Surah An-Naml in Kannada

    النمل

    Surah An-Naml in Kannada

    Read Surah An-Naml in Kannada (النمل) with Arabic text, Kannada translation, and audio recitation. Chapter 27 of the Holy Quran, 93 verses — free online.

    ಕನ್ನಡದಲ್ಲಿ ಕುರ್‌ಆನ್ · all 114 ಸೂರಃs

    طسٓۚ تِلۡكَ ءَايَٰتُ ٱلۡقُرۡءَانِ وَكِتَابٖ مُّبِينٍ

    ತ್ವಾ ಸೀನ್. ಇವು ಕುರ್‌ಆನ್‍ನ—ಸ್ಪಷ್ಟ ಗ್ರಂಥದ ವಚನಗಳಾಗಿವೆ.

    هُدٗى وَبُشۡرَىٰ لِلۡمُؤۡمِنِينَ

    ಇದು ಸತ್ಯವಿಶ್ವಾಸಿಗಳಿಗೆ ಸನ್ಮಾರ್ಗದರ್ಶಿ ಮತ್ತು ಸುವಾರ್ತೆಯಾಗಿದೆ.

    ٱلَّذِينَ يُقِيمُونَ ٱلصَّلَوٰةَ وَيُؤۡتُونَ ٱلزَّكَوٰةَ وَهُم بِٱلۡأٓخِرَةِ هُمۡ يُوقِنُونَ

    ಅವರು (ಸತ್ಯವಿಶ್ವಾಸಿಗಳು) ಯಾರೆಂದರೆ, ನಮಾಝನ್ನು ಸಂಸ್ಥಾಪಿಸುವವರು, ಝಕಾತ್ ನೀಡುವವರು ಮತ್ತು ಪರಲೋಕದಲ್ಲಿ ದೃಢವಿಶ್ವಾಸವಿಡುವವರು.

    إِنَّ ٱلَّذِينَ لَا يُؤۡمِنُونَ بِٱلۡأٓخِرَةِ زَيَّنَّا لَهُمۡ أَعۡمَٰلَهُمۡ فَهُمۡ يَعۡمَهُونَ

    ನಿಶ್ಚಯವಾಗಿಯೂ, ಪರಲೋಕದಲ್ಲಿ ವಿಶ್ವಾಸವಿಡದವರಿಗೆ ನಾವು ಅವರ ಕರ್ಮಗಳನ್ನು ಅಲಂಕರಿಸಿ ಕೊಟ್ಟಿದ್ದೇವೆ. ಆದ್ದರಿಂದ ಅವರು ಅಂಧವಾಗಿ ವಿಹರಿಸುತ್ತಿದ್ದಾರೆ.

    أُوْلَٰٓئِكَ ٱلَّذِينَ لَهُمۡ سُوٓءُ ٱلۡعَذَابِ وَهُمۡ فِي ٱلۡأٓخِرَةِ هُمُ ٱلۡأَخۡسَرُونَ

    ಅವರಿಗೆ ಅತ್ಯಂತ ಕೆಟ್ಟ ಶಿಕ್ಷೆಯಿದೆ. ಅವರು ಪರಲೋಕದಲ್ಲಿ ಅತ್ಯಧಿಕ ನಾಶ-ನಷ್ಟಕ್ಕೆ ಗುರಿಯಾಗುತ್ತಾರೆ.

    وَإِنَّكَ لَتُلَقَّى ٱلۡقُرۡءَانَ مِن لَّدُنۡ حَكِيمٍ عَلِيمٍ

    ನಿಶ್ಚಯವಾಗಿಯೂ ನಿಮಗೆ ಈ ಕುರ್‌ಆನನ್ನು ವಿವೇಕಪೂರ್ಣನು ಮತ್ತು ಸರ್ವಜ್ಞನಾದ ಅಲ್ಲಾಹನ ಕಡೆಯಿಂದ ನೀಡಲಾಗುತ್ತಿದೆ.

    إِذۡ قَالَ مُوسَىٰ لِأَهۡلِهِۦٓ إِنِّيٓ ءَانَسۡتُ نَارٗا سَـَٔاتِيكُم مِّنۡهَا بِخَبَرٍ أَوۡ ءَاتِيكُم بِشِهَابٖ قَبَسٖ لَّعَلَّكُمۡ تَصۡطَلُونَ

    ಮೂಸಾ ತಮ್ಮ ಕುಟುಂಬದೊಂದಿಗೆ ಹೇಳಿದ ಸಂದರ್ಭ: “ನನಗೆ (ದೂರದಲ್ಲಿ) ಬೆಂಕಿ ಕಾಣುತ್ತಿದೆ. ನಾನು ಅಲ್ಲಿಂದ ಏನಾದರೂ ಸುದ್ದಿಯನ್ನು ತರುತ್ತೇನೆ ಅಥವಾ ಏನಾದರೂ ದೀವಟಿಗೆಯನ್ನು ಉರಿಸಿಕೊಂಡು ಬರುತ್ತೇನೆ. ಅದರಿಂದ ನಿಮಗೆ ಚಳಿ ಕಾಯಿಸಬಹುದು.”

    فَلَمَّا جَآءَهَا نُودِيَ أَنۢ بُورِكَ مَن فِي ٱلنَّارِ وَمَنۡ حَوۡلَهَا وَسُبۡحَٰنَ ٱللَّهِ رَبِّ ٱلۡعَٰلَمِينَ

    ಅವರು ಅದರ ಬಳಿಗೆ ಬಂದಾಗ, ಹೀಗೊಂದು ವಾಣಿ ಕೇಳಿಸಿತು: “ಬೆಂಕಿಯ ಬಳಿಯಿರುವವರು ಮತ್ತು ಅದರ ಪರಿಸರದಲ್ಲಿರುವವರು ಸಮೃದ್ಧರಾಗಿದ್ದಾರೆ. ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹು ಮಹಾ ಪರಿಶುದ್ಧನಾಗಿದ್ದಾನೆ.

    يَٰمُوسَىٰٓ إِنَّهُۥٓ أَنَا ٱللَّهُ ٱلۡعَزِيزُ ٱلۡحَكِيمُ

    ಓ ಮೂಸಾ! ಖಂಡಿತವಾಗಿಯೂ ನಾನು ಪ್ರಬಲನು ಮತ್ತು ವಿವೇಕಪೂರ್ಣನಾದ ಅಲ್ಲಾಹನಾಗಿದ್ದೇನೆ.”

    ೧೦

    وَأَلۡقِ عَصَاكَۚ فَلَمَّا رَءَاهَا تَهۡتَزُّ كَأَنَّهَا جَآنّٞ وَلَّىٰ مُدۡبِرٗا وَلَمۡ يُعَقِّبۡۚ يَٰمُوسَىٰ لَا تَخَفۡ إِنِّي لَا يَخَافُ لَدَيَّ ٱلۡمُرۡسَلُونَ

    “ನೀವು ನಿಮ್ಮ ಕೋಲನ್ನು ಎಸೆಯಿರಿ.” ಆಗ ಅದೊಂದು ಸರ್ಪವೋ ಎಂಬಂತೆ ವಿಲಿವಿಲಿ ಒದ್ದಾಡುವುದನ್ನು ಕಂಡಾಗ, ಮೂಸಾ (ಭಯದಿಂದ) ಹಿಂದೆ ತಿರುಗಿ ಓಡತೊಡಗಿದರು. ಅವರು ತಿರುಗಿ ನೋಡಲೇ ಇಲ್ಲ. (ಅಲ್ಲಾಹು ಹೇಳಿದನು): “ಓ ಮೂಸಾ! ಭಯಪಡಬೇಡಿ. ನನ್ನ ಉಪಸ್ಥಿತಿಯಲ್ಲಿ ಸಂದೇಶವಾಹಕರುಗಳು ಭಯಪಡುವುದಿಲ್ಲ.

    ೧೧

    إِلَّا مَن ظَلَمَ ثُمَّ بَدَّلَ حُسۡنَۢا بَعۡدَ سُوٓءٖ فَإِنِّي غَفُورٞ رَّحِيمٞ

    ಆದರೆ ಯಾರಾದರೂ ಅಕ್ರಮವೆಸಗಿ, ನಂತರ ಆ ಕೆಡುಕನ್ನು ಅದರ ಹಿಂದೆಯೇ ಒಳಿತು ಮಾಡುವ ಮೂಲಕ ಬದಲಾಯಿಸಿದರೆ, ನಿಶ್ಚಯವಾಗಿಯೂ ನಾನು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದೇನೆ.

    ೧೨

    وَأَدۡخِلۡ يَدَكَ فِي جَيۡبِكَ تَخۡرُجۡ بَيۡضَآءَ مِنۡ غَيۡرِ سُوٓءٖۖ فِي تِسۡعِ ءَايَٰتٍ إِلَىٰ فِرۡعَوۡنَ وَقَوۡمِهِۦٓۚ إِنَّهُمۡ كَانُواْ قَوۡمٗا فَٰسِقِينَ

    ನೀವು ನಿಮ್ಮ ಕೈಯನ್ನು ನಿಮ್ಮ ಅಂಗಿಯಲ್ಲಿ ವಕ್ಷಕ್ಕೆ ತೂರಿಸಿರಿ. ಆಗ ಅದಕ್ಕೆ ಯಾವುದೇ ದೋಷವುಂಟಾಗದೆ ಅದು ಬೆಳ್ಳಗೆ ಹೊಳೆಯುತ್ತಾ ಹೊರಬರುತ್ತದೆ. ಇವು ಫರೋಹ ಮತ್ತು ಅವನ ಜನರಿಗಿರುವ ಒಂಬತ್ತು ದೃಷ್ಟಾಂತಗಳಲ್ಲಿ ಒಳಪಡುತ್ತವೆ. ನಿಶ್ಚಯವಾಗಿಯೂ ಅವರು ದುಷ್ಕರ್ಮಿಗಳಾದ ಜನರಾಗಿದ್ದಾರೆ.”

    ೧೩

    فَلَمَّا جَآءَتۡهُمۡ ءَايَٰتُنَا مُبۡصِرَةٗ قَالُواْ هَٰذَا سِحۡرٞ مُّبِينٞ

    ಅವರ ಬಳಿಗೆ ಈ ಕಣ್ತೆರೆಸುವಂತಹ ದೃಷ್ಟಾಂತಗಳು ಬಂದಾಗ ಅವರು ಹೇಳಿದರು: “ಇದು ಸ್ಪಷ್ಟ ಮಾಟಗಾರಿಕೆಯಾಗಿದೆ.”

