದಲಿಗೆ, ನೀವು ಆ ಬೆಟ್ಟವನ್ನು ನೋಡಿರಿ. ಅದು ಅದರ ಸ್ಥಳದಲ್ಲಿಯೇ ಕದಲದೆ ನಿಂತರೆ ನೀವು ನನ್ನನ್ನು ನೋಡುವಿರಿ.” ನಂತರ ಅವರ ಪರಿಪಾಲಕನು (ಅಲ್ಲಾಹು) ಆ ಬೆಟ್ಟಕ್ಕೆ ತನ್ನನ್ನು ಪ್ರಕಟಗೊಳಿಸಿದಾಗ, ಅವನ ತೇಜಸ್ಸು ಅದನ್ನು ನುಚ್ಚುನೂರು ಮಾಡಿತು. ಮೂಸಾ ಪ್ರಜ್ಞೆ ತಪ್ಪಿ ಬಿದ್ದರು. ನಂತರ ಪ್ರಜ್ಞೆ ಬಂದಾಗ ಅವರು ಹೇಳಿದರು: “ನೀನು ಪರಿಶುದ್ಧನು. ನಾನು ನಿನ್ನ ಬಳಿಗೆ ಪಶ್ಚಾತ್ತಾಪದಿಂದ ಮರಳಿದ್ದೇನೆ. ನಾನು ಸತ್ಯವಿಶ್ವಾಸಿಗಳಲ್ಲಿ ಮೊದಲಿಗನಾಗಿದ್ದೇನೆ.”

    ೧೪೪

    قَالَ يَٰمُوسَىٰٓ إِنِّي ٱصۡطَفَيۡتُكَ عَلَى ٱلنَّاسِ بِرِسَٰلَٰتِي وَبِكَلَٰمِي فَخُذۡ مَآ ءَاتَيۡتُكَ وَكُن مِّنَ ٱلشَّٰكِرِينَ

    ಅಲ್ಲಾಹು ಹೇಳಿದನು: “ಓ ಮೂಸಾ! ನಿಶ್ಚಯವಾಗಿಯೂ ಮನುಷ್ಯರ ಪೈಕಿ ನಾನು ನಿಮ್ಮನ್ನು ನನ್ನ ಸಂದೇಶಗಳಿಂದ ಮತ್ತು ನನ್ನ (ನೇರ) ಮಾತಿನಿಂದ ಆರಿಸಿದ್ದೇನೆ. ಆದ್ದರಿಂದ ನಾನು ನಿಮಗೆ ನೀಡಿದ್ದನ್ನು ಬಿಗಿಯಾಗಿ ಹಿಡಿದುಕೊಳ್ಳಿ ಮತ್ತು ಕೃತಜ್ಞರಾಗಿರುವ ಜನರಲ್ಲಿ ಸೇರಿಕೊಳ್ಳಿ.”

    ೧೪೫

    وَكَتَبۡنَا لَهُۥ فِي ٱلۡأَلۡوَاحِ مِن كُلِّ شَيۡءٖ مَّوۡعِظَةٗ وَتَفۡصِيلٗا لِّكُلِّ شَيۡءٖ فَخُذۡهَا بِقُوَّةٖ وَأۡمُرۡ قَوۡمَكَ يَأۡخُذُواْ بِأَحۡسَنِهَاۚ سَأُوْرِيكُمۡ دَارَ ٱلۡفَٰسِقِينَ

    ನಾವು ಅವರಿಗೆ (ಮೂಸಾರಿಗೆ) ಹಲಗೆಗಳಲ್ಲಿ ಎಲ್ಲವನ್ನೂ—ಹಿತೋಪದೇಶ ಮತ್ತು ಎಲ್ಲಾ ವಿಷಯಗಳ ವಿವರಣೆಯನ್ನು—ಬರೆದುಕೊಟ್ಟೆವು. (ನಾವು ಹೇಳಿದೆವು): “ಇದನ್ನು ಬಿಗಿಯಾಗಿ ಹಿಡಿದುಕೊಳ್ಳಿ ಮತ್ತು ಇದರಲ್ಲಿರುವ ಉತ್ತಮ ವಿಷಯಗಳನ್ನು ಸ್ವೀಕರಿಸಲು ನಿಮ್ಮ ಜನರಿಗೆ ಆದೇಶಿಸಿರಿ. ದುಷ್ಕರ್ಮಿಗಳ ವಾಸ್ತವ್ಯವನ್ನು ನಾನು ಸದ್ಯವೇ ನಿಮಗೆ ತೋರಿಸಿಕೊಡುವೆನು.”

    ೧೪೬

    سَأَصۡرِفُ عَنۡ ءَايَٰتِيَ ٱلَّذِينَ يَتَكَبَّرُونَ فِي ٱلۡأَرۡضِ بِغَيۡرِ ٱلۡحَقِّ وَإِن يَرَوۡاْ كُلَّ ءَايَةٖ لَّا يُؤۡمِنُواْ بِهَا وَإِن يَرَوۡاْ سَبِيلَ ٱلرُّشۡدِ لَا يَتَّخِذُوهُ سَبِيلٗا وَإِن يَرَوۡاْ سَبِيلَ ٱلۡغَيِّ يَتَّخِذُوهُ سَبِيلٗاۚ ذَٰلِكَ بِأَنَّهُمۡ كَذَّبُواْ بِـَٔايَٰتِنَا وَكَانُواْ عَنۡهَا غَٰفِلِينَ

    ಭೂಮಿಯಲ್ಲಿ ಅನ್ಯಾಯವಾಗಿ ಅಹಂಕಾರಪಡುವವರನ್ನು ನಾನು ನನ್ನ ವಚನಗಳಿಂದ ತಿರುಗಿಸಿಬಿಡುವೆನು. ಅವರು ದೃಷ್ಟಾಂತಗಳೆಲ್ಲವನ್ನು ನೋಡಿದರೂ ಸಹ ಅದರಲ್ಲಿ ವಿಶ್ವಾಸವಿಡುವುದಿಲ್ಲ. ಅವರು ಒಳಿತಿನ ಮಾರ್ಗವನ್ನು ಕಂಡರೆ ಅದನ್ನು ತಮ್ಮ ಮಾರ್ಗವಾಗಿ ಸ್ವೀಕರಿಸುವುದಿಲ್ಲ. ಅವರು ಕೆಟ್ಟ ಮಾರ್ಗವನ್ನು ಕಂಡರೆ ಅದನ್ನು ತಮ್ಮ ಮಾರ್ಗವಾಗಿ ಸ್ವೀಕರಿಸುತ್ತಾರೆ. ಅದೇಕೆಂದರೆ, ಅವರು ನಮ್ಮ ವಚನಗಳನ್ನು ನಿಷೇಧಿಸುತ್ತಿದ್ದರು ಮತ್ತು ಅವುಗಳ ಬಗ್ಗೆ ನಿರ್ಲಕ್ಷ್ಯರಾಗಿದ್ದರು.

    ೧೪೭

    وَٱلَّذِينَ كَذَّبُواْ بِـَٔايَٰتِنَا وَلِقَآءِ ٱلۡأٓخِرَةِ حَبِطَتۡ أَعۡمَٰلُهُمۡۚ هَلۡ يُجۡزَوۡنَ إِلَّا مَا كَانُواْ يَعۡمَلُونَ

    ನಮ್ಮ ವಚನಗಳನ್ನು ಮತ್ತು ಪರಲೋಕದ ಭೇಟಿಯನ್ನು ನಿಷೇಧಿಸಿದವರು ಯಾರೋ—ಅವರ ಕರ್ಮಗಳು ನಿಷ್ಫಲವಾಗಿವೆ. ಅವರಿಗೆ ಅವರು ಮಾಡಿದ ಕರ್ಮಗಳ ಪ್ರತಿಫಲವನ್ನಲ್ಲದೆ ಬೇರೇನಾದರೂ ನೀಡಲಾಗುವುದೇ?

    ೧೪೮

    وَٱتَّخَذَ قَوۡمُ مُوسَىٰ مِنۢ بَعۡدِهِۦ مِنۡ حُلِيِّهِمۡ عِجۡلٗا جَسَدٗا لَّهُۥ خُوَارٌۚ أَلَمۡ يَرَوۡاْ أَنَّهُۥ لَا يُكَلِّمُهُمۡ وَلَا يَهۡدِيهِمۡ سَبِيلًاۘ ٱتَّخَذُوهُ وَكَانُواْ ظَٰلِمِينَ

    ಮೂಸಾರ ನಿರ್ಗಮನದ ಬಳಿಕ ಅವರ ಜನರು (ಇಸ್ರಾಯೇಲ್ ಮಕ್ಕಳು) ತಮ್ಮ ಆಭರಣಗಳಿಂದ ಧ್ವನಿ ಹೊರಡಿಸುವ ಒಂದು ಕರುವಿನ ರೂಪವನ್ನು (ದೇವರಾಗಿ) ಮಾಡಿಕೊಂಡರು. ಅದು ಅವರೊಡನೆ ಮಾತನಾಡುವುದಿಲ್ಲ ಮತ್ತು ಅವರಿಗೆ ಸನ್ಮಾರ್ಗ ತೋರಿಸುವುದಿಲ್ಲವೆಂದು ಅವರಿಗೆ ತಿಳಿದಿಲ್ಲವೇ? ಅವರು ಅದನ್ನು (ದೇವರಾಗಿ) ಮಾಡಿಕೊಂಡರು. ಅವರು ಅಕ್ರಮಿಗಳಾಗಿದ್ದರು.

    ೧೪೯

    وَلَمَّا سُقِطَ فِيٓ أَيۡدِيهِمۡ وَرَأَوۡاْ أَنَّهُمۡ قَدۡ ضَلُّواْ قَالُواْ لَئِن لَّمۡ يَرۡحَمۡنَا رَبُّنَا وَيَغۡفِرۡ لَنَا لَنَكُونَنَّ مِنَ ٱلۡخَٰسِرِينَ

    (ನಂತರ ತಮ್ಮ ತಪ್ಪನ್ನು ಅರಿತು) ಅವರು ಮರುಗಿದಾಗ, ಮತ್ತು ಅವರು ದಾರಿತಪ್ಪಿದ್ದಾರೆಂದು ಅವರಿಗೆ ಮನವರಿಕೆಯಾದಾಗ, ಅವರು ಹೇಳಿದರು: “ನಮ್ಮ ಪರಿಪಾಲಕನು (ಅಲ್ಲಾಹು) ನಮಗೆ ದಯೆ ತೋರದಿದ್ದರೆ ಮತ್ತು ನಮ್ಮನ್ನು ಕ್ಷಮಿಸದಿದ್ದರೆ, ನಿಶ್ಚಯವಾಗಿಯೂ ನಾವು ನಷ್ಟಹೊಂದಿದವರಲ್ಲಿ ಸೇರುವೆವು.”

