Surah Al-Baqarah in Kannada

    البقرة

    Surah Al-Baqarah in Kannada

    Read Surah Al-Baqarah in Kannada (البقرة) with Arabic text, Kannada translation, and audio recitation. Chapter 2 of the Holy Quran, 286 verses — free online.

    ಕನ್ನಡದಲ್ಲಿ ಕುರ್‌ಆನ್ · all 114 ಸೂರಃs

    الٓمٓ

    ಅಲಿಫ್-ಲಾಮ್-ಮೀಮ್.[1]

    [1] ಇವುಗಳನ್ನು ‘ಹುರೂಫ್ ಮುಕತ್ತಆತ್’ (ಬಿಡಿ ಅಕ್ಷರಗಳು) ಎಂದು ಕರೆಯಲಾಗುತ್ತದೆ. ಇವುಗಳಿಗೆ ವಿಶೇಷವಾದ ಅರ್ಥವಿದೆಯೆಂದು ಹೇಳುವ ಯಾವುದೇ ವರದಿಗಳಿಲ್ಲ. ಇವುಗಳ ಉದ್ದೇಶವೇನೆಂದು ಸರ್ವಶಕ್ತನಾದ ಅಲ್ಲಾಹು ಮಾತ್ರ ಬಲ್ಲ.

    ذَٰلِكَ ٱلۡكِتَٰبُ لَا رَيۡبَۛ فِيهِۛ هُدٗى لِّلۡمُتَّقِينَ

    ಈ ಗ್ರಂಥದಲ್ಲಿ ಯಾವುದೇ ಸಂದೇಹವಿಲ್ಲ; ಇದು ದೇವಭಯವುಳ್ಳವರಿಗೆ ಸನ್ಮಾರ್ಗವನ್ನು ತೋರಿಸುತ್ತದೆ.

    ٱلَّذِينَ يُؤۡمِنُونَ بِٱلۡغَيۡبِ وَيُقِيمُونَ ٱلصَّلَوٰةَ وَمِمَّا رَزَقۡنَٰهُمۡ يُنفِقُونَ

    ಅವರು (ದೇವಭಯವುಳ್ಳವರು) ಯಾರೆಂದರೆ, ಅದೃಶ್ಯ ವಿಷಯಗಳಲ್ಲಿ[1] ವಿಶ್ವಾಸವಿಡುವವರು, ನಮಾಝ್ ಸಂಸ್ಥಾಪಿಸುವವರು ಮತ್ತು ನಾವು ಅವರಿಗೆ ಒದಗಿಸಿದ (ಧನದಿಂದ) ಖರ್ಚು ಮಾಡುವವರು.

    [1] ಅದೃಶ್ಯ ವಿಷಯಗಳು ಎಂದರೆ ಇಂದ್ರಿಯಗಳಿಗೆ ಗ್ರಹಿಸಲಾಗದ, ನಮ್ಮಿಂದ ಸಂಪೂರ್ಣ ಮರೆಯಾಗಿರುವ ಸಂಗತಿಗಳು. ಉದಾಹರಣೆಗೆ, ಪರಲೋಕ, ಸಮಾಧಿಯ ಶಿಕ್ಷೆ, ಸ್ವರ್ಗ, ನರಕ ಇತ್ಯಾದಿ.

    وَٱلَّذِينَ يُؤۡمِنُونَ بِمَآ أُنزِلَ إِلَيۡكَ وَمَآ أُنزِلَ مِن قَبۡلِكَ وَبِٱلۡأٓخِرَةِ هُمۡ يُوقِنُونَ

    ನಿಮಗೆ ಅವತೀರ್ಣವಾದ ಗ್ರಂಥದಲ್ಲಿ ಮತ್ತು ನಿಮಗಿಂತ ಮೊದಲು ಅವತೀರ್ಣವಾದ ಗ್ರಂಥಗಳಲ್ಲಿ ಅವರು ವಿಶ್ವಾಸವಿಡುತ್ತಾರೆ. ಪರಲೋಕದಲ್ಲಿ ಅವರು ದೃಢವಾಗಿ ವಿಶ್ವಾಸವಿಡುತ್ತಾರೆ.

    أُوْلَٰٓئِكَ عَلَىٰ هُدٗى مِّن رَّبِّهِمۡۖ وَأُوْلَٰٓئِكَ هُمُ ٱلۡمُفۡلِحُونَ

    ಅವರು ಅವರ ಪರಿಪಾಲಕನ (ಅಲ್ಲಾಹನ) ಕಡೆಯ ಸನ್ಮಾರ್ಗದಲ್ಲಿದ್ದಾರೆ. ಅವರೇ ಯಶಸ್ವಿಯಾದವರು.

    إِنَّ ٱلَّذِينَ كَفَرُواْ سَوَآءٌ عَلَيۡهِمۡ ءَأَنذَرۡتَهُمۡ أَمۡ لَمۡ تُنذِرۡهُمۡ لَا يُؤۡمِنُونَ

    ನಿಶ್ಚಯವಾಗಿಯೂ ಸತ್ಯನಿಷೇಧಿಗಳು ಯಾರೋ—ಅವರಿಗೆ ನೀವು ಎಚ್ಚರಿಕೆ ನೀಡಿದರೂ, ನೀಡದಿದ್ದರೂ ಅವರಿಗೆ ಅದು ಸಮಾನವಾಗಿದೆ; ಅವರು ವಿಶ್ವಾಸವಿಡುವುದಿಲ್ಲ.

    خَتَمَ ٱللَّهُ عَلَىٰ قُلُوبِهِمۡ وَعَلَىٰ سَمۡعِهِمۡۖ وَعَلَىٰٓ أَبۡصَٰرِهِمۡ غِشَٰوَةٞۖ وَلَهُمۡ عَذَابٌ عَظِيمٞ

    ಅಲ್ಲಾಹು ಅವರ ಹೃದಯಗಳಿಗೆ ಮತ್ತು ಅವರ ಶ್ರವಣಗಳಿಗೆ ಮೊಹರು ಹಾಕಿದ್ದಾನೆ. ಅವರ ದೃಷ್ಟಿಗಳ ಮೇಲೆ ಪರದೆಯಿದೆ.[1] ಅವರಿಗೆ ಘೋರ ಶಿಕ್ಷೆಯಿದೆ.

    [1] ಅವರು ನಿರಂತರ ಸತ್ಯನಿಷೇಧ ಮತ್ತು ದುಷ್ಕರ್ಮಗಳಲ್ಲಿ ಮಗ್ನರಾಗುತ್ತಿದ್ದುದರಿಂದ ಅವರ ಹೃದಯಗಳು ಕಠೋರವಾದವು ಮತ್ತು ಸತ್ಯವನ್ನು ಸ್ವೀಕರಿಸುವ ಮನಸ್ಥಿತಿಯೇ ಅವರಿಗೆ ಇಲ್ಲವಾಯಿತು.

    وَمِنَ ٱلنَّاسِ مَن يَقُولُ ءَامَنَّا بِٱللَّهِ وَبِٱلۡيَوۡمِ ٱلۡأٓخِرِ وَمَا هُم بِمُؤۡمِنِينَ

    “ನಾವು ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಟ್ಟಿದ್ದೇವೆ” ಎಂದು ಹೇಳುವ ಕೆಲವು ಜನರಿದ್ದಾರೆ. ಆದರೆ ವಾಸ್ತವವಾಗಿ ಅವರು ಸತ್ಯವಿಶ್ವಾಸಿಗಳಲ್ಲ.

    يُخَٰدِعُونَ ٱللَّهَ وَٱلَّذِينَ ءَامَنُواْ وَمَا يَخۡدَعُونَ إِلَّآ أَنفُسَهُمۡ وَمَا يَشۡعُرُونَ

    ಅವರು (ತಮ್ಮ ಡಾಂಭಿಕತೆಯ ಮೂಲಕ) ಅಲ್ಲಾಹನನ್ನು ಮತ್ತು ಸತ್ಯವಿಶ್ವಾಸಿಗಳನ್ನು ಮೋಸಗೊಳಿಸಬಹುದೆಂದು (ಭಾವಿಸುತ್ತಾರೆ). ಆದರೆ, ವಾಸ್ತವವಾಗಿ ಅವರು ಅವರನ್ನೇ ಮೋಸಗೊಳಿಸುತ್ತಿದ್ದಾರೆ. ಆದರೆ, ಅವರು ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ.

    ೧೦

    فِي قُلُوبِهِم مَّرَضٞ فَزَادَهُمُ ٱللَّهُ مَرَضٗاۖ وَلَهُمۡ عَذَابٌ أَلِيمُۢ بِمَا كَانُواْ يَكۡذِبُونَ

    ಅವರ ಹೃದಯಗಳಲ್ಲಿ ರೋಗವಿದೆ. ಅಲ್ಲಾಹು ಅವರಿಗೆ ಆ ರೋಗವನ್ನು ಇನ್ನಷ್ಟು ಉಲ್ಬಣಗೊಳಿಸಿದ್ದಾನೆ.[1] ಅವರು (ನಿರಂತರ) ಸುಳ್ಳು ಹೇಳುವ ಕಾರಣ ಅವರಿಗೆ ಯಾತನಾಮಯ ಶಿಕ್ಷೆಯೂ ಇದೆ.

    [1] ಕಪಟವಿಶ್ವಾಸಿಗಳ ಹೃದಯಗಳಲ್ಲಿ ಕಪಟತನ ಮತ್ತು ಸತ್ಯನಿಷೇಧದ ರೋಗವಿದೆ. ಅವರು ಅದನ್ನು ಗುಣಪಡಿಸುವ ಗೋಜಿಗೆ ಹೋಗದಿದ್ದರೆ ಅದು ಇನ್ನಷ್ಟು ಉಲ್ಬಣವಾಗುತ್ತದೆ.

    ೧೧

    وَإِذَا قِيلَ لَهُمۡ لَا تُفۡسِدُواْ فِي ٱلۡأَرۡضِ قَالُوٓاْ إِنَّمَا نَحۡنُ مُصۡلِحُونَ

    ನೀವು ಭೂಮಿಯಲ್ಲಿ ಕಿಡಿಗೇಡಿತನ ಮಾಡಬೇಡಿ ಎಂದು ಅವರೊಡನೆ ಹೇಳಲಾದರೆ, ಅವರು ಹೇಳುತ್ತಾರೆ: “ನಾವು ಕೇವಲ ಸುಧಾರಣೆ ಮಾಡುವವರು.”

    ೧೨

    أَلَآ إِنَّهُمۡ هُمُ ٱلۡمُفۡسِدُونَ وَلَٰكِن لَّا يَشۡعُرُونَ

    ತಿಳಿಯಿರಿ! ಸತ್ಯವಾಗಿಯೂ ಅವರೇ ಕಿಡಿಗೇಡಿತನ ಮಾಡುವವರು. ಆದರೆ ಅವರು ಅರ್ಥಮಾಡಿಕೊಳ್ಳುವುದಿಲ್ಲ.

    ೧೩

    وَإِذَا قِيلَ لَهُمۡ ءَامِنُواْ كَمَآ ءَامَنَ ٱلنَّاسُ قَالُوٓاْ أَنُؤۡمِنُ كَمَآ ءَامَنَ ٱلسُّفَهَآءُۗ أَلَآ إِنَّهُمۡ هُمُ ٱلسُّفَهَآءُ وَلَٰكِن لَّا يَعۡلَمُونَ

    “ಸಹಾಬಿಗಳು (ಪ್ರವಾದಿಯ ಸಂಗಡಿಗರು) ವಿಶ್ವಾಸವಿಟ್ಟಂತೆ ನೀವೂ ವಿಶ್ವಾಸವಿಡಿ” ಎಂದು ಅವರೊಡನೆ ಹೇಳಲಾದರೆ, ಅವರು ಕೇಳುತ್ತಾರೆ: “ಆ ಅವಿವೇಕಿಗಳು ವಿಶ್ವಾಸವಿಟ್ಟಂತೆ ನಾವು ವಿಶ್ವಾಸವಿಡಬೇಕೇ?” ತಿಳಿಯಿರಿ! ನಿಶ್ಚಯವಾಗಿಯೂ ಅವರೇ ಅವಿವೇಕಿಗಳು. ಆದರೆ ಅವರು ಅದನ್ನು ತಿಳಿಯುವುದಿಲ್ಲ.

    ೧೪

    وَإِذَا لَقُواْ ٱلَّذِينَ ءَامَنُواْ قَالُوٓاْ ءَامَنَّا وَإِذَا خَلَوۡاْ إِلَىٰ شَيَٰطِينِهِمۡ قَالُوٓاْ إِنَّا مَعَكُمۡ إِنَّمَا نَحۡنُ مُسۡتَهۡزِءُونَ

    ಸತ್ಯವಿಶ್ವಾಸಿಗಳನ್ನು ಭೇಟಿಯಾದಾಗ ಅವರು ಹೇಳುತ್ತಾರೆ: “ನಾವು ವಿಶ್ವಾಸವಿಟ್ಟಿದ್ದೇವೆ.” ಆದರೆ, ಅವರು ತಮ್ಮ ಶೈತಾನರ (ಮುಖಂಡರ) ಬಳಿ ಒಂಟಿಯಾಗಿರುವಾಗ ಹೇಳುತ್ತಾರೆ: “ನಿಜವಾಗಿಯೂ ನಾವು ನಿಮ್ಮ ಜೊತೆಯಲ್ಲೇ ಇದ್ದೇವೆ. ನಾವು ಕೇವಲ ತಮಾಷೆ ಮಾಡುತ್ತಿದ್ದೆವು.”

    ೧೫

    ٱللَّهُ يَسۡتَهۡزِئُ بِهِمۡ وَيَمُدُّهُمۡ فِي طُغۡيَٰنِهِمۡ يَعۡمَهُونَ

    ಅಲ್ಲಾಹು ಕೂಡ ಅವರನ್ನು ತಮಾಷೆ ಮಾಡುತ್ತಾನೆ ಮತ್ತು ಅವರ ಅತಿರೇಕಗಳಲ್ಲಿ ಅಂಧವಾಗಿ ವಿಹರಿಸುವಂತೆ ಅವರನ್ನು ಬಿಟ್ಟುಬಿಡುತ್ತಾನೆ.[1]

    [1] ಇದರ ಅರ್ಥವೇನೆಂದರೆ, ಅವರು ಸತ್ಯವಿಶ್ವಾಸಿಗಳನ್ನು ಯಾವ ರೀತಿಯಲ್ಲಿ ತಮಾಷೆ ಮಾಡುತ್ತಾ ಅವಹೇಳನ ಮಾಡುತ್ತಾರೋ ಅದೇ ರೀತಿ ಅಲ್ಲಾಹು ಕೂಡ ಅವರನ್ನು ಅವಹೇಳನ ಮಾಡುತ್ತಾನೆ. ಅಂದರೆ ಅವರು ತಿರಸ್ಕಾರ ಮತ್ತು ನಿಂದನೆಗೆ ಒಳಗಾಗುವಂತೆ ಮಾಡುತ್ತಾನೆ. ವಾಸ್ತವವಾಗಿ, ಇದು ಅಲ್ಲಾಹು ಅವರನ್ನು ಅವಹೇಳನ ಮಾಡುವುದಲ್ಲ; ಬದಲಿಗೆ ಅವರು ಮಾಡುವ ತಮಾಷೆ ಮತ್ತು ಅವಹೇಳನಕ್ಕೆ ಶಿಕ್ಷೆ ನೀಡುವುದಾಗಿದೆ.

    ೧೬

    أُوْلَٰٓئِكَ ٱلَّذِينَ ٱشۡتَرَوُاْ ٱلضَّلَٰلَةَ بِٱلۡهُدَىٰ فَمَا رَبِحَت تِّجَٰرَتُهُمۡ وَمَا كَانُواْ مُهۡتَدِينَ

    ಅವರೇ ಸನ್ಮಾರ್ಗದ ಬದಲಿಗೆ ದುರ್ಮಾರ್ಗವನ್ನು ಖರೀದಿಸಿದವರು. ಆದ್ದರಿಂದ, ಅವರ ವ್ಯಾಪಾರವು ಲಾಭಕರವಾಗಲಿಲ್ಲ; ಅವರು ಸನ್ಮಾರ್ಗಿಗಳಾಗಲೂ ಇಲ್ಲ.

    ೧೭

    مَثَلُهُمۡ كَمَثَلِ ٱلَّذِي ٱسۡتَوۡقَدَ نَارٗا فَلَمَّآ أَضَآءَتۡ مَا حَوۡلَهُۥ ذَهَبَ ٱللَّهُ بِنُورِهِمۡ وَتَرَكَهُمۡ فِي ظُلُمَٰتٖ لَّا يُبۡصِرُونَ

    ಅವರ ಉದಾಹರಣೆಯು ಬೆಂಕಿಯುರಿಸಿದ ಒಬ್ಬ ವ್ಯಕ್ತಿಯಂತೆ. ಅದು ಅವನ ಪರಿಸರವನ್ನು ಬೆಳಗಿದಾಗ, ಅಲ್ಲಾಹು ಅವರ ಬೆಳಕನ್ನು ನಿವಾರಿಸಿ ಏನೂ ಕಾಣದಂತಹ ಅಂಧಕಾರದಲ್ಲಿ ಅವರನ್ನು ಬಿಟ್ಟುಬಿಟ್ಟನು.

    ೧೮

    صُمُّۢ بُكۡمٌ عُمۡيٞ فَهُمۡ لَا يَرۡجِعُونَ

    ಅವರು ಕಿವುಡರು, ಮೂಕರು ಮತ್ತು ಕುರುಡರು. ಆದ್ದರಿಂದ ಅವರು (ಸತ್ಯಮಾರ್ಗಕ್ಕೆ) ಮರಳಿ ಬರುವುದಿಲ್ಲ.

    ೧೯

    أَوۡ كَصَيِّبٖ مِّنَ ٱلسَّمَآءِ فِيهِ ظُلُمَٰتٞ وَرَعۡدٞ وَبَرۡقٞ يَجۡعَلُونَ أَصَٰبِعَهُمۡ فِيٓ ءَاذَانِهِم مِّنَ ٱلصَّوَٰعِقِ حَذَرَ ٱلۡمَوۡتِۚ وَٱللَّهُ مُحِيطُۢ بِٱلۡكَٰفِرِينَ

    ಅಥವಾ (ಅವರ ಉದಾಹರಣೆಯು) ಆಕಾಶದಿಂದ ಸುರಿಯುವ ಜಡಿಮಳೆಯಂತೆ; ಅದರಲ್ಲಿ ಅಂಧಕಾರಗಳು, ಸಿಡಿಲು ಮತ್ತು ಮಿಂಚುಗಳಿವೆ. ಸಿಡಿಲಿನ ಆರ್ಭಟದಿಂದ ಸಾವಿಗೆ ಹೆದರಿ ಅವರು ತಮ್ಮ ಬೆರಳುಗಳನ್ನು ಕಿವಿಗಳಲ್ಲಿಡುತ್ತಾರೆ. ಅಲ್ಲಾಹು ಸತ್ಯನಿಷೇಧಿಗಳನ್ನು ಸುತ್ತುವರಿದಿದ್ದಾನೆ.

    ೨೦

    يَكَادُ ٱلۡبَرۡقُ يَخۡطَفُ أَبۡصَٰرَهُمۡۖ كُلَّمَآ أَضَآءَ لَهُم مَّشَوۡاْ فِيهِ وَإِذَآ أَظۡلَمَ عَلَيۡهِمۡ قَامُواْۚ وَلَوۡ شَآءَ ٱللَّهُ لَذَهَبَ بِسَمۡعِهِمۡ وَأَبۡصَٰرِهِمۡۚ إِنَّ ٱللَّهَ عَلَىٰ كُلِّ شَيۡءٖ قَدِيرٞ

    ಮಿಂಚು ಇನ್ನೇನು ಅವರ ದೃಷ್ಟಿಗಳನ್ನು ಕಸಿಯುವುದರಲ್ಲಿದೆ. ಅದು ಅವರಿಗೆ ಬೆಳಕು ನೀಡಿದಾಗಲೆಲ್ಲಾ ಅವರು ಅದರಲ್ಲಿ ನಡೆಯುತ್ತಾರೆ. ಕತ್ತಲೆ ಆವರಿಸಿದಾಗ ಅವರು ನಿಂತುಬಿಡುತ್ತಾರೆ. ಅಲ್ಲಾಹು ಇಚ್ಛಿಸಿದರೆ ಅವರ ಶ್ರವಣ ಮತ್ತು ದೃಷ್ಟಿಯನ್ನು ತೆಗೆದುಬಿಡುತ್ತಿದ್ದನು. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನು.

    ೨೧

    يَٰٓأَيُّهَا ٱلنَّاسُ ٱعۡبُدُواْ رَبَّكُمُ ٱلَّذِي خَلَقَكُمۡ وَٱلَّذِينَ مِن قَبۡلِكُمۡ لَعَلَّكُمۡ تَتَّقُونَ

    ಓ ಮನುಷ್ಯರೇ! ನಿಮ್ಮನ್ನು ಮತ್ತು ನಿಮ್ಮ ಪೂರ್ವಜರನ್ನು ಸೃಷ್ಟಿಸಿದ ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಆರಾಧಿಸಿರಿ. ನೀವು ದೇವಭಯವುಳ್ಳವರಾಗುವುದಕ್ಕಾಗಿ.

    ೨೨

    ٱلَّذِي جَعَلَ لَكُمُ ٱلۡأَرۡضَ فِرَٰشٗا وَٱلسَّمَآءَ بِنَآءٗ وَأَنزَلَ مِنَ ٱلسَّمَآءِ مَآءٗ فَأَخۡرَجَ بِهِۦ مِنَ ٱلثَّمَرَٰتِ رِزۡقٗا لَّكُمۡۖ فَلَا تَجۡعَلُواْ لِلَّهِ أَندَادٗا وَأَنتُمۡ تَعۡلَمُونَ

    (ಅವನು ಯಾರೆಂದರೆ) ನಿಮಗೋಸ್ಕರ ಭೂಮಿಯನ್ನು ಹಾಸನ್ನಾಗಿ ಮತ್ತು ಆಕಾಶವನ್ನು ಛಾವಣಿಯನ್ನಾಗಿ ಮಾಡಿಕೊಟ್ಟವನು. ಆಕಾಶದಿಂದ ಮಳೆಯನ್ನು ಸುರಿಸಿ ಅದರಿಂದ ನಿಮ್ಮ ಆಹಾರಕ್ಕಾಗಿ ಹಣ್ಣು-ಹಂಪಲುಗಳನ್ನು ಉತ್ಪಾದಿಸಿಕೊಟ್ಟವನು. ಆದ್ದರಿಂದ, ಇವೆಲ್ಲವನ್ನೂ ತಿಳಿದೂ ಸಹ ನೀವು ಅಲ್ಲಾಹನಿಗೆ ಸರಿಸಾಟಿಗಳನ್ನು ನಿಶ್ಚಯಿಸಬೇಡಿ.

    ೨೩

    وَإِن كُنتُمۡ فِي رَيۡبٖ مِّمَّا نَزَّلۡنَا عَلَىٰ عَبۡدِنَا فَأۡتُواْ بِسُورَةٖ مِّن مِّثۡلِهِۦ وَٱدۡعُواْ شُهَدَآءَكُم مِّن دُونِ ٱللَّهِ إِن كُنتُمۡ صَٰدِقِينَ

    ನಾವು ನಮ್ಮ ದಾಸನಿಗೆ ಅವತೀರ್ಣಗೊಳಿಸಿದ (ಕುರ್‌ಆನ್) ಬಗ್ಗೆ ನಿಮಗೇನಾದರೂ ಸಂದೇಹವಿದ್ದರೆ, ಅದರಂತಿರುವ ಒಂದು ಸೂರವನ್ನು (ಅಧ್ಯಾಯವನ್ನು) ರಚಿಸಿ ತನ್ನಿರಿ; ಅಲ್ಲಾಹನ ಹೊರತು ನಿಮ್ಮ ಎಲ್ಲಾ ಸಹಾಯಕರನ್ನು ಕರೆಯಿರಿ; ನೀವು ಸತ್ಯವಂತರಾಗಿದ್ದರೆ.

    ೨೪

    فَإِن لَّمۡ تَفۡعَلُواْ وَلَن تَفۡعَلُواْ فَٱتَّقُواْ ٱلنَّارَ ٱلَّتِي وَقُودُهَا ٱلنَّاسُ وَٱلۡحِجَارَةُۖ أُعِدَّتۡ لِلۡكَٰفِرِينَ

    ನಿಮಗೆ ಅದನ್ನು ಮಾಡಲು ಸಾಧ್ಯವಾಗದಿದ್ದರೆ—ಅದನ್ನು ಮಾಡಲು ನಿಮಗೆ ಎಂದಿಗೂ ಸಾಧ್ಯವಾಗುವುದಿಲ್ಲ. ಆದ್ದರಿಂದ ನೀವು ಆ ನರಕವನ್ನು ಭಯಪಡಿರಿ; ಅದರ ಇಂಧನವು ಮನುಷ್ಯರು ಮತ್ತು ಕಲ್ಲುಗಳಾಗಿದ್ದಾರೆ. ಅದನ್ನು ಸತ್ಯನಿಷೇಧಿಗಳಿಗಾಗಿ ಸಿದ್ಧಗೊಳಿಸಲಾಗಿದೆ.

    ೨೫

    وَبَشِّرِ ٱلَّذِينَ ءَامَنُواْ وَعَمِلُواْ ٱلصَّٰلِحَٰتِ أَنَّ لَهُمۡ جَنَّٰتٖ تَجۡرِي مِن تَحۡتِهَا ٱلۡأَنۡهَٰرُۖ كُلَّمَا رُزِقُواْ مِنۡهَا مِن ثَمَرَةٖ رِّزۡقٗا قَالُواْ هَٰذَا ٱلَّذِي رُزِقۡنَا مِن قَبۡلُۖ وَأُتُواْ بِهِۦ مُتَشَٰبِهٗاۖ وَلَهُمۡ فِيهَآ أَزۡوَٰجٞ مُّطَهَّرَةٞۖ وَهُمۡ فِيهَا خَٰلِدُونَ

    ಸತ್ಯವಿಶ್ವಾಸಿಗಳು ಹಾಗೂ ಸತ್ಕರ್ಮವೆಸಗಿದವರಿಗೆ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿವೆಯೆಂಬ ಸುವಾರ್ತೆಯನ್ನು ತಿಳಿಸಿರಿ. ಅವರಿಗೆ ಅದರ ಒಂದೊಂದು ಹಣ್ಣನ್ನು ಆಹಾರವಾಗಿ ನೀಡಲಾಗುವಾಗಲೆಲ್ಲಾ ಅವರು ಹೇಳುವರು: “ಇದು ನಮಗೆ ಮುಂಚೆ ನೀಡಲಾದದ್ದೇ ಅಲ್ಲವೇ!” ವಾಸ್ತವವಾಗಿ, ಅವರಿಗೆ ಅದನ್ನು ಹೋಲಿಕೆಯಿರುವ ರೂಪದಲ್ಲಿ ನೀಡಲಾಗಿದೆ.[1] ಅವರಿಗೆ ಅಲ್ಲಿ ಪರಿಶುದ್ಧ ಸಂಗಾತಿಗಳಿದ್ದಾರೆ; ಅವರು ಅಲ್ಲಿ ಶಾಶ್ವತವಾಗಿ ವಾಸಿಸುವರು.

    [1] ಹೋಲಿಕೆಯಿರುವ ರೂಪದಲ್ಲಿ ಎಂದರೆ ಒಂದೋ ಸ್ವರ್ಗದಲ್ಲಿರುವ ಹಣ್ಣುಗಳು ಪರಸ್ಪರ ಒಂದನ್ನೊಂದು ಹೋಲುತ್ತವೆ; ಅಥವಾ ಅವು ಇಹಲೋಕದ ಹಣ್ಣುಗಳ ಹೋಲಿಕೆಯನ್ನು ಹೊಂದಿರುತ್ತವೆ. ಹೋಲಿಕೆಯಿರುವುದು ರೂಪ, ಆಕಾರ, ಹೆಸರು ಅಥವಾ ಬಣ್ಣಗಳಲ್ಲಿ ಮಾತ್ರವೇ ಹೊರತು ಅವುಗಳ ರುಚಿ ಮತ್ತು ಗುಣಮಟ್ಟದಲ್ಲಲ್ಲ.

    ೨೬

    ۞ إِنَّ ٱللَّهَ لَا يَسۡتَحۡيِۦٓ أَن يَضۡرِبَ مَثَلٗا مَّا بَعُوضَةٗ فَمَا فَوۡقَهَاۚ فَأَمَّا ٱلَّذِينَ ءَامَنُواْ فَيَعۡلَمُونَ أَنَّهُ ٱلۡحَقُّ مِن رَّبِّهِمۡۖ وَأَمَّا ٱلَّذِينَ كَفَرُواْ فَيَقُولُونَ مَاذَآ أَرَادَ ٱللَّهُ بِهَٰذَا مَثَلٗاۘ يُضِلُّ بِهِۦ كَثِيرٗا وَيَهۡدِي بِهِۦ كَثِيرٗاۚ وَمَا يُضِلُّ بِهِۦٓ إِلَّا ٱلۡفَٰسِقِينَ

    ನಿಶ್ಚಯವಾಗಿಯೂ ಅಲ್ಲಾಹು ಒಂದು ಸೊಳ್ಳೆಯನ್ನು ಅಥವಾ ಅದಕ್ಕಿಂತ ಕೀಳಾದುದನ್ನು ಉದಾಹರಣೆಯಾಗಿ ತೋರಿಸಲು ಸಂಕೋಚಪಡುವುದಿಲ್ಲ. ಸತ್ಯವಿಶ್ವಾಸಿಗಳು ಅದು ತಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಸತ್ಯವೆಂದು ತಿಳಿಯುತ್ತಾರೆ. ಆದರೆ, ಸತ್ಯನಿಷೇಧಿಗಳು ಕೇಳುತ್ತಾರೆ: “ಈ ಹೋಲಿಕೆಯಿಂದ ಅಲ್ಲಾಹು ಉದ್ದೇಶಿಸುವುದೇನು?” ಇದರ ಮೂಲಕ ಅಲ್ಲಾಹು ಅನೇಕ ಜನರನ್ನು ದಾರಿತಪ್ಪಿಸುತ್ತಾನೆ ಮತ್ತು ಅನೇಕ ಜನರಿಗೆ ಸನ್ಮಾರ್ಗವನ್ನು ತೋರಿಸುತ್ತಾನೆ. ಅವನು ಇದರ ಮೂಲಕ ದುಷ್ಕರ್ಮಿಗಳನ್ನಲ್ಲದೆ ಇನ್ನಾರನ್ನೂ ದಾರಿತಪ್ಪಿಸುವುದಿಲ್ಲ.

    ೨೭

    ٱلَّذِينَ يَنقُضُونَ عَهۡدَ ٱللَّهِ مِنۢ بَعۡدِ مِيثَٰقِهِۦ وَيَقۡطَعُونَ مَآ أَمَرَ ٱللَّهُ بِهِۦٓ أَن يُوصَلَ وَيُفۡسِدُونَ فِي ٱلۡأَرۡضِۚ أُوْلَٰٓئِكَ هُمُ ٱلۡخَٰسِرُونَ

    ಅವರು (ದುಷ್ಕರ್ಮಿಗಳು) ಯಾರೆಂದರೆ, ಅಲ್ಲಾಹನ ಕರಾರನ್ನು—ಅದು ಸದೃಢವಾದ ಬಳಿಕವೂ—ಮುರಿಯುವವರು, ಅಲ್ಲಾಹು ಜೋಡಿಸಲು ಆದೇಶಿಸಿದ್ದನ್ನು ಕಡಿಯುವವರು, ಮತ್ತು ಭೂಮಿಯಲ್ಲಿ ಕಿಡಿಗೇಡಿತನ ಮಾಡುವವರು. ಅವರೇ ನಷ್ಟ ಹೊಂದಿದವರು.

    ೨೮

    كَيۡفَ تَكۡفُرُونَ بِٱللَّهِ وَكُنتُمۡ أَمۡوَٰتٗا فَأَحۡيَٰكُمۡۖ ثُمَّ يُمِيتُكُمۡ ثُمَّ يُحۡيِيكُمۡ ثُمَّ إِلَيۡهِ تُرۡجَعُونَ

    ನೀವು ಅಲ್ಲಾಹನನ್ನು ಹೇಗೆ ನಿಷೇಧಿಸುತ್ತೀರಿ? ವಾಸ್ತವವಾಗಿ, ನೀವು ನಿರ್ಜೀವಿಗಳಾಗಿದ್ದಿರಿ ಮತ್ತು ಅವನು ನಿಮಗೆ ಜೀವವನ್ನು ನೀಡಿದನು; ನಂತರ ಅವನು ನಿಮಗೆ ಸಾವನ್ನು ನೀಡುತ್ತಾನೆ. ನಂತರ ಅವನು ನಿಮಗೆ (ಪುನಃ) ಜೀವವನ್ನು ನೀಡುತ್ತಾನೆ. ನಂತರ ನಿಮ್ಮನ್ನು ಅವನ ಬಳಿಗೇ ಮರಳಿಸಲಾಗುತ್ತದೆ.

    ೨೯

    هُوَ ٱلَّذِي خَلَقَ لَكُم مَّا فِي ٱلۡأَرۡضِ جَمِيعٗا ثُمَّ ٱسۡتَوَىٰٓ إِلَى ٱلسَّمَآءِ فَسَوَّىٰهُنَّ سَبۡعَ سَمَٰوَٰتٖۚ وَهُوَ بِكُلِّ شَيۡءٍ عَلِيمٞ

    ಭೂಮಿಯಲ್ಲಿರುವ ಎಲ್ಲಾ ವಸ್ತುಗಳನ್ನೂ ನಿಮಗಾಗಿ ಸೃಷ್ಟಿಸಿದವನು ಅವನೇ. ನಂತರ ಅವನು ಆಕಾಶಕ್ಕೇರಿ, ಅದನ್ನು ಏಳಾಕಾಶಗಳಾಗಿ ಸರಿಪಡಿಸಿದನು. ಅವನು ಎಲ್ಲಾ ವಿಷಯಗಳನ್ನೂ ತಿಳಿದವನಾಗಿದ್ದಾನೆ.

    ೩೦

    وَإِذۡ قَالَ رَبُّكَ لِلۡمَلَٰٓئِكَةِ إِنِّي جَاعِلٞ فِي ٱلۡأَرۡضِ خَلِيفَةٗۖ قَالُوٓاْ أَتَجۡعَلُ فِيهَا مَن يُفۡسِدُ فِيهَا وَيَسۡفِكُ ٱلدِّمَآءَ وَنَحۡنُ نُسَبِّحُ بِحَمۡدِكَ وَنُقَدِّسُ لَكَۖ قَالَ إِنِّيٓ أَعۡلَمُ مَا لَا تَعۡلَمُونَ

    ನಿಮ್ಮ ಪರಿಪಾಲಕನು (ಅಲ್ಲಾಹು) ದೇವದೂತರೊಡನೆ, “ನಾನು ಭೂಮಿಯಲ್ಲಿ ಒಬ್ಬ ಉತ್ತರಾಧಿಕಾರಿಯನ್ನು[1] (ಮನುಷ್ಯನನ್ನು) ಮಾಡುತ್ತೇನೆ” ಎಂದು ಹೇಳಿದ ಸಂದರ್ಭ. ಅವರು ಕೇಳಿದರು: “ಅಲ್ಲಿ ಕಿಡಿಗೇಡಿತನ ಮಾಡುವವನನ್ನು ಮತ್ತು ರಕ್ತ ಹರಿಸುವವನನ್ನು ಮಾಡುವೆಯಾ? ನಾವಂತೂ ನಿನ್ನನ್ನು ಸ್ತುತಿಸುತ್ತಾ ನಿನ್ನ ಪರಿಶುದ್ಧಿಯನ್ನು ಕೊಂಡಾಡುತ್ತೇವೆ ಮತ್ತು ನಿನ್ನ ಪವಿತ್ರತೆಯನ್ನು ಹೊಗಳುತ್ತೇವೆ.” ಅಲ್ಲಾಹು ಹೇಳಿದನು: “ನಿಶ್ಚಯವಾಗಿಯೂ, ನಿಮಗೆ ತಿಳಿಯದೇ ಇರುವುದು ನನಗೆ ತಿಳಿದಿದೆ.”

    [1] ಉತ್ತರಾಧಿಕಾರಿ ಎಂದರೆ ಅಲ್ಲಾಹನ ಉತ್ತರಾಧಿಕಾರಿಯಲ್ಲ. ಬದಲಿಗೆ, ಭೂಮಿಯಲ್ಲಿ ತಲೆಮಾರಿನ ನಂತರ ತಲೆಮಾರುಗಳಾಗಿ ಬರುವ ಮನುಷ್ಯರು.

    ೩೧

    وَعَلَّمَ ءَادَمَ ٱلۡأَسۡمَآءَ كُلَّهَا ثُمَّ عَرَضَهُمۡ عَلَى ٱلۡمَلَٰٓئِكَةِ فَقَالَ أَنۢبِـُٔونِي بِأَسۡمَآءِ هَٰٓؤُلَآءِ إِن كُنتُمۡ صَٰدِقِينَ

    ಅಲ್ಲಾಹು ಆದಮರಿಗೆ ಎಲ್ಲಾ ಹೆಸರುಗಳನ್ನು ಕಲಿಸಿದನು. ನಂತರ ಅವುಗಳನ್ನು ದೇವದೂತರುಗಳಿಗೆ ತೋರಿಸಿ ಹೇಳಿದನು: “ನೀವು ಸತ್ಯವಂತರಾಗಿದ್ದರೆ ಇವುಗಳ ಹೆಸರುಗಳನ್ನು ಹೇಳಿರಿ.”

    ೩೨

    قَالُواْ سُبۡحَٰنَكَ لَا عِلۡمَ لَنَآ إِلَّا مَا عَلَّمۡتَنَآۖ إِنَّكَ أَنتَ ٱلۡعَلِيمُ ٱلۡحَكِيمُ

    ಅವರು ಹೇಳಿದರು: “ನಿನ್ನ ಪರಿಶುದ್ಧಿಯನ್ನು ನಾವು ಕೊಂಡಾಡುತ್ತೇವೆ. ನೀನು ನಮಗೆ ಕಲಿಸಿಕೊಟ್ಟದ್ದರ ಹೊರತು ಬೇರೇನೂ ನಮಗೆ ತಿಳಿದಿಲ್ಲ; ನಿಶ್ಚಯವಾಗಿಯೂ ನೀನು ಸರ್ವಜ್ಞನು ಮತ್ತು ವಿವೇಕವಂತನಾಗಿರುವೆ.”

    ೩೩

    قَالَ يَٰٓـَٔادَمُ أَنۢبِئۡهُم بِأَسۡمَآئِهِمۡۖ فَلَمَّآ أَنۢبَأَهُم بِأَسۡمَآئِهِمۡ قَالَ أَلَمۡ أَقُل لَّكُمۡ إِنِّيٓ أَعۡلَمُ غَيۡبَ ٱلسَّمَٰوَٰتِ وَٱلۡأَرۡضِ وَأَعۡلَمُ مَا تُبۡدُونَ وَمَا كُنتُمۡ تَكۡتُمُونَ

    ಅಲ್ಲಾಹು ಹೇಳಿದನು: “ಓ ಆದಮರೇ! ಅವರಿಗೆ ಅವುಗಳ ಹೆಸರುಗಳನ್ನು ಹೇಳಿಕೊಡಿ.” ಆದಮ್ ಅವರಿಗೆ ಅವುಗಳ ಹೆಸರುಗಳನ್ನು ಹೇಳಿಕೊಟ್ಟಾಗ ಅಲ್ಲಾಹು ಹೇಳಿದನು: “ನಾನು ನಿಮಗೆ ಹೇಳಿರಲಿಲ್ಲವೇ? ನಿಶ್ಚಯವಾಗಿಯೂ, ಭೂಮ್ಯಾಕಾಶಗಳ ಅದೃಶ್ಯ ವಿಷಯಗಳನ್ನು ನಾನು ತಿಳಿದಿದ್ದೇನೆಂದು; ನೀವು ಬಹಿರಂಗಪಡಿಸುವುದನ್ನು ಹಾಗೂ ರಹಸ್ಯವಾಗಿಡುವುದನ್ನು ನಾನು ತಿಳಿದಿದ್ದೇನೆಂದು.”

    ೩೪

    وَإِذۡ قُلۡنَا لِلۡمَلَٰٓئِكَةِ ٱسۡجُدُواْ لِأٓدَمَ فَسَجَدُوٓاْ إِلَّآ إِبۡلِيسَ أَبَىٰ وَٱسۡتَكۡبَرَ وَكَانَ مِنَ ٱلۡكَٰفِرِينَ

    ನಾವು ದೇವದೂತರೊಡನೆ ಹೇಳಿದ ಸಂದರ್ಭ: “ನೀವೆಲ್ಲರೂ ಆದಮರಿಗೆ ಸಾಷ್ಟಾಂಗ ಮಾಡಿರಿ.”[1] ಅವರು ಸಾಷ್ಟಾಂಗ ಮಾಡಿದರು; ಇಬ್ಲೀಸನ ಹೊರತು.[2] ಅವನು (ಸಾಷ್ಟಾಂಗ ಮಾಡಲು) ನಿರಾಕರಿಸಿದನು ಮತ್ತು ಅಹಂಕಾರ ತೋರಿದನು. ಅವನು ಸತ್ಯನಿಷೇಧಿಗಳಲ್ಲಿ ಸೇರಿದವನಾದನು.

    [1] ಸುಜೂದ್ ಎಂದರೆ ವಿನಯ ಮತ್ತು ವಿನಮ್ರತೆಯನ್ನು ವ್ಯಕ್ತಪಡಿಸುವುದು. ನೆಲದ ಮೇಲೆ ಹಣೆಯಿಟ್ಟು ಸಾಷ್ಟಾಂಗ ಮಾಡುವುದು ಇದರ ಪರಮೋಚ್ಛ ರೂಪವಾಗಿದೆ. ಪ್ರವಾದಿ ಮುಹಮ್ಮದ್ (ಅವರ ಮೇಲೆ ಶಾಂತಿಯಿರಲಿ) ರವರ ಶರಿಯತ್ (ಧರ್ಮಸಂಹಿತೆ) ನ ಪ್ರಕಾರ ಅಲ್ಲಾಹನಿಗೆ ಹೊರತು ಬೇರೆ ಯಾರಿಗೂ ಸಾಷ್ಟಾಂಗ ಮಾಡಬಾರದು. [2] ಇಬ್ಲೀಸ್ ಜಿನ್ನ್ (ಯಕ್ಷ) ಗಳಲ್ಲಿ ಸೇರಿದವನು. ಅಲ್ಲಾಹು ಅವನಿಗೆ ಶ್ರೇಷ್ಠತೆ ನೀಡಿ ದೇವದೂತರೊಡನೆ ಸೇರಿಸಿದ್ದನು. ಆದ್ದರಿಂದ ಅಲ್ಲಾಹನ ಆದೇಶ ಪ್ರಕಾರ ಸಾಷ್ಟಾಂಗ ಮಾಡುವುದು ಅವನಿಗೂ ಕಡ್ಡಾಯವಾಗಿತ್ತು. ಆದರೆ ಅವನು ಆದಮರ ಮೇಲಿದ್ದ ಅಸೂಯೆ ಮತ್ತು ಅಹಂಕಾರದಿಂದ ಸಾಷ್ಟಾಂಗ ಮಾಡಲು ನಿರಾಕರಿಸಿದನು.

    ೩೫

    وَقُلۡنَا يَٰٓـَٔادَمُ ٱسۡكُنۡ أَنتَ وَزَوۡجُكَ ٱلۡجَنَّةَ وَكُلَا مِنۡهَا رَغَدًا حَيۡثُ شِئۡتُمَا وَلَا تَقۡرَبَا هَٰذِهِ ٱلشَّجَرَةَ فَتَكُونَا مِنَ ٱلظَّٰلِمِينَ

    ನಾವು ಹೇಳಿದೆವು: “ಓ ಆದಮರೇ! ನೀವು ಮತ್ತು ನಿಮ್ಮ ಪತ್ನಿ ಸ್ವರ್ಗದಲ್ಲಿ ವಾಸಿಸಿರಿ; ಅಲ್ಲಿ ನೀವು ಇಚ್ಛಿಸುವ ಎಲ್ಲಾ ಕಡೆಗಳಿಂದ ಯಥೇಷ್ಟವಾಗಿ ತಿನ್ನಿರಿ. ಆದರೆ ಈ ಮರದ ಹತ್ತಿರ ಹೋಗಬೇಡಿ. ಹಾಗೇನಾದರೂ ಹೋದರೆ ನೀವು ಅಕ್ರಮಿಗಳಲ್ಲಿ ಸೇರಿದವರಾಗುವಿರಿ.”

    ೩೬

    فَأَزَلَّهُمَا ٱلشَّيۡطَٰنُ عَنۡهَا فَأَخۡرَجَهُمَا مِمَّا كَانَا فِيهِۖ وَقُلۡنَا ٱهۡبِطُواْ بَعۡضُكُمۡ لِبَعۡضٍ عَدُوّٞۖ وَلَكُمۡ فِي ٱلۡأَرۡضِ مُسۡتَقَرّٞ وَمَتَٰعٌ إِلَىٰ حِينٖ

    ಆದರೆ ಶೈತಾನನು ಅವರನ್ನು ತಪ್ಪುದಾರಿಗೆಳೆದು, ಅವರಿಬ್ಬರೂ ವಾಸವಾಗಿದ್ದಲ್ಲಿಂದ ಹೊರಹೋಗುವಂತೆ ಮಾಡಿದನು. ನಾವು ಹೇಳಿದೆವು: “ನೀವೆಲ್ಲರೂ ಇಳಿಯಿರಿ. ನೀವು ಪರಸ್ಪರ ವೈರಿಗಳಾಗಿದ್ದೀರಿ. ನಿಮಗೆ ಭೂಮಿಯಲ್ಲಿ ಒಂದು ಅವಧಿಯವರೆಗೆ ವಾಸಸ್ಥಳ ಹಾಗೂ ಜೀವನ ಸವಲತ್ತುಗಳಿವೆ.”

    ೩೭

    فَتَلَقَّىٰٓ ءَادَمُ مِن رَّبِّهِۦ كَلِمَٰتٖ فَتَابَ عَلَيۡهِۚ إِنَّهُۥ هُوَ ٱلتَّوَّابُ ٱلرَّحِيمُ

    ಆದಮ್ ತಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಕೆಲವು ವಚನಗಳನ್ನು ಕಲಿತುಕೊಂಡರು.[1] ಅಲ್ಲಾಹು ಅವರ ಪಶ್ಚಾತ್ತಾಪವನ್ನು ಸ್ವೀಕರಿಸಿದನು. ನಿಶ್ಚಯವಾಗಿಯೂ ಅವನು ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.

    [1] ಈ ವಚನಗಳು ಏನೆಂದು ಸೂರ ಅಅ್‌ರಾಫ್ (7:23) ರಲ್ಲಿ ಉಲ್ಲೇಖಿಸಲಾಗಿದೆ.

    ೩೮

    قُلۡنَا ٱهۡبِطُواْ مِنۡهَا جَمِيعٗاۖ فَإِمَّا يَأۡتِيَنَّكُم مِّنِّي هُدٗى فَمَن تَبِعَ هُدَايَ فَلَا خَوۡفٌ عَلَيۡهِمۡ وَلَا هُمۡ يَحۡزَنُونَ

    ನಾವು ಹೇಳಿದೆವು: “ನೀವೆಲ್ಲರೂ ಇಲ್ಲಿಂದ ಇಳಿಯಿರಿ. ನನ್ನಿಂದ ನಿಮಗೆ ಮಾರ್ಗದರ್ಶನವು ಬರುವಾಗ, ಆ ನನ್ನ ಮಾರ್ಗದರ್ಶನವನ್ನು ಯಾರು ಅನುಸರಿಸುತ್ತಾರೋ ಅವರಿಗೆ ಯಾವುದೇ ಭಯವಿಲ್ಲ; ಅವರು ದುಃಖಿಸುವುದೂ ಇಲ್ಲ.

    ೩೯

    وَٱلَّذِينَ كَفَرُواْ وَكَذَّبُواْ بِـَٔايَٰتِنَآ أُوْلَٰٓئِكَ أَصۡحَٰبُ ٱلنَّارِۖ هُمۡ فِيهَا خَٰلِدُونَ

    ಸತ್ಯನಿಷೇಧಿಗಳು ಹಾಗೂ ನಮ್ಮ ವಚನಗಳನ್ನು ತಿರಸ್ಕರಿಸಿದವರು ಯಾರೋ—ಅವರೇ ನರಕವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.”

    ೪೦

    يَٰبَنِيٓ إِسۡرَٰٓءِيلَ ٱذۡكُرُواْ نِعۡمَتِيَ ٱلَّتِيٓ أَنۡعَمۡتُ عَلَيۡكُمۡ وَأَوۡفُواْ بِعَهۡدِيٓ أُوفِ بِعَهۡدِكُمۡ وَإِيَّٰيَ فَٱرۡهَبُونِ

    ಓ ಇಸ್ರಾಯೇಲ್ ಮಕ್ಕಳೇ![1] ನಾನು ನಿಮಗೆ ಅನುಗ್ರಹಿಸಿದ ನನ್ನ ಅನುಗ್ರಹಗಳನ್ನು ಸ್ಮರಿಸಿರಿ ಮತ್ತು ನನ್ನ ಕರಾರನ್ನು ನೆರವೇರಿಸಿರಿ. ನಿಮ್ಮ ಕರಾರನ್ನು ನಾನೂ ನೆರವೇರಿಸುವೆನು. ನೀವು ನನ್ನನ್ನು ಮಾತ್ರ ಭಯಪಡಿರಿ.

    [1] ಇಸ್ರಾಯೇಲ್ ಪ್ರವಾದಿ ಯಾಕೂಬರ (ಅವರ ಮೇಲೆ ಶಾಂತಿಯಿರಲಿ) ಇನ್ನೊಂದು ಹೆಸರು. ಅವರಿಗೆ ಹನ್ನೆರಡು ಮಕ್ಕಳು. ಇವರ ಸಂತಾನ ಪರಂಪರೆಯು ಹನ್ನೆರಡು ಗೋತ್ರಗಳಾಗಿ ವಿಂಗಡನೆಯಾಗಿದ್ದವು. ಇವರನ್ನು ಇಸ್ರಾಯೇಲ್ ಮಕ್ಕಳು ಎಂದು ಕರೆಯಲಾಗುತ್ತದೆ. ಯಹೂದಿಗಳು ಮತ್ತು ಕ್ರೈಸ್ತರು ಈ ಪರಂಪರೆಯಲ್ಲಿ ಸೇರಿದವರು.

    ೪೧

    وَءَامِنُواْ بِمَآ أَنزَلۡتُ مُصَدِّقٗا لِّمَا مَعَكُمۡ وَلَا تَكُونُوٓاْ أَوَّلَ كَافِرِۭ بِهِۦۖ وَلَا تَشۡتَرُواْ بِـَٔايَٰتِي ثَمَنٗا قَلِيلٗا وَإِيَّٰيَ فَٱتَّقُونِ

    ನಿಮ್ಮ ಬಳಿಯಿರುವ (ಗ್ರಂಥವನ್ನು) ದೃಢೀಕರಿಸುತ್ತಾ ನಾನು ಅವತೀರ್ಣಗೊಳಿಸಿದ (ಕುರ್‌ಆನ್‌ನಲ್ಲಿ) ವಿಶ್ವಾಸವಿಡಿ. ಅದನ್ನು ಮೊಟ್ಟಮೊದಲು ನಿಷೇಧಿಸುವವರು ನೀವಾಗಬೇಡಿ. ನನ್ನ ವಚನಗಳನ್ನು ಅಲ್ಪ ಬೆಲೆಗೆ ಮಾರಾಟ ಮಾಡಬೇಡಿ. ನನ್ನನ್ನು ಮಾತ್ರ ಭಯಪಡಿರಿ.

    ೪೨

    وَلَا تَلۡبِسُواْ ٱلۡحَقَّ بِٱلۡبَٰطِلِ وَتَكۡتُمُواْ ٱلۡحَقَّ وَأَنتُمۡ تَعۡلَمُونَ

    ಸತ್ಯವನ್ನು ಮಿಥ್ಯದೊಂದಿಗೆ ಬೆರೆಸಬೇಡಿ. ತಿಳಿದವರಾಗಿದ್ದೂ ಸಹ ಸತ್ಯವನ್ನು ಮುಚ್ಚಿಡಬೇಡಿ.

    ೪೩

    وَأَقِيمُواْ ٱلصَّلَوٰةَ وَءَاتُواْ ٱلزَّكَوٰةَ وَٱرۡكَعُواْ مَعَ ٱلرَّٰكِعِينَ

    ನಮಾಝ್ ಸಂಸ್ಥಾಪಿಸಿರಿ ಮತ್ತು ಝಕಾತ್ ನೀಡಿರಿ; (ವಿಧೇಯತೆಯಿಂದ) ತಲೆಬಾಗುವವರೊಡನೆ ನೀವೂ ತಲೆಬಾಗಿರಿ.

    ೪೪

    ۞ أَتَأۡمُرُونَ ٱلنَّاسَ بِٱلۡبِرِّ وَتَنسَوۡنَ أَنفُسَكُمۡ وَأَنتُمۡ تَتۡلُونَ ٱلۡكِتَٰبَۚ أَفَلَا تَعۡقِلُونَ

    ನೀವು ಜನರಿಗೆ ಒಳಿತನ್ನು ಆದೇಶಿಸುತ್ತಾ ನಿಮ್ಮನ್ನು ನೀವೇ ಮರೆತು ಬಿಡುತ್ತೀರಾ? ನೀವಾದರೋ ಗ್ರಂಥವನ್ನು ಪಠಿಸುತ್ತಿದ್ದೀರಿ! ನೀವು ಆಲೋಚಿಸುವುದಿಲ್ಲವೇ?

    ೪೫

    وَٱسۡتَعِينُواْ بِٱلصَّبۡرِ وَٱلصَّلَوٰةِۚ وَإِنَّهَا لَكَبِيرَةٌ إِلَّا عَلَى ٱلۡخَٰشِعِينَ

    ತಾಳ್ಮೆ ಮತ್ತು ನಮಾಝಿನ ಮೂಲಕ ಸಹಾಯವನ್ನು ಬೇಡಿರಿ. ವಿನಮ್ರತೆಯಿಲ್ಲದವರಿಗೆ ಖಂಡಿತವಾಗಿಯೂ ಅದು ಬಹಳ ಕಷ್ಟವಾಗಿದೆ.

    ೪೬

    ٱلَّذِينَ يَظُنُّونَ أَنَّهُم مُّلَٰقُواْ رَبِّهِمۡ وَأَنَّهُمۡ إِلَيۡهِ رَٰجِعُونَ

    ಅವರು (ವಿನಮ್ರತೆಯುಳ್ಳವರು) ಯಾರೆಂದರೆ, ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಖಂಡಿತವಾಗಿಯೂ ಭೇಟಿಯಾಗಲಿದ್ದೇವೆ ಮತ್ತು ಅವನ ಬಳಿಗೇ ಮರಳಲಿದ್ದೇವೆ ಎಂದು ದೃಢವಾಗಿ ನಂಬುವವರು.

    ೪೭

    يَٰبَنِيٓ إِسۡرَٰٓءِيلَ ٱذۡكُرُواْ نِعۡمَتِيَ ٱلَّتِيٓ أَنۡعَمۡتُ عَلَيۡكُمۡ وَأَنِّي فَضَّلۡتُكُمۡ عَلَى ٱلۡعَٰلَمِينَ

    ಓ ಇಸ್ರಾಯೇಲ್ ಮಕ್ಕಳೇ! ನಾನು ನಿಮಗೆ ಅನುಗ್ರಹಿಸಿದ ನನ್ನ ಅನುಗ್ರಹವನ್ನು, ಮತ್ತು ನಾನು ನಿಮ್ಮನ್ನು ಸರ್ವಲೋಕದವರಿಗಿಂತ (ಎಲ್ಲಾ ಮನುಷ್ಯರಿಗಿಂತ) ಶ್ರೇಷ್ಠಗೊಳಿಸಿದ್ದನ್ನು ಸ್ಮರಿಸಿರಿ.

    ೪೮

    وَٱتَّقُواْ يَوۡمٗا لَّا تَجۡزِي نَفۡسٌ عَن نَّفۡسٖ شَيۡـٔٗا وَلَا يُقۡبَلُ مِنۡهَا شَفَٰعَةٞ وَلَا يُؤۡخَذُ مِنۡهَا عَدۡلٞ وَلَا هُمۡ يُنصَرُونَ

    ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ಯಾವುದೇ ಉಪಕಾರ ಮಾಡದ, ಅವನಿಂದ ಯಾವುದೇ ಶಿಫಾರಸು ಸ್ವೀಕರಿಸದ, ಅವನಿಂದ ಯಾವುದೇ ಪರಿಹಾರವನ್ನು ಪಡೆಯದ ಮತ್ತು ಅವರಿಗೆ ಯಾವುದೇ ಸಹಾಯವು ದೊರೆಯದ ಒಂದು ದಿನವನ್ನು (ಪುನರುತ್ಥಾನ ದಿನವನ್ನು) ಭಯಪಡಿರಿ.

    ೪೯

    وَإِذۡ نَجَّيۡنَٰكُم مِّنۡ ءَالِ فِرۡعَوۡنَ يَسُومُونَكُمۡ سُوٓءَ ٱلۡعَذَابِ يُذَبِّحُونَ أَبۡنَآءَكُمۡ وَيَسۡتَحۡيُونَ نِسَآءَكُمۡۚ وَفِي ذَٰلِكُم بَلَآءٞ مِّن رَّبِّكُمۡ عَظِيمٞ

    ನಾವು ನಿಮ್ಮನ್ನು ಫರೋಹನ ಜನರಿಂದ ರಕ್ಷಿಸಿದ ಸಂದರ್ಭ(ವನ್ನು ಸ್ಮರಿಸಿ). ಅವರು ನಿಮಗೆ ಕಠೋರ ಹಿಂಸೆ ನೀಡುತ್ತಿದ್ದರು; ನಿಮ್ಮ ಗಂಡು ಮಕ್ಕಳ ಕತ್ತು ಕೊಯ್ಯುತ್ತಿದ್ದರು ಮತ್ತು ನಿಮ್ಮ ಹೆಣ್ಣು ಮಕ್ಕಳನ್ನು ಜೀವಂತ ಉಳಿಸುತ್ತಿದ್ದರು. ಅದರಲ್ಲಿ (ನಿಮ್ಮನ್ನು ರಕ್ಷಿಸಿದ್ದರಲ್ಲಿ) ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಮಹಾ ಪರೀಕ್ಷೆಯಿತ್ತು.

    ೫೦

    وَإِذۡ فَرَقۡنَا بِكُمُ ٱلۡبَحۡرَ فَأَنجَيۡنَٰكُمۡ وَأَغۡرَقۡنَآ ءَالَ فِرۡعَوۡنَ وَأَنتُمۡ تَنظُرُونَ

    ನಾವು ಕಡಲನ್ನು ಸೀಳಿ ನಿಮ್ಮನ್ನು ರಕ್ಷಿಸಿದ, ಮತ್ತು ನೀವು ನೋಡುತ್ತಿದ್ದಂತೆಯೇ ಫರೋಹನ ಜನರನ್ನು ಮುಳುಗಿಸಿದ ಸಂದರ್ಭ(ವನ್ನು ಸ್ಮರಿಸಿ).

    ೫೧

    وَإِذۡ وَٰعَدۡنَا مُوسَىٰٓ أَرۡبَعِينَ لَيۡلَةٗ ثُمَّ ٱتَّخَذۡتُمُ ٱلۡعِجۡلَ مِنۢ بَعۡدِهِۦ وَأَنتُمۡ ظَٰلِمُونَ

    ನಾವು ಮೂಸಾರಿಗೆ ನಲ್ವತ್ತು ರಾತ್ರಿಗಳನ್ನು ವಾಗ್ದಾನ ಮಾಡಿದ ಸಂದರ್ಭ. ನಂತರ, ಅವರ (ನಿರ್ಗಮನದ) ಬಳಿಕ ನೀವು ಕರುವನ್ನು ದೇವರಾಗಿ ಮಾಡಿಕೊಂಡಿರಿ ಮತ್ತು ಅಕ್ರಮಿಗಳಾಗಿ ಬಿಟ್ಟಿರಿ.[1]

    [1] ಇಸ್ರಾಯೇಲ್ ಮಕ್ಕಳು ಫರೋಹನ ಸೈನ್ಯದಿಂದ ಪಾರಾಗಿ ಸೀನಾ ತಪ್ಪಲಿಗೆ ಬಂದು ನೆಲೆಸಿದರು. ಅಲ್ಲಿ ಅಲ್ಲಾಹನ ವಾಗ್ದಾನದಂತೆ ಮೂಸಾ (ಅವರ ಮೇಲೆ ಶಾಂತಿಯಿರಲಿ) ತೌರಾತ್ (ತೋರ) ಪಡೆಯಲು ನಲ್ವತ್ತು ದಿನ ತೂರ್ ಪರ್ವತಕ್ಕೆ ಹೋಗಿ ನೆಲೆಸಿದರು. ಮೂಸಾರ (ಅವರ ಮೇಲೆ ಶಾಂತಿಯಿರಲಿ) ನಿರ್ಗಮನದ ನಂತರ ಇಸ್ರಾಯೇಲ್ ಮಕ್ಕಳು ಸಾಮಿರಿ ಎಂಬಾತನ ಆದೇಶದಂತೆ ಕರುವಿನ ವಿಗ್ರಹವನ್ನು ಪೂಜಿಸತೊಡಗಿದರು.

    ೫೨

    ثُمَّ عَفَوۡنَا عَنكُم مِّنۢ بَعۡدِ ذَٰلِكَ لَعَلَّكُمۡ تَشۡكُرُونَ

    ನಂತರ ಅದರ ಬಳಿಕವೂ ನಾವು ನಿಮ್ಮನ್ನು ಕ್ಷಮಿಸಿದೆವು; ನೀವು ಕೃತಜ್ಞರಾಗುವಿರಿ ಎಂದು.

    ೫೩

    وَإِذۡ ءَاتَيۡنَا مُوسَى ٱلۡكِتَٰبَ وَٱلۡفُرۡقَانَ لَعَلَّكُمۡ تَهۡتَدُونَ

    ನಾವು ಮೂಸಾರಿಗೆ ಗ್ರಂಥವನ್ನು ಹಾಗೂ ಸತ್ಯಾಸತ್ಯ ವಿವೇಚಕವನ್ನು ನೀಡಿದ ಸಂದರ್ಭ. ನೀವು ಸನ್ಮಾರ್ಗ ಪಡೆಯುವುದಕ್ಕಾಗಿ.

    ೫೪

    وَإِذۡ قَالَ مُوسَىٰ لِقَوۡمِهِۦ يَٰقَوۡمِ إِنَّكُمۡ ظَلَمۡتُمۡ أَنفُسَكُم بِٱتِّخَاذِكُمُ ٱلۡعِجۡلَ فَتُوبُوٓاْ إِلَىٰ بَارِئِكُمۡ فَٱقۡتُلُوٓاْ أَنفُسَكُمۡ ذَٰلِكُمۡ خَيۡرٞ لَّكُمۡ عِندَ بَارِئِكُمۡ فَتَابَ عَلَيۡكُمۡۚ إِنَّهُۥ هُوَ ٱلتَّوَّابُ ٱلرَّحِيمُ

    ಮೂಸಾ ತಮ್ಮ ಜನರೊಡನೆ ಹೇಳಿದ ಸಂದರ್ಭ: “ನನ್ನ ಜನರೇ! ಕರುವನ್ನು ದೇವರಾಗಿ ಮಾಡಿಕೊಳ್ಳುವ ಮೂಲಕ ನಿಶ್ಚಯವಾಗಿಯೂ ನೀವು ನಿಮ್ಮ ಮೇಲೆಯೇ ಅಕ್ರಮವೆಸಗಿದ್ದೀರಿ. ಆದ್ದರಿಂದ, ನೀವು ಪಶ್ಚಾತ್ತಾಪಪಟ್ಟು ನಿಮ್ಮ ಸೃಷ್ಟಿಕರ್ತನ ಕಡೆಗೆ ಮರಳಿರಿ; ನಿಮ್ಮನ್ನು ನೀವೇ ಕೊಲ್ಲಿರಿ.[1] ನಿಮ್ಮ ಸೃಷ್ಟಿಕರ್ತನ ದೃಷ್ಟಿಯಲ್ಲಿ ಅದೇ ನಿಮಗೆ ಶ್ರೇಷ್ಠವಾಗಿದೆ.” ಆಗ ಅಲ್ಲಾಹು ನಿಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸಿದನು. ನಿಶ್ಚಯವಾಗಿಯೂ ಅವನು ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.

