Surah Al-Mumtahanah in Kannada

    الممتحنة

    Surah Al-Mumtahanah in Kannada

    Read Surah Al-Mumtahanah in Kannada (الممتحنة) with Arabic text, Kannada translation, and audio recitation. Chapter 60 of the Holy Quran, 13 verses — free online.

    ಕನ್ನಡದಲ್ಲಿ ಕುರ್‌ಆನ್ · all 114 ಸೂರಃs

    يَٰٓأَيُّهَا ٱلَّذِينَ ءَامَنُواْ لَا تَتَّخِذُواْ عَدُوِّي وَعَدُوَّكُمۡ أَوۡلِيَآءَ تُلۡقُونَ إِلَيۡهِم بِٱلۡمَوَدَّةِ وَقَدۡ كَفَرُواْ بِمَا جَآءَكُم مِّنَ ٱلۡحَقِّ يُخۡرِجُونَ ٱلرَّسُولَ وَإِيَّاكُمۡ أَن تُؤۡمِنُواْ بِٱللَّهِ رَبِّكُمۡ إِن كُنتُمۡ خَرَجۡتُمۡ جِهَٰدٗا فِي سَبِيلِي وَٱبۡتِغَآءَ مَرۡضَاتِيۚ تُسِرُّونَ إِلَيۡهِم بِٱلۡمَوَدَّةِ وَأَنَا۠ أَعۡلَمُ بِمَآ أَخۡفَيۡتُمۡ وَمَآ أَعۡلَنتُمۡۚ وَمَن يَفۡعَلۡهُ مِنكُمۡ فَقَدۡ ضَلَّ سَوَآءَ ٱلسَّبِيلِ

    ಓ ಸತ್ಯವಿಶ್ವಾಸಿಗಳೇ! ನನ್ನ ಮತ್ತು ನಿಮ್ಮ ವೈರಿಗಳನ್ನು ಮಿತ್ರರನ್ನಾಗಿ ಮಾಡಿಕೊಳ್ಳಬೇಡಿ. ನೀವು ಅವರೊಡನೆ ಮೈತ್ರಿ ಮಾಡಿಕೊಂಡು ಅವರಿಗೆ ಸಂದೇಶವನ್ನು ಕಳುಹಿಸುತ್ತೀರಿ. ನಿಮ್ಮ ಬಳಿಗೆ ಬಂದಿರುವ ಸತ್ಯವನ್ನು ಅವರು ನಿಷೇಧಿಸಿದ್ದಾರೆ. ನೀವು ನಿಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ವಿಶ್ವಾಸವಿಡುತ್ತೀರಿ ಎಂಬ ಕಾರಣದಿಂದ ಅವರು ಸಂದೇಶವಾಹಕರನ್ನು ಮತ್ತು ನಿಮ್ಮನ್ನು ಊರಿನಿಂದ ಗಡೀಪಾರು ಮಾಡುತ್ತಿದ್ದಾರೆ. ನೀವು ನನ್ನ ಮಾರ್ಗದಲ್ಲಿ ಯುದ್ಧ ಮಾಡಲು ಹೊರಟಿದ್ದರೆ ಮತ್ತು ನನ್ನ ಸಂಪ್ರೀತಿಯನ್ನು ಪಡೆಯುವುದು ನಿಮ್ಮ ಉದ್ದೇಶವಾಗಿದ್ದರೆ (ಅವರೊಂದಿಗೆ ಮೈತ್ರಿ ಮಾಡಿಕೊಳ್ಳಬೇಡಿ). ನೀವು ರಹಸ್ಯವಾಗಿ ಅವರಿಗೆ ಪ್ರೀತಿಯ ಸಂದೇಶವನ್ನು ಕಳುಹಿಸುತ್ತಿದ್ದೀರಿ. ನೀವು ಮುಚ್ಚಿಡುವುದನ್ನು ಮತ್ತು ಬಹಿರಂಗಪಡಿಸುವುದನ್ನು ನಾನು ಬಹಳ ಚೆನ್ನಾಗಿ ತಿಳಿದಿದ್ದೇನೆ. ನಿಮ್ಮಲ್ಲಿ ಯಾರು ಹೀಗೆ ಮಾಡುತ್ತಾನೋ ಅವನು ನೇರ ಮಾರ್ಗದಿಂದ ತಪ್ಪಿಹೋಗಿದ್ದಾನೆ.[1]