    ೧೪

    وَجَحَدُواْ بِهَا وَٱسۡتَيۡقَنَتۡهَآ أَنفُسُهُمۡ ظُلۡمٗا وَعُلُوّٗاۚ فَٱنظُرۡ كَيۡفَ كَانَ عَٰقِبَةُ ٱلۡمُفۡسِدِينَ

    ಅವರ ಆಂತರ್ಯವು ಆ ದೃಷ್ಟಾಂತಗಳ ಬಗ್ಗೆ ದೃಢವಿಶ್ವಾಸವನ್ನು ಹೊಂದಿದ್ದರೂ ಸಹ ಅವರು ಅನ್ಯಾಯವಾಗಿ ಮತ್ತು ಅಹಂಕಾರದಿಂದ ಅವುಗಳನ್ನು ನಿಷೇಧಿಸಿದರು. ಆದ್ದರಿಂದ ಆ ಕಿಡಿಗೇಡಿಗಳ ಅಂತಿಮ ಫಲಿತಾಂಶವು ಹೇಗಿತ್ತೆಂದು ನೋಡಿ.

    ೧೫

    وَلَقَدۡ ءَاتَيۡنَا دَاوُۥدَ وَسُلَيۡمَٰنَ عِلۡمٗاۖ وَقَالَا ٱلۡحَمۡدُ لِلَّهِ ٱلَّذِي فَضَّلَنَا عَلَىٰ كَثِيرٖ مِّنۡ عِبَادِهِ ٱلۡمُؤۡمِنِينَ

    ನಾವು ದಾವೂದ್ ಮತ್ತು ಸುಲೈಮಾನರಿಗೆ ಜ್ಞಾನವನ್ನು ಕರುಣಿಸಿದೆವು. ಅವರಿಬ್ಬರು ಹೇಳಿದರು: “ಅಲ್ಲಾಹನಿಗೆ ಸರ್ವಸ್ತುತಿ. ಅವನ ಸತ್ಯವಿಶ್ವಾಸಿ ದಾಸರಲ್ಲಿ ಸೇರಿದ ಹೆಚ್ಚಿನವರಿಗಿಂತಲೂ ಅವನು ನಮಗೆ ಶ್ರೇಷ್ಠತೆಯನ್ನು ದಯಪಾಲಿಸಿದ್ದಾನೆ.”

    ೧೬

    وَوَرِثَ سُلَيۡمَٰنُ دَاوُۥدَۖ وَقَالَ يَٰٓأَيُّهَا ٱلنَّاسُ عُلِّمۡنَا مَنطِقَ ٱلطَّيۡرِ وَأُوتِينَا مِن كُلِّ شَيۡءٍۖ إِنَّ هَٰذَا لَهُوَ ٱلۡفَضۡلُ ٱلۡمُبِينُ

    ಸುಲೈಮಾನರು ದಾವೂದರ ಉತ್ತರಾಧಿಕಾರಿಯಾದರು. ಅವರು ಹೇಳಿದರು: “ಜನರೇ! ನಮಗೆ ಹಕ್ಕಿಗಳ ಭಾಷೆಯನ್ನು ಕಲಿಸಲಾಗಿದೆ. ನಮಗೆ ಎಲ್ಲಾ ಸವಲತ್ತುಗಳನ್ನೂ ನೀಡಲಾಗಿದೆ. ನಿಶ್ಚಯವಾಗಿಯೂ ಇದೇ ಅತ್ಯಂತ ಸ್ಪಷ್ಟ ಔದಾರ್ಯ.”

    ೧೭

    وَحُشِرَ لِسُلَيۡمَٰنَ جُنُودُهُۥ مِنَ ٱلۡجِنِّ وَٱلۡإِنسِ وَٱلطَّيۡرِ فَهُمۡ يُوزَعُونَ

    ಸುಲೈಮಾನರ ಮುಂದೆ ಜಿನ್ನ್, ಮನುಷ್ಯರು ಮತ್ತು ಹಕ್ಕಿಗಳು ಸೇರಿದ ಅವರ ಬೃಹತ್ ಸೈನ್ಯವನ್ನು ಒಟ್ಟುಗೂಡಿಸಲಾಯಿತು. ಅವರಲ್ಲಿ (ಪ್ರತಿಯೊಂದು ವರ್ಗವನ್ನು) ಬೇರೆ ಬೇರೆ ಸ್ಥಾನಗಳಲ್ಲಿ ನಿಲ್ಲಿಸಲಾಗಿದೆ.

    ೧೮

    حَتَّىٰٓ إِذَآ أَتَوۡاْ عَلَىٰ وَادِ ٱلنَّمۡلِ قَالَتۡ نَمۡلَةٞ يَٰٓأَيُّهَا ٱلنَّمۡلُ ٱدۡخُلُواْ مَسَٰكِنَكُمۡ لَا يَحۡطِمَنَّكُمۡ سُلَيۡمَٰنُ وَجُنُودُهُۥ وَهُمۡ لَا يَشۡعُرُونَ

    ಅವರು ಇರುವೆಗಳ ಕಣಿವೆಯ ಬಳಿಗೆ ತಲುಪಿದಾಗ, ಒಂದು ಇರುವೆ ಹೇಳಿತು: “ಇರುವೆಗಳೇ! ನಿಮ್ಮ ಗೂಡುಗಳನ್ನು ಸೇರಿಕೊಳ್ಳಿ. ಸುಲೈಮಾನ್ ಮತ್ತು ಅವರ ಸೈನ್ಯಗಳು ಅವರಿಗೆ ತಿಳಿಯದಂತೆ ನಿಮ್ಮನ್ನು ತುಳಿಯುತ್ತಾ ಸಾಗದಿರಲಿ.”

    ೧೯

    فَتَبَسَّمَ ضَاحِكٗا مِّن قَوۡلِهَا وَقَالَ رَبِّ أَوۡزِعۡنِيٓ أَنۡ أَشۡكُرَ نِعۡمَتَكَ ٱلَّتِيٓ أَنۡعَمۡتَ عَلَيَّ وَعَلَىٰ وَٰلِدَيَّ وَأَنۡ أَعۡمَلَ صَٰلِحٗا تَرۡضَىٰهُ وَأَدۡخِلۡنِي بِرَحۡمَتِكَ فِي عِبَادِكَ ٱلصَّٰلِحِينَ

    ಆಗ ಅದರ ಮಾತು ಕೇಳಿ ಸುಲೈಮಾನ್ ಮುಗುಳ್ನಕ್ಕರು. ಅವರು ಹೇಳಿದರು: “ನನ್ನ ಪರಿಪಾಲಕನೇ! ನೀನು ನನಗೆ ಮತ್ತು ನನ್ನ ತಂದೆ-ತಾಯಿಗಳಿಗೆ ದಯಪಾಲಿಸಿದ ಅನುಗ್ರಹಗಳಿಗಾಗಿ ನಿನಗೆ ಆಭಾರಿಯಾಗಿರಲು ಮತ್ತು ನೀನು ಇಷ್ಟಪಡುವ ಸತ್ಕರ್ಮಗಳನ್ನು ಮಾಡಲು ನನಗೆ ಸೌಭಾಗ್ಯವನ್ನು ನೀಡು. ನಿನ್ನ ದಯೆಯಿಂದ ನನ್ನನ್ನು ನಿನ್ನ ನೀತಿವಂತ ದಾಸರಲ್ಲಿ ಸೇರಿಸು.”

    ೨೦

    وَتَفَقَّدَ ٱلطَّيۡرَ فَقَالَ مَالِيَ لَآ أَرَى ٱلۡهُدۡهُدَ أَمۡ كَانَ مِنَ ٱلۡغَآئِبِينَ

    ಅವರು ಹಕ್ಕಿಗಳನ್ನು ತಪಾಸಣೆ ಮಾಡಿದರು. ನಂತರ ಹೇಳಿದರು: “ಇದೇನು ನನಗೆ ಹೂಪೂ ಹಕ್ಕಿ ಕಾಣಿಸುತ್ತಿಲ್ಲ? ಅದು ಇಂದು ಗೈರು ಹಾಜರಿಯಾಗಿದೆಯೇ?

    ೨೧

    لَأُعَذِّبَنَّهُۥ عَذَابٗا شَدِيدًا أَوۡ لَأَاْذۡبَحَنَّهُۥٓ أَوۡ لَيَأۡتِيَنِّي بِسُلۡطَٰنٖ مُّبِينٖ

    ನಾನು ಅದಕ್ಕೆ ಕಠೋರ ಶಿಕ್ಷೆಯನ್ನು ನೀಡುವೆನು ಅಥವಾ ಅದನ್ನು ಕತ್ತು ಕೊಯ್ದು ಸಾಯಿಸುವೆನು. ಅನ್ಯಥಾ ಅದು ನನ್ನ ಬಳಿಗೆ (ಗೈರು ಹಾಜರಿಗೆ) ಸ್ಪಷ್ಟ ಸಾಕ್ಷ್ಯಾಧಾರವನ್ನು ತರಬೇಕು.”

    ೨೨

    فَمَكَثَ غَيۡرَ بَعِيدٖ فَقَالَ أَحَطتُ بِمَا لَمۡ تُحِطۡ بِهِۦ وَجِئۡتُكَ مِن سَبَإِۭ بِنَبَإٖ يَقِينٍ

    ತುಸು ಹೊತ್ತಿನಲ್ಲೇ ಹೂಪೂ ಹಕ್ಕಿ ಬಂದು ಹೇಳಿತು: “ನಿಮಗೆ ಸೂಕ್ಷ್ಮವಾಗಿ ತಿಳಿಯಲು ಸಾಧ್ಯವಾಗದ ಒಂದು ವಿಷಯವನ್ನು ನಾನು ತಿಳಿದಿದ್ದೇನೆ. ನಾನು ಸಬಾ[1] ದೇಶದಿಂದ ಒಂದು ಖಚಿತ ಮಾಹಿತಿಯೊಂದಿಗೆ ಬಂದಿದ್ದೇನೆ.

    [1] ಸಬಾ ಎಂದರೆ ಪುರಾತನ ಯಮನ್ ದೇಶದ ಒಂದು ಸಾಮ್ರಾಜ್ಯ. ಈ ಸಾಮ್ರಾಜ್ಯವನ್ನು ಬಿಲ್ಕೀಸ್ ಎಂಬ ಹೆಸರಿನ ರಾಣಿ ಆಳುತ್ತಿದ್ದಳು.

    ೨೩

    إِنِّي وَجَدتُّ ٱمۡرَأَةٗ تَمۡلِكُهُمۡ وَأُوتِيَتۡ مِن كُلِّ شَيۡءٖ وَلَهَا عَرۡشٌ عَظِيمٞ

    ನಾನು ನೋಡಿದಂತೆ ಒಬ್ಬ ಮಹಿಳೆ ಅವರನ್ನು ಆಳುತ್ತಿದ್ದಾಳೆ. ಅವಳಿಗೆ ಎಲ್ಲಾ ಸವಲತ್ತುಗಳನ್ನೂ ನೀಡಲಾಗಿದೆ. ಆಕೆಗೆ ಮಹಾ ಸಿಂಹಾಸನವಿದೆ.