    ೧೫೦

    وَلَمَّا رَجَعَ مُوسَىٰٓ إِلَىٰ قَوۡمِهِۦ غَضۡبَٰنَ أَسِفٗا قَالَ بِئۡسَمَا خَلَفۡتُمُونِي مِنۢ بَعۡدِيٓۖ أَعَجِلۡتُمۡ أَمۡرَ رَبِّكُمۡۖ وَأَلۡقَى ٱلۡأَلۡوَاحَ وَأَخَذَ بِرَأۡسِ أَخِيهِ يَجُرُّهُۥٓ إِلَيۡهِۚ قَالَ ٱبۡنَ أُمَّ إِنَّ ٱلۡقَوۡمَ ٱسۡتَضۡعَفُونِي وَكَادُواْ يَقۡتُلُونَنِي فَلَا تُشۡمِتۡ بِيَ ٱلۡأَعۡدَآءَ وَلَا تَجۡعَلۡنِي مَعَ ٱلۡقَوۡمِ ٱلظَّٰلِمِينَ

    ಮೂಸಾ ತಮ್ಮ ಜನರ ಬಳಿಗೆ ಮರಳಿ ಬಂದಾಗ—ಅವರು ಕೋಪ ಮತ್ತು ಬೇಸರದಿಂದ ಹೇಳಿದರು: “ನನ್ನ ನಿರ್ಗಮನದ ಬಳಿಕ ನೀವು ಮಾಡಿದ ಕೃತ್ಯವು ಅತ್ಯಂತ ಹೇಯವಾಗಿದೆ. ನಿಮ್ಮ ಪರಿಪಾಲಕನ (ಅಲ್ಲಾಹನ) ಆಜ್ಞೆ ಬರುವುದಕ್ಕೆ ಮೊದಲೇ ನೀವು ಅವಸರಪಟ್ಟಿರಾ?” ಅವರು ಹಲಗೆಗಳನ್ನು ಎಸೆದು ಸಹೋದರನ ತಲೆಗೂದಲನ್ನು ಹಿಡಿದು ಎಳೆದರು. ಅವರು (ಸಹೋದರ) ಹೇಳಿದರು: “ನನ್ನ ತಾಯಿಯ ಮಗನೇ! ನಿಶ್ಚಯವಾಗಿಯೂ ಈ ಜನರು ನನ್ನನ್ನು ದುರ್ಬಲನೆಂದು ಪರಿಗಣಿಸಿದರು. ಅವರು ನನ್ನನ್ನು ಇನ್ನೇನು ಕೊಲ್ಲುವುದರಲ್ಲಿದ್ದರು. ನನ್ನ ಮೇಲೆ ಹಲ್ಲೆ ಮಾಡಿ ವೈರಿಗಳಿಗೆ ಸಂತಸವಾಗುವಂತೆ ಮಾಡಬೇಡ. ಅಕ್ರಮಿಗಳ ಸಾಲಿಗೆ ನನ್ನನ್ನು ಕೂಡ ಸೇರಿಸಿ ಬಿಡಬೇಡ.”

    ೧೫೧

    قَالَ رَبِّ ٱغۡفِرۡ لِي وَلِأَخِي وَأَدۡخِلۡنَا فِي رَحۡمَتِكَۖ وَأَنتَ أَرۡحَمُ ٱلرَّٰحِمِينَ

    ಮೂಸಾ ಹೇಳಿದರು: “ಓ ನನ್ನ ಪರಿಪಾಲಕನೇ, ನನ್ನನ್ನು ಮತ್ತು ನನ್ನ ಸಹೋದರನನ್ನು ಕ್ಷಮಿಸು. ನಮ್ಮನ್ನು ನಿನ್ನ ದಯೆಯಲ್ಲಿ ಸೇರಿಸು. ನೀನು ದಯಾಳುಗಳಲ್ಲೇ ಅತ್ಯಧಿಕ ದಯಾಳುವಾಗಿರುವೆ.”

    ೧೫೨

    إِنَّ ٱلَّذِينَ ٱتَّخَذُواْ ٱلۡعِجۡلَ سَيَنَالُهُمۡ غَضَبٞ مِّن رَّبِّهِمۡ وَذِلَّةٞ فِي ٱلۡحَيَوٰةِ ٱلدُّنۡيَاۚ وَكَذَٰلِكَ نَجۡزِي ٱلۡمُفۡتَرِينَ

    ಕರುವನ್ನು ದೇವರಾಗಿ ಸ್ವೀಕರಿಸಿದವರು ಯಾರೋ—ಅವರು ತಮ್ಮ ಪರಿಪಾಲಕನ (ಅಲ್ಲಾಹನ) ಕೋಪವನ್ನು ಮತ್ತು ಇಹಲೋಕ ಜೀವನದಲ್ಲಿ ನಿಂದ್ಯತೆಯನ್ನು (ಬಳುವಳಿಯಾಗಿ) ಪಡೆಯುವರು. ಸುಳ್ಳು ಆರೋಪಿಸುವವರಿಗೆ ನಾವು ಈ ರೀತಿ ಪ್ರತಿಫಲವನ್ನು ನೀಡುವೆವು.

    ೧೫೩

    وَٱلَّذِينَ عَمِلُواْ ٱلسَّيِّـَٔاتِ ثُمَّ تَابُواْ مِنۢ بَعۡدِهَا وَءَامَنُوٓاْ إِنَّ رَبَّكَ مِنۢ بَعۡدِهَا لَغَفُورٞ رَّحِيمٞ

    ಆದರೆ ಪಾಪ ಮಾಡಿದ ಬಳಿಕ ಪಶ್ಚಾತ್ತಾಪಪಡುವವರು ಮತ್ತು ವಿಶ್ವಾಸವಿಡುವವರು ಯಾರೋ—ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಅದರ ನಂತರವೂ ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.

    ೧೫೪

    وَلَمَّا سَكَتَ عَن مُّوسَى ٱلۡغَضَبُ أَخَذَ ٱلۡأَلۡوَاحَۖ وَفِي نُسۡخَتِهَا هُدٗى وَرَحۡمَةٞ لِّلَّذِينَ هُمۡ لِرَبِّهِمۡ يَرۡهَبُونَ

    ಮೂಸಾರ ಕೋಪ ತಣ್ಣಗಾದಾಗ ಅವರು ಹಲಗೆಗಳನ್ನು ಎತ್ತಿಕೊಂಡರು. ಅದರಲ್ಲಿರುವ ಉಲ್ಲೇಖಗಳಲ್ಲಿ ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಭಯಪಡುವ ಜನರಿಗೆ ಸನ್ಮಾರ್ಗ ಮತ್ತು ದಯೆಯಿತ್ತು.

    ೧೫೫

    وَٱخۡتَارَ مُوسَىٰ قَوۡمَهُۥ سَبۡعِينَ رَجُلٗا لِّمِيقَٰتِنَاۖ فَلَمَّآ أَخَذَتۡهُمُ ٱلرَّجۡفَةُ قَالَ رَبِّ لَوۡ شِئۡتَ أَهۡلَكۡتَهُم مِّن قَبۡلُ وَإِيَّٰيَۖ أَتُهۡلِكُنَا بِمَا فَعَلَ ٱلسُّفَهَآءُ مِنَّآۖ إِنۡ هِيَ إِلَّا فِتۡنَتُكَ تُضِلُّ بِهَا مَن تَشَآءُ وَتَهۡدِي مَن تَشَآءُۖ أَنتَ وَلِيُّنَا فَٱغۡفِرۡ لَنَا وَٱرۡحَمۡنَاۖ وَأَنتَ خَيۡرُ ٱلۡغَٰفِرِينَ

    ಮೂಸಾ ತಮ್ಮ ಜನರಲ್ಲಿ ಸೇರಿದ ಎಪ್ಪತ್ತು ಪುರುಷರನ್ನು ನಮ್ಮ ನಿಶ್ಚಿತ ಸಮಯಕ್ಕಾಗಿ ಆರಿಸಿದರು. ಆದರೆ ಭೀಕರ ಕಂಪನವು ಅವರನ್ನು ಹಿಡಿದಾಗ ಮೂಸಾ ಹೇಳಿದರು: “ಓ ನನ್ನ ಪರಿಪಾಲಕನೇ! ನೀನು ಇಚ್ಛಿಸಿದರೆ ಇದಕ್ಕಿಂತ ಮೊದಲೇ ಅವರನ್ನು ಮತ್ತು ನನ್ನನ್ನು ನಾಶ ಮಾಡಬಹುದಿತ್ತು. ನಮ್ಮಲ್ಲಿನ ಅವಿವೇಕಿಗಳು ಮಾಡಿದ ಕೃತ್ಯಕ್ಕೆ ನೀನು ನಮ್ಮನ್ನು ನಾಶ ಮಾಡುವೆಯಾ? ಇದು ನಿನ್ನ ಪರೀಕ್ಷೆಯಾಗಿದೆ. ಇದರ ಮೂಲಕ ನೀನು ಇಚ್ಛಿಸುವವರನ್ನು ನೀನು ದಾರಿತಪ್ಪಿಸುತ್ತೀ ಮತ್ತು ನೀನು ಇಚ್ಛಿಸುವವರಿಗೆ ಸನ್ಮಾರ್ಗ ತೋರಿಸುತ್ತೀ. ನೀನೇ ನಮ್ಮ ರಕ್ಷಕ. ನಮ್ಮನ್ನು ಕ್ಷಮಿಸು ಮತ್ತು ನಮಗೆ ದಯೆ ತೋರು. ನೀನು ಕ್ಷಮಿಸುವವರಲ್ಲಿ ಅತ್ಯುತ್ತಮನಾಗಿರುವೆ.

    ೧೫೬

    ۞ وَٱكۡتُبۡ لَنَا فِي هَٰذِهِ ٱلدُّنۡيَا حَسَنَةٗ وَفِي ٱلۡأٓخِرَةِ إِنَّا هُدۡنَآ إِلَيۡكَۚ قَالَ عَذَابِيٓ أُصِيبُ بِهِۦ مَنۡ أَشَآءُۖ وَرَحۡمَتِي وَسِعَتۡ كُلَّ شَيۡءٖۚ فَسَأَكۡتُبُهَا لِلَّذِينَ يَتَّقُونَ وَيُؤۡتُونَ ٱلزَّكَوٰةَ وَٱلَّذِينَ هُم بِـَٔايَٰتِنَا يُؤۡمِنُونَ

    ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ನಮಗೆ ಒಳಿತನ್ನು ದಾಖಲಿಸು. ನಿಶ್ಚಯವಾಗಿಯೂ ನಾವು ನಿನ್ನ ಕಡೆಗೆ ಮರಳಿದ್ದೇವೆ.” ಅಲ್ಲಾಹು ಹೇಳಿದನು: “ನಾನು ಇಚ್ಛಿಸುವವರನ್ನು ನಾನು ಶಿಕ್ಷಿಸುವೆನು. ಆದರೆ ನನ್ನ ದಯೆ ಎಲ್ಲಾ ವಸ್ತುಗಳನ್ನು ಆವರಿಸಿಕೊಂಡಿದೆ. ದೇವಭಯದಿಂದ ಜೀವಿಸುವ, ಝಕಾತ್ ನೀಡುವ ಮತ್ತು ನಮ್ಮ ವಚನಗಳಲ್ಲಿ ವಿಶ್ವಾಸವಿಡುವ ಜನರಿಗೆ ನಾನು ಅದನ್ನು (ದಯೆಯನ್ನು) ದಾಖಲಿಸುವೆನು.