    [1] ಇಸ್ರಾಯೇಲ್ ಮಕ್ಕಳು ಮಾಡಿದ ಬಹುದೇವಾರಾಧನೆಗಾಗಿ ಮೂಸಾ (ಅವರ ಮೇಲೆ ಶಾಂತಿಯಿರಲಿ) ಅವರಿಗೆ ಛೀಮಾರಿ ಹಾಕಿದಾಗ ಅವರು ವಿಷಾದಿಸಿ ಪಶ್ಚಾತ್ತಾಪಪಡಲು ಮುಂದಾದರು. ಅವರು ಮಾಡಿದ ಪಾಪಕ್ಕೆ ಪರಿಹಾರವು ಅವರನ್ನೇ ಅವರು ಕೊಲ್ಲುವುದಾಗಿತ್ತು. ಇದನ್ನು ಎರಡು ರೀತಿಯಲ್ಲಿ ವಿವರಿಸಲಾಗಿದೆ: ಒಂದು, ಅವರನ್ನು ಎರಡು ಸಾಲುಗಳಾಗಿ ನಿಲ್ಲಿಸಿ ಒಬ್ಬರು ಇನ್ನೊಬ್ಬರನ್ನು ಕೊಲ್ಲಬೇಕೆಂದು ಆದೇಶಿಸಲಾಯಿತು. ಎರಡು, ಅವರಲ್ಲಿ ಈ ಪಾಪ ಮಾಡಿದವರನ್ನು ಪಾಪ ಮಾಡದವರು ಕೊಲ್ಲಬೇಕೆಂದು ಆದೇಶಿಸಲಾಯಿತು.

    ೫೫

    وَإِذۡ قُلۡتُمۡ يَٰمُوسَىٰ لَن نُّؤۡمِنَ لَكَ حَتَّىٰ نَرَى ٱللَّهَ جَهۡرَةٗ فَأَخَذَتۡكُمُ ٱلصَّٰعِقَةُ وَأَنتُمۡ تَنظُرُونَ

    “ಓ ಮೂಸಾ! ಅಲ್ಲಾಹನನ್ನು ನೇರವಾಗಿ ನೋಡುವ ತನಕ ನಾವು ನಿಮ್ಮಲ್ಲಿ ವಿಶ್ವಾಸವಿಡುವುದೇ ಇಲ್ಲ” ಎಂದು ನೀವು ಹೇಳಿದ ಸಂದರ್ಭ(ವನ್ನು ಸ್ಮರಿಸಿ). ಆಗ ನೀವು ನೋಡುತ್ತಿದ್ದಂತೆಯೇ ಮಿಂಚು ನಿಮ್ಮ ಮೇಲೆರಗಿ ಬಿಟ್ಟಿತು.

    ೫೬

    ثُمَّ بَعَثۡنَٰكُم مِّنۢ بَعۡدِ مَوۡتِكُمۡ لَعَلَّكُمۡ تَشۡكُرُونَ

    ನಂತರ, ನಿಮ್ಮ ಸಾವಿನ ಬಳಿಕ ನಾವು ನಿಮಗೆ ಜೀವ ನೀಡಿದೆವು. ನೀವು ಕೃತಜ್ಞರಾಗುವುದಕ್ಕಾಗಿ.[1]

    [1] ಮೂಸಾ (ಅವರ ಮೇಲೆ ಶಾಂತಿಯಿರಲಿ) ತೂರ್ ಪರ್ವತಕ್ಕೆ ಹೋಗುವಾಗ 70 ಮಂದಿಯನ್ನು ಕರೆದೊಯ್ದಿದ್ದರು. ಹಿಂದಿರುಗಿ ಬರುವಾಗ ಅವರು ಹೇಳಿದರು: "ಓ ಮೂಸಾ! ಅಲ್ಲಾಹನನ್ನು ನಮ್ಮ ಕಣ್ಣ ಮುಂದೆ ನೇರವಾಗಿ ನೋಡುವ ತನಕ ನಿಮ್ಮ ಮಾತಿನಲ್ಲಿ ನಾವು ನಂಬಿಕೆಯಿಡುವುದಿಲ್ಲ." ಆಗ ಇದ್ದಕ್ಕಿದ್ದಂತೆ ಆಕಾಶದಲ್ಲಿ ಮಿಂಚು ಗೋಚರವಾಗಿ ಅದು ಅವರ ಮೇಲೆ ಬಿದ್ದು ಅವರೆಲ್ಲರೂ ಸತ್ತರು. ಇದರಿಂದ ಮೂಸಾ (ಅವರ ಮೇಲೆ ಶಾಂತಿಯಿರಲಿ) ತುಂಬಾ ದುಃಖಿತರಾದರು. ನಂತರ ಅವರ ಪ್ರಾರ್ಥನೆಗೆ ಉತ್ತರವಾಗಿ ಅಲ್ಲಾಹು ಅವರನ್ನು ಜೀವಂತಗೊಳಿಸಿದನು.

    ೫೭

    وَظَلَّلۡنَا عَلَيۡكُمُ ٱلۡغَمَامَ وَأَنزَلۡنَا عَلَيۡكُمُ ٱلۡمَنَّ وَٱلسَّلۡوَىٰۖ كُلُواْ مِن طَيِّبَٰتِ مَا رَزَقۡنَٰكُمۡۚ وَمَا ظَلَمُونَا وَلَٰكِن كَانُوٓاْ أَنفُسَهُمۡ يَظۡلِمُونَ

    ನಾವು ನಿಮಗೆ ಮೋಡದ ನೆರಳನ್ನು ನೀಡಿದೆವು ಮತ್ತು ಮನ್ನ ಹಾಗೂ ಸಲ್ವಾವನ್ನು ಇಳಿಸಿಕೊಟ್ಟೆವು.[1] (ನಾವು ಹೇಳಿದೆವು): “ನಾವು ನಿಮಗೆ ಒದಗಿಸಿದ ಶುದ್ಧ ವಸ್ತುಗಳಿಂದ ತಿನ್ನಿರಿ.” ಅವರು ನಮಗೆ ಅನ್ಯಾಯ ಮಾಡಲಿಲ್ಲ; ಬದಲಿಗೆ, ಅವರು ಅವರಿಗೇ ಅನ್ಯಾಯ ಮಾಡುತ್ತಿದ್ದರು.

    [1] ಮನ್ನ ಎಂದರೆ ಕೆಲವರ ಅಭಿಪ್ರಾಯ ಪ್ರಕಾರ ತರಂಜಬೀನ್ ಎಂಬ ಹೆಸರಿನ ಅಂಟು ತಿನಿಸು. ಇದು ಒಂಟೆಮುಳ್ಳು ಎಂಬ ಸಸ್ಯದ ಎಲೆ ಮತ್ತು ಕಾಂಡಗಳಲ್ಲಿ ಉತ್ಪಾದನೆಯಾಗುವ ರಾಳದಂತಹ ಸಿಹಿವಸ್ತುವಾಗಿದೆ. ಮನ್ನ ಎಂದರೆ ಮರ ಹಾಗೂ ಬಂಡೆಗಳ ಮೇಲೆ ಬೀಳುವ ಇಬ್ಬನಿಯೆಂದು ಕೆಲವರು ಹೇಳಿದ್ದಾರೆ. ಇದು ಜೇನಿನಂತೆ ಸಿಹಿಯಾಗಿರುತ್ತದೆ ಮತ್ತು ಒಣಗಿದಾಗ ಮೇಣದಂತಾಗುತ್ತದೆ. ಕೆಲವರು ಮನ್ನ ಎಂದರೆ ಜೇನು ಅಥವಾ ಸಿಹಿನೀರು ಎಂದಿದ್ದಾರೆ. ಸಲ್ವಾ ಎಂದರೆ ಲಾವಕ್ಕಿ ಅಥವಾ ಗುಬ್ಬಚ್ಚಿಯಂತಹ ಸಣ್ಣ ಹಕ್ಕಿಯಾಗಿದ್ದು ಇದನ್ನು ಕೊಯ್ದು ತಿನ್ನುತ್ತಾರೆ.

    ೫೮

    وَإِذۡ قُلۡنَا ٱدۡخُلُواْ هَٰذِهِ ٱلۡقَرۡيَةَ فَكُلُواْ مِنۡهَا حَيۡثُ شِئۡتُمۡ رَغَدٗا وَٱدۡخُلُواْ ٱلۡبَابَ سُجَّدٗا وَقُولُواْ حِطَّةٞ نَّغۡفِرۡ لَكُمۡ خَطَٰيَٰكُمۡۚ وَسَنَزِيدُ ٱلۡمُحۡسِنِينَ

    ನಾವು ಹೇಳಿದ ಸಂದರ್ಭ(ವನ್ನು ಸ್ಮರಿಸಿ): “ಈ ಊರನ್ನು ಪ್ರವೇಶಿಸಿರಿ.[1] ಇಲ್ಲಿ ನೀವು ಇಚ್ಛಿಸುವ ಎಲ್ಲಾ ಕಡೆಗಳಿಂದ ಯಥೇಷ್ಟವಾಗಿ ತಿನ್ನಿರಿ. ಸಾಷ್ಟಾಂಗ ಮಾಡುತ್ತಾ[2] ದ್ವಾರವನ್ನು ಪ್ರವೇಶಿಸಿರಿ ಮತ್ತು ‘ಹಿತ್ತ’[3] ಎಂದು ಹೇಳಿರಿ. ನಾವು ನಿಮ್ಮ ಪಾಪಗಳನ್ನು ಕ್ಷಮಿಸುವೆವು ಮತ್ತು ಸತ್ಕರ್ಮವೆಸಗುವವರಿಗೆ ಪ್ರತಿಫಲವನ್ನು ಹೆಚ್ಚಿಸುವೆವು.”

    [1] ಹೆಚ್ಚಿನ ವ್ಯಾಖ್ಯಾನಕಾರರ ಅಭಿಪ್ರಾಯ ಪ್ರಕಾರ ಆ ಊರು ಬೈತುಲ್ ಮುಕದ್ದಸ್. [2] ಸಾಷ್ಟಾಂಗ ಮಾಡುತ್ತಾ ಪ್ರವೇಶಿಸಿರಿ ಎಂದರೆ ತಲೆಬಾಗುತ್ತಾ ಪ್ರವೇಶಿಸಿರಿ ಎಂದು ಕೆಲವರು ಅರ್ಥ ನೀಡಿದ್ದಾರೆ. ಕೆಲವರು ಇದನ್ನು ಅಕ್ಷರಾರ್ಥದಲ್ಲಿ ಗೌರವದ ರೂಪದಲ್ಲಿ ಸಾಷ್ಟಾಂಗ ಮಾಡುತ್ತಾ ಪ್ರವೇಶಿಸಿರಿ ಎಂದು ಅರ್ಥ ನೀಡಿದ್ದಾರೆ. [3] ಹಿತ್ತ ಎಂದರೆ ನಮ್ಮ ಪಾಪಗಳನ್ನು ಮನ್ನಿಸು ಎಂದರ್ಥ.

    ೫೯

    فَبَدَّلَ ٱلَّذِينَ ظَلَمُواْ قَوۡلًا غَيۡرَ ٱلَّذِي قِيلَ لَهُمۡ فَأَنزَلۡنَا عَلَى ٱلَّذِينَ ظَلَمُواْ رِجۡزٗا مِّنَ ٱلسَّمَآءِ بِمَا كَانُواْ يَفۡسُقُونَ

    ಆದರೆ ಆ ಅಕ್ರಮಿಗಳು ಅವರಿಗೆ ಹೇಳಲಾದ ಮಾತನ್ನು ಬದಲಾಯಿಸಿದರು.[1] ಆದ್ದರಿಂದ, ನಾವು ಆ ಅಕ್ರಮಿಗಳ ಮೇಲೆ—ಅವರು ಮಾಡುತ್ತಿದ್ದ ದುಷ್ಕರ್ಮಗಳ ನಿಮಿತ್ತ—ಆಕಾಶದಿಂದ ಶಿಕ್ಷೆಯನ್ನು ಇಳಿಸಿದೆವು.

    [1] ಅವರು ಸಾಷ್ಟಾಂಗ ಮಾಡುತ್ತಾ ಪ್ರವೇಶಿಸುವುದಕ್ಕೆ ಬದಲು, ಬಟ್ಟೆಯನ್ನು ನೆಲದಲ್ಲಿ ಎಳೆಯುತ್ತಾ ಎದೆಯುಬ್ಬಿಸಿ ಅಹಂಕಾರದಿಂದ ಪ್ರವೇಶಿಸಿದರು. ಹಿತ್ತ ಎಂದು ಹೇಳುವುದರ ಬದಲಿಗೆ ಬೇರೊಂದು ಮಾತನ್ನು ಹೇಳಿದರು. ಇದರಿಂದ ಅವರ ಅಹಂಕಾರ ಮತ್ತು ದೈವಿಕ ಆಜ್ಞೆಗೆ ಅವರು ತೋರುತ್ತಿದ್ದ ತಿರಸ್ಕಾರವನ್ನು ಅರ್ಥೈಸಬಹುದು.

    ೬೦

    ۞ وَإِذِ ٱسۡتَسۡقَىٰ مُوسَىٰ لِقَوۡمِهِۦ فَقُلۡنَا ٱضۡرِب بِّعَصَاكَ ٱلۡحَجَرَۖ فَٱنفَجَرَتۡ مِنۡهُ ٱثۡنَتَا عَشۡرَةَ عَيۡنٗاۖ قَدۡ عَلِمَ كُلُّ أُنَاسٖ مَّشۡرَبَهُمۡۖ كُلُواْ وَٱشۡرَبُواْ مِن رِّزۡقِ ٱللَّهِ وَلَا تَعۡثَوۡاْ فِي ٱلۡأَرۡضِ مُفۡسِدِينَ

    ಮೂಸಾ ತಮ್ಮ ಜನರಿಗಾಗಿ ನೀರನ್ನು ಬೇಡಿದ ಸಂದರ್ಭ. ನಾವು ಹೇಳಿದೆವು: “ನಿಮ್ಮ ಕೈಯಲ್ಲಿರುವ ಕೋಲಿನಿಂದ ಆ ಬಂಡೆಯ ಮೇಲೆ ಹೊಡೆಯಿರಿ.” ಆಗ ಅದರಿಂದ ಹನ್ನೆರಡು ಚಿಲುಮೆಗಳು ಚಿಮ್ಮಿ ಹರಿದವು.[1] ಎಲ್ಲಾ ಜನರೂ (ಗೋತ್ರಗಳೂ) ತಮ್ಮ ನೀರಿನ ಸ್ಥಳವನ್ನು ತಿಳಿದುಕೊಂಡರು. (ನಾವು ಹೇಳಿದೆವು): “ಅಲ್ಲಾಹು ಒದಗಿಸಿದ ಆಹಾರದಿಂದ ತಿನ್ನಿರಿ ಮತ್ತು ಕುಡಿಯಿರಿ; ಭೂಮಿಯಲ್ಲಿ ಕಿಡಿಗೇಡಿತನ ಮಾಡುತ್ತಾ ಅಲೆಯಬೇಡಿ."

    [1] ಇಸ್ರಾಯೇಲ್ ಮಕ್ಕಳ ಹನ್ನೆರಡು ಗೋತ್ರಗಳಿಗೆ ಹನ್ನೆರಡು ಚಿಲುಮೆಗಳು.

    ೬೧

    وَإِذۡ قُلۡتُمۡ يَٰمُوسَىٰ لَن نَّصۡبِرَ عَلَىٰ طَعَامٖ وَٰحِدٖ فَٱدۡعُ لَنَا رَبَّكَ يُخۡرِجۡ لَنَا مِمَّا تُنۢبِتُ ٱلۡأَرۡضُ مِنۢ بَقۡلِهَا وَقِثَّآئِهَا وَفُومِهَا وَعَدَسِهَا وَبَصَلِهَاۖ قَالَ أَتَسۡتَبۡدِلُونَ ٱلَّذِي هُوَ أَدۡنَىٰ بِٱلَّذِي هُوَ خَيۡرٌۚ ٱهۡبِطُواْ مِصۡرٗا فَإِنَّ لَكُم مَّا سَأَلۡتُمۡۗ وَضُرِبَتۡ عَلَيۡهِمُ ٱلذِّلَّةُ وَٱلۡمَسۡكَنَةُ وَبَآءُو بِغَضَبٖ مِّنَ ٱللَّهِۚ ذَٰلِكَ بِأَنَّهُمۡ كَانُواْ يَكۡفُرُونَ بِـَٔايَٰتِ ٱللَّهِ وَيَقۡتُلُونَ ٱلنَّبِيِّـۧنَ بِغَيۡرِ ٱلۡحَقِّۚ ذَٰلِكَ بِمَا عَصَواْ وَّكَانُواْ يَعۡتَدُونَ

    ನೀವು ಹೇಳಿದ ಸಂದರ್ಭ(ವನ್ನು ಸ್ಮರಿಸಿ): “ಓ ಮೂಸಾ! ಒಂದೇ ರೀತಿಯ ಆಹಾರವನ್ನು ಸಹಿಸಿಕೊಂಡಿರಲು ನಮಗೆ ಸಾಧ್ಯವೇ ಇಲ್ಲ. ಆದ್ದರಿಂದ ನೀವು ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸಿರಿ. ಅವನು ನಮಗೆ ಭೂಮಿಯಲ್ಲಿ ಬೆಳೆಯುವ ಸೊಪ್ಪು, ಸೌತೆ, ಗೋಧಿ, ಮಸೂರ ಮತ್ತು ಈರುಳ್ಳಿಯನ್ನು ಉತ್ಪಾದಿಸಿಕೊಡಲಿ.” ಮೂಸಾ ಹೇಳಿದರು: “ಅತ್ಯುತ್ತಮ ವಸ್ತುವನ್ನು ಬಿಟ್ಟು ಕಳಪೆ ವಸ್ತುವನ್ನು ಏಕೆ ಕೇಳುತ್ತೀರಿ? ನೀವು ಯಾವುದಾದರೂ ನಗರಕ್ಕೆ ಹೋಗಿರಿ. ಅಲ್ಲಿ ನೀವು ಕೇಳಿದ್ದೆಲ್ಲವೂ ನಿಮಗೆ ಸಿಗುವುದು.” (ಅವರ ದರ್ಪದಿಂದಾಗಿ) ಅವರ ಮೇಲೆ ಅಪಮಾನ ಹಾಗೂ ಬಡತನವನ್ನು ಹೊದಿಸಲಾಯಿತು; ಅವರು ಅಲ್ಲಾಹನ ಕೋಪದೊಂದಿಗೆ ಮರಳಿದರು. ಅದೇಕೆಂದರೆ, ಅವರು ಅಲ್ಲಾಹನ ವಚನಗಳನ್ನು ನಿಷೇಧಿಸುತ್ತಿದ್ದರು ಮತ್ತು ಪ್ರವಾದಿಗಳನ್ನು ಅನ್ಯಾಯವಾಗಿ ಕೊಲ್ಲುತ್ತಿದ್ದರು. ಅದು ಅವರ ಅವಿಧೇಯತೆ ಮತ್ತು ಅತಿರೇಕದ ಫಲಿತಾಂಶವಾಗಿತ್ತು.

    ೬೨

    إِنَّ ٱلَّذِينَ ءَامَنُواْ وَٱلَّذِينَ هَادُواْ وَٱلنَّصَٰرَىٰ وَٱلصَّٰبِـِٔينَ مَنۡ ءَامَنَ بِٱللَّهِ وَٱلۡيَوۡمِ ٱلۡأٓخِرِ وَعَمِلَ صَٰلِحٗا فَلَهُمۡ أَجۡرُهُمۡ عِندَ رَبِّهِمۡ وَلَا خَوۡفٌ عَلَيۡهِمۡ وَلَا هُمۡ يَحۡزَنُونَ

    ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳು, ಯಹೂದಿಗಳು, ಕ್ರೈಸ್ತರು ಅಥವಾ ಸಾಬಿಗಳು—ಇವರ ಪೈಕಿ ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಟ್ಟವರು ಹಾಗೂ ಸತ್ಕರ್ಮವೆಸಗಿದವರು ಯಾರೋ, ಅವರಿಗೆ ಅವರ ಪ್ರತಿಫಲವು ಅವರ ಪರಿಪಾಲಕನ (ಅಲ್ಲಾಹನ) ಬಳಿಯಿದೆ. ಅವರಿಗೆ ಯಾವುದೇ ಭಯವಿಲ್ಲ; ಅವರು ದುಃಖಿಸುವುದೂ ಇಲ್ಲ.[1]

    [1] ಕೆಲವರು ಈ ವಚನವನ್ನು ತಪ್ಪಾಗಿ ಅರ್ಥಮಾಡಿಕೊಂಡು 'ಧರ್ಮಗಳ ಏಕತೆ' ಎಂಬ ಹೊಸ ಸಿದ್ಧಾಂತವನ್ನು ಸ್ಥಾಪಿಸಿದ್ದಾರೆ. ಅವರ ಪ್ರಕಾರ ಇಸ್ಲಾಂ ಧರ್ಮದಲ್ಲಿ ವಿಶ್ವಾಸವಿಡುವುದು ಕಡ್ಡಾಯವಲ್ಲ. ಯಾವುದೇ ಧರ್ಮದಲ್ಲಿದ್ದು ಏಕದೇವನನ್ನು ಆರಾಧಿಸಿ ಒಳಿತು ಮಾಡಿದರೆ ಅವರಿಗೆ ಮೋಕ್ಷ ಸಿಗುತ್ತದೆ. ಇದು ಅತ್ಯಂತ ಹೊಲಸು ಸಿದ್ಧಾಂತವಾಗಿದ್ದು ಕುರ್‌ಆನಿನ ಬೋಧನೆಗಳಿಗೆ ವಿರುದ್ಧವಾಗಿದೆ. ಈ ವಚನದ ನಿಜವಾದ ಅರ್ಥವೇನೆಂದರೆ, ಮೇಲಿನ ವಚನಗಳಲ್ಲಿ ಯಹೂದಿಗಳ ಅವಿಧೇಯತೆ, ಅಹಂಕಾರ ಮತ್ತು ಅತಿರೇಕಗಳ ಬಗ್ಗೆ ಪ್ರಸ್ತಾಪಿಸಿ, ಅವರಿಗೆ ನೀಡಲಾದ ಶಿಕ್ಷೆಯ ಬಗ್ಗೆಯೂ ಪ್ರಸ್ತಾಪಿಸಲಾದಾಗ, ಸ್ವಾಭಾವಿಕವಾಗಿ ಒಂದು ಪ್ರಶ್ನೆ ಉದ್ಭವವಾಗುತ್ತದೆ. ಹಾಗಾದರೆ, ಯಹೂದಿಗಳಲ್ಲಿ ಒಳ್ಳೆಯವರು ಯಾರೂ ಇರಲಿಲ್ಲವೇ? ಇದ್ದರೆ ಅವರಿಗೆ ಅಲ್ಲಾಹು ಏನು ಪ್ರತಿಫಲ ನೀಡಿದ್ದಾನೆ? ಇದಕ್ಕೆ ಉತ್ತರವಾಗಿ, ಈ ವಚನ ಅವತೀರ್ಣವಾಗಿದೆ. ಅಂದರೆ, ಯಹೂದಿಗಳಲ್ಲಿ ಮಾತ್ರವಲ್ಲ, ಕ್ರೈಸ್ತರು, ಸಾಬಿಗಳು ಮುಂತಾದವರಲ್ಲಿಯೂ ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರ ಆಗಮನಕ್ಕೆ ಮುಂಚೆ ಅಲ್ಲಾಹನಲ್ಲಿ ಮತ್ತು ಪರಲೋಕದಲ್ಲಿ ವಿಶ್ವಾಸವಿಟ್ಟು, ಸತ್ಕಾರ್ಯಗಳನ್ನು ಮಾಡಿದ್ದರೆ ಅವರೆಲ್ಲರೂ ಮೋಕ್ಷ ಪಡೆಯುತ್ತಾರೆ. ಅದೇ ರೀತಿ, ಈಗ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರ ಸಂದೇಶದಲ್ಲಿ ವಿಶ್ವಾಸವಿಡುವವರು ಕೂಡ ಅಲ್ಲಾಹನಲ್ಲಿ ಮತ್ತು ಪರಲೋಕದಲ್ಲಿ ಸರಿಯಾಗಿ ವಿಶ್ವಾಸವಿಟ್ಟು ಸತ್ಕಾರ್ಯಗಳನ್ನು ಮಾಡಿದರೆ ಅವರು ಕೂಡ ಮೋಕ್ಷ ಪಡೆಯುತ್ತಾರೆ. [ನೋಡಿ: 3:19, 3:85]

    ೬೩

    وَإِذۡ أَخَذۡنَا مِيثَٰقَكُمۡ وَرَفَعۡنَا فَوۡقَكُمُ ٱلطُّورَ خُذُواْ مَآ ءَاتَيۡنَٰكُم بِقُوَّةٖ وَٱذۡكُرُواْ مَا فِيهِ لَعَلَّكُمۡ تَتَّقُونَ

    ನಾವು ನಿಮ್ಮಿಂದ ಕರಾರನ್ನು ಪಡೆದುಕೊಂಡ ಮತ್ತು ನಿಮ್ಮ ಮೇಲೆ ತೂರ್ ಪರ್ವತವನ್ನು ಎತ್ತಿಹಿಡಿದ ಸಂದರ್ಭ. (ನಾವು ಹೇಳಿದೆವು): “ನಾವು ನಿಮಗೆ ನೀಡಿದ್ದನ್ನು ಬಿಗಿಯಾಗಿ ಹಿಡಿಯಿರಿ ಮತ್ತು ಅದರಲ್ಲಿರುವುದನ್ನು ನೆನಪಿಟ್ಟುಕೊಳ್ಳಿರಿ; ನೀವು ದೇವಭಯವುಳ್ಳವರಾಗುವುದಕ್ಕಾಗಿ.”

    ೬೪

    ثُمَّ تَوَلَّيۡتُم مِّنۢ بَعۡدِ ذَٰلِكَۖ فَلَوۡلَا فَضۡلُ ٱللَّهِ عَلَيۡكُمۡ وَرَحۡمَتُهُۥ لَكُنتُم مِّنَ ٱلۡخَٰسِرِينَ

    ನಂತರ, ಅದರ ಬಳಿಕವೂ ನೀವು ವಿಮುಖರಾದಿರಿ. ನಿಮ್ಮ ಮೇಲೆ ಅಲ್ಲಾಹನ ಔದಾರ್ಯ ಮತ್ತು ದಯೆಯಿಲ್ಲದಿರುತ್ತಿದ್ದರೆ, ನೀವು ನಷ್ಟ ಹೊಂದಿದವರಲ್ಲಿ ಸೇರುತ್ತಿದ್ದಿರಿ.

    ೬೫

    وَلَقَدۡ عَلِمۡتُمُ ٱلَّذِينَ ٱعۡتَدَوۡاْ مِنكُمۡ فِي ٱلسَّبۡتِ فَقُلۡنَا لَهُمۡ كُونُواْ قِرَدَةً خَٰسِـِٔينَ

    ನಿಮ್ಮ ಪೈಕಿ ಸಬ್ಬತ್‌ನ[1] ವಿಷಯದಲ್ಲಿ ಅತಿರೇಕವೆಸಗಿದವರ ಬಗ್ಗೆ ನಿಮಗೆ ಈಗಾಗಲೇ ತಿಳಿದಿದೆ. ನಾವು ಅವರೊಡನೆ ಹೇಳಿದೆವು: “ನೀವು ಹೊಲಸು ಕಪಿಗಳಾಗಿ ಬಿಡಿ.”

    [1] ಸಬ್ಬತ್ ಎಂದರೆ ಶನಿವಾರ. ಅಂದು ಯಹೂದಿಗಳಿಗೆ ಮೀನು ಹಿಡಿಯುವುದು ಹಾಗೂ ಇತರ ಎಲ್ಲಾ ಲೌಕಿಕ ಕೆಲಸ ಮಾಡುವುದನ್ನು ನಿಷೇಧಿಸಲಾಗಿತ್ತು. ಅವರಿಗೆ ಒಂದು ಪರೀಕ್ಷೆಯೋ ಎಂಬಂತೆ ಶನಿವಾರ ಮೀನುಗಳು ಹೆಚ್ಚು ಹೆಚ್ಚಾಗಿ ಕಾಣುತ್ತಿದ್ದವು. ಆದ್ದರಿಂದ, ಅವರು ಶನಿವಾರ ಬಲೆ ಹಾಕಿ ಭಾನುವಾರ ಮೀನು ಹಿಡಿಯುವ ಉಪಾಯ ಮಾಡಿದರು. ಇದು ದೈವಿಕ ಆಜ್ಞೆಯ ಸ್ಪಷ್ಟ ಉಲ್ಲಂಘನೆಯಾಗಿತ್ತು.

    ೬೬

    فَجَعَلۡنَٰهَا نَكَٰلٗا لِّمَا بَيۡنَ يَدَيۡهَا وَمَا خَلۡفَهَا وَمَوۡعِظَةٗ لِّلۡمُتَّقِينَ

    ನಾವು ಅದನ್ನು ಆ ಕಾಲದವರಿಗೂ, ಅದರ ನಂತರದವರಿಗೂ ಒಂದು ನೀತಿಪಾಠ ಮತ್ತು ದೇವಭಯವುಳ್ಳವರಿಗೆ ಉಪದೇಶವೆಂಬಂತೆ ಮಾಡಿದೆವು.

    ೬೭

    وَإِذۡ قَالَ مُوسَىٰ لِقَوۡمِهِۦٓ إِنَّ ٱللَّهَ يَأۡمُرُكُمۡ أَن تَذۡبَحُواْ بَقَرَةٗۖ قَالُوٓاْ أَتَتَّخِذُنَا هُزُوٗاۖ قَالَ أَعُوذُ بِٱللَّهِ أَنۡ أَكُونَ مِنَ ٱلۡجَٰهِلِينَ

    ಮೂಸಾ ತಮ್ಮ ಜನರೊಡನೆ ಹೇಳಿದ ಸಂದರ್ಭ: “ಅಲ್ಲಾಹು ನಿಮ್ಮೊಡನೆ ಒಂದು ಹಸುವನ್ನು ಕೊಯ್ಯಲು ಆದೇಶಿಸುತ್ತಿದ್ದಾನೆ.”[1] ಅವರು ಕೇಳಿದರು: “ಏನು ನೀವು ನಮ್ಮನ್ನು ಅಣಕಿಸುತ್ತಿದ್ದೀರಾ?” ಮೂಸಾ ಹೇಳಿದರು: “ಅವಿವೇಕಿಗಳಲ್ಲಿ ಸೇರದಂತೆ ನಾನು ಅಲ್ಲಾಹನಲ್ಲಿ ಅಭಯ ಕೋರುತ್ತೇನೆ.”

    [1] ಇಸ್ರಾಯೇಲರಲ್ಲಿ ಒಬ್ಬ ಮಕ್ಕಳಿಲ್ಲದ ಶ್ರೀಮಂತ ವ್ಯಕ್ತಿಯಿದ್ದ. ಅವನ ಸೋದರಳಿಯ ಮಾತ್ರ ಅವನ ವಾರೀಸುದಾರನಾಗಿದ್ದ. ಒಂದು ರಾತ್ರಿ ಸೋದರಳಿಯ ಚಿಕ್ಕಪ್ಪನನ್ನು ಕೊಂದು ಶವವನ್ನು ಬೇರೊಬ್ಬ ವ್ಯಕ್ತಿಯ ಮನೆಯ ಬಾಗಿಲ ಬಳಿ ಹಾಕಿದ. ಬೆಳಗಾದಾಗ, ಕೊಲೆಗಾರನ ಹುಡುಕಾಟದಲ್ಲಿ ಇಸ್ರಾಯೇಲರು ಪರಸ್ಪರ ಜಗಳ ಮಾಡತೊಡಗಿದರು. ಅಂತಿಮವಾಗಿ, ವಿಷಯವು ಮೂಸಾರ (ಅವರ ಮೇಲೆ ಶಾಂತಿಯಿರಲಿ) ಬಳಿ ತಲುಪಿತು. ಆಗ ಅವರು, "ಒಂದು ಹಸುವನ್ನು ಕೊಯ್ದು ಅದರ ಒಂದು ಅಂಗದಿಂದ ಸತ್ತ ವ್ಯಕ್ತಿಗೆ ಬಡಿಯಿರಿ; ಆಗ ಆತ ಜೀವಂತ ಎದ್ದು ಕೊಲೆಗಾರ ಯಾರೆಂದು ಹೇಳುತ್ತಾನೆ" ಎಂದರು. ಮೂಸಾರ ಮಾತು ಕೇಳಿದಾಗ ಅವರೆಲ್ಲರೂ ಗೊಳ್ಳೆಂದು ನಕ್ಕರು.

    ೬೮

    قَالُواْ ٱدۡعُ لَنَا رَبَّكَ يُبَيِّن لَّنَا مَا هِيَۚ قَالَ إِنَّهُۥ يَقُولُ إِنَّهَا بَقَرَةٞ لَّا فَارِضٞ وَلَا بِكۡرٌ عَوَانُۢ بَيۡنَ ذَٰلِكَۖ فَٱفۡعَلُواْ مَا تُؤۡمَرُونَ

    ಅವರು ಹೇಳಿದರು:”ನೀವು ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸಿರಿ; ಅದು (ಹಸು) ಯಾವುದೆಂದು ಅವನು ನಮಗೆ ವಿವರಿಸಿಕೊಡಲಿ.” ಮೂಸಾ ಹೇಳಿದರು: “ಅದು ಮುದಿ ಪ್ರಾಯದ್ದೋ ಅಥವಾ ಎಳೆಯ ಪ್ರಾಯದ್ದೋ ಅಲ್ಲದ ಅದರ ನಡುವಿನ ಪ್ರಾಯದ ಹಸುವಾಗಿದೆಯೆಂದು ಅವನು ಹೇಳುತ್ತಿದ್ದಾನೆ. ಆದ್ದರಿಂದ ನಿಮಗೆ ಆದೇಶಿಸಲಾಗುವಂತೆ ಕಾರ್ಯೋನ್ಮುಖರಾಗಿರಿ.”

    ೬೯

    قَالُواْ ٱدۡعُ لَنَا رَبَّكَ يُبَيِّن لَّنَا مَا لَوۡنُهَاۚ قَالَ إِنَّهُۥ يَقُولُ إِنَّهَا بَقَرَةٞ صَفۡرَآءُ فَاقِعٞ لَّوۡنُهَا تَسُرُّ ٱلنَّٰظِرِينَ

    ಅವರು ಹೇಳಿದರು: “ನೀವು ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸಿರಿ; ಅದರ ಬಣ್ಣ ಯಾವುದೆಂದು ಅವನು ನಮಗೆ ವಿವರಿಸಿಕೊಡಲಿ.” ಮೂಸಾ ಹೇಳಿದರು: “ಅದು ಶುಭ್ರ ಹಳದಿ ಬಣ್ಣದ ಹಸುವಾಗಿದ್ದು ನೋಡುಗರನ್ನು ಮುದಗೊಳಿಸುತ್ತದೆ ಎಂದು ಅವನು (ಅಲ್ಲಾಹು) ಹೇಳುತ್ತಿದ್ದಾನೆ.”

    ೭೦

    قَالُواْ ٱدۡعُ لَنَا رَبَّكَ يُبَيِّن لَّنَا مَا هِيَ إِنَّ ٱلۡبَقَرَ تَشَٰبَهَ عَلَيۡنَا وَإِنَّآ إِن شَآءَ ٱللَّهُ لَمُهۡتَدُونَ

    ಅವರು ಹೇಳಿದರು: “ನೀವು ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸಿರಿ; ಅದು (ಹಸು) ಯಾವುದೆಂದು ಅವನು ನಮಗೆ ವಿವರಿಸಿಕೊಡಲಿ. ನಿಶ್ಚಯವಾಗಿಯೂ ಹಸುಗಳು ನಮಗೆ ಒಂದೇ ರೀತಿಯಾಗಿ ಕಾಣುತ್ತಿವೆ.[1] ಅಲ್ಲಾಹು ಇಚ್ಛಿಸಿದರೆ ಖಂಡಿವಾಗಿಯೂ ನಾವು ಸನ್ಮಾರ್ಗವನ್ನು ಪಡೆಯುವೆವು.”

    [1] ನೀವು ವಿವರಿಸಿದ ಗುಣಗಳಿರುವ ಹಲವಾರು ಹಸುಗಳಿವೆ. ನಾವು ಯಾವುದನ್ನು ಕೊಯ್ಯಬೇಕು? ಒಂದು ನಿರ್ದಿಷ್ಟ ಹಸುವಿನ ಬಗ್ಗೆ ನಮಗೆ ವಿವರಿಸಿಕೊಡಿ.

    ೭೧

    قَالَ إِنَّهُۥ يَقُولُ إِنَّهَا بَقَرَةٞ لَّا ذَلُولٞ تُثِيرُ ٱلۡأَرۡضَ وَلَا تَسۡقِي ٱلۡحَرۡثَ مُسَلَّمَةٞ لَّا شِيَةَ فِيهَاۚ قَالُواْ ٱلۡـَٰٔنَ جِئۡتَ بِٱلۡحَقِّۚ فَذَبَحُوهَا وَمَا كَادُواْ يَفۡعَلُونَ

    ಮೂಸಾ ಹೇಳಿದರು: “ಅದು ಎಂತಹ ಹಸುವೆಂದರೆ, ಭೂಮಿಯನ್ನು ಉಳಲು ಅಥವಾ ನೀರನ್ನು ಹಾಯಿಸಲು ಅದನ್ನು ಪಳಗಿಸಲಾಗಿಲ್ಲ; ಅದಕ್ಕೆ ಯಾವುದೇ ನ್ಯೂನತೆಗಳಿಲ್ಲ; ಅದರಲ್ಲಿ ಯಾವುದೇ ಕಲೆಗಳೂ ಇಲ್ಲ ಎಂದು ಅಲ್ಲಾಹು ಹೇಳುತ್ತಿದ್ದಾನೆ.” ಅವರು ಹೇಳಿದರು: “ಈಗ ನೀವು ಸತ್ಯವನ್ನು ತಂದಿದ್ದೀರಿ.” ಹೀಗೆ ಅವರು ಅದನ್ನು ಕೊಯ್ದರು. ಆದರೆ ಅದನ್ನು ಮಾಡುವುದು ಅವರಿಗೆ ಅಷ್ಟು ಸುಲಭವಾಗಿರಲಿಲ್ಲ.[1]

    [1] ಮೂಸಾ (ಅವರ ಮೇಲೆ ಶಾಂತಿಯಿರಲಿ) ಒಂದು ಹಸುವನ್ನು ಕೊಯ್ಯಲು ಹೇಳಿದ್ದರು. ನಿರ್ದಿಷ್ಟವಾಗಿ ಯಾವುದು ಎಂದು ಹೇಳಿರಲಿಲ್ಲ. ಆದ್ದರಿಂದ ಯಾವುದೇ ಒಂದು ಹಸುವನ್ನು ಕೊಯ್ದರೆ ಸಾಕಾಗುತ್ತಿತ್ತು. ಆದರೆ ಅವರು ವಿನಾಕಾರಣ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿ ವಿಷಯವನ್ನು ಜಟಿಲಗೊಳಿಸಿದರು. ಕೊನೆಗೆ ಮೂಸಾ (ಅವರ ಮೇಲೆ ಶಾಂತಿಯಿರಲಿ) ಹೇಳಿದಂತಹ ಒಂದು ಹಸುವನ್ನು ಹುಡುಕಿ ತರುವುದು ಅವರಿಗೆ ಬಹಳ ಕಷ್ಟವಾಯಿತು.

    ೭೨

    وَإِذۡ قَتَلۡتُمۡ نَفۡسٗا فَٱدَّٰرَٰءۡتُمۡ فِيهَاۖ وَٱللَّهُ مُخۡرِجٞ مَّا كُنتُمۡ تَكۡتُمُونَ

    ನೀವು ಒಬ್ಬ ವ್ಯಕ್ತಿಯನ್ನು ಕೊಂದು, ನಂತರ ಪರಸ್ಪರ ದೋಷಾರೋಪ ಹೊರಿಸಿದ ಸಂದರ್ಭ. ನೀವು ಬಚ್ಚಿಡುವುದನ್ನು ಅಲ್ಲಾಹು ಹೊರಗೆ ತರುತ್ತಾನೆ.

    ೭೩

    فَقُلۡنَا ٱضۡرِبُوهُ بِبَعۡضِهَاۚ كَذَٰلِكَ يُحۡيِ ٱللَّهُ ٱلۡمَوۡتَىٰ وَيُرِيكُمۡ ءَايَٰتِهِۦ لَعَلَّكُمۡ تَعۡقِلُونَ

    ನಾವು ಹೇಳಿದೆವು: “ಅದರ (ಹಸುವಿನ) ಒಂದು ಭಾಗದಿಂದ ಅವನಿಗೆ (ಅವನ ಕಳೇಬರಕ್ಕೆ) ಹೊಡೆಯಿರಿ. (ಆಗ ಅವನು ಜೀವಂತ ಎದ್ದು ನಿಲ್ಲುವನು).” ಈ ರೀತಿ ಅಲ್ಲಾಹು ಸತ್ತವರಿಗೆ ಜೀವ ನೀಡುತ್ತಾನೆ. ನೀವು ಆಲೋಚಿಸುವುದಕ್ಕಾಗಿ ಅವನು ಅವನ ದೃಷ್ಟಾಂತಗಳನ್ನು ನಿಮಗೆ ತೋರಿಸುತ್ತಾನೆ.

    ೭೪

    ثُمَّ قَسَتۡ قُلُوبُكُم مِّنۢ بَعۡدِ ذَٰلِكَ فَهِيَ كَٱلۡحِجَارَةِ أَوۡ أَشَدُّ قَسۡوَةٗۚ وَإِنَّ مِنَ ٱلۡحِجَارَةِ لَمَا يَتَفَجَّرُ مِنۡهُ ٱلۡأَنۡهَٰرُۚ وَإِنَّ مِنۡهَا لَمَا يَشَّقَّقُ فَيَخۡرُجُ مِنۡهُ ٱلۡمَآءُۚ وَإِنَّ مِنۡهَا لَمَا يَهۡبِطُ مِنۡ خَشۡيَةِ ٱللَّهِۗ وَمَا ٱللَّهُ بِغَٰفِلٍ عَمَّا تَعۡمَلُونَ

    ನಂತರ, ಅದರ ಬಳಿಕವೂ ನಿಮ್ಮ ಹೃದಯಗಳು ಕಠೋರವಾದವು. ಅವು ಬಂಡೆಯಂತೆ ಅಥವಾ ಅದಕ್ಕಿಂತಲೂ ಹೆಚ್ಚು ಕಠೋರವಾದವು. ನಿಶ್ಚಯವಾಗಿಯೂ, ಕೆಲವು ಬಂಡೆಗಳಿಂದ ನದಿಗಳು ಚಿಮ್ಮಿ ಹರಿಯುತ್ತವೆ; ಕೆಲವು ಬಂಡೆಗಳು ಒಡೆದು ನೀರು ಹೊರಬರುತ್ತದೆ; ಕೆಲವು ಬಂಡೆಗಳು ಅಲ್ಲಾಹನ ಭಯದಿಂದ ಉರುಳಿ ಬೀಳುತ್ತವೆ. ನೀವು ಮಾಡುತ್ತಿರುವ ಕರ್ಮಗಳ ಕುರಿತು ಅಲ್ಲಾಹು ತಿಳಿಯದವನಲ್ಲ.

    ೭೫

    ۞ أَفَتَطۡمَعُونَ أَن يُؤۡمِنُواْ لَكُمۡ وَقَدۡ كَانَ فَرِيقٞ مِّنۡهُمۡ يَسۡمَعُونَ كَلَٰمَ ٱللَّهِ ثُمَّ يُحَرِّفُونَهُۥ مِنۢ بَعۡدِ مَا عَقَلُوهُ وَهُمۡ يَعۡلَمُونَ

    (ಸತ್ಯವಿಶ್ವಾಸಿಗಳೇ!), ಅವರು ವಿಶ್ವಾಸವಿಡುವರೆಂದು ನೀವು ಹಾರೈಸುತ್ತೀರಾ? ವಾಸ್ತವದಲ್ಲಿ, ಅವರಲ್ಲೊಂದು ಗುಂಪು ಅಲ್ಲಾಹನ ವಚನಗಳಿಗೆ ಕಿವಿಗೊಡುತ್ತಾರೆ; ನಂತರ, ಅದನ್ನು ಸರಿಯಾಗಿ ಅರ್ಥಮಾಡಿಕೊಂಡ ಬಳಿಕ, ತಿಳುವಳಿಕೆಯುಳ್ಳವರಾಗಿದ್ದೂ ಸಹ ಅವರು ಅದನ್ನು ವಿರೂಪಗೊಳಿಸುತ್ತಾರೆ.

    ೭೬

    وَإِذَا لَقُواْ ٱلَّذِينَ ءَامَنُواْ قَالُوٓاْ ءَامَنَّا وَإِذَا خَلَا بَعۡضُهُمۡ إِلَىٰ بَعۡضٖ قَالُوٓاْ أَتُحَدِّثُونَهُم بِمَا فَتَحَ ٱللَّهُ عَلَيۡكُمۡ لِيُحَآجُّوكُم بِهِۦ عِندَ رَبِّكُمۡۚ أَفَلَا تَعۡقِلُونَ

    ಸತ್ಯವಿಶ್ವಾಸಿಗಳನ್ನು ಭೇಟಿ ಮಾಡಿದರೆ ಅವರು ಹೇಳುತ್ತಾರೆ: “ನಾವು ವಿಶ್ವಾಸವಿಟ್ಟಿದ್ದೇವೆ.” ಆದರೆ ಅವರು ಪರಸ್ಪರ ಏಕಾಂತದಲ್ಲಿರುವಾಗ ಹೇಳುತ್ತಾರೆ: “ಅಲ್ಲಾಹು ನಿಮಗೆ ತಿಳಿಸಿಕೊಟ್ಟ ವಿಷಯಗಳನ್ನು ನೀವೇಕೆ ಅವರಿಗೆ ತಿಳಿಸುತ್ತೀರಿ? ಅವರು ಅದನ್ನು ಹಿಡಿದು ನಿಮ್ಮ ಪರಿಪಾಲಕನ (ಅಲ್ಲಾಹನ) ಮುಂದೆ ನಿಮ್ಮೊಡನೆ ತರ್ಕಿಸುವುದಕ್ಕೋ? ನೀವು ಆಲೋಚಿಸುವುದಿಲ್ಲವೇ?”

    ೭೭

    أَوَلَا يَعۡلَمُونَ أَنَّ ٱللَّهَ يَعۡلَمُ مَا يُسِرُّونَ وَمَا يُعۡلِنُونَ

    ಆದರೆ ಅವರು ಮುಚ್ಚಿಡುವುದನ್ನು ಮತ್ತು ಬಹಿರಂಗಪಡಿಸುವುದನ್ನು ಅಲ್ಲಾಹು ತಿಳಿಯುತ್ತಾನೆಂದು ಅವರಿಗೆ ತಿಳಿದಿಲ್ಲವೇ?

    ೭೮

    وَمِنۡهُمۡ أُمِّيُّونَ لَا يَعۡلَمُونَ ٱلۡكِتَٰبَ إِلَّآ أَمَانِيَّ وَإِنۡ هُمۡ إِلَّا يَظُنُّونَ

    ಅವರಲ್ಲಿ ಕೆಲವು ಅನಕ್ಷರಸ್ಥರಿದ್ದಾರೆ; ಅವರಿಗೆ ಗ್ರಂಥದಲ್ಲಿ ಏನಿದೆಯೆಂದೇ ತಿಳಿದಿಲ್ಲ. ಅವರು ಕೆಲವು ಗುಮಾನಿಗಳನ್ನಷ್ಟೇ ಹೊಂದಿದ್ದಾರೆ. ಅವರು ಕೇವಲ ಊಹಿಸುವುದನ್ನಷ್ಟೇ ಮಾಡುತ್ತಾರೆ.

    ೭೯

    فَوَيۡلٞ لِّلَّذِينَ يَكۡتُبُونَ ٱلۡكِتَٰبَ بِأَيۡدِيهِمۡ ثُمَّ يَقُولُونَ هَٰذَا مِنۡ عِندِ ٱللَّهِ لِيَشۡتَرُواْ بِهِۦ ثَمَنٗا قَلِيلٗاۖ فَوَيۡلٞ لَّهُم مِّمَّا كَتَبَتۡ أَيۡدِيهِمۡ وَوَيۡلٞ لَّهُم مِّمَّا يَكۡسِبُونَ

    ಆದ್ದರಿಂದ, ತಮ್ಮ ಕೈಗಳಿಂದ ಗ್ರಂಥವನ್ನು ಬರೆದು, ನಂತರ ಅದರ ಮೂಲಕ ತುಚ್ಛ ಬೆಲೆಯನ್ನು ಪಡೆಯಲು “ಇದು ಅಲ್ಲಾಹನಿಂದ ಬಂದಿದೆ” ಎಂದು ಹೇಳುವವರಿಗೆ ವಿನಾಶ ಕಾದಿದೆ. ಅವರ ಕೈಗಳು ಬರೆದಿರುವುದಕ್ಕೆ ಅವರಿಗೆ ವಿನಾಶವಿದೆ; ಅವರು ಸಂಪಾದಿಸಿರುವುದಕ್ಕೂ ಅವರಿಗೆ ವಿನಾಶವಿದೆ.

    ೮೦

    وَقَالُواْ لَن تَمَسَّنَا ٱلنَّارُ إِلَّآ أَيَّامٗا مَّعۡدُودَةٗۚ قُلۡ أَتَّخَذۡتُمۡ عِندَ ٱللَّهِ عَهۡدٗا فَلَن يُخۡلِفَ ٱللَّهُ عَهۡدَهُۥٓۖ أَمۡ تَقُولُونَ عَلَى ٱللَّهِ مَا لَا تَعۡلَمُونَ

    ಅವರು ಹೇಳಿದರು: “ಬೆರಳೆಣಿಕೆಯ ಕೆಲವು ದಿನಗಳು ಮಾತ್ರ ನರಕಾಗ್ನಿಯು ನಮ್ಮನ್ನು ಸ್ಪರ್ಶಿಸುತ್ತದೆ.”[1] ಹೇಳಿರಿ: “ನೀವೇನಾದರೂ ಅಲ್ಲಾಹನಿಂದ ಕರಾರು ಪಡೆದಿದ್ದೀರಾ? ಹಾಗಿದ್ದರೆ ಅಲ್ಲಾಹು ಅವನ ಕರಾರನ್ನು ಎಂದಿಗೂ ಉಲ್ಲಂಘಿಸುವುದಿಲ್ಲ. ಅಥವಾ ನೀವು ಅಲ್ಲಾಹನ ಬಗ್ಗೆ ನಿಮಗೆ ಗೊತ್ತಿಲ್ಲದ್ದನ್ನು ಹೇಳುತ್ತಿದ್ದೀರಾ?”

    [1] ಅಂದರೆ ನಮ್ಮ ಪಾಪಗಳ ಕಾರಣ ನಾವು ನರಕಕ್ಕೆ ಹೋಗಬೇಕಾಗಿ ಬಂದರೂ ಅದು ಬೆರಳೆಣಿಕೆಯ ಕೆಲವು ದಿನಗಳವರೆಗೆ ಮಾತ್ರ.

    ೮೧

    بَلَىٰۚ مَن كَسَبَ سَيِّئَةٗ وَأَحَٰطَتۡ بِهِۦ خَطِيٓـَٔتُهُۥ فَأُوْلَٰٓئِكَ أَصۡحَٰبُ ٱلنَّارِۖ هُمۡ فِيهَا خَٰلِدُونَ

    ಹೌದು! ಯಾರು ಕೆಡುಕು ಮಾಡುತ್ತಾನೋ ಮತ್ತು ಯಾರನ್ನು ಅವನ ಪಾಪವು ಸುತ್ತುವರಿದಿದೆಯೋ—ಅವರೇ ನರಕವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.

    ೮೨

    وَٱلَّذِينَ ءَامَنُواْ وَعَمِلُواْ ٱلصَّٰلِحَٰتِ أُوْلَٰٓئِكَ أَصۡحَٰبُ ٱلۡجَنَّةِۖ هُمۡ فِيهَا خَٰلِدُونَ

    ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ—ಅವರೇ ಸ್ವರ್ಗವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.

    ೮೩

    وَإِذۡ أَخَذۡنَا مِيثَٰقَ بَنِيٓ إِسۡرَٰٓءِيلَ لَا تَعۡبُدُونَ إِلَّا ٱللَّهَ وَبِٱلۡوَٰلِدَيۡنِ إِحۡسَانٗا وَذِي ٱلۡقُرۡبَىٰ وَٱلۡيَتَٰمَىٰ وَٱلۡمَسَٰكِينِ وَقُولُواْ لِلنَّاسِ حُسۡنٗا وَأَقِيمُواْ ٱلصَّلَوٰةَ وَءَاتُواْ ٱلزَّكَوٰةَ ثُمَّ تَوَلَّيۡتُمۡ إِلَّا قَلِيلٗا مِّنكُمۡ وَأَنتُم مُّعۡرِضُونَ

    “ಅಲ್ಲಾಹನನ್ನು ಬಿಟ್ಟು ಬೇರೆ ಯಾರನ್ನೂ ಆರಾಧಿಸಬೇಡಿ, ಮಾತಾಪಿತರಿಗೆ, ಸಂಬಂಧಿಕರಿಗೆ, ಅನಾಥರಿಗೆ ಹಾಗೂ ಬಡವರಿಗೆ ಒಳಿತು ಮಾಡಿರಿ; ಜನರೊಡನೆ ಒಳ್ಳೆಯ ಮಾತನ್ನು ಆಡಿರಿ; ನಮಾಝ್ ಸಂಸ್ಥಾಪಿಸಿರಿ ಮತ್ತು ಝಕಾತ್ ನೀಡಿರಿ" ಎಂದು (ಆದೇಶಿಸುತ್ತಾ) ನಾವು ಇಸ್ರಾಯೇಲ್ ಮಕ್ಕಳಿಂದ ಕರಾರು ಪಡೆದ ಸಂದರ್ಭ. ನಂತರ, ನಿಮ್ಮಲ್ಲಿ ಕೆಲವರ ಹೊರತು ಉಳಿದವರೆಲ್ಲವರೂ ನಿರ್ಲಕ್ಷಿಸುತ್ತಾ ವಿಮುಖರಾದಿರಿ.

    ೮೪

    وَإِذۡ أَخَذۡنَا مِيثَٰقَكُمۡ لَا تَسۡفِكُونَ دِمَآءَكُمۡ وَلَا تُخۡرِجُونَ أَنفُسَكُم مِّن دِيَٰرِكُمۡ ثُمَّ أَقۡرَرۡتُمۡ وَأَنتُمۡ تَشۡهَدُونَ

    “ನೀವು ನಿಮ್ಮವರ ರಕ್ತ ಹರಿಸಬೇಡಿ ಮತ್ತು ನಿಮ್ಮ ಮನೆಗಳಿಂದ ನಿಮ್ಮವರನ್ನು ಹೊರಹಾಕಬೇಡಿ" ಎಂದು (ಆದೇಶಿಸುತ್ತಾ) ನಾವು ನಿಮ್ಮಿಂದ ಕರಾರು ಪಡೆದ ಸಂದರ್ಭ. ನಂತರ ನೀವು ಸಾಕ್ಷಿ ವಹಿಸುತ್ತಾ ಅದನ್ನು ಒಪ್ಪಿಕೊಂಡಿರಿ.

    ೮೫

    ثُمَّ أَنتُمۡ هَٰٓؤُلَآءِ تَقۡتُلُونَ أَنفُسَكُمۡ وَتُخۡرِجُونَ فَرِيقٗا مِّنكُم مِّن دِيَٰرِهِمۡ تَظَٰهَرُونَ عَلَيۡهِم بِٱلۡإِثۡمِ وَٱلۡعُدۡوَٰنِ وَإِن يَأۡتُوكُمۡ أُسَٰرَىٰ تُفَٰدُوهُمۡ وَهُوَ مُحَرَّمٌ عَلَيۡكُمۡ إِخۡرَاجُهُمۡۚ أَفَتُؤۡمِنُونَ بِبَعۡضِ ٱلۡكِتَٰبِ وَتَكۡفُرُونَ بِبَعۡضٖۚ فَمَا جَزَآءُ مَن يَفۡعَلُ ذَٰلِكَ مِنكُمۡ إِلَّا خِزۡيٞ فِي ٱلۡحَيَوٰةِ ٱلدُّنۡيَاۖ وَيَوۡمَ ٱلۡقِيَٰمَةِ يُرَدُّونَ إِلَىٰٓ أَشَدِّ ٱلۡعَذَابِۗ وَمَا ٱللَّهُ بِغَٰفِلٍ عَمَّا تَعۡمَلُونَ

    ನಂತರ, ನೀವು ನಿಮ್ಮವರನ್ನೇ ಕೊಲ್ಲುತ್ತೀರಿ, ನಿಮ್ಮವರ ಒಂದು ಗುಂಪನ್ನು ಅವರ ಮನೆಗಳಿಂದ ಹೊರಹಾಕುತ್ತೀರಿ; ಪಾಪ ಮತ್ತು ಅತಿರೇಕದಲ್ಲಿ ಅವರ ವಿರುದ್ಧ ಪರಸ್ಪರ ಸಹಕರಿಸುತ್ತೀರಿ; ಅವರು ನಿಮ್ಮ ಬಳಿಗೆ ಸೆರೆಯಾಳುಗಳಾಗಿ ಬಂದರೆ ಅವರಿಗೆ ಪರಿಹಾರವನ್ನು ನೀಡುತ್ತೀರಿ. ವಾಸ್ತವದಲ್ಲಿ, ಅವರನ್ನು ಹೊರಹಾಕುವುದನ್ನು ನಿಮಗೆ ನಿಷೇಧಿಸಲಾಗಿದ್ದರೂ (ನೀವು ಅದರ ಬಗ್ಗೆ ಯೋಚಿಸುವುದೇ ಇಲ್ಲ). ಹಾಗಾದರೆ, ನೀವು ಗ್ರಂಥದ ಕೆಲವು ಭಾಗಗಳಲ್ಲಿ ನಂಬಿಕೆಯಿಟ್ಟು ಕೆಲವು ಭಾಗಗಳನ್ನು ನಿಷೇಧಿಸುತ್ತೀರಾ? ನಿಮ್ಮ ಪೈಕಿ ಹೀಗೆ ಮಾಡುವವರಿಗೆ ಇಹಲೋಕದಲ್ಲಿ ಅವಮಾನವಲ್ಲದೆ ಇನ್ನೇನು ಪ್ರತಿಫಲವಿರಲು ಸಾಧ್ಯ? ಪುನರುತ್ಥಾನ ದಿನ ಅವರನ್ನು ಅತಿಕಠೋರ ಶಿಕ್ಷೆಗೆ ಮರಳಿಸಲಾಗುವುದು. ನೀವು ಮಾಡುತ್ತಿರುವ ಕರ್ಮಗಳ ಕುರಿತು ಅಲ್ಲಾಹು ತಿಳಿಯದವನಲ್ಲ.[1]

    [1] ಮದೀನದಲ್ಲಿ ಔಸ್ ಮತ್ತು ಖಝ್ರಜ್ ಎಂಬ ಎರಡು ಗೋತ್ರಗಳಿದ್ದವು. ಇವರು ಪರಸ್ಪರ ವೈರಿಗಳಾಗಿದ್ದು ನಿರಂತರ ಯುದ್ಧ ಮಾಡುತ್ತಿದ್ದರು. ಅದೇ ರೀತಿ, ಮದೀನದ ಯಹೂದಿಗಳಲ್ಲಿ ಮೂರು ಗೋತ್ರಗಳಿದ್ದವು. ಬನೂ ಕೈನುಕಾ, ಬನೂ ನದೀರ್ ಮತ್ತು ಬನೂ ಕುರೈಝ. ಬನೂ ಕುರೈಝ ಗೋತ್ರದವರು ಔಸ್ ಗೋತ್ರದವರೊಡನೆ ಮತ್ತು ಬನೂ ಕೈನುಕಾ ಹಾಗೂ ಬನೂ ನದೀರ್ ಗೋತ್ರಗಳು ಖಝ್ರಜ್ ಗೋತ್ರದವರೊಡನೆ ಮೈತ್ರಿ ಮಾಡಿಕೊಂಡಿದ್ದರು. ಯುದ್ಧದಲ್ಲಿ ಅವರು ತಮ್ಮ ತಮ್ಮ ಮಿತ್ರರಿಗೆ ಸಹಾಯ ಮಾಡುತ್ತಿದ್ದರು. ಇದರಿಂದ ಯಹೂದಿಗಳು ಯಹೂದಿಗಳನ್ನೇ ಕೊಲ್ಲುತ್ತಿದ್ದರು ಮತ್ತು ಅವರ ಮನೆಗಳನ್ನು ಲೂಟಿ ಮಾಡಿ ಅವರನ್ನು ಮನೆಗಳಿಂದ ಹೊರದಬ್ಬುತ್ತಿದ್ದರು. ತೌರಾತ್ (ತೋರಾ) ನಿಯಮದ ಪ್ರಕಾರ ಯಹೂದಿಗಳು ಪರಸ್ಪರ ಕೊಲ್ಲುವುದು, ಲೂಟಿ ಮಾಡುವುದು, ಮನೆಗಳಿಂದ ಬಲವಂತವಾಗಿ ಹೊರದಬ್ಬುವುದು, ತಮ್ಮವರಿಗೆ ವಿರುದ್ಧವಾಗಿ ಹೊರಗಿನವರಿಗೆ ಸಹಾಯ ಮಾಡುವುದು ನಿಷಿದ್ಧವಾಗಿತ್ತು. ಆದರೆ ಅವರು ಈ ನಿಯಮವನ್ನು ಪಾಲಿಸುತ್ತಿರಲಿಲ್ಲ. ಆದರೆ ಯುದ್ಧ ಖೈದಿಗಳಾದ ಯಹೂದಿಗಳನ್ನು ಅವರು ಪರಸ್ಪರ ಪರಿಹಾರ ನೀಡಿ ಸ್ವತಂತ್ರಗೊಳಿಸುತ್ತಿದ್ದರು. ಈ ನಿಯಮ ತೋರದಲ್ಲಿದೆ ಮತ್ತು ನಾವು ಅದನ್ನು ಪಾಲಿಸಬೇಕಾಗಿದೆ ಎಂದು ಅವರು ಹೇಳುತ್ತಿದ್ದರು. ಹೀಗೆ ಅವರು ತಮಗೆ ಬೇಕಾದ ನಿಯಮವನ್ನು ಸ್ವೀಕರಿಸಿ ತಮಗೆ ಬೇಡದ ನಿಯಮವನ್ನು ತಿರಸ್ಕರಿಸುತ್ತಿದ್ದರು.