    ೨೪

    وَجَدتُّهَا وَقَوۡمَهَا يَسۡجُدُونَ لِلشَّمۡسِ مِن دُونِ ٱللَّهِ وَزَيَّنَ لَهُمُ ٱلشَّيۡطَٰنُ أَعۡمَٰلَهُمۡ فَصَدَّهُمۡ عَنِ ٱلسَّبِيلِ فَهُمۡ لَا يَهۡتَدُونَ

    ನಾನು ನೋಡಿದಂತೆ ಅವಳು ಮತ್ತು ಅವಳ ಜನರು ಅಲ್ಲಾಹನನ್ನು ಬಿಟ್ಟು ಸೂರ್ಯನಿಗೆ ಸಾಷ್ಟಾಂಗ ಮಾಡುತ್ತಾರೆ. ಶೈತಾನನು ಅವರಿಗೆ ಅವರ ಕೃತ್ಯಗಳನ್ನು ಅಲಂಕರಿಸಿಕೊಟ್ಟು ಅವರನ್ನು ಸನ್ಮಾರ್ಗದಿಂದ ದೂರವಿರಿಸಿದ್ದಾನೆ. ಆದ್ದರಿಂದ ಅವರಿಗೆ ಸನ್ಮಾರ್ಗವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.

    ೨೫

    أَلَّاۤ يَسۡجُدُواْۤ لِلَّهِ ٱلَّذِي يُخۡرِجُ ٱلۡخَبۡءَ فِي ٱلسَّمَٰوَٰتِ وَٱلۡأَرۡضِ وَيَعۡلَمُ مَا تُخۡفُونَ وَمَا تُعۡلِنُونَ

    ಭೂಮ್ಯಾಕಾಶಗಳಲ್ಲಿ ನಿಗೂಢವಾಗಿರುವುದನ್ನು ಹೊರತರುವವನು ಮತ್ತು ನೀವು ರಹಸ್ಯವಾಗಿಡುವುದನ್ನು ಹಾಗೂ ಬಹಿರಂಗಪಡಿಸುವುದನ್ನು ತಿಳಿಯುವವನಾದ ಅಲ್ಲಾಹನಿಗೆ ಸಾಷ್ಟಾಂಗ ಮಾಡದಂತೆ (ಶೈತಾನನು ಅವರನ್ನು ತಡೆದಿದ್ದಾನೆ).

    ೨೬

    ٱللَّهُ لَآ إِلَٰهَ إِلَّا هُوَ رَبُّ ٱلۡعَرۡشِ ٱلۡعَظِيمِ۩

    ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ. ಅವನು ಮಹಾ ಸಿಂಹಾಸನದ ಪರಿಪಾಲಕನಾಗಿದ್ದಾನೆ.”

    ೨೭

    ۞ قَالَ سَنَنظُرُ أَصَدَقۡتَ أَمۡ كُنتَ مِنَ ٱلۡكَٰذِبِينَ

    ಸುಲೈಮಾನ್ ಹೇಳಿದರು: “ನೀನು ಹೇಳಿದ್ದು ಸತ್ಯವೋ ಅಥವಾ ನೀನು ಸುಳ್ಳು ಹೇಳುವವರಲ್ಲಿ ಸೇರಿದ್ದೀಯೋ ಎಂದು ನಾವು ನೋಡುವೆವು.

    ೨೮

    ٱذۡهَب بِّكِتَٰبِي هَٰذَا فَأَلۡقِهۡ إِلَيۡهِمۡ ثُمَّ تَوَلَّ عَنۡهُمۡ فَٱنظُرۡ مَاذَا يَرۡجِعُونَ

    ನನ್ನ ಈ ಓಲೆಯೊಂದಿಗೆ ಹೊರಡು ಮತ್ತು ಅದನ್ನು ಅವರ ಮುಂದೆ ಎಸೆದು ಬಿಡು. ನಂತರ ಅವರಿಂದ ದೂರ ಸರಿದು, ಅವರು ಏನು ಉತ್ತರ ನೀಡುತ್ತಾರೆಂದು ನೋಡು.”

    ೨೯

    قَالَتۡ يَٰٓأَيُّهَا ٱلۡمَلَؤُاْ إِنِّيٓ أُلۡقِيَ إِلَيَّ كِتَٰبٞ كَرِيمٌ

    ರಾಣಿ ಹೇಳಿದಳು: “ಸರದಾರರೇ! ನೋಡಿ! ನನಗೊಂದು ಉದಾತ್ತ ಓಲೆಯನ್ನು ಕಳುಹಿಸಲಾಗಿದೆ.

    ೩೦

    إِنَّهُۥ مِن سُلَيۡمَٰنَ وَإِنَّهُۥ بِسۡمِ ٱللَّهِ ٱلرَّحۡمَٰنِ ٱلرَّحِيمِ

    ಅದು ಸುಲೈಮಾನರ ಕಡೆಯಿಂದ ಬಂದಿದೆ. ಅದರಲ್ಲಿ “ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ.

    ೩೧

    أَلَّا تَعۡلُواْ عَلَيَّ وَأۡتُونِي مُسۡلِمِينَ

    ನನ್ನ ಮುಂದೆ ಅಹಂಕಾರದಿಂದ ವರ್ತಿಸದೆ, ಮುಸಲ್ಮಾನರಾಗಿ ನನ್ನ ಬಳಿಗೆ ಬನ್ನಿ” ಎಂದು ಬರೆಯಲಾಗಿದೆ.”

    ೩೨

    قَالَتۡ يَٰٓأَيُّهَا ٱلۡمَلَؤُاْ أَفۡتُونِي فِيٓ أَمۡرِي مَا كُنتُ قَاطِعَةً أَمۡرًا حَتَّىٰ تَشۡهَدُونِ

    ರಾಣಿ ಕೇಳಿದಳು: “ಸರದಾರರೇ! ನನ್ನ ಈ ವಿಷಯದಲ್ಲಿ ನನಗೆ ಸಲಹೆ ನೀಡಿರಿ. ನೀವು ನನ್ನ ಬಳಿ ಹಾಜರಾಗಿ (ನಿಮ್ಮ ಸಲಹೆಯನ್ನು ಕೇಳಿದ ನಂತರವೇ) ಹೊರತು ನಾನು ಯಾವುದೇ ವಿಷಯವನ್ನೂ ಅಂತಿಮವಾಗಿ ತೀರ್ಮಾನಿಸುವುದಿಲ್ಲ.”

    ೩೩

    قَالُواْ نَحۡنُ أُوْلُواْ قُوَّةٖ وَأُوْلُواْ بَأۡسٖ شَدِيدٖ وَٱلۡأَمۡرُ إِلَيۡكِ فَٱنظُرِي مَاذَا تَأۡمُرِينَ

    ಸರದಾರರು ಹೇಳಿದರು: “ನಾವು ಶಕ್ತಿಶಾಲಿಗಳು ಮತ್ತು ಪ್ರಬಲ ಸೈನ್ಯವನ್ನು ಹೊಂದಿರುವವರು. ಆದರೆ ಆಜ್ಞೆ ನೀಡುವ ಅಧಿಕಾರ ನಿಮ್ಮ ಕೈಯಲ್ಲಿದೆ. ನಮಗೆ ಏನು ಆಜ್ಞೆ ನೀಡಬೇಕೆಂದು ನೀವು ಚೆನ್ನಾಗಿ ಆಲೋಚಿಸಿರಿ.”

    ೩೪

    قَالَتۡ إِنَّ ٱلۡمُلُوكَ إِذَا دَخَلُواْ قَرۡيَةً أَفۡسَدُوهَا وَجَعَلُوٓاْ أَعِزَّةَ أَهۡلِهَآ أَذِلَّةٗۚ وَكَذَٰلِكَ يَفۡعَلُونَ

    ರಾಣಿ ಹೇಳಿದಳು: “ನಿಶ್ಚಯವಾಗಿಯೂ, ಸಾಮ್ರಾಜ್ಯಶಾಹಿಗಳು ಯಾವುದೇ ಒಂದು ಊರನ್ನು ಪ್ರವೇಶಿಸಿದರೆ, ಅದನ್ನು ನಾಶ ಮಾಡುತ್ತಾರೆ ಮತ್ತು ಅಲ್ಲಿನ ಪ್ರತಿಷ್ಠಿತರನ್ನು ಅಪಮಾನಿತರನ್ನಾಗಿ ಮಾಡುತ್ತಾರೆ. ಇವರು ಕೂಡ ಹೀಗೆಯೇ ಮಾಡುವರು.

    ೩೫

    وَإِنِّي مُرۡسِلَةٌ إِلَيۡهِم بِهَدِيَّةٖ فَنَاظِرَةُۢ بِمَ يَرۡجِعُ ٱلۡمُرۡسَلُونَ

    ಆದ್ದರಿಂದ, ನಾನು ಅವರಿಗೆ ಒಂದು ಉಡುಗೊರೆಯನ್ನು ಕಳುಹಿಸಿ ಕೊಡುತ್ತೇನೆ. ನಂತರ ದೂತರು ಯಾವ ಸುದ್ದಿಯೊಂದಿಗೆ ಮರಳಿ ಬರುತ್ತಾರೆಂದು ನೋಡುತ್ತೇನೆ.”

    ೩೬

    فَلَمَّا جَآءَ سُلَيۡمَٰنَ قَالَ أَتُمِدُّونَنِ بِمَالٖ فَمَآ ءَاتَىٰنِۦَ ٱللَّهُ خَيۡرٞ مِّمَّآ ءَاتَىٰكُمۚ بَلۡ أَنتُم بِهَدِيَّتِكُمۡ تَفۡرَحُونَ

    ಆ ದೂತರು ಸುಲೈಮಾನರ ಬಳಿಗೆ ಬಂದಾಗ ಅವರು ಹೇಳಿದರು: “ನೀವು ನಿಮ್ಮ ಸಂಪತ್ತಿನ ಮೂಲಕ ನನಗೆ ಸಹಾಯ ಮಾಡಲು ಬಯಸುತ್ತೀರಾ? ಆದರೆ ನಿಮಗೆ ನೀಡಿರುವುದಕ್ಕಿಂತಲೂ ಶ್ರೇಷ್ಠವಾದುದನ್ನು ಅಲ್ಲಾಹು ನನಗೆ ನೀಡಿದ್ದಾನೆ. ಆದರೆ ನೀವಂತೂ ನಿಮ್ಮ ಉಡುಗೊರೆಯ ಬಗ್ಗೆ ಹೆಮ್ಮೆ ಪಡುತ್ತೀರಿ.