    ೧೫೭

    ٱلَّذِينَ يَتَّبِعُونَ ٱلرَّسُولَ ٱلنَّبِيَّ ٱلۡأُمِّيَّ ٱلَّذِي يَجِدُونَهُۥ مَكۡتُوبًا عِندَهُمۡ فِي ٱلتَّوۡرَىٰةِ وَٱلۡإِنجِيلِ يَأۡمُرُهُم بِٱلۡمَعۡرُوفِ وَيَنۡهَىٰهُمۡ عَنِ ٱلۡمُنكَرِ وَيُحِلُّ لَهُمُ ٱلطَّيِّبَٰتِ وَيُحَرِّمُ عَلَيۡهِمُ ٱلۡخَبَٰٓئِثَ وَيَضَعُ عَنۡهُمۡ إِصۡرَهُمۡ وَٱلۡأَغۡلَٰلَ ٱلَّتِي كَانَتۡ عَلَيۡهِمۡۚ فَٱلَّذِينَ ءَامَنُواْ بِهِۦ وَعَزَّرُوهُ وَنَصَرُوهُ وَٱتَّبَعُواْ ٱلنُّورَ ٱلَّذِيٓ أُنزِلَ مَعَهُۥٓ أُوْلَٰٓئِكَ هُمُ ٱلۡمُفۡلِحُونَ

    ಅವರು ಯಾರೆಂದರೆ, ತಮ್ಮ ಬಳಿಯಿರುವ ತೌರಾತ್‍ ಮತ್ತು ಇಂಜೀಲ್‍ನಲ್ಲಿ ಉಲ್ಲೇಖವಿರುವುದಾಗಿ ಕಾಣುವ ಅನಕ್ಷರಸ್ಥ ಪ್ರವಾದಿಯಾದ ಸಂದೇಶವಾಹಕರನ್ನು (ಪ್ರವಾದಿ ಮುಹಮ್ಮದರನ್ನು) ಅನುಸರಿಸುವವರು. ಆ ಪ್ರವಾದಿ ಅವರಿಗೆ ಒಳಿತನ್ನು ಆದೇಶಿಸುತ್ತಾರೆ ಮತ್ತು ಕೆಡುಕನ್ನು ವಿರೋಧಿಸುತ್ತಾರೆ. ಅವರಿಗೆ ಉತ್ತಮ ವಸ್ತುಗಳನ್ನು ಅನುಮತಿಸುತ್ತಾರೆ ಮತ್ತು ಕೆಟ್ಟ ವಸ್ತುಗಳನ್ನು ನಿಷೇಧಿಸುತ್ತಾರೆ. ಅವರ ಭಾರವನ್ನು ಕೆಳಗಿಳಿಸಿ ಅವರ ಮೇಲೆ ಹೊರಿಸಲಾಗಿದ್ದ ಸಂಕೋಲೆಗಳನ್ನು ಕಳಚುತ್ತಾರೆ. ಆ ಪ್ರವಾದಿಯಲ್ಲಿ ವಿಶ್ವಾಸವಿಡುವವರು, ಅವರನ್ನು ಬೆಂಬಲಿಸುವವರು, ಸಹಾಯ ಮಾಡುವವರು ಮತ್ತು ಅವರೊಂದಿಗೆ ಅವತೀರ್ಣವಾದ ಬೆಳಕನ್ನು ಅನುಸರಿಸುವವರು ಯಾರೋ—ಅವರೇ ಯಶಸ್ವಿಯಾದವರು.

    ೧೫೮

    قُلۡ يَٰٓأَيُّهَا ٱلنَّاسُ إِنِّي رَسُولُ ٱللَّهِ إِلَيۡكُمۡ جَمِيعًا ٱلَّذِي لَهُۥ مُلۡكُ ٱلسَّمَٰوَٰتِ وَٱلۡأَرۡضِۖ لَآ إِلَٰهَ إِلَّا هُوَ يُحۡيِۦ وَيُمِيتُۖ فَـَٔامِنُواْ بِٱللَّهِ وَرَسُولِهِ ٱلنَّبِيِّ ٱلۡأُمِّيِّ ٱلَّذِي يُؤۡمِنُ بِٱللَّهِ وَكَلِمَٰتِهِۦ وَٱتَّبِعُوهُ لَعَلَّكُمۡ تَهۡتَدُونَ

    ಹೇಳಿರಿ: “ಓ ಮನುಷ್ಯರೇ! ನಿಶ್ಚಯವಾಗಿಯೂ ನಾನು ನಿಮ್ಮೆಲ್ಲರ ಬಳಿಗೆ (ಕಳುಹಿಸಲಾದ) ಅಲ್ಲಾಹನ ಸಂದೇಶವಾಹಕನಾಗಿದ್ದೇನೆ. ಅಂದರೆ, ಭೂಮ್ಯಾಕಾಶಗಳ ಆಧಿಪತ್ಯವು ಯಾರಿಗೆ ಸೇರಿದ್ದೋ ಅವನ (ಸಂದೇಶವಾಹಕ). ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಅವನು ಜೀವ ಮತ್ತು ಮರಣವನ್ನು ನೀಡುತ್ತಾನೆ.” ಆದ್ದರಿಂದ ನೀವು ಅಲ್ಲಾಹನಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ—ಅಂದರೆ ಅಲ್ಲಾಹನಲ್ಲಿ ಮತ್ತು ಅವನ ವಚನಗಳಲ್ಲಿ ವಿಶ್ವಾಸವಿಡುವ ಆ ಅನಕ್ಷರಸ್ಥ ಪ್ರವಾದಿಯಲ್ಲಿ ವಿಶ್ವಾಸವಿಟ್ಟು ಅವರನ್ನು ಅನುಸರಿಸಿರಿ. ನೀವು ಸನ್ಮಾರ್ಗ ಪಡೆಯುವುದಕ್ಕಾಗಿ.

    ೧೫೯

    وَمِن قَوۡمِ مُوسَىٰٓ أُمَّةٞ يَهۡدُونَ بِٱلۡحَقِّ وَبِهِۦ يَعۡدِلُونَ

    ಮೂಸಾರ ಜನರಲ್ಲಿ ಒಂದು ಪಂಗಡವಿದೆ. ಅವರು ಸತ್ಯದ ಆಧಾರದಲ್ಲಿ ಮಾರ್ಗದರ್ಶನ ಮಾಡುತ್ತಾರೆ ಮತ್ತು ಅದರ ಆಧಾರದಲ್ಲಿ ನ್ಯಾಯವನ್ನು ಸ್ಥಾಪಿಸುತ್ತಾರೆ.

    ೧೬೦

    وَقَطَّعۡنَٰهُمُ ٱثۡنَتَيۡ عَشۡرَةَ أَسۡبَاطًا أُمَمٗاۚ وَأَوۡحَيۡنَآ إِلَىٰ مُوسَىٰٓ إِذِ ٱسۡتَسۡقَىٰهُ قَوۡمُهُۥٓ أَنِ ٱضۡرِب بِّعَصَاكَ ٱلۡحَجَرَۖ فَٱنۢبَجَسَتۡ مِنۡهُ ٱثۡنَتَا عَشۡرَةَ عَيۡنٗاۖ قَدۡ عَلِمَ كُلُّ أُنَاسٖ مَّشۡرَبَهُمۡۚ وَظَلَّلۡنَا عَلَيۡهِمُ ٱلۡغَمَٰمَ وَأَنزَلۡنَا عَلَيۡهِمُ ٱلۡمَنَّ وَٱلسَّلۡوَىٰۖ كُلُواْ مِن طَيِّبَٰتِ مَا رَزَقۡنَٰكُمۡۚ وَمَا ظَلَمُونَا وَلَٰكِن كَانُوٓاْ أَنفُسَهُمۡ يَظۡلِمُونَ

    ನಾವು ಅವರನ್ನು ಹನ್ನೆರಡು ವಂಶಗಳ ಗೋತ್ರಗಳನ್ನಾಗಿ ವಿಂಗಡಿಸಿದೆವು. ಮೂಸಾರೊಡನೆ ಅವರ ಜನರು ನೀರಿಗಾಗಿ ಅಂಗಲಾಚಿದಾಗ, “ನಿಮ್ಮ ಕೋಲಿನಿಂದ ಆ ಬಂಡೆಗೆ ಬಡಿಯಿರಿ” ಎಂದು ನಾವು ಅವರಿಗೆ ದೇವವಾಣಿ ನೀಡಿದೆವು. ಆಗ ಅದರಿಂದ ಹನ್ನೆರಡು ಒರತೆಗಳು ಚಿಮ್ಮಿ ಹರಿದವು. ಜನರೆಲ್ಲರೂ ತಮ್ಮ ತಮ್ಮ ನೀರು ಕುಡಿಯುವ ಸ್ಥಳವನ್ನು ತಿಳಿದುಕೊಂಡರು. ನಾವು ಅವರಿಗೆ ಮೋಡದ ನೆರಳನ್ನು ನೀಡಿದೆವು. ಅವರಿಗೆ ಮನ್ನ ಹಾಗೂ ಸಲ್ವಾವನ್ನು ಇಳಿಸಿಕೊಟ್ಟೆವು. “ನಾವು ನಿಮಗೆ ಒದಗಿಸಿದ ಶುದ್ಧ ವಸ್ತುಗಳಿಂದ ತಿನ್ನಿರಿ” (ಎಂದು ನಾವು ಹೇಳಿದೆವು). ಅವರು ನಮ್ಮೊಂದಿಗೆ ಅನ್ಯಾಯ ಮಾಡಿಲ್ಲ; ಆದರೆ ಅವರು ಅವರೊಂದಿಗೇ ಅನ್ಯಾಯ ಮಾಡುತ್ತಿದ್ದರು.

    ೧೬೧

    وَإِذۡ قِيلَ لَهُمُ ٱسۡكُنُواْ هَٰذِهِ ٱلۡقَرۡيَةَ وَكُلُواْ مِنۡهَا حَيۡثُ شِئۡتُمۡ وَقُولُواْ حِطَّةٞ وَٱدۡخُلُواْ ٱلۡبَابَ سُجَّدٗا نَّغۡفِرۡ لَكُمۡ خَطِيٓـَٰٔتِكُمۡۚ سَنَزِيدُ ٱلۡمُحۡسِنِينَ

    ಅವರೊಡನೆ ಹೇಳಲಾದ ಸಂದರ್ಭ: “ನೀವು ಈ ಊರಿನಲ್ಲಿ ವಾಸಿಸಿರಿ. ಇಲ್ಲಿ ನೀವು ಇಚ್ಛಿಸುವ ಎಲ್ಲಾ ಕಡೆಯಿಂದ ಯಥೇಷ್ಟವಾಗಿ ತಿನ್ನಿರಿ. ಸಾಷ್ಟಾಂಗ ಮಾಡುತ್ತಾ ದ್ವಾರವನ್ನು ಪ್ರವೇಶಿಸಿರಿ ಮತ್ತು 'ಹಿತ್ತ' ಎಂದು ಹೇಳಿರಿ. ನಾವು ನಿಮ್ಮ ಪಾಪಗಳನ್ನು ಕ್ಷಮಿಸುವೆವು ಮತ್ತು ಸತ್ಕರ್ಮವೆಸಗುವವರಿಗೆ (ಪ್ರತಿಫಲವನ್ನು) ಹೆಚ್ಚಿಸುವೆವು.”