    ೮೬

    أُوْلَٰٓئِكَ ٱلَّذِينَ ٱشۡتَرَوُاْ ٱلۡحَيَوٰةَ ٱلدُّنۡيَا بِٱلۡأٓخِرَةِۖ فَلَا يُخَفَّفُ عَنۡهُمُ ٱلۡعَذَابُ وَلَا هُمۡ يُنصَرُونَ

    ಅವರೇ ಪರಲೋಕಕ್ಕೆ ಬದಲಿಯಾಗಿ ಇಹಲೋಕವನ್ನು ಖರೀದಿಸಿದವರು. ಆದ್ದರಿಂದ, ಅವರಿಗೆ ಶಿಕ್ಷೆಯಲ್ಲಿ ರಿಯಾಯಿತಿಯಿಲ್ಲ. ಅವರಿಗೆ ಯಾವುದೇ ಸಹಾಯವೂ ದೊರೆಯುವುದಿಲ್ಲ.

    ೮೭

    وَلَقَدۡ ءَاتَيۡنَا مُوسَى ٱلۡكِتَٰبَ وَقَفَّيۡنَا مِنۢ بَعۡدِهِۦ بِٱلرُّسُلِۖ وَءَاتَيۡنَا عِيسَى ٱبۡنَ مَرۡيَمَ ٱلۡبَيِّنَٰتِ وَأَيَّدۡنَٰهُ بِرُوحِ ٱلۡقُدُسِۗ أَفَكُلَّمَا جَآءَكُمۡ رَسُولُۢ بِمَا لَا تَهۡوَىٰٓ أَنفُسُكُمُ ٱسۡتَكۡبَرۡتُمۡ فَفَرِيقٗا كَذَّبۡتُمۡ وَفَرِيقٗا تَقۡتُلُونَ

    ನಿಶ್ಚಯವಾಗಿಯೂ ನಾವು ಮೂಸಾರಿಗೆ ಗ್ರಂಥವನ್ನು ನೀಡಿದೆವು. ಅವರ ಹಿಂದೆಯೇ ಹಲವಾರು ಸಂದೇಶವಾಹಕರುಗಳನ್ನು ಕಳುಹಿಸಿದೆವು. ಮರ್ಯಮರ ಮಗ ಈಸಾರಿಗೆ ನಾವು ಸ್ಪಷ್ಟ ಸಾಕ್ಷ್ಯಾಧಾರಗಳನ್ನು ನೀಡಿದೆವು ಮತ್ತು ಪವಿತ್ರಾತ್ಮನ ಮೂಲಕ ಅವರನ್ನು ಬೆಂಬಲಿಸಿದೆವು. ಆದರೆ ನಿಮಗೆ ಇಷ್ಟವಿಲ್ಲದ ವಿಷಯಗಳೊಂದಿಗೆ ಸಂದೇಶವಾಹಕರುಗಳು ನಿಮ್ಮ ಬಳಿಗೆ ಬಂದಾಗಲೆಲ್ಲಾ, ನೀವು ಅಹಂಕಾರ ತೋರಿದಿರಿ. ಅವರಲ್ಲಿ ಕೆಲವರನ್ನು ನೀವು ನಿಷೇಧಿಸಿದಿರಿ ಮತ್ತು ಕೆಲವರನ್ನು ಹತ್ಯೆ ಮಾಡಿದಿರಿ.

    ೮೮

    وَقَالُواْ قُلُوبُنَا غُلۡفُۢۚ بَل لَّعَنَهُمُ ٱللَّهُ بِكُفۡرِهِمۡ فَقَلِيلٗا مَّا يُؤۡمِنُونَ

    ಅವರು ಹೇಳಿದರು: “ನಮ್ಮ ಹೃದಯಗಳು ಮುಚ್ಚಿಕೊಂಡಿವೆ.” ಅಲ್ಲ; ವಾಸ್ತವವಾಗಿ ಅವರ ನಿಷೇಧದಿಂದಾಗಿ ಅಲ್ಲಾಹು ಅವರನ್ನು ಶಪಿಸಿದ್ದಾನೆ. ಆದ್ದರಿಂದ ಅವರು ಸ್ವಲ್ಪ ಮಾತ್ರ ವಿಶ್ವಾಸವಿಡುತ್ತಾರೆ.

    ೮೯

    وَلَمَّا جَآءَهُمۡ كِتَٰبٞ مِّنۡ عِندِ ٱللَّهِ مُصَدِّقٞ لِّمَا مَعَهُمۡ وَكَانُواْ مِن قَبۡلُ يَسۡتَفۡتِحُونَ عَلَى ٱلَّذِينَ كَفَرُواْ فَلَمَّا جَآءَهُم مَّا عَرَفُواْ كَفَرُواْ بِهِۦۚ فَلَعۡنَةُ ٱللَّهِ عَلَى ٱلۡكَٰفِرِينَ

    ಅವರಲ್ಲಿರುವ (ಗ್ರಂಥವನ್ನು) ದೃಢೀಕರಿಸುವ ಒಂದು ಗ್ರಂಥವು (ಕುರ್‌ಆನ್) ಅಲ್ಲಾಹನ ಬಳಿಯಿಂದ ಅವರಿಗೆ ಬಂದಾಗ—ವಾಸ್ತವವಾಗಿ, ಇದಕ್ಕೆ ಮೊದಲು ಅವರು (ಅಂತಹ ಒಂದು ಗ್ರಂಥದ ಮೂಲಕ) ಸತ್ಯನಿಷೇಧಿಗಳ ವಿರುದ್ಧ ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದರೂ ಸಹ—ಅವರಿಗೆ ಪರಿಚಿತವಾದ ಆ ಸಂದೇಶವು ಅವರ ಬಳಿಗೆ ಬಂದಾಗ ಅವರು ಅದನ್ನು ನಿಷೇಧಿಸಿದರು.[1] ಆದ್ದರಿಂದ ಸತ್ಯನಿಷೇಧಿಗಳ ಮೇಲೆ ಅಲ್ಲಾಹನ ಶಾಪವಿರಲಿ.

    [1] ಬಹುದೇವವಿಶ್ವಾಸಿಗಳೊಡನೆ ಯುದ್ಧ ನಡೆಯುವಾಗಲೆಲ್ಲಾ ಅವರು ಹೀಗೆ ಪ್ರಾರ್ಥಿಸುತ್ತಿದ್ದರು: "ಓ ಅಲ್ಲಾಹ್! ಅಂತಿಮ ಪ್ರವಾದಿಯನ್ನು ಬೇಗನೇ ಕಳುಹಿಸು. ನಾವು ಆ ಪ್ರವಾದಿಯೊಂದಿಗೆ ಸೇರಿ ಈ ಬಹುದೇವವಿಶ್ವಾಸಿಗಳ ವಿರುದ್ಧ ಗೆಲುವು ಪಡೆಯುತ್ತೇವೆ." ಆದರೆ ಅಂತಿಮ ಪ್ರವಾದಿ ಬಂದಾಗ ಅವರು ಆ ಪ್ರವಾದಿಯ ಸಂದೇಶವನ್ನು (ಕುರ್‌ಆನನ್ನು) ತಿರಸ್ಕರಿಸಿ ಅವರ ವಿರುದ್ಧವೇ ದ್ವೇಷ ಕಟ್ಟಿಕೊಂಡರು.

    ೯೦

    بِئۡسَمَا ٱشۡتَرَوۡاْ بِهِۦٓ أَنفُسَهُمۡ أَن يَكۡفُرُواْ بِمَآ أَنزَلَ ٱللَّهُ بَغۡيًا أَن يُنَزِّلَ ٱللَّهُ مِن فَضۡلِهِۦ عَلَىٰ مَن يَشَآءُ مِنۡ عِبَادِهِۦۖ فَبَآءُو بِغَضَبٍ عَلَىٰ غَضَبٖۚ وَلِلۡكَٰفِرِينَ عَذَابٞ مُّهِينٞ

    ಅಲ್ಲಾಹು ಅವನ ದಾಸರಲ್ಲಿ ಅವನು ಇಚ್ಛಿಸುವವರಿಗೆ ಅವನ ಔದಾರ್ಯವನ್ನು ಇಳಿಸಿಕೊಡುತ್ತಾನೆ ಎಂಬ ಅಸೂಯೆಯಿಂದ, ಅಲ್ಲಾಹು ಅವತೀರ್ಣಗೊಳಿಸಿದ ಸಂದೇಶವನ್ನು ನಿಷೇಧಿಸುವ ರೀತಿಯಲ್ಲಿ ಅವರು ತಮ್ಮನ್ನು ತಾವೇ ಮಾರಿಕೊಂಡದ್ದು ಬಹಳ ನಿಕೃಷ್ಟವಾಗಿದೆ.[1] ಇದರಿಂದ ಅವರು ಕೋಪದ ಮೇಲೆ ಕೋಪಕ್ಕೆ ಪಾತ್ರರಾದರು. ಆ ಸತ್ಯನಿಷೇಧಿಗಳಿಗೆ ಅಪಮಾನಕರ ಶಿಕ್ಷೆಯಿದೆ.

    [1] ಯಹೂದಿಗಳು ಅಂತಿಮ ಪ್ರವಾದಿಯ ಆಗಮನವನ್ನು ನಿರೀಕ್ಷಿಸುತ್ತಿದ್ದರು. ಅಂತಿಮ ಪ್ರವಾದಿಯ ಎಲ್ಲಾ ಗುಣಲಕ್ಷಣಗಳನ್ನು ಅವರ ಗ್ರಂಥಗಳಲ್ಲಿ ವಿವರಿಸಲಾಗಿತ್ತು. ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಲ್ಲಿ ಈ ಎಲ್ಲಾ ಗುಣಲಕ್ಷಣಗಳಿದ್ದವು ಮತ್ತು ಅವರು ಅಂತಿಮ ಪ್ರವಾದಿಯೆಂದು ಯಹೂದಿಗಳಿಗೆ ಸಂಪೂರ್ಣ ಖಾತ್ರಿಯಿತ್ತು. ಆದರೆ ಅವರ ನಿರೀಕ್ಷೆಯಂತೆ ಆ ಪ್ರವಾದಿ ಯಹೂದಿ ವಂಶದಲ್ಲಿ ಹುಟ್ಟಲಿಲ್ಲ ಎಂಬ ಒಂದೇ ಕಾರಣಕ್ಕಾಗಿ ಅವರು ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರನ್ನು ಮತ್ತು ಅವರು ತಂದ ಸಂದೇಶವನ್ನು ತಿರಸ್ಕರಿಸಿದರು.

    ೯೧

    وَإِذَا قِيلَ لَهُمۡ ءَامِنُواْ بِمَآ أَنزَلَ ٱللَّهُ قَالُواْ نُؤۡمِنُ بِمَآ أُنزِلَ عَلَيۡنَا وَيَكۡفُرُونَ بِمَا وَرَآءَهُۥ وَهُوَ ٱلۡحَقُّ مُصَدِّقٗا لِّمَا مَعَهُمۡۗ قُلۡ فَلِمَ تَقۡتُلُونَ أَنۢبِيَآءَ ٱللَّهِ مِن قَبۡلُ إِن كُنتُم مُّؤۡمِنِينَ

    “ಅಲ್ಲಾಹು ಅವತೀರ್ಣಗೊಳಿಸಿದ ಗ್ರಂಥದಲ್ಲಿ (ಕುರ್‌ಆನ್‍ನಲ್ಲಿ) ವಿಶ್ವಾಸವಿಡಿ” ಎಂದು ಅವರೊಡನೆ ಹೇಳಲಾದರೆ, ಅವರು ಹೇಳುತ್ತಾರೆ: “ನಮಗೆ ಅವತೀರ್ಣವಾದ ಗ್ರಂಥದಲ್ಲಿ ನಾವು ವಿಶ್ವಾಸವಿಡುತ್ತೇವೆ.” ವಾಸ್ತವವಾಗಿ, ಅದರ ನಂತರದ ಗ್ರಂಥವು (ಕುರ್‌ಆನ್) ಅವರ ಬಳಿಯಿರುವ ಗ್ರಂಥವನ್ನು ದೃಡೀಕರಿಸುವ ಸತ್ಯವಾಗಿದ್ದೂ ಸಹ ಅವರು ಅದನ್ನು ನಿಷೇಧಿಸುತ್ತಾರೆ. ಹೇಳಿರಿ: “ನೀವು ಸತ್ಯವನ್ನೇ ಹೇಳುವವರಾಗಿದ್ದರೆ, ಮೊದಲು ಬಂದ ಅಲ್ಲಾಹನ ಪ್ರವಾದಿಗಳನ್ನು ನೀವೇಕೆ ಕೊಲೆ ಮಾಡಿದಿರಿ?”[1]

    [1] ನಾವು ತೌರಾತ್ (ತೋರಾ) ನಲ್ಲಿ ವಿಶ್ವಾಸವಿಟ್ಟಿದ್ದೇವೆ, ಆದ್ದರಿಂದ ನಮಗೆ ಕುರ್‌ಆನ್‌ನಲ್ಲಿ ವಿಶ್ವಾಸವಿಡಬೇಕಾದ ಅಗತ್ಯವಿಲ್ಲ ಎಂದು ಅವರು ಹೇಳುತ್ತಿದ್ದರು. ಆದರೆ ವಾಸ್ತವವಾಗಿ ಅವರು ತೌರಾತ್‌ನಲ್ಲೂ ಸರಿಯಾಗಿ ವಿಶ್ವಾಸವಿಟ್ಟಿರಲಿಲ್ಲ. ತೌರಾತ್‌ನಲ್ಲಿ ವಿಶ್ವಾಸವಿಟ್ಟಿದ್ದೇವೆಂಬ ಅವರ ಮಾತು ಸತ್ಯವಾಗಿದ್ದರೆ ಅವರು ತೌರಾತನ್ನು ಬೋಧಿಸಲು ಬಂದ ಪ್ರವಾದಿಗಳನ್ನು ಕೊಲೆ ಮಾಡುತ್ತಿರಲಿಲ್ಲ.

    ೯೨

    ۞ وَلَقَدۡ جَآءَكُم مُّوسَىٰ بِٱلۡبَيِّنَٰتِ ثُمَّ ٱتَّخَذۡتُمُ ٱلۡعِجۡلَ مِنۢ بَعۡدِهِۦ وَأَنتُمۡ ظَٰلِمُونَ

    ನಿಶ್ಚಯವಾಗಿಯೂ, ಮೂಸಾ ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ನಿಮ್ಮ ಬಳಿಗೆ ಬಂದಿದ್ದರು. ನಂತರ, ಅವರ (ನಿರ್ಗಮನದ) ಬಳಿಕ ನೀವು ಕರುವನ್ನು (ದೇವರಾಗಿ) ಮಾಡಿಕೊಂಡು ಅಕ್ರಮಿಗಳಾಗಿ ಬಿಟ್ಟಿರಿ.

    ೯೩

    وَإِذۡ أَخَذۡنَا مِيثَٰقَكُمۡ وَرَفَعۡنَا فَوۡقَكُمُ ٱلطُّورَ خُذُواْ مَآ ءَاتَيۡنَٰكُم بِقُوَّةٖ وَٱسۡمَعُواْۖ قَالُواْ سَمِعۡنَا وَعَصَيۡنَا وَأُشۡرِبُواْ فِي قُلُوبِهِمُ ٱلۡعِجۡلَ بِكُفۡرِهِمۡۚ قُلۡ بِئۡسَمَا يَأۡمُرُكُم بِهِۦٓ إِيمَٰنُكُمۡ إِن كُنتُم مُّؤۡمِنِينَ

    ನಾವು ನಿಮ್ಮಿಂದ ಕರಾರನ್ನು ಪಡೆದ ಮತ್ತು ನಿಮ್ಮ ಮೇಲೆ ತೂರ್ ಪರ್ವತವನ್ನು ಎತ್ತಿಹಿಡಿದ ಸಂದರ್ಭ. (ನಾವು ಹೇಳಿದೆವು): “ನಾವು ನಿಮಗೆ ನೀಡಿದ್ದನ್ನು ಬಿಗಿಯಾಗಿ ಹಿಡಿಯಿರಿ ಮತ್ತು ಕಿವಿಗೊಟ್ಟು ಕೇಳಿರಿ.” ಅವರು ಹೇಳಿದರು: “ನಾವು ಕೇಳಿದ್ದೇವೆ ಮತ್ತು ಅವಿಧೇಯತೆ ತೋರಿದ್ದೇವೆ.” ಅವರ ಸತ್ಯನಿಷೇಧದಿಂದಾಗಿ ಅವರ ಹೃದಯಗಳಲ್ಲಿ ಕರುವಿನ ಪ್ರೀತಿಯು ಲೀನವಾಗಿಬಿಟ್ಟಿತ್ತು. ಹೇಳಿರಿ: “ನೀವು ಸತ್ಯವಿಶ್ವಾಸಿಗಳಾಗಿದ್ದರೆ ನಿಮ್ಮ ವಿಶ್ವಾಸವು ನಿಮಗೆ ಏನು ಆದೇಶಿಸುತ್ತಿದೆಯೋ ಅದು ಬಹಳ ನಿಕೃಷ್ಟವಾಗಿದೆ.”

    ೯೪

    قُلۡ إِن كَانَتۡ لَكُمُ ٱلدَّارُ ٱلۡأٓخِرَةُ عِندَ ٱللَّهِ خَالِصَةٗ مِّن دُونِ ٱلنَّاسِ فَتَمَنَّوُاْ ٱلۡمَوۡتَ إِن كُنتُمۡ صَٰدِقِينَ

    ಹೇಳಿರಿ: “ಅಲ್ಲಾಹನ ಬಳಿ ಪರಲೋಕ ಭವನವು ಇತರ ಜನರಿಗೆ ದೊರೆಯದೆ ಕೇವಲ ನಿಮಗೆ ಮಾತ್ರ ಇರುವುದಾದರೆ ನೀವು ಸಾವನ್ನು ಬಯಸಿರಿ. ನೀವು ಸತ್ಯವಂತರಾಗಿದ್ದರೆ!”

    ೯೫

    وَلَن يَتَمَنَّوۡهُ أَبَدَۢا بِمَا قَدَّمَتۡ أَيۡدِيهِمۡۚ وَٱللَّهُ عَلِيمُۢ بِٱلظَّٰلِمِينَ

    ಆದರೆ ಅವರ ಕೈಗಳು ಮಾಡಿಟ್ಟಿರುವ (ದುಷ್ಕರ್ಮಗಳ) ನಿಮಿತ್ತ ಅವರೆಂದೂ ಸಾವನ್ನು ಬಯಸುವುದಿಲ್ಲ. ಅಲ್ಲಾಹು ಅಕ್ರಮಿಗಳ ಬಗ್ಗೆ ಬಹಳ ಚೆನ್ನಾಗಿ ತಿಳಿದಿದ್ದಾನೆ.

    ೯೬

    وَلَتَجِدَنَّهُمۡ أَحۡرَصَ ٱلنَّاسِ عَلَىٰ حَيَوٰةٖ وَمِنَ ٱلَّذِينَ أَشۡرَكُواْۚ يَوَدُّ أَحَدُهُمۡ لَوۡ يُعَمَّرُ أَلۡفَ سَنَةٖ وَمَا هُوَ بِمُزَحۡزِحِهِۦ مِنَ ٱلۡعَذَابِ أَن يُعَمَّرَۗ وَٱللَّهُ بَصِيرُۢ بِمَا يَعۡمَلُونَ

    ಅವರಿಗೆ ಬದುಕಲು ಆತ್ಯಧಿಕ ಆಸಕ್ತಿಯಿರುವುದನ್ನು—ಬಹುದೇವವಿಶ್ವಾಸಿಗಳಿಗಿಂತಲೂ ಹೆಚ್ಚು ಆಸಕ್ತಿಯಿರುವುದನ್ನು—ನೀವು ಕಾಣುವಿರಿ. ಅವರಲ್ಲಿ ಪ್ರತಿಯೊಬ್ಬನೂ ಸಾವಿರ ವರ್ಷ ಆಯುಷ್ಯ ದೊರೆಯಬೇಕೆಂದು ಬಯಸುತ್ತಾನೆ. ಆದರೆ ದೀರ್ಘಾಯುಷ್ಯ ಸಿಗುವುದರಿಂದ ಅವನಿಗೆ ಶಿಕ್ಷೆಯಿಂದ ಮುಕ್ತಿ ಸಿಗುವುದಿಲ್ಲ. ಅವರು ಮಾಡುತ್ತಿರುವ ಕರ್ಮಗಳನ್ನು ಅಲ್ಲಾಹು ನೋಡುತ್ತಿದ್ದಾನೆ.

    ೯೭

    قُلۡ مَن كَانَ عَدُوّٗا لِّـجِبۡرِيلَ فَإِنَّهُۥ نَزَّلَهُۥ عَلَىٰ قَلۡبِكَ بِإِذۡنِ ٱللَّهِ مُصَدِّقٗا لِّمَا بَيۡنَ يَدَيۡهِ وَهُدٗى وَبُشۡرَىٰ لِلۡمُؤۡمِنِينَ

    ಹೇಳಿರಿ: “ಯಾರು ಜಿಬ್ರೀಲರಿಗೆ ವೈರಿಯೋ (ಅವನು ಅಲ್ಲಾಹನಿಗೂ ವೈರಿಯಾಗಿದ್ದಾನೆ).”[1] (ಏಕೆಂದರೆ) ನಿಶ್ಚಯವಾಗಿಯೂ ಜಿಬ್ರೀಲ್ ಅದನ್ನು (ಕುರ್‌ಆನನ್ನು) ನಿಮ್ಮ ಹೃದಯದಲ್ಲಿ ಅವತೀರ್ಣಗೊಳಿಸಿದ್ದು ಅಲ್ಲಾಹನ ಆದೇಶದಂತೆ ಮಾತ್ರ. ಅದು ಪೂರ್ವಗ್ರಂಥಗಳನ್ನು ದೃಢೀಕರಿಸುತ್ತದೆ ಮತ್ತು ಸತ್ಯವಿಶ್ವಾಸಿಗಳಿಗೆ ಸನ್ಮಾರ್ಗ ಹಾಗೂ ಸುವಾರ್ತೆಯಾಗಿದೆ.

    [1] ಒಮ್ಮೆ ಕೆಲವು ಯಹೂದಿಗಳು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದರು: “ನಾವು ನಿಮ್ಮಲ್ಲಿ ಕೆಲವು ಪ್ರಶ್ನೆಗಳನ್ನು ಕೇಳುತ್ತೇವೆ. ನೀವು ಸರಿಯಾಗಿ ಉತ್ತರ ಕೊಟ್ಟರೆ ನಾವು ನಿಮ್ಮಲ್ಲಿ ವಿಶ್ವಾಸವಿಡುತ್ತೇವೆ. ಏಕೆಂದರೆ ಒಬ್ಬ ಪ್ರವಾದಿಯ ಹೊರತು ಬೇರೆ ಯಾರಿಗೂ ಸರಿಯಾದ ಉತ್ತರ ಕೊಡಲು ಸಾಧ್ಯವಿಲ್ಲ.” ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಕೊಟ್ಟರು. ಆಗ ಯಹೂದಿಗಳು ಕೇಳಿದರು: “ನಿಮಗೆ ಇವುಗಳ ಉತ್ತರವನ್ನು ತಂದು ಕೊಡುವ ದೇವದೂತರು ಯಾರು?” ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜಿಬ್ರೀಲ್ ಎಂದು ಉತ್ತರಿಸಿದರು. ಆಗ ಅವರು ಹೇಳಿದರು: “ಜಿಬ್ರೀಲರು ನಮ್ಮ ವೈರಿ. ಅವರು ಹೇಳಿದ ಮಾತಿನಲ್ಲಿ ನಾವು ವಿಶ್ವಾಸವಿಡುವುದಿಲ್ಲ.” ಹೀಗೆ ಅವರು ಪ್ರವಾದಿಯವರಲ್ಲಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿಶ್ವಾಸವಿಡದೆ ನುಣುಚಿಕೊಂಡರು.

    ೯೮

    مَن كَانَ عَدُوّٗا لِّلَّهِ وَمَلَٰٓئِكَتِهِۦ وَرُسُلِهِۦ وَجِبۡرِيلَ وَمِيكَىٰلَ فَإِنَّ ٱللَّهَ عَدُوّٞ لِّلۡكَٰفِرِينَ

    ಯಾರು ಅಲ್ಲಾಹನಿಗೆ, ಅವನ ದೇವದೂತರುಗಳಿಗೆ, ಅವನ ಸಂದೇಶವಾಹಕರುಗಳಿಗೆ, ಜಿಬ್ರೀಲರಿಗೆ ಮತ್ತು ಮೀಕಾಯೀಲರಿಗೆ ವೈರಿಯೋ—ನಿಶ್ಚಯವಾಗಿಯೂ ಅಲ್ಲಾಹು ಆ ಸತ್ಯನಿಷೇಧಿಗಳಿಗೂ ವೈರಿಯಾಗಿದ್ದಾನೆ.

    ೯೯

    وَلَقَدۡ أَنزَلۡنَآ إِلَيۡكَ ءَايَٰتِۭ بَيِّنَٰتٖۖ وَمَا يَكۡفُرُ بِهَآ إِلَّا ٱلۡفَٰسِقُونَ

    ನಿಶ್ಚಯವಾಗಿಯೂ ನಾವು ನಿಮಗೆ ಸ್ಪಷ್ಟ ವಚನಗಳನ್ನು ಅವತೀರ್ಣಗೊಳಿಸಿದ್ದೇವೆ. ದುಷ್ಕರ್ಮಿಗಳ ಹೊರತು ಇನ್ನಾರೂ ಅದನ್ನು ನಿಷೇಧಿಸುವುದಿಲ್ಲ.

    ೧೦೦

    أَوَكُلَّمَا عَٰهَدُواْ عَهۡدٗا نَّبَذَهُۥ فَرِيقٞ مِّنۡهُمۚ بَلۡ أَكۡثَرُهُمۡ لَا يُؤۡمِنُونَ

    ಅವರು ಯಾವುದೇ ಕರಾರು ಮಾಡಿದಾಗಲೂ ಅವರಲ್ಲೊಂದು ಗುಂಪು ಅದನ್ನು ಎಸೆದು ಬಿಡುತ್ತಿತ್ತು. ಅಷ್ಟೇ ಅಲ್ಲ, ಅವರಲ್ಲಿ ಹೆಚ್ಚಿನವರಿಗೆ ವಿಶ್ವಾಸವೇ ಇರಲಿಲ್ಲ.

    ೧೦೧

    وَلَمَّا جَآءَهُمۡ رَسُولٞ مِّنۡ عِندِ ٱللَّهِ مُصَدِّقٞ لِّمَا مَعَهُمۡ نَبَذَ فَرِيقٞ مِّنَ ٱلَّذِينَ أُوتُواْ ٱلۡكِتَٰبَ كِتَٰبَ ٱللَّهِ وَرَآءَ ظُهُورِهِمۡ كَأَنَّهُمۡ لَا يَعۡلَمُونَ

    ಅವರಲ್ಲಿರುವ ಗ್ರಂಥವನ್ನು ದೃಢೀಕರಿಸುತ್ತಾ ಅಲ್ಲಾಹನ ಕಡೆಯಿಂದ ಒಬ್ಬ ಸಂದೇಶವಾಹಕರು ಅವರ ಬಳಿಗೆ ಬಂದಾಗ, ಗ್ರಂಥ ನೀಡಲಾದವರಲ್ಲಿ ಸೇರಿದ ಒಂದು ಗುಂಪು ಅಲ್ಲಾಹನ ಗ್ರಂಥವನ್ನು, ಅದರ ಬಗ್ಗೆ ಏನೂ ತಿಳಿಯದವರಂತೆ ತಮ್ಮ ಬೆನ್ನ ಹಿಂಭಾಗಕ್ಕೆ ಎಸೆದು ಬಿಟ್ಟರು.

    ೧೦೨

    وَٱتَّبَعُواْ مَا تَتۡلُواْ ٱلشَّيَٰطِينُ عَلَىٰ مُلۡكِ سُلَيۡمَٰنَۖ وَمَا كَفَرَ سُلَيۡمَٰنُ وَلَٰكِنَّ ٱلشَّيَٰطِينَ كَفَرُواْ يُعَلِّمُونَ ٱلنَّاسَ ٱلسِّحۡرَ وَمَآ أُنزِلَ عَلَى ٱلۡمَلَكَيۡنِ بِبَابِلَ هَٰرُوتَ وَمَٰرُوتَۚ وَمَا يُعَلِّمَانِ مِنۡ أَحَدٍ حَتَّىٰ يَقُولَآ إِنَّمَا نَحۡنُ فِتۡنَةٞ فَلَا تَكۡفُرۡۖ فَيَتَعَلَّمُونَ مِنۡهُمَا مَا يُفَرِّقُونَ بِهِۦ بَيۡنَ ٱلۡمَرۡءِ وَزَوۡجِهِۦۚ وَمَا هُم بِضَآرِّينَ بِهِۦ مِنۡ أَحَدٍ إِلَّا بِإِذۡنِ ٱللَّهِۚ وَيَتَعَلَّمُونَ مَا يَضُرُّهُمۡ وَلَا يَنفَعُهُمۡۚ وَلَقَدۡ عَلِمُواْ لَمَنِ ٱشۡتَرَىٰهُ مَا لَهُۥ فِي ٱلۡأٓخِرَةِ مِنۡ خَلَٰقٖۚ وَلَبِئۡسَ مَا شَرَوۡاْ بِهِۦٓ أَنفُسَهُمۡۚ لَوۡ كَانُواْ يَعۡلَمُونَ

    ಶೈತಾನರು ಸುಲೈಮಾನರ ಆಡಳಿತಕಾಲದಲ್ಲಿ ಪಠಿಸುತ್ತಿದ್ದ ವಿಷಯಗಳನ್ನು ಅವರು ಹಿಂಬಾಲಿಸಿದರು. ಸುಲೈಮಾನ್ ಸತ್ಯನಿಷೇಧಿಯಾಗಿರಲಿಲ್ಲ. ಆದರೆ ಶೈತಾನರು ಸತ್ಯನಿಷೇಧಿಗಳಾಗಿದ್ದರು.[1] ಅವರು ಜನರಿಗೆ ಮಾಟಗಾರಿಕೆಯನ್ನು ಮತ್ತು ಬ್ಯಾಬಿಲೋನಿಯಾದಲ್ಲಿ ಹಾರೂತ್ ಮತ್ತು ಮಾರೂತ್ ಎಂಬ ಎರಡು ದೇವದೂತರಿಗೆ ಅವತೀರ್ಣವಾಗುತ್ತಿದ್ದ ವಿಷಯಗಳನ್ನು ಕಲಿಸುತ್ತಿದ್ದರು. ಆದರೆ, “ನಾವೊಂದು ಪರೀಕ್ಷೆಯಾಗಿದ್ದೇವೆ; ಆದ್ದರಿಂದ ನೀವು ಸತ್ಯನಿಷೇಧಿಗಳಾಗಬೇಡಿ” ಎಂದು ಹೇಳದೆ ಅವರಿಬ್ಬರು (ಹಾರೂತ್ ಮತ್ತು ಮಾರೂತ್) ಯಾರಿಗೂ ಕಲಿಸಿಕೊಡುತ್ತಿರಲಿಲ್ಲ. ಹೀಗೆ ಜನರು ಅವರಿಬ್ಬರಿಂದ ಗಂಡ-ಹೆಂಡತಿಯ ನಡುವೆ ಒಡಕು ಮೂಡಿಸುವ ತಂತ್ರಗಳನ್ನು ಕಲಿಯುತ್ತಿದ್ದರು. ಆದರೆ ಅಲ್ಲಾಹನ ಅಪ್ಪಣೆಯಿಲ್ಲದೆ ಯಾರಿಗೂ ಯಾವುದೇ ತೊಂದರೆ ಮಾಡಲು ಅವರಿಗೆ ಸಾಧ್ಯವಿಲ್ಲ. ಸ್ವತಃ ಅವರಿಗೆ ತೊಂದರೆಯಾಗುವ ಮತ್ತು ಅವರಿಗೆ ಯಾವುದೇ ಪ್ರಯೋಜನ ನೀಡದ ವಿಷಯಗಳನ್ನು ಅವರು ಕಲಿಯುತ್ತಿದ್ದರು. ಅದನ್ನು ಪಡೆದವರಿಗೆ ಪರಲೋಕದಲ್ಲಿ ಯಾವುದೇ ಪಾಲಿಲ್ಲವೆಂದು ಅವರು ದೃಢವಾಗಿ ತಿಳಿದಿದ್ದರು. ಅವರು ಯಾವುದಕ್ಕೆ ತಮ್ಮ ಆತ್ಮಗಳನ್ನು ಮಾರಿಕೊಂಡರೋ ಅದು ಬಹಳ ನಿಕೃಷ್ಟವಾಗಿದೆ. ಅವರು ಅದನ್ನು ತಿಳಿದಿದ್ದರೆ (ಎಷ್ಟು ಚೆನ್ನಾಗಿತ್ತು)!

    [1] ಯಹೂದಿಗಳು ಅಲ್ಲಾಹನ ಗ್ರಂಥವನ್ನು ಮತ್ತು ಕರಾರುಗಳನ್ನು ಲೆಕ್ಕಿಸದೆ ಶೈತಾನರ ಹಿಂದೆ ಬಿದ್ದರು. ಅವರು ಶೈತಾನರಿಂದ ಮಾಟಗಾರಿಕೆಯನ್ನು ಕಲಿತದ್ದು ಮಾತ್ರವಲ್ಲದೆ ಪ್ರವಾದಿ ಸುಲೈಮಾನ್ (ಅವರ ಮೇಲೆ ಶಾಂತಿಯಿರಲಿ) ಪ್ರವಾದಿಯಲ್ಲ, ಬದಲಿಗೆ ಅವರೊಬ್ಬ ಮಾಟಗಾರನೆಂದು ಪ್ರಚಾರ ಮಾಡತೊಡಗಿದರು. ಆದರೆ ಪ್ರವಾದಿ ಸುಲೈಮಾನ್ (ಅವರ ಮೇಲೆ ಶಾಂತಿಯಿರಲಿ) ಮಾಟಗಾರಿಕೆ ಮಾಡುತ್ತಿರಲಿಲ್ಲ. ಏಕೆಂದರೆ ಮಾಟಗಾರಿಕೆ ಮಾಡುವುದು ಸತ್ಯನಿಷೇಧವಾಗಿದೆ. ಒಬ್ಬ ಪ್ರವಾದಿ ಸತ್ಯನಿಷೇಧವನ್ನು ಹೇಗೆ ತಾನೇ ಮಾಡಲು ಸಾಧ್ಯ ಎಂದು ಅಲ್ಲಾಹು ಇಲ್ಲಿ ಸ್ಪಷ್ಟಪಡಿಸುತ್ತಾನೆ. ಇನ್ನೊಂದು ವರದಿಯ ಪ್ರಕಾರ ಸುಲೈಮಾನರ ಕಾಲದಲ್ಲಿ ಮಾಟಗಾರಿಕೆಯು ವ್ಯಾಪಕವಾಗಿ ಹರಡಿಕೊಂಡಿತ್ತು. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಸುಲೈಮಾನರು ಮಾಟಗಾರಿಕೆಯನ್ನು ಕಲಿಸುವ ಎಲ್ಲಾ ಪುಸ್ತಕಗಳನ್ನು ವಶಪಡಿಸಿಕೊಂಡು ತನ್ನ ಸಿಂಹಾಸನದ ಅಡಿಯಲ್ಲಿ ದಫನ ಮಾಡಿದರು. ಅವರ ಮರಣಾನಂತರ ಶೈತಾನರು ಮಾಟಗಾರರೊಂದಿಗೆ ಸೇರಿಕೊಂಡು ಆ ಪುಸ್ತಕಗಳನ್ನು ಹೊರತೆಗೆದರು. ಅವುಗಳನ್ನು ಜನರಿಗೆ ತೋರಿಸಿ ಸುಲೈಮಾನರು ಆಡಳಿತ ಮಾಡುತ್ತಿದ್ದದ್ದು ಈ ಮಾಟಗಾರಿಕೆಯ ಆಧಾರದಲ್ಲಾಗಿತ್ತು ಎಂದು ಹೇಳಿದರು. ಇದನ್ನು ಕಂಡು ಅತಿರೇಕಿಗಳಾದ ಕೆಲವರು ಸುಲೈಮಾನರನ್ನು (ಅವರ ಮೇಲೆ ಶಾಂತಿಯಿರಲಿ) ಸತ್ಯನಿಷೇಧಿ ಎಂದು ಜರೆದರು.

    ೧೦೩

    وَلَوۡ أَنَّهُمۡ ءَامَنُواْ وَٱتَّقَوۡاْ لَمَثُوبَةٞ مِّنۡ عِندِ ٱللَّهِ خَيۡرٞۚ لَّوۡ كَانُواْ يَعۡلَمُونَ

    ಅವರು ವಿಶ್ವಾಸವಿಟ್ಟವರು ಮತ್ತು ದೇವಭಯವುಳ್ಳವರಾಗಿದ್ದರೆ, ಅವರಿಗೆ ಅಲ್ಲಾಹನಿಂದ ಉತ್ತಮ ಪ್ರತಿಫಲವು ದೊರೆಯುತ್ತಿತ್ತು. ಅವರು ಅದನ್ನು ತಿಳಿದಿದ್ದರೆ (ಎಷ್ಟು ಚೆನ್ನಾಗಿತ್ತು)!

    ೧೦೪

    يَٰٓأَيُّهَا ٱلَّذِينَ ءَامَنُواْ لَا تَقُولُواْ رَٰعِنَا وَقُولُواْ ٱنظُرۡنَا وَٱسۡمَعُواْۗ وَلِلۡكَٰفِرِينَ عَذَابٌ أَلِيمٞ

    ಓ ಸತ್ಯವಿಶ್ವಾಸಿಗಳೇ! ನೀವು (ಪ್ರವಾದಿಯೊಡನೆ) ‘ರಾಇನಾ’ ಎಂದು ಹೇಳಬೇಡಿ.[1] ಬದಲಿಗೆ, ‘ಉನ್‍ಝುರ್‌ನಾ’ ಎಂದು ಹೇಳಿರಿ ಮತ್ತು ಕಿವಿಗೊಟ್ಟು ಕೇಳಿರಿ. ಸತ್ಯನಿಷೇಧಿಗಳಿಗೆ ಯಾತನಾಮಯ ಶಿಕ್ಷೆಯಿದೆ.

    [1] ರಾಇನಾ ಎಂದರೆ ನಮ್ಮ ಕಡೆಗೆ ಗಮನಹರಿಸಿ ಎಂದರ್ಥ. ಶಿಷ್ಯರಿಗೆ ಮಾತು ಅರ್ಥವಾಗದಿದ್ದರೆ ಈ ಪದವನ್ನು ಹೇಳಿ ಅವರು ಗುರುವಿನ ಗಮನ ಸೆಳೆಯುತ್ತಿದ್ದರು. ಆದರೆ ಯಹೂದಿಗಳು ಈ ಪದವನ್ನು ದ್ವಂದ್ವಾರ್ಥದಲ್ಲಿ ಬಳಸುತ್ತಿದ್ದರು. ಕೆಲವೊಮ್ಮೆ ಅವರು ನಮ್ಮ ಕುರಿಗಳನ್ನು ಕಾಯುವವನು ಎಂಬ ಅರ್ಥದಲ್ಲಿ "ರಾಈನಾ" ಎಂದು ಹೇಳುತ್ತಿದ್ದರು. ಕೆಲವೊಮ್ಮೆ ಅವಿವೇಕಿ ಎಂಬರ್ಥದಲ್ಲಿ "ರಾಇನಾ" ಎಂಬ ಪದವನ್ನು ಬಳಸುತ್ತಿದ್ದರು. ಆದ್ದರಿಂದ ಅಲ್ಲಾಹು ಅದರ ಬದಲಿಗೆ "ಉನ್‌ಝುರ್‌ನಾ" ಎಂಬ ಪದವನ್ನು ಬಳಸಲು ಆದೇಶಿಸಿದನು. ಉನ್‌ಝುರ್‌ನಾ ಎಂದರೆ ನಮ್ಮ ಕಡೆಗೆ ಗಮನ ನೀಡಿರಿ ಎಂದರ್ಥ.

    ೧೦೫

    مَّا يَوَدُّ ٱلَّذِينَ كَفَرُواْ مِنۡ أَهۡلِ ٱلۡكِتَٰبِ وَلَا ٱلۡمُشۡرِكِينَ أَن يُنَزَّلَ عَلَيۡكُم مِّنۡ خَيۡرٖ مِّن رَّبِّكُمۡۚ وَٱللَّهُ يَخۡتَصُّ بِرَحۡمَتِهِۦ مَن يَشَآءُۚ وَٱللَّهُ ذُو ٱلۡفَضۡلِ ٱلۡعَظِيمِ

    ನಿಮಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಏನಾದರೂ ಒಳಿತು ಅವತೀರ್ಣವಾಗುವುದು ಗ್ರಂಥದವರಲ್ಲಿ ಮತ್ತು ಬಹುದೇವಾರಾಧಕರಲ್ಲಿ ಸೇರಿದ ಸತ್ಯನಿಷೇಧಿಗಳಿಗೆ ಸ್ವಲ್ಪವೂ ಇಷ್ಟವಿಲ್ಲ. ಅಲ್ಲಾಹು ಅವನು ಇಚ್ಛಿಸುವವರಿಗೆ ಅವನ ದಯೆಯಿಂದ ವಿಶೇಷವಾಗಿ ಕರುಣಿಸುತ್ತಾನೆ. ಅಲ್ಲಾಹು ಮಹಾ ಔದಾರ್ಯದ ಒಡೆಯನಾಗಿದ್ದಾನೆ.

    ೧೦೬

    ۞ مَا نَنسَخۡ مِنۡ ءَايَةٍ أَوۡ نُنسِهَا نَأۡتِ بِخَيۡرٖ مِّنۡهَآ أَوۡ مِثۡلِهَآۗ أَلَمۡ تَعۡلَمۡ أَنَّ ٱللَّهَ عَلَىٰ كُلِّ شَيۡءٖ قَدِيرٌ

    ನಾವು ಯಾವುದಾದರೂ ವಚನವನ್ನು ರದ್ದುಗೊಳಿಸಿದರೆ, ಅಥವಾ ಮರೆಯುವಂತೆ ಮಾಡಿದರೆ, ಅದಕ್ಕಿಂತಲೂ ಉತ್ತಮವಾದುದನ್ನು ಅಥವಾ ಅದಕ್ಕೆ ಸಮಾನವಾದುದನ್ನು ತರುವೆವು. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನೆಂದು ನಿಮಗೆ ತಿಳಿದಿಲ್ಲವೇ?

    ೧೦೭

    أَلَمۡ تَعۡلَمۡ أَنَّ ٱللَّهَ لَهُۥ مُلۡكُ ٱلسَّمَٰوَٰتِ وَٱلۡأَرۡضِۗ وَمَا لَكُم مِّن دُونِ ٱللَّهِ مِن وَلِيّٖ وَلَا نَصِيرٍ

    ಭೂಮ್ಯಾಕಾಶಗಳ ಸಾರ್ವಭೌಮತ್ವವು ಅಲ್ಲಾಹನಿಗೆ ಮಾತ್ರ ಸೇರಿದ್ದೆಂದು ಮತ್ತು ಅಲ್ಲಾಹನ ಹೊರತು ನಿಮಗೆ ಯಾವುದೇ ರಕ್ಷಕನೋ, ಸಹಾಯಕನೋ ಇಲ್ಲವೆಂದು ನಿಮಗೆ ತಿಳಿದಿಲ್ಲವೇ?

    ೧೦೮

    أَمۡ تُرِيدُونَ أَن تَسۡـَٔلُواْ رَسُولَكُمۡ كَمَا سُئِلَ مُوسَىٰ مِن قَبۡلُۗ وَمَن يَتَبَدَّلِ ٱلۡكُفۡرَ بِٱلۡإِيمَٰنِ فَقَدۡ ضَلَّ سَوَآءَ ٱلسَّبِيلِ

    ಹಿಂದೆ ಮೂಸಾರೊಡನೆ ಅವರ ಅನುಯಾಯಿಗಳು ಕೇಳಿದಂತೆ ನಿಮ್ಮ ಸಂದೇಶವಾಹಕರೊಡನೆ ಕೇಳಲು ನೀವು ಬಯಸುತ್ತೀರಾ? ಯಾರು ಸತ್ಯವಿಶ್ವಾಸವನ್ನು ಸತ್ಯನಿಷೇಧಕ್ಕೆ ಬದಲಾಯಿಸುತ್ತಾನೋ ಅವನು ನೇರ ಮಾರ್ಗದಿಂದ ತಪ್ಪಿ ಹೋಗುತ್ತಾನೆ.

    ೧೦೯

    وَدَّ كَثِيرٞ مِّنۡ أَهۡلِ ٱلۡكِتَٰبِ لَوۡ يَرُدُّونَكُم مِّنۢ بَعۡدِ إِيمَٰنِكُمۡ كُفَّارًا حَسَدٗا مِّنۡ عِندِ أَنفُسِهِم مِّنۢ بَعۡدِ مَا تَبَيَّنَ لَهُمُ ٱلۡحَقُّۖ فَٱعۡفُواْ وَٱصۡفَحُواْ حَتَّىٰ يَأۡتِيَ ٱللَّهُ بِأَمۡرِهِۦٓۗ إِنَّ ٱللَّهَ عَلَىٰ كُلِّ شَيۡءٖ قَدِيرٞ

    ಗ್ರಂಥದವರಲ್ಲಿ ಹೆಚ್ಚಿನವರು ಅವರಿಗೆ ಸತ್ಯವೇನೆಂದು ಸ್ಪಷ್ಟವಾದ ಬಳಿಕವೂ ಕೇವಲ ಅಸೂಯೆ ಮತ್ತು ದ್ವೇಷದಿಂದ ನಿಮ್ಮನ್ನು ಸತ್ಯವಿಶ್ವಾಸದಿಂದ ತಪ್ಪಿಸಿ ಸತ್ಯನಿಷೇಧಿಗಳಾಗಿ ಮಾಡಲು ಬಯಸುತ್ತಾರೆ. ಅಲ್ಲಾಹು ತನ್ನ ಆಜ್ಞೆಯನ್ನು ತರುವವರೆಗೆ ನೀವು ಅವರನ್ನು ಕ್ಷಮಿಸಿರಿ ಮತ್ತು ನಿರ್ಲಕ್ಷಿಸಿರಿ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.

    ೧೧೦

    وَأَقِيمُواْ ٱلصَّلَوٰةَ وَءَاتُواْ ٱلزَّكَوٰةَۚ وَمَا تُقَدِّمُواْ لِأَنفُسِكُم مِّنۡ خَيۡرٖ تَجِدُوهُ عِندَ ٱللَّهِۗ إِنَّ ٱللَّهَ بِمَا تَعۡمَلُونَ بَصِيرٞ

    ನೀವು ನಮಾಝ್ ಸಂಸ್ಥಾಪಿಸಿರಿ ಮತ್ತು ಝಕಾತ್ ನೀಡಿರಿ. ನೀವು ನಿಮಗಾಗಿ ಯಾವೆಲ್ಲಾ ಸತ್ಕಾರ್ಯಗಳನ್ನು ಮುಂದಕ್ಕೆ ಕಳುಹಿಸುತ್ತೀರೋ ಅವೆಲ್ಲವನ್ನೂ ನೀವು ಅಲ್ಲಾಹನ ಬಳಿ ಕಾಣುವಿರಿ. ನಿಶ್ಚಯವಾಗಿಯೂ ಅಲ್ಲಾಹು ನೀವು ಮಾಡುವ ಕರ್ಮಗಳನ್ನು ನೋಡುತ್ತಿದ್ದಾನೆ.

    ೧೧೧

    وَقَالُواْ لَن يَدۡخُلَ ٱلۡجَنَّةَ إِلَّا مَن كَانَ هُودًا أَوۡ نَصَٰرَىٰۗ تِلۡكَ أَمَانِيُّهُمۡۗ قُلۡ هَاتُواْ بُرۡهَٰنَكُمۡ إِن كُنتُمۡ صَٰدِقِينَ

    ಅವರು ಹೇಳುತ್ತಾರೆ: “ಯಹೂದಿ ಅಥವಾ ಕ್ರೈಸ್ತರ ಹೊರತು ಇನ್ನಾರೂ ಸ್ವರ್ಗಕ್ಕೆ ಹೋಗುವುದಿಲ್ಲ.” ಅವೆಲ್ಲವೂ ಅವರ ಗುಮಾನಿಗಳಾಗಿವೆ. ಹೇಳಿರಿ: “ನೀವು ಸತ್ಯವಂತರಾಗಿದ್ದರೆ ನಿಮ್ಮ ಪುರಾವೆಯನ್ನು ತನ್ನಿರಿ.”

    ೧೧೨

    بَلَىٰۚ مَنۡ أَسۡلَمَ وَجۡهَهُۥ لِلَّهِ وَهُوَ مُحۡسِنٞ فَلَهُۥٓ أَجۡرُهُۥ عِندَ رَبِّهِۦ وَلَا خَوۡفٌ عَلَيۡهِمۡ وَلَا هُمۡ يَحۡزَنُونَ

    ಹೌದು! ಯಾರು ನಿಷ್ಕಳಂಕತೆಯಿಂದ ತನ್ನನ್ನು ತಾನೇ ಅಲ್ಲಾಹನಿಗೆ ಶರಣಾಗಿಸುತ್ತಾನೋ ಅವನಿಗೆ ಅವನ ಪ್ರತಿಫಲವು ಅವನ ಪರಿಪಾಲಕನ (ಅಲ್ಲಾಹನ) ಬಳಿಯಿದೆ. ಅವರಿಗೆ ಯಾವುದೇ ಭಯವಿಲ್ಲ; ಅವರು ದುಃಖಿಸುವುದೂ ಇಲ್ಲ.

    ೧೧೩

    وَقَالَتِ ٱلۡيَهُودُ لَيۡسَتِ ٱلنَّصَٰرَىٰ عَلَىٰ شَيۡءٖ وَقَالَتِ ٱلنَّصَٰرَىٰ لَيۡسَتِ ٱلۡيَهُودُ عَلَىٰ شَيۡءٖ وَهُمۡ يَتۡلُونَ ٱلۡكِتَٰبَۗ كَذَٰلِكَ قَالَ ٱلَّذِينَ لَا يَعۡلَمُونَ مِثۡلَ قَوۡلِهِمۡۚ فَٱللَّهُ يَحۡكُمُ بَيۡنَهُمۡ يَوۡمَ ٱلۡقِيَٰمَةِ فِيمَا كَانُواْ فِيهِ يَخۡتَلِفُونَ

    ಕ್ರೈಸ್ತರು ಸತ್ಯದಲ್ಲಿಲ್ಲ ಎಂದು ಯಹೂದಿಗಳು ಹೇಳುತ್ತಾರೆ. ಯಹೂದಿಗಳು ಸತ್ಯದಲ್ಲಿಲ್ಲ ಎಂದು ಕ್ರೈಸ್ತರು ಹೇಳುತ್ತಾರೆ. ವಾಸ್ತವವಾಗಿ, ಅವರೆಲ್ಲರೂ ಗ್ರಂಥವನ್ನು (ತೋರಾ) ಪಠಿಸುತ್ತಾರೆ. ತಿಳುವಳಿಕೆಯಿಲ್ಲದ ಜನರು ಕೂಡ ಅವರು ಹೇಳಿದಂತೆಯೇ ಹೇಳುತ್ತಾರೆ. ಅವರು ಯಾವ ವಿಷಯದಲ್ಲಿ ಭಿನ್ನಮತ ತಳೆದರೋ ಅದರ ಬಗ್ಗೆ ಪುನರುತ್ಥಾನ ದಿನದಂದು ಅಲ್ಲಾಹು ಅವರ ನಡುವೆ ತೀರ್ಪು ನೀಡುವನು.

    ೧೧೪

    وَمَنۡ أَظۡلَمُ مِمَّن مَّنَعَ مَسَٰجِدَ ٱللَّهِ أَن يُذۡكَرَ فِيهَا ٱسۡمُهُۥ وَسَعَىٰ فِي خَرَابِهَآۚ أُوْلَٰٓئِكَ مَا كَانَ لَهُمۡ أَن يَدۡخُلُوهَآ إِلَّا خَآئِفِينَۚ لَهُمۡ فِي ٱلدُّنۡيَا خِزۡيٞ وَلَهُمۡ فِي ٱلۡأٓخِرَةِ عَذَابٌ عَظِيمٞ

    ಅಲ್ಲಾಹನ ಮಸೀದಿಗಳಲ್ಲಿ ಅವನ ಹೆಸರನ್ನು ಸ್ಮರಿಸುವುದನ್ನು ತಡೆಯುವವನಿಗಿಂತ ಮತ್ತು ಅವುಗಳ (ಮಸೀದಿಗಳ) ನಾಶಕ್ಕಾಗಿ ಪರಿಶ್ರಮಿಸುವವನಿಗಿಂತ ದೊಡ್ಡ ಅಕ್ರಮಿ ಯಾರು? ಅವರು ಭಯಪಡುವವರಾಗಿಯೇ ಹೊರತು ಅವುಗಳನ್ನು ಪ್ರವೇಶಿಸಬಾರದಿತ್ತು. ಅವರಿಗೆ ಇಹಲೋಕದಲ್ಲಿ ಅಪಮಾನವಿದೆ ಮತ್ತು ಪರಲೋಕದಲ್ಲಿ ಕಠೋರ ಶಿಕ್ಷೆಯಿದೆ.

    ೧೧೫

    وَلِلَّهِ ٱلۡمَشۡرِقُ وَٱلۡمَغۡرِبُۚ فَأَيۡنَمَا تُوَلُّواْ فَثَمَّ وَجۡهُ ٱللَّهِۚ إِنَّ ٱللَّهَ وَٰسِعٌ عَلِيمٞ

    ಪೂರ್ವ ಮತ್ತು ಪಶ್ಚಿಮವು ಅಲ್ಲಾಹನಿಗೆ ಸೇರಿದ್ದು. ನೀವು ಯಾವ ದಿಕ್ಕಿಗೆ ತಿರುಗಿದರೂ ಅಲ್ಲಿ ಅಲ್ಲಾಹನ ಮುಖವಿದೆ. ನಿಶ್ಚಯವಾಗಿಯೂ ಅಲ್ಲಾಹು ಅತ್ಯಂತ ವಿಶಾಲನು ಮತ್ತು ಸರ್ವಜ್ಞನಾಗಿದ್ದಾನೆ.

    ೧೧೬

    وَقَالُواْ ٱتَّخَذَ ٱللَّهُ وَلَدٗاۗ سُبۡحَٰنَهُۥۖ بَل لَّهُۥ مَا فِي ٱلسَّمَٰوَٰتِ وَٱلۡأَرۡضِۖ كُلّٞ لَّهُۥ قَٰنِتُونَ

    ಅಲ್ಲಾಹನಿಗೆ ಮಕ್ಕಳಿದ್ದಾರೆ ಎಂದು ಅವರು ಹೇಳುತ್ತಾರೆ. (ಇಲ್ಲ, ಬದಲಿಗೆ) ಅವನು ಪರಿಶುದ್ಧನು! ಭೂಮ್ಯಾಕಾಶಗಳಲ್ಲಿರುವ ಎಲ್ಲಾ ಸೃಷ್ಟಿಗಳೂ ಅವನಿಗೆ ಸೇರಿದ್ದು. ಎಲ್ಲವೂ ಅವನಿಗೆ ವಿಧೇಯವಾಗಿವೆ.

    ೧೧೭

    بَدِيعُ ٱلسَّمَٰوَٰتِ وَٱلۡأَرۡضِۖ وَإِذَا قَضَىٰٓ أَمۡرٗا فَإِنَّمَا يَقُولُ لَهُۥ كُن فَيَكُونُ

    ಅವನು ಯಾವುದೇ ಪೂರ್ವ ಮಾದರಿಯಿಲ್ಲದೆ ಭೂಮ್ಯಾಕಾಶಗಳನ್ನು ಸೃಷ್ಟಿಸಿದವನು. ಅವನು ಒಂದು ವಿಷಯವನ್ನು ತೀರ್ಮಾನಿಸಿದರೆ, ಅದಕ್ಕೆ ಉಂಟಾಗು ಎಂದು ಹೇಳುವನು; ಆಗ ಅದು ಉಂಟಾಗುವುದು.

    ೧೧೮

    وَقَالَ ٱلَّذِينَ لَا يَعۡلَمُونَ لَوۡلَا يُكَلِّمُنَا ٱللَّهُ أَوۡ تَأۡتِينَآ ءَايَةٞۗ كَذَٰلِكَ قَالَ ٱلَّذِينَ مِن قَبۡلِهِم مِّثۡلَ قَوۡلِهِمۡۘ تَشَٰبَهَتۡ قُلُوبُهُمۡۗ قَدۡ بَيَّنَّا ٱلۡأٓيَٰتِ لِقَوۡمٖ يُوقِنُونَ

    ಜ್ಞಾನವಿಲ್ಲದವರು ಹೇಳುತ್ತಾರೆ: “ಅಲ್ಲಾಹನೇಕೆ ನಮ್ಮೊಡನೆ ಮಾತನಾಡುವುದಿಲ್ಲ? ಅಥವಾ ನಮ್ಮ ಬಳಿಗೆ ಒಂದು ದೃಷ್ಟಾಂತವೇಕೆ ಬರುವುದಿಲ್ಲ?” ಇವರು ಹೇಳಿದಂತೆಯೇ ಇವರಿಗಿಂತ ಮೊದಲಿನವರೂ ಹೇಳಿದ್ದರು. ಇವರ ಮತ್ತು ಅವರ ಹೃದಯಗಳು ಸಮಾನವಾಗಿವೆ. ದೃಢವಿಶ್ವಾಸವಿಡುವ ಜನರಿಗೆ ನಾವು ದೃಷ್ಟಾಂತಗಳನ್ನು ವಿವರಿಸಿಕೊಟ್ಟಿದ್ದೇವೆ.

    ೧೧೯

    إِنَّآ أَرۡسَلۡنَٰكَ بِٱلۡحَقِّ بَشِيرٗا وَنَذِيرٗاۖ وَلَا تُسۡـَٔلُ عَنۡ أَصۡحَٰبِ ٱلۡجَحِيمِ

    ನಿಶ್ಚಯವಾಗಿಯೂ ನಾವು ನಿಮ್ಮನ್ನು ಸುವಾರ್ತೆ ನೀಡುವವರಾಗಿ ಮತ್ತು ಮುನ್ನೆಚ್ಚರಿಕೆ ನೀಡುವವರಾಗಿ ಸತ್ಯದೊಂದಿಗೆ ಕಳುಹಿಸಿದ್ದೇವೆ. ನರಕವಾಸಿಗಳ ಕುರಿತು ನಿಮ್ಮೊಂದಿಗೆ ಪ್ರಶ್ನಿಸಲಾಗುವುದಿಲ್ಲ.

    ೧೨೦

    وَلَن تَرۡضَىٰ عَنكَ ٱلۡيَهُودُ وَلَا ٱلنَّصَٰرَىٰ حَتَّىٰ تَتَّبِعَ مِلَّتَهُمۡۗ قُلۡ إِنَّ هُدَى ٱللَّهِ هُوَ ٱلۡهُدَىٰۗ وَلَئِنِ ٱتَّبَعۡتَ أَهۡوَآءَهُم بَعۡدَ ٱلَّذِي جَآءَكَ مِنَ ٱلۡعِلۡمِ مَا لَكَ مِنَ ٱللَّهِ مِن وَلِيّٖ وَلَا نَصِيرٍ

    ನೀವು ಅವರ ಮಾರ್ಗವನ್ನು ಅನುಸರಿಸುವ ತನಕ ಯಹೂದಿಗಳು ಮತ್ತು ಕ್ರೈಸ್ತರು ನಿಮ್ಮ ಬಗ್ಗೆ ಸಂಪ್ರೀತರಾಗುವುದೇ ಇಲ್ಲ. ಹೇಳಿರಿ: “ಅಲ್ಲಾಹನ ಮಾರ್ಗದರ್ಶನವೇ ನಿಜವಾದ ಮಾರ್ಗದರ್ಶನ.” ನಿಮ್ಮ ಬಳಿಗೆ ಜ್ಞಾನವು ಬಂದ ಬಳಿಕವೂ ನೀವು ಅವರ ಸ್ವೇಚ್ಛೆಗಳನ್ನು ಹಿಂಬಾಲಿಸಿದರೆ, ಅಲ್ಲಾಹನಿಂದ ನಿಮ್ಮನ್ನು ರಕ್ಷಿಸುವ ಯಾವುದೇ ರಕ್ಷಕರು ಅಥವಾ ಸಹಾಯಕರು ಇರಲಾರರು.

    ೧೨೧

    ٱلَّذِينَ ءَاتَيۡنَٰهُمُ ٱلۡكِتَٰبَ يَتۡلُونَهُۥ حَقَّ تِلَاوَتِهِۦٓ أُوْلَٰٓئِكَ يُؤۡمِنُونَ بِهِۦۗ وَمَن يَكۡفُرۡ بِهِۦ فَأُوْلَٰٓئِكَ هُمُ ٱلۡخَٰسِرُونَ

    ನಾವು ಯಾರಿಗೆ ಗ್ರಂಥವನ್ನು ನೀಡಿದ್ದೇವೆಯೋ ಅವರು ಅದನ್ನು ಪಠಿಸಬೇಕಾದ ರೀತಿಯಲ್ಲೇ ಪಠಿಸುತ್ತಾರೆ. ಅವರು ಅದರಲ್ಲಿ ವಿಶ್ವಾಸವಿಡುತ್ತಾರೆ. ಯಾರು ಅದರಲ್ಲಿ ವಿಶ್ವಾಸವಿಡುವುದಿಲ್ಲವೋ ಅವರೇ ನಷ್ಟ ಹೊಂದಿದವರು.

    ೧೨೨

    يَٰبَنِيٓ إِسۡرَٰٓءِيلَ ٱذۡكُرُواْ نِعۡمَتِيَ ٱلَّتِيٓ أَنۡعَمۡتُ عَلَيۡكُمۡ وَأَنِّي فَضَّلۡتُكُمۡ عَلَى ٱلۡعَٰلَمِينَ

    ಓ ಇಸ್ರಾಯೇಲ್ ಮಕ್ಕಳೇ! ನಾನು ನಿಮಗೆ ಅನುಗ್ರಹಿಸಿದ ನನ್ನ ಅನುಗ್ರಹವನ್ನು ಮತ್ತು ನಾನು ನಿಮ್ಮನ್ನು ಸರ್ವಲೋಕದವರಿಗಿಂತ (ಎಲ್ಲಾ ಮನುಷ್ಯರಿಗಿಂತ) ಶ್ರೇಷ್ಠಗೊಳಿಸಿರುವುದನ್ನು ಸ್ಮರಿಸಿರಿ.

    ೧೨೩

    وَٱتَّقُواْ يَوۡمٗا لَّا تَجۡزِي نَفۡسٌ عَن نَّفۡسٖ شَيۡـٔٗا وَلَا يُقۡبَلُ مِنۡهَا عَدۡلٞ وَلَا تَنفَعُهَا شَفَٰعَةٞ وَلَا هُمۡ يُنصَرُونَ

    ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ಯಾವುದೇ ಉಪಕಾರ ಮಾಡದ, ಅವನಿಂದ ಯಾವುದೇ ದಂಡ ಸ್ವೀಕರಿಸದ, ಅವನಿಗೆ ಯಾವುದೇ ಶಿಫಾರಸು ಪ್ರಯೋಜನಪಡದ ಮತ್ತು ಅವರಿಗೆ ಯಾವುದೇ ಸಹಾಯವು ದೊರೆಯದ ಒಂದು ದಿನವನ್ನು ಭಯಪಡಿರಿ.