    ೩೭

    ٱرۡجِعۡ إِلَيۡهِمۡ فَلَنَأۡتِيَنَّهُم بِجُنُودٖ لَّا قِبَلَ لَهُم بِهَا وَلَنُخۡرِجَنَّهُم مِّنۡهَآ أَذِلَّةٗ وَهُمۡ صَٰغِرُونَ

    ನೀವು ಅವರ (ನಿಮ್ಮ ಆಡಳಿತಗಾರರ) ಬಳಿಗೆ ವಾಪಸು ಹೋಗಿರಿ. ನಿಶ್ಚಯವಾಗಿಯೂ ಅವರಿಗೆ ಎದುರಿಸಲು ಸಾಧ್ಯವಾಗದ ಬೃಹತ್ ಸೈನ್ಯಗಳೊಂದಿಗೆ ನಾವು ಅವರ ಬಳಿಗೆ ಬರುವೆವು. ನಂತರ ಅವರನ್ನು ಅತ್ಯಂತ ಹೀನ ಸ್ಥಿತಿಯಲ್ಲಿ ಅವಮಾನದೊಂದಿಗೆ ಅಲ್ಲಿಂದ ಓಡಿಸುವೆವು.”

    ೩೮

    قَالَ يَٰٓأَيُّهَا ٱلۡمَلَؤُاْ أَيُّكُمۡ يَأۡتِينِي بِعَرۡشِهَا قَبۡلَ أَن يَأۡتُونِي مُسۡلِمِينَ

    ಸುಲೈಮಾನ್ ಹೇಳಿದರು: “ಓ ಸರದಾರರೇ! ಅವರು ನನ್ನ ಬಳಿಗೆ ಮುಸಲ್ಮಾನರಾಗಿ ಬರುವುದಕ್ಕೆ ಮೊದಲೇ ಅವಳ ಸಿಂಹಾಸನವನ್ನು ಯಾರು ನನಗೆ ತಂದು ಕೊಡುತ್ತೀರಿ?”

    ೩೯

    قَالَ عِفۡرِيتٞ مِّنَ ٱلۡجِنِّ أَنَا۠ ءَاتِيكَ بِهِۦ قَبۡلَ أَن تَقُومَ مِن مَّقَامِكَۖ وَإِنِّي عَلَيۡهِ لَقَوِيٌّ أَمِينٞ

    ಒಬ್ಬ ಬಲಿಷ್ಠ ರೂಪದ ಜಿನ್ನ್ ಹೇಳಿದನು: “ನೀವು ನಿಮ್ಮ ಸ್ಥಾನದಿಂದ ಎದ್ದೇಳುವುದಕ್ಕೆ ಮೊದಲೇ ನಾನು ಅದನ್ನು ತರುವೆನು. ನಿಜಕ್ಕೂ ನನಗೆ ಅದನ್ನು ಮಾಡುವ ಶಕ್ತಿಯಿದೆ ಮತ್ತು ನಾನು ವಿಶ್ವಾಸಯೋಗ್ಯನಾಗಿದ್ದೇನೆ.”

    ೪೦

    قَالَ ٱلَّذِي عِندَهُۥ عِلۡمٞ مِّنَ ٱلۡكِتَٰبِ أَنَا۠ ءَاتِيكَ بِهِۦ قَبۡلَ أَن يَرۡتَدَّ إِلَيۡكَ طَرۡفُكَۚ فَلَمَّا رَءَاهُ مُسۡتَقِرًّا عِندَهُۥ قَالَ هَٰذَا مِن فَضۡلِ رَبِّي لِيَبۡلُوَنِيٓ ءَأَشۡكُرُ أَمۡ أَكۡفُرُۖ وَمَن شَكَرَ فَإِنَّمَا يَشۡكُرُ لِنَفۡسِهِۦۖ وَمَن كَفَرَ فَإِنَّ رَبِّي غَنِيّٞ كَرِيمٞ

    ಗ್ರಂಥದ ಜ್ಞಾನವಿರುವ ಒಬ್ಬ ವ್ಯಕ್ತಿ ಎದ್ದು ನಿಂತು ಹೇಳಿದರು: “ನೀವು ಕಣ್ಣೆವೆಯಿಕ್ಕುವುದಕ್ಕೆ ಮೊದಲೇ ನಾನು ಅದನ್ನು ತರುವೆನು.” ಆ ಸಿಂಹಾಸನವು ತನ್ನ ಮುಂದೆ ನಿಂತಿರುವುದ್ನು ಕಂಡಾಗ ಸುಲೈಮಾನ್ ಹೇಳಿದರು: “ಇದು ನನ್ನ ಪರಿಪಾಲಕನ (ಅಲ್ಲಾಹನ) ಔದಾರ್ಯದಲ್ಲಿ ಸೇರಿದ್ದಾಗಿದೆ. ನಾನು ಕೃತಜ್ಞನಾಗುತ್ತೇನೋ ಅಥವಾ ಕೃತಘ್ನನಾಗುತ್ತೇನೋ ಎಂದು ಪರೀಕ್ಷಿಸುವುದಕ್ಕಾಗಿ. ಯಾರು ಕೃತಜ್ಞನಾಗುತ್ತಾನೋ—ಅವನು ಕೃತಜ್ಞನಾಗುವುದು ಸ್ವತಃ ಅವನ ಒಳಿತಿಗೇ ಆಗಿದೆ. ಯಾರಾದರೂ ಕೃತಘ್ನನಾಗುವುದಾದರೆ—ನಿಶ್ಚಯವಾಗಿಯೂ ನನ್ನ ಪರಿಪಾಲಕನು ನಿರಪೇಕ್ಷನು ಮತ್ತು ಪರಮ ಉದಾರಿಯಾಗಿದ್ದಾನೆ.”

    ೪೧

    قَالَ نَكِّرُواْ لَهَا عَرۡشَهَا نَنظُرۡ أَتَهۡتَدِيٓ أَمۡ تَكُونُ مِنَ ٱلَّذِينَ لَا يَهۡتَدُونَ

    ಸುಲೈಮಾನ್ ಹೇಳಿದರು: “ಅವಳ ಸಿಂಹಾಸನವನ್ನು (ಅವಳಿಗೆ ಗುರುತಿಸಲಾಗದಂತೆ) ವಿರೂಪಗೊಳಿಸಿರಿ. ಅವಳು ಸತ್ಯವನ್ನು ಕಂಡುಕೊಳ್ಳುತ್ತಾಳೋ ಅಥವಾ ಸತ್ಯವನ್ನು ಕಂಡುಕೊಳ್ಳಲು ಸಾಧ್ಯವಾಗದವರಲ್ಲಿ ಸೇರುತ್ತಾಳೋ ಎಂದು ನೋಡೋಣ.”

    ೪೨

    فَلَمَّا جَآءَتۡ قِيلَ أَهَٰكَذَا عَرۡشُكِۖ قَالَتۡ كَأَنَّهُۥ هُوَۚ وَأُوتِينَا ٱلۡعِلۡمَ مِن قَبۡلِهَا وَكُنَّا مُسۡلِمِينَ

    ನಂತರ ಅವಳು ಬಂದಾಗ ಕೇಳಲಾಯಿತು: “ನಿಮ್ಮ ಸಿಂಹಾಸನ ಇದೇ ರೀತಿಯಿದೆಯೇ?” ಅವಳು ಹೇಳಿದಳು: “ಇದು ಅದೇ ಆಗಿರುವಂತೆ ತೋರುತ್ತಿದೆ.” ನಮಗೆ ಇದಕ್ಕಿಂತ ಮೊದಲೇ ಜ್ಞಾನ ನೀಡಲಾಗಿದೆ ಮತ್ತು ನಾವು ಮುಸಲ್ಮಾನರಾಗಿದ್ದೇವೆ.

    ೪೩

    وَصَدَّهَا مَا كَانَت تَّعۡبُدُ مِن دُونِ ٱللَّهِۖ إِنَّهَا كَانَتۡ مِن قَوۡمٖ كَٰفِرِينَ

    ಅವಳು ಅಲ್ಲಾಹನನ್ನು ಬಿಟ್ಟು ಯಾರನ್ನು ಆರಾಧಿಸುತ್ತಿದ್ದಳೋ ಆ ದೇವರುಗಳು (ಅಲ್ಲಾಹನ ಆರಾಧನೆ ಮಾಡದಂತೆ) ಅವಳನ್ನು ತಡೆದಿದ್ದರು. ನಿಶ್ಚಯವಾಗಿಯೂ ಅವಳು ಸತ್ಯನಿಷೇಧಿಗಳಾದ ಜನರಲ್ಲಿ ಸೇರಿದ್ದಳು.

    ೪೪

    قِيلَ لَهَا ٱدۡخُلِي ٱلصَّرۡحَۖ فَلَمَّا رَأَتۡهُ حَسِبَتۡهُ لُجَّةٗ وَكَشَفَتۡ عَن سَاقَيۡهَاۚ قَالَ إِنَّهُۥ صَرۡحٞ مُّمَرَّدٞ مِّن قَوَارِيرَۗ قَالَتۡ رَبِّ إِنِّي ظَلَمۡتُ نَفۡسِي وَأَسۡلَمۡتُ مَعَ سُلَيۡمَٰنَ لِلَّهِ رَبِّ ٱلۡعَٰلَمِينَ

    ಅವಳೊಡನೆ ಹೇಳಲಾಯಿತು: “ಅರಮನೆಯನ್ನು ಪ್ರವೇಶಿಸಿರಿ.” ಅವಳು ಅದನ್ನು ನೋಡಿದಾಗ ಅದೊಂದು ಕೊಳವಾಗಿರಬೇಕೆಂದು ಭಾವಿಸಿ ತನ್ನ ಕಣಕಾಲುಗಳಿಂದ ಬಟ್ಟೆಯನ್ನು ಎತ್ತಿದಳು. ಸುಲೈಮಾನ್ ಹೇಳಿದರು: “ಇದು ಸ್ಫಟಿಕವನ್ನು ಹಾಸಿ ಹೊಳೆಯುವಂತೆ ಮಾಡಿದ ಅರಮನೆಯಾಗಿದೆ.” ಅವಳು ಹೇಳಿದಳು: “ಓ ನನ್ನ ಪರಿಪಾಲಕನೇ! ನಾನು ಸ್ವತಃ ನನ್ನ ಮೇಲೆಯೇ ಅನ್ಯಾಯವೆಸಗಿದ್ದೇನೆ. ನಾನು ಸುಲೈಮಾನರೊಂದಿಗೆ ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಶರಣಾಗಿದ್ದೇನೆ.”