    [1] ಹುದೈಬಿಯಾ ಒಪ್ಪಂದದ ಬಳಿಕ ಮಕ್ಕಾದ ಸತ್ಯನಿಷೇಧಿಗಳು ಒಪ್ಪಂದವನ್ನು ಉಲ್ಲಂಘಿಸಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ವಿರುದ್ಧ ಯುದ್ಧದ ತಯಾರಿ ನಡೆಸಿದರು. ಪ್ರವಾದಿಯ ಅನುಯಾಯಿಗಳಲ್ಲಿ ಒಬ್ಬರಾಗಿದ್ದ ಹಾತಿಬ್ ಬಿನ್ ಅಬೂ ಸಅಲಬ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಮಕ್ಕಾದಿಂದ ಹಿಜ್ರ (ವಲಸೆ) ಮಾಡಿದ ಸಹಾಬಿಯಾಗಿದ್ದರು. ಇವರು ಬದ್ರ್ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಇವರಿಗೆ ಮಕ್ಕಾದ ಕುರೈಶರೊಡನೆ ಯಾವುದೇ ಸಂಬಂಧವಿರದಿದ್ದರೂ, ಇವರ ಮಡದಿ ಮಕ್ಕಳು ಮಕ್ಕಾದಲ್ಲಿದ್ದರು. ಮಕ್ಕಾದ ಸತ್ಯನಿಷೇಧಿಗಳು ತನ್ನ ಮಡದಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಲಿ ಎಂಬ ಉದ್ದೇಶದಿಂದ ಅವರು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಯುದ್ಧದ ತಯಾರಿ ನಡೆಸುವ ಸುದ್ದಿಯನ್ನು ರಹಸ್ಯವಾಗಿ ಮಕ್ಕಾದ ಸತ್ಯನಿಷೇಧಿಗಳಿಗೆ ತಿಳಿಸಿದರು. ಇದಕ್ಕಾಗಿ ಅವರು ಒಬ್ಬ ಮಹಿಳೆಯನ್ನು ಗೊತ್ತುಪಡಿಸಿ ಆಕೆಯೊಡನೆ ಮಕ್ಕಾದವರಿಗೆ ಒಂದು ಪತ್ರವನ್ನು ಕಳುಹಿಸಿದರು. ಈ ವಿಷಯ ದೇವವಾಣಿಯ ಮೂಲಕ ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಯಿತು. ಅವರು ಸಹಾಬಿಗಳನ್ನು ಕಳುಹಿಸಿ ಆ ಮಹಿಳೆಯಿಂದ ಪತ್ರವನ್ನು ಕಿತ್ತುಕೊಂಡು ಬರುವಂತೆ ಹೇಳಿದರು. ನಂತರ ಹಾತಿಬ್ (ಅವರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ರನ್ನು ವಿಚಾರಿಸಿದರು. ಹಾತಿಬ್ ತನ್ನ ಪ್ರಾಮಾಣಿಕ ಉದ್ದೇಶವನ್ನು ಮುಚ್ಚುಮರೆಯಿಲ್ಲದೆ ವಿವರಿಸಿದಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರನ್ನು ಕ್ಷಮಿಸಿದರು. ಮುಂದೆ ಸತ್ಯವಿಶ್ವಾಸಿಗಳಲ್ಲಿ ಯಾರೂ ಇಂತಹ ಕೆಲಸ ಮಾಡಬಾರದೆಂಬ ಉದ್ದೇಶದಿಂದ ಅಲ್ಲಾಹು ಈ ವಚನಗಳನ್ನು ಅವತೀರ್ಣಗೊಳಿಸಿದನು.

    إِن يَثۡقَفُوكُمۡ يَكُونُواْ لَكُمۡ أَعۡدَآءٗ وَيَبۡسُطُوٓاْ إِلَيۡكُمۡ أَيۡدِيَهُمۡ وَأَلۡسِنَتَهُم بِٱلسُّوٓءِ وَوَدُّواْ لَوۡ تَكۡفُرُونَ

    ಅವರು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಿದರೆ ನಿಮ್ಮ ಪ್ರತ್ಯಕ್ಷ ವೈರಿಗಳಾಗಿ ಬಿಡುತ್ತಾರೆ. ಅವರು ಕೆಟ್ಟ ಉದ್ದೇಶದೊಂದಿಗೆ ನಿಮ್ಮ ವಿರುದ್ಧ ಅವರ ಕೈಗಳನ್ನು ಮತ್ತು ನಾಲಗೆಗಳನ್ನು ಚಾಚುತ್ತಾರೆ. ನೀವು ಕೂಡ ಸತ್ಯನಿಷೇಧಿಗಳಾಗಬೇಕೆಂದು ಅವರು ಬಯಸುತ್ತಾರೆ.