    ೧೨೪

    ۞ وَإِذِ ٱبۡتَلَىٰٓ إِبۡرَٰهِـۧمَ رَبُّهُۥ بِكَلِمَٰتٖ فَأَتَمَّهُنَّۖ قَالَ إِنِّي جَاعِلُكَ لِلنَّاسِ إِمَامٗاۖ قَالَ وَمِن ذُرِّيَّتِيۖ قَالَ لَا يَنَالُ عَهۡدِي ٱلظَّٰلِمِينَ

    ಇಬ್ರಾಹೀಮರನ್ನು ಅವರ ಪರಿಪಾಲಕನು (ಅಲ್ಲಾಹು) ಕೆಲವು ವಚನಗಳ ಮೂಲಕ ಪರೀಕ್ಷಿಸಿದ ಸಂದರ್ಭ(ವನ್ನು ಸ್ಮರಿಸಿ). ಅವರು ಅವೆಲ್ಲವನ್ನೂ ಪೂರ್ಣಗೊಳಿಸಿದರು. ಅಲ್ಲಾಹು ಹೇಳಿದನು: “ನಾನು ನಿಮ್ಮನ್ನು ಜನರಿಗೆ ಮುಖಂಡನನ್ನಾಗಿ ಮಾಡುತ್ತೇನೆ.” ಅವರು ಹೇಳಿದರು: “ನನ್ನ ಸಂತಾನದಲ್ಲಿಯೂ ಮಾಡು.” ಅಲ್ಲಾಹು ಹೇಳಿದನು: “ನನ್ನ ವಾಗ್ದಾನವು ಅಕ್ರಮಿಗಳಿಗೆ ಅನ್ವಯವಾಗುವುದಿಲ್ಲ.”

    ೧೨೫

    وَإِذۡ جَعَلۡنَا ٱلۡبَيۡتَ مَثَابَةٗ لِّلنَّاسِ وَأَمۡنٗا وَٱتَّخِذُواْ مِن مَّقَامِ إِبۡرَٰهِـۧمَ مُصَلّٗىۖ وَعَهِدۡنَآ إِلَىٰٓ إِبۡرَٰهِـۧمَ وَإِسۡمَٰعِيلَ أَن طَهِّرَا بَيۡتِيَ لِلطَّآئِفِينَ وَٱلۡعَٰكِفِينَ وَٱلرُّكَّعِ ٱلسُّجُودِ

    ನಾವು ಆ ಭವನವನ್ನು (ಕಅ‌ಬಾಲಯವನ್ನು) ಜನರಿಗೆ ಪುಣ್ಯಸ್ಥಳವಾಗಿ ಮತ್ತು ನಿರ್ಭಯ ಸ್ಥಳವಾಗಿ ಮಾಡಿದ ಸಂದರ್ಭ. ಇಬ್ರಾಹೀಮರು ನಿಂತ ಸ್ಥಳವನ್ನು ನಮಾಝಿನ ಸ್ಥಳವಾಗಿ ಮಾಡಿಕೊಳ್ಳಿರಿ. “ಪ್ರದಕ್ಷಿಣೆ ಮಾಡುವವರಿಗೆ, ಧ್ಯಾನ ಮಗ್ನರಾಗಿ ಕೂರುವವರಿಗೆ, ತಲೆಬಾಗುವವರಿಗೆ ಮತ್ತು ಸಾಷ್ಟಾಂಗ ಮಾಡುವವರಿಗೆ ನನ್ನ ಭವನವನ್ನು ಶುದ್ಧೀಕರಿಸಿರಿ” ಎಂದು ನಾವು ಇಬ್ರಾಹೀಮ್ ಮತ್ತು ಇಸ್ಮಾಈಲರಿಗೆ ಆದೇಶಿಸಿದೆವು.

    ೧೨೬

    وَإِذۡ قَالَ إِبۡرَٰهِـۧمُ رَبِّ ٱجۡعَلۡ هَٰذَا بَلَدًا ءَامِنٗا وَٱرۡزُقۡ أَهۡلَهُۥ مِنَ ٱلثَّمَرَٰتِ مَنۡ ءَامَنَ مِنۡهُم بِٱللَّهِ وَٱلۡيَوۡمِ ٱلۡأٓخِرِۚ قَالَ وَمَن كَفَرَ فَأُمَتِّعُهُۥ قَلِيلٗا ثُمَّ أَضۡطَرُّهُۥٓ إِلَىٰ عَذَابِ ٱلنَّارِۖ وَبِئۡسَ ٱلۡمَصِيرُ

    ಇಬ್ರಾಹೀಮ್ ಹೇಳಿದ ಸಂದರ್ಭ(ವನ್ನು ಸ್ಮರಿಸಿ): “ಓ ನನ್ನ ಪರಿಪಾಲಕನೇ! ನೀನು ಇದನ್ನು ಸುರಕ್ಷಿತ ನಗರವನ್ನಾಗಿ ಮಾಡು ಮತ್ತು ಇದರ ನಿವಾಸಿಗಳಿಗೆ—ಅವರ ಪೈಕಿ ಅಲ್ಲಾಹನಲ್ಲಿ ಮತ್ತು ಅಂತ್ಯ ದಿನದಲ್ಲಿ ವಿಶ್ವಾಸವಿಡುವವರಿಗೆ—ಹಣ್ಣು-ಹಂಪಲುಗಳ ಆಹಾರವನ್ನು ನೀಡು.” ಅಲ್ಲಾಹು ಹೇಳಿದನು: “ನಾನು ಸತ್ಯನಿಷೇಧಿಗಳಿಗೂ ಅಲ್ಪಕಾಲದ ಸವಲತ್ತುಗಳನ್ನು ನೀಡುವೆನು. ನಂತರ ನರಕ ಶಿಕ್ಷೆಗೆ ಅವರನ್ನು ನಿರ್ಬಂಧಿಸುವೆನು.” ಆ ಗಮ್ಯಸ್ಥಾನವು ಬಹಳ ನಿಕೃಷ್ಟವಾಗಿದೆ.

    ೧೨೭

    وَإِذۡ يَرۡفَعُ إِبۡرَٰهِـۧمُ ٱلۡقَوَاعِدَ مِنَ ٱلۡبَيۡتِ وَإِسۡمَٰعِيلُ رَبَّنَا تَقَبَّلۡ مِنَّآۖ إِنَّكَ أَنتَ ٱلسَّمِيعُ ٱلۡعَلِيمُ

    ಇಬ್ರಾಹೀಮ್ ಮತ್ತು ಇಸ್ಮಾಈಲರು ಕಅಬಾಲಯದ ಅಡಿಪಾಯ ಮತ್ತು ಗೋಡೆಗಳನ್ನು ಎತ್ತರಿಸುತ್ತಿದ್ದ ಸಂದರ್ಭ. (ಅವರು ಹೇಳಿದರು): “ಓ ನಮ್ಮ ಪರಿಪಾಲಕನೇ! ನಮ್ಮಿಂದ ಇದನ್ನು ಸ್ವೀಕರಿಸು. ನಿಶ್ಚಯವಾಗಿಯೂ ನೀನು ಎಲ್ಲವನ್ನೂ ಕೇಳುವವನು ಮತ್ತು ಎಲ್ಲವನ್ನೂ ತಿಳಿದವನಾಗಿರುವೆ.

    ೧೨೮

    رَبَّنَا وَٱجۡعَلۡنَا مُسۡلِمَيۡنِ لَكَ وَمِن ذُرِّيَّتِنَآ أُمَّةٗ مُّسۡلِمَةٗ لَّكَ وَأَرِنَا مَنَاسِكَنَا وَتُبۡ عَلَيۡنَآۖ إِنَّكَ أَنتَ ٱلتَّوَّابُ ٱلرَّحِيمُ

    ಓ ನಮ್ಮ ಪರಿಪಾಲಕನೇ! ನಮ್ಮಿಬ್ಬರನ್ನೂ ನಿನ್ನ ಆಜ್ಞಾಪಾಲಕರನ್ನಾಗಿ ಮಾಡು ಮತ್ತು ನಮ್ಮ ಸಂತಾನದಿಂದಲೂ ನಿನಗೆ ಶರಣಾದ ಒಂದು ಸಮುದಾಯವನ್ನು ಉಂಟುಮಾಡು. ನಮಗೆ ನಮ್ಮ ಆರಾಧನಾ ಕ್ರಮಗಳನ್ನು ಕಲಿಸಿಕೊಡು ಮತ್ತು ನಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸು. ನಿಶ್ಚಯವಾಗಿಯೂ ನೀನು ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ಕರುಣೆ ತೋರುವವನಾಗಿರುವೆ.

    ೧೨೯

    رَبَّنَا وَٱبۡعَثۡ فِيهِمۡ رَسُولٗا مِّنۡهُمۡ يَتۡلُواْ عَلَيۡهِمۡ ءَايَٰتِكَ وَيُعَلِّمُهُمُ ٱلۡكِتَٰبَ وَٱلۡحِكۡمَةَ وَيُزَكِّيهِمۡۖ إِنَّكَ أَنتَ ٱلۡعَزِيزُ ٱلۡحَكِيمُ

    ಓ ನಮ್ಮ ಪರಿಪಾಲಕನೇ! ನಿನ್ನ ದೃಷ್ಟಾಂತಗಳನ್ನು ಪಠಿಸುವ, ಗ್ರಂಥವನ್ನು ಹಾಗೂ ವಿವೇಕವನ್ನು ಕಲಿಸಿಕೊಡುವ ಮತ್ತು ಅವರನ್ನು ಶುದ್ಧೀಕರಿಸುವ ಒಬ್ಬ ಸಂದೇಶವಾಹಕರನ್ನು ಅವರಿಂದಲೇ ಅವರಿಗೆ ಕಳುಹಿಸು.[1] ನಿಶ್ಚಯವಾಗಿಯೂ ನೀನು ಪ್ರಬಲನು ಮತ್ತು ವಿವೇಕಪೂರ್ಣನಾಗಿರುವೆ.”

    [1] ಇಬ್ರಾಹೀಮ್ ಮತ್ತು ಇಸ್ಮಾಈಲ್ (ಅವರಿಬ್ಬರ ಮೇಲೆ ಶಾಂತಿಯಿರಲಿ) ಪ್ರಾರ್ಥಿಸಿದ ಈ ಪ್ರಾರ್ಥನೆಯನ್ನು ಸ್ವೀಕರಿಸಿ ಸರ್ವಶಕ್ತನಾದ ಅಲ್ಲಾಹು ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರನ್ನು ಪ್ರವಾದಿಯಾಗಿ ಕಳುಹಿಸಿದನು. "ನಾನು ನನ್ನ ತಂದೆ ಇಬ್ರಾಹೀಮರ ಪ್ರಾರ್ಥನೆಯ ಫಲವಾಗಿದ್ದೇನೆ" ಎಂದು ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುತ್ತಿದ್ದುದು ಈ ಕಾರಣದಿಂದಾಗಿದೆ.

    ೧೩೦

    وَمَن يَرۡغَبُ عَن مِّلَّةِ إِبۡرَٰهِـۧمَ إِلَّا مَن سَفِهَ نَفۡسَهُۥۚ وَلَقَدِ ٱصۡطَفَيۡنَٰهُ فِي ٱلدُّنۡيَاۖ وَإِنَّهُۥ فِي ٱلۡأٓخِرَةِ لَمِنَ ٱلصَّٰلِحِينَ

    ಸ್ವಯಂ ಅವಿವೇಕಿಯಾಗಿರುವವನ ಹೊರತು ಇನ್ನಾರೂ ಇಬ್ರಾಹೀಮರ ಮಾರ್ಗದಿಂದ ವಿಮುಖರಾಗುವುದಿಲ್ಲ. ಇಹಲೋಕದಲ್ಲಿ ನಾವು ಅವರನ್ನು (ಇಬ್ರಾಹೀಮರನ್ನು) ವಿಶೇಷವಾಗಿ ಆರಿಸಿದ್ದೇವೆ. ಪರಲೋಕದಲ್ಲಿ ಅವರು ನೀತಿವಂತರಲ್ಲಿ ಸೇರಿರುತ್ತಾರೆ.

    ೧೩೧

    إِذۡ قَالَ لَهُۥ رَبُّهُۥٓ أَسۡلِمۡۖ قَالَ أَسۡلَمۡتُ لِرَبِّ ٱلۡعَٰلَمِينَ

    ಅವರೊಡನೆ ಅವರ ಪರಿಪಾಲಕನು (ಅಲ್ಲಾಹು) “ಶರಣಾಗು” ಎಂದಾಗ, ಅವರು ಹೇಳಿದರು: “ಸರ್ವಲೋಕಗಳ ಪರಿಪಾಲಕನಿಗೆ (ಅಲ್ಲಾಹನಿಗೆ) ನಾನು ಸಂಪೂರ್ಣ ಶರಣಾಗಿದ್ದೇನೆ.”

    ೧೩೨

    وَوَصَّىٰ بِهَآ إِبۡرَٰهِـۧمُ بَنِيهِ وَيَعۡقُوبُ يَٰبَنِيَّ إِنَّ ٱللَّهَ ٱصۡطَفَىٰ لَكُمُ ٱلدِّينَ فَلَا تَمُوتُنَّ إِلَّا وَأَنتُم مُّسۡلِمُونَ

    ಇಬ್ರಾಹೀಮ್ ಮತ್ತು ಯಾಕೂಬರು ತಮ್ಮ ಸಂತಾನಕ್ಕೆ ಅದನ್ನೇ ಉಪದೇಶಿಸುತ್ತಾ ಹೇಳಿದರು: “ಓ ನನ್ನ ಮಕ್ಕಳೇ! ನಿಶ್ಚಯವಾಗಿಯೂ ಅಲ್ಲಾಹು ಈ ಧರ್ಮವನ್ನು ನಿಮಗೆ ವಿಶೇಷವಾಗಿ ಆರಿಸಿದ್ದಾನೆ. ಆದ್ದರಿಂದ ನೀವು ಮುಸ್ಲಿಮರಾಗಿಯೇ ಹೊರತು ಇಹಲೋಕ ತ್ಯಜಿಸಬೇಡಿ.”

    ೧೩೩

    أَمۡ كُنتُمۡ شُهَدَآءَ إِذۡ حَضَرَ يَعۡقُوبَ ٱلۡمَوۡتُ إِذۡ قَالَ لِبَنِيهِ مَا تَعۡبُدُونَ مِنۢ بَعۡدِيۖ قَالُواْ نَعۡبُدُ إِلَٰهَكَ وَإِلَٰهَ ءَابَآئِكَ إِبۡرَٰهِـۧمَ وَإِسۡمَٰعِيلَ وَإِسۡحَٰقَ إِلَٰهٗا وَٰحِدٗا وَنَحۡنُ لَهُۥ مُسۡلِمُونَ

    ಯಾಕೂಬರ ಮರಣದ ಸಮಯದಲ್ಲಿ ನೀವು ಅಲ್ಲಿ ಉಪಸ್ಥಿತರಿದ್ದಿರಾ? ಅವರು ತಮ್ಮ ಮಕ್ಕಳೊಡನೆ, “ನನ್ನ ಬಳಿಕ ನೀವು ಯಾರನ್ನು ಆರಾಧಿಸುತ್ತೀರಿ?” ಎಂದು ಕೇಳಿದ ಸಂದರ್ಭ. ಮಕ್ಕಳು ಹೇಳಿದರು: “ನಾವು ನಿಮ್ಮ ದೇವನು ಮತ್ತು ನಿಮ್ಮ ಪೂರ್ವಜರಾದ ಇಬ್ರಾಹೀಮ್, ಇಸ್ಮಾಈಲ್ ಹಾಗೂ ಇಸ್‍ಹಾಕರ ದೇವನಾದ ಏಕೈಕ ದೇವನನ್ನು ಆರಾಧಿಸುತ್ತೇವೆ. ನಾವು ಅವನಿಗೆ ಶರಣಾಗಿ ಬದುಕುತ್ತೇವೆ.”

    ೧೩೪

    تِلۡكَ أُمَّةٞ قَدۡ خَلَتۡۖ لَهَا مَا كَسَبَتۡ وَلَكُم مَّا كَسَبۡتُمۡۖ وَلَا تُسۡـَٔلُونَ عَمَّا كَانُواْ يَعۡمَلُونَ

    ಆ ಸಮುದಾಯವು ಕಳೆದುಹೋಗಿದೆ. ಅವರು ಮಾಡಿದ್ದು ಅವರಿಗೆ ಮತ್ತು ನೀವು ಮಾಡಿದ್ದು ನಿಮಗೆ. ಅವರು ಮಾಡಿದ ಕರ್ಮಗಳ ಬಗ್ಗೆ ನಿಮ್ಮೊಂದಿಗೆ ಪ್ರಶ್ನಿಸಲಾಗುವುದಿಲ್ಲ.

    ೧೩೫

    وَقَالُواْ كُونُواْ هُودًا أَوۡ نَصَٰرَىٰ تَهۡتَدُواْۗ قُلۡ بَلۡ مِلَّةَ إِبۡرَٰهِـۧمَ حَنِيفٗاۖ وَمَا كَانَ مِنَ ٱلۡمُشۡرِكِينَ

    ಅವರು ಹೇಳಿದರು: “ನೀವು ಯಹೂದಿಗಳು ಅಥವಾ ಕ್ರೈಸ್ತರಾಗಿರಿ; ನೀವು ಸನ್ಮಾರ್ಗ ಪಡೆಯುವಿರಿ.” ಹೇಳಿರಿ: “ಅಲ್ಲ; (ವಾಸ್ತವವಾಗಿ ಸನ್ಮಾರ್ಗದಲ್ಲಿರುವವರು) ಇಬ್ರಾಹೀಮರ ಮಾರ್ಗವನ್ನು ಹಿಂಬಾಲಿಸುವವರು. ಅವರು (ಇಬ್ರಾಹೀಮ್) ಏಕನಿಷ್ಠರಾಗಿದ್ದರು.[1] ಅವರು ಬಹುದೇವಾರಾಧಕರಲ್ಲಿ ಸೇರಿದವರಾಗಿರಲಿಲ್ಲ.”

    [1] ಏಕನಿಷ್ಠ ಎಂದರೆ ಒಬ್ಬನೇ ದೇವನ ಆರಾಧಕ ಮತ್ತು ಇತರೆಲ್ಲಾ ದೇವರುಗಳನ್ನು ಬಿಟ್ಟು ಏಕೈಕ ದೇವನನ್ನು ಮಾತ್ರ ಆರಾಧಿಸುವವನು.

    ೧೩೬

    قُولُوٓاْ ءَامَنَّا بِٱللَّهِ وَمَآ أُنزِلَ إِلَيۡنَا وَمَآ أُنزِلَ إِلَىٰٓ إِبۡرَٰهِـۧمَ وَإِسۡمَٰعِيلَ وَإِسۡحَٰقَ وَيَعۡقُوبَ وَٱلۡأَسۡبَاطِ وَمَآ أُوتِيَ مُوسَىٰ وَعِيسَىٰ وَمَآ أُوتِيَ ٱلنَّبِيُّونَ مِن رَّبِّهِمۡ لَا نُفَرِّقُ بَيۡنَ أَحَدٖ مِّنۡهُمۡ وَنَحۡنُ لَهُۥ مُسۡلِمُونَ

    ಹೇಳಿರಿ: “ನಾವು ಅಲ್ಲಾಹನಲ್ಲಿ, ನಮಗೆ ಅವತೀರ್ಣವಾಗಿರುವುದರಲ್ಲಿ, ಇಬ್ರಾಹೀಮರಿಗೆ, ಇಸ್ಮಾಈಲರಿಗೆ, ಇಸ್‍ಹಾಕರಿಗೆ, ಯಾಕೂಬರಿಗೆ ಮತ್ತು ಯಾಕೂಬರ ಸಂತಾನಕ್ಕೆ ಅವತೀರ್ಣವಾಗಿರುವುದರಲ್ಲಿ, ಮೂಸಾ ಮತ್ತು ಈಸಾರಿಗೆ ನೀಡಲಾಗಿರುವುದರಲ್ಲಿ, ಎಲ್ಲಾ ಪ್ರವಾದಿಗಳಿಗೂ ಅವರ ಪರಿಪಾಲಕನ (ಅಲ್ಲಾಹನ) ಕಡೆಯಿಂದ ನೀಡಲಾಗಿರುವುದರಲ್ಲಿ ವಿಶ್ವಾಸವಿಟ್ಟಿದ್ದೇವೆ. ಅವರಲ್ಲಿ ಯಾರ ನಡುವೆಯೂ ನಾವು ಬೇಧ ಮಾಡುವುದಿಲ್ಲ. ನಾವು ಅವನಿಗೆ ಶರಣಾಗಿ ಬದುಕುತ್ತೇವೆ.”

    ೧೩೭

    فَإِنۡ ءَامَنُواْ بِمِثۡلِ مَآ ءَامَنتُم بِهِۦ فَقَدِ ٱهۡتَدَواْۖ وَّإِن تَوَلَّوۡاْ فَإِنَّمَا هُمۡ فِي شِقَاقٖۖ فَسَيَكۡفِيكَهُمُ ٱللَّهُۚ وَهُوَ ٱلسَّمِيعُ ٱلۡعَلِيمُ

    ನೀವು ವಿಶ್ವಾಸವಿಟ್ಟಂತೆಯೇ ಅವರೂ ವಿಶ್ವಾಸವಿಟ್ಟರೆ ಅವರು ಸನ್ಮಾರ್ಗ ಪಡೆಯುವರು. ಆದರೆ ಅವರು ವಿಮುಖರಾಗುವುದಾದರೆ ಅವರು ಸ್ಪಷ್ಟ ಭಿನ್ನಮತದಲ್ಲಿದ್ದಾರೆ. ಅವರ ವಿರುದ್ಧ ನಿಮಗೆ ಅಲ್ಲಾಹು ಸಾಕಾಗುವನು. ಅವನು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.[1]

    [1] ಅಂದರೆ ನೀವು ವಿಶ್ವಾಸವಿಟ್ಟಂತೆ ವಿಶ್ವಾಸವಿಡದೆ ಅವರು ನಿಮ್ಮ ವಿರುದ್ಧ ಕುತಂತ್ರಗಳನ್ನು ಮುಂದುವರಿಸಿದರೆ ನೀವೇನೂ ಹೆದರಬೇಕಾಗಿಲ್ಲ. ಏಕೆಂದರೆ, ಅಲ್ಲಾಹು ನಿಮ್ಮ ಜೊತೆಗಿದ್ದಾನೆ. ಅವನು ನಿಮ್ಮನ್ನು ಅವರ ಕುತಂತ್ರಗಳಿಂದ ರಕ್ಷಿಸುತ್ತಾನೆ. ಈ ಭವಿಷ್ಯವು ಕೆಲವೇ ವರ್ಷಗಳಲ್ಲಿ ನೆರವೇರಿತು. ಯಹೂದಿಗಳ ಬನೂ ಕೈನುಕಾ ಮತ್ತು ಬನೂ ನದೀರ್ ಗೋತ್ರಗಳನ್ನು ಗಡೀಪಾರು ಮಾಡಲಾಯಿತು ಮತ್ತು ಬನೂ ಕುರೈಝ ಗೋತ್ರವನ್ನು ಸಂಹಾರ ಮಾಡಲಾಯಿತು.

    ೧೩೮

    صِبۡغَةَ ٱللَّهِ وَمَنۡ أَحۡسَنُ مِنَ ٱللَّهِ صِبۡغَةٗۖ وَنَحۡنُ لَهُۥ عَٰبِدُونَ

    ಅಲ್ಲಾಹನ ಬಣ್ಣವನ್ನು ಸ್ವೀಕರಿಸಿರಿ.[1] ಅಲ್ಲಾಹನಿಗಿಂತಲೂ ಉತ್ತಮ ಬಣ್ಣವನ್ನು ನೀಡುವವನು ಯಾರು? ನಾವಂತೂ ಅವನನ್ನು ಮಾತ್ರ ಆರಾಧಿಸುತ್ತೇವೆ.

    [1] ಕ್ರೈಸ್ತರು ಹಳದಿ ಬಣ್ಣದ ನೀರನ್ನು ಮೀಸಲಿಟ್ಟಿದ್ದರು. ಅದನ್ನು ಎಲ್ಲಾ ಕ್ರೈಸ್ತ ಮಕ್ಕಳಿಗೆ ಮತ್ತು ಕ್ರೈಸ್ತ ಧರ್ಮ ಸ್ವೀಕರಿಸುವವರಿಗೆ ನೀಡುತ್ತಿದ್ದರು. ಬಾಪ್ಟಿಸಂ ಎಂದು ಕರೆಯುವ ಈ ಸಂಪ್ರದಾಯವು ಕ್ರಿಶ್ಚಿಯನ್ ಧರ್ಮದಲ್ಲಿ ಬಹಳ ಮುಖ್ಯವಾಗಿದೆ. ಇಲ್ಲಿ ಅಲ್ಲಾಹನ ಬಣ್ಣ ಎಂದರೆ ಮನುಷ್ಯನ ಸಹಜ ಮನೋಧರ್ಮವಾದ ಇಸ್ಲಾಂ ಧರ್ಮ. ಎಲ್ಲಾ ಪ್ರವಾದಿಗಳು ಈ ಧರ್ಮವನ್ನೇ ಬೋಧಿಸಿದ್ದರು.

    ೧೩೯

    قُلۡ أَتُحَآجُّونَنَا فِي ٱللَّهِ وَهُوَ رَبُّنَا وَرَبُّكُمۡ وَلَنَآ أَعۡمَٰلُنَا وَلَكُمۡ أَعۡمَٰلُكُمۡ وَنَحۡنُ لَهُۥ مُخۡلِصُونَ

    (ಓ ಪ್ರವಾದಿಯವರೇ!) ಹೇಳಿರಿ: “ನೀವು ನಮ್ಮ ಮತ್ತು ನಿಮ್ಮ ಪರಿಪಾಲಕನಾದ ಅಲ್ಲಾಹನ ವಿಷಯದಲ್ಲಿ ನಮ್ಮೊಡನೆ ತರ್ಕಿಸುತ್ತೀರಾ? ನಮ್ಮ ಕರ್ಮಗಳು ನಮಗೆ ಮತ್ತು ನಿಮ್ಮ ಕರ್ಮಗಳು ನಿಮಗೆ. ನಾವಂತೂ ಅವನಿಗೆ ಸಂಪೂರ್ಣ ನಿಷ್ಕಳಂಕರಾಗಿದ್ದೇವೆ.”

    ೧೪೦

    أَمۡ تَقُولُونَ إِنَّ إِبۡرَٰهِـۧمَ وَإِسۡمَٰعِيلَ وَإِسۡحَٰقَ وَيَعۡقُوبَ وَٱلۡأَسۡبَاطَ كَانُواْ هُودًا أَوۡ نَصَٰرَىٰۗ قُلۡ ءَأَنتُمۡ أَعۡلَمُ أَمِ ٱللَّهُۗ وَمَنۡ أَظۡلَمُ مِمَّن كَتَمَ شَهَٰدَةً عِندَهُۥ مِنَ ٱللَّهِۗ وَمَا ٱللَّهُ بِغَٰفِلٍ عَمَّا تَعۡمَلُونَ

    ಇಬ್ರಾಹೀಮ್, ಇಸ್ಮಾಈಲ್, ಇಸ್‍ಹಾಕ್, ಯಾಕೂಬ್ ಮತ್ತು ಯಾಕೂಬರ ಸಂತಾನಗಳು ಯಹೂದಿಗಳು ಅಥವಾ ಕ್ರೈಸ್ತರಾಗಿದ್ದರೆಂದು ನೀವು ಹೇಳುತ್ತೀರಾ? ಹೇಳಿರಿ: “ಹೆಚ್ಚು ತಿಳಿದವರು ನೀವೋ ಅಥವಾ ಅಲ್ಲಾಹನೋ?” ಅಲ್ಲಾಹನ ಬಳಿ ಸಾಕ್ಷಿಯನ್ನು ಅಡಗಿಸುವವನಿಗಿಂತಲೂ ದೊಡ್ಡ ಅಕ್ರಮಿ ಯಾರು? ನೀವು ಮಾಡುತ್ತಿರುವ ಕರ್ಮಗಳ ಕುರಿತು ಅಲ್ಲಾಹು ತಿಳಿಯದವನಲ್ಲ.

    ೧೪೧

    تِلۡكَ أُمَّةٞ قَدۡ خَلَتۡۖ لَهَا مَا كَسَبَتۡ وَلَكُم مَّا كَسَبۡتُمۡۖ وَلَا تُسۡـَٔلُونَ عَمَّا كَانُواْ يَعۡمَلُونَ

    ಆ ಸಮುದಾಯವು ಕಳೆದುಹೋಗಿದೆ. ಅವರು ಮಾಡಿದ್ದು ಅವರಿಗೆ ಮತ್ತು ನೀವು ಮಾಡಿದ್ದು ನಿಮಗೆ. ಅವರು ಮಾಡಿದ ಕರ್ಮಗಳ ಬಗ್ಗೆ ನಿಮ್ಮೊಂದಿಗೆ ಪ್ರಶ್ನಿಸಲಾಗುವುದಿಲ್ಲ.

    ೧೪೨

    ۞ سَيَقُولُ ٱلسُّفَهَآءُ مِنَ ٱلنَّاسِ مَا وَلَّىٰهُمۡ عَن قِبۡلَتِهِمُ ٱلَّتِي كَانُواْ عَلَيۡهَاۚ قُل لِّلَّهِ ٱلۡمَشۡرِقُ وَٱلۡمَغۡرِبُۚ يَهۡدِي مَن يَشَآءُ إِلَىٰ صِرَٰطٖ مُّسۡتَقِيمٖ

    “ಇವರು ಇದುವರೆಗೆ ಯಾವ ಕಿಬ್ಲದಲ್ಲಿದ್ದರೋ ಅದರಿಂದ ಇವರನ್ನು ತಿರುಗಿಸಿದ್ದೇನು?” ಎಂದು ಸದ್ಯವೇ ಜನರಲ್ಲಿರುವ ಕೆಲವು ತಿಳಿಗೇಡಿಗಳು ಕೇಳುವರು. ಹೇಳಿರಿ: “ಪೂರ್ವ ಮತ್ತು ಪಶ್ಚಿಮಗಳು ಅಲ್ಲಾಹನಿಗೆ ಸೇರಿದ್ದು. ಅವನು ಇಚ್ಛಿಸುವವರಿಗೆ ಅವನು ನೇರ ಮಾರ್ಗವನ್ನು ತೋರಿಸುತ್ತಾನೆ.”

    ೧೪೩

    وَكَذَٰلِكَ جَعَلۡنَٰكُمۡ أُمَّةٗ وَسَطٗا لِّتَكُونُواْ شُهَدَآءَ عَلَى ٱلنَّاسِ وَيَكُونَ ٱلرَّسُولُ عَلَيۡكُمۡ شَهِيدٗاۗ وَمَا جَعَلۡنَا ٱلۡقِبۡلَةَ ٱلَّتِي كُنتَ عَلَيۡهَآ إِلَّا لِنَعۡلَمَ مَن يَتَّبِعُ ٱلرَّسُولَ مِمَّن يَنقَلِبُ عَلَىٰ عَقِبَيۡهِۚ وَإِن كَانَتۡ لَكَبِيرَةً إِلَّا عَلَى ٱلَّذِينَ هَدَى ٱللَّهُۗ وَمَا كَانَ ٱللَّهُ لِيُضِيعَ إِيمَٰنَكُمۡۚ إِنَّ ٱللَّهَ بِٱلنَّاسِ لَرَءُوفٞ رَّحِيمٞ

    ಈ ರೀತಿ ನಾವು ನಿಮ್ಮನ್ನು ಒಂದು ಮಧ್ಯಮ ಸಮುದಾಯವನ್ನಾಗಿ ಮಾಡಿದೆವು; ನೀವು ಜನರಿಗೆ ಸಾಕ್ಷಿಗಳಾಗಲು ಮತ್ತು ಸಂದೇಶವಾಹಕರು ನಿಮಗೆ ಸಾಕ್ಷಿಯಾಗಲು. ನೀವು (ಮೊದಲು) ಯಾವ ಕಿಬ್ಲದಲ್ಲಿದ್ದಿರೋ ಅದನ್ನು ನಾವು ನಿಶ್ಚಯಿಸಿದ್ದು, ಸಂದೇಶವಾಹಕರನ್ನು ಹಿಂಬಾಲಿಸುವವರು ಯಾರು ಮತ್ತು ತಮ್ಮ ಹಿಮ್ಮಡಿಗಳಲ್ಲಿ ತಿರುಗಿ ನಡೆಯುವವರು ಯಾರು ಎಂದು ತಿಳಿಯುವುದಕ್ಕಾಗಿ ಮಾತ್ರ. ಅಲ್ಲಾಹು ಸನ್ಮಾರ್ಗದಲ್ಲಿ ಸೇರಿಸಿದವರ ಹೊರತು ಇತರೆಲ್ಲರಿಗೂ ಅದು ಬಹಳ ಕಷ್ಟದ ಕೆಲಸವಾಗಿದೆ. ಅಲ್ಲಾಹು ನಿಮ್ಮ ವಿಶ್ವಾಸವನ್ನು ವ್ಯರ್ಥಗೊಳಿಸುವುದಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಮನುಷ್ಯರೊಂದಿಗೆ ಅನುಕಂಪವುಳ್ಳವನು ಮತ್ತು ಕರುಣೆಯುಳ್ಳವನಾಗಿದ್ದಾನೆ.

    ೧೪೪

    قَدۡ نَرَىٰ تَقَلُّبَ وَجۡهِكَ فِي ٱلسَّمَآءِۖ فَلَنُوَلِّيَنَّكَ قِبۡلَةٗ تَرۡضَىٰهَاۚ فَوَلِّ وَجۡهَكَ شَطۡرَ ٱلۡمَسۡجِدِ ٱلۡحَرَامِۚ وَحَيۡثُ مَا كُنتُمۡ فَوَلُّواْ وُجُوهَكُمۡ شَطۡرَهُۥۗ وَإِنَّ ٱلَّذِينَ أُوتُواْ ٱلۡكِتَٰبَ لَيَعۡلَمُونَ أَنَّهُ ٱلۡحَقُّ مِن رَّبِّهِمۡۗ وَمَا ٱللَّهُ بِغَٰفِلٍ عَمَّا يَعۡمَلُونَ

    ನಿಮ್ಮ ಮುಖವು ಪದೇ ಪದೇ ಆಕಾಶದ ಕಡೆಗೆ ತಿರುಗುವುದನ್ನು ನಾವು ನೋಡುತ್ತಿದ್ದೇವೆ. ಆದ್ದರಿಂದ ಈಗ ನಾವು ನಿಮ್ಮನ್ನು ನೀವು ಇಷ್ಟಪಡುವ ಕಿಬ್ಲದ ಕಡೆಗೆ ತಿರುಗಿಸುತ್ತೇವೆ.[1] ನೀವು ನಿಮ್ಮ ಮುಖವನ್ನು ಮಸ್ಜಿದುಲ್ ಹರಾಮ್‍ನ ಕಡೆಗೆ ತಿರುಗಿಸಿರಿ; ಮತ್ತು ನೀವು (ಮುಸ್ಲಿಮರು) ಎಲ್ಲೇ ಇದ್ದರೂ ನಿಮ್ಮ ಮುಖಗಳನ್ನು ಕೂಡ ಅದರ ಕಡೆಗೆ ತಿರುಗಿಸಿರಿ. ನಿಶ್ಚಯವಾಗಿಯೂ, ಇದು ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಸತ್ಯವೆಂದು ಗ್ರಂಥ ನೀಡಲಾದವರಿಗೆ ಚೆನ್ನಾಗಿ ತಿಳಿದಿದೆ.[2] ಅವರು ಮಾಡುತ್ತಿರುವ ಕರ್ಮಗಳ ಕುರಿತು ಅಲ್ಲಾಹು ತಿಳಿಯದವನಲ್ಲ.

    [1] ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಕ್ಕಾದಿಂದ ಮದೀನಕ್ಕೆ ವಲಸೆ ಬಂದಾಗ, ಸುಮಾರು ಒಂದು ತಿಂಗಳ ಕಾಲ ಬೈತುಲ್ ಮುಕದ್ದಿಸ್‌ಗೆ ಅಭಿಮುಖವಾಗಿ ನಿಂತು ನಮಾಝ್ ನಿರ್ವಹಿಸುವುದನ್ನು ಮುಂದುವರಿಸಿದರು. ಅವರು ಕಾಬಾಲಯಕ್ಕೆ ತಿರುಗಿ ನಿಂತು ನಮಾಝ್ ನಿರ್ವಹಿಸಲು ಬಯಸುತ್ತಿದ್ದರು. ಅದಕ್ಕಾಗಿ ಅವರು ಪ್ರಾರ್ಥಿಸುತ್ತಿದ್ದರು ಮತ್ತು ಯಾವುದಾದರೂ ಸಂದೇಶ ಬರಬಹುದೇ ಎಂದು ಪದೇ ಪದೇ ಆಕಾಶದ ಕಡೆಗೆ ನೋಡುತ್ತಿದ್ದರು. ಕೊನೆಗೆ ಅಲ್ಲಾಹು ಕಿಬ್ಲ ಬದಲಾವಣೆಯ ಬಗ್ಗೆ ವಚನವನ್ನು ಅವತೀರ್ಣಗೊಳಿಸಿದನು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಿಬ್ಲ ಬದಲಾವಣೆ ಮಾಡಿದಾಗ ಯಹೂದಿಗಳು ಮತ್ತು ಕಪಟ ವಿಶ್ವಾಸಿಗಳು ಗದ್ದಲವೆಬ್ಬಿಸಿದರು. ನಮಾಝ್ ಅಲ್ಲಾಹನ ಆರಾಧನೆಯಾಗಿದೆ ಮತ್ತು ಅಲ್ಲಾಹು ನಿಶ್ಚಯಿಸಿದ ದಿಕ್ಕಿಗೆ ತಿರುಗಿ ಅದನ್ನು ನಿರ್ವಹಿಸಬೇಕಾಗಿದೆ. ಪೂರ್ವ ಮತ್ತು ಪಶ್ಚಿಮ ದಿಕ್ಕುಗಳು ಅಲ್ಲಾಹನಿಗೆ ಸೇರಿದ್ದು. ಅವನು ಯಾವ ದಿಕ್ಕಿಗೆ ತಿರುಗಬೇಕೆಂದು ಆದೇಶಿಸಿದನೋ ಆ ದಿಕ್ಕಿಗೆ ತಿರುಗಿ ನಮಾಝ್ ನಿರ್ವಹಿಸುವುದು ದಾಸನ ಕರ್ತವ್ಯ. ಕಿಬ್ಲ ಬದಲಾವಣೆಯ ಆದೇಶ ಅಸರ್ ನಮಾಝ್‌ನ ಸಂದರ್ಭದಲ್ಲಿ ಬಂದಿತ್ತು ಮತ್ತು ಕಾಬಾಲಯಕ್ಕೆ ತಿರುಗಿ ಅಸರ್ ನಮಾಝ್ ನಿರ್ವಹಿಸಲಾಯಿತು. [2] ಅಂತಿಮ ಪ್ರವಾದಿಯ ಕಿಬ್ಲ ಕಾಬಾ ಆಗಿದೆ ಎಂದು ಯಹೂದಿಗಳ ಗ್ರಂಥದಲ್ಲಿ ಸ್ಪಷ್ಟ ಸೂಚನೆಗಳಿದ್ದವು. ಅವರಿಗೆ ಇದು ಸ್ಪಷ್ಟವಾಗಿ ತಿಳಿದಿತ್ತು. ಆದರೂ ತಮ್ಮ ಅಹಂಕಾರ ಮತ್ತು ಅಸೂಯೆಯ ನಿಮಿತ್ತ ಅದನ್ನು ಸ್ವೀಕರಿಸಲು ಅವರು ಹಿಂದೇಟು ಹಾಕಿದರು.

    ೧೪೫

    وَلَئِنۡ أَتَيۡتَ ٱلَّذِينَ أُوتُواْ ٱلۡكِتَٰبَ بِكُلِّ ءَايَةٖ مَّا تَبِعُواْ قِبۡلَتَكَۚ وَمَآ أَنتَ بِتَابِعٖ قِبۡلَتَهُمۡۚ وَمَا بَعۡضُهُم بِتَابِعٖ قِبۡلَةَ بَعۡضٖۚ وَلَئِنِ ٱتَّبَعۡتَ أَهۡوَآءَهُم مِّنۢ بَعۡدِ مَا جَآءَكَ مِنَ ٱلۡعِلۡمِ إِنَّكَ إِذٗا لَّمِنَ ٱلظَّٰلِمِينَ

    ಗ್ರಂಥ ನೀಡಲಾದವರಿಗೆ ನೀವು ಎಲ್ಲಾ ರೀತಿಯ ಪುರಾವೆಗಳನ್ನು ತಂದು ತೋರಿಸಿದರೂ ಅವರು ನಿಮ್ಮ ಕಿಬ್ಲವನ್ನು ಹಿಂಬಾಲಿಸುವುದಿಲ್ಲ. ನೀವು ಕೂಡ ಅವರ ಕಿಬ್ಲವನ್ನು ಅಂಗೀಕರಿಸುವುದಿಲ್ಲ. ಅವರಲ್ಲಿ ಒಬ್ಬರು ಇನ್ನೊಬ್ಬರ ಕಿಬ್ಲವನ್ನು ಅಂಗೀಕರಿಸುವುದಿಲ್ಲ. ನಿಮಗೆ ಜ್ಞಾನವು ಬಂದ ಬಳಿಕ ನೀವೇನಾದರೂ ಅವರ ಸ್ವೇಚ್ಛೆಗಳನ್ನು ಹಿಂಬಾಲಿಸಿದರೆ, ನಿಶ್ಚಯವಾಗಿಯೂ ನೀವು ಅಕ್ರಮಿಗಳಲ್ಲಿ ಸೇರುವಿರಿ.

    ೧೪೬

    ٱلَّذِينَ ءَاتَيۡنَٰهُمُ ٱلۡكِتَٰبَ يَعۡرِفُونَهُۥ كَمَا يَعۡرِفُونَ أَبۡنَآءَهُمۡۖ وَإِنَّ فَرِيقٗا مِّنۡهُمۡ لَيَكۡتُمُونَ ٱلۡحَقَّ وَهُمۡ يَعۡلَمُونَ

    ನಾವು ಯಾರಿಗೆ ಗ್ರಂಥವನ್ನು ನೀಡಿದ್ದೇವೆಯೋ ಅವರು ತಮ್ಮ ಮಕ್ಕಳನ್ನು ಗುರುತಿಸುವಂತೆಯೇ ಅವರನ್ನು (ಪ್ರವಾದಿಯನ್ನು) ಗುರುತಿಸುತ್ತಾರೆ. ನಿಶ್ಚಯವಾಗಿಯೂ ಅವರಲ್ಲೊಂದು ಗುಂಪು ಸತ್ಯವನ್ನು ತಿಳಿದೂ ಸಹ ಅದನ್ನು ಮುಚ್ಚಿಡುತ್ತಾರೆ.

    ೧೪೭

    ٱلۡحَقُّ مِن رَّبِّكَ فَلَا تَكُونَنَّ مِنَ ٱلۡمُمۡتَرِينَ

    ಇದು ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಸತ್ಯವಾಗಿದೆ. ಆದ್ದರಿಂದ ನೀವು ಸಂಶಯಪಡುವವರಲ್ಲಿ ಸೇರಲೇಬೇಡಿ.

    ೧೪೮

    وَلِكُلّٖ وِجۡهَةٌ هُوَ مُوَلِّيهَاۖ فَٱسۡتَبِقُواْ ٱلۡخَيۡرَٰتِۚ أَيۡنَ مَا تَكُونُواْ يَأۡتِ بِكُمُ ٱللَّهُ جَمِيعًاۚ إِنَّ ٱللَّهَ عَلَىٰ كُلِّ شَيۡءٖ قَدِيرٞ

    ಪ್ರತಿಯೊಬ್ಬರೂ (ಪ್ರಾರ್ಥನೆಯ ವೇಳೆ) ಒಂದಲ್ಲ ಒಂದು ಕಡೆಗೆ ತಿರುಗುತ್ತಾರೆ. ನೀವು ಸತ್ಕರ್ಮಗಳನ್ನು ಮಾಡಲು ಧಾವಿಸಿರಿ. ನೀವೆಲ್ಲೇ ಇದ್ದರೂ ಅಲ್ಲಾಹು ನಿಮ್ಮೆಲ್ಲರನ್ನೂ ತರುವನು. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.

    ೧೪೯

    وَمِنۡ حَيۡثُ خَرَجۡتَ فَوَلِّ وَجۡهَكَ شَطۡرَ ٱلۡمَسۡجِدِ ٱلۡحَرَامِۖ وَإِنَّهُۥ لَلۡحَقُّ مِن رَّبِّكَۗ وَمَا ٱللَّهُ بِغَٰفِلٍ عَمَّا تَعۡمَلُونَ

    ನೀವು ಎಲ್ಲಿಂದ ಹೊರಟರೂ ನಿಮ್ಮ ಮುಖವನ್ನು ಮಸ್ಜಿದುಲ್ ಹರಾಮ್‍ನ ಕಡೆಗೆ ತಿರುಗಿಸಿರಿ. ನಿಶ್ಚಯವಾಗಿಯೂ ಇದು ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಸತ್ಯವಾಗಿದೆ. ನೀವು ಮಾಡುತ್ತಿರುವ ಕರ್ಮಗಳ ಕುರಿತು ಅಲ್ಲಾಹು ತಿಳಿಯದವನಲ್ಲ.

    ೧೫೦

    وَمِنۡ حَيۡثُ خَرَجۡتَ فَوَلِّ وَجۡهَكَ شَطۡرَ ٱلۡمَسۡجِدِ ٱلۡحَرَامِۚ وَحَيۡثُ مَا كُنتُمۡ فَوَلُّواْ وُجُوهَكُمۡ شَطۡرَهُۥ لِئَلَّا يَكُونَ لِلنَّاسِ عَلَيۡكُمۡ حُجَّةٌ إِلَّا ٱلَّذِينَ ظَلَمُواْ مِنۡهُمۡ فَلَا تَخۡشَوۡهُمۡ وَٱخۡشَوۡنِي وَلِأُتِمَّ نِعۡمَتِي عَلَيۡكُمۡ وَلَعَلَّكُمۡ تَهۡتَدُونَ

    ನೀವು ಎಲ್ಲಿಂದ ಹೊರಟರೂ ನಿಮ್ಮ ಮುಖವನ್ನು ಮಸ್ಜಿದುಲ್ ಹರಾಮ್‍ನ ಕಡೆಗೆ ತಿರುಗಿಸಿರಿ. ನೀವು (ಮುಸ್ಲಿಮರು) ಎಲ್ಲೇ ಇದ್ದರೂ ನಿಮ್ಮ ಮುಖಗಳನ್ನು ಅದರ ಕಡೆಗೆ ತಿರುಗಿಸಿರಿ. ನಿಮ್ಮ ವಿರುದ್ಧ ಜನರಿಗೆ ಯಾವುದೇ ಸಾಕ್ಷ್ಯಾಧಾರ ಇಲ್ಲದಿರುವುದಕ್ಕಾಗಿ; ಆದರೆ ಅವರ ಪೈಕಿ ಅಕ್ರಮವೆಸಗಿದವರ ಹೊರತು. ನೀವು ಅವರನ್ನು ಭಯಪಡಬೇಡಿ; ನನ್ನನ್ನು ಭಯಪಡಿರಿ. ನಾನು ನನ್ನ ಅನುಗ್ರಹವನ್ನು ನಿಮಗೆ ಪೂರ್ಣಗೊಳಿಸುವುದಕ್ಕಾಗಿ ಮತ್ತು ನೀವು ಸನ್ಮಾರ್ಗ ಪಡೆಯುವುದಕ್ಕಾಗಿ.

    ೧೫೧

    كَمَآ أَرۡسَلۡنَا فِيكُمۡ رَسُولٗا مِّنكُمۡ يَتۡلُواْ عَلَيۡكُمۡ ءَايَٰتِنَا وَيُزَكِّيكُمۡ وَيُعَلِّمُكُمُ ٱلۡكِتَٰبَ وَٱلۡحِكۡمَةَ وَيُعَلِّمُكُم مَّا لَمۡ تَكُونُواْ تَعۡلَمُونَ

    ನಾವು ನಿಮ್ಮಿಂದಲೇ ನಿಮಗೆ ಒಬ್ಬ ಸಂದೇಶವಾಹಕರನ್ನು ಕಳುಹಿಸಿದಂತೆ. ಅವರು ನಮ್ಮ ವಚನಗಳನ್ನು ನಿಮಗೆ ಓದಿಕೊಡುತ್ತಾರೆ, ನಿಮ್ಮನ್ನು ಶುದ್ಧೀಕರಿಸುತ್ತಾರೆ, ನಿಮಗೆ ಗ್ರಂಥವನ್ನು ಮತ್ತು ವಿವೇಕವನ್ನು ಕಲಿಸಿಕೊಡುತ್ತಾರೆ ಮತ್ತು ನಿಮಗೆ ತಿಳಿದಿರದ ವಿಷಯಗಳನ್ನು ಕಲಿಸಿಕೊಡುತ್ತಾರೆ.

    ೧೫೨

    فَٱذۡكُرُونِيٓ أَذۡكُرۡكُمۡ وَٱشۡكُرُواْ لِي وَلَا تَكۡفُرُونِ

    ಆದ್ದರಿಂದ ನೀವು ನನ್ನನ್ನು ಸ್ಮರಿಸಿರಿ; ನಾನು ನಿಮ್ಮನ್ನು ಸ್ಮರಿಸುತ್ತೇನೆ. ನನಗೆ ಕೃತಜ್ಞರಾಗಿರಿ; ನನಗೆ ಕೃತಘ್ನರಾಗಬೇಡಿ.

    ೧೫೩

    يَٰٓأَيُّهَا ٱلَّذِينَ ءَامَنُواْ ٱسۡتَعِينُواْ بِٱلصَّبۡرِ وَٱلصَّلَوٰةِۚ إِنَّ ٱللَّهَ مَعَ ٱلصَّٰبِرِينَ

    ಓ ಸತ್ಯವಿಶ್ವಾಸಿಗಳೇ! ತಾಳ್ಮೆ ಮತ್ತು ನಮಾಝಿನ ಮೂಲಕ (ಅಲ್ಲಾಹನಲ್ಲಿ) ಸಹಾಯ ಬೇಡಿರಿ. ನಿಶ್ಚಯವಾಗಿಯೂ ಅಲ್ಲಾಹು ತಾಳ್ಮೆಯುಳ್ಳವರ ಜೊತೆಗಿದ್ದಾನೆ.

    ೧೫೪

    وَلَا تَقُولُواْ لِمَن يُقۡتَلُ فِي سَبِيلِ ٱللَّهِ أَمۡوَٰتُۢۚ بَلۡ أَحۡيَآءٞ وَلَٰكِن لَّا تَشۡعُرُونَ

    ಅಲ್ಲಾಹನ ಮಾರ್ಗದಲ್ಲಿ ಹುತಾತ್ಮರಾದವರನ್ನು ‘ಸತ್ತವರು’ ಎಂದು ಹೇಳಬೇಡಿ. ಅವರು ಜೀವಂತವಾಗಿದ್ದಾರೆ; ಆದರೆ ನಿಮಗೆ ಅದರ ಜ್ಞಾನವಿಲ್ಲ.

    ೧೫೫

    وَلَنَبۡلُوَنَّكُم بِشَيۡءٖ مِّنَ ٱلۡخَوۡفِ وَٱلۡجُوعِ وَنَقۡصٖ مِّنَ ٱلۡأَمۡوَٰلِ وَٱلۡأَنفُسِ وَٱلثَّمَرَٰتِۗ وَبَشِّرِ ٱلصَّٰبِرِينَ

    ನಿಶ್ಚಯವಾಗಿಯೂ ನಾವು ನಿಮ್ಮನ್ನು ಶತ್ರುಗಳ ಭಯದಿಂದ, ಹಸಿವಿನಿಂದ, ಆಸ್ತಿ, ಜೀವ ಅಥವಾ ಹಣ್ಣುಗಳ ನಷ್ಟದಿಂದ, ಹೀಗೆ ಒಂದಲ್ಲ ಒಂದು ವಿಧದಲ್ಲಿ ಪರೀಕ್ಷಿಸುತ್ತೇವೆ; ತಾಳ್ಮೆ ವಹಿಸುವವರಿಗೆ ಸುವಾರ್ತೆ ನೀಡಿರಿ.

    ೧೫೬

    ٱلَّذِينَ إِذَآ أَصَٰبَتۡهُم مُّصِيبَةٞ قَالُوٓاْ إِنَّا لِلَّهِ وَإِنَّآ إِلَيۡهِ رَٰجِعُونَ

    ಅವರು ಯಾರೆಂದರೆ, ಅವರಿಗೆ ಏನಾದರೂ ಅನಾಹುತ ಸಂಭವಿಸುವಾಗ ಅವರು ಹೇಳುತ್ತಾರೆ: “ನಿಶ್ಚಯವಾಗಿಯೂ ನಾವು ಅಲ್ಲಾಹನಿಗೆ ಸೇರಿದವರು; ಮತ್ತು ನಾವು ಅವನ ಕಡೆಗೇ ಮರಳುವವರು.”

    ೧೫೭

    أُوْلَٰٓئِكَ عَلَيۡهِمۡ صَلَوَٰتٞ مِّن رَّبِّهِمۡ وَرَحۡمَةٞۖ وَأُوْلَٰٓئِكَ هُمُ ٱلۡمُهۡتَدُونَ

    ಅವರ ಮೇಲೆ ಅವರ ಪರಿಪಾಲಕನ (ಅಲ್ಲಾಹನ) ಕಡೆಯ ಅನುಗ್ರಹಗಳು ಮತ್ತು ದಯೆಯಿದೆ. ಅವರೇ ಸನ್ಮಾರ್ಗದಲ್ಲಿರುವವರು.

    ೧೫೮

    ۞ إِنَّ ٱلصَّفَا وَٱلۡمَرۡوَةَ مِن شَعَآئِرِ ٱللَّهِۖ فَمَنۡ حَجَّ ٱلۡبَيۡتَ أَوِ ٱعۡتَمَرَ فَلَا جُنَاحَ عَلَيۡهِ أَن يَطَّوَّفَ بِهِمَاۚ وَمَن تَطَوَّعَ خَيۡرٗا فَإِنَّ ٱللَّهَ شَاكِرٌ عَلِيمٌ

    ನಿಶ್ಚಯವಾಗಿಯೂ ಸಫಾ ಮತ್ತು ಮರ್ವಾ ಅಲ್ಲಾಹನ ಚಿಹ್ನೆಗಳಲ್ಲಿ ಒಳಪಟ್ಟದ್ದಾಗಿವೆ. ಆದ್ದರಿಂದ ಅಲ್ಲಾಹನ ಭವನಕ್ಕೆ ಹಜ್ ಅಥವಾ ಉಮ್ರಾ ಮಾಡುವವರು ಇವುಗಳಿಗೆ ಪ್ರದಕ್ಷಿಣೆ ಮಾಡುವುದರಲ್ಲಿ ಯಾವುದೇ ದೋಷವಿಲ್ಲ.[1] ಸ್ವಯಂಪ್ರೇರಿತವಾಗಿ ಒಳಿತು ಮಾಡುವವರನ್ನು ಅಲ್ಲಾಹು ಮೆಚ್ಚುತ್ತಾನೆ ಮತ್ತು ಅವರ ಬಗ್ಗೆ ಅವನು ಚೆನ್ನಾಗಿ ತಿಳಿದಿದ್ದಾನೆ.

    [1] ಇಸ್ಲಾಂ ಸ್ವೀಕರಿಸುವ ಮೊದಲು ಮದೀನದ ಅನ್ಸಾರಿಗಳು ಮನಾತ್ ಎಂಬ ವಿಗ್ರಹದ ಹೆಸರಲ್ಲಿ ತಲ್ಬಿಯತ್ ಹೇಳುತ್ತಿದ್ದರು. ಅವರು ಪರ್ವತಗಳ ಮೇಲೆ ಅದನ್ನು ಪೂಜಿಸುತ್ತಿದ್ದರು. ಅವರು ಹಜ್ ನಿರ್ವಹಿಸಲು ಮಕ್ಕಾಗೆ ಬಂದರೆ ಸಫಾ ಮತ್ತು ಮರ್ವಾದ ನಡುವೆ ಸಈ ಮಾಡುವುದನ್ನು ಪಾಪವೆಂದು ಪರಿಗಣಿಸುತ್ತಿದ್ದರು. ಮುಸ್ಲಿಮರಾದ ಬಳಿಕ ಅವರು ಇದರ ಬಗ್ಗೆ ಪ್ರವಾದಿಯವರಲ್ಲಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿಚಾರಿಸಿದಾಗ ಈ ವಚನವು ಅವತೀರ್ಣವಾಯಿತು.

    ೧೫೯

    إِنَّ ٱلَّذِينَ يَكۡتُمُونَ مَآ أَنزَلۡنَا مِنَ ٱلۡبَيِّنَٰتِ وَٱلۡهُدَىٰ مِنۢ بَعۡدِ مَا بَيَّنَّٰهُ لِلنَّاسِ فِي ٱلۡكِتَٰبِ أُوْلَٰٓئِكَ يَلۡعَنُهُمُ ٱللَّهُ وَيَلۡعَنُهُمُ ٱللَّٰعِنُونَ

    ನಾವು ಅವತೀರ್ಣಗೊಳಿಸಿದ ಸಾಕ್ಷ್ಯಾಧಾರಗಳನ್ನು ಮತ್ತು ಸನ್ಮಾರ್ಗವನ್ನು—ಅದನ್ನು ನಾವು ಗ್ರಂಥದಲ್ಲಿ ಜನರಿಗೆ ವಿವರಿಸಿಕೊಟ್ಟ ಬಳಿಕವೂ—ಬಚ್ಚಿಡುವವರು ಯಾರೋ ಅವರ ಮೇಲೆ ಅಲ್ಲಾಹನ ಶಾಪವಿದೆ; ಶಪಿಸುವವರೆಲ್ಲರ ಶಾಪವೂ ಇದೆ.

    ೧೬೦

    إِلَّا ٱلَّذِينَ تَابُواْ وَأَصۡلَحُواْ وَبَيَّنُواْ فَأُوْلَٰٓئِكَ أَتُوبُ عَلَيۡهِمۡ وَأَنَا ٱلتَّوَّابُ ٱلرَّحِيمُ

    ಆದರೆ ಪಶ್ಚಾತ್ತಾಪಪಡುವವರು, ಸರಿಪಡಿಸುವವರು ಮತ್ತು ವಿವರಿಸಿಕೊಡುವವರು ಯಾರೋ (ಅವರು ಇದಕ್ಕೆ ಹೊರತಾಗಿದ್ದಾರೆ). ಅವರ ಪಶ್ಚಾತ್ತಾಪವನ್ನು ನಾನು ಸ್ವೀಕರಿಸುತ್ತೇನೆ. ನಾನು ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ಕರುಣೆ ತೋರುವವನಾಗಿದ್ದೇನೆ.

    ೧೬೧

    إِنَّ ٱلَّذِينَ كَفَرُواْ وَمَاتُواْ وَهُمۡ كُفَّارٌ أُوْلَٰٓئِكَ عَلَيۡهِمۡ لَعۡنَةُ ٱللَّهِ وَٱلۡمَلَٰٓئِكَةِ وَٱلنَّاسِ أَجۡمَعِينَ

    ನಿಶ್ಚಯವಾಗಿಯೂ ಸತ್ಯನಿಷೇಧಿಗಳು ಮತ್ತು ಸತ್ಯನಿಷೇಧಿಗಳಾಗಿಯೇ ಸಾಯುವವರು ಯಾರೋ ಅವರ ಮೇಲೆ ಅಲ್ಲಾಹನ, ದೇವದೂತರುಗಳ ಮತ್ತು ಮನುಷ್ಯರೆಲ್ಲರ ಶಾಪವಿದೆ.

    ೧೬೨

    خَٰلِدِينَ فِيهَا لَا يُخَفَّفُ عَنۡهُمُ ٱلۡعَذَابُ وَلَا هُمۡ يُنظَرُونَ

    ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅವರಿಗೆ ಶಿಕ್ಷೆಯಲ್ಲಿ ರಿಯಾಯಿತಿಯಿಲ್ಲ ಮತ್ತು ಅವರಿಗೆ ವಿರಾಮವನ್ನೂ ನೀಡಲಾಗುವುದಿಲ್ಲ.

    ೧೬೩

    وَإِلَٰهُكُمۡ إِلَٰهٞ وَٰحِدٞۖ لَّآ إِلَٰهَ إِلَّا هُوَ ٱلرَّحۡمَٰنُ ٱلرَّحِيمُ

    ನಿಮ್ಮ ದೇವನು ಏಕೈಕ ದೇವನು. ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಅವನು ಪರಮ ದಯಾಳು ಮತ್ತು ಕರುಣಾನಿಧಿಯಾಗಿದ್ದಾನೆ.

    ೧೬೪

    إِنَّ فِي خَلۡقِ ٱلسَّمَٰوَٰتِ وَٱلۡأَرۡضِ وَٱخۡتِلَٰفِ ٱلَّيۡلِ وَٱلنَّهَارِ وَٱلۡفُلۡكِ ٱلَّتِي تَجۡرِي فِي ٱلۡبَحۡرِ بِمَا يَنفَعُ ٱلنَّاسَ وَمَآ أَنزَلَ ٱللَّهُ مِنَ ٱلسَّمَآءِ مِن مَّآءٖ فَأَحۡيَا بِهِ ٱلۡأَرۡضَ بَعۡدَ مَوۡتِهَا وَبَثَّ فِيهَا مِن كُلِّ دَآبَّةٖ وَتَصۡرِيفِ ٱلرِّيَٰحِ وَٱلسَّحَابِ ٱلۡمُسَخَّرِ بَيۡنَ ٱلسَّمَآءِ وَٱلۡأَرۡضِ لَأٓيَٰتٖ لِّقَوۡمٖ يَعۡقِلُونَ

    ನಿಶ್ಚಯವಾಗಿಯೂ ಭೂಮ್ಯಾಕಾಶಗಳ ಸೃಷ್ಟಿಯಲ್ಲಿ, ರಾತ್ರಿ-ಹಗಲುಗಳ ಬದಲಾವಣೆಯಲ್ಲಿ, ಜನರಿಗೆ ಉಪಕರಿಸುವ ವಸ್ತುಗಳೊಂದಿಗೆ ಸಮುದ್ರದಲ್ಲಿ ಚಲಿಸುವ ನಾವೆಗಳಲ್ಲಿ, ಅಲ್ಲಾಹು ಆಕಾಶದಿಂದ ಮಳೆಯನ್ನು ಸುರಿಸಿ ಅದರ ಮೂಲಕ ನಿರ್ಜೀವ ಭೂಮಿಗೆ ಜೀವ ನೀಡುವುದರಲ್ಲಿ, ಭೂಮಿಯಲ್ಲಿ ಎಲ್ಲಾ ರೀತಿಯ ಜೀವಿಗಳನ್ನು ಹಬ್ಬಿಸಿರುವುದರಲ್ಲಿ, ಗಾಳಿಯು ದಿಕ್ಕನ್ನು ಬದಲಿಸುವುದರಲ್ಲಿ ಮತ್ತು ಭೂಮ್ಯಾಕಾಶಗಳ ನಡುವೆ ನಿಯಂತ್ರಿಸಲಾಗುವ ಮೋಡಗಳಲ್ಲಿ ಆಲೋಚಿಸುವ ಜನರಿಗೆ ಹಲವಾರು ದೃಷ್ಟಾಂತಗಳಿವೆ.