    ೪೫

    وَلَقَدۡ أَرۡسَلۡنَآ إِلَىٰ ثَمُودَ أَخَاهُمۡ صَٰلِحًا أَنِ ٱعۡبُدُواْ ٱللَّهَ فَإِذَا هُمۡ فَرِيقَانِ يَخۡتَصِمُونَ

    ನಾವು ಸಮೂದ್ ಗೋತ್ರಕ್ಕೆ ಅವರ ಸಹೋದರ ಸ್ವಾಲಿಹರನ್ನು ಕಳುಹಿಸಿದೆವು. ಅವರು ಜನರೊಡನೆ “ಅಲ್ಲಾಹನನ್ನು ಮಾತ್ರ ಆರಾಧಿಸಿರಿ” ಎಂದು ಹೇಳಿದರು. ಆಗ ಅವರು ಪರಸ್ಪರ ತರ್ಕಿಸುವ ಎರಡು ಗುಂಪುಗಳಾಗಿ ಮಾರ್ಪಟ್ಟರು.

    ೪೬

    قَالَ يَٰقَوۡمِ لِمَ تَسۡتَعۡجِلُونَ بِٱلسَّيِّئَةِ قَبۡلَ ٱلۡحَسَنَةِۖ لَوۡلَا تَسۡتَغۡفِرُونَ ٱللَّهَ لَعَلَّكُمۡ تُرۡحَمُونَ

    ಸ್ವಾಲಿಹ್ ಹೇಳಿದರು: “ನನ್ನ ಜನರೇ! ನೀವು ಒಳಿತು ಮಾಡುವುದಕ್ಕೆ ಮೊದಲು ಕೆಡುಕು ಮಾಡಲು ಏಕೆ ತ್ವರೆ ಮಾಡುತ್ತೀರಿ? ನೀವೇಕೆ ಅಲ್ಲಾಹನಲ್ಲಿ ಕ್ಷಮೆಯಾಚಿಸುವುದಿಲ್ಲ? ಅವನು ನಿಮಗೆ ದಯೆ ತೋರಬಹುದಲ್ಲವೇ.”

    ೪೭

    قَالُواْ ٱطَّيَّرۡنَا بِكَ وَبِمَن مَّعَكَۚ قَالَ طَٰٓئِرُكُمۡ عِندَ ٱللَّهِۖ بَلۡ أَنتُمۡ قَوۡمٞ تُفۡتَنُونَ

    ಅವರು ಹೇಳಿದರು: “ನೀನು ಮತ್ತು ನಿನ್ನ ಅನುಯಾಯಿಗಳು ನಮಗೆ ಅಪಶಕುನವಾಗಿದ್ದಾರೆ.” ಸ್ವಾಲಿಹ್ ಹೇಳಿದರು: “ನಿಮ್ಮ ಅಪಶಕುನವು ಅಲ್ಲಾಹನ ಬಳಿಯಿದೆ. ಅಲ್ಲ, ವಾಸ್ತವವಾಗಿ ನೀವು ಪರೀಕ್ಷೆಗೆ ತುತ್ತಾದ ಜನರಾಗಿದ್ದೀರಿ.”

    ೪೮

    وَكَانَ فِي ٱلۡمَدِينَةِ تِسۡعَةُ رَهۡطٖ يُفۡسِدُونَ فِي ٱلۡأَرۡضِ وَلَا يُصۡلِحُونَ

    ಆ ಊರಿನಲ್ಲಿ ಒಂಬತ್ತು ಮುಖಂಡರಿದ್ದರು. ಅವರು ಊರಿನಲ್ಲಿ ಕಿಡಿಗೇಡಿತನ ಮಾಡುತ್ತಿದ್ದರೇ ವಿನಾ ಒಳಿತು ಮಾಡುತ್ತಿರಲಿಲ್ಲ.

    ೪೯

    قَالُواْ تَقَاسَمُواْ بِٱللَّهِ لَنُبَيِّتَنَّهُۥ وَأَهۡلَهُۥ ثُمَّ لَنَقُولَنَّ لِوَلِيِّهِۦ مَا شَهِدۡنَا مَهۡلِكَ أَهۡلِهِۦ وَإِنَّا لَصَٰدِقُونَ

    ಆ ಮುಖಂಡರು ಪರಸ್ಪರ ಆಣೆ ಮಾಡುತ್ತಾ ಒಂದು ನಿರ್ಧಾರ ತೆಗೆದು ಹೇಳಿದರು: “ನಾವು ರಾತ್ರಿ ಸ್ವಾಲಿಹ್ ಮತ್ತು ಅವರ ಕುಟುಂಬದವರನ್ನು ಕೊಂದು ಬಿಡೋಣ. ನಂತರ ಅವರ ವಾರಸುದಾರರೊಡನೆ, ಇವನ ಕುಟುಂಬವ ಹತ್ಯೆಯಾಗುವಾಗ ನಾವು ಅಲ್ಲಿರಲಿಲ್ಲ. ನಾವು ಖಂಡಿತವಾಗಿಯೂ ಸತ್ಯವನ್ನೇ ಹೇಳುತ್ತಿದ್ದೇವೆ ಎಂದು ಹೇಳಿ ಬಿಡೋಣ.”

    ೫೦

    وَمَكَرُواْ مَكۡرٗا وَمَكَرۡنَا مَكۡرٗا وَهُمۡ لَا يَشۡعُرُونَ

    ಅವರು ತಂತ್ರಗಾರಿಕೆ ಮಾಡಿದರು. ನಾವು ಕೂಡ ತಂತ್ರಗಾರಿಕೆ ಮಾಡಿದೆವು. ಅವರು ಅದನ್ನು ತಿಳಿಯಲೇ ಇಲ್ಲ.

    ೫೧

    فَٱنظُرۡ كَيۡفَ كَانَ عَٰقِبَةُ مَكۡرِهِمۡ أَنَّا دَمَّرۡنَٰهُمۡ وَقَوۡمَهُمۡ أَجۡمَعِينَ

    ನಂತರ ಅವರ ತಂತ್ರಗಾರಿಕೆಯ ಫಲಿತಾಂಶವು ಹೇಗಿತ್ತೆಂದು ನೋಡಿರಿ. ಅದೇನೆಂದರೆ, ನಾವು ಅವರನ್ನು ಮತ್ತು ಅವರ ಜನರನ್ನು ಸಂಪೂರ್ಣವಾಗಿ ನಾಶ ಮಾಡಿದೆವು.

    ೫೨

    فَتِلۡكَ بُيُوتُهُمۡ خَاوِيَةَۢ بِمَا ظَلَمُوٓاْۚ إِنَّ فِي ذَٰلِكَ لَأٓيَةٗ لِّقَوۡمٖ يَعۡلَمُونَ

    ಅವರು ಅಕ್ರಮವೆಸಗಿದ ಕಾರಣ ಅವರ ಮನೆಗಳು ಜನವಾಸವಿಲ್ಲದೆ ಕುಸಿದು ಬಿದ್ದಿವೆ. ನಿಶ್ಚಯವಾಗಿಯೂ ತಿಳುವಳಿಕೆಯಿರುವ ಜನರಿಗೆ ಅದರಲ್ಲಿ ದೃಷ್ಟಾಂತವಿದೆ.

    ೫೩

    وَأَنجَيۡنَا ٱلَّذِينَ ءَامَنُواْ وَكَانُواْ يَتَّقُونَ

    ನಾವು ಸತ್ಯವಿಶ್ವಾಸಿಗಳನ್ನು ಮತ್ತು ದೇವಭಯವುಳ್ಳವರನ್ನು ರಕ್ಷಿಸಿದೆವು.

    ೫೪

    وَلُوطًا إِذۡ قَالَ لِقَوۡمِهِۦٓ أَتَأۡتُونَ ٱلۡفَٰحِشَةَ وَأَنتُمۡ تُبۡصِرُونَ

    ಲೂತರನ್ನು ನೆನಪಿಸಿಕೊಳ್ಳಿರಿ. ಅವರು ತಮ್ಮ ಜನರೊಡನೆ ಕೇಳಿದ ಸಂದರ್ಭ: “ಅತ್ಯಂತ ನಿಕೃಷ್ಟ ಕೆಲಸವೆಂದು ತಿಳಿದೂ ಸಹ ನೀವು ಈ ಅಶ್ಲೀಲಕ್ಕೆ ಮುಂದಾಗುತ್ತೀರಾ?

    ೫೫

    أَئِنَّكُمۡ لَتَأۡتُونَ ٱلرِّجَالَ شَهۡوَةٗ مِّن دُونِ ٱلنِّسَآءِۚ بَلۡ أَنتُمۡ قَوۡمٞ تَجۡهَلُونَ

    ನೀವು ಲೈಂಗಿಕ ತೃಷೆಯನ್ನು ತೀರಿಸಲು ಮಹಿಳೆಯರ ಬದಲು ಪುರುಷರ ಬಳಿಗೆ ಹೋಗುತ್ತೀರಾ? ಅಲ್ಲ, ವಾಸ್ತವವಾಗಿ ನೀವು ವಿವೇಕವಿಲ್ಲದ ಜನರಾಗಿದ್ದೀರಿ.

    ೫೬

    ۞ فَمَا كَانَ جَوَابَ قَوۡمِهِۦٓ إِلَّآ أَن قَالُوٓاْ أَخۡرِجُوٓاْ ءَالَ لُوطٖ مِّن قَرۡيَتِكُمۡۖ إِنَّهُمۡ أُنَاسٞ يَتَطَهَّرُونَ

    ಆಗ ಆ ಜನರ ಉತ್ತರವು ಕೇವಲ ಈ ರೀತಿಯಾಗಿತ್ತು: “ಲೂತರ ಕುಟುಂಬವನ್ನು ನಿಮ್ಮ ಊರಿನಿಂದ ಓಡಿಸಿರಿ. ಅವರು ಬಹಳ ಪರಿಶುದ್ಧರಂತೆ ವರ್ತಿಸುತ್ತಿದ್ದಾರೆ.”

    ೫೭

    فَأَنجَيۡنَٰهُ وَأَهۡلَهُۥٓ إِلَّا ٱمۡرَأَتَهُۥ قَدَّرۡنَٰهَا مِنَ ٱلۡغَٰبِرِينَ

    ಆಗ ನಾವು ಅವರನ್ನು ಮತ್ತು ಅವರ ಕುಟುಂಬವನ್ನು ರಕ್ಷಿಸಿದೆವು; ಅವರ ಹೆಂಡತಿಯನ್ನು ಬಿಟ್ಟು. ಅವಳು ಹಿಂದೆ ಉಳಿದವರಲ್ಲಿ ಸೇರಬೇಕೆಂದು ನಾವು ನಿರ್ಣಯಿಸಿದೆವು.