    لَن تَنفَعَكُمۡ أَرۡحَامُكُمۡ وَلَآ أَوۡلَٰدُكُمۡۚ يَوۡمَ ٱلۡقِيَٰمَةِ يَفۡصِلُ بَيۡنَكُمۡۚ وَٱللَّهُ بِمَا تَعۡمَلُونَ بَصِيرٞ

    ಪುನರುತ್ಥಾನ ದಿನದಂದು ನಿಮ್ಮ ರಕ್ತ ಸಂಬಂಧಗಳು ಮತ್ತು ನಿಮ್ಮ ಮಕ್ಕಳು ನಿಮಗೆ ಪ್ರಯೋಜನಪಡುವುದಿಲ್ಲ. ಅಲ್ಲಾಹು ನಿಮ್ಮ ನಡುವೆ ತೀರ್ಪು ನೀಡುತ್ತಾನೆ. ಅಲ್ಲಾಹು ನೀವು ಮಾಡುತ್ತಿರುವ ಕರ್ಮಗಳನ್ನು ನೋಡುತ್ತಿದ್ದಾನೆ.

    قَدۡ كَانَتۡ لَكُمۡ أُسۡوَةٌ حَسَنَةٞ فِيٓ إِبۡرَٰهِيمَ وَٱلَّذِينَ مَعَهُۥٓ إِذۡ قَالُواْ لِقَوۡمِهِمۡ إِنَّا بُرَءَٰٓؤُاْ مِنكُمۡ وَمِمَّا تَعۡبُدُونَ مِن دُونِ ٱللَّهِ كَفَرۡنَا بِكُمۡ وَبَدَا بَيۡنَنَا وَبَيۡنَكُمُ ٱلۡعَدَٰوَةُ وَٱلۡبَغۡضَآءُ أَبَدًا حَتَّىٰ تُؤۡمِنُواْ بِٱللَّهِ وَحۡدَهُۥٓ إِلَّا قَوۡلَ إِبۡرَٰهِيمَ لِأَبِيهِ لَأَسۡتَغۡفِرَنَّ لَكَ وَمَآ أَمۡلِكُ لَكَ مِنَ ٱللَّهِ مِن شَيۡءٖۖ رَّبَّنَا عَلَيۡكَ تَوَكَّلۡنَا وَإِلَيۡكَ أَنَبۡنَا وَإِلَيۡكَ ٱلۡمَصِيرُ

    ನಿಮಗೆ ಇಬ್ರಾಹೀಮ‌ರಲ್ಲಿ ಮತ್ತು ಅವರ ಸಂಗಡಿಗರಲ್ಲಿ ಅತ್ಯುತ್ತಮ ಮಾದರಿಯಿದೆ. ಅವರು ತಮ್ಮ ಜನರೊಂದಿಗೆ ಹೇಳಿದ ಸಂದರ್ಭ: “ನಿಶ್ಚಯವಾಗಿಯೂ ನಾವು ನಿಮ್ಮಿಂದ ಮತ್ತು ಅಲ್ಲಾಹನನ್ನು ಬಿಟ್ಟು ನೀವು ಆರಾಧಿಸುತ್ತಿರುವ ದೇವರುಗಳಿಂದ ಸಂಪೂರ್ಣ ದೂರವಾಗಿದ್ದೇವೆ. ನಾವು ನಿಮ್ಮ (ವಿಶ್ವಾಸ ನಂಬಿಕೆಗಳನ್ನು) ನಿಷೇಧಿಸಿದ್ದೇವೆ. ನೀವು ಅಲ್ಲಾಹನಲ್ಲಿ ಮಾತ್ರ ವಿಶ್ವಾಸವಿಡುವ ತನಕ ನಮ್ಮ ಮತ್ತು ನಿಮ್ಮ ನಡುವೆ ಶಾಶ್ವತ ವೈರ ಹಾಗೂ ವಿದ್ವೇಷವು ಬಹಿರಂಗವಾಗಿಬಿಟ್ಟಿದೆ.” ಆದರೆ ಇಬ್ರಾಹೀಮರು ತಮ್ಮ ತಂದೆಯೊಡನೆ ಹೇಳಿದ ಈ ಮಾತುಗಳು ಇದಕ್ಕೆ ಹೊರತಾಗಿವೆ:[1] “ನಾನು ನಿಮಗೋಸ್ಕರ ಅಲ್ಲಾಹನಲ್ಲಿ ಖಂಡಿತ ಕ್ಷಮೆಯಾಚಿಸುತ್ತೇನೆ. ಅಲ್ಲಾಹನ ಮುಂದೆ ನಿಮಗೋಸ್ಕರ ಏನೂ ಮಾಡಲು ನನಗೆ ಸಾಧ್ಯವಿಲ್ಲ.” ಓ ನಮ್ಮ ಪರಿಪಾಲಕನೇ! ನಾವು ನಿನ್ನಲ್ಲಿ ಭರವಸೆಯಿಟ್ಟಿದ್ದೇವೆ ಮತ್ತು ನಿನ್ನ ಕಡೆಗೆ ಮರಳಿದ್ದೇವೆ. ಮರಳಬೇಕಾದುದು ನಿನ್ನ ಕಡೆಗೇ ಆಗಿದೆ.