    ೧೬೫

    وَمِنَ ٱلنَّاسِ مَن يَتَّخِذُ مِن دُونِ ٱللَّهِ أَندَادٗا يُحِبُّونَهُمۡ كَحُبِّ ٱللَّهِۖ وَٱلَّذِينَ ءَامَنُوٓاْ أَشَدُّ حُبّٗا لِّلَّهِۗ وَلَوۡ يَرَى ٱلَّذِينَ ظَلَمُوٓاْ إِذۡ يَرَوۡنَ ٱلۡعَذَابَ أَنَّ ٱلۡقُوَّةَ لِلَّهِ جَمِيعٗا وَأَنَّ ٱللَّهَ شَدِيدُ ٱلۡعَذَابِ

    ಅಲ್ಲಾಹನಿಗೆ ಇತರರನ್ನು ಸರಿಸಾಟಿಯಾಗಿ ಮಾಡುವ ಕೆಲವರಿದ್ದಾರೆ. ಅಲ್ಲಾಹನನ್ನು ಪ್ರೀತಿಸುವಂತೆಯೇ ಅವರು ಅವರನ್ನೂ ಪ್ರೀತಿಸುತ್ತಾರೆ. ಆದರೆ ಸತ್ಯವಿಶ್ವಾಸಿಗಳು ಅಲ್ಲಾಹನನ್ನು (ಎಲ್ಲಕ್ಕಿಂತಲೂ) ಗಾಢವಾಗಿ ಪ್ರೀತಿಸುತ್ತಾರೆ.[1] ಅಕ್ರಮಿಗಳು (ಅಲ್ಲಾಹನ) ಶಿಕ್ಷೆಯನ್ನು ನೇರವಾಗಿ ನೋಡುವಾಗ, ಶಕ್ತಿ-ಸಾಮರ್ಥ್ಯವಿರುವುದು ಸಂಪೂರ್ಣವಾಗಿ ಅಲ್ಲಾಹನಿಗೆ ಮಾತ್ರ; ಮತ್ತು ಅಲ್ಲಾಹು ಅತಿಕಠೋರವಾಗಿ ಶಿಕ್ಷಿಸುತ್ತಾನೆಂದು ತಿಳಿಯುತ್ತಿದ್ದರೆ (ಎಷ್ಟು ಚೆನ್ನಾಗಿತ್ತು)!

    [1] ಮಕ್ಕಾದ ಬಹುದೇವ ವಿಶ್ವಾಸಿಗಳು ಅಲ್ಲಾಹನಿಗೆ ಸಹಭಾಗಿಗಳನ್ನು ಕಲ್ಪಿಸಿಕೊಂಡು ಅವರನ್ನು ಆರಾಧಿಸುತ್ತಿದ್ದರು. ಅಲ್ಲಾಹನನ್ನು ಪ್ರೀತಿಸುವಂತೆಯೇ ಅವರು ಆ ದೇವರುಗಳನ್ನು ಕೂಡ ಪ್ರೀತಿಸುತ್ತಿದ್ದರು. ಈ ಸನ್ನಿವೇಶವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಾಲಕ್ಕೆ ಮಾತ್ರ ಸೀಮಿತವಲ್ಲ. ಆಧುನಿಕ ಕಾಲದಲ್ಲೂ ಇದನ್ನು ಕಾಣಬಹುದಾಗಿದೆ. ತಮ್ಮನ್ನು ಮುಸ್ಲಿಮರೆಂದು ಕರೆಯುವವರಲ್ಲೂ ಈ ರೋಗವು ಕಾಣಿಸಿಕೊಂಡಿದೆ. ಅವರು ಅಲ್ಲಾಹನನ್ನು ಬಿಟ್ಟು ಮಹಾಪುರುಷರು ಮತ್ತು ಅವರ ಸಮಾಧಿಗಳನ್ನು ಆರಾಧಿಸುತ್ತಾರೆ. ಅಲ್ಲಾಹನನ್ನು ಮಾತ್ರ ಆರಾಧಿಸಿರಿ ಎಂದು ಹೇಳಿದರೆ ಮಕ್ಕಾದ ಬಹುದೇವ ವಿಶ್ವಾಸಿಗಳಂತೆ ಇವರಿಗೂ ಕೂಡ ಕೋಪ ಬರುತ್ತದೆ.

    ೧೬೬

    إِذۡ تَبَرَّأَ ٱلَّذِينَ ٱتُّبِعُواْ مِنَ ٱلَّذِينَ ٱتَّبَعُواْ وَرَأَوُاْ ٱلۡعَذَابَ وَتَقَطَّعَتۡ بِهِمُ ٱلۡأَسۡبَابُ

    ಮುಖಂಡರು ತಮ್ಮ ಹಿಂಬಾಲಕರಿಂದ ದೂರ ಸರಿಯುವಾಗ, ಅವರೆಲ್ಲರೂ ಶಿಕ್ಷೆಯನ್ನು ನೇರವಾಗಿ ನೋಡುವಾಗ ಮತ್ತು ಅವರ ನಡುವಿನ ಸಂಬಂಧಗಳು ಕಳಚಿ ಬೀಳುವಾಗ!

    ೧೬೭

    وَقَالَ ٱلَّذِينَ ٱتَّبَعُواْ لَوۡ أَنَّ لَنَا كَرَّةٗ فَنَتَبَرَّأَ مِنۡهُمۡ كَمَا تَبَرَّءُواْ مِنَّاۗ كَذَٰلِكَ يُرِيهِمُ ٱللَّهُ أَعۡمَٰلَهُمۡ حَسَرَٰتٍ عَلَيۡهِمۡۖ وَمَا هُم بِخَٰرِجِينَ مِنَ ٱلنَّارِ

    ಹಿಂಬಾಲಕರು ಹೇಳುವರು: “ನಮಗೆ (ಇಹಲೋಕಕ್ಕೆ) ಮರಳುವ ಇನ್ನೊಂದು ಅವಕಾಶವು ಸಿಗುತ್ತಿದ್ದರೆ, ಅವರು ನಮ್ಮಿಂದ ದೂರವಾದಂತೆ ನಾವೂ ಅವರಿಂದ ದೂರವಾಗುವೆವು.” ಈ ರೀತಿ ಅಲ್ಲಾಹು ಅವರ ಕರ್ಮಗಳನ್ನು ಅವರಿಗೆ ವಿಷಾದವಾಗುವ ರೀತಿಯಲ್ಲಿ ತೋರಿಸುವನು. ಅವರು ನರಕಾಗ್ನಿಯಿಂದ ಹೊರಹೋಗುವುದೇ ಇಲ್ಲ.

    ೧೬೮

    يَٰٓأَيُّهَا ٱلنَّاسُ كُلُواْ مِمَّا فِي ٱلۡأَرۡضِ حَلَٰلٗا طَيِّبٗا وَلَا تَتَّبِعُواْ خُطُوَٰتِ ٱلشَّيۡطَٰنِۚ إِنَّهُۥ لَكُمۡ عَدُوّٞ مُّبِينٌ

    ಓ ಜನರೇ! ಭೂಮಿಯಲ್ಲಿರುವ ಧರ್ಮಸಮ್ಮತವಾದ ಮತ್ತು ಶುದ್ಧವಾದ ಆಹಾರವನ್ನು ತಿನ್ನಿರಿ. ಶೈತಾನನ ಹೆಜ್ಜೆಗಳನ್ನು ಹಿಂಬಾಲಿಸಬೇಡಿ. ನಿಶ್ಚಯವಾಗಿಯೂ ಅವನು ನಿಮ್ಮ ಪ್ರತ್ಯಕ್ಷ ವೈರಿಯಾಗಿದ್ದಾನೆ.

    ೧೬೯

    إِنَّمَا يَأۡمُرُكُم بِٱلسُّوٓءِ وَٱلۡفَحۡشَآءِ وَأَن تَقُولُواْ عَلَى ٱللَّهِ مَا لَا تَعۡلَمُونَ

    ಅವನು ನಿಮಗೆ ಕೆಡುಕು ಮತ್ತು ಅಶ್ಲೀಲತೆಗಳನ್ನು ಮಾಡಲು ಹಾಗೂ ಅಲ್ಲಾಹನ ವಿಷಯದಲ್ಲಿ ನಿಮಗೆ ಗೊತ್ತಿಲ್ಲದ್ದನ್ನು ಹೇಳಲು ಆದೇಶಿಸುತ್ತಾನೆ.

    ೧೭೦

    وَإِذَا قِيلَ لَهُمُ ٱتَّبِعُواْ مَآ أَنزَلَ ٱللَّهُ قَالُواْ بَلۡ نَتَّبِعُ مَآ أَلۡفَيۡنَا عَلَيۡهِ ءَابَآءَنَآۚ أَوَلَوۡ كَانَ ءَابَآؤُهُمۡ لَا يَعۡقِلُونَ شَيۡـٔٗا وَلَا يَهۡتَدُونَ

    “ಅಲ್ಲಾಹು ಅವತೀರ್ಣಗೊಳಿಸಿದ್ದನ್ನು ಅನುಸರಿಸಿರಿ” ಎಂದು ಅವರೊಡನೆ ಹೇಳಲಾದರೆ, ಅವರು ಹೇಳುತ್ತಾರೆ: “ಇಲ್ಲ, ನಮ್ಮ ಪೂರ್ವಜರು ಯಾವ ಮಾರ್ಗದಲ್ಲಿರುವುದನ್ನು ನಾವು ಕಂಡೆವೋ ಅದನ್ನೇ ನಾವು ಅನುಸರಿಸುತ್ತೇವೆ.”[1] ಅವರ ಪೂರ್ವಜರು ಏನೂ ತಿಳಿಯದವರು ಮತ್ತು ಸನ್ಮಾರ್ಗ ಪಡೆಯದವರಾಗಿದ್ದರೂ ಸಹ.

    [1] ಇಂತಹ ಜನರು ಇಂದು ಕೂಡ ಇದ್ದಾರೆ. ಧರ್ಮದಲ್ಲಿ ಯಾವುದೇ ಪುರಾವೆಯಿಲ್ಲದ ನವೀನಾಚಾರಗಳನ್ನು ತೊರೆಯಿರಿ ಎಂದು ಅವರೊಡನೆ ಹೇಳಿದರೆ, ಇವೆಲ್ಲವನ್ನೂ ನಮ್ಮ ಪೂರ್ವಜರು ಆಚರಿಸುತ್ತಿದ್ದರು; ನಾವು ಅವರನ್ನು ಹಿಂಬಾಲಿಸಿ ಅವರ ಮಾರ್ಗದಲ್ಲಿ ಚಲಿಸುತ್ತೇವೆ ಎಂದು ಅವರು ಹೇಳುತ್ತಾರೆ.

    ೧೭೧

    وَمَثَلُ ٱلَّذِينَ كَفَرُواْ كَمَثَلِ ٱلَّذِي يَنۡعِقُ بِمَا لَا يَسۡمَعُ إِلَّا دُعَآءٗ وَنِدَآءٗۚ صُمُّۢ بُكۡمٌ عُمۡيٞ فَهُمۡ لَا يَعۡقِلُونَ

    ಸತ್ಯನಿಷೇಧಿಗಳ ಉದಾಹರಣೆಯು ಕರೆ ಮತ್ತು ಕೂಗನ್ನು ಮಾತ್ರ ಕೇಳುವ ಜಾನುವಾರುಗಳ ಮುಂದೆ ಕಿರಿಚುವ ವ್ಯಕ್ತಿಯಂತೆ. ಅವರು ಕಿವುಡರು, ಮೂಕರು ಮತ್ತು ಕುರುಡರು. ಆದ್ದರಿಂದ ಅವರು ಅರ್ಥಮಾಡಿಕೊಳ್ಳುವುದಿಲ್ಲ.

    ೧೭೨

    يَٰٓأَيُّهَا ٱلَّذِينَ ءَامَنُواْ كُلُواْ مِن طَيِّبَٰتِ مَا رَزَقۡنَٰكُمۡ وَٱشۡكُرُواْ لِلَّهِ إِن كُنتُمۡ إِيَّاهُ تَعۡبُدُونَ

    ಓ ಸತ್ಯವಿಶ್ವಾಸಿಗಳೇ! ನಾವು ನಿಮಗೆ ನೀಡಿದ ಶುದ್ಧ ವಸ್ತುಗಳಿಂದ ತಿನ್ನಿರಿ ಮತ್ತು ಅಲ್ಲಾಹನಿಗೆ ಕೃತಜ್ಞರಾಗಿರಿ; ನೀವು ಅವನನ್ನು ಮಾತ್ರ ಆರಾಧಿಸುವವರಾಗಿದ್ದರೆ.

    ೧೭೩

    إِنَّمَا حَرَّمَ عَلَيۡكُمُ ٱلۡمَيۡتَةَ وَٱلدَّمَ وَلَحۡمَ ٱلۡخِنزِيرِ وَمَآ أُهِلَّ بِهِۦ لِغَيۡرِ ٱللَّهِۖ فَمَنِ ٱضۡطُرَّ غَيۡرَ بَاغٖ وَلَا عَادٖ فَلَآ إِثۡمَ عَلَيۡهِۚ إِنَّ ٱللَّهَ غَفُورٞ رَّحِيمٌ

    ಅವನು ನಿಮಗೆ ಶವ, ರಕ್ತ, ಹಂದಿ ಮಾಂಸ ಮತ್ತು ಅಲ್ಲಾಹೇತರರ ಹೆಸರನ್ನು ಘೋಷಿಸಲಾದ ವಸ್ತುಗಳನ್ನು ಮಾತ್ರ ನಿಷೇಧಿಸಿದ್ದಾನೆ.[1] ಆದರೆ ಯಾರಾದರೂ (ಇವುಗಳನ್ನು ಸೇವಿಸಲು) ನಿರ್ಬಂಧಿತನಾದರೆ ಅವನ ಮೇಲೆ ದೋಷವಿಲ್ಲ. ಆದರೆ ಅವನು ಅಗತ್ಯಕ್ಕಿಂತ ಹೆಚ್ಚು ಸೇವಿಸಬಾರದು ಮತ್ತು (ಅಲ್ಲಾಹು ಅನುಮತಿಸಿದ) ಎಲ್ಲೆಯನ್ನು ಮೀರಬಾರದು. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.

    [1] ಇಲ್ಲಿ ನಾಲ್ಕು ನಿಷೇಧಿತ ವಸ್ತುಗಳ ಬಗ್ಗೆ ಉಲ್ಲೇಖಿಸಲಾಗಿದೆ. ವಚನದಲ್ಲಿ "ಇನ್ನಮಾ" (ಮಾತ್ರ) ಎಂಬ ಪದ ಬಳಸಿರುವುದರಿಂದ ನಿಷೇಧಿತ ವಸ್ತುಗಳು ನಾಲ್ಕಕ್ಕೆ ಮಾತ್ರ ಸೀಮಿತ ಎಂದು ಅರ್ಥ ಮಾಡಿಕೊಳ್ಳಬಾರದು. ನಿಷೇಧಿತ ವಸ್ತುಗಳು ಈ ನಾಲ್ಕಕ್ಕೆ ಸೀಮಿತವಲ್ಲ. ಇದು ಸಂದರ್ಭಕ್ಕೆ ಅನುಗುಣವಾಗಿ ಅವತೀರ್ಣವಾದ ವಚನವಾಗಿರುವುದರಿಂದ ಇದರಲ್ಲಿ ನಾಲ್ಕು ವಸ್ತುಗಳನ್ನು ಮಾತ್ರ ನಿಷಿದ್ಧವೆಂದು ಹೇಳಲಾಗಿದೆ.

    ೧೭೪

    إِنَّ ٱلَّذِينَ يَكۡتُمُونَ مَآ أَنزَلَ ٱللَّهُ مِنَ ٱلۡكِتَٰبِ وَيَشۡتَرُونَ بِهِۦ ثَمَنٗا قَلِيلًا أُوْلَٰٓئِكَ مَا يَأۡكُلُونَ فِي بُطُونِهِمۡ إِلَّا ٱلنَّارَ وَلَا يُكَلِّمُهُمُ ٱللَّهُ يَوۡمَ ٱلۡقِيَٰمَةِ وَلَا يُزَكِّيهِمۡ وَلَهُمۡ عَذَابٌ أَلِيمٌ

    ನಿಶ್ಚಯವಾಗಿಯೂ ಅಲ್ಲಾಹು ಅವತೀರ್ಣಗೊಳಿಸಿದ ಗ್ರಂಥವನ್ನು ಬಚ್ಚಿಡುವವರು ಮತ್ತು ಅದನ್ನು ಅಲ್ಪ ಬೆಲೆಗೆ ಮಾರುವವರು ಯಾರೋ—ಅವರು ತಮ್ಮ ಉದರಗಳಲ್ಲಿ ಅಗ್ನಿಯನ್ನಲ್ಲದೆ ಬೇರೇನನ್ನೂ ತುಂಬಿಸುವುದಿಲ್ಲ. ಪುನರುತ್ಥಾನ ದಿನದಂದು ಅಲ್ಲಾಹು ಅವರೊಡನೆ ಮಾತನಾಡುವುದಿಲ್ಲ ಮತ್ತು ಅವರನ್ನು ಶುದ್ಧೀಕರಿಸುವುದಿಲ್ಲ. ಅವರಿಗೆ ಯಾತನಾಮಯ ಶಿಕ್ಷೆಯಿದೆ.

    ೧೭೫

    أُوْلَٰٓئِكَ ٱلَّذِينَ ٱشۡتَرَوُاْ ٱلضَّلَٰلَةَ بِٱلۡهُدَىٰ وَٱلۡعَذَابَ بِٱلۡمَغۡفِرَةِۚ فَمَآ أَصۡبَرَهُمۡ عَلَى ٱلنَّارِ

    ಅವರೇ ಸನ್ಮಾರ್ಗದ ಬದಲಿಗೆ ದುರ್ಮಾರ್ಗವನ್ನು ಮತ್ತು ಕ್ಷಮೆಯ ಬದಲಿಗೆ ಶಿಕ್ಷೆಯನ್ನು ಖರೀದಿಸಿದವರು. ಅವರು ನರಕ ಶಿಕ್ಷೆಯನ್ನು ಎಷ್ಟರಮಟ್ಟಿಗೆ ಸಹಿಸಿಕೊಳ್ಳುವರು!

    ೧೭೬

    ذَٰلِكَ بِأَنَّ ٱللَّهَ نَزَّلَ ٱلۡكِتَٰبَ بِٱلۡحَقِّۗ وَإِنَّ ٱلَّذِينَ ٱخۡتَلَفُواْ فِي ٱلۡكِتَٰبِ لَفِي شِقَاقِۭ بَعِيدٖ

    ಅದೇಕೆಂದರೆ, ಅಲ್ಲಾಹು ಗ್ರಂಥವನ್ನು ಸತ್ಯ ಸಮೇತ ಅವತೀರ್ಣಗೊಳಿಸಿದ್ದನು. ಗ್ರಂಥದ ವಿಷಯದಲ್ಲಿ ಭಿನ್ನಮತದಲ್ಲಿರುವವರು ವಿದೂರ ಮನಸ್ತಾಪದಲ್ಲಿದ್ದಾರೆ.

    ೧೭೭

    ۞ لَّيۡسَ ٱلۡبِرَّ أَن تُوَلُّواْ وُجُوهَكُمۡ قِبَلَ ٱلۡمَشۡرِقِ وَٱلۡمَغۡرِبِ وَلَٰكِنَّ ٱلۡبِرَّ مَنۡ ءَامَنَ بِٱللَّهِ وَٱلۡيَوۡمِ ٱلۡأٓخِرِ وَٱلۡمَلَٰٓئِكَةِ وَٱلۡكِتَٰبِ وَٱلنَّبِيِّـۧنَ وَءَاتَى ٱلۡمَالَ عَلَىٰ حُبِّهِۦ ذَوِي ٱلۡقُرۡبَىٰ وَٱلۡيَتَٰمَىٰ وَٱلۡمَسَٰكِينَ وَٱبۡنَ ٱلسَّبِيلِ وَٱلسَّآئِلِينَ وَفِي ٱلرِّقَابِ وَأَقَامَ ٱلصَّلَوٰةَ وَءَاتَى ٱلزَّكَوٰةَ وَٱلۡمُوفُونَ بِعَهۡدِهِمۡ إِذَا عَٰهَدُواْۖ وَٱلصَّٰبِرِينَ فِي ٱلۡبَأۡسَآءِ وَٱلضَّرَّآءِ وَحِينَ ٱلۡبَأۡسِۗ أُوْلَٰٓئِكَ ٱلَّذِينَ صَدَقُواْۖ وَأُوْلَٰٓئِكَ هُمُ ٱلۡمُتَّقُونَ

    ಒಳಿತು ಎಂದರೆ ನೀವು ನಿಮ್ಮ ಮುಖಗಳನ್ನು ಪೂರ್ವಕ್ಕೆ ಅಥವಾ ಪಶ್ಚಿಮಕ್ಕೆ ತಿರುಗಿಸುವುದಲ್ಲ. ಬದಲಿಗೆ, ಒಳಿತಿನಲ್ಲಿರುವವನು ಯಾರೆಂದರೆ ಅಲ್ಲಾಹನಲ್ಲಿ, ಅಂತ್ಯದಿನದಲ್ಲಿ, ದೇವದೂತರುಗಳಲ್ಲಿ, ಗ್ರಂಥದಲ್ಲಿ ಮತ್ತು ಪ್ರವಾದಿಗಳಲ್ಲಿ ವಿಶ್ವಾಸವಿಡುವವನು, ಧನದ ಮೇಲೆ ಪ್ರೀತಿಯಿದ್ದೂ ಸಹ ಅದನ್ನು ಸಂಬಂಧಿಕರಿಗೆ, ಅನಾಥರಿಗೆ, ನಿರ್ಗತಿಕರಿಗೆ, ದಾರಿಹೋಕನಿಗೆ, ಬೇಡುವವರಿಗೆ ಮತ್ತು ಗುಲಾಮ ವಿಮೋಚನೆಗೆ ಖರ್ಚು ಮಾಡುವವನು, ನಮಾಝನ್ನು ಸಂಸ್ಥಾಪಿಸುವವನು, ಝಕಾತ್ ನೀಡುವವನು, ಕರಾರು ಮಾಡಿದರೆ ಅದನ್ನು ನೆರವೇರಿಸುವವನು ಮತ್ತು ಬಡತನ, ಸಂಕಷ್ಟ ಹಾಗೂ ಯುದ್ಧಗಳ ಸಂದರ್ಭಗಳಲ್ಲಿ ತಾಳ್ಮೆಯಿಂದಿರುವವರು. ಅವರೇ (ನಿಜವಾದ) ಸತ್ಯವಂತರು ಮತ್ತು ಅವರೇ ದೇವಭಯವುಳ್ಳವರು.

    ೧೭೮

    يَٰٓأَيُّهَا ٱلَّذِينَ ءَامَنُواْ كُتِبَ عَلَيۡكُمُ ٱلۡقِصَاصُ فِي ٱلۡقَتۡلَىۖ ٱلۡحُرُّ بِٱلۡحُرِّ وَٱلۡعَبۡدُ بِٱلۡعَبۡدِ وَٱلۡأُنثَىٰ بِٱلۡأُنثَىٰۚ فَمَنۡ عُفِيَ لَهُۥ مِنۡ أَخِيهِ شَيۡءٞ فَٱتِّبَاعُۢ بِٱلۡمَعۡرُوفِ وَأَدَآءٌ إِلَيۡهِ بِإِحۡسَٰنٖۗ ذَٰلِكَ تَخۡفِيفٞ مِّن رَّبِّكُمۡ وَرَحۡمَةٞۗ فَمَنِ ٱعۡتَدَىٰ بَعۡدَ ذَٰلِكَ فَلَهُۥ عَذَابٌ أَلِيمٞ

    ಓ ಸತ್ಯವಿಶ್ವಾಸಿಗಳೇ! ಕೊಲೆಯಾದವರ ವಿಷಯದಲ್ಲಿ ಪ್ರತೀಕಾರ ಪಡೆಯುವುದನ್ನು ನಿಮಗೆ ಕಡ್ಡಾಯಗೊಳಿಸಲಾಗಿದೆ. ಸ್ವತಂತ್ರನ ಬದಲಿಗೆ ಸ್ವತಂತ್ರ, ಗುಲಾಮನ ಬದಲಿಗೆ ಗುಲಾಮ ಮತ್ತು ಹೆಣ್ಣಿನ ಬದಲಿಗೆ ಹೆಣ್ಣು. ಯಾರಿಗಾದರೂ ಅವನ ಸಹೋದರನ (ಕೊಲೆಯಾದವನ) ಕಡೆಯಿಂದ ಮಾಫಿ ನೀಡಲಾದರೆ, ಅವನು ಸ್ವೀಕಾರಾರ್ಹ ರೀತಿಯನ್ನು ಅನುಸರಿಸಲಿ ಮತ್ತು ಒಳ್ಳೆಯ ರೀತಿಯಲ್ಲಿ ಪರಿಹಾರವನ್ನು ನೀಡಲಿ. ಅದು ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ರಿಯಾಯಿತಿ ಮತ್ತು ದಯೆಯಾಗಿದೆ. ಅದರ ನಂತರವೂ ಯಾರಾದರೂ ಅತಿರೇಕವೆಸಗಿದರೆ ಅವನಿಗೆ ವೇದನಾಭರಿತ ಶಿಕ್ಷೆಯಿದೆ.

    ೧೭೯

    وَلَكُمۡ فِي ٱلۡقِصَاصِ حَيَوٰةٞ يَٰٓأُوْلِي ٱلۡأَلۡبَٰبِ لَعَلَّكُمۡ تَتَّقُونَ

    ಓ ಬುದ್ಧಿವಂತರೇ! ಪ್ರತೀಕಾರ ಪಡೆಯುವುದರಲ್ಲಿ ನಿಮಗೆ ಜೀವನವಿದೆ. ನೀವು ದೇವಭಯವುಳ್ಳವರಾಗುವುದಕ್ಕಾಗಿ.[1]

    [1] ಕೊಲೆ ಮಾಡುವವನಿಗೆ ಪ್ರತೀಕಾರ ನಿಯಮದ ಮೂಲಕ ತಾನೂ ಕೊಲೆಯಾಗುವೆನು ಎಂಬ ಭಯ ಮೂಡಿದರೆ ಅವನು ಕೊಲೆ ಮಾಡುವ ಮೊದಲು ಸಾವಿರ ಬಾರಿ ಯೋಚಿಸುತ್ತಾನೆ. ಕೊಲೆಗೆ ಕೊಲೆಯೆಂಬ ಪ್ರತೀಕಾರ ನಿಯಮವನ್ನು ಜಾರಿಗೊಳಿಸಿದರೆ ಆ ಸಮಾಜವು ಕೊಲೆಗಳಿಂದ ಸಂಪೂರ್ಣ ಮುಕ್ತವಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಇಂದು ಜನರು ಹೆಚ್ಚಾಗಿ ಕೊಲೆ ಮಾಡುವುದು ಕಾನೂನಿನಿಂದ ಸುಲಭವಾಗಿ ಪಾರಾಗಲು ಸಾಧ್ಯವಿದೆ ಎಂಬ ಭರವಸೆಯಿಂದಲೇ ಆಗಿದೆ.

    ೧೮೦

    كُتِبَ عَلَيۡكُمۡ إِذَا حَضَرَ أَحَدَكُمُ ٱلۡمَوۡتُ إِن تَرَكَ خَيۡرًا ٱلۡوَصِيَّةُ لِلۡوَٰلِدَيۡنِ وَٱلۡأَقۡرَبِينَ بِٱلۡمَعۡرُوفِۖ حَقًّا عَلَى ٱلۡمُتَّقِينَ

    ನಿಮ್ಮಲ್ಲೊಬ್ಬರಿಗೆ ಮರಣವು ಆಸನ್ನವಾಗಿ ಅವನು ಆಸ್ತಿಯನ್ನು ಬಿಟ್ಟು ಹೋಗುವುದಾದರೆ, ತಂದೆ-ತಾಯಿಗೆ ಮತ್ತು ನಿಕಟ ಸಂಬಂಧಿಕರಿಗೆ ಸ್ವೀಕಾರಾರ್ಹ ರೀತಿಯಲ್ಲಿ ಉಯಿಲು ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.[1] ಇದು ದೇವಭಯವುಳ್ಳವರ ಕರ್ತವ್ಯವಾಗಿದೆ.

    [1] ಈ ವಚನವು ಪ್ರತಿಯೊಬ್ಬ ವಾರಿಸುದಾರನಿಗೂ ಅವನ ಹಕ್ಕನ್ನು ನಿಖರವಾಗಿ ನಿಗದಿಪಡಿಸಲಾದ ವಾರಿಸು ಹಕ್ಕಿನ ವಚನವು ಅವತೀರ್ಣವಾಗುವ ಮೊದಲು ಅವತೀರ್ಣವಾಗಿದೆ. ವಾರಿಸು ಹಕ್ಕಿನ ವಚನವು ಅವತೀರ್ಣವಾದ ಬಳಿಕ ಈ ವಚನದಲ್ಲಿರುವ ನಿಯಮವನ್ನು ರದ್ದುಗೊಳಿಸಲಾಗಿದೆ.

    ೧೮೧

    فَمَنۢ بَدَّلَهُۥ بَعۡدَ مَا سَمِعَهُۥ فَإِنَّمَآ إِثۡمُهُۥ عَلَى ٱلَّذِينَ يُبَدِّلُونَهُۥٓۚ إِنَّ ٱللَّهَ سَمِيعٌ عَلِيمٞ

    ಆದರೆ, ಅದನ್ನು (ಉಯಿಲನ್ನು) ಕೇಳಿದ ಬಳಿಕವೂ ಯಾರಾದರೂ ಅದನ್ನು ಬದಲಾಯಿಸಿದರೆ, ಆ ಪಾಪವು ಬದಲಾಯಿಸುವವರಿಗೆ ಮಾತ್ರವಾಗಿದೆ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲವನ್ನೂ ಕೇಳುವವನು ಮತ್ತು ತಿಳಿದವನಾಗಿದ್ದಾನೆ.

    ೧೮೨

    فَمَنۡ خَافَ مِن مُّوصٖ جَنَفًا أَوۡ إِثۡمٗا فَأَصۡلَحَ بَيۡنَهُمۡ فَلَآ إِثۡمَ عَلَيۡهِۚ إِنَّ ٱللَّهَ غَفُورٞ رَّحِيمٞ

    ಆದರೆ, ಉಯಿಲು ಮಾಡಿದವನಿಂದ ಏನಾದರೂ ತಪ್ಪು ಅಥವಾ ಪಾಪವು ಸಂಭವಿಸಿದೆಯೆಂದು ಹೆದರಿ, ಯಾರಾದರೂ ಸಂಬಂಧಿತ ಕಕ್ಷಿಗಳ ಮಧ್ಯೆ ಸಂಧಾನ ಮಾಡಿದರೆ ಅದರಲ್ಲಿ ಅವರಿಗೆ ದೋಷವಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.

    ೧೮೩

    يَٰٓأَيُّهَا ٱلَّذِينَ ءَامَنُواْ كُتِبَ عَلَيۡكُمُ ٱلصِّيَامُ كَمَا كُتِبَ عَلَى ٱلَّذِينَ مِن قَبۡلِكُمۡ لَعَلَّكُمۡ تَتَّقُونَ

    ಓ ಸತ್ಯವಿಶ್ವಾಸಿಗಳೇ! ನಿಮಗಿಂತ ಮುಂಚಿನವರಿಗೆ ಕಡ್ಡಾಯಗೊಳಿಸಲಾದಂತೆ ನಿಮಗೂ ಉಪವಾಸವನ್ನು ಕಡ್ಡಾಯಗೊಳಿಸಲಾಗಿದೆ. ನೀವು ದೇವಭಯವುಳ್ಳವರಾಗುವುದಕ್ಕಾಗಿ.

    ೧೮೪

    أَيَّامٗا مَّعۡدُودَٰتٖۚ فَمَن كَانَ مِنكُم مَّرِيضًا أَوۡ عَلَىٰ سَفَرٖ فَعِدَّةٞ مِّنۡ أَيَّامٍ أُخَرَۚ وَعَلَى ٱلَّذِينَ يُطِيقُونَهُۥ فِدۡيَةٞ طَعَامُ مِسۡكِينٖۖ فَمَن تَطَوَّعَ خَيۡرٗا فَهُوَ خَيۡرٞ لَّهُۥۚ وَأَن تَصُومُواْ خَيۡرٞ لَّكُمۡ إِن كُنتُمۡ تَعۡلَمُونَ

    ಬೆರಳೆಣಿಕೆಯ ಕೆಲವು ದಿನಗಳು ಮಾತ್ರ. ನಿಮ್ಮಲ್ಲಿ ಯಾರಾದರೂ ಅನಾರೋಗ್ಯದಲ್ಲಿದ್ದರೆ ಅಥವಾ ಪ್ರಯಾಣದಲ್ಲಿದ್ದರೆ ಅವನು ಇತರ ದಿನಗಳಲ್ಲಿ ಆ ಎಣಿಕೆಯನ್ನು ಪೂರ್ತಿ ಮಾಡಲಿ.[1] (ಉಪವಾಸ ಆಚರಿಸಲು) ಸಾಧ್ಯವಾಗುವವರು[2] (ಅದರ ಬದಲಿಗೆ) ಪ್ರಾಯಶ್ಚಿತ್ತವಾಗಿ ಒಬ್ಬ ಬಡವನಿಗೆ ಆಹಾರವನ್ನು ನೀಡಲಿ. ಯಾರಾದರೂ ಸ್ವಯಂ ಪ್ರೇರಣೆಯಿಂದ ಒಳಿತು ಮಾಡಿದರೆ ಅದು ಅವನಿಗೆ ಒಳಿತಾಗಿದೆ. ಆದರೆ ಉಪವಾಸ ಆಚರಿಸುವುದೇ ನಿಮಗೆ ಒಳ್ಳೆಯದು.[3] ನೀವು ತಿಳಿದವರಾಗಿದ್ದರೆ.

    [1] ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸಲು ಸಾಧ್ಯವಾಗದ ರೋಗಿಗಳಿಗೆ ಮತ್ತು ಪ್ರಯಾಣಿಕರಿಗೆ ಉಪವಾಸ ತೊರೆಯಲು ಅನುಮತಿಯಿದೆ. ಅವರು ಆ ಉಪವಾಸಗಳನ್ನು ನಂತರ ನಿರ್ವಹಿಸಿದರೆ ಸಾಕು. [2] ಅಂದರೆ ಬಹಳ ಕಷ್ಟದಿಂದ ಉಪವಾಸ ಆಚರಿಸಲು ಸಾಧ್ಯವಾಗುವವರು. ಉದಾಹರಣೆಗೆ, ವಯೋವೃದ್ಧರು ಮತ್ತು ಗುಣವಾಗುವ ನಿರೀಕ್ಷೆಯಿಲ್ಲದ ಕಾಯಿಲೆಯಿಂದ ಬಳಲುವವರಿಗೆ ಉಪವಾಸ ಆಚರಿಸಲು ಕಷ್ಟವಾಗುವುದಾದರೆ ಅವರು ಉಪವಾಸ ತೊರೆದು ಪರಿಹಾರದ ರೂಪದಲ್ಲಿ ಒಬ್ಬ ಬಡವನಿಗೆ ಅನ್ನದಾನ ಮಾಡಿದರೆ ಸಾಕು. ಆದರೆ ಹೆಚ್ಚಿನ ವ್ಯಾಖ್ಯಾನಕಾರರ ಅಭಿಪ್ರಾಯ ಪ್ರಕಾರ ಉಪವಾಸ ಆಚರಿಸಲು ಸಾಧ್ಯವಾಗುವ ಎಲ್ಲರೂ ಇದರಲ್ಲಿ ಒಳಪಡುತ್ತಾರೆ. ಇಸ್ಲಾಮಿನ ಆರಂಭಕಾಲದಲ್ಲಿ ಜನರಿಗೆ ಉಪವಾಸ ಆಚರಿಸುವ ಅಭ್ಯಾಸವಿಲ್ಲದ್ದರಿಂದ ಉಪವಾಸ ಆಚರಿಸುವುದನ್ನು ತೊರೆದು ಅದರ ಬದಲಿಗೆ ಒಬ್ಬ ಬಡವನಿಗೆ ಅನ್ನದಾನ ಮಾಡುವ ರಿಯಾಯಿತಿ ನೀಡಲಾಗಿತ್ತು. ನಂತರ ಈ ರಿಯಾಯಿತಿಯನ್ನು ರದ್ದುಗೊಳಿಸಿ ಉಪವಾಸ ಆಚರಿಸಲು ಸಾಧ್ಯವಾಗುವ ಎಲ್ಲರಿಗೂ ಉಪವಾಸ ಆಚರಿಸುವುದನ್ನು ಕಡ್ಡಾಯಗೊಳಿಸಲಾಯಿತು. ಆದರೆ ವಯೋವೃದ್ದರಿಗೆ ಮತ್ತು ನಿತ್ಯ ರೋಗಿಗಳಿಗೆ ಉಪವಾಸ ಆಚರಿಸಲು ಕಷ್ಟವಾಗುವುದಾದರೆ ಅದರ ಬದಲಿಗೆ ಪರಿಹಾರ ನೀಡಬಹುದೆಂಬ ನಿಯಮವನ್ನು ಊರ್ಜಿತದಲ್ಲಿರಿಸಲಾಯಿತು. [3] ಒಂದು ಉಪವಾಸಕ್ಕೆ ಪರಿಹಾರವಾಗಿ ಒಬ್ಬ ಬಡವನಿಗೆ ಅನ್ನದಾನ ಮಾಡಬೇಕು. ಆದರೆ ಯಾರಾದರೂ ಒಬ್ಬನಿಗಿಂತ ಹೆಚ್ಚು ಬಡವರಿಗೆ ಅನ್ನದಾನ ಮಾಡುವುದಾದರೆ ಅದು ಅವರಿಗೆ ಒಳಿತಾಗಿದೆ.

    ೧೮೫

    شَهۡرُ رَمَضَانَ ٱلَّذِيٓ أُنزِلَ فِيهِ ٱلۡقُرۡءَانُ هُدٗى لِّلنَّاسِ وَبَيِّنَٰتٖ مِّنَ ٱلۡهُدَىٰ وَٱلۡفُرۡقَانِۚ فَمَن شَهِدَ مِنكُمُ ٱلشَّهۡرَ فَلۡيَصُمۡهُۖ وَمَن كَانَ مَرِيضًا أَوۡ عَلَىٰ سَفَرٖ فَعِدَّةٞ مِّنۡ أَيَّامٍ أُخَرَۗ يُرِيدُ ٱللَّهُ بِكُمُ ٱلۡيُسۡرَ وَلَا يُرِيدُ بِكُمُ ٱلۡعُسۡرَ وَلِتُكۡمِلُواْ ٱلۡعِدَّةَ وَلِتُكَبِّرُواْ ٱللَّهَ عَلَىٰ مَا هَدَىٰكُمۡ وَلَعَلَّكُمۡ تَشۡكُرُونَ

    ರಮದಾನ್ ಎಂದರೆ ಜನರಿಗೆ ಸನ್ಮಾರ್ಗವನ್ನು ತೋರಿಸಿಕೊಡುವ ಮತ್ತು ಸನ್ಮಾರ್ಗ ಹಾಗೂ ಸತ್ಯಾಸತ್ಯತೆಗಳನ್ನು ಬೇರ್ಪಡಿಸುವ ಪುರಾವೆಗಳನ್ನು ಹೊಂದಿರುವ ಪವಿತ್ರ ಕುರ್‌ಆನ್ ಅವತೀರ್ಣವಾದ ತಿಂಗಳು. ಆದ್ದರಿಂದ ನಿಮ್ಮಲ್ಲಿ ಯಾರಾದರೂ ಆ ತಿಂಗಳಿಗೆ ಸಾಕ್ಷಿಯಾದರೆ ಅವನು ಉಪವಾಸವನ್ನು ಆಚರಿಸಲಿ. ಯಾರಾದರೂ ಅನಾರೋಗ್ಯದಲ್ಲಿದ್ದರೆ ಅಥವಾ ಪ್ರಯಾಣದಲ್ಲಿದ್ದರೆ ಅವನು ಇತರ ದಿನಗಳಲ್ಲಿ ಆ ಎಣಿಕೆಯನ್ನು ಪೂರ್ತಿ ಮಾಡಲಿ. ಅಲ್ಲಾಹು ನಿಮಗೆ ಸುಲಭ ಮಾಡಲು ಬಯಸುತ್ತಾನೆ; ಅವನು ನಿಮಗೆ ಕಷ್ಟ ಕೊಡಲು ಬಯಸುವುದಿಲ್ಲ. ನೀವು ಆ ಎಣಿಕೆಯನ್ನು ಪೂರ್ತಿ ಮಾಡಲು, ಅಲ್ಲಾಹು ನಿಮಗೆ ಸನ್ಮಾರ್ಗವನ್ನು ತೋರಿಸಿದ್ದಕ್ಕಾಗಿ ಅವನ ಮಹಾತ್ಮೆಯನ್ನು ಕೊಂಡಾಡಲು ಮತ್ತು ಅವನಿಗೆ ಕೃತಜ್ಞರಾಗಿ ಬದುಕಲು (ಅವನು ಬಯಸುತ್ತಾನೆ).

    ೧೮೬

    وَإِذَا سَأَلَكَ عِبَادِي عَنِّي فَإِنِّي قَرِيبٌۖ أُجِيبُ دَعۡوَةَ ٱلدَّاعِ إِذَا دَعَانِۖ فَلۡيَسۡتَجِيبُواْ لِي وَلۡيُؤۡمِنُواْ بِي لَعَلَّهُمۡ يَرۡشُدُونَ

    ನನ್ನ ದಾಸರು ನಿಮ್ಮೊಂದಿಗೆ ನನ್ನ ಬಗ್ಗೆ ಕೇಳಿದರೆ ನಾನು ಬಹಳ ಹತ್ತಿರದಲ್ಲಿದ್ದೇನೆ (ಎಂದು ಹೇಳಿರಿ). ಪ್ರಾರ್ಥಿಸುವವನು ನನ್ನನ್ನು ಕರೆದು ಪ್ರಾರ್ಥಿಸಿದರೆ ನಾನು ಅವನ ಪ್ರಾರ್ಥನೆಗೆ ಉತ್ತರ ನೀಡುತ್ತೇನೆ. ಆದ್ದರಿಂದ ಅವರು ನನಗೆ ವಿಧೇಯರಾಗಲಿ ಮತ್ತು ನನ್ನಲ್ಲಿ ವಿಶ್ವಾಸವಿಡಲಿ. ಅವರು ಸನ್ಮಾರ್ಗ ಪಡೆಯುವುದಕ್ಕಾಗಿ.

    ೧೮೭

    أُحِلَّ لَكُمۡ لَيۡلَةَ ٱلصِّيَامِ ٱلرَّفَثُ إِلَىٰ نِسَآئِكُمۡۚ هُنَّ لِبَاسٞ لَّكُمۡ وَأَنتُمۡ لِبَاسٞ لَّهُنَّۗ عَلِمَ ٱللَّهُ أَنَّكُمۡ كُنتُمۡ تَخۡتَانُونَ أَنفُسَكُمۡ فَتَابَ عَلَيۡكُمۡ وَعَفَا عَنكُمۡۖ فَٱلۡـَٰٔنَ بَٰشِرُوهُنَّ وَٱبۡتَغُواْ مَا كَتَبَ ٱللَّهُ لَكُمۡۚ وَكُلُواْ وَٱشۡرَبُواْ حَتَّىٰ يَتَبَيَّنَ لَكُمُ ٱلۡخَيۡطُ ٱلۡأَبۡيَضُ مِنَ ٱلۡخَيۡطِ ٱلۡأَسۡوَدِ مِنَ ٱلۡفَجۡرِۖ ثُمَّ أَتِمُّواْ ٱلصِّيَامَ إِلَى ٱلَّيۡلِۚ وَلَا تُبَٰشِرُوهُنَّ وَأَنتُمۡ عَٰكِفُونَ فِي ٱلۡمَسَٰجِدِۗ تِلۡكَ حُدُودُ ٱللَّهِ فَلَا تَقۡرَبُوهَاۗ كَذَٰلِكَ يُبَيِّنُ ٱللَّهُ ءَايَٰتِهِۦ لِلنَّاسِ لَعَلَّهُمۡ يَتَّقُونَ

    ಉಪವಾಸದ ರಾತ್ರಿಯಲ್ಲಿ ನಿಮ್ಮ ಪತ್ನಿಯರೊಂದಿಗೆ ಲೈಂಗಿಕ ಸಂಪರ್ಕ ಮಾಡುವುದನ್ನು ನಿಮಗೆ ಅನುಮತಿಸಲಾಗಿದೆ. ಅವರು ನಿಮ್ಮ ಉಡುಪಾಗಿದ್ದಾರೆ ಮತ್ತು ನೀವು ಅವರ ಉಡುಪಾಗಿದ್ದೀರಿ. ನೀವು ನಿಮ್ಮ ಆತ್ಮಗಳನ್ನು ವಂಚಿಸುತ್ತಿದ್ದೀರಿ ಎಂದು ಅಲ್ಲಾಹನಿಗೆ ತಿಳಿದಿದೆ. ಆದ್ದರಿಂದ, ಅವನು ನಿಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸಿದ್ದಾನೆ ಮತ್ತು ನಿಮ್ಮನ್ನು ಕ್ಷಮಿಸಿದ್ದಾನೆ. ಈಗ ನೀವು ಅವರೊಂದಿಗೆ ಲೈಂಗಿಕ ಸಂಪರ್ಕವನ್ನು ಮಾಡಬಹುದು ಮತ್ತು ಅಲ್ಲಾಹು ನಿಮಗೆ ವಿಧಿಸಿದ್ದನ್ನು (ಮಕ್ಕಳನ್ನು) ಅರಸಬಹುದು. ಪ್ರಭಾತದ ಬಿಳಿಯ ನೂಲು ಕಪ್ಪು ನೂಲಿನಿಂದ ಸ್ಪಷ್ಟವಾಗಿ ಗೋಚರಿಸುವವರೆಗೆ ತಿನ್ನಿರಿ ಮತ್ತು ಕುಡಿಯಿರಿ. ನಂತರ ರಾತ್ರಿಯ ತನಕ ಉಪವಾಸವನ್ನು ಪೂರ್ತಿಗೊಳಿಸಿರಿ. ಆದರೆ ನೀವು ಮಸೀದಿಗಳಲ್ಲಿ ಧ್ಯಾನ (ಈತಿಕಾಫ್) ನಿರತರಾಗಿರುವಾಗ ಅವರೊಂದಿಗೆ ಲೈಂಗಿಕ ಸಂಪರ್ಕ ಮಾಡಬೇಡಿ. ಇವು ಅಲ್ಲಾಹನ ಎಲ್ಲೆಗಳಾಗಿವೆ. ನೀವು ಅವುಗಳ ಸಮೀಪಕ್ಕೂ ಹೋಗಬೇಡಿ. ಹೀಗೆ ಅಲ್ಲಾಹು ಜನರಿಗೆ ತನ್ನ ನಿಯಮಗಳನ್ನು ವಿವರಿಸಿಕೊಡುತ್ತಿದ್ದಾನೆ. ಅವರು ದೇವಭಯವುಳ್ಳವರಾಗುವುದಕ್ಕಾಗಿ.[1]

    [1] ಇಸ್ಲಾಮಿನ ಆರಂಭ ಕಾಲದಲ್ಲಿ ಸೂರ್ಯಾಸ್ತದ ವೇಳೆ ಉಪವಾಸ ತೊರೆದರೆ ನಂತರ ಇಶಾ ನಮಾಝಿನ ತನಕ ಅಥವಾ ಮಲಗುವ ತನಕ ಮಾತ್ರ ತಿನ್ನುವುದು, ಕುಡಿಯುವುದು ಮತ್ತು ಲೈಂಗಿಕ ಸಂಪರ್ಕ ಮಾಡುವುದನ್ನು ಅನುಮತಿಸಲಾಗಿತ್ತು. ಮಲಗಿದ ನಂತರ ಇವೆಲ್ಲವೂ ನಿಷಿದ್ಧವಾಗಿದ್ದವು. ಈ ನಿರ್ಬಂಧವು ಕಠಿಣವಾಗಿತ್ತು ಮತ್ತು ಅದನ್ನು ಪಾಲಿಸಲು ಕಷ್ಟವಾಗುತ್ತಿತ್ತು. ಆದ್ದರಿಂದ ಅಲ್ಲಾಹು ಈ ನಿರ್ಬಂಧಗಳನ್ನು ತೆಗೆದುಹಾಕಿ ಪ್ರಭಾತೋದಯದ ತನಕ ತಿನ್ನುವ, ಕುಡಿಯುವ ಮತ್ತು ಲೈಂಗಿಕ ಸಂಪರ್ಕ ಮಾಡುವ ರಿಯಾಯಿತಿಯನ್ನು ನೀಡಿದನು.

    ೧೮೮

    وَلَا تَأۡكُلُوٓاْ أَمۡوَٰلَكُم بَيۡنَكُم بِٱلۡبَٰطِلِ وَتُدۡلُواْ بِهَآ إِلَى ٱلۡحُكَّامِ لِتَأۡكُلُواْ فَرِيقٗا مِّنۡ أَمۡوَٰلِ ٱلنَّاسِ بِٱلۡإِثۡمِ وَأَنتُمۡ تَعۡلَمُونَ

    ನೀವು ಒಬ್ಬರು ಇನ್ನೊಬ್ಬರ ಆಸ್ತಿಯನ್ನು ಅನ್ಯಾಯವಾಗಿ ತಿನ್ನಬೇಡಿ. ಜನರ ಆಸ್ತಿಯಿಂದ ಏನನ್ನಾದರೂ ಅನ್ಯಾಯವಾಗಿ ಕಬಳಿಸಲು ಆಡಳಿತಗಾರರಿಗೆ ಲಂಚ ತಲುಪಿಸುವುದನ್ನೂ ಮಾಡಬೇಡಿ. (ಅದು ಸರಿಯಲ್ಲವೆಂದು) ನೀವು ತಿಳಿದವರಾಗಿದ್ದೂ ಸಹ.[1]

    [1] ಒಬ್ಬ ವ್ಯಕ್ತಿ ಇನ್ನೊಬ್ಬನಿಗೆ ಮೋಸ ಮಾಡಿ ಅವನ ಆಸ್ತಿಯನ್ನು ಕಬಳಿಸುತ್ತಾನೆ. ಆದರೆ ಆಸ್ತಿ ಕಳಕೊಂಡವನಿಗೆ ಅವನ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿರುವುದಿಲ್ಲ. ಆ ಮೋಸಗಾರ ಈ ದೌರ್ಬಲ್ಯವನ್ನು ಸದುಪಯೋಗಪಡಿಸಿ ನ್ಯಾಯಾಲಯದಲ್ಲಿ ತೀರ್ಪು ತನ್ನ ಪರ ಬರುವಂತೆ ನೋಡಿಕೊಳ್ಳುತ್ತಾನೆ. ಹೀಗೆ ಇನ್ನೊಬ್ಬರಿಂದ ಆಸ್ತಿಯನ್ನು ಕಸಿದುಕೊಳ್ಳುವುದು ಪಾಪ ಮತ್ತು ಅನ್ಯಾಯವಾಗಿದೆ. ನ್ಯಾಯಾಲಯದ ತೀರ್ಪು ನಿಷಿದ್ಧವಾದುದನ್ನು ಧರ್ಮಸಮ್ಮತಗೊಳಿಸುವುದಿಲ್ಲ.

    ೧೮೯

    ۞ يَسۡـَٔلُونَكَ عَنِ ٱلۡأَهِلَّةِۖ قُلۡ هِيَ مَوَٰقِيتُ لِلنَّاسِ وَٱلۡحَجِّۗ وَلَيۡسَ ٱلۡبِرُّ بِأَن تَأۡتُواْ ٱلۡبُيُوتَ مِن ظُهُورِهَا وَلَٰكِنَّ ٱلۡبِرَّ مَنِ ٱتَّقَىٰۗ وَأۡتُواْ ٱلۡبُيُوتَ مِنۡ أَبۡوَٰبِهَاۚ وَٱتَّقُواْ ٱللَّهَ لَعَلَّكُمۡ تُفۡلِحُونَ

    ಅವರು ತಮ್ಮೊಂದಿಗೆ ಚಂದ್ರನ ಬಗ್ಗೆ ಕೇಳುತ್ತಾರೆ. ಹೇಳಿರಿ: “ಅದು ಜನರಿಗೆ (ಅವರ ಆರಾಧನಾ ಸಮಯಗಳನ್ನು ತಿಳಿಯುವ) ಮತ್ತು ಹಜ್ಜ್‌ನ ಸಮಯವನ್ನು ತಿಳಿಯುವ ಸಾಧನವಾಗಿದೆ.” ನೀವು ಮನೆಗಳನ್ನು ಹಿಂಭಾಗದಿಂದ ಪ್ರವೇಶಿಸುವುದರಲ್ಲಿ ಒಳಿತಿಲ್ಲ.[1] ಬದಲಿಗೆ, ದೇವಭಯವುಳ್ಳವನೇ ಒಳಿತಿನಲ್ಲಿರುವವನು. ನೀವು ಮನೆಗಳನ್ನು ಅವುಗಳ ಬಾಗಿಲುಗಳಿಂದ ಪ್ರವೇಶಿಸಿ. ಅಲ್ಲಾಹನನ್ನು ಭಯಪಡಿರಿ. ನೀವು ಯಶಸ್ವಿಯಾಗುವುದಕ್ಕಾಗಿ.

    [1] ಅಜ್ಞಾನಕಾಲದಲ್ಲಿ ಜನರು ಹಜ್ ಅಥವಾ ಉಮ್ರಕ್ಕೆ ಇಹ್ರಾಂ ಧರಿಸಿದ ನಂತರ ಯಾವುದಾದರೂ ಅಗತ್ಯಕ್ಕಾಗಿ ಮನೆಗೆ ಬರಬೇಕಾಗಿ ಬಂದರೆ ಬಾಗಿಲಿನ ಮೂಲಕ ಒಳ ಬರುತ್ತಿರಲಿಲ್ಲ; ಬದಲಿಗೆ ಗೋಡೆಯಲ್ಲಿ ಕನ್ನ ಕೊರೆದು ಅದರ ಮೂಲಕ ಒಳ ಬರುತ್ತಿದ್ದರು. ಅವರು ಇದನ್ನು ಪುಣ್ಯ ಕಾರ್ಯವೆಂದು ತಿಳಿದಿದ್ದರು.

    ೧೯೦

    وَقَٰتِلُواْ فِي سَبِيلِ ٱللَّهِ ٱلَّذِينَ يُقَٰتِلُونَكُمۡ وَلَا تَعۡتَدُوٓاْۚ إِنَّ ٱللَّهَ لَا يُحِبُّ ٱلۡمُعۡتَدِينَ

    ನಿಮ್ಮ ವಿರುದ್ಧ ಯುದ್ಧ ಮಾಡುವವರೊಡನೆ ಅಲ್ಲಾಹನ ಮಾರ್ಗದಲ್ಲಿ ನೀವು ಕೂಡ ಯುದ್ಧ ಮಾಡಿರಿ. ಆದರೆ ಎಲ್ಲೆ ಮೀರಬೇಡಿ. ನಿಶ್ಚಯವಾಗಿಯೂ ಎಲ್ಲೆ ಮೀರುವವರನ್ನು ಅಲ್ಲಾಹು ಇಷ್ಟಪಡುವುದಿಲ್ಲ.[1]

    [1] ಇದು ಮುಸಲ್ಮಾನರಿಗೆ ಯುದ್ಧ ಮಾಡಲು ಅನುಮತಿ ನೀಡುತ್ತಾ ಅವತೀರ್ಣವಾದ ಮೊದಲ ವಚನವಾಗಿದೆ. ಮುಸಲ್ಮಾನರ ವಿರುದ್ಧ ಯುದ್ಧಕ್ಕೆ ಮುಂದಾಗುವವರೊಡನೆ ಯುದ್ಧ ಮಾಡಲು ಈ ವಚನದಲ್ಲಿ ಅನುಮತಿ ನೀಡಲಾಗಿದೆ. ಆದರೆ ಮುಸಲ್ಮಾನರು ಯಾವುದೇ ಕಾರಣಕ್ಕೂ ಎಲ್ಲೆ ಮೀರಬಾರದು. ಎಲ್ಲೆ ಮೀರುವುದೆಂದರೆ ಸತ್ತ ಯೋಧರ ಅಂಗಾಂಗಗಳನ್ನು ವಿರೂಪಗೊಳಿಸುವುದು, ಯುದ್ಧದಲ್ಲಿ ಭಾಗವಹಿಸದ ಮಹಿಳೆಯರು, ಮಕ್ಕಳು ಮತ್ತು ವೃದ್ಧರನ್ನು ಹತ್ಯೆ ಮಾಡುವುದು, ಮರಗಳನ್ನು ಕಡಿಯುವುದು ಅಥವಾ ಸುಡುವುದು, ಪ್ರಾಣಿಗಳನ್ನು ಕೊಲ್ಲುವುದು ಇತ್ಯಾದಿ.

    ೧೯೧

    وَٱقۡتُلُوهُمۡ حَيۡثُ ثَقِفۡتُمُوهُمۡ وَأَخۡرِجُوهُم مِّنۡ حَيۡثُ أَخۡرَجُوكُمۡۚ وَٱلۡفِتۡنَةُ أَشَدُّ مِنَ ٱلۡقَتۡلِۚ وَلَا تُقَٰتِلُوهُمۡ عِندَ ٱلۡمَسۡجِدِ ٱلۡحَرَامِ حَتَّىٰ يُقَٰتِلُوكُمۡ فِيهِۖ فَإِن قَٰتَلُوكُمۡ فَٱقۡتُلُوهُمۡۗ كَذَٰلِكَ جَزَآءُ ٱلۡكَٰفِرِينَ

    ನೀವು ಅವರನ್ನು ಕಂಡಲ್ಲಿ ಕೊಲ್ಲಿರಿ ಮತ್ತು ಅವರು ನಿಮ್ಮನ್ನು ಹೊರಹಾಕಿದ ಸ್ಥಳದಿಂದ ಅವರನ್ನೂ ಹೊರಹಾಕಿರಿ. ಕ್ಷೋಭೆಯು ಕೊಲೆಗಿಂತಲೂ ಘೋರವಾಗಿದೆ. ಮಸ್ಜಿದುಲ್ ಹರಾಮ್‍ನ ಬಳಿ ಅವರು ನಿಮ್ಮೊಂದಿಗೆ ಯುದ್ಧ ಮಾಡುವ ತನಕ ನೀವು ಅವರೊಂದಿಗೆ ಅಲ್ಲಿ ಯುದ್ಧ ಮಾಡಬೇಡಿ. ಅವರು ನಿಮ್ಮೊಂದಿಗೆ ಯುದ್ಧ ಮಾಡಿದರೆ ಅವರನ್ನು ಕೊಲ್ಲಿರಿ. ಈ ರೀತಿ ಸತ್ಯನಿಷೇಧಿಗಳಿಗೆ ಪ್ರತಿಫಲ ನೀಡಲಾಗುತ್ತದೆ.

    ೧೯೨

    فَإِنِ ٱنتَهَوۡاْ فَإِنَّ ٱللَّهَ غَفُورٞ رَّحِيمٞ

    ಆದರೆ ಅವರೇನಾದರೂ ನಿಲ್ಲಿಸಿದರೆ ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.

    ೧೯೩

    وَقَٰتِلُوهُمۡ حَتَّىٰ لَا تَكُونَ فِتۡنَةٞ وَيَكُونَ ٱلدِّينُ لِلَّهِۖ فَإِنِ ٱنتَهَوۡاْ فَلَا عُدۡوَٰنَ إِلَّا عَلَى ٱلظَّٰلِمِينَ

    ಕ್ಷೋಭೆ ನಿವಾರಣೆಯಾಗುವ ತನಕ ಮತ್ತು ಧರ್ಮವು ಅಲ್ಲಾಹನಿಗಾಗುವ ತನಕ ಅವರೊಂದಿಗೆ ಯುದ್ಧ ಮಾಡಿರಿ. ಆದರೆ ಅವರೇನಾದರೂ ನಿಲ್ಲಿಸಿದರೆ, ಮತ್ತೆ ಅಕ್ರಮವೆಸಗಿದವರ ಮೇಲೆಯೇ ಹೊರತು ಇನ್ನಾರ ಮೇಲೂ ಅತಿರೇಕವೆಸಗಬೇಡಿ.

    ೧೯೪

    ٱلشَّهۡرُ ٱلۡحَرَامُ بِٱلشَّهۡرِ ٱلۡحَرَامِ وَٱلۡحُرُمَٰتُ قِصَاصٞۚ فَمَنِ ٱعۡتَدَىٰ عَلَيۡكُمۡ فَٱعۡتَدُواْ عَلَيۡهِ بِمِثۡلِ مَا ٱعۡتَدَىٰ عَلَيۡكُمۡۚ وَٱتَّقُواْ ٱللَّهَ وَٱعۡلَمُوٓاْ أَنَّ ٱللَّهَ مَعَ ٱلۡمُتَّقِينَ

    ಪವಿತ್ರ ತಿಂಗಳ ಬದಲಿಗೆ ಪವಿತ್ರ ತಿಂಗಳು. ಪವಿತ್ರವಾದ ಎಲ್ಲವೂ ಅದಲಿ ಬದಲಿಯಾಗಿ ಇರುವುದಾಗಿವೆ. ನಿಮ್ಮ ಮೇಲೆ ಯಾರಾದರೂ ಅತಿರೇಕವೆಸಗಿದರೆ, ಅವನು ನಿಮ್ಮ ಮೇಲೆ ಅತಿರೇಕವೆಸಗಿದಂತೆಯೇ ನೀವು ಅವನ ಮೇಲೆ ಅತಿರೇಕವೆಸಗಿರಿ. ಅಲ್ಲಾಹನನ್ನು ಭಯಪಡಿರಿ. ತಿಳಿಯಿರಿ! ಅಲ್ಲಾಹು ಅವನನ್ನು ಭಯಪಡುವವರ ಜೊತೆಗಿದ್ದಾನೆ.

    ೧೯೫

    وَأَنفِقُواْ فِي سَبِيلِ ٱللَّهِ وَلَا تُلۡقُواْ بِأَيۡدِيكُمۡ إِلَى ٱلتَّهۡلُكَةِ وَأَحۡسِنُوٓاْۚ إِنَّ ٱللَّهَ يُحِبُّ ٱلۡمُحۡسِنِينَ

    ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡಿರಿ. ನಿಮ್ಮ ಕೈಗಳನ್ನು ನೀವೇ ವಿನಾಶಕ್ಕೆ ತಳ್ಳಬೇಡಿ. ಒಳಿತು ಮಾಡಿರಿ. ನಿಶ್ಚಯವಾಗಿಯೂ ಒಳಿತು ಮಾಡುವವರನ್ನು ಅಲ್ಲಾಹು ಪ್ರೀತಿಸುತ್ತಾನೆ.