    ೧೬೨

    فَبَدَّلَ ٱلَّذِينَ ظَلَمُواْ مِنۡهُمۡ قَوۡلًا غَيۡرَ ٱلَّذِي قِيلَ لَهُمۡ فَأَرۡسَلۡنَا عَلَيۡهِمۡ رِجۡزٗا مِّنَ ٱلسَّمَآءِ بِمَا كَانُواْ يَظۡلِمُونَ

    ಆದರೆ ಆ ಅಕ್ರಮಿಗಳು ಅವರಿಗೆ ಹೇಳಲಾದ ಮಾತಿಗೆ ಬದಲು ಬೇರೊಂದು ಮಾತನ್ನು ಹೇಳಿದರು. ಅವರು ಅಕ್ರಮವೆಸಗುತ್ತಿದ್ದ ಕಾರಣ ನಾವು ಅವರ ಮೇಲೆ ಆಕಾಶದಿಂದ ಶಿಕ್ಷೆಯನ್ನು ಇಳಿಸಿದೆವು.

    ೧೬೩

    وَسۡـَٔلۡهُمۡ عَنِ ٱلۡقَرۡيَةِ ٱلَّتِي كَانَتۡ حَاضِرَةَ ٱلۡبَحۡرِ إِذۡ يَعۡدُونَ فِي ٱلسَّبۡتِ إِذۡ تَأۡتِيهِمۡ حِيتَانُهُمۡ يَوۡمَ سَبۡتِهِمۡ شُرَّعٗا وَيَوۡمَ لَا يَسۡبِتُونَ لَا تَأۡتِيهِمۡۚ كَذَٰلِكَ نَبۡلُوهُم بِمَا كَانُواْ يَفۡسُقُونَ

    ಸಮುದ್ರ ತೀರದಲ್ಲಿದ್ದ ಆ ಊರಿನ ಬಗ್ಗೆ ಅವರೊಡನೆ ಕೇಳಿರಿ. ಅವರು ಸಬ್ಬತ್ ದಿನ (ಶನಿವಾರ) ಅತಿರೇಕವೆಸಗಿದ ಸಂದರ್ಭ. ಸಬ್ಬತ್‌ನ ದಿನ (ಶನಿವಾರ) ಮೀನುಗಳು ನೀರಿನ ಮೇಲೆ ತಲೆಯೆತ್ತುತ್ತಾ ಅವರ ಮುಂದೆ ಪ್ರತ್ಯಕ್ಷವಾಗುತ್ತಿದ್ದವು ಮತ್ತು ಸಬ್ಬತ್ ಅಲ್ಲದ ದಿನ ಅವರ ಮುಂದೆ ಪ್ರತ್ಯಕ್ಷವಾಗುತ್ತಿರಲಿಲ್ಲ. ಅವರು ಅವಿಧೇಯತೆ ತೋರುತ್ತಿದ್ದ ಕಾರಣ ನಾವು ಅವರನ್ನು ಈ ರೀತಿಯಲ್ಲಿ ಪರೀಕ್ಷಿಸಿದೆವು.[1]

    [1] ಯಹೂದಿಗಳಿಗೆ ಸಬ್ಬತ್ ದಿನ (ಶನಿವಾರ) ಮೀನು ಹಿಡಿಯುವುದು ನಿಷೇಧಿಸಲಾಗಿತ್ತು. ಆದರೆ ಅಲ್ಲಾಹನ ಪರೀಕ್ಷೆಯಂತೆ ಶನಿವಾರವೇ ನೀರಿನಲ್ಲಿ ಹೆಚ್ಚು ಮೀನುಗಳು ಕಂಡುಬರುತ್ತಿದ್ದವು. ಆದ್ದರಿಂದ ಯಹೂದಿಗಳು ಒಂದು ಉಪಾಯ ಮಾಡಿದರು. ಅವರು ಶನಿವಾರ ಮೀನು ಹಿಡಿಯುವ ಬದಲು ಮೀನಿಗಾಗಿ ಬಲೆ ಹಾಕುತ್ತಿದ್ದರು. ನಂತರ ಅದರಲ್ಲಿ ಸಿಕ್ಕಿದ ಮೀನುಗಳನ್ನು ಭಾನುವಾರ ಹಿಡಿಯುತ್ತಿದ್ದರು. ಇದು ದೇವಾಜ್ಞೆಯ ಸ್ಪಷ್ಟ ಉಲ್ಲಂಘನೆಯಾಗಿತ್ತು.

    ೧೬೪

    وَإِذۡ قَالَتۡ أُمَّةٞ مِّنۡهُمۡ لِمَ تَعِظُونَ قَوۡمًا ٱللَّهُ مُهۡلِكُهُمۡ أَوۡ مُعَذِّبُهُمۡ عَذَابٗا شَدِيدٗاۖ قَالُواْ مَعۡذِرَةً إِلَىٰ رَبِّكُمۡ وَلَعَلَّهُمۡ يَتَّقُونَ

    ಅವರಲ್ಲಿ ಒಂದು ಗುಂಪು ಜನರು ಹೇಳಿದರು: “ನೀವೇಕೆ ಈ ಜನರಿಗೆ ಉಪದೇಶ ಮಾಡುತ್ತೀರಿ. ಅಲ್ಲಾಹು ಅವರನ್ನು ನಾಶ ಮಾಡುವನು ಅಥವಾ ಕಠಿಣವಾಗಿ ಶಿಕ್ಷಿಸುವನು.” ಅವರು ಹೇಳಿದರು: “ನಿಮ್ಮ ಪರಿಪಾಲಕನ (ಅಲ್ಲಾಹನ) ಮುಂದೆ ನಮ್ಮನ್ನು ದೋಷಮುಕ್ತಗೊಳಿಸುವುದಕ್ಕಾಗಿ ಮತ್ತು ಅವರು ದೇವಭಯವುಳ್ಳವರಾಗುವುದಕ್ಕಾಗಿ (ನಾವು ಹೀಗೆ ಮಾಡುತ್ತಿದ್ದೇವೆ).”[1]

    [1] ಯಹೂದಿಗಳಲ್ಲಿದ್ದ ನೀತಿವಂತರಲ್ಲಿ ಕೆಲವರು ದುಷ್ಟರಿಗೆ ಬುದ್ಧಿವಾದ ಹೇಳಿದಾಗ, ಇತರರು ಹೇಳಿದರು: “ಅವರಿಗೆ ಬುದ್ಧಿವಾದ ಹೇಳಲು ಹೋಗಬೇಡಿ. ಅವರು ಹೇಗೂ ಅಲ್ಲಾಹನ ಶಿಕ್ಷೆಗೆ ಪಾತ್ರರಾಗುವವರು. ಅವರಿಗೆ ಉಪದೇಶ ಮಾಡುವುದು ವ್ಯರ್ಥ.” ಆದರೆ ಇದು ಸರಿಯಾದ ನಿಲುವಲ್ಲ. ಒಳಿತನ್ನು ಆದೇಶಿಸುವುದು ಮತ್ತು ಕೆಡುಕನ್ನು ವಿರೋಧಿಸುವುದು ಸತ್ಯವಿಶ್ವಾಸಿಯ ಗುಣವಾಗಿದೆ.

    ೧೬೫

    فَلَمَّا نَسُواْ مَا ذُكِّرُواْ بِهِۦٓ أَنجَيۡنَا ٱلَّذِينَ يَنۡهَوۡنَ عَنِ ٱلسُّوٓءِ وَأَخَذۡنَا ٱلَّذِينَ ظَلَمُواْ بِعَذَابِۭ بَـِٔيسِۭ بِمَا كَانُواْ يَفۡسُقُونَ

    ಅವರಿಗೆ ನೆನಪಿಸಿಕೊಡಲಾದ ವಿಷಯಗಳನ್ನು ಅವರು ಮರೆತು ಬಿಟ್ಟಾಗ, ಕೆಡುಕುಗಳನ್ನು ವಿರೋಧಿಸುತ್ತಿದ್ದ ಜನರನ್ನು ನಾವು ರಕ್ಷಿಸಿದೆವು. ಅಕ್ರಮವೆಸಗಿದ ಜನರನ್ನು ಅವರು ಅವಿಧೇಯತೆ ತೋರುತ್ತಿದ್ದ ಕಾರಣ ನಾವು ಕಠಿಣ ಶಿಕ್ಷೆಯ ಮೂಲಕ ಹಿಡಿದೆವು.

    ೧೬೬

    فَلَمَّا عَتَوۡاْ عَن مَّا نُهُواْ عَنۡهُ قُلۡنَا لَهُمۡ كُونُواْ قِرَدَةً خَٰسِـِٔينَ

    ಅವರಿಗೆ ವಿರೋಧಿಸಲಾದ ವಿಷಯಗಳಲ್ಲಿ ಅವರು ಉದ್ಧಟತನ ತೋರಿದಾಗ ನಾವು ಅವರೊಡನೆ ಹೇಳಿದೆವು: “ನೀವು ನೀಚ ಕಪಿಗಳಾಗಿ ಬಿಡಿ.”

    ೧೬೭

    وَإِذۡ تَأَذَّنَ رَبُّكَ لَيَبۡعَثَنَّ عَلَيۡهِمۡ إِلَىٰ يَوۡمِ ٱلۡقِيَٰمَةِ مَن يَسُومُهُمۡ سُوٓءَ ٱلۡعَذَابِۗ إِنَّ رَبَّكَ لَسَرِيعُ ٱلۡعِقَابِ وَإِنَّهُۥ لَغَفُورٞ رَّحِيمٞ

    “ಪುನರುತ್ಥಾನ ದಿನದ ತನಕ ಅವರಿಗೆ (ಇಸ್ರಾಯೇಲ್ ಮಕ್ಕಳಿಗೆ) ಕಠೋರ ಹಿಂಸೆ ನೀಡುವ ಜನರನ್ನು ಅವರ ವಿರುದ್ಧ ಕಳುಹಿಸುವೆನು” ಎಂದು ನಿಮ್ಮ ಪರಿಪಾಲಕನು (ಅಲ್ಲಾಹು) ಘೋಷಿಸಿದ ಸಂದರ್ಭ. ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಅತಿವೇಗವಾಗಿ ಶಿಕ್ಷೆ ನೀಡುತ್ತಾನೆ. ನಿಶ್ಚಯವಾಗಿಯೂ ಅವನು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.

    ೧೬೮

    وَقَطَّعۡنَٰهُمۡ فِي ٱلۡأَرۡضِ أُمَمٗاۖ مِّنۡهُمُ ٱلصَّٰلِحُونَ وَمِنۡهُمۡ دُونَ ذَٰلِكَۖ وَبَلَوۡنَٰهُم بِٱلۡحَسَنَٰتِ وَٱلسَّيِّـَٔاتِ لَعَلَّهُمۡ يَرۡجِعُونَ

    ನಾವು ಅವರನ್ನು ಭೂಮಿಯಲ್ಲಿ ಹಲವು ಗುಂಪುಗಳನ್ನಾಗಿ ವಿಂಗಡಿಸಿದೆವು. ಅವರಲ್ಲಿ ನೀತಿವಂತರಿದ್ದಾರೆ. ಅಲ್ಲದವರೂ ಇದ್ದಾರೆ. ನಾವು ಅವರನ್ನು ಒಳಿತು ಮತ್ತು ಕೆಡುಕುಗಳಿಂದ ಪರೀಕ್ಷಿಸಿದೆವು. ಅವರು (ವಿಧೇಯತೆಗೆ) ಮರಳುವುದಕ್ಕಾಗಿ.