    [1] ಅಂದರೆ “ನಾನು ನಿಮಗೋಸ್ಕರ ಅಲ್ಲಾಹನಲ್ಲಿ ಖಂಡಿತ ಕ್ಷಮೆಯಾಚಿಸುತ್ತೇನೆ” ಎಂದು ಇಬ್ರಾಹೀಮರು (ಅವರ ಮೇಲೆ ಶಾಂತಿಯಿರಲಿ) ಹೇಳಿದ ಮಾತಿನಲ್ಲಿ ಸತ್ಯವಿಶ್ವಾಸಿಗಳಿಗೆ ಮಾದರಿಯಿಲ್ಲ.

    رَبَّنَا لَا تَجۡعَلۡنَا فِتۡنَةٗ لِّلَّذِينَ كَفَرُواْ وَٱغۡفِرۡ لَنَا رَبَّنَآۖ إِنَّكَ أَنتَ ٱلۡعَزِيزُ ٱلۡحَكِيمُ

    ನಮ್ಮ ಪರಿಪಾಲಕನೇ! ನಮ್ಮನ್ನು ಸತ್ಯನಿಷೇಧಿಗಳ ಪರೀಕ್ಷೆಗೆ ಗುರಿಯಾಗಿಸಬೇಡ. ನಮ್ಮ ಪರಿಪಾಲಕನೇ! ನಮ್ಮನ್ನು ಕ್ಷಮಿಸು. ನಿಶ್ಚಯವಾಗಿಯೂ ನೀನು ಪ್ರಬಲನು ಮತ್ತು ವಿವೇಕಪೂರ್ಣನಾಗಿರುವೆ.

    لَقَدۡ كَانَ لَكُمۡ فِيهِمۡ أُسۡوَةٌ حَسَنَةٞ لِّمَن كَانَ يَرۡجُواْ ٱللَّهَ وَٱلۡيَوۡمَ ٱلۡأٓخِرَۚ وَمَن يَتَوَلَّ فَإِنَّ ٱللَّهَ هُوَ ٱلۡغَنِيُّ ٱلۡحَمِيدُ

    ನಿಶ್ಚಯವಾಗಿಯೂ ನಿಮಗೆ ಅವರಲ್ಲಿ ಅತ್ಯುತ್ತಮ ಮಾದರಿಯಿದೆ. ವಿಶೇಷವಾಗಿ ಅಲ್ಲಾಹನನ್ನು ಮತ್ತು ಅಂತ್ಯದಿನವನ್ನು ಭೇಟಿಯಾಗುವ ನಿರೀಕ್ಷೆಯಿರುವವರಿಗೆ. ಆದರೆ ಯಾರಾದರೂ ವಿಮುಖನಾಗುವುದಾದರೆ ನಿಶ್ಚಯವಾಗಿಯೂ ಅಲ್ಲಾಹು ನಿರಪೇಕ್ಷನು ಮತ್ತು ಸ್ತುತ್ಯರ್ಹನಾಗಿದ್ದಾನೆ.