    ೫೮

    وَأَمۡطَرۡنَا عَلَيۡهِم مَّطَرٗاۖ فَسَآءَ مَطَرُ ٱلۡمُنذَرِينَ

    ನಾವು ಅವರ ಮೇಲೆ ಒಂದು ವಿಶೇಷ ಮಳೆಯನ್ನು ಸುರಿಸಿದೆವು. ಎಚ್ಚರಿಕೆ ನೀಡಲಾದವರ ಮೇಲೆ ಸುರಿದ ಆ ಮಳೆಯು ಬಹಳ ನಿಕೃಷ್ಟವಾಗಿದೆ!

    ೫೯

    قُلِ ٱلۡحَمۡدُ لِلَّهِ وَسَلَٰمٌ عَلَىٰ عِبَادِهِ ٱلَّذِينَ ٱصۡطَفَىٰٓۗ ءَآللَّهُ خَيۡرٌ أَمَّا يُشۡرِكُونَ

    ಹೇಳಿರಿ: “ಅಲ್ಲಾಹನಿಗೆ ಸರ್ವಸ್ತುತಿ. ಅವನು ಆರಿಸಿದ ಅವನ ದಾಸರ ಮೇಲೆ ಶಾಂತಿಯಿರಲಿ. ಯಾರು ಶ್ರೇಷ್ಠರು? ಅಲ್ಲಾಹನೋ ಅಥವಾ ಅವರು ಅವನೊಂದಿಗೆ ಸಹಭಾಗಿಯಾಗಿ ಮಾಡಿದ ದೇವರುಗಳೋ?

    ೬೦

    أَمَّنۡ خَلَقَ ٱلسَّمَٰوَٰتِ وَٱلۡأَرۡضَ وَأَنزَلَ لَكُم مِّنَ ٱلسَّمَآءِ مَآءٗ فَأَنۢبَتۡنَا بِهِۦ حَدَآئِقَ ذَاتَ بَهۡجَةٖ مَّا كَانَ لَكُمۡ أَن تُنۢبِتُواْ شَجَرَهَآۗ أَءِلَٰهٞ مَّعَ ٱللَّهِۚ بَلۡ هُمۡ قَوۡمٞ يَعۡدِلُونَ

    ಭೂಮ್ಯಾಕಾಶಗಳನ್ನು ಸೃಷ್ಟಿಸಿದವನು ಮತ್ತು ಆಕಾಶದಿಂದ ನಿಮಗೆ ಮಳೆಯನ್ನು ಸುರಿಸಿದವನೋ? ನಂತರ ನಾವು ಅದರಿಂದ ಕಣ್ಮನ ತಣಿಸುವ ತೋಟಗಳನ್ನು ಬೆಳೆಸಿದೆವು. ಅದರ ಮರಗಳನ್ನು ಬೆಳೆಸಲು ನಿಮಗೆ ಸಾಧ್ಯವಾಗುತ್ತಿರಲಿಲ್ಲ. ಅಲ್ಲಾಹನೊಂದಿಗೆ ಬೇರೆ ದೇವರುಗಳು ಇದ್ದಾರೆಯೇ? ಅಲ್ಲ, ಅವರು (ಸತ್ಯಮಾರ್ಗದಿಂದ) ತಪ್ಪಿಹೋಗುವ ಜನರಾಗಿದ್ದಾರೆ.

    ೬೧

    أَمَّن جَعَلَ ٱلۡأَرۡضَ قَرَارٗا وَجَعَلَ خِلَٰلَهَآ أَنۡهَٰرٗا وَجَعَلَ لَهَا رَوَٰسِيَ وَجَعَلَ بَيۡنَ ٱلۡبَحۡرَيۡنِ حَاجِزًاۗ أَءِلَٰهٞ مَّعَ ٱللَّهِۚ بَلۡ أَكۡثَرُهُمۡ لَا يَعۡلَمُونَ

    ಭೂಮಿಯನ್ನು ವಾಸಯೋಗ್ಯವಾಗಿ ಮಾಡಿದವನು, ಅದರ ನಡುವೆ ನದಿಗಳನ್ನು ಹರಿಸಿದವನು, ಅದಕ್ಕೆ ಸ್ಥಿರತೆಯನ್ನು ನೀಡುವ ಪರ್ವತಗಳನ್ನು ನಿರ್ಮಿಸಿದವನು ಮತ್ತು ಎರಡು ಸಮುದ್ರಗಳ ನಡುವೆ ತಡೆಯನ್ನಿರಿಸಿದವನೋ? ಅಲ್ಲಾಹನೊಂದಿಗೆ ಬೇರೆ ದೇವರುಗಳು ಇದ್ದಾರೆಯೇ? ಅಲ್ಲ, ಅವರಲ್ಲಿ ಹೆಚ್ಚಿನವರಿಗೂ ತಿಳಿದಿಲ್ಲ.

    ೬೨

    أَمَّن يُجِيبُ ٱلۡمُضۡطَرَّ إِذَا دَعَاهُ وَيَكۡشِفُ ٱلسُّوٓءَ وَيَجۡعَلُكُمۡ خُلَفَآءَ ٱلۡأَرۡضِۗ أَءِلَٰهٞ مَّعَ ٱللَّهِۚ قَلِيلٗا مَّا تَذَكَّرُونَ

    ಕಷ್ಟದಲ್ಲಿರುವವನು ಕರೆದು ಪ್ರಾರ್ಥಿಸಿದಾಗ ಅವನಿಗೆ ಉತ್ತರ ನೀಡುವವನು, ಕಷ್ಟವನ್ನು ನಿವಾರಿಸುವವನು ಮತ್ತು ನಿಮ್ಮನ್ನು ಭೂಮಿಯಲ್ಲಿ ಪ್ರತಿನಿಧಿಗಳನ್ನಾಗಿ ಮಾಡುವವನೋ? ಅಲ್ಲಾಹನೊಂದಿಗೆ ಬೇರೆ ದೇವರುಗಳು ಇದ್ದಾರೆಯೇ? ನೀವು ಸ್ವಲ್ಪವೇ ಉಪದೇಶ ಪಡೆಯುತ್ತೀರಿ.

    ೬೩

    أَمَّن يَهۡدِيكُمۡ فِي ظُلُمَٰتِ ٱلۡبَرِّ وَٱلۡبَحۡرِ وَمَن يُرۡسِلُ ٱلرِّيَٰحَ بُشۡرَۢا بَيۡنَ يَدَيۡ رَحۡمَتِهِۦٓۗ أَءِلَٰهٞ مَّعَ ٱللَّهِۚ تَعَٰلَى ٱللَّهُ عَمَّا يُشۡرِكُونَ

    ನೆಲ ಮತ್ತು ಸಮುದ್ರಗಳ ಅಂಧಕಾರಗಳಲ್ಲಿ ನಿಮಗೆ ದಾರಿ ತೋರಿಸುವವನು ಮತ್ತು ತನ್ನ ದಯೆಗೆ (ಮಳೆಗೆ) ಮೊದಲು ಸುವಾರ್ತೆಯಾಗಿ ಗಾಳಿಯನ್ನು ಕಳುಹಿಸುವವನೋ? ಅಲ್ಲಾಹನೊಂದಿಗೆ ಬೇರೆ ದೇವರುಗಳು ಇದ್ದಾರೆಯೇ? ಅವರು ಮಾಡುವ ಸಹಭಾಗಿತ್ವ (ಶಿರ್ಕ್) ದಿಂದ ಅಲ್ಲಾಹು ಎಷ್ಟೋ ಉನ್ನತನಾಗಿದ್ದಾನೆ.

    ೬೪

    أَمَّن يَبۡدَؤُاْ ٱلۡخَلۡقَ ثُمَّ يُعِيدُهُۥ وَمَن يَرۡزُقُكُم مِّنَ ٱلسَّمَآءِ وَٱلۡأَرۡضِۗ أَءِلَٰهٞ مَّعَ ٱللَّهِۚ قُلۡ هَاتُواْ بُرۡهَٰنَكُمۡ إِن كُنتُمۡ صَٰدِقِينَ

    ಮೊದಲ ಬಾರಿಗೆ ಸೃಷ್ಟಿಸಿ ನಂತರ ಆ ಸೃಷ್ಟಿಯನ್ನು ಪುನರಾವರ್ತಿಸುವವನು ಮತ್ತು ಭೂಮ್ಯಾಕಾಶಗಳಿಂದ ನಿಮಗೆ ಆಹಾರಗಳನ್ನು ಒದಗಿಸುವವನೋ? ಅಲ್ಲಾಹನೊಂದಿಗೆ ಬೇರೆ ದೇವರುಗಳು ಇದ್ದಾರೆಯೇ? ಹೇಳಿರಿ: “ನೀವು ಸತ್ಯವಂತರಾಗಿದ್ದರೆ ನಿಮ್ಮಲ್ಲಿರುವ ಸಾಕ್ಷ್ಯಾಧಾರವನ್ನು ತನ್ನಿರಿ.”

    ೬೫

    قُل لَّا يَعۡلَمُ مَن فِي ٱلسَّمَٰوَٰتِ وَٱلۡأَرۡضِ ٱلۡغَيۡبَ إِلَّا ٱللَّهُۚ وَمَا يَشۡعُرُونَ أَيَّانَ يُبۡعَثُونَ

    ಹೇಳಿರಿ: “ಅಲ್ಲಾಹನ ಹೊರತು ಭೂಮ್ಯಾಕಾಶಗಳಲ್ಲಿರುವ ಯಾರಿಗೂ ಅದೃಶ್ಯ ಜ್ಞಾನವಿಲ್ಲ. ಅವರನ್ನು ಯಾವಾಗ ಜೀವ ನೀಡಿ ಎಬ್ಬಿಸಲಾಗುತ್ತದೆಯೆಂದು ಕೂಡ ಅವರಿಗೆ ತಿಳಿದಿಲ್ಲ.”

    ೬೬

    بَلِ ٱدَّٰرَكَ عِلۡمُهُمۡ فِي ٱلۡأٓخِرَةِۚ بَلۡ هُمۡ فِي شَكّٖ مِّنۡهَاۖ بَلۡ هُم مِّنۡهَا عَمُونَ

    ಅಲ್ಲ, ಪರಲೋಕದ ಕುರಿತಾದ ಅವರ ಜ್ಞಾನವು ಬರಿದಾಗಿ ಬಿಟ್ಟಿದೆ. ಅಲ್ಲ, ಅವರು ಅದರ ಬಗ್ಗೆ ಸಂಶಯದಲ್ಲಿದ್ದಾರೆ. ಅಲ್ಲ, ಅವರು ಅದರ ಬಗ್ಗೆ ಕುರುಡರಾಗಿದ್ದಾರೆ.