    ೧೬೯

    فَخَلَفَ مِنۢ بَعۡدِهِمۡ خَلۡفٞ وَرِثُواْ ٱلۡكِتَٰبَ يَأۡخُذُونَ عَرَضَ هَٰذَا ٱلۡأَدۡنَىٰ وَيَقُولُونَ سَيُغۡفَرُ لَنَا وَإِن يَأۡتِهِمۡ عَرَضٞ مِّثۡلُهُۥ يَأۡخُذُوهُۚ أَلَمۡ يُؤۡخَذۡ عَلَيۡهِم مِّيثَٰقُ ٱلۡكِتَٰبِ أَن لَّا يَقُولُواْ عَلَى ٱللَّهِ إِلَّا ٱلۡحَقَّ وَدَرَسُواْ مَا فِيهِۗ وَٱلدَّارُ ٱلۡأٓخِرَةُ خَيۡرٞ لِّلَّذِينَ يَتَّقُونَۚ أَفَلَا تَعۡقِلُونَ

    ನಂತರ ಅವರ ಹಿಂದೆಯೇ ಅವರ ನಂತರದವರು ಬಂದರು. ಅವರು ಗ್ರಂಥದ ಉತ್ತರಾಧಿಕಾರವನ್ನು ವಹಿಸಿಕೊಂಡರು. ಅವರು ಇಹಲೋಕ ಜೀವನದ ಕೀಳು ವಸ್ತುಗಳನ್ನು ಪಡೆಯುತ್ತಾರೆ. ಅವರು ಹೇಳುತ್ತಾರೆ: “ನಮ್ಮನ್ನು ಕ್ಷಮಿಸಲಾಗುತ್ತದೆ.”[1] ಅದರಂತಹ ಬೇರೆ ವಸ್ತುಗಳು ದೊರಕಿದರೂ ಅವರು ಅದನ್ನು ಪಡೆಯುತ್ತಾರೆ. ಅಲ್ಲಾಹನ ಮೇಲೆ ಸತ್ಯವಲ್ಲದೆ ಬೇರೇನೂ ಹೇಳುವುದಿಲ್ಲ ಮತ್ತು ಗ್ರಂಥವನ್ನು ಅಧ್ಯಯನ ಮಾಡಿ (ಅದರಂತೆ ನಡೆಯುತ್ತೇವೆ) ಎಂದು ಅವರಿಂದ ಗ್ರಂಥದ ಮೂಲಕ ಕರಾರು ಪಡೆಯಲಾಗಿಲ್ಲವೇ? ದೇವಭಯವುಳ್ಳವರಿಗೆ ಪರಲೋಕ ಜೀವನವೇ ಉತ್ತಮ. ನೀವು ಅರ್ಥಮಾಡಿಕೊಳ್ಳುವುದಿಲ್ಲವೇ?

    [1] ಯಹೂದಿಗಳು ಸ್ವಯಂ ಅವರನ್ನು ದೇವರ ಮಕ್ಕಳು ಮತ್ತು ಶ್ರೇಷ್ಠ ಜನರೆಂದು ನಂಬುತ್ತಾರೆ. ಆದ್ದರಿಂದ ಅವರು ಏನೇ ತಪ್ಪು ಮಾಡಿದರೂ ಅಲ್ಲಾಹು ಅವರನ್ನು ಕ್ಷಮಿಸುತ್ತಾನೆಂಬ ಭಾವನೆ ಅವರಲ್ಲಿದೆ.

    ೧೭೦

    وَٱلَّذِينَ يُمَسِّكُونَ بِٱلۡكِتَٰبِ وَأَقَامُواْ ٱلصَّلَوٰةَ إِنَّا لَا نُضِيعُ أَجۡرَ ٱلۡمُصۡلِحِينَ

    ಗ್ರಂಥವನ್ನು ಬಿಗಿಯಾಗಿ ಹಿಡಿಯುವವರು ಮತ್ತು ನಮಾಝನ್ನು ಸಂಸ್ಥಾಪಿಸುವವರು ಯಾರೋ— ನಿಶ್ಚಯವಾಗಿಯೂ ಸುಧಾರಣೆ ಮಾಡುವವರ ಪ್ರತಿಫಲವನ್ನು ನಾವು ವ್ಯರ್ಥಗೊಳಿಸುವುದಿಲ್ಲ.

    ೧೭೧

    ۞ وَإِذۡ نَتَقۡنَا ٱلۡجَبَلَ فَوۡقَهُمۡ كَأَنَّهُۥ ظُلَّةٞ وَظَنُّوٓاْ أَنَّهُۥ وَاقِعُۢ بِهِمۡ خُذُواْ مَآ ءَاتَيۡنَٰكُم بِقُوَّةٖ وَٱذۡكُرُواْ مَا فِيهِ لَعَلَّكُمۡ تَتَّقُونَ

    ನಾವು ಪರ್ವತವನ್ನು ಅವರ ಮೇಲೆ ಕೊಡೆಯಂತೆ ಎತ್ತಿ ಹಿಡಿದ ಸಂದರ್ಭ. ಅದು ಅವರ ಮೇಲೆ ಬೀಳಬಹುದೆಂದು ಅವರಿಗೆ ಖಾತ್ರಿಯಾಯಿತು. (ನಾವು ಹೇಳಿದೆವು): “ನಾವು ನಿಮಗೆ ನೀಡಿದ್ದನ್ನು ಬಿಗಿಯಾಗಿ ಹಿಡಿಯಿರಿ ಮತ್ತು ಅದರಲ್ಲಿರುವುದನ್ನು ನೆನಪಿಟ್ಟುಕೊಳ್ಳಿ. ನೀವು ದೇವಭಯವುಳ್ಳವರಾಗುವುದಕ್ಕಾಗಿ.”

    ೧೭೨

    وَإِذۡ أَخَذَ رَبُّكَ مِنۢ بَنِيٓ ءَادَمَ مِن ظُهُورِهِمۡ ذُرِّيَّتَهُمۡ وَأَشۡهَدَهُمۡ عَلَىٰٓ أَنفُسِهِمۡ أَلَسۡتُ بِرَبِّكُمۡۖ قَالُواْ بَلَىٰ شَهِدۡنَآۚ أَن تَقُولُواْ يَوۡمَ ٱلۡقِيَٰمَةِ إِنَّا كُنَّا عَنۡ هَٰذَا غَٰفِلِينَ

    ನಿಮ್ಮ ಪರಿಪಾಲಕನು (ಅಲ್ಲಾಹು) ಆದಮರ ಮಕ್ಕಳಿಂದ—ಅವರ ಬೆನ್ನುಗಳಿಂದ ಅವರ ಸಂತಾನವನ್ನು ಹೊರತೆಗೆದು, ಅವರ ವಿಷಯದಲ್ಲಿ ಅವರನ್ನೇ ಸಾಕ್ಷಿ ನಿಲ್ಲಿಸಿದ ಸಂದರ್ಭ. (ಅಲ್ಲಾಹು ಕೇಳಿದನು): “ನಾನು ನಿಮ್ಮ ಪರಿಪಾಲಕನಲ್ಲವೇ?” ಅವರು ಉತ್ತರಿಸಿದರು: “ಹೌದು, ನಾವು ಸಾಕ್ಷಿಗಳಾಗಿದ್ದೇವೆ.” ನಿಶ್ಚಯವಾಗಿಯೂ ನಮಗೆ ಇದರ ಬಗ್ಗೆ ಮಾಹಿತಿಯೇ ಇರಲಿಲ್ಲ ಎಂದು ಪುನರುತ್ಥಾನ ದಿನ ನೀವು ಹೇಳಬಾರದೆಂದು (ಹೀಗೆ ಮಾಡಲಾಗಿದೆ).

    ೧೭೩

    أَوۡ تَقُولُوٓاْ إِنَّمَآ أَشۡرَكَ ءَابَآؤُنَا مِن قَبۡلُ وَكُنَّا ذُرِّيَّةٗ مِّنۢ بَعۡدِهِمۡۖ أَفَتُهۡلِكُنَا بِمَا فَعَلَ ٱلۡمُبۡطِلُونَ

    ಅಥವಾ, “ಈ ಹಿಂದೆ ನಮ್ಮ ಪೂರ್ವಜರು ಅಲ್ಲಾಹನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡಿದ್ದರು. ನಾವು ಅವರ ನಂತರದ ಸಂತಾನವಾಗಿದ್ದೇವೆ. ಆ ಮಿಥ್ಯವಾದಿಗಳು ಮಾಡಿದ ತಪ್ಪಿಗಾಗಿ ನೀನು ನಮ್ಮನ್ನು ನಾಶ ಮಾಡುವೆಯಾ?” ಎಂದು ನೀವು ಹೇಳಬಾರದೆಂದು (ಹೀಗೆ ಮಾಡಲಾಗಿದೆ).

    ೧೭೪

    وَكَذَٰلِكَ نُفَصِّلُ ٱلۡأٓيَٰتِ وَلَعَلَّهُمۡ يَرۡجِعُونَ

    ಈ ರೀತಿ ನಾವು ವಚನಗಳನ್ನು ವಿವರಿಸಿಕೊಡುತ್ತೇವೆ. ಅವರು (ಸತ್ಯಕ್ಕೆ) ಮರಳುವುದಕ್ಕಾಗಿ.

    ೧೭೫

    وَٱتۡلُ عَلَيۡهِمۡ نَبَأَ ٱلَّذِيٓ ءَاتَيۡنَٰهُ ءَايَٰتِنَا فَٱنسَلَخَ مِنۡهَا فَأَتۡبَعَهُ ٱلشَّيۡطَٰنُ فَكَانَ مِنَ ٱلۡغَاوِينَ

    ಅವರಿಗೆ ಒಬ್ಬ ವ್ಯಕ್ತಿಯ ಸಮಾಚಾರವನ್ನು ತಿಳಿಸಿಕೊಡಿ. ನಾವು ಅವನಿಗೆ ನಮ್ಮ ವಚನಗಳ ಜ್ಞಾನವನ್ನು ನೀಡಿದೆವು. ಆದರೆ ಅವನು ಅದರಿಂದ ನುಣುಚಿಕೊಂಡನು. ಆಗ ಶೈತಾನನು ಅವನನ್ನು ಹಿಂಬಾಲಿಸಿದನು ಮತ್ತು ಅವನು ದುರ್ಮಾರ್ಗಿಗಳಲ್ಲಿ ಸೇರಿಬಿಟ್ಟನು.