    ۞ عَسَى ٱللَّهُ أَن يَجۡعَلَ بَيۡنَكُمۡ وَبَيۡنَ ٱلَّذِينَ عَادَيۡتُم مِّنۡهُم مَّوَدَّةٗۚ وَٱللَّهُ قَدِيرٞۚ وَٱللَّهُ غَفُورٞ رَّحِيمٞ

    ಅಲ್ಲಾಹು ನಿಮ್ಮ ಮತ್ತು ನಿಮ್ಮ ವೈರಿಗಳ ನಡುವೆ ಪ್ರೀತಿಯನ್ನು ಹಾಕಬಹುದು. ಅಲ್ಲಾಹನಿಗೆ ಸಾಮರ್ಥ್ಯವಿದೆ.[1] ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.

    [1] ಅಂದರೆ ಅವರು ಮುಸ್ಲಿಮರಾಗುವಂತೆ ಮಾಡಲು ಅಲ್ಲಾಹನಿಗೆ ಸಾಧ್ಯವಿದೆ. ಮಕ್ಕಾ ವಿಜಯದ ನಂತರ ಇದು ಸತ್ಯವಾಯಿತು. ಮುಸ್ಲಿಮರ ವೈರಿಗಳಾಗಿದ್ದವರು ತಂಡೋಪತಂಡವಾಗಿ ಇಸ್ಲಾಂ ಸ್ವೀಕರಿಸಿದರು.

    لَّا يَنۡهَىٰكُمُ ٱللَّهُ عَنِ ٱلَّذِينَ لَمۡ يُقَٰتِلُوكُمۡ فِي ٱلدِّينِ وَلَمۡ يُخۡرِجُوكُم مِّن دِيَٰرِكُمۡ أَن تَبَرُّوهُمۡ وَتُقۡسِطُوٓاْ إِلَيۡهِمۡۚ إِنَّ ٱللَّهَ يُحِبُّ ٱلۡمُقۡسِطِينَ

    ಧರ್ಮದ ವಿಷಯದಲ್ಲಿ ನಿಮ್ಮ ವಿರುದ್ಧ ಯುದ್ಧ ಮಾಡದವರು ಮತ್ತು ನಿಮ್ಮನ್ನು ನಿಮ್ಮ ಊರಿನಿಂದ ಗಡೀಪಾರು ಮಾಡದವರು ಯಾರೋ—ಅವರೊಡನೆ ಅತ್ಯುತ್ತಮವಾಗಿ ವರ್ತಿಸುವುದನ್ನು ಮತ್ತು ಅವರೊಡನೆ ನ್ಯಾಯಯುತವಾಗಿ ವರ್ತಿಸುವುದನ್ನು ಅಲ್ಲಾಹು ನಿಮಗೆ ವಿರೋಧಿಸುವುದಿಲ್ಲ. ನಿಶ್ಚಯವಾಗಿಯೂ ನ್ಯಾಯಯುತವಾಗಿ ವರ್ತಿಸುವವರನ್ನು ಅಲ್ಲಾಹು ಇಷ್ಟಪಡುತ್ತಾನೆ.

    إِنَّمَا يَنۡهَىٰكُمُ ٱللَّهُ عَنِ ٱلَّذِينَ قَٰتَلُوكُمۡ فِي ٱلدِّينِ وَأَخۡرَجُوكُم مِّن دِيَٰرِكُمۡ وَظَٰهَرُواْ عَلَىٰٓ إِخۡرَاجِكُمۡ أَن تَوَلَّوۡهُمۡۚ وَمَن يَتَوَلَّهُمۡ فَأُوْلَٰٓئِكَ هُمُ ٱلظَّٰلِمُونَ

    ಧರ್ಮದ ವಿಷಯದಲ್ಲಿ ನಿಮ್ಮ ವಿರುದ್ಧ ಯುದ್ಧ ಮಾಡುವವರು, ನಿಮ್ಮನ್ನು ನಿಮ್ಮ ಊರಿನಿಂದ ಗಡೀಪಾರು ಮಾಡುವವರು ಮತ್ತು ನಿಮ್ಮನ್ನು ಗಡೀಪಾರು ಮಾಡಲು ಪರಸ್ಪರ ಸಹಕರಿಸುವರು ಯಾರೋ ಅವರೊಂದಿಗೆ ಮೈತ್ರಿ ಮಾಡುವುದನ್ನು ಮಾತ್ರ ಅಲ್ಲಾಹು ನಿಮಗೆ ವಿರೋಧಿಸುತ್ತಾನೆ. ಯಾರು ಅವರನ್ನು ಮಿತ್ರರನ್ನಾಗಿ ಮಾಡಿಕೊಳ್ಳುತ್ತಾರೋ ಅವರೇ ಅಕ್ರಮಿಗಳು.