    ೬೭

    وَقَالَ ٱلَّذِينَ كَفَرُوٓاْ أَءِذَا كُنَّا تُرَٰبٗا وَءَابَآؤُنَآ أَئِنَّا لَمُخۡرَجُونَ

    ಸತ್ಯನಿಷೇಧಿಗಳು ಹೇಳಿದರು: “ನಾವು ಮತ್ತು ನಮ್ಮ ಪೂರ್ವಜರು ಮಣ್ಣಾಗಿ ಹೋದ ಬಳಿಕ ನಮ್ಮನ್ನು (ಜೀವ ನೀಡಿ) ಹೊರತರಲಾಗುತ್ತದೆಯೇ?

    ೬೮

    لَقَدۡ وُعِدۡنَا هَٰذَا نَحۡنُ وَءَابَآؤُنَا مِن قَبۡلُ إِنۡ هَٰذَآ إِلَّآ أَسَٰطِيرُ ٱلۡأَوَّلِينَ

    ನಮಗೂ, ನಮಗಿಂತ ಮೊದಲಿನ ನಮ್ಮ ಪೂರ್ವಜರಿಗೂ ಇದನ್ನೇ ವಾಗ್ದಾನ ಮಾಡಲಾಗಿದೆ. ಇವು ಪ್ರಾಚೀನ ಕಾಲದ ಜನರ ಪುರಾಣಗಳೇ ಹೊರತು ಇನ್ನೇನಲ್ಲ.”

    ೬೯

    قُلۡ سِيرُواْ فِي ٱلۡأَرۡضِ فَٱنظُرُواْ كَيۡفَ كَانَ عَٰقِبَةُ ٱلۡمُجۡرِمِينَ

    ಹೇಳಿರಿ: “ನೀವು ಭೂಮಿಯಲ್ಲಿ ಸಂಚರಿಸಿರಿ. ನಂತರ ಅಪರಾಧಿಗಳ ಅಂತಿಮ ಫಲಿತಾಂಶವು ಹೇಗಿತ್ತೆಂದು ನೋಡಿರಿ.”

    ೭೦

    وَلَا تَحۡزَنۡ عَلَيۡهِمۡ وَلَا تَكُن فِي ضَيۡقٖ مِّمَّا يَمۡكُرُونَ

    (ಪ್ರವಾದಿಯವರೇ) ಅವರ ಬಗ್ಗೆ ಬೇಸರಪಡಬೇಡಿ. ಅವರು ಮಾಡುತ್ತಿರುವ ಪಿತೂರಿಗಳ ಬಗ್ಗೆ ವ್ಯಥೆಪಡಬೇಡಿ.

    ೭೧

    وَيَقُولُونَ مَتَىٰ هَٰذَا ٱلۡوَعۡدُ إِن كُنتُمۡ صَٰدِقِينَ

    ಅವರು ಹೇಳುತ್ತಾರೆ: “ಈ ವಾಗ್ದಾನವು ಯಾವಾಗ ಬರುತ್ತದೆ? ನೀವು ಸತ್ಯವಂತರಾಗಿದ್ದರೆ (ಹೇಳಿರಿ).”

    ೭೨

    قُلۡ عَسَىٰٓ أَن يَكُونَ رَدِفَ لَكُم بَعۡضُ ٱلَّذِي تَسۡتَعۡجِلُونَ

    ಹೇಳಿರಿ: “ಬಹುಶಃ ನೀವು ತ್ವರೆ ಮಾಡುವ ವಿಷಯಗಳಲ್ಲಿ ಕೆಲವು ನಿಮ್ಮ ಸಮೀಪವೇ ಇರಬಹುದು.”

    ೭೩

    وَإِنَّ رَبَّكَ لَذُو فَضۡلٍ عَلَى ٱلنَّاسِ وَلَٰكِنَّ أَكۡثَرَهُمۡ لَا يَشۡكُرُونَ

    ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ಮನುಷ್ಯರ ಮೇಲೆ ಬಹಳ ಔದಾರ್ಯವಿದೆ. ಆದರೆ ಅವರಲ್ಲಿ ಹೆಚ್ಚಿನವರು ಕೃತಜ್ಞರಾಗುವುದಿಲ್ಲ.

    ೭೪

    وَإِنَّ رَبَّكَ لَيَعۡلَمُ مَا تُكِنُّ صُدُورُهُمۡ وَمَا يُعۡلِنُونَ

    ಅವರ ಹೃದಯಗಳು ರಹಸ್ಯವಾಗಿಡುವುದನ್ನು ಮತ್ತು ಅವರು ಬಹಿರಂಗಪಡಿಸುವುದನ್ನು ನಿಮ್ಮ ಪರಿಪಾಲಕನು (ಅಲ್ಲಾಹು) ತಿಳಿಯುತ್ತಾನೆ.

    ೭೫

    وَمَا مِنۡ غَآئِبَةٖ فِي ٱلسَّمَآءِ وَٱلۡأَرۡضِ إِلَّا فِي كِتَٰبٖ مُّبِينٍ

    ಭೂಮ್ಯಾಕಾಶಗಳಲ್ಲಿ ಅದೃಶ್ಯವಾಗಿರುವ ಯಾವುದೇ ವಸ್ತುವೂ ಇಲ್ಲ—ಅದು ಸ್ಪಷ್ಟವಾದ ಒಂದು ದಾಖಲೆಯಲ್ಲಿ ನಮೂದಾಗಿರುವ ಹೊರತು.

    ೭೬

    إِنَّ هَٰذَا ٱلۡقُرۡءَانَ يَقُصُّ عَلَىٰ بَنِيٓ إِسۡرَٰٓءِيلَ أَكۡثَرَ ٱلَّذِي هُمۡ فِيهِ يَخۡتَلِفُونَ

    ಇಸ್ರಾಯೇಲ್ ಮಕ್ಕಳು ಭಿನ್ನಮತ ತಳೆದಿರುವ ಹೆಚ್ಚಿನ ವಿಷಯಗಳನ್ನೂ ಈ ಕುರ್‌ಆನ್ ಅವರಿಗೆ ವಿವರಿಸಿಕೊಡುತ್ತದೆ.

    ೭೭

    وَإِنَّهُۥ لَهُدٗى وَرَحۡمَةٞ لِّلۡمُؤۡمِنِينَ

    ನಿಶ್ಚಯವಾಗಿಯೂ ಇದು ಸತ್ಯವಿಶ್ವಾಸಿಗಳಿಗೆ ಸನ್ಮಾರ್ಗದರ್ಶಿ ಮತ್ತು ದಯೆಯಾಗಿದೆ.

    ೭೮

    إِنَّ رَبَّكَ يَقۡضِي بَيۡنَهُم بِحُكۡمِهِۦۚ وَهُوَ ٱلۡعَزِيزُ ٱلۡعَلِيمُ

    ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ತನ್ನ ತೀರ್ಪಿನ ಮೂಲಕ ಅವರ ನಡುವೆ ತೀರ್ಮಾನ ಮಾಡುವನು. ಅವನು ಪ್ರಬಲನು ಮತ್ತು ಸರ್ವಜ್ಞನಾಗಿದ್ದಾನೆ.

    ೭೯

    فَتَوَكَّلۡ عَلَى ٱللَّهِۖ إِنَّكَ عَلَى ٱلۡحَقِّ ٱلۡمُبِينِ

    ಆದ್ದರಿಂದ ನೀವು ಅಲ್ಲಾಹನಲ್ಲಿ ಭರವಸೆಯಿಡಿ. ನಿಶ್ಚಯವಾಗಿಯೂ ನೀವು ಸ್ಪಷ್ಟ ಸತ್ಯದಲ್ಲಿದ್ದೀರಿ.

    ೮೦

    إِنَّكَ لَا تُسۡمِعُ ٱلۡمَوۡتَىٰ وَلَا تُسۡمِعُ ٱلصُّمَّ ٱلدُّعَآءَ إِذَا وَلَّوۡاْ مُدۡبِرِينَ

    ಮೃತರಿಗೆ ಕೇಳುವಂತೆ ಮಾಡಲು ನಿಮಗೆ ಖಂಡಿತ ಸಾಧ್ಯವಿಲ್ಲ. ಕಿವುಡರು ಬೆನ್ನು ತಿರುಗಿಸಿ ನಡೆದರೆ ಅವರಿಗೆ ಕರೆ ಕೇಳುವಂತೆ ಮಾಡಲು ಕೂಡ ನಿಮಗೆ ಸಾಧ್ಯವಿಲ್ಲ.

    ೮೧

    وَمَآ أَنتَ بِهَٰدِي ٱلۡعُمۡيِ عَن ضَلَٰلَتِهِمۡۖ إِن تُسۡمِعُ إِلَّا مَن يُؤۡمِنُ بِـَٔايَٰتِنَا فَهُم مُّسۡلِمُونَ

    ಕುರುಡರನ್ನು ಅವರ ದುರ್ಮಾರ್ಗದಿಂದ ಮುಕ್ತಗೊಳಿಸಿ ಸನ್ಮಾರ್ಗಕ್ಕೆ ದಾರಿ ತೋರಿಸಲು ನಿಮಗೆ ಸಾಧ್ಯವಿಲ್ಲ. ನಮ್ಮ ವಚನಗಳಲ್ಲಿ ವಿಶ್ವಾಸವಿಟ್ಟು ನಂತರ ಶರಣಾಗುವವರು ಯಾರೋ ಅವರಿಗೆ ಮಾತ್ರ ನೀವು ಕೇಳುವಂತೆ ಮಾಡಬಲ್ಲಿರಿ.

    ೮೨

    ۞ وَإِذَا وَقَعَ ٱلۡقَوۡلُ عَلَيۡهِمۡ أَخۡرَجۡنَا لَهُمۡ دَآبَّةٗ مِّنَ ٱلۡأَرۡضِ تُكَلِّمُهُمۡ أَنَّ ٱلنَّاسَ كَانُواْ بِـَٔايَٰتِنَا لَا يُوقِنُونَ

    ಅವರ ಮೇಲೆ ಶಿಕ್ಷೆಯ ವಚನವು ನಿಜವಾಗುವಾಗ, ನಾವು ಅವರಿಗೋಸ್ಕರ ಭೂಮಿಯಿಂದ ಒಂದು ಜೀವಿಯನ್ನು ಹೊರತರುವೆವು. ಅದು ಅವರೊಡನೆ ಮಾತನಾಡುತ್ತಾ ಹೇಳುವುದು: “ಜನರು ನಮ್ಮ ವಚನಗಳಲ್ಲಿ ದೃಢವಾದ ವಿಶ್ವಾಸವನ್ನು ಹೊಂದಿರಲಿಲ್ಲ.”