    ೧೭೬

    وَلَوۡ شِئۡنَا لَرَفَعۡنَٰهُ بِهَا وَلَٰكِنَّهُۥٓ أَخۡلَدَ إِلَى ٱلۡأَرۡضِ وَٱتَّبَعَ هَوَىٰهُۚ فَمَثَلُهُۥ كَمَثَلِ ٱلۡكَلۡبِ إِن تَحۡمِلۡ عَلَيۡهِ يَلۡهَثۡ أَوۡ تَتۡرُكۡهُ يَلۡهَثۚ ذَّٰلِكَ مَثَلُ ٱلۡقَوۡمِ ٱلَّذِينَ كَذَّبُواْ بِـَٔايَٰتِنَاۚ فَٱقۡصُصِ ٱلۡقَصَصَ لَعَلَّهُمۡ يَتَفَكَّرُونَ

    ನಾವು ಇಚ್ಛಿಸುತ್ತಿದ್ದರೆ ಆ ಜ್ಞಾನದ ಮೂಲಕ ನಾವು ಅವನನ್ನು ಉನ್ನತಿಗೇರಿಸುತ್ತಿದ್ದೆವು. ಆದರೆ ಅವನು ಭೂಮಿಗೆ ಅಂಟಿಕೊಂಡು ಸ್ವೇಚ್ಛೆಗಳನ್ನು ಹಿಂಬಾಲಿಸಿದನು. ಅವನ ಉದಾಹರಣೆಯು ಒಂದು ನಾಯಿಯಂತೆ. ನೀವು ಅದನ್ನು ಓಡಿಸಿದರೂ ಅದು ನಾಲಗೆ ಹೊರಚಾಚುತ್ತದೆ. ನೀವು ಅದನ್ನು ಅದರ ಪಾಡಿಗೆ ಬಿಟ್ಟರೂ ಅದು ನಾಲಗೆ ಹೊರಚಾಚುತ್ತದೆ. ಇದು ನಮ್ಮ ವಚನಗಳನ್ನು ನಿಷೇಧಿಸಿದವರ ಉದಾಹರಣೆಯಾಗಿದೆ. ಅವರಿಗೆ ಈ ಕಥೆಗಳನ್ನು ಹೇಳಿಕೊಡಿ. ಅವರು ಆಲೋಚಿಸುವುದಕ್ಕಾಗಿ.

    ೧೭೭

    سَآءَ مَثَلًا ٱلۡقَوۡمُ ٱلَّذِينَ كَذَّبُواْ بِـَٔايَٰتِنَا وَأَنفُسَهُمۡ كَانُواْ يَظۡلِمُونَ

    ನಮ್ಮ ವಚನಗಳನ್ನು ನಿಷೇಧಿಸಿದ ಮತ್ತು ಸ್ವಯಂ ಅಕ್ರಮವೆಸಗಿದ ಜನರ ಉದಾಹರಣೆಯು ಬಹಳ ನಿಕೃಷ್ಟವಾಗಿದೆ.

    ೧೭೮

    مَن يَهۡدِ ٱللَّهُ فَهُوَ ٱلۡمُهۡتَدِيۖ وَمَن يُضۡلِلۡ فَأُوْلَٰٓئِكَ هُمُ ٱلۡخَٰسِرُونَ

    ಅಲ್ಲಾಹು ಯಾರಿಗೆ ಸನ್ಮಾರ್ಗ ತೋರಿಸುತ್ತಾನೋ ಅವನು ಸನ್ಮಾರ್ಗವನ್ನು ಪಡೆಯುತ್ತಾನೆ. ಅವನು ಯಾರನ್ನು ದಾರಿತಪ್ಪಿಸುತ್ತಾನೋ ಅವರೇ ನಷ್ಟಹೊಂದಿದವರು.

    ೧೭೯

    وَلَقَدۡ ذَرَأۡنَا لِجَهَنَّمَ كَثِيرٗا مِّنَ ٱلۡجِنِّ وَٱلۡإِنسِۖ لَهُمۡ قُلُوبٞ لَّا يَفۡقَهُونَ بِهَا وَلَهُمۡ أَعۡيُنٞ لَّا يُبۡصِرُونَ بِهَا وَلَهُمۡ ءَاذَانٞ لَّا يَسۡمَعُونَ بِهَآۚ أُوْلَٰٓئِكَ كَٱلۡأَنۡعَٰمِ بَلۡ هُمۡ أَضَلُّۚ أُوْلَٰٓئِكَ هُمُ ٱلۡغَٰفِلُونَ

    ಜಿನ್ನ್ ಮತ್ತು ಮನುಷ್ಯರಲ್ಲಿ ಸೇರಿದ ಬಹುಪಾಲನ್ನು ನಾವು ನರಕಕ್ಕಾಗಿ ಸೃಷ್ಟಿಸಿದ್ದೇವೆ. ಅವರಿಗೆ ಹೃದಯಗಳಿವೆ; ಆದರೆ ಅವರು ಅವುಗಳ ಮೂಲಕ ಅರ್ಥಮಾಡಿಕೊಳ್ಳುವುದಿಲ್ಲ. ಅವರಿಗೆ ಕಣ್ಣುಗಳಿವೆ; ಆದರೆ ಅವರು ಅವುಗಳ ಮೂಲಕ ನೋಡುವುದಿಲ್ಲ. ಅವರಿಗೆ ಕಿವಿಗಳಿವೆ; ಆದರೆ ಅವರು ಅವುಗಳ ಮೂಲಕ ಕೇಳುವುದಿಲ್ಲ. ಅವರು ಜಾನುವಾರುಗಳಂತೆ. ಅಲ್ಲ, ಅವರು ಅತ್ಯಧಿಕ ದಾರಿತಪ್ಪಿದವರು. ಅವರೇ ನಿರ್ಲಕ್ಷ್ಯದಲ್ಲಿರುವವರು.

    ೧೮೦

    وَلِلَّهِ ٱلۡأَسۡمَآءُ ٱلۡحُسۡنَىٰ فَٱدۡعُوهُ بِهَاۖ وَذَرُواْ ٱلَّذِينَ يُلۡحِدُونَ فِيٓ أَسۡمَٰٓئِهِۦۚ سَيُجۡزَوۡنَ مَا كَانُواْ يَعۡمَلُونَ

    ಅಲ್ಲಾಹನಿಗೆ ಅತಿಸುಂದರವಾದ ಹೆಸರುಗಳಿವೆ. ಆದ್ದರಿಂದ ಅವುಗಳ ಮೂಲಕ ಅವನನ್ನು ಕರೆದು ಪ್ರಾರ್ಥಿಸಿರಿ. ಅವನ ಹೆಸರುಗಳ ವಿಷಯದಲ್ಲಿ ವಾಮಮಾರ್ಗವನ್ನು ತುಳಿಯುವವರನ್ನು ಬಿಟ್ಟುಬಿಡಿ. ಅವರು ಮಾಡಿದ ಕೃತ್ಯಗಳ ಪ್ರತಿಫಲವನ್ನು ಅವರಿಗೆ ಸದ್ಯವೇ ನೀಡಲಾಗುವುದು.

    ೧೮೧

    وَمِمَّنۡ خَلَقۡنَآ أُمَّةٞ يَهۡدُونَ بِٱلۡحَقِّ وَبِهِۦ يَعۡدِلُونَ

    ನಾವು ಸೃಷ್ಟಿಸಿದ ಸೃಷ್ಟಿಗಳಲ್ಲಿ ಸತ್ಯದ ಆಧಾರದಲ್ಲಿ ಮಾರ್ಗದರ್ಶನ ಮಾಡುವ ಮತ್ತು ಅದರ ಆಧಾರದಲ್ಲಿ ನ್ಯಾಯ ಸ್ಥಾಪಿಸುವ ಒಂದು ಸಮುದಾಯವಿದೆ.

    ೧೮೨

    وَٱلَّذِينَ كَذَّبُواْ بِـَٔايَٰتِنَا سَنَسۡتَدۡرِجُهُم مِّنۡ حَيۡثُ لَا يَعۡلَمُونَ

    ನಮ್ಮ ವಚನಗಳನ್ನು ನಿಷೇಧಿಸಿದವರು ಯಾರೋ—ಅವರು ತಿಳಿಯದ ರೀತಿಯಲ್ಲಿ ನಾವು ಅವರನ್ನು ಹಂತ ಹಂತವಾಗಿ ಆವರಿಸಿಕೊಳ್ಳುವೆವು.

    ೧೮೩

    وَأُمۡلِي لَهُمۡۚ إِنَّ كَيۡدِي مَتِينٌ

    ನಾನು ಅವರಿಗೆ ಕಾಲಾವಕಾಶ ನೀಡುವೆನು. ನಿಶ್ಚಯವಾಗಿಯೂ ನನ್ನ ತಂತ್ರಗಾರಿಕೆಯು ಬಲಿಷ್ಠವಾಗಿದೆ.

    ೧೮೪

    أَوَلَمۡ يَتَفَكَّرُواْۗ مَا بِصَاحِبِهِم مِّن جِنَّةٍۚ إِنۡ هُوَ إِلَّا نَذِيرٞ مُّبِينٌ

    ಅವರು ಆಲೋಚಿಸುವುದಿಲ್ಲವೇ? ಅವರ ಸಂಗಡಿಗನಿಗೆ (ಮುಹಮ್ಮದರಿಗೆ) ಯಾವುದೇ ರೀತಿಯ ಬುದ್ಧಿಭ್ರಮಣೆಯಿಲ್ಲ. ಅವರೊಬ್ಬ ಸ್ಪಷ್ಟ ಮುನ್ನೆಚ್ಚರಿಕೆಗಾರ ಮಾತ್ರವಾಗಿದ್ದಾರೆ.

    ೧೮೫

    أَوَلَمۡ يَنظُرُواْ فِي مَلَكُوتِ ٱلسَّمَٰوَٰتِ وَٱلۡأَرۡضِ وَمَا خَلَقَ ٱللَّهُ مِن شَيۡءٖ وَأَنۡ عَسَىٰٓ أَن يَكُونَ قَدِ ٱقۡتَرَبَ أَجَلُهُمۡۖ فَبِأَيِّ حَدِيثِۭ بَعۡدَهُۥ يُؤۡمِنُونَ

    ಭೂಮ್ಯಾಕಾಶಗಳ ಸಾಮ್ರಾಜ್ಯಗಳನ್ನು ಮತ್ತು ಅಲ್ಲಾಹು ಸೃಷ್ಟಿಸಿದ ಎಲ್ಲಾ ವಸ್ತುಗಳನ್ನು ಹಾಗೂ ಅವರ ಜೀವಿತಾವಧಿ ಸಮೀಪಿಸಿರಬಹುದೆಂದು ಅವರು ಆಲೋಚಿಸಿ ನೋಡುವುದಿಲ್ಲವೇ? ಇದರ (ಕುರ್‌ಆನಿನ) ಬಳಿಕ ಅವರು ಯಾವ ಸಮಾಚಾರದಲ್ಲಿ ವಿಶ್ವಾಸವಿಡುವರು?

    ೧೮೬

    مَن يُضۡلِلِ ٱللَّهُ فَلَا هَادِيَ لَهُۥۚ وَيَذَرُهُمۡ فِي طُغۡيَٰنِهِمۡ يَعۡمَهُونَ

    ಅಲ್ಲಾಹು ಯಾರನ್ನು ದಾರಿತಪ್ಪಿಸುತ್ತಾನೋ ಅವನಿಗೆ ಸನ್ಮಾರ್ಗ ತೋರಿಸಲು ಯಾರಿಗೂ ಸಾಧ್ಯವಿಲ್ಲ. ಅವರು ಅವರ ಅತಿರೇಕಗಳಲ್ಲಿ ಅಂಧವಾಗಿ ವಿಹರಿಸುವಂತೆ ಅವನು ಅವರನ್ನು ಬಿಟ್ಟುಬಿಡುವನು.