    ೧೦

    يَٰٓأَيُّهَا ٱلَّذِينَ ءَامَنُوٓاْ إِذَا جَآءَكُمُ ٱلۡمُؤۡمِنَٰتُ مُهَٰجِرَٰتٖ فَٱمۡتَحِنُوهُنَّۖ ٱللَّهُ أَعۡلَمُ بِإِيمَٰنِهِنَّۖ فَإِنۡ عَلِمۡتُمُوهُنَّ مُؤۡمِنَٰتٖ فَلَا تَرۡجِعُوهُنَّ إِلَى ٱلۡكُفَّارِۖ لَا هُنَّ حِلّٞ لَّهُمۡ وَلَا هُمۡ يَحِلُّونَ لَهُنَّۖ وَءَاتُوهُم مَّآ أَنفَقُواْۚ وَلَا جُنَاحَ عَلَيۡكُمۡ أَن تَنكِحُوهُنَّ إِذَآ ءَاتَيۡتُمُوهُنَّ أُجُورَهُنَّۚ وَلَا تُمۡسِكُواْ بِعِصَمِ ٱلۡكَوَافِرِ وَسۡـَٔلُواْ مَآ أَنفَقۡتُمۡ وَلۡيَسۡـَٔلُواْ مَآ أَنفَقُواْۚ ذَٰلِكُمۡ حُكۡمُ ٱللَّهِ يَحۡكُمُ بَيۡنَكُمۡۖ وَٱللَّهُ عَلِيمٌ حَكِيمٞ

    ಓ ಸತ್ಯವಿಶ್ವಾಸಿಗಳೇ! ನಿಮ್ಮ ಬಳಿಗೆ ಸತ್ಯವಿಶ್ವಾಸಿ ಮಹಿಳೆಯರು ಹಿಜ್ರ (ವಲಸೆ) ಮಾಡಿ ಬಂದರೆ ಅವರನ್ನು ಪರೀಕ್ಷಿಸಿರಿ. ಅಲ್ಲಾಹನಿಗೆ ಅವರ ವಿಶ್ವಾಸದ ಬಗ್ಗೆ ಬಹಳ ಚೆನ್ನಾಗಿ ತಿಳಿದಿದೆ. ಅವರು ಸತ್ಯವಿಶ್ವಾಸಿಗಳೆಂದು ನಿಮಗೆ ಖಾತ್ರಿಯಾದರೆ ಅವರನ್ನು ಸತ್ಯನಿಷೇಧಿಗಳ ಬಳಿಗೆ ಮರಳಿ ಕಳುಹಿಸಬೇಡಿ. ಈ ಮಹಿಳೆಯರು ಅವರಿಗೆ (ಸತ್ಯನಿಷೇಧಿಗಳಿಗೆ) ಧರ್ಮಸಮ್ಮತವಲ್ಲ. ಅವರು ಈ ಮಹಿಳೆಯರಿಗೆ ಧರ್ಮಸಮ್ಮತವಲ್ಲ. ಆ ಸತ್ಯನಿಷೇಧಿಗಳು ಮಾಡಿದ ಖರ್ಚನ್ನು ಅವರಿಗೆ ನೀಡಿರಿ. ನಂತರ ನೀವು ಈ ಮಹಿಳೆಯರಿಗೆ ಅವರ ಮಹರ್ (ವಧುದಕ್ಷಿಣೆಯನ್ನು) ನೀಡಿ ವಿವಾಹವಾಗುವುದರಲ್ಲಿ ನಿಮಗೆ ದೋಷವಿಲ್ಲ.[1] ಸತ್ಯನಿಷೇಧಿ ಮಹಿಳೆಯರೊಂದಿಗಿನ ವಿವಾಹ ಕರಾರನ್ನು ಬಳಿಯಲ್ಲಿಟ್ಟುಕೊಳ್ಳಬೇಡಿ.[2] ನೀವು ಖರ್ಚು ಮಾಡಿದ್ದನ್ನು ಕೇಳಿ ಪಡೆಯಿರಿ. ಆ ಸತ್ಯನಿಷೇಧಿಗಳು ಏನು ಖರ್ಚು ಮಾಡಿದ್ದಾರೋ ಅದನ್ನು ಅವರು ಕೇಳಿ ಪಡೆಯಲಿ. ಇದು ಅಲ್ಲಾಹು ನಿಮ್ಮ ನಡುವೆ ತೀರ್ಪು ನೀಡುವ ಅವನ ತೀರ್ಪಾಗಿದೆ. ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.