    ೧೯೬

    وَأَتِمُّواْ ٱلۡحَجَّ وَٱلۡعُمۡرَةَ لِلَّهِۚ فَإِنۡ أُحۡصِرۡتُمۡ فَمَا ٱسۡتَيۡسَرَ مِنَ ٱلۡهَدۡيِۖ وَلَا تَحۡلِقُواْ رُءُوسَكُمۡ حَتَّىٰ يَبۡلُغَ ٱلۡهَدۡيُ مَحِلَّهُۥۚ فَمَن كَانَ مِنكُم مَّرِيضًا أَوۡ بِهِۦٓ أَذٗى مِّن رَّأۡسِهِۦ فَفِدۡيَةٞ مِّن صِيَامٍ أَوۡ صَدَقَةٍ أَوۡ نُسُكٖۚ فَإِذَآ أَمِنتُمۡ فَمَن تَمَتَّعَ بِٱلۡعُمۡرَةِ إِلَى ٱلۡحَجِّ فَمَا ٱسۡتَيۡسَرَ مِنَ ٱلۡهَدۡيِۚ فَمَن لَّمۡ يَجِدۡ فَصِيَامُ ثَلَٰثَةِ أَيَّامٖ فِي ٱلۡحَجِّ وَسَبۡعَةٍ إِذَا رَجَعۡتُمۡۗ تِلۡكَ عَشَرَةٞ كَامِلَةٞۗ ذَٰلِكَ لِمَن لَّمۡ يَكُنۡ أَهۡلُهُۥ حَاضِرِي ٱلۡمَسۡجِدِ ٱلۡحَرَامِۚ وَٱتَّقُواْ ٱللَّهَ وَٱعۡلَمُوٓاْ أَنَّ ٱللَّهَ شَدِيدُ ٱلۡعِقَابِ

    ಅಲ್ಲಾಹನಿಗಾಗಿ ಹಜ್ಜ್ ಮತ್ತು ಉಮ್ರಗಳನ್ನು ಪೂರ್ತಿಗೊಳಿಸಿರಿ. ನಿಮ್ಮನ್ನು (ದಾರಿ ಮಧ್ಯೆ) ತಡೆಯಲಾದರೆ ನಿಮಗೆ ಸುಲಭವಾಗಿರುವ ಒಂದು ಪ್ರಾಣಿಯನ್ನು ಬಲಿ ನೀಡಿರಿ.[1] ಬಲಿಮೃಗವು ಅದರ ಸ್ಥಳವನ್ನು ತಲುಪುವ ತನಕ ಕೇಶಮುಂಡನ ಮಾಡಬೇಡಿ. ನಿಮ್ಮಲ್ಲಿ ಯಾರಾದರೂ ಅನಾರೋಗ್ಯದಲ್ಲಿದ್ದು ಅಥವಾ ತಲೆಯಲ್ಲಿ ಏನಾದರೂ ತೊಂದರೆಯಿದ್ದು, (ಕೇಶ ಮುಂಡನ ಮಾಡಿದ್ದರೆ) ಅದಕ್ಕೆ ಪರಿಹಾರವಾಗಿ ಉಪವಾಸ ಅಥವಾ ದಾನಧರ್ಮ ಅಥವಾ ಬಲಿಕರ್ಮ ನಿರ್ವಹಿಸಲಿ. ಆದರೆ ನೀವು ನಿರ್ಭಯ ಸ್ಥಿತಿಯಲ್ಲಿದ್ದು, ನಿಮ್ಮಲ್ಲಿ ಯಾರಾದರೂ ಉಮ್ರಾ ನಿರ್ವಹಿಸಿ ಹಜ್ಜ್ ತನಕ ವಿಶ್ರಾಂತಿ ಪಡೆದರೆ, ಅವನು ಸುಲಭವಾಗಿರುವ ಒಂದು ಪ್ರಾಣಿಯನ್ನು ಬಲಿ ನೀಡಲಿ. ಯಾರಿಗೆ ಬಲಿಮೃಗ ಸಿಗುವುದಿಲ್ಲವೋ ಅವನು ಹಜ್ಜ್‌ನ ಸಮಯದಲ್ಲಿ ಮೂರು ದಿನ ಮತ್ತು (ಊರಿಗೆ) ಮರಳಿದ ಬಳಿಕ ಏಳು ದಿನ; ಒಟ್ಟು ಹತ್ತು ದಿನ ಉಪವಾಸ ಆಚರಿಸಲಿ. ಈ ನಿಯಮವಿರುವುದು ಮಸ್ಜಿದುಲ್ ಹರಾಮ್‍ನ ನಿವಾಸಿಗಳಲ್ಲದವರಿಗೆ ಮಾತ್ರ. ಅಲ್ಲಾಹನನ್ನು ಭಯಪಡಿರಿ. ತಿಳಿಯಿರಿ! ಅಲ್ಲಾಹು ಅತಿ ಕಠೋರವಾಗಿ ಶಿಕ್ಷಿಸುವವನಾಗಿದ್ದಾನೆ.

    [1] ದಾರಿ ಮಧ್ಯೆ ಶತ್ರುಗಳು ನಿಮ್ಮನ್ನು ತಡೆದರೆ, ಅಥವಾ ತೀವ್ರ ಅನಾರೋಗ್ಯದಿಂದಾಗಿ ಪ್ರಯಾಣ ಮುಂದುವರಿಸಲು ನಿಮಗೆ ಸಾಧ್ಯವಾಗದೆ ಹೋದರೆ, ಬಲಿಮೃಗವನ್ನು ಬಲಿ ನೀಡಿ, ಕೇಶ ಮುಂಡನ ಮಾಡಿ ಇಹ್ರಾಮ್‌ನಿಂದ ಮುಕ್ತರಾಗಬಹುದು.

    ೧೯೭

    ٱلۡحَجُّ أَشۡهُرٞ مَّعۡلُومَٰتٞۚ فَمَن فَرَضَ فِيهِنَّ ٱلۡحَجَّ فَلَا رَفَثَ وَلَا فُسُوقَ وَلَا جِدَالَ فِي ٱلۡحَجِّۗ وَمَا تَفۡعَلُواْ مِنۡ خَيۡرٖ يَعۡلَمۡهُ ٱللَّهُۗ وَتَزَوَّدُواْ فَإِنَّ خَيۡرَ ٱلزَّادِ ٱلتَّقۡوَىٰۖ وَٱتَّقُونِ يَٰٓأُوْلِي ٱلۡأَلۡبَٰبِ

    ಹಜ್ಜ್‌ ಪರಿಚಿತ ತಿಂಗಳುಗಳಲ್ಲಾಗಿದೆ.[1] ಆದ್ದರಿಂದ ಯಾರಾದರೂ ಆ ತಿಂಗಳುಗಳಲ್ಲಿ (ಇಹ್ರಾಮ್ ಧರಿಸಿ) ಹಜ್ಜ್ ನಿರ್ವಹಿಸುವುದನ್ನು ಕಡ್ಡಾಯಗೊಳಿಸಿದರೆ, ಅವನು ಹಜ್ಜ್‌ನ ಸಮಯದಲ್ಲಿ ಲೈಂಗಿಕ ಸಂಪರ್ಕ, ದುಷ್ಕರ್ಮ ಮತ್ತು ತರ್ಕ ಮಾಡಬಾರದು. ನೀವು ಏನೇ ಸತ್ಕರ್ಮ ಮಾಡಿದರೂ ಅಲ್ಲಾಹು ಅದನ್ನು ತಿಳಿಯುತ್ತಾನೆ. ನೀವು (ಹಜ್ಜ್‌ ಯಾತ್ರೆಗಾಗಿ) ಸಿದ್ಧತೆ ಮಾಡಿಕೊಳ್ಳಿರಿ. ನಿಶ್ಚಯವಾಗಿಯೂ ನೀವು ಮಾಡಿಕೊಳ್ಳುವ ಸಿದ್ಧತೆಗಳಲ್ಲಿ ದೇವಭಯವು ಅತಿಶ್ರೇಷ್ಠವಾಗಿದೆ. ಓ ಬುದ್ಧಿವಂತರೇ! ನೀವು ನನ್ನನ್ನು ಭಯಪಡಿರಿ.

    [1] ಪರಿಚಿತ ತಿಂಗಳುಗಳು ಎಂದರೆ ಶವ್ವಾಲ್ ಮತ್ತು ದುಲ್-ಕಅದ ತಿಂಗಳುಗಳು ಮತ್ತು ದುಲ್-ಹಿಜ್ಜ ತಿಂಗಳ ಮೊದಲ ಹತ್ತು ದಿನಗಳು.

    ೧೯೮

    لَيۡسَ عَلَيۡكُمۡ جُنَاحٌ أَن تَبۡتَغُواْ فَضۡلٗا مِّن رَّبِّكُمۡۚ فَإِذَآ أَفَضۡتُم مِّنۡ عَرَفَٰتٖ فَٱذۡكُرُواْ ٱللَّهَ عِندَ ٱلۡمَشۡعَرِ ٱلۡحَرَامِۖ وَٱذۡكُرُوهُ كَمَا هَدَىٰكُمۡ وَإِن كُنتُم مِّن قَبۡلِهِۦ لَمِنَ ٱلضَّآلِّينَ

    ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಯಾವುದೇ ಔದಾರ್ಯವನ್ನು ಅರಸುವುದರಲ್ಲಿ ನಿಮಗೆ ದೋಷವಿಲ್ಲ. ನೀವು ಅರಫಾತ್‍ನಿಂದ ತೆರಳಿದರೆ ಮಶ್‍ಅರುಲ್ ಹರಾಮ್‍ನ ಬಳಿ ಅಲ್ಲಾಹನನ್ನು ಸ್ಮರಿಸಿರಿ. ಅವನು ನಿಮಗೆ ಸನ್ಮಾರ್ಗ ತೋರಿಸಿದಂತೆಯೇ ನೀವು ಅವನನ್ನು ಸ್ಮರಿಸಿರಿ. ವಾಸ್ತವವಾಗಿ, ಇದಕ್ಕೆ ಮುಂಚೆ ನೀವು ದಾರಿ ತಪ್ಪಿದವರಾಗಿದ್ದಿರಿ.

    ೧೯೯

    ثُمَّ أَفِيضُواْ مِنۡ حَيۡثُ أَفَاضَ ٱلنَّاسُ وَٱسۡتَغۡفِرُواْ ٱللَّهَۚ إِنَّ ٱللَّهَ غَفُورٞ رَّحِيمٞ

    ನಂತರ ಜನರು ಎಲ್ಲಿಂದ ಹೊರಡುತ್ತಾರೋ ಅಲ್ಲಿಂದ ನೀವೂ ಹೊರಡಿರಿ. ಅಲ್ಲಾಹನಲ್ಲಿ ಕ್ಷಮೆಯಾಚಿಸಿರಿ. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.

    ೨೦೦

    فَإِذَا قَضَيۡتُم مَّنَٰسِكَكُمۡ فَٱذۡكُرُواْ ٱللَّهَ كَذِكۡرِكُمۡ ءَابَآءَكُمۡ أَوۡ أَشَدَّ ذِكۡرٗاۗ فَمِنَ ٱلنَّاسِ مَن يَقُولُ رَبَّنَآ ءَاتِنَا فِي ٱلدُّنۡيَا وَمَا لَهُۥ فِي ٱلۡأٓخِرَةِ مِنۡ خَلَٰقٖ

    ನೀವು ಹಜ್ಜ್ ಕರ್ಮಗಳನ್ನು ಪೂರೈಸಿದರೆ, ನಿಮ್ಮ ಪೂರ್ವಜರನ್ನು ಸ್ಮರಿಸುವಂತೆಯೇ ಅಥವಾ ಅದಕ್ಕಿಂತಲೂ ತೀವ್ರವಾಗಿ ಅಲ್ಲಾಹನನ್ನು ಸ್ಮರಿಸಿರಿ. ಜನರಲ್ಲಿ ಕೆಲವರು ಹೇಳುತ್ತಾರೆ: “ಓ ನಮ್ಮ ಪರಿಪಾಲಕನೇ! ನಮಗೆ ಇಹಲೋಕದಲ್ಲಿ ದಯಪಾಲಿಸು.” ಅಂತಹವರಿಗೆ ಪರಲೋಕದಲ್ಲಿ ಯಾವುದೇ ಪಾಲಿಲ್ಲ.

    ೨೦೧

    وَمِنۡهُم مَّن يَقُولُ رَبَّنَآ ءَاتِنَا فِي ٱلدُّنۡيَا حَسَنَةٗ وَفِي ٱلۡأٓخِرَةِ حَسَنَةٗ وَقِنَا عَذَابَ ٱلنَّارِ

    ಇತರ ಕೆಲವರು ಹೇಳುತ್ತಾರೆ: “ಓ ನಮ್ಮ ಪರಿಪಾಲಕನೇ! ನಮಗೆ ಇಹಲೋಕದಲ್ಲಿ ಒಳಿತನ್ನು ದಯಪಾಲಿಸು ಮತ್ತು ಪರಲೋಕದಲ್ಲೂ ಒಳಿತನ್ನು ದಯಪಾಲಿಸು ಮತ್ತು ನಮ್ಮನ್ನು ನರಕ ಶಿಕ್ಷೆಯಿಂದ ಪಾರು ಮಾಡು.”

    ೨೦೨

    أُوْلَٰٓئِكَ لَهُمۡ نَصِيبٞ مِّمَّا كَسَبُواْۚ وَٱللَّهُ سَرِيعُ ٱلۡحِسَابِ

    ಅವರಿಗೆ ಅವರು ಮಾಡಿದ ಕರ್ಮಗಳ ಪಾಲಿದೆ. ಅಲ್ಲಾಹು ಶೀಘ್ರವಾಗಿ ವಿಚಾರಣೆ ಮಾಡುವವನಾಗಿದ್ದಾನೆ.

    ೨೦೩

    ۞ وَٱذۡكُرُواْ ٱللَّهَ فِيٓ أَيَّامٖ مَّعۡدُودَٰتٖۚ فَمَن تَعَجَّلَ فِي يَوۡمَيۡنِ فَلَآ إِثۡمَ عَلَيۡهِ وَمَن تَأَخَّرَ فَلَآ إِثۡمَ عَلَيۡهِۖ لِمَنِ ٱتَّقَىٰۗ وَٱتَّقُواْ ٱللَّهَ وَٱعۡلَمُوٓاْ أَنَّكُمۡ إِلَيۡهِ تُحۡشَرُونَ

    ಬೆರಳೆಣಿಕೆಯ ಕೆಲವು ದಿನಗಳಲ್ಲಿ[1] ಅಲ್ಲಾಹನನ್ನು ಸ್ಮರಿಸಿರಿ. ಯಾರಾದರೂ ಎರಡೇ ದಿನಗಳಲ್ಲಿ ತರಾತುರಿಯಿಂದ ಹೊರಟರೆ ಅವರಿಗೆ ದೋಷವಿಲ್ಲ.[2] ಯಾರಾದರೂ ವಿಳಂಬ ಮಾಡಿದರೆ ಅವರಿಗೂ ದೋಷವಿಲ್ಲ. ಇದು ದೇವಭಯವುಳ್ಳವರಿಗಾಗಿದೆ. ಅಲ್ಲಾಹನನ್ನು ಭಯಪಡಿರಿ. ತಿಳಿಯಿರಿ! ನಿಮ್ಮೆಲ್ಲರನ್ನೂ ಅವನ ಬಳಿಗೇ ಒಟ್ಟುಗೂಡಿಸಲಾಗುತ್ತದೆ.

    [1] ಬೆರಳೆಣಿಕೆಯ ದಿನಗಳು ಎಂದರೆ ಅಯ್ಯಾಮು ತ್ತಶ್ರೀಕ್ (ದುಲ್-ಹಿಜ್ಜ ತಿಂಗಳ 11, 12 ಮತ್ತು 13ನೇ ದಿನಗಳು). [2] ಮಿನಾದಲ್ಲಿ ಮೂರು ದಿನ ತಂಗಿ ಜಮ್ರಗಳಿಗೆ ಕಲ್ಲೆಸೆಯುವುದು ಶ್ರೇಷ್ಠವಾಗಿದೆ. ಆದರೆ ಯಾರಾದರೂ ಎರಡೇ ದಿನಗಳಲ್ಲಿ ಮಿನಾದಿಂದ ಹೊರಟರೆ ಅದರಲ್ಲೇನೂ ತೊಂದರೆಯಿಲ್ಲ.

    ೨೦೪

    وَمِنَ ٱلنَّاسِ مَن يُعۡجِبُكَ قَوۡلُهُۥ فِي ٱلۡحَيَوٰةِ ٱلدُّنۡيَا وَيُشۡهِدُ ٱللَّهَ عَلَىٰ مَا فِي قَلۡبِهِۦ وَهُوَ أَلَدُّ ٱلۡخِصَامِ

    ಜನರಲ್ಲಿ ಕೆಲವರಿದ್ದಾರೆ. ಅವರಲ್ಲೊಬ್ಬನು ಇಹಲೋಕದ ಕುರಿತು ಹೇಳುವ ಮಾತುಗಳು ನಿಮ್ಮನ್ನು ಆಶ್ಚರ್ಯಗೊಳಿಸಬಹುದು. ಅವನು ತನ್ನ ಹೃದಯದಲ್ಲಿರುವುದಕ್ಕೆ ಅಲ್ಲಾಹನನ್ನು ಸಾಕ್ಷಿಯಾಗಿ ಮಾಡುತ್ತಾನೆ. ವಾಸ್ತವವಾಗಿ, ಅವನ ಮಹಾ ಜಗಳಗಂಟಿಯಾಗಿದ್ದಾನೆ.

    ೨೦೫

    وَإِذَا تَوَلَّىٰ سَعَىٰ فِي ٱلۡأَرۡضِ لِيُفۡسِدَ فِيهَا وَيُهۡلِكَ ٱلۡحَرۡثَ وَٱلنَّسۡلَۚ وَٱللَّهُ لَا يُحِبُّ ٱلۡفَسَادَ

    ಅವನು ಮರಳಿ ಹೋಗುವಾಗ, ಭೂಮಿಯಲ್ಲಿ ಕಿಡಿಗೇಡಿತನ ಮಾಡಲು ಮತ್ತು ಹೊಲಗಳನ್ನು ಹಾಗೂ ವಂಶಗಳನ್ನು ನಾಶ ಮಾಡಲು ಶ್ರಮಿಸುತ್ತಾನೆ. ಅಲ್ಲಾಹು ಕಿಡಿಗೇಡಿತನವನ್ನು ಇಷ್ಟಪಡುವುದಿಲ್ಲ.

    ೨೦೬

    وَإِذَا قِيلَ لَهُ ٱتَّقِ ٱللَّهَ أَخَذَتۡهُ ٱلۡعِزَّةُ بِٱلۡإِثۡمِۚ فَحَسۡبُهُۥ جَهَنَّمُۖ وَلَبِئۡسَ ٱلۡمِهَادُ

    “ಅಲ್ಲಾಹನನ್ನು ಭಯಪಡು” ಎಂದು ಅವನೊಡನೆ ಹೇಳಲಾದರೆ, ಪ್ರತಿಷ್ಠೆಯು ಅವನನ್ನು ಪಾಪಕ್ಕೆ ಎಳೆಯುತ್ತದೆ. ಅವನಿಗೆ ನರಕವೇ ಸಾಕು. ಆ ವಾಸಸ್ಥಳವು ಬಹಳ ನಿಕೃಷ್ಟವಾಗಿದೆ.

    ೨೦೭

    وَمِنَ ٱلنَّاسِ مَن يَشۡرِي نَفۡسَهُ ٱبۡتِغَآءَ مَرۡضَاتِ ٱللَّهِۚ وَٱللَّهُ رَءُوفُۢ بِٱلۡعِبَادِ

    ಅಲ್ಲಾಹನ ಸಂಪ್ರೀತಿಯನ್ನು ಅರಸುತ್ತಾ ತಮ್ಮ ದೇಹವನ್ನೇ ಮಾರುವ ಜನರೂ ಇದ್ದಾರೆ. ಅಲ್ಲಾಹು ತನ್ನ ದಾಸರೊಂದಿಗೆ ದಯೆಯುಳ್ಳವನಾಗಿದ್ದಾನೆ.

    ೨೦೮

    يَٰٓأَيُّهَا ٱلَّذِينَ ءَامَنُواْ ٱدۡخُلُواْ فِي ٱلسِّلۡمِ كَآفَّةٗ وَلَا تَتَّبِعُواْ خُطُوَٰتِ ٱلشَّيۡطَٰنِۚ إِنَّهُۥ لَكُمۡ عَدُوّٞ مُّبِينٞ

    ಓ ಸತ್ಯವಿಶ್ವಾಸಿಗಳೇ! ನೀವು ಇಸ್ಲಾಂ ಧರ್ಮದಲ್ಲಿ ಪೂರ್ಣವಾಗಿ ಪ್ರವೇಶಿಸಿರಿ. ಶೈತಾನನ ಹೆಜ್ಜೆಗಳನ್ನು ಹಿಂಬಾಲಿಸಬೇಡಿ. ನಿಶ್ಚಯವಾಗಿಯೂ ಅವನು ನಿಮ್ಮ ಪ್ರತ್ಯಕ್ಷ ವೈರಿಯಾಗಿದ್ದಾನೆ.

    ೨೦೯

    فَإِن زَلَلۡتُم مِّنۢ بَعۡدِ مَا جَآءَتۡكُمُ ٱلۡبَيِّنَٰتُ فَٱعۡلَمُوٓاْ أَنَّ ٱللَّهَ عَزِيزٌ حَكِيمٌ

    ನಿಮಗೆ ಸ್ಪಷ್ಟ ಸಾಕ್ಷ್ಯಾಧಾರಗಳು ತಲುಪಿದ ಬಳಿಕವೂ ನೀವು ತಪ್ಪಿ ನಡೆದರೆ, ತಿಳಿಯಿರಿ! ನಿಶ್ಚಯವಾಗಿಯೂ ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.

    ೨೧೦

    هَلۡ يَنظُرُونَ إِلَّآ أَن يَأۡتِيَهُمُ ٱللَّهُ فِي ظُلَلٖ مِّنَ ٱلۡغَمَامِ وَٱلۡمَلَٰٓئِكَةُ وَقُضِيَ ٱلۡأَمۡرُۚ وَإِلَى ٱللَّهِ تُرۡجَعُ ٱلۡأُمُورُ

    ಅಲ್ಲಾಹು ಮತ್ತು ದೇವದೂತರು ಮೋಡಗಳ ನೆರಳುಗಳಲ್ಲಿ ಅವರ ಬಳಿಗೆ ಬರುವುದನ್ನು ಮತ್ತು ವಿಷಯವು ತೀರ್ಮಾನಿಸಿ ಬಿಡಲಾಗುವುದನ್ನು ಅವರು ಕಾಯುತ್ತಿದ್ದಾರೆಯೇ? ವಿಷಯಗಳೆಲ್ಲವೂ ಅಲ್ಲಾಹನ ಬಳಿಗೇ ಮರಳುತ್ತವೆ.

    ೨೧೧

    سَلۡ بَنِيٓ إِسۡرَٰٓءِيلَ كَمۡ ءَاتَيۡنَٰهُم مِّنۡ ءَايَةِۭ بَيِّنَةٖۗ وَمَن يُبَدِّلۡ نِعۡمَةَ ٱللَّهِ مِنۢ بَعۡدِ مَا جَآءَتۡهُ فَإِنَّ ٱللَّهَ شَدِيدُ ٱلۡعِقَابِ

    ಇಸ್ರಾಯೇಲ್ ಮಕ್ಕಳೊಡನೆ ನಾವು ಅವರಿಗೆ ಎಷ್ಟೆಷ್ಟು ಸ್ಪಷ್ಟ ದೃಷ್ಟಾಂತಗಳನ್ನು ನೀಡಿದ್ದೇವೆಂದು ಕೇಳಿರಿ. ಅಲ್ಲಾಹನ ಅನುಗ್ರಹವು ತನ್ನ ಬಳಿಗೆ ಬಂದ ಬಳಿಕವೂ ಅದನ್ನು ಬದಲಾಯಿಸುವವನು ಯಾರೋ—ನಿಶ್ಚಯವಾಗಿಯೂ ಅಲ್ಲಾಹು ಅತಿಕಠೋರವಾಗಿ ಶಿಕ್ಷಿಸುವವನೆಂದು (ಅವನು ತಿಳಿದುಕೊಳ್ಳಲಿ).

    ೨೧೨

    زُيِّنَ لِلَّذِينَ كَفَرُواْ ٱلۡحَيَوٰةُ ٱلدُّنۡيَا وَيَسۡخَرُونَ مِنَ ٱلَّذِينَ ءَامَنُواْۘ وَٱلَّذِينَ ٱتَّقَوۡاْ فَوۡقَهُمۡ يَوۡمَ ٱلۡقِيَٰمَةِۗ وَٱللَّهُ يَرۡزُقُ مَن يَشَآءُ بِغَيۡرِ حِسَابٖ

    ಸತ್ಯನಿಷೇಧಿಗಳಿಗೆ ಇಹಲೋಕ ಜೀವನವನ್ನು ಅಲಂಕರಿಸಿಕೊಡಲಾಗಿದೆ. ಅವರು ಸತ್ಯವಿಶ್ವಾಸಿಗಳನ್ನು ತಮಾಷೆ ಮಾಡುತ್ತಾರೆ. ಆದರೆ, ಪುನರುತ್ಥಾನ ದಿನದಂದು ದೇವಭಯವುಳ್ಳವರು ಅವರಿಗಿಂತ ಮೇಲಿರುತ್ತಾರೆ. ಅಲ್ಲಾಹು ಅವನು ಇಚ್ಛಿಸಿದವರಿಗೆ ಲೆಕ್ಕವಿಲ್ಲದೆ ನೀಡುತ್ತಾನೆ.

    ೨೧೩

    كَانَ ٱلنَّاسُ أُمَّةٗ وَٰحِدَةٗ فَبَعَثَ ٱللَّهُ ٱلنَّبِيِّـۧنَ مُبَشِّرِينَ وَمُنذِرِينَ وَأَنزَلَ مَعَهُمُ ٱلۡكِتَٰبَ بِٱلۡحَقِّ لِيَحۡكُمَ بَيۡنَ ٱلنَّاسِ فِيمَا ٱخۡتَلَفُواْ فِيهِۚ وَمَا ٱخۡتَلَفَ فِيهِ إِلَّا ٱلَّذِينَ أُوتُوهُ مِنۢ بَعۡدِ مَا جَآءَتۡهُمُ ٱلۡبَيِّنَٰتُ بَغۡيَۢا بَيۡنَهُمۡۖ فَهَدَى ٱللَّهُ ٱلَّذِينَ ءَامَنُواْ لِمَا ٱخۡتَلَفُواْ فِيهِ مِنَ ٱلۡحَقِّ بِإِذۡنِهِۦۗ وَٱللَّهُ يَهۡدِي مَن يَشَآءُ إِلَىٰ صِرَٰطٖ مُّسۡتَقِيمٍ

    ಮಾನವರೆಲ್ಲರೂ ಒಂದೇ ಸಮುದಾಯವಾಗಿದ್ದರು. ನಂತರ ಅಲ್ಲಾಹು ಸುವಾರ್ತೆ ತಿಳಿಸಲು ಮತ್ತು ಎಚ್ಚರಿಕೆ ನೀಡಲು ಪ್ರವಾದಿಗಳನ್ನು ಕಳುಹಿಸಿದನು. ಜನರು ಭಿನ್ನಾಭಿಪ್ರಾಯ ತಳೆದ ವಿಷಯದಲ್ಲಿ ತೀರ್ಪು ನೀಡುವುದಕ್ಕಾಗಿ ಅವರ ಜೊತೆಗೆ ಗ್ರಂಥವನ್ನು ಸತ್ಯ ಸಮೇತ ಅವತೀರ್ಣಗೊಳಿಸಿದನು. ಆದರೆ ಗ್ರಂಥ ನೀಡಲಾದ ಅದೇ ಜನರು ಸ್ಪಷ್ಟ ಸಾಕ್ಷ್ಯಾಧಾರಗಳು ತಮಗೆ ತಲುಪಿದ ಬಳಿಕವೂ ತಮ್ಮೊಳಗಿನ ವಿದ್ವೇಷದ ನಿಮಿತ್ತ ಅದರ (ಗ್ರಂಥದ) ವಿಷಯದಲ್ಲಿ ಭಿನ್ನಮತ ತಳೆದರು. ಆದ್ದರಿಂದ ಅಲ್ಲಾಹು ತನ್ನ ಅಪ್ಪಣೆ ಪ್ರಕಾರ ಅವರು ಭಿನ್ನಮತೀಯರಾದ ಆ ಸತ್ಯಕ್ಕೆ ಸತ್ಯವಿಶ್ವಾಸಿಗಳನ್ನು ಮುನ್ನಡೆಸಿದನು. ಅಲ್ಲಾಹು ಅವನು ಇಚ್ಛಿಸಿದವರನ್ನು ನೇರಮಾರ್ಗಕ್ಕೆ ಮುನ್ನಡೆಸುತ್ತಾನೆ.

    ೨೧೪

    أَمۡ حَسِبۡتُمۡ أَن تَدۡخُلُواْ ٱلۡجَنَّةَ وَلَمَّا يَأۡتِكُم مَّثَلُ ٱلَّذِينَ خَلَوۡاْ مِن قَبۡلِكُمۖ مَّسَّتۡهُمُ ٱلۡبَأۡسَآءُ وَٱلضَّرَّآءُ وَزُلۡزِلُواْ حَتَّىٰ يَقُولَ ٱلرَّسُولُ وَٱلَّذِينَ ءَامَنُواْ مَعَهُۥ مَتَىٰ نَصۡرُ ٱللَّهِۗ أَلَآ إِنَّ نَصۡرَ ٱللَّهِ قَرِيبٞ

    ನಿಮಗಿಂತ ಮೊದಲಿನವರಿಗೆ ಬಂದಂತಹ ಪರೀಕ್ಷೆಗಳು ನಿಮಗೂ ಬಾರದೆ ನಿರಾಯಾಸವಾಗಿ ಸ್ವರ್ಗವನ್ನು ಪ್ರವೇಶಿಸಿ ಬಿಡಬಹುದೆಂದು ನೀವು ಭಾವಿಸಿದ್ದೀರಾ? ಅವರಿಗೆ ಬಡತನ ಮತ್ತು ಕಷ್ಟಗಳು ಎರಗಿದ್ದವು. ಅಲ್ಲಾಹನ ಸಹಾಯ ಬರುವುದು ಯಾವಾಗ ಎಂದು ಸಂದೇಶವಾಹಕರು ಮತ್ತು ಅವರ ಜೊತೆಯಲ್ಲಿದ್ದ ಸತ್ಯವಿಶ್ವಾಸಿಗಳು ಕೇಳುವವರೆಗೆ ಅವರನ್ನು ನಡುಗಿಸಲಾಯಿತು. ತಿಳಿಯಿರಿ! ಅಲ್ಲಾಹನ ಸಹಾಯವು ಹತ್ತಿರದಲ್ಲೇ ಇದೆ.

    ೨೧೫

    يَسۡـَٔلُونَكَ مَاذَا يُنفِقُونَۖ قُلۡ مَآ أَنفَقۡتُم مِّنۡ خَيۡرٖ فَلِلۡوَٰلِدَيۡنِ وَٱلۡأَقۡرَبِينَ وَٱلۡيَتَٰمَىٰ وَٱلۡمَسَٰكِينِ وَٱبۡنِ ٱلسَّبِيلِۗ وَمَا تَفۡعَلُواْ مِنۡ خَيۡرٖ فَإِنَّ ٱللَّهَ بِهِۦ عَلِيمٞ

    ಅವರು ಏನು ಖರ್ಚು ಮಾಡಬೇಕೆಂದು ಅವರು ನಿಮ್ಮೊಡನೆ ಕೇಳುತ್ತಾರೆ. ಹೇಳಿರಿ: “ನೀವು ಒಳಿತಾಗಿರುವ ಏನು ಖರ್ಚು ಮಾಡುವುದಾದರೂ ಅದು ಮಾತಾಪಿತರಿಗೆ, ಹತ್ತಿರದ ಸಂಬಂಧಿಕರಿಗೆ, ಅನಾಥರಿಗೆ, ನಿರ್ಗತಿಕರಿಗೆ ಮತ್ತು ದಾರಿಹೋಕರಿಗೆ ಖರ್ಚು ಮಾಡಿರಿ. ನೀವು ಏನೇ ಒಳಿತು ಮಾಡಿದರೂ ನಿಶ್ಚಯವಾಗಿಯೂ ಅಲ್ಲಾಹು ಅದನ್ನು ತಿಳಿಯುತ್ತಾನೆ.”

    ೨೧೬

    كُتِبَ عَلَيۡكُمُ ٱلۡقِتَالُ وَهُوَ كُرۡهٞ لَّكُمۡۖ وَعَسَىٰٓ أَن تَكۡرَهُواْ شَيۡـٔٗا وَهُوَ خَيۡرٞ لَّكُمۡۖ وَعَسَىٰٓ أَن تُحِبُّواْ شَيۡـٔٗا وَهُوَ شَرّٞ لَّكُمۡۚ وَٱللَّهُ يَعۡلَمُ وَأَنتُمۡ لَا تَعۡلَمُونَ

    ನಿಮಗೆ ಅಸಹ್ಯವೆನಿಸಿದರೂ ಸಹ ನಿಮ್ಮ ಮೇಲೆ ಯುದ್ಧವನ್ನು ಕಡ್ಡಾಯಗೊಳಿಸಲಾಗಿದೆ. ಬಹುಶಃ ನಿಮಗೊಂದು ವಿಷಯವು ಅಸಹ್ಯವೆನಿಸಿದರೂ ಅದು ನಿಮಗೆ ಒಳಿತಾಗಿರಬಹುದು. ಹಾಗೆಯೇ, ನಿಮಗೊಂದು ವಿಷಯವು ಇಷ್ಟವಾಗಿದ್ದರೂ ಅದು ನಿಮಗೆ ಕೆಡುಕಾಗಿರಬಹುದು. ಅಲ್ಲಾಹು ತಿಳಿದಿದ್ದಾನೆ; ಆದರೆ ನೀವು ತಿಳಿದಿಲ್ಲ.

    ೨೧೭

    يَسۡـَٔلُونَكَ عَنِ ٱلشَّهۡرِ ٱلۡحَرَامِ قِتَالٖ فِيهِۖ قُلۡ قِتَالٞ فِيهِ كَبِيرٞۚ وَصَدٌّ عَن سَبِيلِ ٱللَّهِ وَكُفۡرُۢ بِهِۦ وَٱلۡمَسۡجِدِ ٱلۡحَرَامِ وَإِخۡرَاجُ أَهۡلِهِۦ مِنۡهُ أَكۡبَرُ عِندَ ٱللَّهِۚ وَٱلۡفِتۡنَةُ أَكۡبَرُ مِنَ ٱلۡقَتۡلِۗ وَلَا يَزَالُونَ يُقَٰتِلُونَكُمۡ حَتَّىٰ يَرُدُّوكُمۡ عَن دِينِكُمۡ إِنِ ٱسۡتَطَٰعُواْۚ وَمَن يَرۡتَدِدۡ مِنكُمۡ عَن دِينِهِۦ فَيَمُتۡ وَهُوَ كَافِرٞ فَأُوْلَٰٓئِكَ حَبِطَتۡ أَعۡمَٰلُهُمۡ فِي ٱلدُّنۡيَا وَٱلۡأٓخِرَةِۖ وَأُوْلَٰٓئِكَ أَصۡحَٰبُ ٱلنَّارِۖ هُمۡ فِيهَا خَٰلِدُونَ

    ನಿಷೇಧಿತ ತಿಂಗಳಲ್ಲಿ ಯುದ್ಧ ಮಾಡುವುದರ ಕುರಿತು ಅವರು ನಿಮ್ಮಲ್ಲಿ ವಿಚಾರಿಸುತ್ತಾರೆ. ಹೇಳಿರಿ: “ಅದರಲ್ಲಿ ಯುದ್ಧ ಮಾಡುವುದು ಮಹಾ ಅಪರಾಧವಾಗಿದೆ.” ಆದರೆ ಅಲ್ಲಾಹನ ಮಾರ್ಗದಿಂದ (ಜನರನ್ನು) ತಡೆಯುವುದು, ಅವನನ್ನು ನಿಷೇಧಿಸುವುದು, ಮಸ್ಜಿದುಲ್ ಹರಾಮ್‍ನಿಂದ (ಜನರನ್ನು) ತಡೆಯುವುದು ಮತ್ತು ಅದರ ನಿವಾಸಿಗಳನ್ನು ಅಲ್ಲಿಂದ ಹೊರಹಾಕುವುದು ಅಲ್ಲಾಹನ ದೃಷ್ಟಿಯಲ್ಲಿ ಅದಕ್ಕಿಂತಲೂ ಗಂಭೀರ ಅಪರಾಧಗಳಾಗಿವೆ. ಕ್ಷೋಭೆಯು ಕೊಲೆಗಿಂತಲೂ ಘೋರವಾಗಿದೆ. ಅವರಿಗೆ ಸಾಧ್ಯವಾಗುವುದಾದರೆ ಅವರು ನಿಮ್ಮನ್ನು ನಿಮ್ಮ ಧರ್ಮದಿಂದ ಹಿಂದಿರುಗುವಂತೆ ಮಾಡುವವರೆಗೂ ನಿಮ್ಮೊಂದಿಗೆ ಯುದ್ಧ ಮಾಡುತ್ತಲೇ ಇರುವರು. ನಿಮ್ಮಲ್ಲಿ ಯಾರಾದರೂ ತನ್ನ ಧರ್ಮವನ್ನು ತ್ಯಜಿಸಿ, ನಂತರ ಸತ್ಯನಿಷೇಧಿಯಾಗಿ ಸಾಯುವುದಾದರೆ, ಅವರ ಕರ್ಮಗಳು ಇಹಲೋಕದಲ್ಲೂ ಪರಲೋಕದಲ್ಲೂ ನಿಷ್ಫಲವಾಗುತ್ತವೆ. ಅವರೇ ನರಕವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.

    ೨೧೮

    إِنَّ ٱلَّذِينَ ءَامَنُواْ وَٱلَّذِينَ هَاجَرُواْ وَجَٰهَدُواْ فِي سَبِيلِ ٱللَّهِ أُوْلَٰٓئِكَ يَرۡجُونَ رَحۡمَتَ ٱللَّهِۚ وَٱللَّهُ غَفُورٞ رَّحِيمٞ

    ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳು, ಹಿಜ್ರ (ವಲಸೆ) ಹೋದವರು ಮತ್ತು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿದವರು ಯಾರೋ—ಅವರು ಅಲ್ಲಾಹನ ದಯೆಯನ್ನು ನಿರೀಕ್ಷಿಸುತ್ತಾರೆ. ಅಲ್ಲಾಹು ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.

    ೨೧೯

    ۞ يَسۡـَٔلُونَكَ عَنِ ٱلۡخَمۡرِ وَٱلۡمَيۡسِرِۖ قُلۡ فِيهِمَآ إِثۡمٞ كَبِيرٞ وَمَنَٰفِعُ لِلنَّاسِ وَإِثۡمُهُمَآ أَكۡبَرُ مِن نَّفۡعِهِمَاۗ وَيَسۡـَٔلُونَكَ مَاذَا يُنفِقُونَۖ قُلِ ٱلۡعَفۡوَۗ كَذَٰلِكَ يُبَيِّنُ ٱللَّهُ لَكُمُ ٱلۡأٓيَٰتِ لَعَلَّكُمۡ تَتَفَكَّرُونَ

    ಅವರು ನಿಮ್ಮೊಂದಿಗೆ ಮದ್ಯ ಮತ್ತು ಜೂಜಿನ ಬಗ್ಗೆ ವಿಚಾರಿಸುತ್ತಾರೆ. ಹೇಳಿರಿ: “ಅವೆರಡರಲ್ಲೂ ಬಹುದೊಡ್ಡ ಪಾಪವಿದೆ ಮತ್ತು ಜನರಿಗೆ ಕೆಲವು ಪ್ರಯೋಜನಗಳೂ ಇವೆ.[1] ಆದರೆ ಅವುಗಳ ಪಾಪವು ಪ್ರಯೋಜನಕ್ಕಿಂತಲೂ ದೊಡ್ಡದು.” ಅವರು ಏನು ಖರ್ಚು ಮಾಡಬೇಕೆಂದು ಅವರು ನಿಮ್ಮೊಡನೆ ಕೇಳುತ್ತಾರೆ. ಹೇಳಿರಿ: “ಅಗತ್ಯಕ್ಕಿಂತ ಮಿಕ್ಕಿದ್ದು.” ಈ ರೀತಿ ಅಲ್ಲಾಹು ತನ್ನ ನಿಯಮಗಳನ್ನು ನಿಮಗೆ ಸ್ಪಷ್ಟವಾಗಿ ವಿವರಿಸಿಕೊಡುತ್ತಾನೆ. ನೀವು ಆಲೋಚಿಸುವುದಕ್ಕಾಗಿ.

    [1] ಮದ್ಯ ಮತ್ತು ಜೂಜಿನಲ್ಲಿ ಕೆಲವು ಲೌಕಿಕ ಪ್ರಯೋಜನಗಳಿವೆ. ಉದಾಹರಣೆಗೆ, ಮದ್ಯವು ತಾತ್ಕಾಲಿಕವಾಗಿ ದೇಹದಲ್ಲಿ ಉತ್ಸಾಹ ಮತ್ತು ಚುರುಕುತನವನ್ನು ಹೆಚ್ಚಿಸುತ್ತದೆ. ಕೆಲವೊಮ್ಮೆ ಮನಸ್ಸು ಮದ್ಯ ಸೇವನೆಯಿಂದ ಹರಿತವಾಗುತ್ತದೆ. ಇದರಿಂದ ಲೈಂಗಿಕ ಸಾಮರ್ಥ್ಯವು ಹೆಚ್ಚಾಗುತ್ತದೆ. ಅದೇ ರೀತಿ, ಮದ್ಯ ಮಾರಾಟವು ಲಾಭದಾಯಕ ಉದ್ಯಮವಾಗಿದೆ. ಜೂಜಿನಲ್ಲಿ ಕೆಲವೊಮ್ಮೆ ಅದೃಷ್ಟವಿರುವವನು ಕೋಟಿಗಳನ್ನು ಸಂಪಾದಿಸುತ್ತಾನೆ. ಆದರೆ ಈ ಪ್ರಯೋಜನಗಳು ವ್ಯಕ್ತಿಯ ಬುದ್ಧಿ ಮತ್ತು ಧರ್ಮಕ್ಕೆ ಉಂಟು ಮಾಡುವ ನಷ್ಟ ಮತ್ತು ಹಾನಿಗಳಿಗೆ ಹೋಲಿಸಿದರೆ ಅವುಗಳ ಪ್ರಯೋಜನವು ಉಲ್ಲೇಖಾರ್ಹವೇ ಅಲ್ಲ.

    ೨೨೦

    فِي ٱلدُّنۡيَا وَٱلۡأٓخِرَةِۗ وَيَسۡـَٔلُونَكَ عَنِ ٱلۡيَتَٰمَىٰۖ قُلۡ إِصۡلَاحٞ لَّهُمۡ خَيۡرٞۖ وَإِن تُخَالِطُوهُمۡ فَإِخۡوَٰنُكُمۡۚ وَٱللَّهُ يَعۡلَمُ ٱلۡمُفۡسِدَ مِنَ ٱلۡمُصۡلِحِۚ وَلَوۡ شَآءَ ٱللَّهُ لَأَعۡنَتَكُمۡۚ إِنَّ ٱللَّهَ عَزِيزٌ حَكِيمٞ

    ಇಹಲೋಕ ಮತ್ತು ಪರಲೋಕದ ಕುರಿತು. ಅವರು ನಿಮ್ಮೊಂದಿಗೆ ಅನಾಥರ ಕುರಿತು ವಿಚಾರಿಸುತ್ತಾರೆ. ಹೇಳಿರಿ: “ಅವರ ಯೋಗಕ್ಷೇಮ ನೋಡಿಕೊಳ್ಳುವುದು ಒಳ್ಳೆಯದೇ ಆಗಿದೆ. ನೀವು ಅವರ ಆಸ್ತಿಯನ್ನು ನಿಮ್ಮ ಆಸ್ತಿಯೊಂದಿಗೆ ಸೇರಿಸಿದರೂ (ತಪ್ಪಿಲ್ಲ); ಅವರು ನಿಮ್ಮ ಸಹೋದರರಾಗಿದ್ದಾರೆ. ಯಾರಿಗೆ ಕೆಟ್ಟ ಉದ್ದೇಶವಿದೆ ಮತ್ತು ಯಾರಿಗೆ ಒಳ್ಳೆಯ ಉದ್ದೇಶವಿದೆಯೆಂದು ಅಲ್ಲಾಹು ತಿಳಿದಿದ್ದಾನೆ. ಅಲ್ಲಾಹು ಇಚ್ಛಿಸಿದರೆ ನಿಮಗೆ ಕಷ್ಟ ಕೊಡುತ್ತಿದ್ದನು. ನಿಶ್ಚಯವಾಗಿಯೂ ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.”

    ೨೨೧

    وَلَا تَنكِحُواْ ٱلۡمُشۡرِكَٰتِ حَتَّىٰ يُؤۡمِنَّۚ وَلَأَمَةٞ مُّؤۡمِنَةٌ خَيۡرٞ مِّن مُّشۡرِكَةٖ وَلَوۡ أَعۡجَبَتۡكُمۡۗ وَلَا تُنكِحُواْ ٱلۡمُشۡرِكِينَ حَتَّىٰ يُؤۡمِنُواْۚ وَلَعَبۡدٞ مُّؤۡمِنٌ خَيۡرٞ مِّن مُّشۡرِكٖ وَلَوۡ أَعۡجَبَكُمۡۗ أُوْلَٰٓئِكَ يَدۡعُونَ إِلَى ٱلنَّارِۖ وَٱللَّهُ يَدۡعُوٓاْ إِلَى ٱلۡجَنَّةِ وَٱلۡمَغۡفِرَةِ بِإِذۡنِهِۦۖ وَيُبَيِّنُ ءَايَٰتِهِۦ لِلنَّاسِ لَعَلَّهُمۡ يَتَذَكَّرُونَ

    ಬಹುದೇವವಿಶ್ವಾಸಿ ಮಹಿಳೆಯರನ್ನು ಅವರು ಸತ್ಯವಿಶ್ವಾಸಿಗಳಾಗುವ ತನಕ ವಿವಾಹವಾಗಬೇಡಿ. ಸತ್ಯವಿಶ್ವಾಸಿಯಾದ ಗುಲಾಮಸ್ತ್ರೀ ಸ್ವತಂತ್ರಳಾದ ಬಹುದೇವವಿಶ್ವಾಸಿ ಮಹಿಳೆಗಿಂತ ಶ್ರೇಷ್ಠಳು. ಅವಳು (ಬಹುದೇವವಿಶ್ವಾಸಿ) ನಿಮಗೆ ಆಕರ್ಷಕವಾಗಿ ಕಂಡರೂ ಸಹ. ಬಹುದೇವವಿಶ್ವಾಸಿ ಪುರುಷರಿಗೆ ಅವರು ಸತ್ಯವಿಶ್ವಾಸಿಗಳಾಗುವ ತನಕ ನಿಮ್ಮ ಮಹಿಳೆಯರನ್ನು ವಿವಾಹ ಮಾಡಿಕೊಡಬೇಡಿ. ಸತ್ಯವಿಶ್ವಾಸಿಯಾದ ಗುಲಾಮ ಸ್ವತಂತ್ರನಾದ ಬಹುದೇವವಿಶ್ವಾಸಿಗಿಂತ ಶ್ರೇಷ್ಠನು. ಅವನು (ಬಹುದೇವವಿಶ್ವಾಸಿ) ನಿಮಗೆ ಆಕರ್ಷಕವಾಗಿ ಕಂಡರೂ ಸಹ. ಅವರು ನಿಮ್ಮನ್ನು ನರಕಕ್ಕೆ ಕರೆಯುತ್ತಿದ್ದಾರೆ. ಅಲ್ಲಾಹು ತನ್ನ ಅಪ್ಪಣೆಯಿಂದ ನಿಮ್ಮನ್ನು ಸ್ವರ್ಗಕ್ಕೆ ಮತ್ತು ಕ್ಷಮೆಗೆ ಕರೆಯುತ್ತಿದ್ದಾನೆ. ಅವನು ಜನರಿಗೆ ತನ್ನ ನಿಯಮಗಳನ್ನು ವಿವರಿಸಿಕೊಡುತ್ತಾನೆ. ಅವರು ಉಪದೇಶ ಪಡೆಯುವುದಕ್ಕಾಗಿ.

    ೨೨೨

    وَيَسۡـَٔلُونَكَ عَنِ ٱلۡمَحِيضِۖ قُلۡ هُوَ أَذٗى فَٱعۡتَزِلُواْ ٱلنِّسَآءَ فِي ٱلۡمَحِيضِ وَلَا تَقۡرَبُوهُنَّ حَتَّىٰ يَطۡهُرۡنَۖ فَإِذَا تَطَهَّرۡنَ فَأۡتُوهُنَّ مِنۡ حَيۡثُ أَمَرَكُمُ ٱللَّهُۚ إِنَّ ٱللَّهَ يُحِبُّ ٱلتَّوَّٰبِينَ وَيُحِبُّ ٱلۡمُتَطَهِّرِينَ

    ಅವರು ನಿಮ್ಮೊಂದಿಗೆ ಋತುಸ್ರಾವದ ಕುರಿತು ವಿಚಾರಿಸುತ್ತಾರೆ. ಹೇಳಿರಿ: “ಅದು ಹೊಲಸು. ಆದ್ದರಿಂದ ಋತುಸ್ರಾವದ ಅವಧಿಯಲ್ಲಿ ಮಹಿಳೆಯರಿಂದ ದೂರವಿರಿ. ಅವರು ಶುದ್ಧವಾಗುವ ತನಕ ಅವರ ಬಳಿಗೆ ಹೋಗಬೇಡಿ. ಅವರು ಶುದ್ಧವಾದರೆ ಅಲ್ಲಾಹು ನಿಮಗೆ ಆಜ್ಞಾಪಿಸಿದ ಕಡೆಯಿಂದ ಅವರ ಬಳಿಗೆ ಹೋಗಿರಿ. ನಿಶ್ಚಯವಾಗಿಯೂ ಅಲ್ಲಾಹು ಪಶ್ಚಾತ್ತಾಪಪಡುವವರನ್ನು ಪ್ರೀತಿಸುತ್ತಾನೆ ಮತ್ತು ಶುದ್ಧವಾಗಿರುವವರನ್ನು ಕೂಡ ಪ್ರೀತಿಸುತ್ತಾನೆ.”

    ೨೨೩

    نِسَآؤُكُمۡ حَرۡثٞ لَّكُمۡ فَأۡتُواْ حَرۡثَكُمۡ أَنَّىٰ شِئۡتُمۡۖ وَقَدِّمُواْ لِأَنفُسِكُمۡۚ وَٱتَّقُواْ ٱللَّهَ وَٱعۡلَمُوٓاْ أَنَّكُم مُّلَٰقُوهُۗ وَبَشِّرِ ٱلۡمُؤۡمِنِينَ

    ನಿಮ್ಮ ಪತ್ನಿಯರು ನಿಮ್ಮ ಹೊಲದಂತೆ. ನೀವು ಇಚ್ಛಿಸುವಂತೆ ನಿಮ್ಮ ಹೊಲಕ್ಕೆ ಹೋಗಿರಿ ಮತ್ತು ನಿಮಗಾಗಿ (ಸತ್ಕರ್ಮಗಳನ್ನು) ಮುಂದಕ್ಕೆ ಕಳುಹಿಸಿರಿ. ಅಲ್ಲಾಹನನ್ನು ಭಯಪಡಿರಿ. ತಿಳಿಯಿರಿ! ನಿಶ್ಚಯವಾಗಿಯೂ ನೀವು ಅವನನ್ನು ಭೇಟಿಯಾಗಲಿರುವಿರಿ. ಸತ್ಯವಿಶ್ವಾಸಿಗಳಿಗೆ ಸುವಾರ್ತೆಯನ್ನು ತಿಳಿಸಿರಿ.

    ೨೨೪

    وَلَا تَجۡعَلُواْ ٱللَّهَ عُرۡضَةٗ لِّأَيۡمَٰنِكُمۡ أَن تَبَرُّواْ وَتَتَّقُواْ وَتُصۡلِحُواْ بَيۡنَ ٱلنَّاسِۚ وَٱللَّهُ سَمِيعٌ عَلِيمٞ

    ಒಳಿತು ಮಾಡುವುದನ್ನು, ದೇವಭಯದಿಂದ ಜೀವಿಸುವುದನ್ನು ಮತ್ತು ಜನರ ನಡುವೆ ಸುಧಾರಣೆ ಮಾಡುವುದನ್ನು ಬಿಟ್ಟುಬಿಡುವುದಕ್ಕಾಗಿ ನಿಮ್ಮ ಪ್ರತಿಜ್ಞೆಗಳಿಗೆ ಅಲ್ಲಾಹನನ್ನು ಗುರಿಯನ್ನಾಗಿ ಮಾಡಬೇಡಿ.[1] ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.

    [1] ಅಂದರೆ, ನಾನು ಇನ್ನು ಮುಂದೆ ಯಾವುದೇ ಒಳಿತು ಮಾಡುವುದಿಲ್ಲ, ನಾನು ಇನ್ನು ಮುಂದೆ ಇವನೊಡನೆ ಮಾತನಾಡುವುದೇ ಇಲ್ಲ, ನಾನು ಇನ್ನು ಮುಂದೆ ಇವರಿಬ್ಬರ ನಡುವೆ ರಾಜಿ ಮಾಡುವುದೇ ಇಲ್ಲ ಎಂಬಿತ್ಯಾದಿಯಾಗಿ ಕೋಪದಿಂದ ಪ್ರತಿಜ್ಞೆ ಮಾಡಬೇಡಿ. ಈ ರೀತಿ ಪ್ರತಿಜ್ಞೆ ಮಾಡಿದವರು ಪರಿಹಾರ ನೀಡಿ ಆ ಪ್ರತಿಜ್ಞೆಯನ್ನು ಹಿಂಪಡೆಯಬೇಕು.

    ೨೨೫

    لَّا يُؤَاخِذُكُمُ ٱللَّهُ بِٱللَّغۡوِ فِيٓ أَيۡمَٰنِكُمۡ وَلَٰكِن يُؤَاخِذُكُم بِمَا كَسَبَتۡ قُلُوبُكُمۡۗ وَٱللَّهُ غَفُورٌ حَلِيمٞ

    ನೀವು ದೃಢನಿರ್ಧಾರದಿಂದ ಮಾಡದ ಪ್ರತಿಜ್ಞೆಗಳಿಗಾಗಿ ಅಲ್ಲಾಹು ನಿಮ್ಮನ್ನು ಶಿಕ್ಷಿಸುವುದಿಲ್ಲ.[1] ಆದರೆ ನೀವು ನಿಮ್ಮ ಹೃದಯದಲ್ಲಿ ಮಾಡಿದ ಪ್ರತಿಜ್ಞೆಗಳಿಗೆ ಅವನು ನಿಮ್ಮನ್ನು ಶಿಕ್ಷಿಸುತ್ತಾನೆ. ಅಲ್ಲಾಹು ಕ್ಷಮಿಸುವವನು ಮತ್ತು ಸಹಿಷ್ಣುತೆಯುಳ್ಳನಾಗಿದ್ದಾನೆ.

    [1] ಅಂದರೆ ನೀವು ಅಭ್ಯಾಸ ಬಲದಿಂದ ಅಥವಾ ಉದ್ದೇಶಪೂರ್ವಕವಲ್ಲದೆ ಮಾಡುವ ಪ್ರತಿಜ್ಞೆಗಳನ್ನು ಉಲ್ಲಂಘಿಸಿದರೆ ಅಲ್ಲಾಹು ನಿಮ್ಮನ್ನು ಶಿಕ್ಷಿಸುವುದಿಲ್ಲ.

    ೨೨೬

    لِّلَّذِينَ يُؤۡلُونَ مِن نِّسَآئِهِمۡ تَرَبُّصُ أَرۡبَعَةِ أَشۡهُرٖۖ فَإِن فَآءُو فَإِنَّ ٱللَّهَ غَفُورٞ رَّحِيمٞ

    ತಮ್ಮ ಪತ್ನಿಯರೊಡನೆ (ಲೈಂಗಿಕ ಸಂಪರ್ಕ ಮಾಡುವುದಿಲ್ಲವೆಂದು) ಪ್ರತಿಜ್ಞೆ ಮಾಡುವವರಿಗೆ ನಾಲ್ಕು ತಿಂಗಳ ಕಾಲಾವಕಾಶವಿದೆ. ಅವರೇನಾದರೂ (ದಾಂಪತ್ಯಕ್ಕೆ) ಮರಳಿದರೆ, ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.[1]

    [1] ನಾನು ಹೆಂಡತಿಯೊಂದಿಗೆ ಒಂದು ತಿಂಗಳ ಕಾಲ ಅಥವಾ ಎರಡು ತಿಂಗಳ ಕಾಲ ಸಂಬಂಧವಿಟ್ಟುಕೊಳ್ಳುವುದಿಲ್ಲವೆಂದು ಗಂಡ ಪ್ರತಿಜ್ಞೆ ಮಾಡಿ, ಆ ನಿಗದಿತ ಅವಧಿಯ ನಂತರ ಹೆಂಡತಿಯೊಂದಿಗೆ ಸಂಬಂಧ ಮುಂದುವರಿಸಿದರೆ ಆತ ಪರಿಹಾರ ನೀಡಬೇಕಾಗಿಲ್ಲ. ಆದರೆ ಆ ಅವಧಿ ಪೂರ್ಣಗೊಳ್ಳುವುದಕ್ಕೆ ಮುಂಚೆ ಅವನು ಹೆಂಡತಿಯೊಂದಿಗೆ ಸಂಬಂಧ ಸ್ಥಾಪಿಸಿದರೆ ಪರಿಹಾರ ನೀಡಬೇಕಾಗುತ್ತದೆ. ಇನ್ನು ಗಂಡ ಅವಧಿಯನ್ನು ನಿಶ್ಚಯಿಸದೆ ನಾನು ನನ್ನ ಹೆಂಡತಿಯೊಂದಿಗೆ ಸಂಬಂಧವಿಟ್ಟುಕೊಳ್ಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರೆ, ಅವನಿಗೆ ನಾಲ್ಕು ತಿಂಗಳ ಕಾಲಾವಕಾಶವಿದೆ. ಅದರೊಳಗೆ ಒಂದೋ ಅವನು ಹೆಂಡತಿಯೊಂದಿಗೆ ಸಂಬಂಧವನ್ನು ಮುಂದುವರಿಸಬೇಕು ಅಥವಾ ಆಕೆಗೆ ವಿಚ್ಛೇದನೆ ನೀಡಬೇಕು. ನಾಲ್ಕು ತಿಂಗಳುಗಳಿಗಿಂತ ಹೆಚ್ಚು ಕಾಲ ಹೆಂಡತಿಯೊಂದಿಗೆ ಸಂಬಂಧ ಕಡಿಯುವುದಕ್ಕೆ ಅನುಮತಿಯಿಲ್ಲ. ಆತ ಸಂಬಂಧವನ್ನು ಮುಂದುವರಿಸುವುದಾದರೆ ಅದಕ್ಕೆ ಪರಿಹಾರ ನೀಡಬೇಕು. ಇನ್ನು ಅವನು ಸಂಬಂಧವನ್ನು ಮುಂದುವರಿಸದೆ ಮತ್ತು ವಿಚ್ಛೇದನೆಯನ್ನೂ ನೀಡದೆ, ಸಮಸ್ಯೆಯು ನ್ಯಾಯಾಲಯವನ್ನು ತಲುಪಿದರೆ, ಹೆಂಡತಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು ಅವನಿಗೆ ಎರಡರಲ್ಲಿ ಒಂದನ್ನು ಆರಿಸುವಂತೆ ಒತ್ತಡ ಹೇರಲಾಗುತ್ತದೆ.

    ೨೨೭

    وَإِنۡ عَزَمُواْ ٱلطَّلَٰقَ فَإِنَّ ٱللَّهَ سَمِيعٌ عَلِيمٞ

    ಆದರೆ, ಅವರು ವಿಚ್ಛೇದನ ಮಾಡಲು ನಿರ್ಧರಿಸಿದರೆ, ನಿಶ್ಚಯವಾಗಿಯೂ ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.

    ೨೨೮

    وَٱلۡمُطَلَّقَٰتُ يَتَرَبَّصۡنَ بِأَنفُسِهِنَّ ثَلَٰثَةَ قُرُوٓءٖۚ وَلَا يَحِلُّ لَهُنَّ أَن يَكۡتُمۡنَ مَا خَلَقَ ٱللَّهُ فِيٓ أَرۡحَامِهِنَّ إِن كُنَّ يُؤۡمِنَّ بِٱللَّهِ وَٱلۡيَوۡمِ ٱلۡأٓخِرِۚ وَبُعُولَتُهُنَّ أَحَقُّ بِرَدِّهِنَّ فِي ذَٰلِكَ إِنۡ أَرَادُوٓاْ إِصۡلَٰحٗاۚ وَلَهُنَّ مِثۡلُ ٱلَّذِي عَلَيۡهِنَّ بِٱلۡمَعۡرُوفِۚ وَلِلرِّجَالِ عَلَيۡهِنَّ دَرَجَةٞۗ وَٱللَّهُ عَزِيزٌ حَكِيمٌ

    ವಿಚ್ಛೇದಿತ ಮಹಿಳೆಯರು ಸ್ವಯಂ ಮೂರು ಋತುಸ್ರಾವಗಳ ತನಕ ಕಾಯಬೇಕು. ಅವರಿಗೆ ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿದ್ದರೆ ಅವರ ಗರ್ಭಗಳಲ್ಲಿ ಅಲ್ಲಾಹು ಸೃಷ್ಟಿಸಿರುವುದನ್ನು ಮುಚ್ಚಿಡುವುದು ಅವರಿಗೆ ಧರ್ಮಸಮ್ಮತವಲ್ಲ. ಅವರ ಗಂಡಂದಿರು ಅವರನ್ನು ಆ ಅವಧಿಯೊಳಗೆ ಮರಳಿ ಸ್ವೀಕರಿಸಲು ಪೂರ್ಣ ಹಕ್ಕುಳ್ಳವರಾಗಿದ್ದಾರೆ—ಅವರ (ಗಂಡಂದಿರ) ಉದ್ದೇಶವು ರಾಜಿ ಮಾಡುವುದಾಗಿದ್ದರೆ.[1] ಪುರುಷರಿಗೆ ಮಹಿಳೆಯರ ಮೇಲೆ ಹಕ್ಕುಗಳಿರುವಂತೆ ಮಹಿಳೆಯರಿಗೂ ಪುರುಷರ ಮೇಲೆ ಸ್ವೀಕಾರಾರ್ಹ ರೀತಿಯಲ್ಲಿರುವ ಹಕ್ಕುಗಳಿವೆ. ಆದರೆ ಪುರುಷರಿಗೆ ಮಹಿಳೆಯರಿಗಿಂತ ಹೆಚ್ಚಿನ ಒಂದು ಪದವಿಯಿದೆ. ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.

    [1] ಪತ್ನಿಯನ್ನು ಮರಳಿ ಸ್ವೀಕರಿಸುವುದು ಒಳಿತಿನ ಉದ್ದೇಶದಿಂದಾಗಿದ್ದರೆ, ದೀಕ್ಷಾಕಾಲ (ಇದ್ದ) ಮುಗಿಯುವುದಕ್ಕೆ ಮೊದಲು ಪತ್ನಿಯನ್ನು ಮರಳಿ ಸ್ವೀಕರಿಸುವ ಪೂರ್ಣ ಹಕ್ಕು ಗಂಡನಿಗಿದೆ. ಅದನ್ನು ತಡೆಯುವ ಹಕ್ಕು ಹೆಂಡತಿಯ ಕಡೆಯವರಿಗಿಲ್ಲ.