    ೧೮೭

    يَسۡـَٔلُونَكَ عَنِ ٱلسَّاعَةِ أَيَّانَ مُرۡسَىٰهَاۖ قُلۡ إِنَّمَا عِلۡمُهَا عِندَ رَبِّيۖ لَا يُجَلِّيهَا لِوَقۡتِهَآ إِلَّا هُوَۚ ثَقُلَتۡ فِي ٱلسَّمَٰوَٰتِ وَٱلۡأَرۡضِۚ لَا تَأۡتِيكُمۡ إِلَّا بَغۡتَةٗۗ يَسۡـَٔلُونَكَ كَأَنَّكَ حَفِيٌّ عَنۡهَاۖ قُلۡ إِنَّمَا عِلۡمُهَا عِندَ ٱللَّهِ وَلَٰكِنَّ أَكۡثَرَ ٱلنَّاسِ لَا يَعۡلَمُونَ

    ಅವರು ಅಂತಿಮದಿನದ ಬಗ್ಗೆ—“ಅದು ಯಾವಾಗ ಸಂಭವಿಸುತ್ತದೆ” ಎಂದು ಕೇಳುತ್ತಾರೆ. ಹೇಳಿರಿ: “ಅದರ ಜ್ಞಾನವಿರುವುದು ನನ್ನ ಪರಿಪಾಲಕನಿಗೆ (ಅಲ್ಲಾಹನಿಗೆ) ಮಾತ್ರ. ಅದರ ಸಮಯದಲ್ಲಿ ಅವನಲ್ಲದೆ ಯಾರೂ ಅದನ್ನು ಪ್ರಕಟಗೊಳಿಸುವುದಿಲ್ಲ. ಭೂಮ್ಯಾಕಾಶಗಳಲ್ಲಿ ಅದು ಅತ್ಯಂತ ಭಾರವಿರುವ (ಭಯಾನಕ) ಸಂಗತಿಯಾಗಿದೆ. ಅದು ಅನಿರೀಕ್ಷಿತವಾಗಿಯೇ ನಿಮ್ಮ ಬಳಿಗೆ ಬರುತ್ತದೆ.” ನಿಮಗೆ ಅದರ ಬಗ್ಗೆ ಜ್ಞಾನವಿದೆಯೆಂಬ ಭಾವನೆಯಿಂದ ಅವರು ನಿಮ್ಮಲ್ಲಿ ಕೇಳುತ್ತಾರೆ. ಹೇಳಿರಿ: “ಅದರ ಜ್ಞಾನವಿರುವುದು ಅಲ್ಲಾಹನಿಗೆ ಮಾತ್ರ.” ಆದರೆ ಜನರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ.

    ೧೮೮

    قُل لَّآ أَمۡلِكُ لِنَفۡسِي نَفۡعٗا وَلَا ضَرًّا إِلَّا مَا شَآءَ ٱللَّهُۚ وَلَوۡ كُنتُ أَعۡلَمُ ٱلۡغَيۡبَ لَٱسۡتَكۡثَرۡتُ مِنَ ٱلۡخَيۡرِ وَمَا مَسَّنِيَ ٱلسُّوٓءُۚ إِنۡ أَنَا۠ إِلَّا نَذِيرٞ وَبَشِيرٞ لِّقَوۡمٖ يُؤۡمِنُونَ

    ಹೇಳಿರಿ: “ನಾನು ನನಗಾಗಿ ಯಾವುದೇ ಲಾಭ ಅಥವಾ ತೊಂದರೆ ಮಾಡುವ ಅಧಿಕಾರವನ್ನು ಹೊಂದಿಲ್ಲ—ಅಲ್ಲಾಹು ಏನು ಇಚ್ಛಿಸುತ್ತಾನೋ ಅದರ ಹೊರತು. ನನಗೆ ಅದೃಶ್ಯ ಜ್ಞಾನವಿರುತ್ತಿದ್ದರೆ, ನಾನು ಹೇರಳ ಒಳಿತುಗಳನ್ನು ಮಾಡುತ್ತಿದ್ದೆ. ಕೆಡುಕು ನನ್ನನ್ನು ಸ್ಪರ್ಶಿಸುತ್ತಲೇ ಇರಲಿಲ್ಲ. ವಿಶ್ವಾಸವಿಡುವ ಜನರಿಗೆ ನಾನೊಬ್ಬ ಮುನ್ನೆಚ್ಚರಿಕೆಗಾರ ಮತ್ತು ಸುವಾರ್ತೆ ನೀಡುವವ ಮಾತ್ರವಾಗಿದ್ದೇನೆ.”

    ೧೮೯

    ۞ هُوَ ٱلَّذِي خَلَقَكُم مِّن نَّفۡسٖ وَٰحِدَةٖ وَجَعَلَ مِنۡهَا زَوۡجَهَا لِيَسۡكُنَ إِلَيۡهَاۖ فَلَمَّا تَغَشَّىٰهَا حَمَلَتۡ حَمۡلًا خَفِيفٗا فَمَرَّتۡ بِهِۦۖ فَلَمَّآ أَثۡقَلَت دَّعَوَا ٱللَّهَ رَبَّهُمَا لَئِنۡ ءَاتَيۡتَنَا صَٰلِحٗا لَّنَكُونَنَّ مِنَ ٱلشَّٰكِرِينَ

    ನಿಮ್ಮನ್ನು ಒಂದೇ ದೇಹದಿಂದ ಸೃಷ್ಟಿಸಿದವನು ಅವನೇ. ನಂತರ ಅವನಿಂದ ಅವನ ಪತ್ನಿಯನ್ನು ಸೃಷ್ಟಿಸಿದನು—ಅವನು ಅವಳಿಂದ ನೆಮ್ಮದಿ ಪಡೆಯುವುದಕ್ಕಾಗಿ. ನಂತರ ಅವನು ಅವಳೊಡನೆ ಸೇರಿದಾಗ ಅವಳು ಹಗುರವಾದ ಗರ್ಭ ಧರಿಸಿ, ನಂತರ ಅದರೊಂದಿಗೆ ಮುಂದುವರಿದಳು. ಅವಳ ಭಾರವು ಹೆಚ್ಚಾದಾಗ (ಹೆರಿಗೆ ನೋವು ಗೋಚರಿಸಿದಾಗ) ಅವರಿಬ್ಬರೂ ಅವರ ಪರಿಪಾಲಕನಾದ ಅಲ್ಲಾಹನನ್ನು ಕರೆದು ಪ್ರಾರ್ಥಿಸಿದರು: “ನೀನು ನಮಗೆ ನೀತಿವಂತ ಮಗುವನ್ನು ನೀಡಿದರೆ ನಾವು ಖಂಡಿತ ನಿನಗೆ ಆಭಾರಿಯಾಗುವೆವು.”

    ೧೯೦

    فَلَمَّآ ءَاتَىٰهُمَا صَٰلِحٗا جَعَلَا لَهُۥ شُرَكَآءَ فِيمَآ ءَاتَىٰهُمَاۚ فَتَعَٰلَى ٱللَّهُ عَمَّا يُشۡرِكُونَ

    ಅವನು ಅವರಿಗೆ ನೀತಿವಂತ ಮಗುವನ್ನು ನೀಡಿದಾಗ, ಅವನು ಅವರಿಗೆ ನೀಡಿದ್ದರಲ್ಲಿಯೇ ಅವರು ಅವನಿಗೆ ಸಹಭಾಗಿಗಳನ್ನು ನಿಶ್ಚಯಿಸಿದರು. ಅವರು ಮಾಡುವ ಸಹಭಾಗಿತ್ವದಿಂದ ಅಲ್ಲಾಹು ಎಷ್ಟೋ ಉನ್ನತನಾಗಿದ್ದಾನೆ.

    ೧೯೧

    أَيُشۡرِكُونَ مَا لَا يَخۡلُقُ شَيۡـٔٗا وَهُمۡ يُخۡلَقُونَ

    ಯಾವುದೇ ವಸ್ತುವನ್ನು ಸೃಷ್ಟಿಸದವರನ್ನೋ ಅವರು ಅಲ್ಲಾಹನಿಗೆ ಸಹಭಾಗಿಯನ್ನಾಗಿ ಮಾಡುವುದು? (ವಾಸ್ತವವಾಗಿ) ಅವರೇ ಸೃಷ್ಟಿಗಳಾಗಿದ್ದಾರೆ.

    ೧೯೨

    وَلَا يَسۡتَطِيعُونَ لَهُمۡ نَصۡرٗا وَلَآ أَنفُسَهُمۡ يَنصُرُونَ

    ಅವರಿಗೆ ಯಾವುದೇ ಸಹಾಯವನ್ನು ಮಾಡಲು ಆ ದೇವರುಗಳಿಗೆ ಸಾಧ್ಯವಿಲ್ಲ. ಸ್ವಯಂ ಅವರಿಗೂ ಅವರು ಸಹಾಯ ಮಾಡುವುದಿಲ್ಲ.

    ೧೯೩

    وَإِن تَدۡعُوهُمۡ إِلَى ٱلۡهُدَىٰ لَا يَتَّبِعُوكُمۡۚ سَوَآءٌ عَلَيۡكُمۡ أَدَعَوۡتُمُوهُمۡ أَمۡ أَنتُمۡ صَٰمِتُونَ

    ನೀವು ಅವರನ್ನು ಸನ್ಮಾರ್ಗಕ್ಕೆ ಕರೆದರೆ ಅವರು ನಿಮ್ಮನ್ನು ಅನುಸರಿಸುವುದಿಲ್ಲ. ನೀವು ಅವರನ್ನು ಕರೆದರೂ ಅಥವಾ ಕರೆಯದೆ ಮೌನವಾಗಿದ್ದರೂ ನಿಮಗೆ ಸಂಬಂಧಿಸಿದಂತೆ ಅವೆರಡೂ ಸಮಾನವಾಗಿವೆ.

    ೧೯೪

    إِنَّ ٱلَّذِينَ تَدۡعُونَ مِن دُونِ ٱللَّهِ عِبَادٌ أَمۡثَالُكُمۡۖ فَٱدۡعُوهُمۡ فَلۡيَسۡتَجِيبُواْ لَكُمۡ إِن كُنتُمۡ صَٰدِقِينَ

    ನೀವು ಅಲ್ಲಾಹನನ್ನು ಬಿಟ್ಟು ಯಾರನ್ನು ಕರೆದು ಪ್ರಾರ್ಥಿಸುತ್ತೀರೋ ಅವರು (ಆ ದೇವರುಗಳು) ನಿಶ್ಚಯವಾಗಿಯೂ ನಿಮ್ಮಂತಹ ಸೃಷ್ಟಿಗಳಾಗಿದ್ದಾರೆ. ಅವರನ್ನು ಕರೆದು ಪ್ರಾರ್ಥಿಸಿರಿ; ಅವರು ನಿಮಗೆ ಉತ್ತರ ನೀಡುತ್ತಾರೋ ನೋಡೋಣ. ನೀವು ಸತ್ಯವಂತರಾಗಿದ್ದರೆ.