    ೮೩

    وَيَوۡمَ نَحۡشُرُ مِن كُلِّ أُمَّةٖ فَوۡجٗا مِّمَّن يُكَذِّبُ بِـَٔايَٰتِنَا فَهُمۡ يُوزَعُونَ

    ನಾವು ಎಲ್ಲಾ ಸಮುದಾಯಗಳಿಂದಲೂ ನಮ್ಮ ವಚನಗಳನ್ನು ನಿಷೇಧಿಸುವ ಒಂದೊಂದು ಗುಂಪನ್ನು ಒಟ್ಟುಗೂಡಿಸುವ ದಿನ. ನಂತರ ಅವರನ್ನು ಬೇರೆ ಬೇರೆಯಾಗಿ ನಿಲ್ಲಿಸಲಾಗುವುದು.

    ೮೪

    حَتَّىٰٓ إِذَا جَآءُو قَالَ أَكَذَّبۡتُم بِـَٔايَٰتِي وَلَمۡ تُحِيطُواْ بِهَا عِلۡمًا أَمَّاذَا كُنتُمۡ تَعۡمَلُونَ

    ಅವರೆಲ್ಲರೂ ಬಂದು ಸೇರಿದಾಗ, ಅಲ್ಲಾಹು ಕೇಳುವನು: “ನನ್ನ ವಚನಗಳ ಬಗ್ಗೆ ನಿಮಗೆ ಪೂರ್ಣವಾದ ಜ್ಞಾನವಿಲ್ಲದಿದ್ದೂ ಸಹ ನೀವು ಅವುಗಳನ್ನು ಏಕೆ ನಿಷೇಧಿಸಿದಿರಿ? ಅಥವಾ ನೀವು ಏನು ಮಾಡುತ್ತಿದ್ದಿರಿ?”

    ೮೫

    وَوَقَعَ ٱلۡقَوۡلُ عَلَيۡهِم بِمَا ظَلَمُواْ فَهُمۡ لَا يَنطِقُونَ

    ಅವರು ಮಾಡಿದ ಅಕ್ರಮಗಳಿಂದಾಗಿ ಅವರ ಮೇಲೆ ಶಿಕ್ಷೆಯ ವಚನವು ಖಾತ್ರಿಯಾಗಿ ಬಿಟ್ಟಿತು. ಆಗ ಅವರು ಏನೂ ಮಾತನಾಡಲಾರರು.

    ೮೬

    أَلَمۡ يَرَوۡاْ أَنَّا جَعَلۡنَا ٱلَّيۡلَ لِيَسۡكُنُواْ فِيهِ وَٱلنَّهَارَ مُبۡصِرًاۚ إِنَّ فِي ذَٰلِكَ لَأٓيَٰتٖ لِّقَوۡمٖ يُؤۡمِنُونَ

    ನಾವು ಅವರಿಗೆ ರಾತ್ರಿಯನ್ನು ವಿಶ್ರಾಂತಿ ಪಡೆಯುವುದಕ್ಕಾಗಿ ಮತ್ತು ಹಗಲನ್ನು ಪ್ರಕಾಶಮಾನವಾಗಿ ಮಾಡಿದ್ದನ್ನು ಅವರು ನೋಡಿಲ್ಲವೇ? ನಿಶ್ಚಯವಾಗಿಯೂ ವಿಶ್ವಾಸವಿಡುವ ಜನರಿಗೆ ಅದರಲ್ಲಿ ದೃಷ್ಟಾಂತಗಳಿವೆ.

    ೮೭

    وَيَوۡمَ يُنفَخُ فِي ٱلصُّورِ فَفَزِعَ مَن فِي ٱلسَّمَٰوَٰتِ وَمَن فِي ٱلۡأَرۡضِ إِلَّا مَن شَآءَ ٱللَّهُۚ وَكُلٌّ أَتَوۡهُ دَٰخِرِينَ

    ಕಹಳೆಯಲ್ಲಿ ಊದಲಾಗುವ ದಿನ! ಆಗ ಭೂಮ್ಯಾಕಾಶಗಳಲ್ಲಿರುವವರೆಲ್ಲರೂ ಭಯದಿಂದ ನಡುಗುವರು—ಅಲ್ಲಾಹು ಇಚ್ಛಿಸಿದವರ ಹೊರತು. ಎಲ್ಲರೂ ಅತ್ಯಂತ ವಿನಯದಿಂದ ಅವನ ಮುಂದೆ ಬರುವರು.

    ೮೮

    وَتَرَى ٱلۡجِبَالَ تَحۡسَبُهَا جَامِدَةٗ وَهِيَ تَمُرُّ مَرَّ ٱلسَّحَابِۚ صُنۡعَ ٱللَّهِ ٱلَّذِيٓ أَتۡقَنَ كُلَّ شَيۡءٍۚ إِنَّهُۥ خَبِيرُۢ بِمَا تَفۡعَلُونَ

    ನೀವು ಪರ್ವತಗಳನ್ನು ನೋಡುವಾಗ ಅವುಗಳನ್ನು ನಿಶ್ಚಲವೆಂದು ಭಾವಿಸುತ್ತೀರಿ. ಆದರೆ ಅವು ಮೋಡಗಳಂತೆ ಹಾರಾಡುವುವು. ಎಲ್ಲವೂ ಅಲ್ಲಾಹನ ಕಾಯಕಗಳಾಗಿದ್ದು, ಅವನು ಎಲ್ಲವನ್ನೂ ಸಮರ್ಪಕಗೊಳಿಸಿದ್ದಾನೆ. ನಿಶ್ಚಯವಾಗಿಯೂ ನೀವು ಮಾಡುತ್ತಿರುವ ಕರ್ಮಗಳ ಬಗ್ಗೆ ಅವನು ಸೂಕ್ಷ್ಮಜ್ಞಾನವುಳ್ಳವನಾಗಿದ್ದಾನೆ.

    ೮೯

    مَن جَآءَ بِٱلۡحَسَنَةِ فَلَهُۥ خَيۡرٞ مِّنۡهَا وَهُم مِّن فَزَعٖ يَوۡمَئِذٍ ءَامِنُونَ

    ಯಾರು ಒಂದು ಒಳಿತಿನೊಂದಿಗೆ ಬರುತ್ತಾರೋ, ಅವರಿಗೆ ಅದಕ್ಕಿಂತಲೂ ಶ್ರೇಷ್ಠವಾದುದು ದೊರೆಯುತ್ತದೆ. ಅವರು ಅಂದಿನ ಭಯವಿಹ್ವಲತೆಯಿಂದ ದೂರವಾಗಿ ನಿರ್ಭಯರಾಗಿರುತ್ತಾರೆ.

    ೯೦

    وَمَن جَآءَ بِٱلسَّيِّئَةِ فَكُبَّتۡ وُجُوهُهُمۡ فِي ٱلنَّارِ هَلۡ تُجۡزَوۡنَ إِلَّا مَا كُنتُمۡ تَعۡمَلُونَ

    ಯಾರು ಒಂದು ಕೆಡುಕಿನೊಂದಿಗೆ ಬರುತ್ತಾರೋ, ಅವರು ಅಧೋಮುಖಿಗಳಾಗಿ ನರಕದಲ್ಲಿ ಬೀಳುವರು. ನೀವು ಮಾಡಿರುವ ಕರ್ಮಗಳಿಗಲ್ಲದೆ ಬೇರೇನಾದರೂ ನಿಮಗೆ ಪ್ರತಿಫಲ ನೀಡಲಾಗುವುದೇ?

    ೯೧

    إِنَّمَآ أُمِرۡتُ أَنۡ أَعۡبُدَ رَبَّ هَٰذِهِ ٱلۡبَلۡدَةِ ٱلَّذِي حَرَّمَهَا وَلَهُۥ كُلُّ شَيۡءٖۖ وَأُمِرۡتُ أَنۡ أَكُونَ مِنَ ٱلۡمُسۡلِمِينَ

    ಈ ನಗರವನ್ನು ಪವಿತ್ರಗೊಳಿಸಿದ ಇದರ ಪರಿಪಾಲಕನನ್ನು (ಅಲ್ಲಾಹನನ್ನು) ಮಾತ್ರ ಆರಾಧಿಸಬೇಕೆಂದು ನನಗೆ ಆಜ್ಞಾಪಿಸಲಾಗಿದೆ. ಎಲ್ಲ ವಸ್ತುಗಳೂ ಅವನಿಗೆ ಸೇರಿದ್ದು. ನಾನು ಮುಸಲ್ಮಾನರಲ್ಲಿ ಸೇರಬೇಕೆಂದು ನನಗೆ ಆಜ್ಞಾಪಿಸಲಾಗಿದೆ.

    ೯೨

    وَأَنۡ أَتۡلُوَاْ ٱلۡقُرۡءَانَۖ فَمَنِ ٱهۡتَدَىٰ فَإِنَّمَا يَهۡتَدِي لِنَفۡسِهِۦۖ وَمَن ضَلَّ فَقُلۡ إِنَّمَآ أَنَا۠ مِنَ ٱلۡمُنذِرِينَ

    ಕುರ್‌ಆನನ್ನು ಓದಿಕೊಡುವಂತೆಯೂ (ನನಗೆ ಆಜ್ಞಾಪಿಸಲಾಗಿದೆ). ಯಾರಾದರೂ ಸನ್ಮಾರ್ಗವನ್ನು ಪಡೆದರೆ ಅವನು ಸ್ವತಃ ಅವನ ಒಳಿತಿಗಾಗಿಯೇ ಸನ್ಮಾರ್ಗವನ್ನು ಪಡೆಯುತ್ತಾನೆ. ಯಾರಾದರೂ ದಾರಿತಪ್ಪಿ ನಡೆದರೆ ಹೇಳಿರಿ: “ನಾನು ಕೇವಲ ಒಬ್ಬ ಮುನ್ನೆಚ್ಚರಿಕೆ ನೀಡುವವನು ಮಾತ್ರ.”

    ೯೩

    وَقُلِ ٱلۡحَمۡدُ لِلَّهِ سَيُرِيكُمۡ ءَايَٰتِهِۦ فَتَعۡرِفُونَهَاۚ وَمَا رَبُّكَ بِغَٰفِلٍ عَمَّا تَعۡمَلُونَ

    ಹೇಳಿರಿ: “ಅಲ್ಲಾಹನಿಗೆ ಸರ್ವಸ್ತುತಿ. ಅವನು ನಿಮಗೆ ಅವನ ದೃಷ್ಟಾಂತಗಳನ್ನು ತೋರಿಸಿಕೊಡುವನು. ಆಗ ನೀವು ಅವುಗಳನ್ನು ಅರಿತುಕೊಳ್ಳುವಿರಿ. ನೀವು ಮಾಡುತ್ತಿರುವ ಕರ್ಮಗಳ ಬಗ್ಗೆ ನಿಮ್ಮ ಪರಿಪಾಲಕನು (ಅಲ್ಲಾಹು) ಸ್ವಲ್ಪವೂ ನಿರ್ಲಕ್ಷ್ಯನಲ್ಲ.”

    An-Naml

    Play