    [1] ಹುದೈಬಿಯಾ ಒಪ್ಪಂದದ ಒಂದು ಷರತ್ತಿನ ಪ್ರಕಾರ ಮಕ್ಕಾದಿಂದ ಯಾರಾದರೂ ಮುಸಲ್ಮಾನರ ಬಳಿಗೆ ಬಂದರೆ ಅವರನ್ನು ಮಕ್ಕಾಗೆ ಮರಳಿ ಕಳುಹಿಸಬೇಕು. ಇಂತಹ ಸ್ಥಿತಿಯಲ್ಲಿ ಸತ್ಯನಿಷೇಧಿ ಮಹಿಳೆಯರು ಇಸ್ಲಾಂ ಸ್ವೀಕರಿಸಿ ಮುಸಲ್ಮಾನರ ಬಳಿಗೆ ಬಂದರೆ ಏನು ಮಾಡಬೇಕೆಂದು ಈ ವಚನದಲ್ಲಿ ಹೇಳಲಾಗಿದೆ. ಮುಸ್ಲಿಮರು ಅವರನ್ನು ಸತ್ಯನಿಷೇಧಿಗಳ ಬಳಿಗೆ ಮರಳಿ ಕಳುಹಿಸಬಾರದು. ಅವರು ಸತ್ಯನಿಷೇಧಿಗಳಿಗೆ ಧರ್ಮಸಮ್ಮತವಲ್ಲ. ಅವರ ಗಂಡಂದಿರು ಅವರಿಗೆ ನೀಡಿದ ಮಹರ್ ಅವರಿಗೆ ವಾಪಸು ಕೊಟ್ಟು ಅವರನ್ನು ವಿಚ್ಛೇದಿಸಬೇಕು. ಇದ್ದ ಕಳೆದ ನಂತರ ಮುಸ್ಲಿಮರಿಗೆ ಆಕೆಯನ್ನು ಮಹರ್ ನೀಡಿ ವಿವಾಹವಾಗಬಹುದು. ಅವರನ್ನು ಪರೀಕ್ಷಿಸಬೇಕು ಎಂದರೆ ಅವರು ಯಾವ ಉದ್ದೇಶದಿಂದ ಬಂದಿದ್ದಾರೆಂದು ತನಿಖೆ ಮಾಡಬೇಕು ಎಂದರ್ಥ. [2] ಅಂದರೆ ಮುಸಲ್ಮಾನರ ಪತ್ನಿಯರಲ್ಲಿ ಯಾರಾದರೂ ಸತ್ಯನಿಷೇಧಿಯಾಗಿದ್ದರೆ ಅವಳೊಂದಿಗಿನ ದಾಂಪತ್ಯವನ್ನು ಮುಂದುವರಿಸಬಾರದು. ಆಕೆಗೆ ವಿಚ್ಛೇದನ ನೀಡಿ ಮಹರ್ ವಾಪಸು ಪಡೆಯಬೇಕು.

    ೧೧

    وَإِن فَاتَكُمۡ شَيۡءٞ مِّنۡ أَزۡوَٰجِكُمۡ إِلَى ٱلۡكُفَّارِ فَعَاقَبۡتُمۡ فَـَٔاتُواْ ٱلَّذِينَ ذَهَبَتۡ أَزۡوَٰجُهُم مِّثۡلَ مَآ أَنفَقُواْۚ وَٱتَّقُواْ ٱللَّهَ ٱلَّذِيٓ أَنتُم بِهِۦ مُؤۡمِنُونَ

    ನಿಮ್ಮ ಪತ್ನಿಯರಲ್ಲಿ ಯಾರಾದರೂ ನಿಮ್ಮಿಂದ ತಪ್ಪಿಸಿ ಸತ್ಯನಿಷೇಧಿಗಳ ಬಳಿಗೆ ಹೋಗಿ, ನಂತರ ನಿಮಗೆ ಅವರ (ಸತ್ಯನಿಷೇಧಿಗಳ) ಮೇಲೆ ಪ್ರತೀಕಾರ ಪಡೆಯುವ ಸಮಯ ಸಿಕ್ಕಿದರೆ, ಯಾರ ಪತ್ನಿಯರು ಓಡಿ ಹೋಗಿದ್ದಾರೋ ಅವರಿಗೆ ಅವರು ಖರ್ಚು ಮಾಡಿದ್ದಕ್ಕೆ ಸಮವಾದುದನ್ನು ನೀಡಿರಿ. ನೀವು ವಿಶ್ವಾಸವಿಡುವ ಆ ಅಲ್ಲಾಹನನ್ನು ಭಯಪಡಿರಿ.