    ೧೯೫

    أَلَهُمۡ أَرۡجُلٞ يَمۡشُونَ بِهَآۖ أَمۡ لَهُمۡ أَيۡدٖ يَبۡطِشُونَ بِهَآۖ أَمۡ لَهُمۡ أَعۡيُنٞ يُبۡصِرُونَ بِهَآۖ أَمۡ لَهُمۡ ءَاذَانٞ يَسۡمَعُونَ بِهَاۗ قُلِ ٱدۡعُواْ شُرَكَآءَكُمۡ ثُمَّ كِيدُونِ فَلَا تُنظِرُونِ

    ಅವರಿಗೆ ನಡೆಯಲು ಸಾಧ್ಯವಾಗುವ ಕಾಲುಗಳಿವೆಯೇ? ಅವರಿಗೆ ಹಿಡಿಯಲು ಸಾಧ್ಯವಾಗುವ ಕೈಗಳಿವೆಯೇ? ಅವರಿಗೆ ನೋಡಲು ಸಾಧ್ಯವಾಗುವ ಕಣ್ಣುಗಳಿವೆಯೇ? ಅವರಿಗೆ ಕೇಳಲು ಸಾಧ್ಯವಾಗುವ ಕಿವಿಗಳಿವೆಯೇ? ಹೇಳಿರಿ: “ನೀವು ನಿಮ್ಮ ಸಹಭಾಗಿಗಳನ್ನು (ದೇವರುಗಳನ್ನು) ಕರೆಯಿರಿ. ನಂತರ ನನ್ನ ಮೇಲೆ ನಿಮ್ಮ ತಂತ್ರವನ್ನು ಪ್ರಯೋಗಿಸಿರಿ. ನನಗೆ ಕಾಲಾವಕಾಶ ನೀಡಬೇಡಿ.”

    ೧೯೬

    إِنَّ وَلِـِّۧيَ ٱللَّهُ ٱلَّذِي نَزَّلَ ٱلۡكِتَٰبَۖ وَهُوَ يَتَوَلَّى ٱلصَّٰلِحِينَ

    ನಿಶ್ಚಯವಾಗಿಯೂ ಈ ಗ್ರಂಥವನ್ನು ಅವತೀರ್ಣಗೊಳಿಸಿದ ಅಲ್ಲಾಹನೇ ನನ್ನ ರಕ್ಷಕ. ಅವನು ನೀತಿವಂತರನ್ನು ಸಂರಕ್ಷಿಸುವ ಹೊಣೆಯನ್ನು ವಹಿಸಿಕೊಂಡಿದ್ದಾನೆ.

    ೧೯೭

    وَٱلَّذِينَ تَدۡعُونَ مِن دُونِهِۦ لَا يَسۡتَطِيعُونَ نَصۡرَكُمۡ وَلَآ أَنفُسَهُمۡ يَنصُرُونَ

    ನೀವು ಅವನನ್ನು (ಅಲ್ಲಾಹನನ್ನು) ಬಿಟ್ಟು ಯಾರನ್ನು ಕರೆದು ಪ್ರಾರ್ಥಿಸುತ್ತೀರೋ—ನಿಮಗೆ ಸಹಾಯ ಮಾಡಲು ಅವರಿಗೆ ಸಾಧ್ಯವಿಲ್ಲ. ಸ್ವಯಂ ಅವರಿಗೂ ಅವರು ಸಹಾಯ ಮಾಡುವುದಿಲ್ಲ.

    ೧೯೮

    وَإِن تَدۡعُوهُمۡ إِلَى ٱلۡهُدَىٰ لَا يَسۡمَعُواْۖ وَتَرَىٰهُمۡ يَنظُرُونَ إِلَيۡكَ وَهُمۡ لَا يُبۡصِرُونَ

    ನೀವು ಅವರನ್ನು ಸನ್ಮಾರ್ಗಕ್ಕೆ ಕರೆದರೆ ಅವರು ಅದನ್ನು ಕೇಳುವುದಿಲ್ಲ. ಅವರು ನಿಮ್ಮನ್ನು ನೋಡುತ್ತಿರುವಂತೆ ನಿಮಗೆ ಕಾಣಬಹುದು. ಆದರೆ ಅವರು ನೋಡುವುದಿಲ್ಲ.

    ೧೯೯

    خُذِ ٱلۡعَفۡوَ وَأۡمُرۡ بِٱلۡعُرۡفِ وَأَعۡرِضۡ عَنِ ٱلۡجَٰهِلِينَ

    (ಜನರೊಡನೆ) ಸೌಮ್ಯವಾಗಿ ವರ್ತಿಸಿರಿ, ಒಳಿತನ್ನು ಆದೇಶಿಸಿರಿ ಮತ್ತು ಅವಿವೇಕಿಗಳಿಂದ ದೂರವಿರಿ.

    ೨೦೦

    وَإِمَّا يَنزَغَنَّكَ مِنَ ٱلشَّيۡطَٰنِ نَزۡغٞ فَٱسۡتَعِذۡ بِٱللَّهِۚ إِنَّهُۥ سَمِيعٌ عَلِيمٌ

    ನಿಮಗೆ ಶೈತಾನನಿಂದ ಏನಾದರೂ ದುಷ್ಪ್ರೇರಣೆ ಅನುಭವವಾದರೆ ಅಲ್ಲಾಹನಲ್ಲಿ ಅಭಯ ಯಾಚಿಸಿರಿ. ನಿಶ್ಚಯವಾಗಿಯೂ ಅವನು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.

    ೨೦೧

    إِنَّ ٱلَّذِينَ ٱتَّقَوۡاْ إِذَا مَسَّهُمۡ طَٰٓئِفٞ مِّنَ ٱلشَّيۡطَٰنِ تَذَكَّرُواْ فَإِذَا هُم مُّبۡصِرُونَ

    ನಿಶ್ಚಯವಾಗಿಯೂ ದೇವಭಯವುಳ್ಳವರಿಗೆ ಶೈತಾನನಿಂದ ಏನಾದರೂ ದುಷ್ಪ್ರೇರಣೆ ಅನುಭವವಾದರೆ, ಅವರು ಅಲ್ಲಾಹನನ್ನು ಸ್ಮರಿಸುತ್ತಾರೆ. ಆಗ ಅವರು ಒಳದೃಷ್ಟಿಯುಳ್ಳವರಾಗುತ್ತಾರೆ.

    ೨೦೨

    وَإِخۡوَٰنُهُمۡ يَمُدُّونَهُمۡ فِي ٱلۡغَيِّ ثُمَّ لَا يُقۡصِرُونَ

    ಅವರು (ಶೈತಾನರು) ಅವರ ಸಹೋದರರನ್ನು ದುರ್ಮಾರ್ಗದಲ್ಲಿ ಬಿಟ್ಟುಬಿಡುತ್ತಾರೆ. ಅವರು ಅದರಲ್ಲಿ ಯಾವುದೇ ಅಭಾವ ಮಾಡುವುದಿಲ್ಲ.

    ೨೦೩

    وَإِذَا لَمۡ تَأۡتِهِم بِـَٔايَةٖ قَالُواْ لَوۡلَا ٱجۡتَبَيۡتَهَاۚ قُلۡ إِنَّمَآ أَتَّبِعُ مَا يُوحَىٰٓ إِلَيَّ مِن رَّبِّيۚ هَٰذَا بَصَآئِرُ مِن رَّبِّكُمۡ وَهُدٗى وَرَحۡمَةٞ لِّقَوۡمٖ يُؤۡمِنُونَ

    ನೀವು ಅವರಿಗೆ ಒಂದು ದೃಷ್ಟಾಂತವನ್ನು ತಂದು ತೋರಿಸದಿದ್ದರೆ, ಅವರು ಹೇಳುತ್ತಾರೆ: “ನೀವೇ ಅದನ್ನು ರಚಿಸಿ ತರಬಾರದೇ?” ಹೇಳಿರಿ: “ನನ್ನ ಪರಿಪಾಲಕನಿಂದ (ಅಲ್ಲಾಹನಿಂದ) ಬರುವ ದೇವವಾಣಿಗಳನ್ನು ಮಾತ್ರ ನಾನು ಅನುಸರಿಸುತ್ತೇನೆ. ಇದು (ಕುರ್‌ಆನ್) ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಕಣ್ತೆರೆಸುವ ಸಾಕ್ಷ್ಯಾಧಾರವಾಗಿದೆ ಮತ್ತು ವಿಶ್ವಾಸವಿಡುವ ಜನರಿಗೆ ಸನ್ಮಾರ್ಗ ಮತ್ತು ದಯೆಯಾಗಿದೆ.”

    ೨೦೪

    وَإِذَا قُرِئَ ٱلۡقُرۡءَانُ فَٱسۡتَمِعُواْ لَهُۥ وَأَنصِتُواْ لَعَلَّكُمۡ تُرۡحَمُونَ

    ಕುರ್‌ಆನ್ ಪಠಿಸಲಾಗುವಾಗ ಅದನ್ನು ಕಿವಿಗೊಟ್ಟು ಕೇಳಿರಿ ಮತ್ತು ಮೌನವಾಗಿರಿ. ನಿಮಗೆ ದಯೆ ತೋರಲಾಗುವುದಕ್ಕಾಗಿ.

    ೨೦೫

    وَٱذۡكُر رَّبَّكَ فِي نَفۡسِكَ تَضَرُّعٗا وَخِيفَةٗ وَدُونَ ٱلۡجَهۡرِ مِنَ ٱلۡقَوۡلِ بِٱلۡغُدُوِّ وَٱلۡأٓصَالِ وَلَا تَكُن مِّنَ ٱلۡغَٰفِلِينَ

    ವಿನಯ ಮತ್ತು ಭಯದಿಂದ ಧ್ವನಿಯನ್ನು ತಗ್ಗಿಸಿ ಮುಂಜಾನೆ ಮತ್ತು ಸಂಜೆ ನೀವು ನಿಮ್ಮ ಮನಸ್ಸಿನಲ್ಲೇ ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಸ್ಮರಿಸಿರಿ. ನೀವು ನಿರ್ಲಕ್ಷ್ಯರಾಗಿರುವವರಲ್ಲಿ ಸೇರಬೇಡಿ.

    ೨೦೬

    إِنَّ ٱلَّذِينَ عِندَ رَبِّكَ لَا يَسۡتَكۡبِرُونَ عَنۡ عِبَادَتِهِۦ وَيُسَبِّحُونَهُۥ وَلَهُۥ يَسۡجُدُونَۤ۩

    ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿಯಿರುವವರು (ದೇವದೂತರು) ಅವನನ್ನು ಆರಾಧಿಸುವ ವಿಷಯದಲ್ಲಿ ಅಹಂಕಾರ ತೋರುವುದಿಲ್ಲ. ಅವರು ಅವನ ಪರಿಶುದ್ಧಿಯನ್ನು ಕೊಂಡಾಡುತ್ತಾರೆ ಮತ್ತು ಅವನಿಗೆ ಸಾಷ್ಟಾಂಗ ಮಾಡುತ್ತಾರೆ.

    Al-Araf

    Play