    ೨೨೯

    ٱلطَّلَٰقُ مَرَّتَانِۖ فَإِمۡسَاكُۢ بِمَعۡرُوفٍ أَوۡ تَسۡرِيحُۢ بِإِحۡسَٰنٖۗ وَلَا يَحِلُّ لَكُمۡ أَن تَأۡخُذُواْ مِمَّآ ءَاتَيۡتُمُوهُنَّ شَيۡـًٔا إِلَّآ أَن يَخَافَآ أَلَّا يُقِيمَا حُدُودَ ٱللَّهِۖ فَإِنۡ خِفۡتُمۡ أَلَّا يُقِيمَا حُدُودَ ٱللَّهِ فَلَا جُنَاحَ عَلَيۡهِمَا فِيمَا ٱفۡتَدَتۡ بِهِۦۗ تِلۡكَ حُدُودُ ٱللَّهِ فَلَا تَعۡتَدُوهَاۚ وَمَن يَتَعَدَّ حُدُودَ ٱللَّهِ فَأُوْلَٰٓئِكَ هُمُ ٱلظَّٰلِمُونَ

    ವಿಚ್ಛೇದನವು ಎರಡು ಬಾರಿ.[1] ನಂತರ ಒಂದೋ ಸ್ವೀಕಾರಾರ್ಹ ರೀತಿಯಲ್ಲಿ ಬಳಿಯಿರಿಸಿಕೊಳ್ಳಬೇಕು ಅಥವಾ ಉತ್ತಮ ರೀತಿಯಲ್ಲಿ ಬಿಟ್ಟು ಬಿಡಬೇಕು. ನೀವು ಅವರಿಗೆ ನೀಡಿದ ಯಾವುದೇ ವಸ್ತುವನ್ನು ಮರಳಿ ಪಡೆಯುವುದು ನಿಮಗೆ ಧರ್ಮಸಮ್ಮತವಲ್ಲ. ಅಲ್ಲಾಹನ ಎಲ್ಲೆಗಳೊಳಗೆ ನಿಲ್ಲಲು ಅವರಿಬ್ಬರಿಗೆ ಸಾಧ್ಯವಾಗಲಾರದು ಎಂದು ಅವರಿಬ್ಬರು ಭಯಪಡುವ ಹೊರತು. ಅಲ್ಲಾಹನ ಎಲ್ಲೆಗಳೊಳಗೆ ನಿಲ್ಲಲು ಅವರಿಬ್ಬರಿಗೆ ಸಾಧ್ಯವಾಗಲಾರದೆಂದು ನೀವು ಭಯಪಡುವುದಾದರೆ, ಪತ್ನಿ ಏನಾದರೂ ಕೊಟ್ಟು ವಿಚ್ಛೇದನ ಪಡೆಯುವುದರಲ್ಲಿ ಅವರಿಬ್ಬರಿಗೂ ದೋಷವಿಲ್ಲ.[2] ಇವು ಅಲ್ಲಾಹನ ಎಲ್ಲೆಗಳಾಗಿವೆ. ನೀವು ಅವುಗಳನ್ನು ಮೀರಿ ಹೋಗಬೇಡಿ. ಯಾರು ಅಲ್ಲಾಹನ ಎಲ್ಲೆಗಳನ್ನು ಮೀರಿ ಹೋಗುತ್ತಾರೋ ಅವರೇ ಅಕ್ರಮಿಗಳು.

    [1] ಗಂಡನಿಗೆ ಹೆಂಡತಿಯನ್ನು ಮರಳಿ ಸ್ವೀಕರಿಸಬಹುದಾದ ವಿಚ್ಛೇದನೆಯು ಎರಡು ಬಾರಿ ಮಾತ್ರ. ಮೊದಲ ಬಾರಿ ವಿಚ್ಛೇದಿಸಿದರೆ ಮರಳಿ ಸ್ವೀಕರಿಸಬಹುದು ಮತ್ತು ಎರಡನೇ ಬಾರಿ ವಿಚ್ಛೇದಿಸಿದರೂ ಮರಳಿ ಸ್ವೀಕರಿಸಬಹುದು. ಆದರೆ ಮೂರನೇ ಬಾರಿ ವಿಚ್ಛೇದಿಸಿದರೆ (ಮೂರನೇ ತಲಾಕ್ ಹೇಳಿದರೆ) ನಂತರ ಹೆಂಡತಿಯನ್ನು ಮರಳಿ ಸ್ವೀಕರಿಸುವ ಅನುಮತಿಯಿಲ್ಲ. ಇಸ್ಲಾಮೀ ಪೂರ್ವ ಕಾಲದಲ್ಲಿ ವಿಚ್ಛೇದನೆಗೆ ಮತ್ತು ಮರಳಿ ಸ್ವೀಕರಿಸುವುದಕ್ಕೆ ಯಾವುದೇ ಮಿತಿಯಿರಲಿಲ್ಲ. ಎಷ್ಟು ಬಾರಿ ಬೇಕಾದರೂ ವಿಚ್ಛೇದನೆ ನೀಡಬಹುದಿತ್ತು ಮತ್ತು ಎಷ್ಟು ಬಾರಿ ಬೇಕಾದರೂ ಮರಳಿ ಪಡೆಯಬಹುದಿತ್ತು. ಇದರಿಂದ ಮಹಿಳೆಯರಿಗೆ ತುಂಬಾ ಅನ್ಯಾಯವಾಗುತ್ತಿತ್ತು. ಏಕೆಂದರೆ, ಅತ್ತ ಗಂಡ ಪೂರ್ಣವಾಗಿ ವಿಚ್ಛೇದಿಸುತ್ತಲೂ ಇರಲಿಲ್ಲ ಮತ್ತು ಪತ್ನಿಯಾಗಿಟ್ಟುಕೊಳ್ಳುತ್ತಲೂ ಇರಲಿಲ್ಲ. ಗಂಡನಿಂದ ವಿಚ್ಛೇದನೆ ಸಿಗದೆ ಅವಳಿಗೆ ಬೇರೆ ಮದುವೆಯಾಗಲು ಸಾಧ್ಯವಾಗುತ್ತಿರಲಿಲ್ಲ. ಆಕೆ ಗಂಡನೊಂದಿಗೆ ನರಕಸದ್ರಶ ಜೀವನವನ್ನು ಅನುಭವಿಸಬೇಕಾಗಿ ಬರುತ್ತಿತ್ತು. [2] ಪತ್ನಿ ವಿಚ್ಛೇದನ ಪಡೆಯುವುದನ್ನು ಖುಲಾ ಎಂದು ಕರೆಯಲಾಗುತ್ತದೆ. ಅಂದರೆ ಆಕೆ ಗಂಡನಿಂದ ಬೇರ್ಪಡಲು ಬಯಸಿದರೆ ಗಂಡ ಆಕೆಗೆ ನೀಡಿದ ವಧುದಕ್ಷಿಣೆ (ಮಹರ್)ಯನ್ನು ಹಿಂದಿರುಗಿಸಬೇಕು. ಗಂಡ ಬೇರ್ಪಡಲು ಒಪ್ಪದಿದ್ದರೆ, ನ್ಯಾಯಾಲಯವು ವಿಚ್ಛೇದನ ನೀಡಲು ಗಂಡನಿಗೆ ಆದೇಶಿಸುತ್ತದೆ. ಗಂಡ ವಿಚ್ಛೇದನ ನೀಡದಿದ್ದರೆ ನ್ಯಾಯಾಲಯವು ಮದುವೆಯನ್ನು ಫಸ್ಕ್ (ರದ್ದು) ಮಾಡುತ್ತದೆ.

    ೨೩೦

    فَإِن طَلَّقَهَا فَلَا تَحِلُّ لَهُۥ مِنۢ بَعۡدُ حَتَّىٰ تَنكِحَ زَوۡجًا غَيۡرَهُۥۗ فَإِن طَلَّقَهَا فَلَا جُنَاحَ عَلَيۡهِمَآ أَن يَتَرَاجَعَآ إِن ظَنَّآ أَن يُقِيمَا حُدُودَ ٱللَّهِۗ وَتِلۡكَ حُدُودُ ٱللَّهِ يُبَيِّنُهَا لِقَوۡمٖ يَعۡلَمُونَ

    ಇನ್ನು (ಮೂರನೇ ಬಾರಿ) ಅವನು ಅವಳನ್ನು ವಿಚ್ಛೇದಿಸಿದರೆ, ನಂತರ ಅವಳು ಬೇರೊಬ್ಬನನ್ನು ವಿವಾಹವಾಗುವ ತನಕ ಇವನಿಗೆ ಧರ್ಮಸಮ್ಮತಳಾಗುವುದಿಲ್ಲ. ಆದರೆ ಅವನು ಕೂಡ ಅವಳಿಗೆ ವಿಚ್ಛೇದನ ನೀಡಿದರೆ, ಅಲ್ಲಾಹನ ಎಲ್ಲೆಗಳೊಳಗೆ ನಿಲ್ಲಲು ಸಾಧ್ಯವಾಗುವುದೆಂದು ಇವರಿಬ್ಬರು ಭಾವಿಸುವುದಾದರೆ (ಹಳೆಯ ದಾಂಪತ್ಯಕ್ಕೆ) ಮರಳುವುದರಲ್ಲಿ ಇವರಿಬ್ಬರಿಗೆ ದೋಷವಿಲ್ಲ. ಇವು ಅಲ್ಲಾಹನ ಎಲ್ಲೆಗಳಾಗಿವೆ. ತಿಳುವಳಿಕೆಯಿರುವ ಜನರಿಗಾಗಿ ಅವನು ಅವುಗಳನ್ನು ವಿವರಿಸಿಕೊಡುತ್ತಾನೆ.

    ೨೩೧

    وَإِذَا طَلَّقۡتُمُ ٱلنِّسَآءَ فَبَلَغۡنَ أَجَلَهُنَّ فَأَمۡسِكُوهُنَّ بِمَعۡرُوفٍ أَوۡ سَرِّحُوهُنَّ بِمَعۡرُوفٖۚ وَلَا تُمۡسِكُوهُنَّ ضِرَارٗا لِّتَعۡتَدُواْۚ وَمَن يَفۡعَلۡ ذَٰلِكَ فَقَدۡ ظَلَمَ نَفۡسَهُۥۚ وَلَا تَتَّخِذُوٓاْ ءَايَٰتِ ٱللَّهِ هُزُوٗاۚ وَٱذۡكُرُواْ نِعۡمَتَ ٱللَّهِ عَلَيۡكُمۡ وَمَآ أَنزَلَ عَلَيۡكُم مِّنَ ٱلۡكِتَٰبِ وَٱلۡحِكۡمَةِ يَعِظُكُم بِهِۦۚ وَٱتَّقُواْ ٱللَّهَ وَٱعۡلَمُوٓاْ أَنَّ ٱللَّهَ بِكُلِّ شَيۡءٍ عَلِيمٞ

    ನೀವು ನಿಮ್ಮ ಪತ್ನಿಯರಿಗೆ ವಿಚ್ಛೇದನ ನೀಡಿ, ನಂತರ ಅವರು ತಮ್ಮ ಅವಧಿಯನ್ನು ಪೂರ್ಣಗೊಳಿಸಿದರೆ, ಸ್ವೀಕಾರಾರ್ಹ ರೀತಿಯಲ್ಲಿ ಅವರನ್ನು ಬಳಿಯಿಟ್ಟುಕೊಳ್ಳಿ ಅಥವಾ ಸ್ವೀಕಾರಾರ್ಹ ರೀತಿಯಲ್ಲಿ ಅವರನ್ನು ಬಿಟ್ಟು ಬಿಡಿ. ಅವರಿಗೆ ತೊಂದರೆ ಕೊಡುವ ಉದ್ದೇಶದಿಂದ ಅತಿರೇಕವೆಸಗಲು ಅವರನ್ನು ಬಳಿಯಿಟ್ಟುಕೊಳ್ಳಬೇಡಿ. ಯಾರು ಹೀಗೆ ಮಾಡುತ್ತಾನೋ ಅವನು ಅವನ ಮೇಲೆಯೇ ಅಕ್ರಮವೆಸಗಿದ್ದಾನೆ. ಅಲ್ಲಾಹನ ನಿಯಮಗಳನ್ನು ತಮಾಷೆಯಾಗಿ ಸ್ವೀಕರಿಸಬೇಡಿ. ಅಲ್ಲಾಹು ನಿಮಗೆ ದಯಪಾಲಿಸಿದ ಅನುಗ್ರಹಗಳನ್ನು ಮತ್ತು ನಿಮಗೆ ಉಪದೇಶ ನೀಡುತ್ತಾ ಅವನು ಅವತೀರ್ಣಗೊಳಿಸಿದ ಗ್ರಂಥ ಮತ್ತು ವಿವೇಕವನ್ನು ಸ್ಮರಿಸಿರಿ. ಅಲ್ಲಾಹನನ್ನು ಭಯಪಡಿರಿ. ತಿಳಿಯಿರಿ! ಅಲ್ಲಾಹು ಎಲ್ಲಾ ವಿಷಯಗಳನ್ನೂ ತಿಳಿದವನಾಗಿದ್ದಾನೆ.

    ೨೩೨

    وَإِذَا طَلَّقۡتُمُ ٱلنِّسَآءَ فَبَلَغۡنَ أَجَلَهُنَّ فَلَا تَعۡضُلُوهُنَّ أَن يَنكِحۡنَ أَزۡوَٰجَهُنَّ إِذَا تَرَٰضَوۡاْ بَيۡنَهُم بِٱلۡمَعۡرُوفِۗ ذَٰلِكَ يُوعَظُ بِهِۦ مَن كَانَ مِنكُمۡ يُؤۡمِنُ بِٱللَّهِ وَٱلۡيَوۡمِ ٱلۡأٓخِرِۗ ذَٰلِكُمۡ أَزۡكَىٰ لَكُمۡ وَأَطۡهَرُۚ وَٱللَّهُ يَعۡلَمُ وَأَنتُمۡ لَا تَعۡلَمُونَ

    ನೀವು ನಿಮ್ಮ ಪತ್ನಿಯರಿಗೆ ವಿಚ್ಛೇದನ ನೀಡಿ, ನಂತರ ಅವರು ತಮ್ಮ ಅವಧಿಯನ್ನು ಪೂರ್ಣಗೊಳಿಸಿದರೆ, ಅವರು ಅವರ ಗಂಡಂದಿರನ್ನು ವಿವಾಹವಾಗುವುದನ್ನು ತಡೆಯಬೇಡಿ—ಸ್ವೀಕಾರಾರ್ಹ ರೀತಿಯಲ್ಲಿ ಅವರು ಪರಸ್ಪರ ಸಂತೃಪ್ತರಾಗಿದ್ದರೆ. ಇದು ನಿಮ್ಮ ಪೈಕಿ ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವರಿಗೆ ನೀಡುವ ಉಪದೇಶವಾಗಿದೆ. ಅದು ನಿಮಗೆ ಅತಿಶ್ರೇಷ್ಠ ಮತ್ತು ಅತ್ಯಂತ ಪರಿಶುದ್ಧವಾಗಿದೆ. ಅಲ್ಲಾಹು ತಿಳಿದಿದ್ದಾನೆ; ಆದರೆ ನೀವು ತಿಳಿದಿಲ್ಲ.

    ೨೩೩

    ۞ وَٱلۡوَٰلِدَٰتُ يُرۡضِعۡنَ أَوۡلَٰدَهُنَّ حَوۡلَيۡنِ كَامِلَيۡنِۖ لِمَنۡ أَرَادَ أَن يُتِمَّ ٱلرَّضَاعَةَۚ وَعَلَى ٱلۡمَوۡلُودِ لَهُۥ رِزۡقُهُنَّ وَكِسۡوَتُهُنَّ بِٱلۡمَعۡرُوفِۚ لَا تُكَلَّفُ نَفۡسٌ إِلَّا وُسۡعَهَاۚ لَا تُضَآرَّ وَٰلِدَةُۢ بِوَلَدِهَا وَلَا مَوۡلُودٞ لَّهُۥ بِوَلَدِهِۦۚ وَعَلَى ٱلۡوَارِثِ مِثۡلُ ذَٰلِكَۗ فَإِنۡ أَرَادَا فِصَالًا عَن تَرَاضٖ مِّنۡهُمَا وَتَشَاوُرٖ فَلَا جُنَاحَ عَلَيۡهِمَاۗ وَإِنۡ أَرَدتُّمۡ أَن تَسۡتَرۡضِعُوٓاْ أَوۡلَٰدَكُمۡ فَلَا جُنَاحَ عَلَيۡكُمۡ إِذَا سَلَّمۡتُم مَّآ ءَاتَيۡتُم بِٱلۡمَعۡرُوفِۗ وَٱتَّقُواْ ٱللَّهَ وَٱعۡلَمُوٓاْ أَنَّ ٱللَّهَ بِمَا تَعۡمَلُونَ بَصِيرٞ

    ತಾಯಂದಿರು ತಮ್ಮ ಮಕ್ಕಳಿಗೆ ಎರಡು ವರ್ಷ ಪೂರ್ಣವಾಗಿ ಸ್ತನಪಾನ ಮಾಡಬೇಕು—ಇದು ಸ್ತನಪಾನದ ಅವಧಿಯನ್ನು ಪೂರ್ಣಗೊಳಿಸಲು ಬಯಸುವವರಿಗೆ. ಸ್ವೀಕಾರಾರ್ಹ ರೀತಿಯಲ್ಲಿ ಅವರಿಗೆ ಆಹಾರ ಮತ್ತು ಬಟ್ಟೆಬರೆಗಳನ್ನು ಒದಗಿಸುವುದು ಮಗುವಿನ ತಂದೆಯ ಕರ್ತವ್ಯವಾಗಿದೆ. ಯಾರ ಮೇಲೂ ಅವನ ಸಾಮರ್ಥ್ಯಕ್ಕಿಂತ ಮಿಗಿಲಾದುದನ್ನು ಹೊರಿಸಲಾಗುವುದಿಲ್ಲ. ಮಗುವಿನ ಕಾರಣದಿಂದ ತಾಯಿಗೆ ತೊಂದರೆಯಾಗಬಾರದು ಮತ್ತು ಮಗುವಿನ ಕಾರಣದಿಂದ ತಂದೆಗೂ ತೊಂದರೆಯಾಗಬಾರದು. ವಾರಿಸುದಾರರಿಗೂ ಇದೇ ರೀತಿಯ ಕರ್ತವ್ಯಗಳಿವೆ. ಅವರಿಬ್ಬರು ಸಂತೃಪ್ತಿಯಿಂದ ಮತ್ತು ಸಮಾಲೋಚನೆಯಿಂದ ಮಗುವಿನ ಸ್ತನಪಾನವನ್ನು ನಿಲ್ಲಿಸಲು ಬಯಸಿದರೆ ಅವರಿಬ್ಬರ ಮೇಲೂ ದೋಷವಿಲ್ಲ. ನಿಮ್ಮ ಮಕ್ಕಳಿಗೆ ಬೇರೊಬ್ಬರಿಂದ ಸ್ತನಪಾನ ಮಾಡಿಸಲು ನೀವು ಬಯಸುವುದಾದರೆ, ಅದರಲ್ಲೂ ನಿಮಗೆ ದೋಷವಿಲ್ಲ—ಸ್ವೀಕಾರಾರ್ಹ ರೀತಿಯಲ್ಲಿ ಅವರಿಗೆ ಅವರ ವೇತನವನ್ನು ಕೊಡುವುದಾದರೆ. ಅಲ್ಲಾಹನನ್ನು ಭಯಪಡಿರಿ. ತಿಳಿಯಿರಿ! ನೀವು ಮಾಡುವ ಕರ್ಮಗಳನ್ನು ಅಲ್ಲಾಹು ನೋಡುತ್ತಿದ್ದಾನೆ.

    ೨೩೪

    وَٱلَّذِينَ يُتَوَفَّوۡنَ مِنكُمۡ وَيَذَرُونَ أَزۡوَٰجٗا يَتَرَبَّصۡنَ بِأَنفُسِهِنَّ أَرۡبَعَةَ أَشۡهُرٖ وَعَشۡرٗاۖ فَإِذَا بَلَغۡنَ أَجَلَهُنَّ فَلَا جُنَاحَ عَلَيۡكُمۡ فِيمَا فَعَلۡنَ فِيٓ أَنفُسِهِنَّ بِٱلۡمَعۡرُوفِۗ وَٱللَّهُ بِمَا تَعۡمَلُونَ خَبِيرٞ

    ನಿಮ್ಮಲ್ಲಿ ಯಾರಾದರೂ ತಮ್ಮ ಪತ್ನಿಯರನ್ನು ಬಿಟ್ಟು ನಿಧನರಾದರೆ, ಅವರು (ಪತ್ನಿಯರು) ಸ್ವಯಂ ನಾಲ್ಕು ತಿಂಗಳು ಮತ್ತು ಹತ್ತು ದಿನ ದೀಕ್ಷಾಕಾಲ (ಇದ್ದ) ಆಚರಿಸಬೇಕು. ನಂತರ ಅವರ (ದೀಕ್ಷಾಕಾಲದ) ಅವಧಿ ಪೂರ್ಣವಾದರೆ, ಸ್ವೀಕಾರಾರ್ಹ ರೀತಿಯಲ್ಲಿ ಅವರೇನು ಮಾಡುತ್ತಾರೋ ಅದರಲ್ಲಿ ನಿಮಗೆ ದೋಷವಿಲ್ಲ. ನೀವು ಮಾಡುವ ಕರ್ಮಗಳನ್ನು ಅಲ್ಲಾಹು ಸೂಕ್ಷ್ಮವಾಗಿ ತಿಳಿಯುತ್ತಿದ್ದಾನೆ.

    ೨೩೫

    وَلَا جُنَاحَ عَلَيۡكُمۡ فِيمَا عَرَّضۡتُم بِهِۦ مِنۡ خِطۡبَةِ ٱلنِّسَآءِ أَوۡ أَكۡنَنتُمۡ فِيٓ أَنفُسِكُمۡۚ عَلِمَ ٱللَّهُ أَنَّكُمۡ سَتَذۡكُرُونَهُنَّ وَلَٰكِن لَّا تُوَاعِدُوهُنَّ سِرًّا إِلَّآ أَن تَقُولُواْ قَوۡلٗا مَّعۡرُوفٗاۚ وَلَا تَعۡزِمُواْ عُقۡدَةَ ٱلنِّكَاحِ حَتَّىٰ يَبۡلُغَ ٱلۡكِتَٰبُ أَجَلَهُۥۚ وَٱعۡلَمُوٓاْ أَنَّ ٱللَّهَ يَعۡلَمُ مَا فِيٓ أَنفُسِكُمۡ فَٱحۡذَرُوهُۚ وَٱعۡلَمُوٓاْ أَنَّ ٱللَّهَ غَفُورٌ حَلِيمٞ

    ನೀವು ಆ ಮಹಿಳೆಯರನ್ನು ವಿವಾಹವಾಗಲು ಬಯಸುತ್ತೀರೆಂದು ಸೂಚ್ಯವಾಗಿ ತಿಳಿಸಿದರೆ ಅಥವಾ ಅದನ್ನು ಮನಸ್ಸಿನೊಳಗೆ ಬಚ್ಚಿಟ್ಟರೆ ಅದರಲ್ಲಿ ನಿಮಗೇನೂ ದೋಷವಿಲ್ಲ.[1] ನೀವು ಅವರ ಬಗ್ಗೆ ಯೋಚಿಸುತ್ತೀರೆಂದು ಅಲ್ಲಾಹನಿಗೆ ತಿಳಿದಿದೆ. ಆದರೆ ರಹಸ್ಯವಾಗಿ ಅವರಿಗೆ ಯಾವುದೇ ಭರವಸೆ ನೀಡಬೇಡಿ. ನೀವು ಅವರೊಡನೆ ಉತ್ತಮ ಮಾತುಗಳನ್ನಾಡಬಹುದು. ಅವರ (ದೀಕ್ಷಾಕಾಲದ) ಅವಧಿ ಪೂರ್ಣವಾಗುವ ತನಕ ವಿವಾಹ ಕರಾರು ಮಾಡಿಕೊಳ್ಳಲು ದೃಢನಿರ್ಧಾರ ತೆಗೆದುಕೊಳ್ಳಬೇಡಿ. ತಿಳಿಯಿರಿ! ನಿಮ್ಮ ಮನಸ್ಸಿನಲ್ಲಿರುವುದನ್ನು ಅಲ್ಲಾಹು ತಿಳಿಯುತ್ತಾನೆ. ಆದ್ದರಿಂದ ಅವನನ್ನು ಭಯಪಡಿರಿ. ತಿಳಿಯಿರಿ! ಅಲ್ಲಾಹು ಕ್ಷಮಿಸುವವನು ಮತ್ತು ಸಹಿಷ್ಣುತೆಯುಳ್ಳವನಾಗಿದ್ದಾನೆ.

    [1] ಇಲ್ಲಿ ಉದ್ದೇಶಿಸಿರುವುದು ಮೂರು ವಿಚ್ಛೇದನಗಳನ್ನು (ತಲಾಕ್) ಪಡೆದ ಮಹಿಳೆಯ ಬಗ್ಗೆ. ಅವರೊಡನೆ ಸೂಚ್ಯವಾಗಿ, ಅಂದರೆ ನನಗೆ ಒಬ್ಬ ಮಹಿಳೆಯನ್ನು ವಿವಾಹವಾಗುವ ಇರಾದೆಯಿದೆ, ಅಥವಾ ನಾನು ಒಬ್ಬ ಉತ್ತಮ ಮಹಿಳೆಯನ್ನು ಹುಡುಕುತ್ತಿದ್ದೇನೆ ಎಂದು ಹೇಳಬಹುದು. ಆದರೆ ಇದ್ದ (ದೀಕ್ಷಾಕಾಲ) ಮುಗಿಯುವ ತನಕ ರಹಸ್ಯ ಭರವಸೆಗಳನ್ನು ಅಥವಾ ವಿವಾಹ ಒಪ್ಪಂದವನ್ನು ಮಾಡಿಕೊಳ್ಳಬಾರದು. ಇನ್ನು ಒಂದು ಅಥವಾ ಎರಡು ವಿಚ್ಛೇದನ (ತಲಾಕ್) ಪಡೆದ ಮಹಿಳೆಯೊಡನೆ ಸೂಚ್ಯವಾಗಿಯೂ ವಿವಾಹದ ಬಗ್ಗೆ ಪ್ರಸ್ತಾಪವೆತ್ತಬಾರದು. ಏಕೆಂದರೆ ಆ ಅವಧಿಯಲ್ಲಿ ಆಕೆಯ ಗಂಡ ಆಕೆಯನ್ನು ಮರಳಿ ಸ್ವೀಕರಿಸುವ ಸಾಧ್ಯತೆಯಿದೆ.

    ೨೩೬

    لَّا جُنَاحَ عَلَيۡكُمۡ إِن طَلَّقۡتُمُ ٱلنِّسَآءَ مَا لَمۡ تَمَسُّوهُنَّ أَوۡ تَفۡرِضُواْ لَهُنَّ فَرِيضَةٗۚ وَمَتِّعُوهُنَّ عَلَى ٱلۡمُوسِعِ قَدَرُهُۥ وَعَلَى ٱلۡمُقۡتِرِ قَدَرُهُۥ مَتَٰعَۢا بِٱلۡمَعۡرُوفِۖ حَقًّا عَلَى ٱلۡمُحۡسِنِينَ

    ನೀವು ನಿಮ್ಮ ಪತ್ನಿಯರನ್ನು ಸೇರುವುದಕ್ಕೆ ಮೊದಲು ಅಥವಾ ಅವರಿಗೆ ವಧುದಕ್ಷಿಣೆಯನ್ನು ನಿಶ್ಚಯಿಸುವುದಕ್ಕೆ ಮೊದಲು ವಿಚ್ಛೇದನ ನೀಡಿದರೆ, ಅದರಲ್ಲಿ ನಿಮಗೇನೂ ದೋಷವಿಲ್ಲ. ಆದರೆ ಅವರಿಗೆ ಏನಾದರೂ ಪರಿಹಾರವನ್ನು ನೀಡಿರಿ. ಶ್ರೀಮಂತನು ತನ್ನ ಶಕ್ತಿಗೆ ಅನುಗುಣವಾಗಿ ಮತ್ತು ಬಡವನು ತನ್ನ ಶಕ್ತಿಗೆ ಅನುಗುಣವಾಗಿ ಸ್ವೀಕಾರಾರ್ಹ ರೀತಿಯಲ್ಲಿ ಏನಾದರೂ ನೀಡಲಿ. ಇದು ಒಳಿತು ಮಾಡುವವರ ಕರ್ತವ್ಯವಾಗಿದೆ.

    ೨೩೭

    وَإِن طَلَّقۡتُمُوهُنَّ مِن قَبۡلِ أَن تَمَسُّوهُنَّ وَقَدۡ فَرَضۡتُمۡ لَهُنَّ فَرِيضَةٗ فَنِصۡفُ مَا فَرَضۡتُمۡ إِلَّآ أَن يَعۡفُونَ أَوۡ يَعۡفُوَاْ ٱلَّذِي بِيَدِهِۦ عُقۡدَةُ ٱلنِّكَاحِۚ وَأَن تَعۡفُوٓاْ أَقۡرَبُ لِلتَّقۡوَىٰۚ وَلَا تَنسَوُاْ ٱلۡفَضۡلَ بَيۡنَكُمۡۚ إِنَّ ٱللَّهَ بِمَا تَعۡمَلُونَ بَصِيرٌ

    ನೀವು ನಿಮ್ಮ ಪತ್ನಿಯರನ್ನು ಸೇರುವುದಕ್ಕೆ ಮೊದಲು ಅವರಿಗೆ ವಿಚ್ಛೇದನ ನೀಡಿದರೆ, ಮತ್ತು ಈಗಾಗಲೇ ನೀವು ಅವರಿಗೆ ವಧುದಕ್ಷಿಣೆಯನ್ನು ನಿಶ್ಚಯಿಸಿದ್ದರೆ, ನಿಶ್ಚಯಿಸಿದ ವಧುದಕ್ಷಿಣೆಯ ಅರ್ಧವನ್ನು ಅವರಿಗೆ ಕೊಟ್ಟುಬಿಡಿ. ಆದರೆ, ಅವರು ಮಾಫಿ ಮಾಡಿದರೆ ಹೊರತು.[1] ಅಥವಾ ವಿವಾಹ ಕರಾರು ಯಾರ ಕೈಯಲ್ಲಿದೆಯೋ ಅವನು ಮಾಫಿ ಮಾಡಿದರೆ ಹೊರತು.[2] ನೀವು ಮಾಫಿ ಮಾಡುವುದು ದೇವಭಯಕ್ಕೆ ಹೆಚ್ಚು ನಿಕಟವಾಗಿದೆ. ನೀವು ನಿಮ್ಮ ನಡುವಿನ ಸೌಜನ್ಯವನ್ನು ಮರೆಯಬೇಡಿ. ನಿಶ್ಚಯವಾಗಿಯೂ ಅಲ್ಲಾಹು ನೀವು ಮಾಡುತ್ತಿರುವ ಕರ್ಮಗಳನ್ನು ನೋಡುತ್ತಿದ್ದಾನೆ.

    [1] ಅಂದರೆ ಪತ್ನಿ ವಧುದಕ್ಷಿಣೆಯ ಅರ್ಧ ಹಕ್ಕು ತನಗೆ ಬೇಡವೆಂದು ಹೇಳಿ ವಧುದಕ್ಷಿಣೆಯನ್ನು ಪೂರ್ಣವಾಗಿ ಹಿಂದಿರುಗಿಸುವುದು. [2] ವಿವಾಹ ಕರಾರು ಕೈಯಲ್ಲಿರುವವನು ಎಂದರೆ ಗಂಡ. ಅಂದರೆ, ಅವನು ವಧುದಕ್ಷಿಣೆಯ ಅರ್ಧ ಭಾಗವನ್ನು ಪಡೆಯುವ ತನ್ನ ಹಕ್ಕನ್ನು ಮಾಫಿ ಮಾಡಿ ವಧುದಕ್ಷಿಣೆಯನ್ನು ಸಂಪೂರ್ಣವಾಗಿ ಹೆಂಡತಿಗೆ ಬಿಟ್ಟುಕೊಡುವುದು.

    ೨೩೮

    حَٰفِظُواْ عَلَى ٱلصَّلَوَٰتِ وَٱلصَّلَوٰةِ ٱلۡوُسۡطَىٰ وَقُومُواْ لِلَّهِ قَٰنِتِينَ

    ನಮಾಝ್‌ಗಳನ್ನು ಸಂರಕ್ಷಣೆ ಮಾಡಿರಿ. ವಿಶೇಷವಾಗಿ ಮಧ್ಯಮ (ಅಸರ್) ನಮಾಝನ್ನು. ಅಲ್ಲಾಹನ ಮುಂದೆ ವಿಧೇಯತೆಯಿಂದ ನಿಲ್ಲಿರಿ.

    ೨೩೯

    فَإِنۡ خِفۡتُمۡ فَرِجَالًا أَوۡ رُكۡبَانٗاۖ فَإِذَآ أَمِنتُمۡ فَٱذۡكُرُواْ ٱللَّهَ كَمَا عَلَّمَكُم مَّا لَمۡ تَكُونُواْ تَعۡلَمُونَ

    ನಿಮಗೆ ಭಯವಿದ್ದರೆ ನಡೆಯುತ್ತಾ ಅಥವಾ ಸವಾರಿ ಮಾಡುತ್ತಾ (ನಮಾಝ್ ನಿರ್ವಹಿಸಿರಿ). ನೀವು ಭಯಮುಕ್ತರಾದರೆ ನಿಮಗೆ ತಿಳಿಯದಿರುವುದನ್ನು ಅಲ್ಲಾಹು ನಿಮಗೆ ಕಲಿಸಿಕೊಟ್ಟಂತೆ ಅವನನ್ನು ಸ್ಮರಿಸಿರಿ.

    ೨೪೦

    وَٱلَّذِينَ يُتَوَفَّوۡنَ مِنكُمۡ وَيَذَرُونَ أَزۡوَٰجٗا وَصِيَّةٗ لِّأَزۡوَٰجِهِم مَّتَٰعًا إِلَى ٱلۡحَوۡلِ غَيۡرَ إِخۡرَاجٖۚ فَإِنۡ خَرَجۡنَ فَلَا جُنَاحَ عَلَيۡكُمۡ فِي مَا فَعَلۡنَ فِيٓ أَنفُسِهِنَّ مِن مَّعۡرُوفٖۗ وَٱللَّهُ عَزِيزٌ حَكِيمٞ

    ನಿಮ್ಮಲ್ಲಿ ಯಾರಾದರೂ ತಮ್ಮ ಪತ್ನಿಯರನ್ನು ಬಿಟ್ಟು ನಿಧನರಾದರೆ, ಪತ್ನಿಯರನ್ನು ಒಂದು ವರ್ಷದ ತನಕ ಹೊರ ಕಳುಹಿಸದೆ ಅವರನ್ನು ನೋಡಿಕೊಳ್ಳಲು ಉಯಿಲು ಮಾಡಬೇಕು. ಅವರೇನಾದರೂ (ಸ್ವಯಂ) ಹೊರಟುಹೋದರೆ, ಸ್ವೀಕಾರಾರ್ಹ ರೀತಿಯಲ್ಲಿ ಅವರೇನು ಮಾಡುತ್ತಾರೋ ಅದರಲ್ಲಿ ನಿಮಗೆ ದೋಷವಿಲ್ಲ. ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.

    ೨೪೧

    وَلِلۡمُطَلَّقَٰتِ مَتَٰعُۢ بِٱلۡمَعۡرُوفِۖ حَقًّا عَلَى ٱلۡمُتَّقِينَ

    ವಿಚ್ಛೇದಿತ ಮಹಿಳೆಯರಿಗೆ ಸ್ವೀಕಾರಾರ್ಹ ರೀತಿಯಲ್ಲಿ ಏನಾದರೂ ಪರಿಹಾರವನ್ನು ಕೊಡಬೇಕಾಗಿದೆ. ಇದು ದೇವಭಯವುಳ್ಳವರ ಕರ್ತವ್ಯವಾಗಿದೆ.

    ೨೪೨

    كَذَٰلِكَ يُبَيِّنُ ٱللَّهُ لَكُمۡ ءَايَٰتِهِۦ لَعَلَّكُمۡ تَعۡقِلُونَ

    ಈ ರೀತಿ ಅಲ್ಲಾಹು ತನ್ನ ನಿಯಮಗಳನ್ನು ನಿಮಗೆ ಸ್ಪಷ್ಟವಾಗಿ ವಿವರಿಸಿಕೊಡುತ್ತಾನೆ. ನೀವು ಅರ್ಥಮಾಡಿಕೊಳ್ಳುವುದಕ್ಕಾಗಿ.

    ೨೪೩

    ۞ أَلَمۡ تَرَ إِلَى ٱلَّذِينَ خَرَجُواْ مِن دِيَٰرِهِمۡ وَهُمۡ أُلُوفٌ حَذَرَ ٱلۡمَوۡتِ فَقَالَ لَهُمُ ٱللَّهُ مُوتُواْ ثُمَّ أَحۡيَٰهُمۡۚ إِنَّ ٱللَّهَ لَذُو فَضۡلٍ عَلَى ٱلنَّاسِ وَلَٰكِنَّ أَكۡثَرَ ٱلنَّاسِ لَا يَشۡكُرُونَ

    ಸಹಸ್ರಾರು ಸಂಖ್ಯೆಯ ಜನರು ಸಾವಿನ ಭಯದಿಂದ ತಮ್ಮ ಮನೆಗಳನ್ನು ಬಿಟ್ಟು ಓಡಿದ್ದನ್ನು ನೀವು ನೋಡಿಲ್ಲವೇ?[1] ಆಗ ಅಲ್ಲಾಹು ಅವರೊಡನೆ, "ಸಾಯಿರಿ" ಎಂದು ಹೇಳಿದನು. ನಂತರ ಅವನು ಅವರಿಗೆ ಜೀವ ನೀಡಿದನು. ನಿಶ್ಚಯವಾಗಿಯೂ ಅಲ್ಲಾಹನಿಗೆ ಜನರ ಮೇಲೆ ಬಹಳ ಔದಾರ್ಯವಿದೆ. ಆದರೆ ಜನರಲ್ಲಿ ಹೆಚ್ಚಿನವರು ಕೃತಜ್ಞರಾಗುವುದಿಲ್ಲ.

    [1] ಇವರು ಯಾರು ಎಂಬುದರ ಬಗ್ಗೆ ಅಧಿಕೃತವಾದ ಯಾವುದೇ ಉಲ್ಲೇಖಗಳಿಲ್ಲ. ಕುರ್‌ಆನ್ ವ್ಯಾಖ್ಯಾನ ಗ್ರಂಥಗಳಲ್ಲಿ ಇವರನ್ನು ಇಸ್ರಾಯೇಲರಲ್ಲಿ ಸೇರಿದವರೆಂದು ಹೇಳಲಾಗಿದೆ. ಇವರಿಗೆ ಅಲ್ಲಾಹು ಪುನಃ ಜೀವ ನೀಡಲು ಪ್ರವಾದಿ ಯೆಹೆಜ್ಕೇಲರ ಪ್ರಾರ್ಥನೆಯೇ ಕಾರಣವೆಂದು ಹೇಳಲಾಗಿದೆ. ಇವರು ಧರ್ಮಯುದ್ಧದಲ್ಲಿ ಪಾಲ್ಗೊಳ್ಳಲು ಕರೆದಾಗ ಅಥವಾ ಊರಲ್ಲಿ ಪ್ಲೇಗ್ ರೋಗ ಹರಡಿದಾಗ ಸಾವಿನ ಭಯದಿಂದ ಊರು ಬಿಟ್ಟು ಓಡಿದ್ದರು.

    ೨೪೪

    وَقَٰتِلُواْ فِي سَبِيلِ ٱللَّهِ وَٱعۡلَمُوٓاْ أَنَّ ٱللَّهَ سَمِيعٌ عَلِيمٞ

    ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ. ತಿಳಿಯಿರಿ! ನಿಶ್ಚಯವಾಗಿಯೂ ಅಲ್ಲಾಹು ಎಲ್ಲವನ್ನೂ ಕೇಳುವವನು ಮತ್ತು ತಿಳಿದವನಾಗಿದ್ದಾನೆ.

    ೨೪೫

    مَّن ذَا ٱلَّذِي يُقۡرِضُ ٱللَّهَ قَرۡضًا حَسَنٗا فَيُضَٰعِفَهُۥ لَهُۥٓ أَضۡعَافٗا كَثِيرَةٗۚ وَٱللَّهُ يَقۡبِضُ وَيَبۡصُۜطُ وَإِلَيۡهِ تُرۡجَعُونَ

    ಅಲ್ಲಾಹನಿಗೆ ಒಳ್ಳೆಯ ಸಾಲವನ್ನು ಕೊಡುವವರು ಯಾರು?[1] ಹಾಗಾದರೆ, ಅಲ್ಲಾಹು ಅವನಿಗೆ ಅದನ್ನು ಹಲವಾರು ಪಟ್ಟು ಹೆಚ್ಚಿಸಿಕೊಡುವನು. ಅಲ್ಲಾಹನೇ ಇಕ್ಕಟ್ಟು ಮತ್ತು ವಿಶಾಲತೆಯನ್ನು ನೀಡುವವನು. ನಿಮ್ಮನ್ನು ಅವನ ಬಳಿಗೇ ಮರಳಿಸಲಾಗುತ್ತದೆ.

    [1] ಒಳ್ಳೆಯ ಸಾಲ ಎಂದರೆ ಅಲ್ಲಾಹನ ಮಾರ್ಗದಲ್ಲಿ ಮಾಡುವ ದಾನಧರ್ಮಗಳು.

    ೨೪೬

    أَلَمۡ تَرَ إِلَى ٱلۡمَلَإِ مِنۢ بَنِيٓ إِسۡرَٰٓءِيلَ مِنۢ بَعۡدِ مُوسَىٰٓ إِذۡ قَالُواْ لِنَبِيّٖ لَّهُمُ ٱبۡعَثۡ لَنَا مَلِكٗا نُّقَٰتِلۡ فِي سَبِيلِ ٱللَّهِۖ قَالَ هَلۡ عَسَيۡتُمۡ إِن كُتِبَ عَلَيۡكُمُ ٱلۡقِتَالُ أَلَّا تُقَٰتِلُواْۖ قَالُواْ وَمَا لَنَآ أَلَّا نُقَٰتِلَ فِي سَبِيلِ ٱللَّهِ وَقَدۡ أُخۡرِجۡنَا مِن دِيَٰرِنَا وَأَبۡنَآئِنَاۖ فَلَمَّا كُتِبَ عَلَيۡهِمُ ٱلۡقِتَالُ تَوَلَّوۡاْ إِلَّا قَلِيلٗا مِّنۡهُمۡۚ وَٱللَّهُ عَلِيمُۢ بِٱلظَّٰلِمِينَ

    ಮೂಸಾರ ಕಾಲಾನಂತರ ಇಸ್ರಾಯೇಲ್ ಮಕ್ಕಳಲ್ಲಿ ಸೇರಿದ ಕೆಲವು ಮುಖಂಡರನ್ನು ನೀವು ನೋಡಿಲ್ಲವೇ? ಅವರು ತಮ್ಮ ಪ್ರವಾದಿಯೊಂದಿಗೆ, "ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಲು ನಮಗೆ ಒಬ್ಬ ರಾಜನನ್ನು ನೇಮಿಸಿಕೊಡಿ" ಎಂದು ಹೇಳಿದ ಸಂದರ್ಭ. ಅವರು (ಪ್ರವಾದಿ) ಹೇಳಿದರು: "ನಿಮ್ಮ ಮೇಲೆ ಯುದ್ಧವು ಕಡ್ಡಾಯವಾದ ನಂತರ ನೀವೇನಾದರೂ ಯುದ್ಧ ಮಾಡದವರಾಗಿ ಬಿಟ್ಟರೆ?" ಅವರು ಹೇಳಿದರು: "ನಮ್ಮನ್ನು ನಮ್ಮ ಮನೆಗಳಿಂದ ಓಡಿಸಲಾಗಿರುವ ಮತ್ತು ನಮ್ಮಿಂದ ನಮ್ಮ ಮಕ್ಕಳನ್ನು ಬೇರ್ಪಡಿಸಲಾಗಿರುವ ಈ ಸ್ಥಿತಿಯಲ್ಲಿ ನಾವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡದಿರಲು ಸಾಧ್ಯವೇ?" ಆದರೆ ಅವರ ಮೇಲೆ ಯುದ್ಧವು ಕಡ್ಡಾಯವಾದಾಗ ಅವರಲ್ಲಿ ಕೆಲವರ ಹೊರತು ಉಳಿದವರೆಲ್ಲರೂ ಮುಖ ತಿರುಗಿಸಿ ನಡೆದರು. ಅಲ್ಲಾಹನಿಗೆ ಅಕ್ರಮಿಗಳ ಬಗ್ಗೆ ಬಹಳ ಚೆನ್ನಾಗಿ ತಿಳಿದಿದೆ.

    ೨೪೭

    وَقَالَ لَهُمۡ نَبِيُّهُمۡ إِنَّ ٱللَّهَ قَدۡ بَعَثَ لَكُمۡ طَالُوتَ مَلِكٗاۚ قَالُوٓاْ أَنَّىٰ يَكُونُ لَهُ ٱلۡمُلۡكُ عَلَيۡنَا وَنَحۡنُ أَحَقُّ بِٱلۡمُلۡكِ مِنۡهُ وَلَمۡ يُؤۡتَ سَعَةٗ مِّنَ ٱلۡمَالِۚ قَالَ إِنَّ ٱللَّهَ ٱصۡطَفَىٰهُ عَلَيۡكُمۡ وَزَادَهُۥ بَسۡطَةٗ فِي ٱلۡعِلۡمِ وَٱلۡجِسۡمِۖ وَٱللَّهُ يُؤۡتِي مُلۡكَهُۥ مَن يَشَآءُۚ وَٱللَّهُ وَٰسِعٌ عَلِيمٞ

    ಅವರೊಡನೆ ಅವರ ಪ್ರವಾದಿ ಹೇಳಿದರು: "ಅಲ್ಲಾಹು ನಿಮಗೆ ತಾಲೂತ‌ರನ್ನು (ಸೌಲ್) ರಾಜನಾಗಿ ನೇಮಿಸಿದ್ದಾನೆ." ಅವರು ಹೇಳಿದರು: "ಅವರು ನಮಗೆ ರಾಜನಾಗಲು ಹೇಗೆ ಸಾಧ್ಯ? ರಾಜ ಪದವಿಗೆ ಅವರಿಗಿಂತಲೂ ಹೆಚ್ಚು ಅರ್ಹತೆ ನಮಗಿದೆ. ಅವರಿಗೆ ಹೇರಳ ಆಸ್ತಿಪಾಸ್ತಿಯನ್ನೂ ನೀಡಲಾಗಿಲ್ಲ." ಅವರು (ಪ್ರವಾದಿ) ಹೇಳಿದರು: "ಅಲ್ಲಾಹು ನಿಮಗಿಂತ ಅವರನ್ನೇ ಆಯ್ಕೆ ಮಾಡಿದ್ದಾನೆ ಮತ್ತು ಅವರಿಗೆ ಬೌದ್ಧಿಕ ಹಾಗೂ ದೈಹಿಕ ಶ್ರೇಷ್ಠತೆಯನ್ನು ನೀಡಿದ್ದಾನೆ. ಅಲ್ಲಾಹು ಅವನು ಇಚ್ಛಿಸುವವರಿಗೆ ಅವನ ರಾಜ ಪದವಿ ನೀಡುತ್ತಾನೆ. ಅಲ್ಲಾಹು ವಿಶಾಲನು ಮತ್ತು ಸರ್ವಜ್ಞನಾಗಿದ್ದಾನೆ.”

    ೨೪೮

    وَقَالَ لَهُمۡ نَبِيُّهُمۡ إِنَّ ءَايَةَ مُلۡكِهِۦٓ أَن يَأۡتِيَكُمُ ٱلتَّابُوتُ فِيهِ سَكِينَةٞ مِّن رَّبِّكُمۡ وَبَقِيَّةٞ مِّمَّا تَرَكَ ءَالُ مُوسَىٰ وَءَالُ هَٰرُونَ تَحۡمِلُهُ ٱلۡمَلَٰٓئِكَةُۚ إِنَّ فِي ذَٰلِكَ لَأٓيَةٗ لَّكُمۡ إِن كُنتُم مُّؤۡمِنِينَ

    ಅವರೊಡನೆ ಅವರ ಪ್ರವಾದಿ ಹೇಳಿದರು: "ಆ ಪೆಟ್ಟಿಗೆ ನಿಮ್ಮ ಬಳಿಗೆ ಬರುವುದು ಅವರ ರಾಜ ಪದವಿಯ ಸಂಕೇತವಾಗಿದೆ. ಅದರಲ್ಲಿ ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಮನಃಶಾಂತಿ ಮತ್ತು ಮೂಸಾ ಹಾಗೂ ಹಾರೂನರ ಕುಟುಂಬಗಳು ಬಿಟ್ಟು ಹೋದ ಅವಶೇಷಗಳಿವೆ. ಅದನ್ನು ದೇವದೂತರು ವಹಿಸಿಕೊಂಡು ಬರುತ್ತಾರೆ. ನೀವು ಸತ್ಯವಿಶ್ವಾಸಿಗಳಾಗಿದ್ದರೆ ನಿಶ್ಚಯವಾಗಿಯೂ ನಿಮಗೆ ಅದರಲ್ಲಿ ಸ್ಪಷ್ಟ ದೃಷ್ಟಾಂತವಿದೆ."

    ೨೪೯

    فَلَمَّا فَصَلَ طَالُوتُ بِٱلۡجُنُودِ قَالَ إِنَّ ٱللَّهَ مُبۡتَلِيكُم بِنَهَرٖ فَمَن شَرِبَ مِنۡهُ فَلَيۡسَ مِنِّي وَمَن لَّمۡ يَطۡعَمۡهُ فَإِنَّهُۥ مِنِّيٓ إِلَّا مَنِ ٱغۡتَرَفَ غُرۡفَةَۢ بِيَدِهِۦۚ فَشَرِبُواْ مِنۡهُ إِلَّا قَلِيلٗا مِّنۡهُمۡۚ فَلَمَّا جَاوَزَهُۥ هُوَ وَٱلَّذِينَ ءَامَنُواْ مَعَهُۥ قَالُواْ لَا طَاقَةَ لَنَا ٱلۡيَوۡمَ بِجَالُوتَ وَجُنُودِهِۦۚ قَالَ ٱلَّذِينَ يَظُنُّونَ أَنَّهُم مُّلَٰقُواْ ٱللَّهِ كَم مِّن فِئَةٖ قَلِيلَةٍ غَلَبَتۡ فِئَةٗ كَثِيرَةَۢ بِإِذۡنِ ٱللَّهِۗ وَٱللَّهُ مَعَ ٱلصَّٰبِرِينَ

    ನಂತರ ತಾಲೂತ್ (ಸೌಲ್) ಸೈನ್ಯದೊಂದಿಗೆ ಹೊರಟಾಗ ಹೇಳಿದರು: "ನಿಶ್ಚಯವಾಗಿಯೂ ಅಲ್ಲಾಹು ಒಂದು ನದಿಯ ಮೂಲಕ ನಿಮ್ಮನ್ನು ಪರೀಕ್ಷಿಸುವನು. ಯಾರು ಅದರ ನೀರನ್ನು ಕುಡಿಯುತ್ತಾನೋ ಅವನು ನನ್ನವನಲ್ಲ. ಯಾರು ಅದರ ರುಚಿ ನೋಡುವುದಿಲ್ಲವೋ ಅವನು ನನ್ನವನು; ಆದರೆ ತನ್ನ ಕೈಯಿಂದ ಒಂದು ಬೊಗಸೆ ಮಾತ್ರ ತೆಗೆದುಕೊಂಡವನ ಹೊರತು." ಆದರೆ ಅವರಲ್ಲಿ ಕೆಲವರ ಹೊರತು ಉಳಿದವರೆಲ್ಲರೂ ಅದರ ನೀರನ್ನು ಕುಡಿದರು. ನಂತರ ತಾಲೂತ್ ಮತ್ತು ಅವರ ಜೊತೆಗಿರುವ ಸತ್ಯವಿಶ್ವಾಸಿಗಳು ಆ ನದಿಯನ್ನು ದಾಟಿದಾಗ ಅವರು ಹೇಳಿದರು: "ಇಂದು ನಮಗೆ ಜಾಲೂತ್ (ಗೋಲಿಯತ್) ಮತ್ತು ಅವನ ಸೈನ್ಯದೊಡನೆ ಹೋರಾಡುವ ಶಕ್ತಿಯಿಲ್ಲ." ಆದರೆ ನಾವು ಅಲ್ಲಾಹನನ್ನು ಭೇಟಿಯಾಗಲಿದ್ದೇವೆ ಎಂಬ ದೃಢವಿಶ್ವಾಸವಿದ್ದವರು ಹೇಳಿದರು: "ಎಷ್ಟೆಷ್ಟು ಚಿಕ್ಕ ಸೈನ್ಯಗಳು ಅಲ್ಲಾಹನ ಅಪ್ಪಣೆಯೊಂದಿಗೆ ಎಷ್ಟೆಷ್ಟು ದೊಡ್ಡ ಸೈನ್ಯಗಳನ್ನು ಸೋಲಿಸಿವೆ! ಅಲ್ಲಾಹು ತಾಳ್ಮೆಯುಳ್ಳವರ ಜೊತೆಗಿದ್ದಾನೆ."

    ೨೫೦

    وَلَمَّا بَرَزُواْ لِجَالُوتَ وَجُنُودِهِۦ قَالُواْ رَبَّنَآ أَفۡرِغۡ عَلَيۡنَا صَبۡرٗا وَثَبِّتۡ أَقۡدَامَنَا وَٱنصُرۡنَا عَلَى ٱلۡقَوۡمِ ٱلۡكَٰفِرِينَ

    ನಂತರ ಜಾಲೂತ್ (ಗೋಲಿಯತ್) ಮತ್ತು ಅವನ ಸೈನ್ಯಕ್ಕೆ ಮುಖಾಮುಖಿಯಾಗಿ ನಿಂತಾಗ ಅವರು ಹೀಗೆ ಪ್ರಾರ್ಥಿಸಿದರು: "ಓ ನಮ್ಮ ಪರಿಪಾಲಕನೇ! ನಮಗೆ ಸ್ಥೈರ್ಯವನ್ನು ದಯಪಾಲಿಸು, ನಮ್ಮ ಪಾದಗಳನ್ನು ದೃಢವಾಗಿ ನಿಲ್ಲಿಸು ಮತ್ತು ಸತ್ಯನಿಷೇಧಿಗಳಾದ ಜನರ ವಿರುದ್ಧ ನಮಗೆ ಸಹಾಯ ಮಾಡು."

    ೨೫೧

    فَهَزَمُوهُم بِإِذۡنِ ٱللَّهِ وَقَتَلَ دَاوُۥدُ جَالُوتَ وَءَاتَىٰهُ ٱللَّهُ ٱلۡمُلۡكَ وَٱلۡحِكۡمَةَ وَعَلَّمَهُۥ مِمَّا يَشَآءُۗ وَلَوۡلَا دَفۡعُ ٱللَّهِ ٱلنَّاسَ بَعۡضَهُم بِبَعۡضٖ لَّفَسَدَتِ ٱلۡأَرۡضُ وَلَٰكِنَّ ٱللَّهَ ذُو فَضۡلٍ عَلَى ٱلۡعَٰلَمِينَ

    ನಂತರ ಅಲ್ಲಾಹನ ಅಪ್ಪಣೆಯಿಂದ ಅವರು ಅವರನ್ನು (ವೈರಿಗಳನ್ನು) ಸೋಲಿಸಿದರು. ದಾವೂದ್ ಜಾಲೂತನನ್ನು ಕೊಂದರು. ಅಲ್ಲಾಹು ಅವರಿಗೆ (ದಾವೂದರಿಗೆ) ಸಾಮ್ರಾಜ್ಯವನ್ನು ಮತ್ತು ವಿವೇಕವನ್ನು ದಯಪಾಲಿಸಿದನು ಹಾಗೂ ಅವನು ಇಚ್ಛಿಸಿದಷ್ಟು ವಿಷಯಗಳನ್ನು ಅವರಿಗೆ ಕಲಿಸಿಕೊಟ್ಟನು. ಅಲ್ಲಾಹು ಕೆಲವು ಜನರಿಗೆ ಇತರ ಕೆಲವರ ಮೂಲಕ ತಡೆಯೊಡ್ಡದಿರುತ್ತಿದ್ದರೆ ಭೂಲೋಕದಲ್ಲಿ ಅರಾಜಕತೆ ತಾಂಡವವಾಡುತ್ತಿತ್ತು. ಅದರೆ ಅಲ್ಲಾಹು ಸರ್ವಲೋಕದವರ ಮೇಲೆ ಬಹಳ ಔದಾರ್ಯವುಳ್ಳವನಾಗಿದ್ದಾನೆ.

    ೨೫೨

    تِلۡكَ ءَايَٰتُ ٱللَّهِ نَتۡلُوهَا عَلَيۡكَ بِٱلۡحَقِّۚ وَإِنَّكَ لَمِنَ ٱلۡمُرۡسَلِينَ

    ಇವೆಲ್ಲವೂ ಅಲ್ಲಾಹನ ವಚನಗಳಾಗಿವೆ. ನಾವು ಇವುಗಳನ್ನು ಸತ್ಯ ಸಮೇತ ನಿಮಗೆ ಓದಿಕೊಡುತ್ತಿದ್ದೇವೆ. ನಿಶ್ಚಯವಾಗಿಯೂ ನೀವು ಸಂದೇಶವಾಹಕರಲ್ಲಿ ಒಬ್ಬರಾಗಿದ್ದೀರಿ.

    ೨೫೩

    ۞ تِلۡكَ ٱلرُّسُلُ فَضَّلۡنَا بَعۡضَهُمۡ عَلَىٰ بَعۡضٖۘ مِّنۡهُم مَّن كَلَّمَ ٱللَّهُۖ وَرَفَعَ بَعۡضَهُمۡ دَرَجَٰتٖۚ وَءَاتَيۡنَا عِيسَى ٱبۡنَ مَرۡيَمَ ٱلۡبَيِّنَٰتِ وَأَيَّدۡنَٰهُ بِرُوحِ ٱلۡقُدُسِۗ وَلَوۡ شَآءَ ٱللَّهُ مَا ٱقۡتَتَلَ ٱلَّذِينَ مِنۢ بَعۡدِهِم مِّنۢ بَعۡدِ مَا جَآءَتۡهُمُ ٱلۡبَيِّنَٰتُ وَلَٰكِنِ ٱخۡتَلَفُواْ فَمِنۡهُم مَّنۡ ءَامَنَ وَمِنۡهُم مَّن كَفَرَۚ وَلَوۡ شَآءَ ٱللَّهُ مَا ٱقۡتَتَلُواْ وَلَٰكِنَّ ٱللَّهَ يَفۡعَلُ مَا يُرِيدُ

    ಆ ಸಂದೇಶವಾಹಕರಲ್ಲಿ ಕೆಲವರನ್ನು ನಾವು ಇತರ ಕೆಲವರಿಗಿಂತ ಶ್ರೇಷ್ಠಗೊಳಿಸಿದ್ದೇವೆ. ಅವರಲ್ಲಿ ಅಲ್ಲಾಹು (ನೇರವಾಗಿ) ಮಾತನಾಡಿದವರಿದ್ದಾರೆ. ಅವರಲ್ಲಿ ಕೆಲವರ ಪದವಿಗಳನ್ನು ಅವನು ಎತ್ತರಿಸಿದ್ದಾನೆ. ಮರ್ಯಮರ ಮಗ ಈಸಾರಿಗೆ ನಾವು ಪವಾಡಗಳನ್ನು ನೀಡಿದ್ದೇವೆ ಮತ್ತು ಪವಿತ್ರಾತ್ಮನ ಮೂಲಕ ಅವರನ್ನು ಬೆಂಬಲಿಸಿದ್ದೇವೆ. ಅಲ್ಲಾಹು ಇಚ್ಛಿಸುತ್ತಿದ್ದರೆ ಅವರ ನಂತರದವರು ಅವರಿಗೆ ಸ್ಪಷ್ಟ ಸಾಕ್ಷ್ಯಾಧಾರಗಳು ಬಂದ ಬಳಿಕವೂ ಪರಸ್ಪರ ಹೊಡೆದಾಡುತ್ತಿರಲಿಲ್ಲ. ಆದರೆ ಅವರು ಭಿನ್ನಮತ ತಳೆದರು. ಅವರಲ್ಲಿ ಕೆಲವರು ಸತ್ಯವಿಶ್ವಾಸಿಗಳಾದರು ಮತ್ತು ಕೆಲವರು ಸತ್ಯನಿಷೇಧಿಗಳಾದರು. ಅಲ್ಲಾಹು ಇಚ್ಛಿಸುತ್ತಿದ್ದರೆ ಅವರು ಪರಸ್ಪರ ಹೊಡೆದಾಡುತ್ತಿರಲಿಲ್ಲ. ಆದರೆ ಅಲ್ಲಾಹು ಅವನು ಬಯಸುವುದನ್ನು ಮಾಡುತ್ತಾನೆ.

    ೨೫೪

    يَٰٓأَيُّهَا ٱلَّذِينَ ءَامَنُوٓاْ أَنفِقُواْ مِمَّا رَزَقۡنَٰكُم مِّن قَبۡلِ أَن يَأۡتِيَ يَوۡمٞ لَّا بَيۡعٞ فِيهِ وَلَا خُلَّةٞ وَلَا شَفَٰعَةٞۗ وَٱلۡكَٰفِرُونَ هُمُ ٱلظَّٰلِمُونَ

    ಓ ಸತ್ಯವಿಶ್ವಾಸಿಗಳೇ! ಯಾವುದೇ ವ್ಯವಹಾರ, ಗೆಳೆತನ ಅಥವಾ ಶಿಫಾರಸು ಇಲ್ಲದ ಒಂದು ದಿನ ಬರುವುದಕ್ಕೆ ಮೊದಲೇ ನಾವು ನಿಮಗೆ ಒದಗಿಸಿದ ಧನದಿಂದ ಖರ್ಚು ಮಾಡಿರಿ. ಸತ್ಯನಿಷೇಧಿಗಳೇ ಅಕ್ರಮಿಗಳು.

    ೨೫೫

    ٱللَّهُ لَآ إِلَٰهَ إِلَّا هُوَ ٱلۡحَيُّ ٱلۡقَيُّومُۚ لَا تَأۡخُذُهُۥ سِنَةٞ وَلَا نَوۡمٞۚ لَّهُۥ مَا فِي ٱلسَّمَٰوَٰتِ وَمَا فِي ٱلۡأَرۡضِۗ مَن ذَا ٱلَّذِي يَشۡفَعُ عِندَهُۥٓ إِلَّا بِإِذۡنِهِۦۚ يَعۡلَمُ مَا بَيۡنَ أَيۡدِيهِمۡ وَمَا خَلۡفَهُمۡۖ وَلَا يُحِيطُونَ بِشَيۡءٖ مِّنۡ عِلۡمِهِۦٓ إِلَّا بِمَا شَآءَۚ وَسِعَ كُرۡسِيُّهُ ٱلسَّمَٰوَٰتِ وَٱلۡأَرۡضَۖ وَلَا يَـُٔودُهُۥ حِفۡظُهُمَاۚ وَهُوَ ٱلۡعَلِيُّ ٱلۡعَظِيمُ

    ಅಲ್ಲಾಹು! ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಅವನು ನಿರಂತರ ಜೀವಿಸುವವನು ಮತ್ತು ಎಲ್ಲರನ್ನೂ ಸಂರಕ್ಷಿಸಿ ನಿಯಂತ್ರಿಸುವವನಾಗಿದ್ದಾನೆ. ತೂಕಡಿಕೆ ಅಥವಾ ನಿದ್ದೆ ಅವನನ್ನು ವಶಪಡಿಸುವುದಿಲ್ಲ. ಭೂಮ್ಯಾಕಾಶಗಳಲ್ಲಿರುವ ಎಲ್ಲವೂ ಅವನಿಗೆ ಸೇರಿದ್ದು. ಅವನ ಅಪ್ಪಣೆಯಿಲ್ಲದೆ ಅವನ ಬಳಿ ಶಿಫಾರಸು ಮಾಡುವವನು ಯಾರು? ಅವರ ಮುಂದಿರುವುದನ್ನು ಮತ್ತು ಅವರ ಹಿಂದಿರುವುದನ್ನು ಅವನು ತಿಳಿಯುತ್ತಾನೆ. ಅವನ ಜ್ಞಾನದಿಂದ ಅವನು ಇಚ್ಛಿಸುವಷ್ಟನ್ನಲ್ಲದೆ (ಬೇರೇನನ್ನೂ) ತಿಳಿದುಕೊಳ್ಳಲು ಅವರಿಗೆ ಸಾಧ್ಯವಿಲ್ಲ. ಅವನ ಕುರ್ಸೀ ಭೂಮ್ಯಾಕಾಶಗಳನ್ನು ವ್ಯಾಪಿಸಿಕೊಂಡಿದೆ. ಅವುಗಳ ಸಂರಕ್ಷಣೆಯು ಅವನನ್ನು ಆಯಾಸಗೊಳಿಸುವುದಿಲ್ಲ. ಅವನು ಅತ್ಯುನ್ನತನು ಮತ್ತು ಮಹಾನನಾಗಿದ್ದಾನೆ .[1]

    [1] ಇದು ಆಯತುಲ್ ಕುರ್ಸಿ ಆಗಿದ್ದು ಹದೀಸ್ ಗಳಲ್ಲಿ ಇದರ ಅನೇಕ ಶ್ರೇಷ್ಠತೆಗಳ ಬಗ್ಗೆ ಉಲ್ಲೇಖಗಳಿವೆ.