    ೧೨

    يَٰٓأَيُّهَا ٱلنَّبِيُّ إِذَا جَآءَكَ ٱلۡمُؤۡمِنَٰتُ يُبَايِعۡنَكَ عَلَىٰٓ أَن لَّا يُشۡرِكۡنَ بِٱللَّهِ شَيۡـٔٗا وَلَا يَسۡرِقۡنَ وَلَا يَزۡنِينَ وَلَا يَقۡتُلۡنَ أَوۡلَٰدَهُنَّ وَلَا يَأۡتِينَ بِبُهۡتَٰنٖ يَفۡتَرِينَهُۥ بَيۡنَ أَيۡدِيهِنَّ وَأَرۡجُلِهِنَّ وَلَا يَعۡصِينَكَ فِي مَعۡرُوفٖ فَبَايِعۡهُنَّ وَٱسۡتَغۡفِرۡ لَهُنَّ ٱللَّهَۚ إِنَّ ٱللَّهَ غَفُورٞ رَّحِيمٞ

    ಓ ಪ್ರವಾದಿಯವರೇ! ಮಹಿಳೆಯರು ನಿಮ್ಮ ಬಳಿಗೆ ಬಂದು, ಅವರು ಅಲ್ಲಾಹನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡುವುದಿಲ್ಲ, ಕಳ್ಳತನ ಮಾಡುವುದಿಲ್ಲ, ವ್ಯಭಿಚಾರ ಮಾಡುವುದಿಲ್ಲ, ತಮ್ಮ ಮಕ್ಕಳನ್ನು ಕೊಲ್ಲುವುದಿಲ್ಲ, ತಮ್ಮ ಕೈಕಾಲುಗಳ ಮುಂದೆ ಸುಳ್ಳಾರೋಪವನ್ನು ಸೃಷ್ಟಿಸಿ ತರುವುದಿಲ್ಲ ಮತ್ತು ಒಳಿತಿನ ಕಾರ್ಯದಲ್ಲಿ ನಿಮಗೆ ಅವಿಧೇಯತೆ ತೋರುವುದಿಲ್ಲ ಎಂದು ಹೇಳುತ್ತಾ ಪ್ರತಿಜ್ಞೆ ಮಾಡಿದರೆ, ಅವರ ಪ್ರತಿಜ್ಞೆಯನ್ನು ಸ್ವೀಕರಿಸಿರಿ ಮತ್ತು ಅವರಿಗೋಸ್ಕರ ಅಲ್ಲಾಹನಲ್ಲಿ ಕ್ಷಮೆಯಾಚಿಸಿರಿ. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.

    ೧೩

    يَٰٓأَيُّهَا ٱلَّذِينَ ءَامَنُواْ لَا تَتَوَلَّوۡاْ قَوۡمًا غَضِبَ ٱللَّهُ عَلَيۡهِمۡ قَدۡ يَئِسُواْ مِنَ ٱلۡأٓخِرَةِ كَمَا يَئِسَ ٱلۡكُفَّارُ مِنۡ أَصۡحَٰبِ ٱلۡقُبُورِ

    ಓ ಸತ್ಯವಿಶ್ವಾಸಿಗಳೇ! ಅಲ್ಲಾಹನ ಕೋಪಕ್ಕೆ ಪಾತ್ರರಾದ ಜನರೊಡನೆ ಮೈತ್ರಿ ಮಾಡಿಕೊಳ್ಳಬೇಡಿ. ಅವರು ಪರಲೋಕದ ವಿಷಯದಲ್ಲಿ ನಿರಾಶರಾಗಿದ್ದಾರೆ. ಸಮಾಧಿಯಲ್ಲಿರುವ ಜನರ ಬಗ್ಗೆ ಸತ್ಯನಿಷೇಧಿಗಳು ನಿರಾಶರಾದಂತೆ.

    Al-Mumtahanah

    Play