    ೨೫೬

    لَآ إِكۡرَاهَ فِي ٱلدِّينِۖ قَد تَّبَيَّنَ ٱلرُّشۡدُ مِنَ ٱلۡغَيِّۚ فَمَن يَكۡفُرۡ بِٱلطَّٰغُوتِ وَيُؤۡمِنۢ بِٱللَّهِ فَقَدِ ٱسۡتَمۡسَكَ بِٱلۡعُرۡوَةِ ٱلۡوُثۡقَىٰ لَا ٱنفِصَامَ لَهَاۗ وَٱللَّهُ سَمِيعٌ عَلِيمٌ

    ಧರ್ಮದ ವಿಷಯದಲ್ಲಿ ಯಾವುದೇ ಬಲಾತ್ಕಾರವಿಲ್ಲ. ಸನ್ಮಾರ್ಗವು ದುರ್ಮಾರ್ಗದಿಂದ ಸ್ಪಷ್ಟವಾಗಿ ಬೇರ್ಪಟ್ಟಿದೆ. ಆದ್ದರಿಂದ ಯಾರು ಅಲ್ಲಾಹನ ಹೊರತಾದ ದೇವರುಗಳನ್ನು ನಿಷೇಧಿಸಿ ಅಲ್ಲಾಹನಲ್ಲಿ ಮಾತ್ರ ವಿಶ್ವಾಸವಿಡುತ್ತಾನೋ ಅವನು ಅತ್ಯಂತ ಬಲಿಷ್ಠ ಹಗ್ಗವನ್ನು ಹಿಡಿದುಕೊಂಡನು. ಅದು ಎಂದಿಗೂ ಕಡಿದು ಹೋಗುವುದಿಲ್ಲ. ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.

    ೨೫೭

    ٱللَّهُ وَلِيُّ ٱلَّذِينَ ءَامَنُواْ يُخۡرِجُهُم مِّنَ ٱلظُّلُمَٰتِ إِلَى ٱلنُّورِۖ وَٱلَّذِينَ كَفَرُوٓاْ أَوۡلِيَآؤُهُمُ ٱلطَّٰغُوتُ يُخۡرِجُونَهُم مِّنَ ٱلنُّورِ إِلَى ٱلظُّلُمَٰتِۗ أُوْلَٰٓئِكَ أَصۡحَٰبُ ٱلنَّارِۖ هُمۡ فِيهَا خَٰلِدُونَ

    ಅಲ್ಲಾಹು ಸತ್ಯವಿಶ್ವಾಸಿಗಳ ರಕ್ಷಕನು. ಅವನು ಅವರನ್ನು ಅಂಧಕಾರಗಳಿಂದ ಬೆಳಕಿಗೆ ತರುತ್ತಾನೆ. ಅಲ್ಲಾಹನ ಹೊರತಾದ ದೇವರುಗಳು ಸತ್ಯನಿಷೇಧಿಗಳ ಸಂರಕ್ಷಕರಾಗಿದ್ದಾರೆ. ಅವರು ಅವರನ್ನು ಬೆಳಕಿನಿಂದ ಅಂಧಕಾರಗಳಿಗೆ ಸಾಗಿಸುತ್ತಾರೆ. ಅವರೇ ನರಕವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.

    ೨೫೮

    أَلَمۡ تَرَ إِلَى ٱلَّذِي حَآجَّ إِبۡرَٰهِـۧمَ فِي رَبِّهِۦٓ أَنۡ ءَاتَىٰهُ ٱللَّهُ ٱلۡمُلۡكَ إِذۡ قَالَ إِبۡرَٰهِـۧمُ رَبِّيَ ٱلَّذِي يُحۡيِۦ وَيُمِيتُ قَالَ أَنَا۠ أُحۡيِۦ وَأُمِيتُۖ قَالَ إِبۡرَٰهِـۧمُ فَإِنَّ ٱللَّهَ يَأۡتِي بِٱلشَّمۡسِ مِنَ ٱلۡمَشۡرِقِ فَأۡتِ بِهَا مِنَ ٱلۡمَغۡرِبِ فَبُهِتَ ٱلَّذِي كَفَرَۗ وَٱللَّهُ لَا يَهۡدِي ٱلۡقَوۡمَ ٱلظَّٰلِمِينَ

    ಇಬ್ರಾಹೀಮರೊಡನೆ ಅವರ ಪರಿಪಾಲಕನ (ಅಲ್ಲಾಹನ) ವಿಷಯದಲ್ಲಿ ತರ್ಕಿಸಿದವನನ್ನು ನೀವು ನೋಡಿಲ್ಲವೇ? ಅಲ್ಲಾಹು ಅವನಿಗೆ ಸಾಮ್ರಾಜ್ಯವನ್ನು ದಯಪಾಲಿಸಿದ್ದನು. "ನನ್ನ ಪರಿಪಾಲಕನು (ಅಲ್ಲಾಹು) ಜೀವ ಮತ್ತು ಮರಣವನ್ನು ನೀಡುತ್ತಾನೆ" ಎಂದು ಇಬ್ರಾಹೀಂ ಹೇಳಿದಾಗ, "ನಾನು ಕೂಡ ಜೀವ ಮತ್ತು ಮರಣವನ್ನು ನೀಡುತ್ತೇನೆ" ಎಂದು ಅವನು ಹೇಳಿದನು. ಇಬ್ರಾಹೀಂ ಹೇಳಿದರು: "ಅಲ್ಲಾಹು ಸೂರ್ಯನನ್ನು ಪೂರ್ವದಿಂದ ತರುತ್ತಾನೆ; ನೀವು ಅದನ್ನು ಪಶ್ಚಿಮದಿಂದ ತನ್ನಿರಿ!" ಆಗ ಆ ಸತ್ಯನಿಷೇಧಿ ಮೂಕವಿಸ್ಮಿತನಾದನು. ಅಕ್ರಮವೆಸಗುವ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ.

    ೨೫೯

    أَوۡ كَٱلَّذِي مَرَّ عَلَىٰ قَرۡيَةٖ وَهِيَ خَاوِيَةٌ عَلَىٰ عُرُوشِهَا قَالَ أَنَّىٰ يُحۡيِۦ هَٰذِهِ ٱللَّهُ بَعۡدَ مَوۡتِهَاۖ فَأَمَاتَهُ ٱللَّهُ مِاْئَةَ عَامٖ ثُمَّ بَعَثَهُۥۖ قَالَ كَمۡ لَبِثۡتَۖ قَالَ لَبِثۡتُ يَوۡمًا أَوۡ بَعۡضَ يَوۡمٖۖ قَالَ بَل لَّبِثۡتَ مِاْئَةَ عَامٖ فَٱنظُرۡ إِلَىٰ طَعَامِكَ وَشَرَابِكَ لَمۡ يَتَسَنَّهۡۖ وَٱنظُرۡ إِلَىٰ حِمَارِكَ وَلِنَجۡعَلَكَ ءَايَةٗ لِّلنَّاسِۖ وَٱنظُرۡ إِلَى ٱلۡعِظَامِ كَيۡفَ نُنشِزُهَا ثُمَّ نَكۡسُوهَا لَحۡمٗاۚ فَلَمَّا تَبَيَّنَ لَهُۥ قَالَ أَعۡلَمُ أَنَّ ٱللَّهَ عَلَىٰ كُلِّ شَيۡءٖ قَدِيرٞ

    ಅಥವಾ ಛಾವಣಿಗಳೊಂದಿಗೆ ಕುಸಿದುಬಿದ್ದ ಒಂದು ಊರಿನ ಬಳಿಯಿಂದ ಸಂಚರಿಸುತ್ತಿದ್ದ ಒಬ್ಬ ವ್ಯಕ್ತಿಯಂತೆ. ಅವರು ಕೇಳಿದರು: “ನಿರ್ಜೀವವಾದ ಬಳಿಕ ಅಲ್ಲಾಹು ಇದಕ್ಕೆ ಜೀವ ನೀಡುವುದು ಹೇಗೆ?” ಆಗ ಅಲ್ಲಾಹು ಅವರನ್ನು ನೂರು ವರ್ಷಗಳ ಕಾಲ ಮೃತ್ಯುವಶಗೊಳಿಸಿದನು. ನಂತರ ಅವರಿಗೆ ಜೀವ ನೀಡಿ ಎಬ್ಬಿಸಿ ಕೇಳಿದನು: “ನೀವು ಎಷ್ಟು ವರ್ಷ ಕಳೆದಿರಿ?” ಅವರು ಉತ್ತರಿಸಿದರು: “ಒಂದು ದಿನ ಅಥವಾ ದಿನದ ಕೆಲವು ತಾಸುಗಳು.” ಅಲ್ಲಾಹು ಹೇಳಿದನು: “ಅಲ್ಲ, ವಾಸ್ತವವಾಗಿ ನೀವು ನೂರು ವರ್ಷ ಕಳೆದಿದ್ದೀರಿ. ನೀವು ನಿಮ್ಮ ಆಹಾರ-ಪಾನೀಯಗಳನ್ನು ನೋಡಿರಿ. ಅವು ಹಾಳಾಗಿಲ್ಲ. ನಿಮ್ಮ ಕತ್ತೆಯನ್ನು ನೋಡಿರಿ. ನಾವು ನಿಮ್ಮನ್ನು ಜನರಿಗೊಂದು ದೃಷ್ಟಾಂತವಾಗಿ ಮಾಡುತ್ತೇವೆ. ನಾವು ಆ ಮೂಳೆಗಳನ್ನು ಹೇಗೆ ಜೋಡಿಸುತ್ತೇವೆ ಮತ್ತು ಅವುಗಳಿಗೆ ಹೇಗೆ ಮಾಂಸವನ್ನು ಹೊದಿಯುತ್ತೇವೆಂದು ನೋಡಿರಿ.” ಅವರಿಗೆ ವಿಷಯವು ಸ್ಪಷ್ಟವಾದಾಗ ಅವರು ಹೇಳಿದರು: “ನಿಶ್ಚಯವಾಗಿಯೂ ಅಲ್ಲಾಹನಿಗೆ ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವಿದೆಯೆಂದು ನನಗೆ ತಿಳಿದಿದೆ.”

    ೨೬೦

    وَإِذۡ قَالَ إِبۡرَٰهِـۧمُ رَبِّ أَرِنِي كَيۡفَ تُحۡيِ ٱلۡمَوۡتَىٰۖ قَالَ أَوَلَمۡ تُؤۡمِنۖ قَالَ بَلَىٰ وَلَٰكِن لِّيَطۡمَئِنَّ قَلۡبِيۖ قَالَ فَخُذۡ أَرۡبَعَةٗ مِّنَ ٱلطَّيۡرِ فَصُرۡهُنَّ إِلَيۡكَ ثُمَّ ٱجۡعَلۡ عَلَىٰ كُلِّ جَبَلٖ مِّنۡهُنَّ جُزۡءٗا ثُمَّ ٱدۡعُهُنَّ يَأۡتِينَكَ سَعۡيٗاۚ وَٱعۡلَمۡ أَنَّ ٱللَّهَ عَزِيزٌ حَكِيمٞ

    ಇಬ್ರಾಹೀಮ್ ಹೇಳಿದ ಸಂದರ್ಭ: "ಓ ನನ್ನ ಪರಿಪಾಲಕನೇ! ನೀನು ಸತ್ತವರಿಗೆ ಹೇಗೆ ಜೀವ ನೀಡುತ್ತೀ ಎಂದು ನನಗೆ ತೋರಿಸಿಕೊಡು." ಅಲ್ಲಾಹು ಕೇಳಿದನು: "ನಿಮಗೆ ನಂಬಿಕೆಯಿಲ್ಲವೇ?" ಅವರು ಹೇಳಿದರು: "ನಂಬಿಕೆಯಿದೆ. ಆದರೆ ನನ್ನ ಹೃದಯದ ಸಮಾಧಾನಕ್ಕಾಗಿ." ಅಲ್ಲಾಹು ಹೇಳಿದನು: "ನೀವು ನಾಲ್ಕು ಹಕ್ಕಿಗಳನ್ನು ಹಿಡಿದು ಅವುಗಳನ್ನು ನಿಮ್ಮ ಬಳಿಗೆ ಸೇರಿಸಿಕೊಳ್ಳಿ. ನಂತರ ಅವುಗಳನ್ನು (ತುಂಡುಗಳಾಗಿ ಕತ್ತರಿಸಿ) ಒಂದೊಂದು ಭಾಗವನ್ನು ಒಂದೊಂದು ಬೆಟ್ಟದ ಮೇಲಿಡಿ. ನಂತರ ಅವುಗಳನ್ನು ಕೂಗಿ ಕರೆಯಿರಿ. ಅವು ತಕ್ಷಣ ನಿಮ್ಮ ಬಳಿಗೆ ಓಡಿ ಬರುವುವು. ತಿಳಿಯಿರಿ! ನಿಶ್ಚಯವಾಗಿಯೂ ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.

    ೨೬೧

    مَّثَلُ ٱلَّذِينَ يُنفِقُونَ أَمۡوَٰلَهُمۡ فِي سَبِيلِ ٱللَّهِ كَمَثَلِ حَبَّةٍ أَنۢبَتَتۡ سَبۡعَ سَنَابِلَ فِي كُلِّ سُنۢبُلَةٖ مِّاْئَةُ حَبَّةٖۗ وَٱللَّهُ يُضَٰعِفُ لِمَن يَشَآءُۚ وَٱللَّهُ وَٰسِعٌ عَلِيمٌ

    ಅಲ್ಲಾಹನ ಮಾರ್ಗದಲ್ಲಿ ತಮ್ಮ ಧನವನ್ನು ಖರ್ಚು ಮಾಡುವವರ ಉದಾಹರಣೆಯು ಒಂದು ಧಾನ್ಯದಂತೆ. ಅದು ಏಳು ತೆನೆಗಳನ್ನು ಉತ್ಪಾದಿಸಿತು. ಪ್ರತಿಯೊಂದು ತೆನೆಯಲ್ಲೂ ನೂರು ಧಾನ್ಯಗಳಿವೆ. ಅಲ್ಲಾಹು ಅವನು ಇಚ್ಛಿಸುವವರಿಗೆ ಇಮ್ಮಡಿಗೊಳಿಸಿಕೊಡುತ್ತಾನೆ. ಅಲ್ಲಾಹು ವಿಶಾಲನು ಮತ್ತು ಸರ್ವಜ್ಞನಾಗಿದ್ದಾನೆ.

    ೨೬೨

    ٱلَّذِينَ يُنفِقُونَ أَمۡوَٰلَهُمۡ فِي سَبِيلِ ٱللَّهِ ثُمَّ لَا يُتۡبِعُونَ مَآ أَنفَقُواْ مَنّٗا وَلَآ أَذٗى لَّهُمۡ أَجۡرُهُمۡ عِندَ رَبِّهِمۡ وَلَا خَوۡفٌ عَلَيۡهِمۡ وَلَا هُمۡ يَحۡزَنُونَ

    ಅಲ್ಲಾಹನ ಮಾರ್ಗದಲ್ಲಿ ತಮ್ಮ ಧನವನ್ನು ಖರ್ಚು ಮಾಡುವವರು ಮತ್ತು ನಂತರ ತಾವು ಖರ್ಚು ಮಾಡಿದ್ದಕ್ಕಾಗಿ ಉಪಕಾರ ಸ್ಮರಣೆ ಬಯಸದವರು ಮತ್ತು ತೊಂದರೆ ಕೊಡದವರು ಯಾರೋ—ಅವರಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿ ಅವರ ಪ್ರತಿಫಲವಿದೆ. ಅವರಿಗೆ ಯಾವುದೇ ಭಯವಿಲ್ಲ; ಅವರು ದುಃಖಿಸುವುದೂ ಇಲ್ಲ.

    ೨೬೩

    ۞ قَوۡلٞ مَّعۡرُوفٞ وَمَغۡفِرَةٌ خَيۡرٞ مِّن صَدَقَةٖ يَتۡبَعُهَآ أَذٗىۗ وَٱللَّهُ غَنِيٌّ حَلِيمٞ

    ಕೊಟ್ಟ ನಂತರ ತೊಂದರೆ ನೀಡುವ ದಾನಕ್ಕಿಂತ ಉತ್ತಮವಾದ ಮಾತು ಮತ್ತು ಕ್ಷಮೆಯು ಶ್ರೇಷ್ಠವಾಗಿದೆ. ಅಲ್ಲಾಹು ನಿರಪೇಕ್ಷನು ಮತ್ತು ಸಹಿಷ್ಣುತೆಯುಳ್ಳವನಾಗಿದ್ದಾನೆ.

    ೨೬೪

    يَٰٓأَيُّهَا ٱلَّذِينَ ءَامَنُواْ لَا تُبۡطِلُواْ صَدَقَٰتِكُم بِٱلۡمَنِّ وَٱلۡأَذَىٰ كَٱلَّذِي يُنفِقُ مَالَهُۥ رِئَآءَ ٱلنَّاسِ وَلَا يُؤۡمِنُ بِٱللَّهِ وَٱلۡيَوۡمِ ٱلۡأٓخِرِۖ فَمَثَلُهُۥ كَمَثَلِ صَفۡوَانٍ عَلَيۡهِ تُرَابٞ فَأَصَابَهُۥ وَابِلٞ فَتَرَكَهُۥ صَلۡدٗاۖ لَّا يَقۡدِرُونَ عَلَىٰ شَيۡءٖ مِّمَّا كَسَبُواْۗ وَٱللَّهُ لَا يَهۡدِي ٱلۡقَوۡمَ ٱلۡكَٰفِرِينَ

    ಓ ಸತ್ಯವಿಶ್ವಾಸಿಗಳೇ! ಉಪಕಾರ ಸ್ಮರಣೆ ಬಯಸುವ ಮೂಲಕ ಮತ್ತು ತೊಂದರೆ ಕೊಡುವ ಮೂಲಕ ನಿಮ್ಮ ದಾನಗಳನ್ನು ವ್ಯರ್ಥಗೊಳಿಸಬೇಡಿ. ಅಲ್ಲಾಹನಲ್ಲಿ ಮತ್ತು ಪರಲೋಕದಲ್ಲಿ ವಿಶ್ವಾಸವಿಡದೆ ಕೇವಲ ಜನರು ನೋಡುವುದಕ್ಕಾಗಿ ಖರ್ಚು ಮಾಡುವ ವ್ಯಕ್ತಿಯಂತೆ ನೀವಾಗಬೇಡಿ. ಅವನ ಉದಾಹರಣೆಯು ನುಣುಪಾದ ಒಂದು ಬಂಡೆಯಂತೆ. ಅದರ ಮೇಲೆ ಸ್ವಲ್ಪ ಮಣ್ಣಿದೆ. ಅದಕ್ಕೆ ಜಡಿಮಳೆ ಸುರಿದು ಅದು ಅದನ್ನು ಬೋಳು ಮಾಡಿಬಿಟ್ಟಿತು. ಅವರಿಗೆ ಅವರು ಸಂಪಾದಿಸಿದ ಯಾವುದನ್ನೂ ವಶದಲ್ಲಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ಸತ್ಯನಿಷೇಧಿಗಳಾದ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ.

    ೨೬೫

    وَمَثَلُ ٱلَّذِينَ يُنفِقُونَ أَمۡوَٰلَهُمُ ٱبۡتِغَآءَ مَرۡضَاتِ ٱللَّهِ وَتَثۡبِيتٗا مِّنۡ أَنفُسِهِمۡ كَمَثَلِ جَنَّةِۭ بِرَبۡوَةٍ أَصَابَهَا وَابِلٞ فَـَٔاتَتۡ أُكُلَهَا ضِعۡفَيۡنِ فَإِن لَّمۡ يُصِبۡهَا وَابِلٞ فَطَلّٞۗ وَٱللَّهُ بِمَا تَعۡمَلُونَ بَصِيرٌ

    ಅಲ್ಲಾಹನ ಸಂಪ್ರೀತಿಯನ್ನು ಹುಡುಕುತ್ತಾ ದೃಢಮನಸ್ಸಿನಿಂದ ಮತ್ತು ಮನಸ್ಸಂತೃಪ್ತಿಯಿಂದ ತಮ್ಮ ಧನವನ್ನು ಖರ್ಚು ಮಾಡುವವರ ಉದಾಹರಣೆಯು ಎತ್ತರದ ಸ್ಥಳದಲ್ಲಿರುವ ಒಂದು ತೋಟದಂತೆ. ಅದಕ್ಕೆ ಜಡಿಮಳೆಯು ಸುರಿದಾಗ ಅದು ಇಮ್ಮಡಿ ಫಲವನ್ನು ನೀಡುತ್ತದೆ. ಅದಕ್ಕೆ ಜಡಿಮಳೆ ಸುರಿಯದಿದ್ದರೂ ತುಂತುರು ಮಳೆ ಸಾಕಾಗುತ್ತದೆ. ಅಲ್ಲಾಹು ನೀವು ಮಾಡುತ್ತಿರುವ ಕರ್ಮಗಳನ್ನು ನೋಡುತ್ತಿದ್ದಾನೆ.

    ೨೬೬

    أَيَوَدُّ أَحَدُكُمۡ أَن تَكُونَ لَهُۥ جَنَّةٞ مِّن نَّخِيلٖ وَأَعۡنَابٖ تَجۡرِي مِن تَحۡتِهَا ٱلۡأَنۡهَٰرُ لَهُۥ فِيهَا مِن كُلِّ ٱلثَّمَرَٰتِ وَأَصَابَهُ ٱلۡكِبَرُ وَلَهُۥ ذُرِّيَّةٞ ضُعَفَآءُ فَأَصَابَهَآ إِعۡصَارٞ فِيهِ نَارٞ فَٱحۡتَرَقَتۡۗ كَذَٰلِكَ يُبَيِّنُ ٱللَّهُ لَكُمُ ٱلۡأٓيَٰتِ لَعَلَّكُمۡ تَتَفَكَّرُونَ

    ನಿಮ್ಮಲ್ಲೊಬ್ಬನಿಗೆ ತಳಭಾಗದಿಂದ ನದಿಗಳು ಹರಿಯುವ, ಖರ್ಜೂರ ಮತ್ತು ದ್ರಾಕ್ಷಿಯ ಹಾಗೂ ಎಲ್ಲಾ ರೀತಿಯ ಹಣ್ಣು-ಹಂಪಲುಗಳಿರುವ ಒಂದು ತೋಟವಿದ್ದು, ಅವನು ವೃದ್ಧನಾಗಿದ್ದು ಬಲಹೀನರಾದ ಮಕ್ಕಳೂ ಇರುವ ಸ್ಥಿತಿಯಲ್ಲಿ ಆ ತೋಟಕ್ಕೆ ಬೆಂಕಿಯ ಬಿರುಗಾಳಿ ಬೀಸಿ ಅದರಿಂದ ಆ ತೋಟವು ಸುಟ್ಟು ಕರಕಲಾಗುವುದನ್ನು ನೀವು ಬಯಸುತ್ತೀರಾ? ಈ ರೀತಿ ಅಲ್ಲಾಹು ತನ್ನ ವಚನಗಳನ್ನು ನಿಮಗೆ ಸ್ಪಷ್ಟವಾಗಿ ವಿವರಿಸಿಕೊಡುತ್ತಾನೆ. ನೀವು ಆಲೋಚಿಸುವುದಕ್ಕಾಗಿ.

    ೨೬೭

    يَٰٓأَيُّهَا ٱلَّذِينَ ءَامَنُوٓاْ أَنفِقُواْ مِن طَيِّبَٰتِ مَا كَسَبۡتُمۡ وَمِمَّآ أَخۡرَجۡنَا لَكُم مِّنَ ٱلۡأَرۡضِۖ وَلَا تَيَمَّمُواْ ٱلۡخَبِيثَ مِنۡهُ تُنفِقُونَ وَلَسۡتُم بِـَٔاخِذِيهِ إِلَّآ أَن تُغۡمِضُواْ فِيهِۚ وَٱعۡلَمُوٓاْ أَنَّ ٱللَّهَ غَنِيٌّ حَمِيدٌ

    ಓ ಸತ್ಯವಿಶ್ವಾಸಿಗಳೇ! ನೀವು ಸಂಪಾದಿಸಿದ ಉತ್ತಮ ವಸ್ತುಗಳಿಂದ ಮತ್ತು ನಾವು ನಿಮಗೆ ಭೂಮಿಯಿಂದ ಉತ್ಪಾದಿಸಿಕೊಟ್ಟ ವಸ್ತುಗಳಿಂದ ಖರ್ಚು (ದಾನ) ಮಾಡಿರಿ. ನೀವು ಕಣ್ಣು ಮುಚ್ಚಿಕೊಂಡಲ್ಲದೆ ಸ್ವೀಕರಿಸದ ಕೆಟ್ಟ ವಸ್ತುಗಳನ್ನು ಖರ್ಚು (ದಾನ) ಮಾಡಲು ಮುಂದಾಗಬೇಡಿ. ತಿಳಿಯಿರಿ! ನಿಶ್ಚಯವಾಗಿಯೂ ಅಲ್ಲಾಹು ನಿರಪೇಕ್ಷನು ಮತ್ತು ಸ್ತುತ್ಯರ್ಹನಾಗಿದ್ದಾನೆ.

    ೨೬೮

    ٱلشَّيۡطَٰنُ يَعِدُكُمُ ٱلۡفَقۡرَ وَيَأۡمُرُكُم بِٱلۡفَحۡشَآءِۖ وَٱللَّهُ يَعِدُكُم مَّغۡفِرَةٗ مِّنۡهُ وَفَضۡلٗاۗ وَٱللَّهُ وَٰسِعٌ عَلِيمٞ

    ಶೈತಾನನು ನಿಮಗೆ ಬಡತನದ ಬಗ್ಗೆ ಬೆದರಿಸುತ್ತಾನೆ ಮತ್ತು ಅಶ್ಲೀಲತೆಯನ್ನು ಆದೇಶಿಸುತ್ತಾನೆ. ಅಲ್ಲಾಹು ನಿಮಗೆ ಅವನ ಕ್ಷಮೆ ಮತ್ತು ಔದಾರ್ಯದ ಬಗ್ಗೆ ವಾಗ್ದಾನ ಮಾಡುತ್ತಾನೆ. ಅಲ್ಲಾಹು ವಿಶಾಲನು ಮತ್ತು ಸರ್ವಜ್ಞನಾಗಿದ್ದಾನೆ.

    ೨೬೯

    يُؤۡتِي ٱلۡحِكۡمَةَ مَن يَشَآءُۚ وَمَن يُؤۡتَ ٱلۡحِكۡمَةَ فَقَدۡ أُوتِيَ خَيۡرٗا كَثِيرٗاۗ وَمَا يَذَّكَّرُ إِلَّآ أُوْلُواْ ٱلۡأَلۡبَٰبِ

    ಅವನು ಇಚ್ಛಿಸುವವರಿಗೆ ಅವನು ವಿವೇಕವನ್ನು ದಯಪಾಲಿಸುತ್ತಾನೆ. ಯಾರಿಗೆ ವಿವೇಕವನ್ನು ದಯಪಾಲಿಸಲಾಗಿದೆಯೋ ಅವನಿಗೆ ಅತ್ಯಧಿಕ ಒಳಿತುಗಳನ್ನು ದಯಪಾಲಿಸಲಾಗಿದೆ. ಬುದ್ಧಿವಂತರ ಹೊರತು ಇನ್ನಾರೂ ಉಪದೇಶವನ್ನು ಸ್ವೀಕರಿಸುವುದಿಲ್ಲ.

    ೨೭೦

    وَمَآ أَنفَقۡتُم مِّن نَّفَقَةٍ أَوۡ نَذَرۡتُم مِّن نَّذۡرٖ فَإِنَّ ٱللَّهَ يَعۡلَمُهُۥۗ وَمَا لِلظَّٰلِمِينَ مِنۡ أَنصَارٍ

    ನೀವು ಯಾವುದೇ ವಸ್ತುವನ್ನು ಖರ್ಚು (ದಾನ) ಮಾಡಿದರೂ ಅಥವಾ ಹರಕೆ ಮಾಡಿದರೂ ನಿಶ್ಚಯವಾಗಿಯೂ ಅಲ್ಲಾಹು ಅದನ್ನು ತಿಳಿಯುತ್ತಾನೆ. ಅಕ್ರಮಿಗಳಿಗೆ ಸಹಾಯ ಮಾಡುವವರು ಯಾರೂ ಇಲ್ಲ.

    ೨೭೧

    إِن تُبۡدُواْ ٱلصَّدَقَٰتِ فَنِعِمَّا هِيَۖ وَإِن تُخۡفُوهَا وَتُؤۡتُوهَا ٱلۡفُقَرَآءَ فَهُوَ خَيۡرٞ لَّكُمۡۚ وَيُكَفِّرُ عَنكُم مِّن سَيِّـَٔاتِكُمۡۗ وَٱللَّهُ بِمَا تَعۡمَلُونَ خَبِيرٞ

    ನೀವು ದಾನ ಮಾಡಿದ್ದನ್ನು ಬಹಿರಂಗಪಡಿಸಿದರೆ ಅದು ಒಳ್ಳೆಯದೇ. ಆದರೆ ನೀವು ಅದನ್ನು ಗೋಪ್ಯವಾಗಿಟ್ಟು ಬಡವರಿಗೆ ನೀಡಿದರೆ ಅದು ನಿಮಗೆ ಶ್ರೇಷ್ಠವಾಗಿದೆ. ಅಲ್ಲಾಹು ನಿಮ್ಮ ಪಾಪಗಳನ್ನು ಅಳಿಸುವನು. ನೀವು ಮಾಡುವ ಕರ್ಮಗಳ ಬಗ್ಗೆ ಅಲ್ಲಾಹು ಸೂಕ್ಷ್ಮವಾಗಿ ತಿಳಿದಿದ್ದಾನೆ.

    ೨೭೨

    ۞ لَّيۡسَ عَلَيۡكَ هُدَىٰهُمۡ وَلَٰكِنَّ ٱللَّهَ يَهۡدِي مَن يَشَآءُۗ وَمَا تُنفِقُواْ مِنۡ خَيۡرٖ فَلِأَنفُسِكُمۡۚ وَمَا تُنفِقُونَ إِلَّا ٱبۡتِغَآءَ وَجۡهِ ٱللَّهِۚ وَمَا تُنفِقُواْ مِنۡ خَيۡرٖ يُوَفَّ إِلَيۡكُمۡ وَأَنتُمۡ لَا تُظۡلَمُونَ

    ನಿಮಗೆ ಅವರನ್ನು ಸನ್ಮಾರ್ಗದಲ್ಲಿ ಸೇರಿಸುವ ಹೊಣೆಗಾರಿಕೆಯಿಲ್ಲ. ಬದಲಿಗೆ, ಅಲ್ಲಾಹು ಅವನು ಇಚ್ಛಿಸುವವರನ್ನು ಸನ್ಮಾರ್ಗದಲ್ಲಿ ಸೇರಿಸುತ್ತಾನೆ. ನೀವು ಏನು ಖರ್ಚು (ದಾನ) ಮಾಡಿದರೂ ಅದರ ಲಾಭವು ನಿಮಗೇ ಆಗಿದೆ. ಅಲ್ಲಾಹನ ಸಂಪ್ರೀತಿಯನ್ನು ಬಯಸಿಯೇ ವಿನಾ ನೀವು ಖರ್ಚು (ದಾನ) ಮಾಡಬಾರದು. ನೀವು ಏನು ಖರ್ಚು (ದಾನ) ಮಾಡಿದರೂ ಅದರ ಪೂರ್ಣ ಪ್ರತಿಫಲವನ್ನು ನಿಮಗೆ ನೀಡಲಾಗುವುದು. ನಿಮಗೆ ಸ್ವಲ್ಪವೂ ಅನ್ಯಾಯವಾಗುವುದಿಲ್ಲ.

    ೨೭೩

    لِلۡفُقَرَآءِ ٱلَّذِينَ أُحۡصِرُواْ فِي سَبِيلِ ٱللَّهِ لَا يَسۡتَطِيعُونَ ضَرۡبٗا فِي ٱلۡأَرۡضِ يَحۡسَبُهُمُ ٱلۡجَاهِلُ أَغۡنِيَآءَ مِنَ ٱلتَّعَفُّفِ تَعۡرِفُهُم بِسِيمَٰهُمۡ لَا يَسۡـَٔلُونَ ٱلنَّاسَ إِلۡحَافٗاۗ وَمَا تُنفِقُواْ مِنۡ خَيۡرٖ فَإِنَّ ٱللَّهَ بِهِۦ عَلِيمٌ

    ಭೂಮಿಯಲ್ಲಿ ಓಡಾಡಲು ಸಾಧ್ಯವಾಗದಂತೆ ಅಲ್ಲಾಹನ ಮಾರ್ಗದಲ್ಲಿ ಬಂಧನದಲ್ಲಿರುವ ಬಡವರಿಗೆ (ಖರ್ಚು ಮಾಡಿರಿ).[1] ಅವರಿಗೆ ಆತ್ಮಸಂಯಮವಿರುವ ಕಾರಣ (ಇತರರ ಮುಂದೆ ಕೈ ಚಾಚಿ ಬೇಡದ ಕಾರಣ) ಅವಿವೇಕಿಗಳು ಅವರನ್ನು ಶ್ರೀಮಂತರೆಂದು ಭಾವಿಸುತ್ತಾರೆ. ನಿಮಗೆ ಅವರನ್ನು ಅವರ ಹಾವಭಾವಗಳಿಂದ ಗುರುತಿಸಬಹುದು. ಅವರು ಜನರೊಡನೆ ಕಾಡಿ ಬೇಡುವುದಿಲ್ಲ. ನೀವು (ಅಲ್ಲಾಹನ ಮಾರ್ಗದಲ್ಲಿ) ಯಾವುದೇ ಸಂಪತ್ತನ್ನು ಖರ್ಚು (ದಾನ) ಮಾಡಿದರೂ ನಿಶ್ಚಯವಾಗಿಯೂ ಅಲ್ಲಾಹು ಅದನ್ನು ತಿಳಿಯುತ್ತಾನೆ.

    [1] ಇಲ್ಲಿ ಉದ್ದೇಶಿಸಿರುವುದು ಮಕ್ಕಾದಿಂದ ಮದೀನಕ್ಕೆ ವಲಸೆ ಬಂದ ಮುಹಾಜಿರ್‌ಗಳನ್ನಾಗಿದೆ. ಅವರು ಅಲ್ಲಾಹನ ಮಾರ್ಗದಲ್ಲಿ ಎಲ್ಲವನ್ನೂ ತ್ಯಜಿಸಿ ಬಂದಿದ್ದರು.

    ೨೭೪

    ٱلَّذِينَ يُنفِقُونَ أَمۡوَٰلَهُم بِٱلَّيۡلِ وَٱلنَّهَارِ سِرّٗا وَعَلَانِيَةٗ فَلَهُمۡ أَجۡرُهُمۡ عِندَ رَبِّهِمۡ وَلَا خَوۡفٌ عَلَيۡهِمۡ وَلَا هُمۡ يَحۡزَنُونَ

    ರಾತ್ರಿ ಮತ್ತು ಹಗಲು ರಹಸ್ಯವಾಗಿ ಮತ್ತು ಬಹಿರಂಗವಾಗಿ ತಮ್ಮ ಧನವನ್ನು ಖರ್ಚು ಮಾಡುವವರು ಯಾರೋ—ಅವರಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿ ಅವರ ಪ್ರತಿಫಲವಿದೆ. ಅವರಿಗೆ ಯಾವುದೇ ಭಯವಿಲ್ಲ; ಅವರು ದುಃಖಿಸುವುದೂ ಇಲ್ಲ.

    ೨೭೫

    ٱلَّذِينَ يَأۡكُلُونَ ٱلرِّبَوٰاْ لَا يَقُومُونَ إِلَّا كَمَا يَقُومُ ٱلَّذِي يَتَخَبَّطُهُ ٱلشَّيۡطَٰنُ مِنَ ٱلۡمَسِّۚ ذَٰلِكَ بِأَنَّهُمۡ قَالُوٓاْ إِنَّمَا ٱلۡبَيۡعُ مِثۡلُ ٱلرِّبَوٰاْۗ وَأَحَلَّ ٱللَّهُ ٱلۡبَيۡعَ وَحَرَّمَ ٱلرِّبَوٰاْۚ فَمَن جَآءَهُۥ مَوۡعِظَةٞ مِّن رَّبِّهِۦ فَٱنتَهَىٰ فَلَهُۥ مَا سَلَفَ وَأَمۡرُهُۥٓ إِلَى ٱللَّهِۖ وَمَنۡ عَادَ فَأُوْلَٰٓئِكَ أَصۡحَٰبُ ٱلنَّارِۖ هُمۡ فِيهَا خَٰلِدُونَ

    ಬಡ್ಡಿ ತಿನ್ನುವವರು ಯಾರೋ ಅವರು ಶೈತಾನನ ಸ್ಪರ್ಶದಿಂದ ಹುಚ್ಚು ಹಿಡಿದವನು ಎದ್ದೇಳುವಂತೆಯೇ ವಿನಾ ಎದ್ದೇಳುವುದಿಲ್ಲ. ನಿಶ್ಚಯವಾಗಿಯೂ ವ್ಯಾಪಾರವು ಬಡ್ಡಿಯಂತೆ ಎಂದು ಅವರು ಹೇಳಿದ್ದೇ ಅದಕ್ಕೆ ಕಾರಣ. ಆದರೆ ಅಲ್ಲಾಹು ವ್ಯಾಪಾರವನ್ನು ಅನುಮತಿಸಿದ್ದಾನೆ ಮತ್ತು ಬಡ್ಡಿಯನ್ನು ನಿಷೇಧಿಸಿದ್ದಾನೆ. ಆದ್ದರಿಂದ, ಯಾರು ಅಲ್ಲಾಹನ ಕಡೆಯಿಂದ ಬಂದ ಉಪದೇಶವನ್ನು ಕೇಳಿದ ನಂತರ ಬಡ್ಡಿ ವ್ಯವಹಾರವನ್ನು ನಿಲ್ಲಿಸುತ್ತಾನೋ ಅವನಿಗೆ ಹಿಂದೆ ಪಡೆದುದರಲ್ಲಿ ದೋಷವಿಲ್ಲ; ಅವನ ವಿಚಾರಣೆಯು ಅಲ್ಲಾಹನಿಗೆ ಬಿಟ್ಟದ್ದು. ಆದರೆ ಯಾರು ಪುನಃ ಬಡ್ಡಿ ವ್ಯವಹಾರಕ್ಕೆ ಮರಳುತ್ತಾರೋ ಅವರೇ ನರಕವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.

    ೨೭೬

    يَمۡحَقُ ٱللَّهُ ٱلرِّبَوٰاْ وَيُرۡبِي ٱلصَّدَقَٰتِۗ وَٱللَّهُ لَا يُحِبُّ كُلَّ كَفَّارٍ أَثِيمٍ

    ಅಲ್ಲಾಹು ಬಡ್ಡಿಯನ್ನು ಅಳಿಸುತ್ತಾನೆ ಮತ್ತು ದಾನ ಧರ್ಮಗಳನ್ನು ಪೋಷಿಸುತ್ತಾನೆ. ಕೃತಘ್ನ ಮತ್ತು ಪಾಪಿಯಾದ ಯಾರನ್ನೂ ಅಲ್ಲಾಹು ಇಷ್ಟಪಡುವುದಿಲ್ಲ.

    ೨೭೭

    إِنَّ ٱلَّذِينَ ءَامَنُواْ وَعَمِلُواْ ٱلصَّٰلِحَٰتِ وَأَقَامُواْ ٱلصَّلَوٰةَ وَءَاتَوُاْ ٱلزَّكَوٰةَ لَهُمۡ أَجۡرُهُمۡ عِندَ رَبِّهِمۡ وَلَا خَوۡفٌ عَلَيۡهِمۡ وَلَا هُمۡ يَحۡزَنُونَ

    ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳು, ಸತ್ಕರ್ಮವೆಸಗುವವರು, ನಮಾಝ್ ಸಂಸ್ಥಾಪಿಸುವವರು ಮತ್ತು ಝಕಾತ್ ನೀಡುವವರು ಯಾರೋ—ಅವರಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿ ಅವರ ಪ್ರತಿಫಲವಿದೆ. ಅವರಿಗೆ ಯಾವುದೇ ಭಯವಿಲ್ಲ; ಅವರು ದುಃಖಿಸುವುದೂ ಇಲ್ಲ.

    ೨೭೮

    يَٰٓأَيُّهَا ٱلَّذِينَ ءَامَنُواْ ٱتَّقُواْ ٱللَّهَ وَذَرُواْ مَا بَقِيَ مِنَ ٱلرِّبَوٰٓاْ إِن كُنتُم مُّؤۡمِنِينَ

    ಓ ಸತ್ಯವಿಶ್ವಾಸಿಗಳೇ! ಅಲ್ಲಾಹನನ್ನು ಭಯಪಡಿರಿ ಮತ್ತು ಬಡ್ಡಿಯಲ್ಲಿ ಬರಲು ಬಾಕಿಯಿರುವುದನ್ನು ಬಿಟ್ಟುಬಿಡಿ. ನೀವು ಸತ್ಯವಿಶ್ವಾಸಿಗಳಾಗಿದ್ದರೆ.

    ೨೭೯

    فَإِن لَّمۡ تَفۡعَلُواْ فَأۡذَنُواْ بِحَرۡبٖ مِّنَ ٱللَّهِ وَرَسُولِهِۦۖ وَإِن تُبۡتُمۡ فَلَكُمۡ رُءُوسُ أَمۡوَٰلِكُمۡ لَا تَظۡلِمُونَ وَلَا تُظۡلَمُونَ

    ನೀವು ಅದನ್ನು ಮಾಡದಿದ್ದರೆ, ಅಲ್ಲಾಹನೊಡನೆ ಮತ್ತು ಅವನ ಸಂದೇಶವಾಹಕರೊಡನೆ ಹೋರಾಡಲು ಸಿದ್ಧರಾಗಿರಿ. ನೀವು ಪಶ್ಚಾತ್ತಾಪಪಟ್ಟರೆ ನಿಮ್ಮ ಬಂಡವಾಳವನ್ನು ನೀವಿಟ್ಟುಕೊಳ್ಳಬಹುದು. ನೀವು ಅನ್ಯಾಯ ಮಾಡಬಾರದು ಮತ್ತು ನಿಮಗೂ ಅನ್ಯಾಯವಾಗಬಾರದು.

    ೨೮೦

    وَإِن كَانَ ذُو عُسۡرَةٖ فَنَظِرَةٌ إِلَىٰ مَيۡسَرَةٖۚ وَأَن تَصَدَّقُواْ خَيۡرٞ لَّكُمۡ إِن كُنتُمۡ تَعۡلَمُونَ

    (ಸಾಲ ಪಡೆದವನು) ಕಷ್ಟದಲ್ಲಿದ್ದರೆ (ಅವನಿಗೆ) ನಿರಾಳತೆ ದೊರಕುವ ತನಕ ಕಾಲಾವಕಾಶ ನೀಡಿ. ನೀವು ಅದನ್ನು ದಾನವಾಗಿ ಬಿಟ್ಟುಬಿಟ್ಟರೆ ಅದು ನಿಮಗೆ ಅತ್ಯುತ್ತಮವಾಗಿದೆ. ನೀವು ತಿಳಿದವರಾಗಿದ್ದರೆ.

    ೨೮೧

    وَٱتَّقُواْ يَوۡمٗا تُرۡجَعُونَ فِيهِ إِلَى ٱللَّهِۖ ثُمَّ تُوَفَّىٰ كُلُّ نَفۡسٖ مَّا كَسَبَتۡ وَهُمۡ لَا يُظۡلَمُونَ

    ನಿಮ್ಮನ್ನು ಅಲ್ಲಾಹನ ಬಳಿಗೆ ಮರಳಿಸಲಾಗುವ ಒಂದು ದಿನವನ್ನು ಭಯಪಡಿರಿ. ನಂತರ ಪ್ರತಿಯೊಬ್ಬರಿಗೂ ಅವರು ಮಾಡಿದ ಕರ್ಮಗಳ ಪ್ರತಿಫಲವನ್ನು ಪೂರ್ಣವಾಗಿ ನೀಡಲಾಗುವುದು. ಅವರಿಗೆ ಯಾವುದೇ ಅನ್ಯಾಯವಾಗುವುದಿಲ್ಲ.

    ೨೮೨

    يَٰٓأَيُّهَا ٱلَّذِينَ ءَامَنُوٓاْ إِذَا تَدَايَنتُم بِدَيۡنٍ إِلَىٰٓ أَجَلٖ مُّسَمّٗى فَٱكۡتُبُوهُۚ وَلۡيَكۡتُب بَّيۡنَكُمۡ كَاتِبُۢ بِٱلۡعَدۡلِۚ وَلَا يَأۡبَ كَاتِبٌ أَن يَكۡتُبَ كَمَا عَلَّمَهُ ٱللَّهُۚ فَلۡيَكۡتُبۡ وَلۡيُمۡلِلِ ٱلَّذِي عَلَيۡهِ ٱلۡحَقُّ وَلۡيَتَّقِ ٱللَّهَ رَبَّهُۥ وَلَا يَبۡخَسۡ مِنۡهُ شَيۡـٔٗاۚ فَإِن كَانَ ٱلَّذِي عَلَيۡهِ ٱلۡحَقُّ سَفِيهًا أَوۡ ضَعِيفًا أَوۡ لَا يَسۡتَطِيعُ أَن يُمِلَّ هُوَ فَلۡيُمۡلِلۡ وَلِيُّهُۥ بِٱلۡعَدۡلِۚ وَٱسۡتَشۡهِدُواْ شَهِيدَيۡنِ مِن رِّجَالِكُمۡۖ فَإِن لَّمۡ يَكُونَا رَجُلَيۡنِ فَرَجُلٞ وَٱمۡرَأَتَانِ مِمَّن تَرۡضَوۡنَ مِنَ ٱلشُّهَدَآءِ أَن تَضِلَّ إِحۡدَىٰهُمَا فَتُذَكِّرَ إِحۡدَىٰهُمَا ٱلۡأُخۡرَىٰۚ وَلَا يَأۡبَ ٱلشُّهَدَآءُ إِذَا مَا دُعُواْۚ وَلَا تَسۡـَٔمُوٓاْ أَن تَكۡتُبُوهُ صَغِيرًا أَوۡ كَبِيرًا إِلَىٰٓ أَجَلِهِۦۚ ذَٰلِكُمۡ أَقۡسَطُ عِندَ ٱللَّهِ وَأَقۡوَمُ لِلشَّهَٰدَةِ وَأَدۡنَىٰٓ أَلَّا تَرۡتَابُوٓاْ إِلَّآ أَن تَكُونَ تِجَٰرَةً حَاضِرَةٗ تُدِيرُونَهَا بَيۡنَكُمۡ فَلَيۡسَ عَلَيۡكُمۡ جُنَاحٌ أَلَّا تَكۡتُبُوهَاۗ وَأَشۡهِدُوٓاْ إِذَا تَبَايَعۡتُمۡۚ وَلَا يُضَآرَّ كَاتِبٞ وَلَا شَهِيدٞۚ وَإِن تَفۡعَلُواْ فَإِنَّهُۥ فُسُوقُۢ بِكُمۡۗ وَٱتَّقُواْ ٱللَّهَۖ وَيُعَلِّمُكُمُ ٱللَّهُۗ وَٱللَّهُ بِكُلِّ شَيۡءٍ عَلِيمٞ

    ಓ ಸತ್ಯವಿಶ್ವಾಸಿಗಳೇ! ನೀವು ಪರಸ್ಪರ ಅವಧಿಯನ್ನು ನಿಶ್ಚಯಿಸಿ ಸಾಲ ವ್ಯವಹಾರ ಮಾಡುವುದಾದರೆ ಅದನ್ನು ಬರೆದಿಟ್ಟುಕೊಳ್ಳಿ. ನಿಮ್ಮ ನಡುವೆ ಒಬ್ಬ ಬರಹಗಾರನು ನ್ಯಾಯಯುತವಾಗಿ ಬರೆಯಲಿ. ಅಲ್ಲಾಹು ಕಲಿಸಿಕೊಟ್ಟ ರೀತಿಯಲ್ಲಿ ಬರೆಯಲು ಬರಹಗಾರನು ನಿರಾಕರಿಸಬಾರದು. ಆದ್ದರಿಂದ ಅವನು ಬರೆಯಲಿ ಮತ್ತು ಸಾಲದ ಹೊಣೆ ಹೊತ್ತವನು ಏನು ಬರೆಯಬೇಕೆಂದು ಹೇಳಿಕೊಡಲಿ. ಅವನು ತನ್ನ ಪರಿಪಾಲಕನಾದ ಅಲ್ಲಾಹನನ್ನು ಭಯಪಡಲಿ ಮತ್ತು ಹೊಣೆಯಿಂದ ಏನೂ ಕಡಿಮೆಗೊಳಿಸದಿರಲಿ. ಸಾಲದ ಹೊಣೆ ಹೊತ್ತವನು ಅವಿವೇಕಿಯಾಗಿದ್ದರೆ, ಅಥವಾ ಬಲಹೀನನಾಗಿದ್ದರೆ, ಅಥವಾ ಹೇಳಿಕೊಡಲು ಅಸಮರ್ಥನಾಗಿದ್ದರೆ ಅವನ ಪೋಷಕರು ನ್ಯಾಯಯುತವಾಗಿ ಹೇಳಿಕೊಡಲಿ. ನಿಮ್ಮ ಪೈಕಿ ಇಬ್ಬರು ಪುರುಷರನ್ನು ಸಾಕ್ಷಿ ನಿಲ್ಲಿಸಿರಿ. ಇಬ್ಬರು ಪುರುಷರಿಲ್ಲದಿದ್ದರೆ ಸಾಕ್ಷಿ ನಿಲ್ಲುವವರ ಪೈಕಿ ನಿಮಗೆ ತೃಪ್ತಿಯಾಗುವ ಒಬ್ಬ ಪುರುಷ ಮತ್ತು ಇಬ್ಬರು ಮಹಿಳೆಯರು ಸಾಕ್ಷಿ ನಿಲ್ಲಲಿ. ಅವರಲ್ಲಿ ಒಬ್ಬಳು ಮರೆತುಬಿಟ್ಟರೆ ಇನ್ನೊಬ್ಬಳು ನೆನಪಿಸುವುದಕ್ಕಾಗಿ. ಸಾಕ್ಷಿಗಳನ್ನು ಕರೆದಾಗ ಅವರು ಬರಲು ಅಸಮ್ಮತಿ ಸೂಚಿಸಬಾರದು. ಸಾಲವನ್ನು ಅದು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ ಅದರ ನಿಶ್ಚಿತ ಅವಧಿಗೆ ಬರೆಯಲು ಆಲಸ್ಯ ಮಾಡಬೇಡಿ. ಇದು ಅಲ್ಲಾಹನ ಬಳಿ ಅತ್ಯಂತ ನ್ಯಾಯಸಮ್ಮತವಾಗಿದೆ, ಸಾಕ್ಷಿಯನ್ನು ಹೆಚ್ಚು ಸರಿಯಾಗಿಡುತ್ತದೆ ಮತ್ತು ನೀವು ಸಂಶಯಪಡದಂತೆ ಮಾಡುತ್ತದೆ. ಆದರೆ ಅದು ನೀವು ಪರಸ್ಪರ ನಡೆಸುವ ನಗದು ವ್ಯಾಪಾರದ ರೂಪದಲ್ಲಿದ್ದರೆ ಅದನ್ನು ಬರೆಯದಿದ್ದರೆ ನಿಮಗೆ ದೋಷವಿಲ್ಲ. ಆದರೆ ನೀವು ಕ್ರಯ-ವಿಕ್ರಯ ಮಾಡುವಾಗ ಸಾಕ್ಷಿಗಳನ್ನು ನಿಲ್ಲಿಸಿರಿ. ಬರಹಗಾರನಿಗೆ ಅಥವಾ ಸಾಕ್ಷಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ. ನೀವೇನಾದರೂ ತೊಂದರೆಯಾಗುವಂತೆ ಮಾಡಿದರೆ ಅದು ನಿಮ್ಮ ದುಷ್ಕರ್ಮವೆಂದು ಪರಿಗಣಿಸಲಾಗುವುದು. ಅಲ್ಲಾಹನನ್ನು ಭಯಪಡಿರಿ. ಅಲ್ಲಾಹು ನಿಮಗೆ ಕಲಿಸಿಕೊಡುತ್ತಿದ್ದಾನೆ. ಅಲ್ಲಾಹು ಎಲ್ಲಾ ವಿಷಯಗಳನ್ನೂ ತಿಳಿದವನಾಗಿದ್ದಾನೆ.

    ೨೮೩

    ۞ وَإِن كُنتُمۡ عَلَىٰ سَفَرٖ وَلَمۡ تَجِدُواْ كَاتِبٗا فَرِهَٰنٞ مَّقۡبُوضَةٞۖ فَإِنۡ أَمِنَ بَعۡضُكُم بَعۡضٗا فَلۡيُؤَدِّ ٱلَّذِي ٱؤۡتُمِنَ أَمَٰنَتَهُۥ وَلۡيَتَّقِ ٱللَّهَ رَبَّهُۥۗ وَلَا تَكۡتُمُواْ ٱلشَّهَٰدَةَۚ وَمَن يَكۡتُمۡهَا فَإِنَّهُۥٓ ءَاثِمٞ قَلۡبُهُۥۗ وَٱللَّهُ بِمَا تَعۡمَلُونَ عَلِيمٞ

    ನೀವು ಪ್ರಯಾಣದಲ್ಲಿದ್ದು ನಿಮಗೆ ಬರಹಗಾರನು ಸಿಗದಿದ್ದರೆ, ಅಡಮಾನವನ್ನು ಸ್ವಾಧೀನದಲ್ಲಿರಿಸಿಕೊಳ್ಳಿರಿ. ನೀವು ಪರಸ್ಪರ ವಿಶ್ವಾಸವನ್ನು ಹೊಂದಿದ್ದರೆ ವಿಶ್ವಾಸವಿಡಲಾದವನು (ಸಾಲ ಪಡೆದವನು) ತನ್ನ ವಿಶ್ವಸ್ತತೆಯನ್ನು ನೆರವೇರಿಸಲಿ ಮತ್ತು ತನ್ನ ಪರಿಪಾಲಕನಾದ ಅಲ್ಲಾಹನನ್ನು ಭಯಪಡಲಿ.[1] ನೀವು ಸಾಕ್ಷ್ಯವನ್ನು ಬಚ್ಚಿಡಬೇಡಿ. ಯಾರು ಅದನ್ನು ಬಚ್ಚಿಡುತ್ತಾನೋ ಅವನು ಪಾಪಭರಿತ ಹೃದಯದವನಾಗಿದ್ದಾನೆ. ಅಲ್ಲಾಹು ನೀವು ಮಾಡುತ್ತಿರುವ ಕರ್ಮಗಳನ್ನು ನೋಡುತ್ತಿದ್ದಾನೆ.

    [1] ಪ್ರಯಾಣದ ಸಮಯಲ್ಲಿ ಸಾಲ ವ್ಯವಹಾರ ಮಾಡಬೇಕಾಗಿ ಬಂದರೆ ಮತ್ತು ಅಲ್ಲಿ ಬರಹಗಾರನು ಅಥವಾ ಬರೆಯುವ ಸಾಧನಗಳು (ಕಾಗದ, ಲೇಖನಿ ಇತ್ಯಾದಿ) ಸಿಗದಿದ್ದರೆ ಸಾಲ ಪಡೆಯುವವನು ಏನಾದರೂ ವಸ್ತುವನ್ನು ಅಡವಿಟ್ಟು ಸಾಲ ಪಡೆಯಬೇಕು. ಆದರೆ ಸಾಲ ನೀಡುವವನು ಮತ್ತು ಪಡೆಯುವವನು ಪರಸ್ಪರ ವಿಶ್ವಾಸವನ್ನು ಹೊಂದಿದ್ದರೆ ಅಡಮಾನವಿಲ್ಲದೆಯೇ ಸಾಲ ನೀಡಬಹುದು. ಆದರೆ ಸಾಲ ಪಡೆದವನು ತನ್ನ ವಿಶ್ವಸ್ತತೆಯನ್ನು ಕಾಪಾಡಿಕೊಂಡು ಸಾಲವನ್ನು ಸೂಕ್ತ ಸಮಯದಲ್ಲಿ ಹಿಂದಿರುಗಿಸಬೇಕು.

    ೨೮೪

    لِّلَّهِ مَا فِي ٱلسَّمَٰوَٰتِ وَمَا فِي ٱلۡأَرۡضِۗ وَإِن تُبۡدُواْ مَا فِيٓ أَنفُسِكُمۡ أَوۡ تُخۡفُوهُ يُحَاسِبۡكُم بِهِ ٱللَّهُۖ فَيَغۡفِرُ لِمَن يَشَآءُ وَيُعَذِّبُ مَن يَشَآءُۗ وَٱللَّهُ عَلَىٰ كُلِّ شَيۡءٖ قَدِيرٌ

    ಭೂಮ್ಯಾಕಾಶಗಳಲ್ಲಿರುವುದೆಲ್ಲವೂ ಅಲ್ಲಾಹನಿಗೆ ಸೇರಿದ್ದು. ನೀವು ನಿಮ್ಮ ಮನಸ್ಸಿನಲ್ಲಿರುವುದನ್ನು ಬಹಿರಂಗಪಡಿಸಿದರೂ ಅಥವಾ ಮುಚ್ಚಿಟ್ಟರೂ ಅಲ್ಲಾಹು ಅದರ ಬಗ್ಗೆ ನಿಮ್ಮನ್ನು ವಿಚಾರಣೆ ಮಾಡುವನು. ನಂತರ ಅವನು ಇಚ್ಛಿಸಿದವರಿಗೆ ಅವನು ಕ್ಷಮಿಸುವನು ಮತ್ತು ಅವನು ಇಚ್ಛಿಸಿದವರನ್ನು ಶಿಕ್ಷಿಸುವನು. ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.

    ೨೮೫

    ءَامَنَ ٱلرَّسُولُ بِمَآ أُنزِلَ إِلَيۡهِ مِن رَّبِّهِۦ وَٱلۡمُؤۡمِنُونَۚ كُلٌّ ءَامَنَ بِٱللَّهِ وَمَلَٰٓئِكَتِهِۦ وَكُتُبِهِۦ وَرُسُلِهِۦ لَا نُفَرِّقُ بَيۡنَ أَحَدٖ مِّن رُّسُلِهِۦۚ وَقَالُواْ سَمِعۡنَا وَأَطَعۡنَاۖ غُفۡرَانَكَ رَبَّنَا وَإِلَيۡكَ ٱلۡمَصِيرُ

    ತಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಅವತೀರ್ಣವಾದ ಸಂದೇಶದಲ್ಲಿ ಸಂದೇಶವಾಹಕರು ವಿಶ್ವಾಸವಿಟ್ಟಿದ್ದಾರೆ; ಸತ್ಯವಿಶ್ವಾಸಿಗಳು ಕೂಡ ವಿಶ್ವಾಸವಿಟ್ಟಿದ್ದಾರೆ. ಅವರೆಲ್ಲರೂ ಅಲ್ಲಾಹನಲ್ಲಿ, ಅವನ ದೇವದೂತರುಗಳಲ್ಲಿ, ಅವನ ಗ್ರಂಥಗಳಲ್ಲಿ ಮತ್ತು ಅವನ ಸಂದೇಶವಾಹಕರುಗಳಲ್ಲಿ ವಿಶ್ವಾಸವಿಟ್ಟಿದ್ದಾರೆ. ಅವನ ಸಂದೇಶವಾಹಕರುಗಳಲ್ಲಿ ಯಾರ ನಡುವೆಯೂ ನಾವು ಬೇಧ ಮಾಡುವುದಿಲ್ಲ. ಅವರು ಹೇಳುತ್ತಾರೆ: "ನಾವು ಕೇಳಿದ್ದೇವೆ ಮತ್ತು ವಿಧೇಯರಾಗಿದ್ದೇವೆ. ಓ ನಮ್ಮ ಪರಿಪಾಲಕನೇ! ನಮ್ಮನ್ನು ಕ್ಷಮಿಸು. ನಮಗೆ ನಿನ್ನ ಬಳಿಗೇ ಮರಳಬೇಕಾಗಿದೆ."

    ೨೮೬

    لَا يُكَلِّفُ ٱللَّهُ نَفۡسًا إِلَّا وُسۡعَهَاۚ لَهَا مَا كَسَبَتۡ وَعَلَيۡهَا مَا ٱكۡتَسَبَتۡۗ رَبَّنَا لَا تُؤَاخِذۡنَآ إِن نَّسِينَآ أَوۡ أَخۡطَأۡنَاۚ رَبَّنَا وَلَا تَحۡمِلۡ عَلَيۡنَآ إِصۡرٗا كَمَا حَمَلۡتَهُۥ عَلَى ٱلَّذِينَ مِن قَبۡلِنَاۚ رَبَّنَا وَلَا تُحَمِّلۡنَا مَا لَا طَاقَةَ لَنَا بِهِۦۖ وَٱعۡفُ عَنَّا وَٱغۡفِرۡ لَنَا وَٱرۡحَمۡنَآۚ أَنتَ مَوۡلَىٰنَا فَٱنصُرۡنَا عَلَى ٱلۡقَوۡمِ ٱلۡكَٰفِرِينَ

    ಅಲ್ಲಾಹು ಯಾವುದೇ ವ್ಯಕ್ತಿಯ ಮೇಲೂ ಅವನ ಸಾಮರ್ಥ್ಯಕ್ಕೆ ಮೀರಿದ್ದನ್ನು ಹೊರಿಸುವುದಿಲ್ಲ. ಅವನು ಮಾಡಿದ ಒಳಿತು ಅವನಿಗೆ ಮತ್ತು ಅವನು ಮಾಡಿದ ಕೆಡುಕು ಅವನಿಗೆ. “ಓ ನಮ್ಮ ಪರಿಪಾಲಕನೇ! ನಾವು ಮರೆತುಬಿಟ್ಟರೆ ಅಥವಾ ತಪ್ಪು ಮಾಡಿದರೆ ನಮ್ಮನ್ನು ಹಿಡಿದು ಶಿಕ್ಷಿಸಬೇಡ. ಓ ನಮ್ಮ ಪರಿಪಾಲಕನೇ! ನಮಗಿಂತ ಮೊದಲಿನವರ ಮೇಲೆ ನೀನು ಹೊರಿಸಿದಂತಹ ಹೊರೆಯನ್ನು ನಮ್ಮ ಮೇಲೆ ಹೊರಿಸಬೇಡ. ಓ ನಮ್ಮ ಪರಿಪಾಲಕನೇ! ನಮಗೆ ಹೊರಲು ಸಾಮರ್ಥ್ಯವಿಲ್ಲದ್ದನ್ನು ನಮ್ಮ ಮೇಲೆ ಹೊರಿಸಬೇಡ. ನಮ್ಮನ್ನು ಮನ್ನಿಸು, ನಮ್ಮನ್ನು ಕ್ಷಮಿಸು ಮತ್ತು ನಮಗೆ ದಯೆ ತೋರು. ನೀನೇ ನಮ್ಮ ಸಂರಕ್ಷಕ. ಸತ್ಯನಿಷೇಧಿಗಳಾದ ಜನರ ಮೇಲೆ ನಮಗೆ ಜಯವನ್ನು ದಯಪಾಲಿಸು.”

    Al-Baqarah

    Play